ಗುರುವಾರ, ಏಪ್ರಿಲ್ 5, 2018

ಆ ದಿನ ಇನ್ನೂ ನೆನಪಿದೆ!

ಮೊದಲ ಬಾರಿಗೆ ನೀ ಅಧರ ಚುಂಬಿಸಿದ ಘಳಿಗೆ, ಮೊದಲ ಬಾರಿಗೆ ನೀ ತಬ್ಬಿದ ಘಳಿಗೆ, ಮೊದಲ ಬಾರಿಗೆ ನಿನ್ನ ಮೈ ಘಮಲು ಆಸ್ವಾದಿಸಿದ ಘಳಿಗೆ, ಮೊದಲ ಬಾರಿಗೆ ನಾವಿಬ್ಬರೂ ಒಂದಾದ ಘಳಿಗೆ...!!
ಇವ್ನು ಎಷ್ಟೊಂದು ಪೋಲಿ ಇದ್ದಾನಪ್ಪ ಎನಿಸಬಹುದು, ಆದರೂ ಇದೊಂದು ನವಿರಾದ ಭಾವವೆ ಅಲ್ವಾ?
ನೆನಪಿದೆಯಾ ಗೆಳತಿ,
ಅಂದು ನೀ, ಭಯದ ಕಂಗಳಿಂದ ನಮ್ಮನೆಯ ಹೊಸಿಲು ದಾಟಿದ್ದು? ಅರಿವಿಲ್ಲದೆ ನಿನ್ನ ಕೈಗಳು ನಡುಗಿದ್ದು? ದಾಹ ನೀಗಿಸಲು ಕೊಟ್ಟ ಬಿಂದಿಗೆ ಕೈ ತಪ್ಪಿ ಬಿದ್ದಿದ್ದು? ಮೊದಲ ಭೇಟಿಯ ಅಮೃತ ಘಳಿಗೆ ಮರೆಯಲು ಹೇಗೆ ಸಾಧ್ಯ ಹೇಳು.

ಅದಿರಲಿ, ಅಂದು ನೀ ನಾಚುತ್ತ ನನ್ನ ಬಳಿ ಬಂದಾಗ, ಬಲವಂತವಾಗಿ ನೀ ಮುಖ ಕೆಳಗೆ ಹಾಕಿದ್ದೀಯ. ನಾಚಿ ನೀರಾದ ಆ ಕೆಂಪನೆಯ ಮೊಗವನ್ನು ನಾನು ಸಹ ಅಷ್ಟೇ ಬಲವಂತಾಗಿ ಹಿಡಿದೆತ್ತಿದ್ದೆ. ಒಮ್ಮಿಂದೊಮ್ಮೆಲೆ ಹುಣ್ಣಿಮೆ ಕಡಲಿನಿಂತೆ ನೀ ರಭಸವಾಗಿ ಬಗಿದಪ್ಪಿದೆ. ಅಬ್ಬಾ...! ನನ್ನ ಮನದಲ್ಲಿ ಏನೇನಾಗುತ್ತಿದೆ ಎಂದು ಅರಿಯಲು ಐದ್ಹತ್ತು ನಿಮಿಷಗಳೇ ಬೇಕಾಯ್ತು ನೋಡು!!

ಎದೆ ಮೇಲೆ ರಾಶಿಯಾಗಿ ಹರಡಿ ಬಿದ್ದಿದ್ದ ಒಂದೊಂದೇ ಕೂದಲನ್ನು ನೀ ಲೆಕ್ಕ ಮಾಡುವಾಗ, ನಾ ನಿನ್ನ ಮುಂಗುರುಳ ಜೊತೆ ಪಿಸು ಮಾತಿನ ಸಂಭಾಷಣೆ ಶುರುವಿಟ್ಟುಕೊಂಡಿದ್ದೆ. ನೀಳ ಜಡೆಯಲ್ಲಿ ಹುದುಗಿರುವ ಕೋಮಲತೆಯನ್ನು ನನ್ನ ಕೈ ಬೆರಳುಗಳು ಸ್ಪರ್ಶಿಸಿ ಆಹ್ಲಾದಿಸುತ್ತಿದ್ದವು. ಆಗ, ನೀ ಮತ್ತೆ ಅಧರದ ಜೊತೆ ಜೂಟಾಟಕ್ಕೆ ಅಣಿಯಾದೆ. ನಿನ್ನ ಮೈ ಘಮಲು ಮೊದಲ ಮಳೆಯ ಸುವಾಸನೆಯಂತೆ ಹುಚ್ಚೆಬ್ಬಿಸುತ್ತಿತ್ತು. ಮೃದುವಾದ ಸುಕೋಮಲ ಸ್ಪರ್ಶ ಇಹವನ್ನೇ ಮರೆ ಮಾಚಿಸಿತ್ತು. 
ಅದು... ಬಿಸಿಯುಸಿರ ಅಪ್ಪುುಗೆಯಲ್ಲಿ ಮೈ-ಮನವೆಲ್ಲ ಬೆವರುವ ಘಳಿಗೆ!

ಅಲ್ಲಿವರೆಗೆ ನಿನ್ನ ಗುದ್ದಾಟವನ್ನಷ್ಟೇ ನೋಡಿದ್ದ ನಾನು, ಆ ಕ್ಷಣ ಮುದ್ದಾಟವನ್ನು ಸಹ ಅನುಭವಿಸಿದ್ದೆ.....
ಉಳಿದದ್ದೆಲ್ಲ ಸಮಯ ಸಿಕ್ಕಾಗ....



