ಬುಧವಾರ, ಡಿಸೆಂಬರ್ 21, 2016

ಮಸ್ಟ್ ರೀಡ್......
ಮಾನವ ಕಳ್ಳಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಮುರಿಯಿತು...!

ನೋಟು ಅಪಮೌಲ್ಯೀಕರಣದ ಕುರಿತು ಯಾರು ಎಷ್ಟೇ ವಿರೋಧಿಸಲಿ. ಬೊಬ್ಬಿರಿದು ಬಾಯಿ ಬಡಿದುಕೊಳ್ಳಲಿ. ಮನಸ್ಸೋ ಇಚ್ಛೆಯಾಗಿ ಬೈದುಕೊಳ್ಳಲಿ. ಆದರೆ, ಮಾನವೀಯತೆಯ ಒಳಗಣ್ಣಿನಿಂದ ನೋಡಿದಾಗ, ಸೂಕ್ಷ್ಮವಾಗಿ ಅವಲೋಕಿಸಿದಾಗ ಎಷ್ಟೋ... ಎಷ್ಟೋ.... ಸಾವಿರ ಲೆಕ್ಕಾಚಾರದಲ್ಲಿ ನನ್ನ ಅಕ್ಕ, ತಂಗಿಯರು ಜತನವಾಗಿದ್ದಾರೆ. ಭಯಾನಕ ಕೂಪದೊಳಗೆ ಬಲವಂತವಾಗಿ ಬೀಳುವಂತ ಸನ್ನಿವೇಶದಿಂದ ತಪ್ಪಿಸಿಕೊಂಡಿದ್ದಾರೆ!

Yes... ಮಾನವ ಕಳ್ಳ ಸಾಗಾಣಿಕೆಯಿಂದ ಪ್ರತಿವರ್ಷ ಸಾವಿರಾರು ಅಪ್ರಾಪ್ತೆಯರು ವೇಶ್ಯಾವಾಟಿಕೆ ಗೃಹಕ್ಕೆ ನೂಕಲ್ಪಡುತ್ತಿದ್ದರು. ದೇಶಾದ್ಯಂತ ವ್ಯಾಪಿಸಿರುವ ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ನಮ್ಮ ಸುತ್ತ ಮುತ್ತಲಿರುವ ಪುಟ್ಟ ಪುಟ್ಟ ಕಂದಮ್ಮಗಳೇ ಸಿಲುಕುತ್ತಿದ್ದವು. ಶಾಲೆಗೆ ಹೋಗುವಾಗ, ಬರುವಾಗ ಅವರನ್ನು ಅಪಹರಿಸುವುದು, ಬಡ ಮಕ್ಕಳಿಗೆ ಆಮೀಷ ತೋರಿಸಿ ಕರೆದೊಯ್ಯುವುದು, ಕೆಲಸದ ನೆಪದಲ್ಲಿ ಕರೆದುಕೊಂಡು ಹೋಗುವುದು....  ಹೀಗೆ ನಾನಾ ವಿಧದಲ್ಲಿ ಇನ್ನೂ ವಯಸ್ಸಿಗೆ ಬರದ ಹೆಣ್ಣು ಮಕ್ಕಳನ್ನು ದುರುಳರು ಹೊತ್ತೊಯ್ಯುತ್ತಿದ್ದರು. ದೆಲ್ಲಿ, ಓರಿಸ್ಸಾ, ಮುಂಬೈ ಸೇರಿದಂತೆ ಬಾಂಗ್ಲಾ, ನೇಪಾಳದಂತಹ ಹೊರ ರಾಷ್ಟ್ರಗಳಿಗೂ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸಾಗಾಣಿಕೆ ಮಾಡುತ್ತಿದ್ದರು. ಹೊಸವರ್ಷದ ಹಿನ್ನೆಲೆಯಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಳ್ಳ ಸಾಗಾಣಿಕೆ ವ್ಯವಹಾರ ಎಲ್ಲೆ ಮೀರುತ್ತಿತ್ತು. ಆದರೆ, ನವೆಂಬರ್ 8ರ ನಂತರ ಈ ವ್ಯವಹಾರ ಸಂಪೂರ್ಣ ನೆಲಕಚ್ಚಿದೆ! ಇದ್ದ ಬಿದ್ದ ವೇಶ್ಯಾಗೃಹಗಳೆಲ್ಲ ಅರಚಾಟ, ಗೂಗಾಟಗಳಿಂದ ಶಾಂತವಾಗಿದೆ. ಗಬ್ಬೆದ್ದು ನಾರುತ್ತಿದ್ದ ಹಾಸಿಗೆ, ದಿಂಬುಗಳೆಲ್ಲ ಮತ್ತಷ್ಟು ನಾರುತ್ತ, ಧೂಳು ತಿನ್ನುತ್ತ ಬಿದ್ದಿವೆ! ಕಾರಣ 500, 1000 ಮುಖಬೆಲೆಯ ನೋಟುಗಳ ಅಪಮೌಲ್ಯ!
ಇಂತಹ ವಿಭಿನ್ನ ದೃಷ್ಟಿಕೋನದ ಮಾಹಿತಿಯೊಂದನ್ನು POST.COM ಹೊರಹಾಕಿದೆ.

ಕಳ್ಳ ಸಾಗಾಣಿಕೆ ವ್ಯವಹಾರದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿಗೇ ಹೆಚ್ಚು ಬೇಡಿಕೆ. 10 ರಿಂದ 12 ವರ್ಷದ ಒಳಗಿನ ಮಕ್ಕಳಿಗೆ 5 ಲಕ್ಷ ರು. ನಿಗದಿ ಪಡಿಸಿದರೆ, 13 ರಿಂದ 15 ವರ್ಷದೊಳಗಿನ ಮಕ್ಕಳಿಗೆ 4 ಲಕ್ಷ ರು.  ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 3, 2 ಲಕ್ಷ ರು.ನಂತೆ ವೇಶ್ಯಾಗೃಹದ ಮಾಲೀಕರಿಗೆ ಮಾರಾಟ ಮಾಡುತ್ತಾರೆ. ಅವರನ್ನು ಖರೀದಿಸಿದ ಮಾಲೀಕರು ಬಲವಂತವಾಗಿ ವೇಶ್ಯಾವೃತ್ತಿಗೆ ನೂಕುತ್ತಾರೆ. ಒಂದು ವೇಳೆ ತಪ್ಪಿಸಿಕೊಳ್ಳಲೇನಾದರೂ ಪ್ರಯತ್ನಿಸಿದರೆ ಕ್ರೂರವಾದ ಶಿಕ್ಷೆಗೆ ಒಳಪಡಿಸುತ್ತಾರೆ. ಇನ್ನೂ ಪ್ರಪಂಚದ ಅರಿವಿಲ್ಲದ ಮುಗ್ಧ ಕಂದಮ್ಮಗಳು ದುರುಳ ಹಣದಾಸೆಗೆ ತಮ್ಮ ಬದುಕನ್ನು ಒತ್ತೆ ಇಡಬೇಕು. ಪರಿಣಾಮ ಅವರು ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಜರ್ಜರಿತವಾಗಿ ಹೋಗುತ್ತಾರೆ. ನಂತರ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಮೊದಲಿನ ಬದುಕು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಕ್ರಮೇಣ ಕಷ್ಟವಾದರೂ ಸರಿಯೇ ಎಂದು ಹಗಲಿರುಳೆನ್ನದೆ ವೇಶ್ಯಾವೃತ್ತಿಯಲ್ಲಿಯೇ ಕಣ್ಣೀರು ಸುರಿಸುತ್ತ ಬದುಕುತ್ತಾರೆ. ಅಂದ ಹಾಗೆ, ಈ ಮಾನವ ಕಳ್ಳ ಸಾಗಾಣಿಕೆ ಆಡಳಿತ ಯಂತ್ರಕ್ಕೆ ತಿಳಿಯದ ವಿಷಯವೇನಲ್ಲ. ಪೊಲೀಸ್ ಹಾಗೂ ಸರಕಾರಿ ಇಲಾಖೆ ಅಧಿಕಾರಿಗಳ ಮೂಗಿನ ನೇರಕ್ಕೇ ನಡೆಯುವ ಕಾನೂನು ಬಾಹಿರ ವ್ಯವಹಾರವಿದು. ಇದಕ್ಕೆ ಬಿಳಿ ಬಟ್ಟೆ ತೊಟ್ಟ ಜನಪ್ರತಿನಿಧಿಗಳ ಕೃಪಾಕಟಾಕ್ಷವೂ ಇದೆ ಎನ್ನುವುದು ಕನ್ನಡಿಯಷ್ಟೇ ಸತ್ಯ.

ಒಂದು ಮಗುವಿನ ಕಳ್ಳ ಸಾಗಾಣಿಕೆಗೆ 2.5 ರಿಂದ 3 ಲಕ್ಷ ರು. ವೆಚ್ಚವಾಗುತ್ತದೆ. ಜನಪ್ರತಿನಿಧಿಗಳಿಗೆ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ, ಆಡಳಿತದಲ್ಲಿರುವ ಅಧಿಕಾರಿ ವರ್ಗದವರಿಗೆ ಹಾಗೂ ಮಕ್ಕಳನ್ನು ಅಂದಗೊಳಿಸುವ ಕೆಲಸಗಾರರಿಗೆಂದು ಕನಿಷ್ಠ ಇಷ್ಟಾದರೂ ಅವರು ವೆಚ್ಚಮಾಡಲೇಬೇಕು. ಇದರಲ್ಲಿ ಸಾಗಾಣಿಕೆ ವೆಚ್ಚ ಮಾತ್ರ ಕೇವಲ 20ಸಾವಿರ ರು. ಇರಬಹುದು. ಪ್ರತಿ ವರ್ಷ 19 ಕೋಟಿ ರು.ಗಳ ವ್ಯವಹಾರ ಮಕ್ಕಳ ಕಳ್ಳ ಸಾಗಾಣಿಕೆಯಿಂದ ನಡೆಯುತ್ತಿದೆ ಎಂದು ರಾಷ್ಟ್ರೀಯ ಬಾಲ ಕಾರ್ಮಿಕ ಸಂಸ್ಥೆ, ಕಾರ್ಮಿಕ ಸಂಘಗಳ ಜಾಲ ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳು ನಡೆಸಿದ ಅಧ್ಯಯನ ಹೇಳುತ್ತದೆ. ಪ್ರತಿ ದಿನ ಹತ್ತರಿಂದ ಹದಿನೈದು ಮಕ್ಕಳು ಕಳ್ಳ ಸಾಗಾಣಿಕೆಗೆ ಒಳಗಾಗುತ್ತಿದ್ದರು. ಆದರೆ, ನ. 8ರ ನಂತರ ಒಂದೇ ಒಂದು ಮಗು ಸಾಗಾಣಿಕೆಯಾದ, ಅಪಹರಣವಾದ ಕುರಿತು ಎಲ್ಲಿಯೂ ದೂರು ದಾಖಲಾಗಿಲ್ಲ. ಇದೊಂದು ಅದ್ಭುತ ಬೆಳವಣಿಗೆ ಅಲ್ಲವೇ? ಎಂದು ಬಚಪನ್ ಬಚಾವೋ ಆಂದೋಲನ ಸಂಸ್ಥೆಯ ರಾಕೇಶ ಸೆಂಗಾರರ ಅಭಿಪ್ರಾಯಪಡುತ್ತಾರೆ.

