ಮಂಗಳವಾರ, ಆಗಸ್ಟ್ 27, 2013

ಮುಂಗಾರಿನ ಅಭಿಷೇಕಕೆ....... 


ಒಂದೇ ಸಲ ಆವೇಶ ಬಂದವಳಂತೆ ನಾ ಎಳೆದ ಚಾದರವನ್ನು ಅವಳು ಗಟ್ಟಿಯಾಗಿ ಹಿಡಿದೆಳೆದಳು. ನಮ್ಮಿಬ್ಬರ ಜಗ್ಗಾಟದಲ್ಲಿ ನನ್ನ ಕ್ಯ ಮೇಲಾದರೂ ಎಂದಿನಂತೆ ಅವಳ ಸೋಲನ್ನು ಅಪೇಕ್ಷೀಸದ ನಾನು ಸೋತು ಬಿಟ್ಟೆ. ತಾನು ಗೆದ್ದ ಸಂತೋಷದಲ್ಲಿ ಮಕ್ಕಳಂತೆ ಅವಳು ಕುಣಿಯ ಹತ್ತಿದಳು. ನಾನು ಮೆಲ್ಲನೆ ಎದ್ದು ಅವಳ ಕೈ ಸವರಿ `ನೋವಾಯಿತಾ ಚಿನ್ನಾ' ಎಂದೆ. ಗಕ್ಕನೆ ನಿಂತ ಅವಳು ವ್ಯಾಕುಲತೆಯಿಂದ ನನ್ನ ಕಣ್ಣನ್ನೇ ದಿಟ್ಟಿಸಿ ನೋಡುತ್ತ ನಿಂತಳು..... ಒಮ್ಮೆಲೆ ಅಲ್ಲಿಂದ ಓಡಿದಳು. ತಾನು ಎಲ್ಲಿದ್ದೆನೆಂದು ಅರಿವಾಗಿರಬೇಕು.
ಎದ್ದು ಬಿಸಿಬಿಸಿಯಾದ ಹಂಡೆ ಸ್ನಾನ ಮಾಡಿ ಬಂದೆ. ಮೈಮನಗಳೆಲ್ಲ ಹಗುರೆನಿಸಿತು. ಇಣುಕುತ್ತಿದ್ದ ಸೂರ್ಯನಿಗೆ ನಮಸ್ಕರಿಸಿ ಗಾಯತ್ರಿ ಮಂತ್ರ ಪಠಿಸಿ ಒಳಗೆ ಬಂದೆ. ನನಗಿಂತ ಮೊದಲೆ ಫ್ರೆಸ್ಅಪ್ ಆಗಿ ಲಂಗದಾವಣಿಯಲ್ಲಿ ಮಿಂಚುತ್ತ ನಾಚುತ್ತ ನಿಂತಿದ್ದ ನನ್ನವಳನ್ನು ನೋಡುತ್ತ ಹಾಗೆ ನಿಂತುಬಿಟ್ಟೆ.
ಒಂದು ಹೆಜ್ಜೆ ಇಟ್ಟು ಕೈ ಮುಂದೆ ಮಾಡಿದವನನ್ನು, ಕೊಟ್ಟಿಗೆಯಲ್ಲಿನ `ಅಂಬಾ' ಎಂಬ ಧ್ವನಿ ಎಚ್ಚರಿಸಿತು. ಥಟ್ಟನೆ ಸಾವರಿಸಿಕೊಂಡು ತಿಂಡಿ, ತೀರ್ಥ ಏನೂ ಇಲ್ವ; ಹೊಟ್ಟೆ ಲಬೋ ಲಬೋ ಎನ್ನುತ್ತಿದೆ ಎಂದೆ. `ಬೆಳಗಾಯ್ತು ನಿನಗೆ, ಬರೀ ಹೊಟ್ಟೆ ಹೊರೆಯೋ ಚಿಂತೆ. ರಾತ್ರಿ 2 ಗಂಟೆಗೆ ಎಬ್ಬಿಸಿ 3ಕೆಜಿ ಸ್ವೀಟ್ ತಂದಿಟ್ಟರೂ ಮುಗಿಸಿಯೇ ಮಲ್ಗೋ ಜಾತಿ ನೀ... ಬಾ ಬಾ... ನಮ್ಮ ಆಯಿ ಸವತೆಕಾಯಿ ಇಡ್ಲಿ ಮಾಡಿದ್ದಾರೆ' ಎನ್ನುತ್ತ ಕೈ ಹಿಡಿದೆಳೆದೊಯ್ದವಳು.