(ಪೊಲೀಯಲ್ಲದ ಭಾವ)

ಸೋಮವಾರ, ಸೆಪ್ಟೆಂಬರ್ 25, 2017

ಗುಪ್ತಾ೦ಗ ಛೇದನ...! ಇದು ಈಗಲೂ ಜೀವಂತ!!!
(ಓದಲೇ ಬೇಕಾದ ಹೊತ್ತಿಗೆ ‘ಮರುಭೂಮಿಯ ಹೂ’)

ಇಲ್ಲಿನ ಪುರುಷ ಸಮಾಜಕ್ಕೆ ಹೆಣ್ಣನ್ನು ಮತ್ತು ಅಧಿಕಾರವನ್ನು ಸದಾ ತನ್ನ ಅಧೀನದಲ್ಲಿಟ್ಟುಕೊಳ್ಳಬೇಕೆಂಬ ಬಯಕೆ. ಹಾಗಾಗಿ ಇವರಿಗೆ ಮಾನವೀಯತೆಯಾಗಲಿ, ಅಂತಃಕರಣವೆಂಬುದಾಗಲಿ ಇಲ್ಲ. ಅವೆಲ್ಲವೂ ಇವರಿಗೆ ಅಪರಿಚಿತ ಶಬ್ಧಗಳು. ಆಫ್ರಿಕಾದ ಮಹಿಳೆಯರೆಂದರೆ ಇವರಿಗೆಲ್ಲ ತಾವು ಸಾಕುತ್ತಿರುವ ಪ್ರಾಣಿಗಳ ಸಮಾನ. ಇದು ಕಠಿಣ ಶಬ್ದವಾದರೂ ಸರಿಯೇ, ನಾನು ಎಷ್ಟೋ ಬಾರಿ ಇಲ್ಲಿನ ಪುರುಷರ ಬಗ್ಗೆ ಈ ರೀತಿ ಯೋಚಿಸುತ್ತಾ ಇರುತ್ತೀನಿ. ಆಫ್ರಿಕಾದ ಪುರುಷರ ಗುಪ್ತಾ೦ಗಗಳನ್ನು ಕತ್ತರಿಸಿ ಬಿಸಾಡಬೇಕು. ದ್ವಿಚಕ್ರ ವಾಹನಕ್ಕೆ ಕಾಲು ಸಿಕ್ಕಿಸಿಕೊಂಡ ನಾಯಿಮರಿ ಘೀಳಿಡುವ ಹಾಗೆ, ಸುರಿಯುವ ರಕ್ತದ ಜೊತೆ ಇವರು ಅತ್ತಿ೦ದ ಇತ್ತ, ಇತ್ತಿ೦ದ ಅತ್ತ ಓಡಾಡುವುದನ್ನು ನಾನು ನೋಡಬೇಕು. ಆಗ ಮಾತ್ರ ಇವರಿಗೆ ಯೋನಿ ಛೇದನ ಮಾಡಿಸಿಕೊಂಡ ಹೆಣ್ಣೊಬ್ಬಳ ಸಂಕಟ ಏನೆಂದು ಅರಿವಾಗುತ್ತದೆ. ತಮ್ಮ ಸ್ವಾರ್ಥಕ್ಕೆ ದೇವರನ್ನು, ಧರ್ಮವನ್ನು ಯಾವುದೇ ಎಗ್ಗಿಲ್ಲದೆ ಬಳಸಿಕೊಂಡ ನಾಚಿಕೆಗೇಡಿನ ಪುರುಷ ಸಮಾಜಕ್ಕೆ ಒಂದಿಷ್ಟು ಪ್ರಜ್ಞೆ ಮೂಡಲು ಸಾಧ್ಯವಾಗಬಲ್ಲದು....
ಕೊನೆಯ ಅಧ್ಯಾಯದಲ್ಲಿ ಹೀಗೆ ಸಾಗುತ್ತದೆ.......

 ಡಾ. ಎನ್. ಜಗದೀಶ್ ಕೊಪ್ಪ ಅವರು ಕನ್ನಡದಲ್ಲಿ ಅನುವಾದಿಸಿದ ‘ಮರುಭೂಮಿಯ ಹೂ’ ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡೀರೀ ಅವರ ‘ಡೆಸಾರ್ಟ್ ಫ್ಲವರ್’ ಎಂಬ ಆಂಗ್ಲ ಆತ್ಮಕತೆಯ ‘ಸಾವಿಗೆ ಎದುರಾಗಿ ನಿಂತ ಕ್ಷಣ’ ಹೊತ್ತಿಗೆಯ ಕೊನೆಯ ಅಧ್ಯಾಯದಲ್ಲಿ.

ಆಫ್ರಿಕಾದ ಬುಡಕಟ್ಟುಗಳ ಮಹಿಳೆಯರು ಪವಿತ್ರವಾಗಿ ಬದುಕಬೇಕಾದರೆ ನಾಗರಿಕ ಸಮಾಜ ಕಂಡು-ಕೇಳರಿಯದಂತಹ ಅನಿಷ್ಟ ಪದ್ಧತಿಗೆ ಒಳಗಾಗಲೇಬೇಕು. ಅದೊಂದು ಕಡ್ಡಾಯ ಧಾರ್ಮಿಕ ಕ್ರಿಯೆಯಾಗಿ ಅಲ್ಲಿ ಬದಲಾಗಿದೆ. ಹೆಣ್ಣು ಕೆಲವು ಪವಿತ್ರ ಭಾಗಗಳನ್ನು ಇಟ್ಟುಕೊಂಡು ಜನಿಸುವುದರಿಂದ, ಅವಳು ಪವಿತ್ರಳಾಗಿ ಮುಂದಿನ ದಿನಗಳಲ್ಲಿ ವಿವಾಹಕ್ಕೆ ಮತ್ತು ತಾಯಿಯಾಗಲು ಅರ್ಹತೆ ಗಳಿಸಬೇಕಾದರೆ, ಗುಪ್ತಾ೦ಗ ವಿಚ್ಛೇದನ ಕ್ರಿಯೆಗೆ ಒಳಗಾಗಬೇಕಾಗಿರುವುದು ಕಡ್ಡಾಯ. ಈ ಕ್ರಿಯೆಗೆ ಒಳಗಾಗದ ಮಹಿಳೆಯರನ್ನು ಮದುವೆಯಾಗಲು ಪುರುಷ ಸಮಾಜ ನಿರಾಕರಿಸುತ್ತಿರುವುದು ಇಂದಿಗೂ ಅಲ್ಲಿ ಜೀವಂತವಿದೆ ಎನ್ನುವ ಕಟು ವಾಸ್ತವವನ್ನು, ಬೆದರಿಕೆಗಳ ನಡುವೆಯೂ ವಾರಿಸ್ ನಾಗರಿಕ ಸಮಾಜಕ್ಕೆ ತಿಳಿಸುವ ಪರಿ ಅನನ್ಯವಾದದ್ದು.