ಹಳೆ ನೋಟಿನ ಅಪಮೌಲ್ಯದಿಂದ ವೇಶ್ಯಾಗೃಹದ ಕಡೆಗೆ ಗ್ರಾಹಕರು ಮುಖಮಾಡುತ್ತಿಲ್ಲ. ಇದರಿಂದ ಮಾಲೀಕರು ತಮ್ಮ ವ್ಯಾಪಾರ ಕಳೆದುಕೊಂಡು ತೆಪ್ಪಗೆ ಕುಳಿತಿದ್ದಾರೆ. ಮಕ್ಕಳ ಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಕಪ್ಪು ಹಣ ಆಗಿತ್ತು. ಅದಕ್ಕೆ ಪ್ರಧಾನಿ ಮೋದಿ ಕಡಿವಾಣ ಹಾಕಿದ್ದರಿಂದ, ಉದ್ಯಮದ ಮೂಳೆಯೇ ಮುರಿದು ಬಿದ್ದಂತಾಗಿದೆ. ಹೊಸ ನೋಟು ಬಂದಾಗ ಈ ವ್ಯವಹಾರಕ್ಕೆ ಅವಕಾಶ ಇಲ್ಲದಂತೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ನೊಬೆಲ್ ಪುರಸ್ಕೃತ ಕೈಲಾಸ ಸತ್ಯಾರ್ಥ ಹೇಳುತ್ತಾರೆ.....

ಮಂಗಳವಾರ, ನವೆಂಬರ್ 8, 2016

ಮತ್ತದೆ ಮಾತು..... ಸತ್ತರೂ ಬದುಕಿರಲಿ ಆತ್ಮವಿಶ್ವಾಸ!

'ಸೋಲೇ ಗೆಲುವಿನ ಸೋಪಾನ' ಎಂದು ಬಾಲ್ಯದಿಂದಲೂ ಕೇಳುತ್ತಾ ಬಂದಿರುವ ಗಾದೆ ಮಾತು. ಆದರೆ ಆ ಸೋಲು ನೆರಳಿನಂತೆ ಜೀವನ ಪರ್ಯಂತ ಸದಾ ಹಿಂಬಾಲಿಸುತ್ತಲೇ ಇದ್ದರೆ ಸೋಪಾನ ಯಾವಾಗ ಬರಬೇಕು?

'ಒಳ್ಳೆಯದಾಗುತ್ತದೆ... ಭವಿಷ್ಯ ಚೆನ್ನಾಗಿದೆ... ಆತ್ಮವಿಶ್ವಾಸ ಕಳೆದುಕೊಳ್ಳಬೇಡ...' ಎನ್ನುವ ಮಾತಿನ ನಡುವೆಯೇ `ಸತ್ತರೂ ಬದುಕಿರಲಿ, ಆತ್ಮವಿಶ್ವಾಸ' ಎನ್ನುವ ಕವಿ ದಿನಕರ ದೇಸಾಯಿ ಅವರ ಕವನದ ಸಾಲುಗಳು ಧುತ್ತೆಂದು ಸುಳಿದಾಡುತ್ತದೆ. ಸೂಲು, ಸೋಪಾನ, ಜೀವನ, ಭವಿಷ್ಯ, ಆತ್ಮವಿಶ್ವಾಸ ಇವುಗಳ ಆಳಕ್ಕಿಳಿದು ಯೋಚಿಸುತ್ತಾ ಹೋದರೆ, 'ಸತ್ತ ಮೇಲೆ ಯಾಕೆ ಬೇಕು ಆತ್ಮವಿಶ್ವಾಸ' ಎನ್ನುವ ವಾಸ್ತವ ಅರಿವಾಗುತ್ತದೆ. ಯಾಕೆಂದರೆ, ಇದ್ದಾಗ ಮಾತ್ರ ಬದುಕಿಗೊಂದು ಅರ್ಥ. ಅದೊಂದು ಶೂನ್ಯದ ಹೊರಗಿನ ಬದುಕು. ಆದರೆ, ಹೋದಾಗ ಅದು ಶೂನ್ಯದೊಳಗೆ ಬಂಧಿ!


ಕೆಲವು ವೇಳೆ 'ಪರೋಪಕಾರ, ಒಳ್ಳೆಯತನ, ಪ್ರಾಮಾಣಿಕತೆಯ ಬದುಕೇ ಮಗ್ಗಲು ಮುಳ್ಳಾಗಿ ಬಿಡುತ್ತವೆ. ಎಂದೂ ಯಾರಿಗೂ ಕೆಡುಕನ್ನು ಬಯಸದೆ, ಎಲ್ಲರಲ್ಲಿಯೂ ಒಳಿತನ್ನೇ ಕಾಣುತ್ತ, ನನ್ನ ಜೊತೆ ನೀನೂ ಸುಖವಾಗಿರುವ` ಎನ್ನುವ ಬದುಕಿನ ಧ್ಯೇಯ ಇಂದಿನ ದಿನಮಾನಕ್ಕೆ ಸೂಕ್ತವಲ್ಲವೇನೋ? 'ನಾ ಮಾಡಿದ ಒಳ್ಳೆಯ ಕೆಲಸಕ್ಕೆ ಮುಂದೊಂದು ದಿನ ಪ್ರತಿಫಲ ದೊರೆಯುತ್ತದೆ' ಎನ್ನುವ ಆಶಾಭಾವನೆ, ಆಸೆಯನ್ನೇ ಹತ್ತಿಕ್ಕಿ ಬಿಡುತ್ತವೆ. ದಿನ, ತಿಂಗಳು, ವರ್ಷ ಕಳೆದರೂ ಆ `ಮುಂದೊಂದು ದಿನ' ಎದುರಾಗುವುದೇ ಇಲ್ಲ...! `ನನ್ನ ಜೊತೆ ನಿನಗೂ ಒಳ್ಳೆಯದಾಗಲಿ' ಎನ್ನುವ  ಪರೋಪಕಾರದ ಗುಣ ಬದುಕನ್ನೇ ಮಖಾಡೆ ಮಲಗಿಸಿಬಿಡುತ್ತದೆ. ಒಳ್ಳೆಯದಾಗಲಿ ಎಂದು ಪ್ರಾಮಾಣಿಕವಾಗಿ ಹರಸಿ, ಕೈ ಹಿಡಿದು ಕರೆದುಕೊಂಡು ಹೋದವನಿಗೆ `ಹಣೆ ಬರಹ'ದ ಗೋಡೆ ಎದುರಾದರೆ, ಕೈ ಹಿಡಿದು ನಡೆಯುವವನಿಗೆ 'ಅದೃಷ್ಟ' ದೇವತೆ ಹಿಂಬಾಲಿಸುತ್ತದೆ. ಇಲ್ಲಿ ದಾರಿ ತೋರಿದವನೇ ದಾರಿ ಕಾಣದಂತಾಗಿ ತಡವರಿಸುತ್ತ ಮುಗ್ಗರಿಸಿ ಬೀಳುತ್ತಾನೆ. ನನ್ನ ಬದುಕೇ ಇಷ್ಟು ಎಂದು ತನಗೆ ತಾನೇ ಶಾಪ ಹಾಕಿಕೊಳ್ಳುತ್ತ ಮೇಲೆದ್ದು, ಇನ್ನೊಂದು ಭರವಸೆಯ ಕಿರಣದ ಜಾಡು ಹಿಡಿಯಲು ಪ್ರಯತ್ನಿಸುತ್ತಾನೆ.
ಇನ್ನಿಲ್ಲ ಬದುಕು ಎಂದು ಕುಸಿದು ಬಿದ್ದಾಗ, ಭವಿಷ್ಯದ ಹಾದಿಯೇ ಮುಸುಕಾದಾಗ ಈ ಗಾದೆ ಮಾತು, ಕವನದ ಸಾಲು ಹಾಸ್ಯಾಸ್ಪದ ಎಂದೆನಿಸಿ ಬಿಡುತ್ತದೆ.(ಕೆಲವು ವೇಳೆ). ಯಾಕೆಂದರೆ ದಿನ, ಸಮಯ, ಕ್ಷಣ ಎಂದೂ ನಮಗಾಗಿ ಕಾಯುವುದಿಲ್ಲ. ಅದು ಸದಾ ಓಡುತ್ತಲೇ ಇರುತ್ತದೆ. ಆ ಓಟದ ಮಧ್ಯದಲ್ಲಿಯೇ ಯಾವುದೋ ಒಂದು ಸಮಯ ನಮ್ಮ ಬದುಕು ಕೂಡಾ ನಿಂತು ಬಿಡುತ್ತವೆ. ಆಗ ಪರೋಪಕಾರ, ಪ್ರಾಮಾಣಿಕತೆ, ಒಳ್ಳೆಯ ಗುಣಗಳು ನಮ್ಮ ಜೊತೆಯೇ ಲೀನವಾಗಿಬಿಡುತ್ತವೆ. ಕೈ ಹಿಡಿದು ನಡೆದಾತ 'ಅದೃಷ್ಟ' ಎಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುತ್ತಾನೆ. ಕೈ ಹಿಡಿದು ನಡೆಸಿದಾತ `ಹಣೆ ಬರಹ' ಎಂದು ಬದುಕಿಗೆ ಪೂರ್ಣ ವಿರಾಮ ಹಾಕಿರುತ್ತಾನೆ.
ಮತ್ತದೆ ಮಾತು..... ಸತ್ತರೂ ಬದುಕಿರಲಿ ಆತ್ಮವಿಶ್ವಾಸ!
('ಅರ್ಥ'ಕ್ಕೆ ನಿಲುಕದ್ದು......)