ಈ ಅನಿಷ್ಟ ಕ್ರಿಯೆಗೆ ತನ್ನ ಅಕ್ಕನನ್ನು ಒಳಪಡಿಸಿದ್ದು, ಆಕೆ ಅನುಭವಿಸಿದ ನೋವು, ಸಂಕಟ, ಚೀರಾಟಗಳನ್ನು ಸ್ವತಃ ವಾರಿಸ್ ಕಣ್ಣಾರೆ ಕಂಡು ಭಯ ಭೀತಗೊಂಡಿದ್ದಳು. ಹಾಗಿದ್ದಾಗಲೂ, ತಾನು ಆ ಕ್ರಿಯೆಗೆ ಒಳಪಡಬೇಕೆಂದು ತಾಯಿಯ ಬೆನ್ನು ಬಿದ್ದು ಕಾಡಿ, ಕೊನೆಗೊಂದು ದಿನ ಆ ಅನಿಷ್ಟ ಕ್ರಿಯೆಗೆ ತನ್ನನ್ನು ಒಳಗಾಗಿಸಿಕೊಳ್ಳುತ್ತಾಳೆ. ಆದರೆ, ಇವೆಲ್ಲ ಏನೂ ಅರಿಯದ ಆಕೆಯ ಐದನೇ ವರ್ಷದಲ್ಲಿ ಕುತೂಹಲ ಹಾಗೂ ತಾನು ಗಟ್ಟಿಗಿತ್ತಿ ಎಂದು ತೋರಿಸಿಕೊಳ್ಳಲೋಸುಗ ಮಾತ್ರ. ಕತ್ತರಿಸಿದ ಆಕೆಯ ಗುಪ್ತಾ೦ಗದ ಎರಡು ಭಾಗಗಳನ್ನು ಸೇರಿಸಿ, ಮೂತ್ರ ವಿಸರ್ಜಿಸಲಷ್ಟೇ ಚಿಕ್ಕ ರಂಧ್ರದಷ್ಟು ಜಾಗ ಬಿಟ್ಟು ಹೊಲಿಗೆ ಹಾಕಲಾಗುತ್ತದೆ. ಅರಿಯದ ವಯಸ್ಸಲ್ಲಿ ಅಮ್ಮನ ಬೆನ್ನು ಬಿದ್ದು(ಬೆನ್ನು ಬೀಳದಿದ್ದರೂ ಆ ಕ್ರಿಯೆಗೆ ಒಳಪಡಲೇಬೇಕಿತ್ತು) ವಿಚ್ಛೇದನ ಕ್ರಿಯೆಗೆ ಒಳಪಟ್ಟ ಪರಿಣಾಮ ವಾರಿಸ್, ಇಪ್ಪತ್ತೆ೦ಟು ವರ್ಷಗಳ ಕಾಲ ಮೂತ್ರ ವಿಸರ್ಜನೆ ಮಾಡಲು ಅರ್ಧಗಂಟೆ ಸಮಯ ತೆಗೆದುಕೊಳ್ಳುತ್ತಿದ್ದಳು! ಪಿರೀಯಡ್ಸ್ ಸಮಯದಲ್ಲಂತೂ ರಕ್ತ ಸರಾಗವಾಗಿ ಹರಿಯದ ಕಾರಣ ನರಕ ಯಾತನೆ ಅನುಭವಿಸುತ್ತಿದ್ದಳು. ಕೊನೆಗೆ ಮೂವತ್ತನೇ ವಯಸ್ಸಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಎಲ್ಲ ನೋವಿಗೂ ಪರಿಹಾರ ಕಂಡುಕೊಂಡಳು.

ಆಫ್ರಿಕಾದ ಸೋಮಾಲಿಯಾದ ಮರುಭೂಮಿಯ ಬಡುಟಕಟ್ಟಿನಲ್ಲಿರುವ ಅನಿಷ್ಟ ಪದ್ಧತಿಯನ್ನು ವಾರಿಸ್, 'ರೆಸಾರ್ಟ್ ಫ್ಲವರ್’ ಹೊತ್ತಿಗೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಸ್ವತಃ ತಾನು ಆ ಕ್ರಿಯೆಗೆ ಒಳಗಾಗಿದ್ದು, ಆ ಸಂದರ್ಭದಲ್ಲಿ ತಾನು ಅನುಭವಿಸಿದ ನೋವು, ಮುಂದೆ ಎದುರಾದ ಸಂಕಷ್ಟ ಇವೆಲ್ಲವನ್ನು ಆಕೆ ಎದುರಿಗೆ ಕೂತು ಹೇಳಿದಂತೆ ಭಾಸವಾಗುತ್ತದೆ. ಇಂದಿಗೂ ಅಲ್ಲಿ ಲಕ್ಷಾ೦ತರ ಹೆಣ್ಣು ಮಕ್ಕಳು ಯೋನಿ ಛೇದದಂತಹ ಅನಿಷ್ಟ ಪದ್ಧತಿಗೆ ಒಳಗಾಗುತ್ತಿದ್ದಾರೆ ಎಂದು ವಾರಿಸ್ ಅಂಕಿ-ಸಂಖ್ಯೆ ತಿಳಿಸುವಾಗ, ಆಕ್ರೋಶಗಳೆಲ್ಲ ಒಂದೆಡೆ ಕೇಂದ್ರಿಕೃತವಾಗುತ್ತದೆ. ವಿಶ್ವಸಂಸ್ಥೆಯ ರಾಯಭಾರಿಯಾಗಿ, ಈ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ನಡೆಸಿರುವ ಆಕೆ, ವಿಯನ್ನಾದಲ್ಲಿ ‘ಡೆಸಾರ್ಟ್ ಫ್ಲವರ್ ಫೌಂಡೇಶನ್’ ಸಂಸ್ಥೆ ಹುಟ್ಟು ಹಾಕಿದ್ದಾಳೆ. ರೂಪದರ್ಶಿಯಾಗಿ ಗಳಿಸಿದ, ಗಳಿಸುತ್ತಿರುವ ಎಲ್ಲ ಆದಾಯವನ್ನು ಅದಕ್ಕೆ ಮೀಸಲಿಟ್ಟು, ಜಾಗೃತಿ ಅಭಿಯಾನದಲ್ಲಿ ತೊಡಗಿಕೊಂಡಿದ್ದಾಳೆ. ‘ಸೋಮಾಲಿಯಾದಲ್ಲಿ ಯೋನಿ ಛೇದನ ಶಿಕ್ಷೆ ನಿರ್ಬಂಧಿಸಲಾಗಿದೆ’ ಎನ್ನುವ ಸುದ್ದಿ ಕೇಳಲು ಕಾತುರಳಾಗಿದ್ದಾಳೆ.