ಗುರುವಾರ, ಆಗಸ್ಟ್ 25, 2016

ಈತ ದೇವರಲ್ಲ ನನ್ನಾತ್ಮ ಸಖ......  

ಎಲ್ಲವನ್ನು ಕಳೆದುಕೊಂಡು ಇನ್ನಿಲ್ಲ ಬದುಕು ಎಂದಾಗ, ಸುಮ್ಮನೆ ಬಂದು ಹೆಗಲ ಮೇಲೆ ಕೈ ಹಾಕಿ ಗಟ್ಟಿಯಾಗಿ ಅದಮುತ್ತಾನೆ. ಕುಸಿದು ಬೀಳುವ ಜೀವ-ಭಾವಕ್ಕೆ ಮನದಣಿಯೇ ಸಂತೈಸಿ ಮುಗುಳ್ನಗುತ್ತಾನೆ. ತಾನೊಬ್ಬ ಪರಮಾತ್ಮ ಎಂಬುದನ್ನು ಮರೆತು, ಜೀವಾತ್ಮ ಎಂದು ಸಾರುತ್ತಾನೆ. ಪೂಜಿಸುವುದಕ್ಕಿಂತ ನನ್ನ ಮೇಲೆ ವಿಶ್ವಾಸವಿಡಿ ಎಂದು ಹೇಳುತ್ತಾನೆ. ಎಲ್ಲವನ್ನು ಕಳೆದುಕೊಂಡ ಭಾವ ನನಗೂ ಇದೆ ಎನ್ನುತ್ತ, ನೋವು ಬದುಕಲ್ಲ ಎಂದು ಹಸನ್ಮುಖಿಯಾಗಿರುವ ಪಾಠ ಹೇಳುತ್ತಾನೆ.
ಹಾಗಾದರೆ ಕೃಷ್ಣ ಯಾರು?
ಸಿಂಪಲ್..... ಆತ ಆತ್ಮ ಸಖ. ಅವನೊಬ್ಬ ನೆಚ್ಚಿನ ಗೆಳೆಯ. ಹೌದು, ಬಹುಶಃ ಕೃಷ್ಣ ಇದಕ್ಕೆ ಇಷ್ಟವಾಗುತ್ತಾನೆ. ಆತನ ಬದುಕಿನ ಒಂದೊಂದು ಹೆಜ್ಜೆಯೂ ಅರ್ಥಗರ್ಭಿತ ಹಾಗೂ ಅಷ್ಟೇ, ಅಖ್ಯಾನ! ಹೆತ್ತಾಕೆಯ ಎದೆ ಹಾಲನ್ನು ಆತ ಕುಡಿದಿಲ್ಲ. ಅವಳ ಮಡಿಲಲ್ಲಿ ಆಡಿ ನಲಿದಿಲ್ಲ. ಸಲುಹಿದ ತಾಯಿಗೆ ಆತ ಸಿಗಲಿಲ್ಲ. ಪ್ರೀತಿಸಿದ ರಾಧೆಗೂ ಸಂಪೂರ್ಣ ಸಿಗಲಿಲ್ಲ. ಸೋದರ ಮಾವನ ಪ್ರೀತಿಯೂ ಆತನಿಗೆ ದೊರೆಯಲಿಲ್ಲ. ಆತ ತನಗೆ ಸಿಕ್ಕಿದ ಅಂತ ಅಂದುಕೊಂಡವರಿಗೆ ಸುಳ್ಳಾದ. ಯಾವೊಂದು ಭವ-ಬಂಧನದ ಚೌಕಟ್ಟಿಗೂ ಆತ ಒಳಪಡಲಿಲ್ಲ. ಬದುಕಲ್ಲಿ ಎದುರಾದ ಪ್ರತಿಯೊಂದು ಸಂಬಂಧ-ಬಾಂಧವ್ಯವನ್ನು ಸಮರ್ಥವಾಗಿ ನಿಭಾಯಿಸಿದ. ಸಮಯ ದೊರೆತಾಗಲೆಲ್ಲ ಬದುಕಿನ ಪಾಠವನ್ನು ಹೇಳುತ್ತಲೇ ಹೋದ. ಸಂದರ್ಭದಲ್ಲಿ ಹೊಗಳಿಕೆ ಜತೆಗೆ, ಸಾಕಷ್ಟು ಟೀಕೆಗಳ ಕೊಂಕು ಮಾತುಗಳನ್ನು ಕೇಳಿದ. ತಂತ್ರ, ಕಪಟ, ಚಾಣಾಕ್ಷ್ಯತೆಯನ್ನು ಧರ್ಮ ಸಂಸ್ಥಾಪನೆಗೆ ಹೇಗೆ ಉಪಯೋಗಿಸಬೇಕೆನ್ನುವುದನ್ನು ತಿಳಿಸಿದ.
ಕೃಷ್ಣ ಹೀಗೆಯೇ.... ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಒಂದೊಮ್ಮೆ ಹೇಳಿದರೂ ಅದು ಅವರವರ ಕಲ್ಪನೆ, ಬುದ್ಧಿಮಟ್ಟದ ವ್ಯಾಖ್ಯಾನ. ಅರ್ಥಕ್ಕೆ ನಿಲುಕದ ವಿಭಿನ್ನ ವ್ಯಕ್ತಿಯಾತ. ದೇವಕಿ ಯಶೋದೆಗೆ ತಾಯಿಯಾದ, ದೇವರೆಂದು ಪೂಜಿಸುವ ಅಕ್ರೂರ-ವಿಧುರನಿಗೆ ಭಗವಂತನಾದ, ಹುಚ್ಚಿಯ ಹಾಗೆ ಪ್ರೀತಿಸುವ ರಾಧೆಗೆ ಪ್ರೇಮಿಯಾದ, ರುಕ್ಮಿಣಿ-ಸತ್ಯಭಾಮೆಗೆ ಮಡದಿಯಾದ, ದ್ರೌಪದಿಯಂಥ ಸಹೋದರಿಗೆ ಆತ್ಮ ಬಂಧುವಾದ, ಧರ್ಮಕ್ಕೆ ಗಂಟು ಬಿದ್ದು ವಿರೋಧಿಸುವ ಭೀಷ್ಮ-ದ್ರೋಣರಿಗೆ ನಿರ್ಲಿಪ್ತನಾದ, ಶಕುನಿ-ದುಶ್ಯಾಸನ-ಶಿಶುಪಾಲ-ಜರಾಸಂಧರ ಪಾಲಿಗೆ ಶಿಕ್ಷಕನಾದ, ಶಿಷ್ಟರಾದ ಕುಂತಿ ಪುತ್ರರ ಪಾಲಿಗೆ ರಕ್ಷಕನಾದ, ಮಗುವಿಗಿಂತ ಮುಗ್ಧನಾದ ಸುಧಾಮನಿಗೆ ಗೆಳೆಯನಾದ, ಗೋಕುಲದಲ್ಲಿ ಓಡಾಡುವ ಗೋಪಿಕೆಯರಿಗೆ ತುಂಟನಾದ........
ಒಂದೇ... ಎರಡೇ....! ಕೃಷ್ಣ ಯಾರಿಗೆ? ಏನು? ಆಗಿಲ್ಲ ಹೇಳಿ. ಅವರವರ ಭಾವಕ್ಕೆ, ಅವರವರ ಅರ್ಥಕ್ಕೆ ಆತ ಏನು ಆಗಬೇಕೋ ಅವೆಲ್ಲವನ್ನೂ ಆಗಿದ್ದಾನೆ. ಹಾಗೆಯೇ, ಚೌಕಟ್ಟಿನ ವ್ಯಾಪ್ತಿಗೆ ಸಿಗದೆ ಇನ್ನೂ ಏನೇನೋ ಆಗಿದ್ದಾನೆ. ಅಷ್ಟೊಂದು ಮಾಯಾವಿ, ವಿವೇಚನೆಗೆ ಸಿಗದಷ್ಟು ಪ್ರಬುದ್ಧ, ಬ್ರಹ್ಮಾಂಡವನ್ನೇ ತನ್ನೊಳಗಿಟ್ಟುಕೊಂಡ ಪ್ರಚಂಡ, ಕೊನೆಗೊಂದು ದಿನ ಮಿಥ್ಯದ ಭ್ರಮೆಯಲ್ಲಿ ಬದುಕುತ್ತೇವೆ ಎನ್ನುವ ಸೂಕ್ಷ್ಮವನ್ನು ತನ್ನ ಅಂತ್ಯದ ಮೂಲಕ ಸಾರಿಹೋದ ಮೇಧಾವಿ.
ಹೀಗೆ ಅರ್ಥಕ್ಕೆ ನಿಲುಕದ ತಂತ್ರಗಾರ, ಮಾಯಗಾರ ನನ್ನಾತ್ಮ ಸ್ನೇಹಿತ ಕೃಷ್ಣ. ಆತ ಜನ್ಮಿಸಿದ ಪವಿತ್ರ ದಿನವಿಂದು. ಬರಿಗೈಯಲ್ಲಿ ಹುಟ್ಟಿ, ಅಷ್ಟೇ ಬರಿಗೈಯ್ಯಲ್ಲಿ ಮರಳೋ ಬದುಕು ನಮ್ಮದು. ಕಣ್ಮುಂದೆ ಸಾವಿದೆ ಎನ್ನುವ ಕಟು ಸತ್ಯ ಮರೆತು, ಅಟ್ಟಹಾಸದಿಂದ ಮೆರೆದಾಡುವವರಿಗೆ ನನ್ನ ಗೆಳೆಯನ ಬದುಕು ಒಂದು ನಿದರ್ಶನ. ದೇಹದಲ್ಲಿ ಉಸಿರಿರುವವರೆಗೆ ಮಾತ್ರ ಅದಕ್ಕೊಂದು ಅರ್ಥ, ನಂತರ ಅದೊಂದು ಉಪಯೋಗಕ್ಕೆ ಬಾರದ ವಸ್ತು ಎನ್ನುವ ಸೂಕ್ಷ್ಮ ತಿಳಿಸಿದ ವಿಶ್ವಗುರು ನನ್ನಾತ್ಮ ಸಖ ಕೃಷ್ಣ.
ಹ್ಯಾಪಿ ಬಡ್ಡೆ ಹುಡುಗಾ........
-ನಾಗರಾಜ್ ಬಿ.ಎನ್.