ಒಟ್ಟಾರೆ, ‘ಮರುಭೂಮಿಯ ಹೂ’ ಭಾಷಾಂತರ ಕೃತಿ ಎಂದು ಎಲ್ಲಿಯೂ ಭಾಸವಾಗುವುದಿಲ್ಲ. ವಾರಿಸ್ ತನ್ನ ಬಾಲ್ಯದ ಜೀವನವನ್ನು ತೆರೆದಿಡುತ್ತ, ಮರಳುಗಾಡಿನ ಬುಡಕಟ್ಟು ಜನರ ಆಚಾರ, ವಿಚಾರ, ಸಂಸ್ಕೃತಿ, ಬದುಕು ಹೀಗೆ ಎಲ್ಲ ವಿಷಯವನ್ನು ಸೂಕ್ಷ್ಮವಾಗಿ ತಿಳಿಸಿಕೊಡುತ್ತಾರೆ. ಇದೊಂದು ಆತ್ಮಕಥನ ಎನ್ನುವುದಕ್ಕಿ೦ತ, ಕತ್ತಲ ಕೂಪದಲ್ಲಿರುವ ಜನಾಂಗದ ಅನಿಷ್ಟ ಪದ್ಧತಿ ವಿವರಿಸುವ ಜಾಗೃತ ಕಥಾಗುಚ್ಛ ಎನ್ನಬಹುದು. ಹೊತ್ತಿಗೆಯ ಹಿಂಬರಹದಲ್ಲಿ ಎಚ್. ದುಂಡಪ್ಪ ಅವರು ಹೇಳಿದಂತೆ, ಎಷ್ಟೋ ಜನರ ಮುಚ್ಚಿದ ಕಣ್ಣನ್ನು ಈ ಕೃತಿ ತೆರೆಯುವಂತೆ ಮಾಡಬಹುದು’.

ಇಂತಹದ್ದೊ೦ದು ಅದ್ಭುತ ಕೃತಿಯನ್ನು ಕನ್ನಡಲ್ಲಿ ಓದುವಂತೆ ಮಾಡಿದ ಡಾ. ಡಾ. ಎನ್. ಜಗದೀಶ ಕೊಪ್ಪ ಅವರಿಗೆ ಅಕ್ಷರದ ಅಭಿನಂದನೆ.

ಶನಿವಾರ, ಸೆಪ್ಟೆಂಬರ್ 9, 2017

ಪ್ರೇಮ ಕಾವ್ಯ

ಬಾನಂಗಳದ ಸೌಂದರ್ಯ ವರ್ಣಿಸುವುದೇ ಒಂದು ಮಹಾಕಾವ್ಯ. ಅಂತಹ ಅದ್ಭುತ ಮಹಾಕಾವ್ಯವೊಂದು ಶುಕ್ರವಾರ(ಸೆ. ೮) ಸಾಯಂಕಾಲ ವಾಣಿಜ್ಯ ನಗರಿಯ ನೆತ್ತಿಯ ಮೇಲೆ ಓಡಾಡಿತ್ತು. ಆಗಷ್ಟೇ ಸಮಯ ಐದಾಗಿತ್ತು. ದಿನ ಬೆಳಗೋ ಭಾನು ಶುಭ್ರ ನೀಲಾಕಾಶದಲ್ಲಿ ನಿಧಾನವಾಗಿ ಕೆಂಪೇರುತ್ತ ಪಡುವಣದತ್ತ ಜಾರುತ್ತಿದ್ದ. ಅರೆ ಕ್ಷಣದಲ್ಲಿ ಮೂಡಣದ ತುಂಬೆಲ್ಲ ಕರಿಯ ಮೋಡಗಳ ಚೆಲ್ಲಾಟ. ಸಣ್ಣನೆಯ ಗಾಳಿಗೆ ಎಲ್ಲೆಲ್ಲೆಂದರಲ್ಲಿ ಚದುರಿ ಹೋಗಿದ್ದ ಮೋಡಗಳೆಲ್ಲ, ತುಸು ಬಿರುಸಾಗಿ ಬೀಸಿದ ಗಾಳಿಗೆ ಒಂದುಗೂಡಿ ಐಕ್ಯತೆ ಮಂತ್ರ ಪಠಿಸಿದ್ದವು. ಪಡುವಣದಿ ಅರೆಗೆಂಪು ಬಣ್ಣದ ಗಾಢ ಬಿಸಿಲು, ಮೂಡಣದಿ ಕಾಪಿಟ್ಟ ಮೋಡಗಳ ಕಪ್ಪುು ಛಾಯೆ. ಈ ನೆರಳು-ಬೆಳಕಿನ ಜುಗಲ್ ಬಂಧಿ ವಾಣಿಜ್ಯ ನಗರಿಯ ಜನರ ಮನದಲ್ಲಿ ಪ್ರೇಮ ಕಾವ್ಯವನ್ನೇ ಸೃಷ್ಟಿಸಿತ್ತು. ಇಂತಹ ಅಪರೂಪದ ಚಿತ್ರ ವಿಶ್ವವಾಣಿ ಛಾಯಾಗ್ರಾಹಕ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.


ಶನಿವಾರ, ಸೆಪ್ಟೆಂಬರ್ 2, 2017

ಅರಬ್ಬೀ ಮಹಿಮೆ

ಮಸಣಕ್ಕೂ ಉತ್ಸವಕ್ಕೂ ಒಂದೇ ಕಿರು ದಾರಿ
ಮರಳ ರಾಶಿಯ ಒಂದೆಡೆ ಶವಕ್ಕೆ ಅಗ್ನಿ ಸ್ಪರ್ಶ
ಇನ್ನೊಂದೆಡೆ ಗಣಪನಿಗೆ ವಿದಾಯದ ಮಹಾಪೂಜೆ
ಒಂದರಲ್ಲಿ ಸಂಭ್ರಮ ಇನ್ನೊಂದರಲ್ಲಿ ನೋವು!
ಸುಟ್ಟ ಶವದ ಮೇಲಣ ಕಿಡಿ ಇನ್ನೂ ಆರಿಲ್ಲ
ಗಾಳಿಗೆ ತೊನೆದಾಡುತ್ತಿದೆ ಕೊನೆಯ ಉರಿ
ಸುರುಳಿ ಸುತ್ತುತ್ತಿವೆ ಕರದಲ್ಲಿ ಹಿಡಿದ ಊದುಬತ್ತಿ
ಮೋರೆಯಾರೆ ಬೊಪ್ಪ ಮೋರೆಯಾರೆ!
ಕಾಪಿಟ್ಟ ಮೋಡದೊಳಗೆ ಪಡುವಣದ ದಿನಕರ
ಹೆಜ್ಜೆ ಅಳಿಸೋ ಭೋರ್ಗರೆವ ಕಡಲಲ್ಲಿ ನರ್ತನ
ಸಾವಿನ ನೋವೆಲ್ಲಿ ನಗುವಿನ ಸಂಭ್ರಮವೆಲ್ಲಿ
ಸಮರಸದ ಬದುಕಾಯ್ತು ಅಬ್ಬರಿಸುವ ಅರಬ್ಬೀಗೆ!
ಹೆಗಲೇರಿದ ಗಣಪ ಮತ್ತೆ ಬರುವೆನೆಂದು ಹೊರಟ
ಏರಿಳಿತದ ತೆರೆಗಳ ನಡುವೆ ಮಸುಕು ಮುಸುಕಾಗಿ
ತಟದಲ್ಲಿ ತಣ್ಣನೆ ಹೊಯ್ದಾಡುತ್ತಿದೆ ಕಳೆಬರದ ಬೂದಿ
ಸೂತಕದ ಛಾಯೆ ಹೊದ್ದು ಮಲಗಿದೆ ಪಂಚಮಿ ರಾತ್ರಿ!