ಭಾನುವಾರ, ಆಗಸ್ಟ್ 21, 2016

ನೀಲ ಗಗನದಲ್ಲೊಂದು ಕಪ್ಪು ಚುಕ್ಕಿ........ 
ಮುಂಜಾನೆ ಏಳಲಾಗದ ಸ್ಥಿತಿ. ತಲೆ ಧೀಂ ಧೀಂ ಎನ್ನುತ್ತಿದೆ. ಅಂತೂ ಸಾವರಿಸಿಕೊಂಡು ಪ್ರಾತಃವಿಧಿಗಳನ್ನು ಮುಗಿಸಿದ ಗಗನ, ಬೈಕ್ ಸ್ಟಾರ್ಟ್ ಮಾಡಿ ಕಚೇರಿ ಕಡೆ ಮುಖ ಮಾಡಿದ.
ಆತನ ಮನಸ್ಸು ಯಾಕೋ ವಿಚಿಲಿತವಾಗುತ್ತಿತ್ತು. ಕಳೆದ ದಿನ ಬಾಕಿಯಿದ್ದ ಕೆಲಸಗಳನ್ನು ಲಗುಬಗೆಯಲ್ಲಿ ಮುಗಿಸಿ, ಯಾವುದೋ ಕಾರ್ಯದ ನಿಮಿತ್ತ ಹೊರಗಡೆ ಹೋಗುತ್ತಾನೆ. ಅಲ್ಲಿ ತನ್ನ ಕೆಲಸ ಮುಗಿಸಿ ವಾಪಸ್ ಕಚೇರಿಗೆ ಮರಳುವ ವೇಳೆ, ರಸ್ತೆಯ ಚರಂಡಿ ಬಳಿ ಶೂಟ್-ಬೂಟು ಹಾಕಿಕೊಂಡಿರುವ ವ್ಯಕ್ತಿಯೊಬ್ಬ ಅಂಗಾತ ಬಿದ್ದಿರುವುದು ಕಣ್ಣಿಗೆ ಕಾಣುತ್ತದೆ.
'ಅರೇ..... ಎಲ್ಲೋ ನೋಡಿದ್ದೀನಲ್ಲ ಈತನನ್ನ........?' ಎಂದು ಒಂದು ಕ್ಷಣ ಯೋಚನೆಗೆ ಬೀಳುತ್ತಾನೆ.
ಉಹೂಂ ..... ನೆನಪಿಗೆ ಬರುತ್ತಿಲ್ಲ. ಆತನನ್ನ ಹಿಂದಿರುಗಿ ನೋಡುತ್ತಲೇ ನಾಲ್ಕೈದು ಹೆಜ್ಜೆ ಇಟ್ಟಿರುತ್ತಾನೆ. ಮನಃಪಟಲದಲ್ಲಿ ಮಸುಕು ಮಸುಕಾದ ಮುಖವೊಂದು ಸ್ಪಷ್ಟರೂಪ ಪಡೆದುಕೊಳ್ಳುತ್ತದೆ. ಗಗನಗೆ ಒಮ್ಮೆಲೆ ಬರ ಸಿಡಿಲು ಬಡಿದಂತಾಗುತ್ತದೆ.
'ಭಗವಂತ...!' ಎಂದು ಉದ್ಘಾರ ತೆಗೆಯುತ್ತ, ಚರಂಡಿಯ ಪಕ್ಕದಲ್ಲಿ ಬಿದ್ದಿರುವ ಆತನಲ್ಲಿಗೆ ತಡವರಿಸುತ್ತ ಧಾವಿಸುತ್ತಾನೆ.
ಹತ್ತಿರ ಹೋಗುತ್ತಿದ್ದಂತೆ ಸಾರಾಯಿ ವಾಸನೆ ಗಬ್ಬೆಂದು ಮೂಗಿಗೆ ಬಡಿಯುತ್ತದೆ. ಸುತ್ತಮುತ್ತ ಒಮ್ಮೆ ಕಣ್ಣಾಡಿಸುತ್ತಾನೆ.
ಹಾದಿ ಹೋಕರು, 'ಏಯ್, ಬಿಡಪ್ಪ... ಕುಡ್ಕೊಂಡು ಬಿದ್ದವರಿಗೆ ಏನ್ ಸಹಾಯ ಮಾಡ್ತೀಯ' ಎಂದು ವ್ಯಂಗ್ಯವಾಡಿ ಮುಂದೆ ಸಾಗುತ್ತಾರೆ.
ಆತನನ್ನು ತನ್ನ ಕಾಲ ಮೇಲೆ ಮಲಗಿಸಿ, ತನ್ನ ಬ್ಯಾಗ್ನಲ್ಲಿದ್ದ ಬಾಟಲಿ ನೀರನ್ನು ತೆಗೆದು, ಆತನ ಮುಖಕ್ಕೆ ಸಿಂಪಡಿಸುತ್ತಾನೆ. ಅಮಲಿನಲ್ಲಿದ್ದಾತನ ಮುಖಕ್ಕೆ ತಣ್ಣನೆಯ ನೀರು ಬಿದ್ದಾಗ, ನಿಶೆಯ ಕಣ್ಣನ್ನು ಅರೆಬರೆಯಾಗಿ ತೆರೆಯುತ್ತಾನೆ.
'ಯಾರೋ ನೀನು, ಹೋಗಲೇ....' ಎನ್ನುತ್ತ, ಏನೇನೋ ಅಸಭ್ಯವಾಗಿ ಬೈಯ್ಯುತ್ತಾನೆ.
ಆತ ಭಾನು. ಮೂರುವರ್ಷದ ಹಿಂದೆ 'ಸಂದರ್ಭವೊಂದರಲ್ಲಿ' ಗಗನಗೆ ಆತನ ಮುಖ ಪರಿಚಯ. ಭಾನುವಿಗು ಕೂಡಾ ಗಗನ ಮುಖ ಪರಿಚಯವೇ. ಆದರೆ, ಭಾನುವಿಗೆ ಗಗನ ಯಾರು ಎಂದು ಈ ಸಂದರ್ಭದಲ್ಲಿ ಪರಿಚಯ ಹಿಡಿಯಲಾಗುತ್ತಿಲ್ಲ. ಯಾಕೆಂದರೆ, ಸಾರಾಯಿ ಆತನ ಮೈ-ಮನವೆಲ್ಲ ತುಂಬಿಕೊಂಡು, ಇಹದ ಪರಿವನ್ನೇ ಅಳಿಸಿಬಿಟ್ಟಿದೆ.(ಅಥವಾ ಮರೆತೂ ಇರಬಹುದು).
ಗಗನ ಒಳಗಗೊಳಗೆ ಅಳುತ್ತಿದ್ದಾನೆ. ಉಮ್ಮಳಿಸಿ ಬರುವ ದುಃಖವನ್ನು ತಡೆ ಹಿಡಿಯುತ್ತಿದ್ದಾನೆ.
'ಅಯ್ಯೋ..... ಎಂಥ ಅನ್ಯಾಯವಿದು?' ಎಂದು ವಿಧಿಯನ್ನು ಶಪಿಸುತ್ತಿದ್ದಾನೆ. ಮನದಲ್ಲಿ ಸಾವಿರ... ಸಾವಿರ ಆಲೋಚನೆಗಳು. ಅದಕ್ಕೆ ಪ್ರತಿಸ್ಪರ್ಧಿಯೆನ್ನುವಂತೆ ಹಿಪ್ಪಿ ಹಿಂಡುವಂತ ಯಾತನೆಗಳು.
ನೋವಿನಲ್ಲೂ ನಗುವನ್ನು ರೂಢಿಸಿಕೊಂಡ ಗಗನ, ನಗುತ್ತಲೇ ದಾರಿಹೋಕನೊಬ್ಬನನ್ನು ಕರೆದು ಸಹಾಯ ಕೇಳುತ್ತಾನೆ. ಆಟೋ ಎಂದು ಕೂಗಿ, ದಾರಿಹೋಕನ ಸಹಾಯದಿಂದ ಭಾನುವನ್ನು ರಸ್ತೆಗೆ ಕರೆತಂದು ಆಟೋ ಹತ್ತಿಸುತ್ತಾನೆ. ಗೋವರ್ಧನ ರಸ್ತೆಗೆ ಆಟೋ ತಿರುಗಿಸುವಂತೆ ಹೇಳಿ, ತಾನು ಪಯಣಿಸುತ್ತಾನೆ.
ಏನೇನೋ ಚಿತ್ರ ವಿಚಿತ್ರ ಯೋಚನೆಗಳು ಗಗನ ಮನದಾಳದಲ್ಲಿ ಸುಳಿದಾಡುತ್ತಿವೆ. ಎದೆಯಲ್ಲೊಂದು ಸಣ್ಣ ನಡುಕ. ಕಾರ್ಮೋಡಗಳೆಲ್ಲ ಒಂದೇ ಕಡೆ ಹೆಪ್ಪುಗಟ್ಟಿದಂಥ ಭಾವ. ಗಗನ ಮೊಗದಲ್ಲಿದ್ದ ನಗು ನಿಧಾನವಾಗಿ ಮಾಯವಾಗುತ್ತಿದೆ.
ತಲುಪಬೇಕಾದ ಗಮ್ಯ ಸ್ಥಳ ಸನಿಹವಾಗುತ್ತಿದೆ.
ಅದು ಭಾನುವಿನ ಮನೆ. 'ಸಂದರ್ಭ'ವೊಂದರಲ್ಲಿ ಆತನ ಮನೆ ಹಠ ಹಿಡಿದು ಹುಡುಕಿದ್ದ. ಆದರೆ, ಇಂತಹ ಸಂದರ್ಭದಲ್ಲಿ ಆ ಮನೆಯ ಹೊಸಿಲು ತುಳಿಯುತ್ತೇನೆ ಎಂದು ಆತ ಅಂದುಕೊಂಡಿರಲಿಲ್ಲ.
ಆಟೋ ಇಳಿದು ಭಾನುವಿನ ಒಂದು ಕೈಯ್ಯನ್ನು ತನ್ನ ಹೆಗಲ ಮೇಲಿಟ್ಟುಕೊಂಡು, ನಿಧಾನಕ್ಕೆ ಆತನ ಜತೆ ಹೆಜ್ಜೆ ಮನೆ ದಿಕ್ಕಿನತ್ತ ಹೆಜ್ಜೆ ಇಡುತ್ತಿದ್ದಾನೆ.
ಮನೆ ಮುಂದೆ ಬಂದು ಗಗನ ಕಾಲಿಂಗ್ ಬೆಲ್ ಒತ್ತಿ, ಭಾನುವಿನ ಹಿಂದೆ ಹಿಮ್ಮುಖ ಹಾಕಿಕೊಂಡು ನಿಲ್ಲುತ್ತಾನೆ. ಅಷ್ಟರಲ್ಲಿ ಒಳಗಿದ್ದ ನಾಯಿ ಒಂದೇ ಸಮನೆ ಕೂಗುತ್ತದೆ.