ಗುರುವಾರ, ಆಗಸ್ಟ್ 24, 2017

ಇದೊಂದು ಅದ್ಭುತ ಪ್ರಪಂಚ!

ಇನ್ನು ಹತ್ತತ್ರ ನಿಲ್ಲಿ... ಮುಖ ಸ್ವಲ್ಪ ಮೇಲೆ ಮಾಡಿ... ಓಕೆ... ರೆಡಿನಾ... ಸ್ಮೈಲ್ ಪ್ಲೀಸ್... ಇದೊಂದು ಮಗ್ಗುಲಾದರೆ, ಜನದಟ್ಟಣೆಯ ನೂಕುನುಗ್ಗಲಿನ ನಡುವೆಯೇ ಮುನ್ನಗ್ಗಬೇಕು. ಮಳೆ-ಗಾಳಿ, ನಿಷೇಧಾಜ್ಞೆ, ಲಾಠಿ ಚಾರ್ಜ್ ಯಾವುದನ್ನೂ ಲೆಕ್ಕಿಸದೆ ಪ್ರಾಣದ ಹಂಗು ತೊರೆದು ಘಟನಾ ಸ್ಥಳದಲ್ಲಿರಬೇಕು. ಅರೆಕ್ಷಣ ತಡವಾದರೂ ಸಹ ಬಹು ಮುಖ್ಯವಾದ ಸ್ನ್ಯಾಪ್ ತಪ್ಪಿಹೋಗುತ್ತದೆ!! ಸದಾ ಧಾವಂತದ ಬದುಕು, ಸಮಯದ ಹಿಂದೆಯೇ ಓಡುತ್ತಿರಬೇಕು. ಇದು ಇನ್ನೊಂದು ಮಗ್ಗಲು.
ಇದು ವೃತ್ತಿ ನಿರತ ಛಾಯಾಗ್ರಾಹಕರು ಪ್ರತಿನಿತ್ಯ ಎದುರಿಸಬೇಕಾದ ಸವಾಲುಗಳು. ಪ್ರತಿನಿತ್ಯ ಒಂದಿಲ್ಲೊಂದು ಸಮಾರಂಭದಲ್ಲಿ ಪಾಲ್ಗೊಂಡು, ಭಿನ್ನ-ವಿಭಿನ್ನ ನೋಟದ ಚಿತ್ರಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಆಯೋಜಕರ ಮನ ಗೆಲ್ಲುವ ಛಾಯಾಗ್ರಾಹಕರು ಒಂದು ಕಡೆಯಾದರೆ, ಮಾಧ್ಯಮಕ್ಕೆ ಬೇಕಾಗುವ ಪತ್ರಿಕಾ ಫೊಟೋಗಳನ್ನು ಸೆರೆ ಹಿಡಿಯಲು ಸಮಯದ ಹಿಂದೆ ಓಡುವ ಛಾಯಾಗ್ರಾಹಕರು ಇನ್ನೊಂದೆಡೆ. ಹಾಗೆಯೇ ಹವ್ಯಾಸಿ ಛಾಯಾಗ್ರಾಹಕರು, ವನ್ಯಜೀವಿ ಛಾಯಾಗ್ರಾಹಕರು ಕೂಡಾ ತಮ್ಮ ಆಸಕ್ತಿಗನುಗುಣವಾಗಿ ಫೊಟೋಗಳನ್ನು ಕ್ಲಿಕ್ಕಿಸುತ್ತಾರೆ.
ಫೊಟೋಗ್ರಫಿ ಎನ್ನುವುದು ಒಂದು ತಪಸ್ಸು. ತಾಳ್ಮೆ ಇದ್ಸವನು ಮಾತ್ರ ಇಲ್ಲಿ ಯಶಸ್ವಿಯಾಗುತ್ತಾನೆ. ಈ ಮೊದಲು ಹಣವಿದ್ದವರ ಕೈಯ್ಯಲ್ಲಿ ಮಾತ್ರ ಕ್ಯಾಮರಾ ಕಂಡು ಬರುತ್ತಿತ್ತು. ಅವರ ಕೈಯ್ಯಲ್ಲಿರುವ ಕ್ಯಾಮರಾ ನೋಡಿ ‘ಏಯ್, ಅವನು ಕ್ಯಾಮರಾ ತಗೊಂಡಿದ್ದಾನೆ, ನೋಡ್ರೋ...’ ಎಂದು ಹುಬ್ಬೇರಸುತ್ತಿದ್ದರು. ಆದರೆ, ಈಗ ಕ್ಯಾಮರಾ ಎನ್ನುವುದು ಮಕ್ಕಳ ಆಟಿಕೆ ಸಾಮಾನಿನಂತಾಗಿದೆ. ಶ್ರೀಸಾಮಾನ್ಯನ ಕೊರಳಲ್ಲೂ ಅದು ತೂಗಾಡುತ್ತ, ಸುತ್ತಮುತ್ತಲಿನ ಚಿತ್ರಗಳನ್ನು ಸೆರೆಹಿಡಿಯುತ್ತಲೇ ಇರುತ್ತವೆ. ಕ್ಯಾಮರಾದ ಕುರಿತು ಸ್ವಲ್ಪ ಮಾಹಿತಿಯಿದ್ದರೆ ಯಾರೂ ಬೇಕಾದರೂ ಸಹ ಫೊಟೋ ತೆಗೆಯಬಹುದು. ಆದರೆ, ತೆಗೆದ ಫೋಟೋ ಎಷ್ಟು ಚೆನ್ನಾಗಿದೆ, ಅದರ ಹಿನ್ನೆಲೆ ಹೇಗಿದೆ, ಯಾವ ಶೈಲಿಯಲ್ಲಿ ಬಂದಿದೆ ಜೊತೆಗೆ ಆ ಫೋಟೋ ಸಕಾಲಿಕವೋ ಅಥವಾ ಸರ್ವಕಾಲಿಕವೋ ಎನ್ನುವುದು ಅತೀ ಮುಖ್ಯ.
ನಾವೆಲ್ಲ ಸಕಾಲಿಕ ಛಾಯಾಗ್ರಾಹಕರು...!! ಕೈಯ್ಯಲ್ಲಿರುವ ಕ್ಯಾಮಾರಾದಲ್ಲಿ ಮನಸ್ಸಿಗೆ ಬಂದ ಫೋಟೋ ಕ್ಲಿಕ್ಕಿಸಿ, ‘ಅದ್ಭುತ ಫೊಟೋ’ ಎಂದು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುತ್ತೇವೆ. ನಮ್ಮ ಸುತ್ತಲಿರುವವರಿಗೆಲ್ಲ ಆ ಫೊಟೋವನ್ನು ಬಲವಂತಾಗಿ ತೋರಿಸಿ, ಹೊಗಳಿಸಿಕೊಳ್ಳುತ್ತೇವೆ. ಆ ಫೊಟೋ ಬಗ್ಗೆ ಅವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದರು ಅಂದ ಮೇಲೆ, ಅದರ ಜೀವಿತಾವಧಿ ಬಹುತೇಕ ಮುಗಿದಂತೆ...!! ಅಂದರೆ ಅದು ಆ ಸಮಯಕ್ಕಷ್ಟೇ ಸೀಮಿತ. ಸಕಾಲಿಕ. ಆದರೆ, ವೃತ್ತಿನಿರತ ಛಾಯಾಗ್ರಾಾಹಕರು ತೆಗೆಯುವ ಕೆಲವು ಫೊಟೋಗಳು ಸಕಾಲಿಕವಾಗಿಯೂ, ಸರ್ವಕಾಲಿಕವಾಗಿಯೂ ವೇದ್ಯವಾಗಿರುತ್ತದೆ. ವನ್ಯಜೀವಿ ಛಾಯಾಗ್ರಾಹಕರು ತೆಗೆಯುವ ನೂರಾರು ಚಿತ್ರಗಳಲ್ಲಿ ಒಂದೋ-ಎರಡೋ ಫೋಟೋಗಳು ಮಾತ್ರ ಆಯ್ಕೆಗೆ ಯೋಗ್ಯವಾಗಿರುತ್ತವೆ. ಒಮ್ಮೊಮ್ಮೆ ಅಷ್ಟೊಂದು ಫೊಟೋಗಳನ್ನು ಕ್ಲಿಕ್ಕಿಸಿದರೂ ಸಹ ಬೇಕಾದ ಕೋನದಲ್ಲಿ ಫೋಟೋ ದೊರೆಯುವುದಿಲ್ಲ.
ಕಾಡು ಹಕ್ಕಿಯ ಅಥವಾ ಪ್ರಾಣಿಗಳ ಜೀವನ ಕ್ರಮ ಸಮಗ್ರವಾಗಿ ಸೆರೆ ಹಿಡಿಯಲು ಈ ಛಾಯಾಗ್ರಾಹಕರು ಮನೆ-ಮಠಗಳನ್ನು ತೊರೆದಿರುತ್ತಾರೆ. ಮಳೆ-ಗಾಳಿ-ಚಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ತಿಂಗಳಾನುಗಟ್ಟಲೇ ದಟ್ಟ ಕಾನನದ ನಡುವೆ ಅಲೆಯುತ್ತಾರೆ. ಆ ಸಂದರ್ಭದಲ್ಲಿ ಅವರು ಅನುಭವಿಸುವ ಯಾತನೆಗಳೆಷ್ಟೋ? ಅದ್ಯಾವುದೂ ನಮ್ಮ ಕಲ್ಪನೆಗೂ ನಿಲುಕದಂತಹದ್ದು! ಹಕ್ಕಿಯ ಜೀವನ ಕ್ರಮದ ಬಗ್ಗೆ ಅಧ್ಯಯನ ಮಾಡಬೇಕೆಂದರೆ ಅಥವಾ ತಾಯಿ ಹಕ್ಕಿ ಮರಿ ಹಕ್ಕಿಗೆ ಗುಟುಕು ನೀಡುವಂತಹ ಅಪರೂಪದ ದೃಶ್ಯ ಸೆರೆ ಹಿಡಿಯಬೇಕೆಂದರೆ ಗಂಟೆ, ಒಪ್ಪತ್ತು, ದಿನ, ತಿಂಗಳಾನುಗಟ್ಟಲೇ ಛಾಯಾಗ್ರಾಹಕ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಭಿನ್ನವಾದ ಚಿತ್ರ ಬೇಕೆಂದರೆ ವಿಭಿನ್ನ ದೃಷ್ಟಿಕೋನ, ಚಿಂತನೆ, ಅಧ್ಯಯನ ಜೊತೆಗೆ ಸಹನೆ ಅನ್ನೋದು ಆತನಿಗೆ ಅತಿಮುಖ್ಯ.
ಮಾಧ್ಯಮ ಕ್ಷೇತ್ರದಲ್ಲಿರುವ ಛಾಯಾಗ್ರಾಹಕರು ಇನ್ನೂ ಭಿನ್ನವಾಗಿ ಕಂಡು ಬರುತ್ತಾರೆ. ಸದಾ ಸಮಯದ ಜೊತೆ-ಜೊತೆಗೇ ಓಡುತ್ತಿರಬೇಕು. ಸಭೆ, ಸಮಾರಂಭದ ಉದ್ಘಾಟನೆ ಚಿತ್ರ ಸಾಮಾನ್ಯವಾಗಿ ಎಲ್ಲರಿಗೂ ದೊರೆಯುತ್ತದೆ. ಇಂದಿನ ಮಾಧ್ಯಮಗಳಲ್ಲಿ ಅಂತಹ ಚಿತ್ರಗಳಿಗೆ ಅಷ್ಟೊಂದು ಬೇಡಿಕೆಯೂ ಇಲ್ಲ. ಜನರನ್ನು ಹಿಡಿದಿಟ್ಟುಕೊಳ್ಳುವ ಚಿತ್ರ ಛಾಯಾಗ್ರಾಹರಿಂದ ಮಾಧ್ಯಮ ಎದುರು ನೋಡುತ್ತವೆ. ಪ್ರಚಲಿತ ವಿದ್ಯಮಾನಕ್ಕೆ ಚಿತ್ರ ಪೂರಕವಾಗಿದೆ ಎಂದಾದರೆ ಪತ್ರಿಕೆ ಎಂಟು ಕಾಲಂಗಳನ್ನು ಅದೇ ಚಿತ್ರಕ್ಕೆ ಮೀಸಲಿಟ್ಟು ಬಿಡುತ್ತದೆ. ನಡೆಯುತ್ತಿರುವ ಸಭೆಗೆ ಪೂರಕವಾದ ಇನ್ನೊಂದು ದೃಷ್ಟಿಕೋನದ ಚಿತ್ರ, ಅತಿಥಿ-ಮಹೋದಯರ ಹಾವ-ಭಾವ, ಪ್ರಸ್ತುತ ಸನ್ನಿವೇಶ ಹಾಗೂ ಪ್ರಚಲಿತ ವಿದ್ಯಮಾನಕ್ಕೆ ಹೊಂದಿಕೆಯಾಗುವ ಚಿತ್ರ, ಸಾವಿರಾರು ಸಭಿಕರ ನಡುವೆ ಅರೆ ಕ್ಷಣದಲ್ಲಿ ಸೆರೆಯಾಗಬಹುದಾದ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾದರೆ ಅದಕ್ಕಿರುವ ತಾಕತ್ತೇ ಬೇರೆ! ಅಂದರೆ, ಸಭೆ, ಸಮಾರಂಭ ನಡೆಯುವ ವೇಳೆ ಛಾಯಾಗ್ರಾಹಕ ಕಣ್ಣಲ್ಲಿ ಕಣ್ಣಿಟ್ಟು, ಹದ್ದಿನ ಕಣ್ಣಿನಂತೆ ಸುತ್ತೆಲ್ಲ ಸೂಕ್ಷ್ಮವಾಗಿ ಗ್ರಹಿಸುತ್ತಲೇ ಇರಬೇಕಾಗುತ್ತದೆ.
ಕೆಲವು ಸಂದರ್ಭದಲ್ಲಿ ಮಾಧ್ಯಮ ಛಾಯಾಗ್ರಾಾಹಕ ಪ್ರಾಣವನ್ನೇ ಒತ್ತೆಯಿಡಬೇಕಾಗುತ್ತದೆ. ಲಾಠಿ ಚಾರ್ಜ್, ಗೋಲಿಬಾರ್, ಯುದ್ಧ, ಗುಂಪು ಘರ್ಷಣೆಯಂತಹ ಸಂದರ್ಭ, ಎದುರಾಗುವ ಎಲ್ಲ ಅಡೆ-ತಡೆಗಳನ್ನು ಅವರು ಎದುರಿಸಬೇಕು. ಗಲಭೆ ನಿಯಂತ್ರಿಸಲು ಪೊಲೀಸ್‌ರು ಎಲ್ಲಿಯಾದರೂ ಗುಂಡು ಹಾರಿಸಿದರೆ ಅದು ಛಾಯಾಗ್ರಾಹಕನ ಎದೆಯನ್ನೂ ಸೀಳಬಹುದು, ಲಾಠಿ ಚಾರ್ಜ್ ವೇಳೆ ಬೆನ್ನಿನ ಮೂಳೆಯೂ ಮುರಿಯಬಹುದು! ಯುದ್ಧದಂತಹ ಅಪರೂಪದ ದೃಶ್ಯ ಸೆರೆ ಹಿಡಿಯಲು ಹೋಗುವ ಛಾಯಾಗ್ರಾಹಕ ಬದುಕುವ ಎಲ್ಲ ಸಾಧ್ಯತೆಯನ್ನೂ ದೂರ ತಳ್ಳಿಯೇ ರಣರಂಗಕ್ಕೆ ಕಾಲಿಡಬೇಕು. ಗಟ್ಟಿ ಎದೆಗಾರಿಕೆ ಜೊತೆಗೆ, ಸಾವಿನ ಜೊತೆ ಪಯಣಿಸುತ್ತಿದ್ದೇನೆ ಎನ್ನುವ ಮೊಂಡು ಧೈರ್ಯ ಮೈಗೂಡಿಸಿಕೊಂಡು ಆತ ಕ್ಯಾಮರಾ ಆನ್ ಮಾಡಬೇಕು. ಯುದ್ಧದ ಚಿತ್ರಣ ಸೆರೆ ಹಿಡಿಯುವ ಅವಕಾಶ ಎಲ್ಲರಿಗೂ ಒಲಿದು ಬರುವಂತಹದ್ದಲ್ಲ, ಬಂದಿತೆಂದರೆ ಅದನ್ನು ತಪ್ಪಿಸಿಕೊಳ್ಳುವುದು ಸರಿಯಲ್ಲ!
ಫೋಟೋಗ್ರಫಿ ಒಂದು ಅದ್ಭುತ ಪ್ರಪಂಚ. ಒಂದು ಬಾರಿ ಅದರ ಹುಚ್ಚು ಹಿಡಿಯಿತೆಂದರೆ ಜೀವಿತಾವಧಿಯವರೆಗೂ ಅದು ಬೆನ್ನು ಬಿಡದು. ಫೋಟೋಗ್ರಫಿ ಬದುಕಿಗಾಗಿ ಎಷ್ಟೋ ಜನರು ಮನೆ, ಮಠಗಳನ್ನು ಸಹ ತೊರೆದಿದ್ದಾರೆ. ಸಾಲ ಮಾಡಿ ತೀರಿಸಲಾಗದೆ ಎಲ್ಲೆಲ್ಲೋ ನಾಪತ್ತೆಯಾಗಿದ್ದಾರೆ. ಅದು ಈಗಲೂ ಮುಂದುವರಿದಿದೆ. ಅಂದರೆ, ಸಾವಿರ ಚಿತ್ರಗಳ ನಡುವೆ ದೊರೆಯುವ ಒಂದೇ ಒಂದು ಅದ್ಭುತ ಚಿತ್ರ, ಸೆರೆ ಹಿಡಿದಾತನ ಆತ್ಮ ತೃಪ್ತಿಗೆ ಕಾರಣವಾಗುತ್ತದೆ. ಆತನಿಗೆ ಆ ಚಿತ್ರ ಜಗತ್ತೆ ಗೆದ್ದಷ್ಟು ಸಂತೃಪ್ತಿ ನೀಡಿರುತ್ತದೆ. ಸಾವಿರ ಪದಗಳು ಹೇಳಲಾಗದ ಭಾವವನ್ನು ಒಂದೇ ಒಂದು ಚಿತ್ರ ಹೇಳಿ ಬಿಡುತ್ತದೆ.
ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಛಾಯಾಗ್ರಾಹಕ ಕಂಡ....!
ವನ್ಯಜೀವಿ, ಹವ್ಯಾಸಿ, ವೃತ್ತಿನಿರತ, ಮೊಬೈಲ್ ಹಾಗೂ ಮಾಧ್ಯಮ ಕ್ಷೇತ್ರದ ನನ್ನೆಲ್ಲ ಛಾಯಾಗ್ರಾಹಕರಿಗೆ ವಿಶ್ವ ಛಾಯಾಗ್ರಾಹಕರ ದಿನದ ಶುಭಾಶಯಗಳು.