ಮನೆ ಬಾಗಿಲು ತೆರೆದ ಭಾನುವಿನ ಮಡದಿ, ಅಮಲಿನಲ್ಲಿ ಜೋಲಿ ಹೊಡೆಯುತ್ತಿದ್ದ ಗಂಡನನ್ನು ನೋಡಿ ಬಯ್ಯುತ್ತಾಳೆ.
'ಪ್ರತಿದಿನ ನಿಮ್ಮದು ಇದೇ ಹಣೆಬರಹ. ಹಾದಿ ಬೀದಿಲಿ ಹೋಗೋರು ನಿಮ್ಮನ್ನು ಕರ್ಕೊಂಡು ಮನೆಗೆ ತಂದು ಬಿಡೋದು. ಯಾಕಾದ್ರೂ ನಾ ನಿಮ್ಮನ್ನು ಮದ್ವೆ ಆದ್ನೋ?' ಎಂದು ತನ್ನ ಸಂಕಟವನ್ನು ಹೊರಹಾಕುತ್ತಾಳೆ.
ಆಕೆಯ ಮಾತನ್ನು ಕೇಳಿ ಗಗನ, ಬಿಕ್ಕಳಿಸಿ ಬರುವ ದುಃಖವನ್ನು ತಡೆಹಿಡಿದು ತನ್ನೆರಡು ತುಟಿಗಳನ್ನು ಬಲವಂತವಾಗಿ ಕಚ್ಚಿ ಹಿಡಿದಿದ್ದಾನೆ. ಏನು ಮಾಡಬೇಕೆಂದು ತೋಚದೆ ವಿಭ್ರಾಂತನಾಗಿದ್ದಾನೆ. ಸಾವರಿಸಿಕೊಳ್ಳಲು ಪಟ್ಟ ಪ್ರಯತ್ನವೆಲ್ಲ ಒಂದೊಂದಾಗಿ ವಿಫಲವಾಗುತ್ತಿದೆ. ನಿಶೆಯಲ್ಲಿದ್ದ ಭಾನುವಿನ ಓಲಾಟದ ಜತೆಗೆ, ನಿತ್ರಾಣಗೊಂಡ ತನ್ನ ದೇಹದ ನಿಶ್ಯಕ್ತಿ ಆತನನ್ನು ಅಲ್ಲಿಯೇ ಕುಸಿದು ಬೀಳುವಂತೆ ಮಾಡುತ್ತಿದೆ. ಉಸಿರನ್ನು ಗಟ್ಟಿಯಾಗಿ ಬಿಗಿಹಿಡಿದುಕೊಂಡು ........
'ಕ್ಷಮಿಸು ನೀಲಿ... ನಾನು ಗಗನ' ಎನ್ನುತ್ತ ಮುಖ ತಿರುಗಿಸುತ್ತಾನೆ...!
ಗಗನನನ್ನು ನೋಡಿದ್ದೇ ನೀಲಿಗೆ ಮಾತೇ ಬರದಂತಾಗಿ, ಗರ ಬಡಿದವಳಂಗಾಗುತ್ತಾಳೆ. ಬಿಟ್ಟು ಕಣ್ಣು ಬಿಟ್ಟಂತೆ, ಆಶ್ಚರ್ಯದಿಂದ ಗಗನನ್ನು ನೋಡುತ್ತಿದ್ದಾಳೆ. ಹಾಗೆ ಅರಿವಿಲ್ಲದೆ ಎರಡು ಕಣ್ಣಂಚಿನಿಂದ ನೀರು, ಆಕೆಯ ಗುಳಿಬಿದ್ದ ಕೆನ್ನೆಯನ್ನು ತೋಯಿಸುತ್ತಿದೆ. ತುಟಿ ಬಿಗಿಹಿಡಿದು ಬಿಕ್ಕಳಿಸುವ ಸರದಿ ಈಗ ನೀಲಿಯದ್ದು.
ಎರಡು ಕೈ ಜೋಡಿಸಿ...... ಅಳುತ್ತಲೇ ನೆಲಕ್ಕೆ ಕುಸಿದು ಬೀಳುತ್ತಾಳೆ.
'ಅಯ್ಯೋ...' ಎನ್ನುತ್ತ ತನ್ನೆರಡು ಕೈಗಳಿಂದ ತಲೆಯನ್ನು ಗಟ್ಟಿಯಾಗಿ ಬಡಿದುಕೊಳ್ಳುತ್ತಿದ್ದಾಳೆ. ಭಾನುವನ್ನು ಹಿಡಿದುಕೊಂಡು ಎದುರಿಗೆ ನಿಂತ ಗಗನ, ಏನೂ ಹೇಳಲಾಗದಂತವನಾಗಿ ಮೂಗನ ಹಾಗೆ ಇವೆಲ್ಲವನ್ನು ನೋಡುತ್ತಾ ಸುಮ್ಮನೆ ನಿಂತು ಬಿಟ್ಟಿದ್ದಾನೆ.
'ಹುಚ್ಚುಕೋಡಿ ಮನಸ್ಸಿಗೆ ಬೆಲೆ ಕೊಟ್ಟು, ಈಗ ನೀನೇ ಬೆಲೆ ತೆರುವಂತಾಯಿತಲ್ಲ' ಎಂದು ಮನಸ್ಸಿನಲ್ಲಿಯೇ ಮಮ್ಮುಲ ಮರುಗುತ್ತಿದ್ದಾನೆ.
ಭಾನುವನ್ನು ಅಲ್ಲಿಯೇ ಇರುವ ಸೋಫಾದಲ್ಲಿ ಕುಳ್ಳರಿಸಿದ ಗಗನ, 'ಈತನಿಗೆ ತಣ್ಣೀರ ಸ್ನಾನ ಮಾಡಿಸು. ಊಟ ಮಾಡಿದ ಹಾಗೆ ಕಾಣುತ್ತಿಲ್ಲ, ಹಸಿದಿರುವ ಹಾಗಿದೆ' ಎನ್ನುತ್ತಾನೆ.
ನೀಲಿಯಿಂದ ಯಾವುದೇ ಪ್ರತ್ಯುತ್ತರವಿಲ್ಲ. 'ತಾ ಮಾಡಿದ ತಪ್ಪಿಗೆ, ತನ್ನ ನಿರ್ಧಾರಕ್ಕೆ, ತನ್ನ ಹಠಕ್ಕೆ ಭಗವಂತ ತಕ್ಕ ಶಿಕ್ಷೆ ನೀಡಿದ್ದಾನೆ' ಎಂದು ತನ್ನನ್ನು ತಾನೇ ಶಪಿಸಿಕೊಳ್ಳುತ್ತಿದ್ದಾಳೆ.
'ಸರಿ... ನಾ ಇನ್ನು ಹೊರಡುತ್ತೇನೆ' ಎಂದು ಎದ್ದ ಗಗನನಿಗೆ ಗೋಡೆ ಮೇಲೆ ತೂಗಿ ಹಾಕಿದ ಚಿಕ್ಕ ಮಗುವಿನ ಫೋಟೋ ಕಣ್ಣಿಗೆ ಬೀಳುತ್ತದೆ. ನೀಲಿಯ ನೋವನ್ನು ಮರೆ ಮಾಚಬೇಕೆಂದು,
'ಎಷ್ಟು ಮುದ್ದಾಗಿದೆಯಲ್ವಾ ಪಾಪು? ಇಂಥದ್ದೆ ಪಾಪು ನೀಲಿ ಮಡಿಲು ತುಂಬಲಿ' ಎನ್ನುತ್ತಾನೆ.
ಆತನ ಮಾತಿಗೆ ನೀಲಿ, ನಗುತ್ತ....
'ಥ್ಯಾಂಕ್ಸ್ ಗಗನ, ಅದು ನನ್ನದೇ ಮಗು, ಪ್ರಕೃತಿ ಅಂತ...... ಮುಂದೇನೋ ಹೇಳಲಿದ್ದ ಅವಳನ್ನು ಅಲ್ಲಿಯೇ ತಡಿದು, 'ವ್ಹಾವ್.... ನೀಲಿ, ತುಂಬಾ ಸಂತೋಷವಾಯ್ತು. ಎಲ್ಲಿದೆ ಕಂದಮ್ಮ?' ಎಂದು ಪ್ರಶ್ನಿಸುತ್ತಾನೆ.
ನೀಲಿ ಮತ್ತೆ ನಗುತ್ತಾಳೆ. ನಗು ದೊಡ್ಡದಾಗುತ್ತ ಹೋಗುತ್ತದೆ.
ಇತ್ತ ಗಗನ 'ಹೇಳು ನೀಲಿ.... ಪ್ರಕೃತಿ ಪಾಪು ಎಲ್ಲಿ?' ಎಂದು ಮತ್ತೆ ಕೇಳುತ್ತಾನೆ.
ನೀಲಿ ತಕ್ಷಣ ನಗು ನಿಲ್ಲಿಸಿ, 'ಪ್ರಕೃತಿ ಮಡಿಲು ತುಂಬಿ, ಬರಿದು ಮಾಡಿ ಹೋದಳು ಗಗನ' ಎಂದು ಶಾಂತವಾಗಿ ಉಸುರುತ್ತಾಳೆ.
ಗಗನ ತನ್ನೆರಡು ಕಣ್ಣುಗಳನ್ನು ನಿಧಾವಾಗಿ ಮುಚ್ಚಿ, ಉಸಿರನ್ನು ಒಳಗೆಳೆದುಕೊಂಡು 'ಶೂನ್ಯದತ್ತ' ಮನಸ್ಸನ್ನು ಕೇಂದ್ರಿಕರಿಸುತ್ತಾನೆ.
ಸಾವರಿಸಿಕೊಂಡಂತೆ ಮಾಡಿ, ತೊದಲಿಸುತ್ತ ಅರೆಬರೆ ಮುಚ್ಚಿದ ಕಣ್ಣಲ್ಲೆ, 'ಕ್ಷಮಿಸು ನೀಲಿ, ಹೋರಡುತ್ತೇನೆ' ಎಂದು ಭಾರವಾದ ಹೆಜ್ಜೆ ಹಾಕುತ್ತ ಮನೆಯ ಹೊಸ್ತಿಲಿನ ಹೊರಗೆ ಕಾಲಿಡುತ್ತಾನೆ.
-ನಾಗರಾಜ್ ಬಿ.ಎನ್. 

ಬುಧವಾರ, ಆಗಸ್ಟ್ 17, 2016

ಗೂಡು ತೊರೆದ ನೀಲಿ ಹಕ್ಕಿ....

ಕೊನೆಗೂ ಎದೆ ಗೂಡಿನ ಗೋಡೆಗೆ ಬಳಿದುಕೊಂಡ ನೀಲಿ ಬಣ್ಣ ರಂಗೇರಲೇ ಇಲ್ಲ.
ಇರಲಿ.... ಹುಚ್ಚು ಹಿಡಿಸೋ ಆ ನೀಲಿ ಬಣ್ಣ ಆತನ ಬದುಕನ್ನು ಆವರಿಸಿ ಬಾನಂಗಳದ ನೀಲಿಯಲ್ಲಿ ಬೆರೆತು ಹೋಗುತ್ತವೆ ಅಂದುಕೊಂಡಿದ್ದ. ಆದರೆ, ಬಣ್ಣಗಳ ಹೊಯ್ದಾಟದಲ್ಲಿ ನೀಲಿ ಕಡುಗಪ್ಪಾಗಿ ಕಾಪಿಟ್ಟ ಮೋಡಗಳಾಗುತ್ತವೆ ಅನ್ನೋ ಸತ್ಯ ಅರಿವಾಗಿದ್ದು ಅವನಿಗೆ ಆವಾಗಲೇ..! ಮೋಡ ಕಾಪಿಟ್ಟಿದೆಯೋ, ಬಣ್ಣ ಕಾಪಿಟ್ಟಿದ್ದೇ ಮೋಡವಾಗಿದೆಯೋ ಗೊತ್ತಿಲ್ಲ. ಎದೆಯ ಬಾನಲ್ಲಿ ಮಾತ್ರ ಅಕಾಲಿಕ ವರ್ಷೆ ಧೋ ಧೋ... ಎಂದು ಸುರಿಯುತ್ತಿದೆ. ಮುಷ್ಟಿಯಗಲಷ್ಟಿಲ್ಲದ ಪುಟ್ಟ ಎದೆಗೂಡು ವರ್ಷೆ ಆರ್ಭಟಕ್ಕೆ ನಲುಗಿ ಹೋಗಿದೆ. ಪ್ರಳಯದಂಚಿಗೆ ತಲುಪಿ, ಆಸರೆಯ ಹುಡುಕಾಟದಲ್ಲಿ ಕಣ್ಣಂಚಿಗೆ ಜೋತು ಬಿದ್ದಿದೆ. ನಾಡಿ ಬಡಿತ ಕ್ಷಣ ಕ್ಷಣಕ್ಕೂ ನಿಧಾನವಾಗುತ್ತಿದೆ. ಅನಿಶ್ಚಿತತೆಯ ಉಸಿರು, ನಿಶ್ಚಿತ ಅರ್ಥಕ್ಕೆ ಕಾದು ಕುಳಿತಿದೆ....!
ಒಂದೇ ಸಮನೆ ಎದೆಗೆ ನಾಟಿದ ಬಾಣಕ್ಕೆ ರಕ್ತವೂ ಒಸರುತ್ತಿಲ್ಲ. ನರನಾಡಿಗಳಲ್ಲಿ ಹರಿದಾಡುವ ರಕ್ತ ಸಹ ವರ್ಷೆಯ ಚಳಿಗೆ ಹೆಪ್ಪುಗಟ್ಟಿ ಬಿಟ್ಟಿವೆ. ಮಡುಗಟ್ಟಿದ ಕನಸು ಬಾವಾಗಿ ಕಾಣಿಸಿಕೊಂಡಿದೆ. ಸಹಿಸಲಾಗದ ಪ್ರಚಂಡ ನೋವು. ಮಿಡುಕಾಡಲು ಅಸಾಧ್ಯವಾದ ಯಾತನೆ. ನಿಂತ ಜಾಗವೇ ಕುಸಿದು ಬೀಳಲಿದೆಯೋ ಅನ್ನೋ ಭಾವ.
ಆದರೂ ಸಾವರಿಸಿಕೊಳ್ಳುತ್ತಿದ್ದಾನೆ. ನೋವಿನ ವಿರುದ್ಧವೆ ಸೆಣಸಾಡುತ್ತಿದ್ದಾನೆ. ಎದೆಯಾಳದಲ್ಲಿ ಬೆಂಕಿಹಚ್ಚಿ, ಹೆಪ್ಪುಗಟ್ಟಿದ ರಕ್ತವನ್ನು ತಿಳಿಗೊಳಿಸುತ್ತಿದ್ದಾನೆ. ನೋವಿನ ಬಾವು ಸುಟ್ಟು ಭಸ್ಮವಾಗುತ್ತಿದೆ. ಕನಸಿನ ಅರಮನೆ ಚಟಪಟನೆ ಉರಿದು ಹೋಗುತ್ತಿದೆ. ಆ ಉರಿವ ಜ್ವಾಲೆ ನಿನ್ನ ಬಾಳ ದಾರಿಗೆ ಬೆಳಕಾಗಿರಲಿ.... ಅದರ ಶಾಖ ನಿನ್ನ ಬದುಕನ್ನು ಬೆಚ್ಚಗಿರಿಸಲಿ..... ಎಂದು ಮನದಲ್ಲಿಯೇ ಪ್ರಾರ್ಥಿಸುತ್ತಿದ್ದಾನೆ.
ಆತ ಅಂದು ಎದೆಗೂಡಿಗೆ ಬಳಿದುಕೊಂಡ ನೀಲಿ ಬಣ್ಣವೆಲ್ಲ ಈಗ ಮಾಯವಾಗಿದೆ. ಬೆಂಕಿಯ ಕೆನ್ನಾಲಿಗೆ ಎದೆಗೂಡು ಬೆಂದು ಹೋಗಿದೆ. ಕಣ್ಣಾಡಿಸಿದಲ್ಲೆಲ್ಲ ದಟ್ಟ ಹೊಗೆ. ಮೂಗಿಗೆ ಬಡಿಯುವ ಅರೆಬರೆ ಬೆಂದ ಕನಸಿನ ವಾಸನೆ. ಇನ್ನೇನಿದ್ದರೂ ಅಳಿದುಳಿದ ಬೂದಿಯಲ್ಲಿ ಕೆದುಕಾಟ. ಗೂಡು ಬಿಟ್ಟು ನೀಲಾಕಾಶಕ್ಕೆ ಹಾರಿದ
ನೀಲಿ ಹಕ್ಕಿಯ ಹುಡುಕಾಟ. ನಿತ್ಯ... ನಿರಂತರ.
ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಹಾಡು, ಇನ್ನಿಲ್ಲವಾಯಿತೇ ಆ ಹಕ್ಕಿ ಹಾಡು.........
-ನಾಗರಾಜ್ ಬಿ.ಎನ್. 

ಶುಕ್ರವಾರ, ಜುಲೈ 29, 2016

ರೊಚ್ಚಿಗೆದ್ದ ಮಲಪ್ರಭೆ ಮಕ್ಕಳು
ಮಲಪ್ರಭೆ ಮಕ್ಕಳು ಮತ್ತೆ ರೊಚ್ಚಿಗೆದ್ದಿದ್ದಾರೆ. ತಾತ, ಅಪ್ಪಂದಿರು ಬುದುಕುವ ಹಕ್ಕಿಗಾಗಿ ಹಾಕಿಕೊಟ್ಟ ಹೋರಾಟದ ಹಾದಿಯನ್ನು ಮೊಮ್ಮಕ್ಕಳು, ಮಕ್ಕಳು ತುಳಿದು ಗಮ್ಯ ತಲುಪೇ ತೀರುತ್ತೇವೆ ಎಂದು ದಂಡ ಹಿಡಿದು ಹೊರಟಿದ್ದಾರೆ. ಅಂದು ಹೋರಾಡಿದ ಎಷ್ಟೋ ಜೀವಗಳು ಮಣ್ಣಲ್ಲಿ ಬೆರತುಹೋಗಿವೆ. ಉಳಿದ ಕೆಲವಷ್ಟು ತಲೆಗಳ ಕೂದಲುದುರಿ ಮಾಸಿ ಹೋಗಿವೆ. ಆದರೆ ಅವರ ಬೆನ್ನಹಿಂದೆಯೇ ಬಂದ ಕುಡಿಗಳು, ಹಿರಿತನದ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡಲೇ ಬೇಕು ಅಬ್ಬರಿಸಿ ಹೂಂಕರಿಸುತ್ತಿದ್ದಾರೆ. ರಾಜ್ಯ, ಕೇಂದ್ರ ಸರಕಾರದ ವಿರುದ್ಧ ತೊಡೆ ತಟ್ಟಿ, ತಾಕತ್ತಿದ್ದರೆ ಕಣಕ್ಕಿಳಿಯಿರಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ!
ಪರಿಣಾಮ, ನಲವತ್ತು ವರ್ಷಗಳ ಕಾಲದ ಮಹದಾ ಯಿ-ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ಹೋರಾಟದ ಕೆಂಡವೀಗ ನಿಗಿನಿಗಿಸುತ್ತಿವೆ. ಎದೆಯಲ್ಲಿಯೇ ಉಳಿದಿದ್ದ ದಾವಾಗ್ನಿ, ಅಪಧಮನಿ, ಅಭಿಧಮನಿಯನ್ನು ಸೀಳಿ ನರ ನಾಡಿಗಳ ಮೂಲಕ ಹೊರ ಬರುತ್ತಿವೆ. ಕಾಡ್ಗಿಚ್ಚಿನಂತೆ ಸುತ್ತೆಲ್ಲ ಪಸರಿಸಿ ಎದುರಿಗೆ ಬಂದ ಅಧಿಕಾರಶಾಹಿಗಳ ಹಾಗೂ ಅವರ ಕಚೇರಿಗಳನ್ನ ಆಪೋಶನ ತೆಗೆದುಕೊಳ್ಳುತ್ತಿವೆ!
ಇದು ಮಲಪ್ರಭೆ ಅಚ್ಚುಕಟ್ಟು ಪ್ರದೇಶಗಳಲ್ಲಿ ವಾಸಿಸುವ ರೈತ ಸಮುದಾಯದ ಆಕ್ರೋಶದ ಕಿಚ್ಚು. ಹಂತ ಹಂತವಾಗಿ ಹೊರಬಂದು, ಈಗ ಹೋಮದ ಅಗ್ನಿಕುಂಡವಾಗಿ ಮಾರ್ಪಟ್ಟಿದೆ. ಹುಣ್ಣಿಮೆ ಶರಧಿ ಎಲ್ಲೆ ಮೀರಿ ಉಕ್ಕುವಂತೆ, ಅಂತರಾಳದಲ್ಲಿ ಮಡುಗಟ್ಟಿದ್ದ ತಾಳ್ಮೆ ಕಟ್ಟೆ ಒಡೆದು ಜ್ವಾಲೆಯಾಗಿ ಬದಲಾಗಿದೆ. ತಾತ, ಅಪ್ಪಂದಿರ ಕಾಲದಿಂದ, ಮಕ್ಕಳು, ಮರಿ-ಮೊಮ್ಮಕ್ಕಳ ಕಾಲವಾದ ಇಂದಿನವರೆಗೂ ಕುಡಿಯುವ ನೀರಿಗಾಗಿ ಒತ್ತಾಯಿಸುತ್ತ ಬಂದರೂ, ಆಡಳಿತಾರೂಢ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೇ ಎನ್ನಲಿಲ್ಲ. ಹೋರಾಟ, ಪ್ರತಿಭಟನೆ, ಬಂದ್, ಗಲಭೆ ನಡೆದಾಗಲೆಲ್ಲ ಪಕ್ಷಗಳ ಪ್ರತಿಷ್ಠೆ, ಒಣ ರಾಜಕೀಯ ಮಾಡುತ್ತ ಕಾಲ ಕಳೆದರು. ಜತೆಗೆ, ರೈತ ಸಮುದಾಯದ ಹೋರಾಟ ಹತ್ತಿಕ್ಕಲು ತೆರೆಮರೆಯಲ್ಲಿ ಏನೇನು ಮಾಡಬೇಕೋ ಅವೆಲ್ಲವನ್ನು ಶಿಸ್ತುಬದ್ಧವಾಗಿ ಮಾಡಿದರು. ಇನ್ನೂ ಮುಂದುವರಿದರು, ಮೂರು ಪಕ್ಷದ ಮುಖಂಡರು ಪ್ರತ್ಯೇಕ ಪ್ರತಿಭಟನೆ ಮಾಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದರು. ಮೂರು ಪಕ್ಷಗಳ ಜನಪ್ರತಿನಿಧಿಗಳು ಪರಸ್ಪರ ಒಬ್ಬರ ಮೇಲೊಬ್ಬರು ಕೆಸರೆರಚಾಡುತ್ತ ಪ್ರತಿಭಟನಾಕಾರರ ದಿಕ್ಕನ್ನು ಸಹ ಬದಲಿಸಲು ಪ್ರಯತ್ನಿಸಿದರು. ಕುಚೋದ್ಯವೆಂದರೆ ಅವರ ಅಂದಿನ ಆ ಪ್ರತಿಭಟನೆಗಳು ಯಾರ ವಿರುದ್ಧವಾಗಿತ್ತು ಎನ್ನುವುದು?
ಇರಲಿ, ಶಾಂತಿಯಿಂದಾಗದ್ದು ಕ್ರಾಂತಿಯಿಂದಾದರೂ ನಡೆಯಲೇಬೇಕು. ಅದೇ ಅಂತಿಮ ಎಂದಾದರೆ ಯಾರು ಏನೂ ಮಾಡಲು ಅಸಾಧ್ಯ. ಇನ್ನೊಬ್ಬರಿಗೆ ಅನ್ಯಾಯವಾಗಲೆನ್ನುವ ದುರುದ್ದೇಶವಿಟ್ಟುಕೊಂಡು ಭರತ ಭೂಮಿಯಲ್ಲಿ ಎಂದೂ ಜನಾಂದೋಲನ ನಡೆದಿಲ್ಲ. ಸಾರ್ವಜನಿಕ ಹಿತಾಸಕ್ತಿಗೋಸ್ಕರ ಮುಂದಿನ ದಿನಗಳನ್ನು ಅವಲೋಕಿಸಿ, ಅನಿವಾರ್ಯ ಸ್ವಾರ್ಥಗಳಿಂದ ಬೃಹತ್ ಪ್ರತಿಭಟನೆ, ಗಲಭೆಗಳು ಸರಕಾರದ ವಿರುದ್ಧ ನಡಿದಿವೆ. ಅಂತಹ ಬಹುತೇಕ ಹೋರಾಟವೆಲ್ಲ ಯಶಸ್ಫವಿಯೂ  ಆಗಿವೆ. ಆದರೆ, ನಲವತ್ತು ವರ್ಷಗಳ ಕಾಲದಷ್ಟು ಸುದೀರ್ಘವಾದ ನಡೆಯುತ್ತಿರುವ ಹೋರಾಟವೆಂದರೆ ಬಹುಶಃ ಇದೊಂದೆ ಇರಬೇಕು. ಹಾಗೆಯೇ, ರಾಜಕೀಯ ನೇತಾರರೆನಿಸಿಕೊಂಡವರ ಸ್ವಾರ್ಥದ ಗಂಜಿ ಬಟ್ಟಲಲ್ಲಿ ಬಿದ್ದ ನೊಣದ ಗತಿಯಂತಾದ್ದು ಸಹ ಇದೊಂದೆ ಯೋಜನೆಯಿರಬೇಕು.
ಮಾಡು ಇಲ್ಲವೇ ಮಡಿ ಎನ್ನುವ ಧ್ಯೇಯ ವಾಕ್ಯವನ್ನು ಹಸಿ ಎದೆಯಲ್ಲಿ ಕೊರೆಸಿಕೊಂಡು, ರಕ್ತ ಚಿಮ್ಮಿ ಹರಿದು ಉಸಿರು ನಿಲ್ಲುವವರೆಗೂ ಹೋರಾಟ ಕೈ ಬಿಡಲಾರೆವು ಎನ್ನುತ್ತ ರೈತರು ಬಂಡಾಯವೆದ್ದಿದ್ದಾರೆ. ನ್ಯಾಯ ದೇವತೆ ಎಂದು ಎರಡು ಕೈ ಕಟ್ಟಿ, ತಲೆ ಬಗ್ಗಿಸಿ ನಿಲ್ಲುತ್ತಿದ್ದವರು, ಈಗ ಅದೇ ಕೈಯ್ಯಲ್ಲಿ ಪಾಶು ಪತಾಸ್ತ್ರ ಹಿಡಿದು, ತಲೆಯಲ್ಲಿ ಕಿಚ್ಚು ತುಂಬಿಕೊಂಡು ನ್ಯಾಯ ದೇಗುಲವನ್ನು ಧ್ವಂಸ ಮಾಡಿದ್ದಾರೆ. ಗಂಟಲ ಪಸೆ ಒಣಗಿಸಿಕೊಳ್ಳಲು ನೀರು ನೀಡದೆ ನ್ಯಾಯ ದೇವತೆಯೇ ಅನ್ಯಾಯ ಎಸಗಿದ್ದಾಳೆಂದು, ಅವಳ ಮೇಲಿದ್ದ ನಂಬಿಕೆಯನ್ನು ಸಹ ಸುಟ್ಟು ಬೂದಿ ಮಾಡಿದ್ದಾರೆ. ಆ ಬೂದಿಯನ್ನೇ ಹಣೆಗೆ ಮೆತ್ತಿಕೊಂಡು ಗೆದ್ದೇ ಗೆಲ್ಲುತ್ತೇವೆ ಎಂದು ಸಪಥ ಗೈದಿದ್ದಾರೆ.
ಇಷ್ಟು ದಿನದ ಶಾಂತಿಯುತ ಹೋರಾಟಕ್ಕೆ ತೆರೆ ಎಳೆದ ಅವರು ಸಂಪೂರ್ಣ ಕಾನೂನನ್ನೇ ಕೈಗೆತ್ತಿಕೊಂಡು ನಟ್ಟ ನಡು ರಸ್ತೆಯಲ್ಲಿ ಹೊಟ್ಟೆ-ಬೆನ್ನು ಒಂದಾಗುವಂತೆ ಕೂಗುತ್ತ ಕೆಂಡದುಂಡೆಯನ್ನು ಉಗುಳುತ್ತಿದ್ದಾರೆ. ಅದರ ಕಾವಿಗೆ ಕೆಲವು ಸ್ಥಳೀಯ ಜನಪ್ರತಿನಿಧಿಗಳು ಥರಥರನೆ ನಡುಗುತ್ತ, ಖುರ್ಚಿಯಿಂದ ಮೇಲೇಳುತ್ತಿದ್ದಾರೆ. ಸಾಕಪ್ಪ ಈ ರಾಜಕೀಯ ಎಂದು ರೈತರ ಹೆಗಲಿಗೆ ಹೇಗಲಾಗಿ, ದನಿಗೆ ದನಿ ಸೇರಿಸಿ ಕದನದ ಕಹಳೆ ಊದುತ್ತಿದ್ದಾರೆ. ಸಂಸತ್ ಭವನದಲ್ಲಿ ಆಸೀನರಾಗುವ ಉಕ ಭಾಗದ ಜಪ್ರತಿನಿಧಿಗಳು ಒಗ್ಗಟ್ಟಾಗಬೇಕು, ಇಲ್ಲ ಖುರ್ಚಿ ಬಿಟ್ಟು ಸಿಡಿದೇಳಬೇಕು ಎಂದು ಸ್ಪಷ್ಟ ಸಂದೇಶ ಸಾರಿದ್ದಾರೆ. ಇವೆಲ್ಲದರ ಪರಿಣಾಮ ನರಗುಂದ-ನವಲಗುಂದ ಬಂಡಾಯ ನೆಲದ ರೈತರ ರಕ್ತವೆಲ್ಲ ಕೊಪ್ಪರಿಗೆಯಲ್ಲಿ ಹಾಕಿದ ಎಣ್ಣೆಯಂತೆ ಕೊತಕೊತನೆ ಕುದಿಯುತ್ತಿದೆ.
ಮುಂದೇ........!! ಆ ಭಗವಂತನಿಗೂ ಊಹಿಸಲು ಅಸಾಧ್ಯವೇನೋ.....!!
-ನಾಗರಾಜ್ ಬಿ.ಎನ್ 

ಬುಧವಾರ, ಜುಲೈ 6, 2016

ಎಲೆಗಳ ಮೇಲೆ ಮಳೆ ಹನಿಗಳ ಥಕಧಿಮಿತ...