ಮೋಸದ ಕುಣಿಕೆ...!

ಸದ್ದಿಲ್ಲದೆ ಗಂಟಿಕ್ಕಿದೆ ಎದೆಯಲ್ಲೊಂದು ಬಾವು
ನೋವಿಲ್ಲದೆ ಅರಿವಿಲ್ಲದೆ ಹೆಚ್ಚುತ್ತಿದೆ ಕಾವು
ಪ್ರೀತಿಸಿದ್ದಾಯ್ತು, ಕಾಳಜಿ ತೋರಿಸಿದ್ದಾಯ್ತು
ಕೇಳಲೊಲ್ಲದು ಮಾತು ಬೆಳೆಯುತ್ತಲೇ ಹೋಯ್ತು!


ದಿನ ಒಪ್ಪತ್ತು ಕಳೆದು ನವ ಮಾಸ ತುಂಬಿತ್ತು
ರೆಪ್ಪೆ ಮಿಟುಕಿಸುವುದರೊಳಗೆ ವಸಂತ ಸರಿದಿತ್ತು
ಪರಿಧಿ ಇಲ್ಲದ ಬಾವು ಹಲ್ಕಿರಿದು ಗಹಗಹಿಸಿ ನಕ್ಕಿತ್ತು
ನಸುಕಿನ ನಿದ್ದೆಯಲಿ ಬೆಚ್ಚಿ ಮೈ ಬೆವರಿಳಿಸಿತ್ತು!

ಕರುಳು ಚುರ್ರ ಎನ್ನುವ ಬಿಳಿಹಾಳೆ ಪರೀಕ್ಷೆಯಲಿ
ಹರಿತ ಖಡ್ಗದಿಂದ ಒಸರಿತ್ತು ರಕ್ತ ವರ್ಣದ ಶಾಯಿ
ಒತ್ತರಿಸಿ ಬಂದರೂ ಕಾಣದಾಗಿತ್ತು ಎದೆಯ ಹನಿ
ಇರುವುದೊಂದೇ ದಾರಿ ಕೃಷ್ಣಾರ್ಪಣಮಸ್ತು!

ನೆಲಗುದ್ದಿ ನೀರೆತ್ತೋ ದೇಹದಲಿ ಈಗಿಲ್ಲ ಶಕ್ತಿ
ಜರ್ಝರಿತ ಮನಕೆ ಬೇಕಿದೆ ಹಿಡಿಯಷ್ಟು ಮುಕ್ತಿ
ಕರಗುತ್ತಿದೆ ಬಾವು ಉರಿವ ಶಾಖದ ಬೇಗುದಿಗೆ
ದೇಹ ಮಾಡುವ ಮೋಸ ಕಾಣದ ಕಡಲೆಡೆಗೆ!

ತೀರದ ದಾಹ!

ಚಾಚಿದೆ ಬರದ ಕರಿನೆರಳು ಮಲೆನಾಡ ಬುಡದಲ್ಲೂ
ಗುಟುಕು ನೀರಿಗೂ ಹಾಹಾಕಾರ ಸಹ್ಯಾದ್ರಿ ಹಾಸಲ್ಲೂ
ಬಾನಿಗೆ ಬಾಯಾನಿಸಿದೆ ಜೀವಜಲ ಹೊತ್ತ ಬಿಂದಿಗೆ
ಧರೆಗೊತ್ತುತಿದೆ ಗಟ್ಟಿಪಾದ ತೀರದ ಬದುಕಿಗೆ!
ಕೂಳು ಬೇಯಿಸಲು ಬೇಕು, ದಾಹ ನೀಗಲು ಬೇಕು
ಸುಡು ಬಿಸಲಲ್ಲೂ ನೆತ್ತಿ ಮಣ ಭಾರ ಹೊರಲೇಬೇಕು
ಸಿಹಿ ನೀರ ಬಾವಿಗೆ ಮೂರ್ನಾಲ್ಕು ಮೈಲಿ ಪರ್ಲಾಂಗು
ಅಘಳ ಲವಣಾಂಶ ನೀರಿಗೆ ಮನೆಯಂಗಳವೇ ಜಂಪು!

ನೈಟಿ, ದುಪ್ಪಟ, ಚೂಡಿ ಬಣ್ಣ ಬಣ್ಣದ ಉಡುಪು
ಬಳಕುವ ಸೊಂಟದಿ ನೋಡ ಜೀವ ಜಲದ ಒನಪು
ಕುತೂಹಲದ ದೃಷ್ಟಿಗೆ ಹುಬ್ಬೇರಿಸೋ ಅಂದಚಂದ
ನೆಲದ ಕಣ್ಣಿಗೆ ಸುತ್ತಲ ಜಲರಾಶಿಯೇ ಪರಮಾನಂದ!

ಹಸಿರೊದ್ದ ಹಾದಿ ಸವಿಸಲೇಬೇಕು ನಿತ್ಯ ಮೂರೊತ್ತು
ಎಳೆ ಬಾಲೆ, ವೃದ್ಧೆಯೆಂಬ ಭೇದಗಳ ಬದಿಗೊತ್ತು
ಅಂಗಳದಿ ಓಡಾಡೋ ಅಳಕು ಬಳಕಿನ ಅಘಳು
ಬದುಕು ಕಟ್ಟಿಕೊಟ್ಟು ದಾಹ ತೀರಿಸದೇ ಹೋದಳು!