ಇವನು ನಮ್ಮ ಆತ್ಮೀಯ ದಿನು. ಹುಚ್ಚು ಪರಿಸರ ಪ್ರೇಮಿ. ಮರ ಎಂದರೆ ನೆರಳು, ಗಿಡ ಎಂದರೆ ಬದುಕು, ಹಸಿರು ಎಂದರೆ ಉಸಿರು, ಪರಿಸರ ಎಂದರೆ ಮನುಕುಲ ಎನ್ನುವ ಈತ ನಿಜಕ್ಕೂ ನಿಸ್ವಾರ್ಥ.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ, 'ಜಾ, ಕುಮಟಾ ಬಸ್ ಸ್ಟ್ಯಾಂಡಿನಲ್ಲಿ ಗಿಡ ಹಾಕೋಣ, ರೈಲ್ವೆ ಪ್ಲಾಟ್ ಫಾರ್ಂ ಅಕ್ಕ ಪಕ್ಕ ಗಿಡ ನೆಡೋಣ, ಮಂಗಳೂರು-ಕಾರವಾರ ರಸ್ತೆ ಇಕ್ಕೆಲಗಳಲ್ಲಿ ಗಿಡ ಹಾಕಿದರೆ ಹೇಗೆ? ಶಾಲೆಗಳಿಗೆ ಭೇಟಿ ನೀಡಿ ಗಿಡ ನೆಡಲು ಹೇಳೋಣ...... ಹೀಗೆ ಒಂದೇ ಓಘದಲ್ಲಿ ಆತನ ಮಾತುಗಳು ಸಾಗುತ್ತಿತ್ತು. ಮಳೆ ಹನಿ ಭೂಮಿಗೆ ಬೀಳುತ್ತಿದ್ದಂತೆ ಗಿಡ ನೆಡುವ ಆತನ ಕನಸು ಗರಿಗೆದರುತ್ತಿತ್ತು. ವಿಚಿತ್ರವೆಂದರೆ ಆತ ಕರೆ ಮಾಡಿದಾಗಲೆಲ್ಲ ಮೊದಲ ಮಾತು 'ಜಾ ಎಲ್ಲಿ ಗಿಡ ಹಾಕುವುದು?' ಎನ್ನುವುದೇ ಆಗಿರುತ್ತಿತ್ತು. ಉತ್ತರ-ದಕ್ಷಿಣ ದಿಕ್ಕಿನತ್ತಿರುವ ನಾವಿಬ್ಬರು ಸಂಧಿಸುವುದು ವರ್ಷಕ್ಕೆ ಮೂರು, ನಾಲ್ಕು ಬಾರಿ ಮಾತ್ರ! ಹಾಗಿದ್ದಾಗ, ಆತ ಗಿಡ ಹಾಕುವ ಮಾತಿಗೆಲ್ಲ ನನ್ನದು ಮೌನ ಹಾಗೂ 'ಮಾಡೋಣ' ಎನ್ನುವುದಾಗಿತ್ತು.
ಆದರೆ, ಛಲದಂಕ ಮಲ್ಲನಂತೆ ಈ ವರ್ಷ ಗಿಡ ನೆಟ್ಟೇ ನೆಡುತ್ತೇನೆ ಎನ್ನುವ ದೃಢ ಸಂಕಲ್ಪ ಮಾಡಿಕೊಂಡು, ಒಂದು ತಿಂಗಳಿನಿಂದ ಅಲ್ಲಿ, ಇಲ್ಲಿ ಎಂದು ಓಡಾಡಲು ಪ್ರಾರಂಭಿಸಿದ್ದ. ಕೆಲ ದಿನಗಳ ಹಿಂದೆ, ಸುರತ್ಕಲ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿರುವ ಎಟಿಎಂ ಅಧಿಕಾರಿಯಿಂದ ನಂದಿಕೂರ, ಸುರತ್ಕಲ್ ಹಾಗೂ ಇನ್ನೆರಡು ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಂ ಅಕ್ಕಪಕ್ಕ ಗಿಡ ನೆಡಲು ಅನುಮತಿ ಪಡೆದಿದ್ದ. ಒಂದು ದಿನ ರಾತ್ರಿ ದೂರವಾಣಿ ಕರೆ ಮೂಲಕ ಎರಡು ಗಂಟೆಗಳ ಕಾಲ ಮಾತನಾಡಿ ಪರವಾನಿಗೆ ದೊರೆತ ಸಂತೋಷವನ್ನು ಹಂಚಿಕೊಂಡಿದ್ದ. ಪರವಾನಿಗೆಯೇನೋ ಪಡೆದಿದ್ದ. ಆದರೆ, ಗಿಡ ಎಲ್ಲಿಂದ ಖರೀದಿಸುವುದು? ಎನ್ನುವ ಪ್ರಶ್ನೆ ಆತನ ತಲೆಯಲ್ಲಿ ನುಸುಳಿದಾಗ, ಯಾರೋ ಪರಿಸರ ಪ್ರೇಮಿ ಹೇಳಿದನಂತೆ, 'ಮಂಗಳೂರಿನ ಪಡೀಲ್ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಗಿಡ ದೊರೆಯುತ್ತದೆ' ಎಂದು. ಒಂದು ಸೋಮವಾರ ಕಂಪನಿಗೆ ರಜೆ ಹಾಕಿ, ಅಲ್ಲಿಗೆ ಹೋಗಿ ಮೂವತ್ತು ಗಿಡಗಳಿಗೆ ಅರ್ಜಿ ಸಲ್ಲಿಸಿದ್ದ. ಆತ ಇರುವುದು ಸುರತ್ಕಲ್ ಆಗಿರುವುದರಿಂದ, ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿರುವ ನರ್ಸರಿಯಿಂದ ಗಿಡ ತರವುದು ತುಸು ತ್ರಾಸದಾಯಕವೇ ಆಗಿತ್ತು. ಬಾಡಿಗೆ ರಿಕ್ಷಾ ಕೇಳಿದಾಗ ಅವರು 1,200 ರು. ಬೇಡಿಕೆ ಮುಂದಿಟ್ಟಿದ್ದರು. ನಂತರ, ತನ್ನ ಸ್ನೇಹಿತರಿಗೆ ಹೇಳಿ, ಅವರ ಕಾರಿನಲ್ಲಿ ಅಲ್ಲಿಂದ ಸುರತ್ಕಲ್ಗೆ ಗಿಡವನ್ನು ತಂದಿದ್ದ.
ಅಂತೂ... ಇಂದು ಬುಧವಾರ(ಜು. 6) ತನ್ನ ಕನಸನ್ನು ನನಸಾಗಿಸಿಕೊಂಡ. ತನ್ನ ಇಚ್ಛೆಯಂತೆ ಸುರತ್ಕಲ್ ಹಾಗೂ ನಂದಿಕೂರ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಂ ಅಕ್ಕ ಪಕ್ಕ ಮಹಾಗನಿ, ಕಕ್ಕೆ, ಬಾಗೆ, ಅವಲಾಂಡ, ಸೀಮೆರೂಬ, ರೇಂಜ, ಹೂವರಸಿ ಎಂದು ಮೂವತ್ತು ಗಿಡಗಳನ್ನು ಭೂ ಮಾತೆ ಮಡಿಲಿಗೆ ಹಾಕಿದ. ಸರ್ವ ಸ್ವತಂತ್ರವಾಗಿ ಯಾರೊಬ್ಬರ ಸಹಾಯವೂ ಇಲ್ಲದೆ ಏಕಾಂಗಿಯಾಗಿ ಕನಸನ್ನು ಮೆಟ್ಟಿ ನಿಂತ. ಮೂವತ್ತು ಗಿಡ ಬೆಳೆದು ದೊಡ್ಡದಾಗುವವರೆಗೂ ಅದರ ಜವಾಬ್ದಾರಿ ತಾನೇ ಹೊರುತ್ತೇನೆ ಎಂದು ರೈಲ್ವೆ ಅಧಿಕಾರಿಗಳಿಗೆ ಮಾತು ಕೊಟ್ಟ. ಆತನಲ್ಲಿರುವ ಪರಿಸರ ಕಾಳಜಿ ಹಾಗೂ ಪ್ರಾಮಾಣಿಕತೆ ಅರಿತ ರೈಲ್ವೆ ಅಧಿಕಾರಿಗಳು, 'ನಾವೇ ಮಾಡಬೇಕಾದ ಕಾರ್ಯಕ್ಕೆ ನೀವು ಸಾಥ್ ನೀಡಿದ್ದೀರಿ. ಇದರ ಸಂಪೂರ್ಣ ಹೊಣೆ ರೈಲ್ವೆ ಇಲಾಖೆಯೇ ಹೊರುತ್ತದೆ' ಎಂದು ಅವನಿಗೆ ಅವರು ಪ್ರತಿ ಭರವಸೆ ನೀಡಿದರು.
ಸ್ನೇಹಿತ ದಿನುವಿನ ಮೊಗದಲ್ಲಿ ಆತ್ಮ ಸಂತೃಪ್ತಿಯ ನಗು. ಎದೆ ಗೂಡಿನ ಬಿಸಿ ಉಸಿರಲ್ಲಿ, ತಣ್ಣನೆಯ ಹಸಿ ಉಸಿರು. ಭೂ ಮಾತೆಯ ಮಡಿಲಲ್ಲಿರುವ ಆ ಪುಟ್ಟ ಗಿಡಗಳ ಎಲೆಗಳ ಮೇಲೆ ಮಳೆ ಹನಿಯ ಥಕಧಿಮಿತ. ಸುಂಯ್ಯನೆ ಬೀಸುವ ಕುಳಿರ್ಗಾಳಿಗೆ  ಓಲಾಡುವ ಭಾಗ್ಯ! ಮುಂದೊಂದು ದಿನ ಗಿಡ(ಬದುಕು) ಮರ(ನೆರಳು)ವಾಗಿ ಹಸಿರು(ಉಸಿರು) ಚೆಲ್ಲಲಿದೆ. ಈ ದಿನಕ್ಕೆ ಸಾಕ್ಷಿಯಾಗಿ ಇತಿಹಾಸ ಪುಟ ಸೇರಲಿದೆ. ಆಗ, ರೈಲಿನ ಮೇಲೆ ಪಯಣಿಸುವಾಗ, ಬಾಗಿಲ ಬಳಿ ನಿಂತು, 'ನಮ್ಮ ದಿನುವಿನ ಮರ' ಎಂದು ಕಣ್ತುಂಬಿಸಿಕೊಳ್ಳುತ್ತೇವೆ.