ಅಡುಗೆ ಮನೆ ಬಾಗಿಲಲ್ಲಿ ಬಿಟ್ಟಳು. ಅವರಮ್ಮ ನಗುತ್ತ `ಬಾರಪ್ಪ' ಎಂದು ತಿಂಡಿಯನ್ನು ಮುಂದಿಟ್ಟರು. ನೀನು ಕುತ್ಕೊಳ್ಳೆ ಎನ್ನುತ್ತ ನನ್ನ ಪಕ್ಕದಲ್ಲಿ ಅವಳಿಗೂ ಪ್ಲೇಟನ್ನು ಇಟ್ಟರು. ತಿಂಡಿಪೋತ ಮುಕ್ಕು ಮುಕ್ಕು ಎಂದು ಅವಳು ಒಟಗುಡುತ್ತಿದ್ದುದು ನನಗೆ ಮಾತ್ರ ಕೇಳಿಸುತ್ತಿತ್ತು. ನಗು ನಿಯಂತ್ರಿಸಲಾಗದೇ ಬಾಯಿಗಿಟ್ಟ ಇಡ್ಲಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಕೆಮ್ಮತೊಡಗಿದಾಗ, ಅವರಮ್ಮ ಓಡಿ ಬಂದು ನೀರು ಕೊಟ್ಟು `ಅಯ್ಯೋ.... ಮಗ ನೀರು ಕೊಡಲು ಮರೆತೆ, ನೀನಾದ್ರೂ ಕೊಡಬಾರದೆನೇ ಪಾಪ' ಎಂದು ತಲೆಯ ಮೇಲೆ ನಿಧಾನವಾಗಿ ಹೊಡೆದು ಬೆನ್ನು ತಿಕ್ಕಿದಾಗ, ಆ ತಾಯಿ ಪ್ರೀತಿಗೆ ನನ್ನ ಮನ ತುಂಬಿ ಬಂತು. ಆದರೆ ಪಕ್ಕದಲ್ಲಿದ್ದವಳು ನಿಧಾನವಾಗಿ ನನ್ನ ಭುಜ ಚಿವುಟಿ ತಿನ್ನೋ ಚಪಲಕ್ಕೆ ಬಕಬಕ ಮೇಯಬೇಕಿತ್ತಾ, ನಿಧಾನಕ್ಕೆ ಇಳಿಸು, ಮತ್ತೆ ಬೇಕಾದ್ರೂ ಇದೆ ಡೋಟ್ ವರಿ... ಎಂದಾಗ ನಸುನಕ್ಕು ಸುಮ್ಮನಾದೆ.
ತಿಂಡಿ ಮುಗಿಸಿ ಅವರಮ್ಮನ ಅಪ್ಪಣೆ ಪಡೆದು ಕಾಡಿನ ಕಡೆಗೆ ಹೊರಟೆವು. ನಮಗೆದುರಾದ ಪಕ್ಕದ್ಮನೆ ಪುಟ್ಟನನ್ನು ಜತೆ ಬರುತ್ತೀಯೇನೋ ಅಂದವಳು, ತುಟಿಕಚ್ಚಿಕೊಂಡು ಏನೋ ತಪ್ಪು ಮಾಡಿದವಳಂತೆ ನನ್ನ ನೋಡಿದಳು. ಶಿವ ಪೂಜೆಯಲ್ಲಿ ಕರಡಿ... ಎಂದು ನಾ ಬುಸುಗುಡುತ್ತಿದ್ದುದು ಅವಳಿಗೆ ಅರಿವಾಗಿ, ಬೇಡಾ ಪುಟ್ಟಾ ಎಂದು ಬಾಯಿ ತೆಗೆಯುವಷ್ಟರಲ್ಲಿ ಅವನು ನಮ್ಮನ್ನು ಬಿಟ್ಟು ಅಂಗಳ ದಾಟಿಯಾಗಿತ್ತು. ಸಿಕ್ಕ ಸಿಕ್ಕ ಮರಕ್ಕೆ ಕಲ್ಲು ಹೊಡೆಯುತ್ತ ಅವನು ಸಾಗುತ್ತಿದ್ದರೆ, ಅವನ ಹಿಂದೆ ಅವಳಿಟ್ಟ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತ ನಾನು ನಡೆಯುತ್ತಿದ್ದೆ.
`ಏನು ಸಪ್ತಪದಿ ತುಳಿತಿದ್ದೀಯಾ? ಬಾ ಕೋತಿ ಥರಾ ಆಡಬೇಡಾ ನೀ' ಎಂದು ಎಳೆದು ಜತೆ ನಡೆದಳು. ಮಗುಮ್ಮಾಗಿ ನಡೆಯುತ್ತಿದ್ದ ನನಗೆ `ಏನು ಬೇಜಾರಾಯ್ತಾ? ಸಾರಿ ಕಣೋ, ಪಾಪ ಮಗು ಅಲ್ವಾ? ಪ್ಲಿಸ್....' ಅಂದಳು. ಇದಕ್ಕೇನಾ ನನ್ನ ಇಷ್ಟು ದೂರ ಕರೆದುಕೊಂಡು ಬಂದಿದ್ದು? ಎಂದಾಗ ಹೇಳಿದ್ನಲ್ಲಾ `ಸಾ..........ರಿ' ಎಂದು ಗಟ್ಟಿಯಾಗಿ ಕೈ ಹಿಡಿದಳು. ಸರಿಬಿಡು ಎನ್ನುತ್ತಾ ಜಗಳ ಕಾಯುತ್ತಾ ನಡೆದೆವು. ಪುಟ್ಟ ತನಗೆ ನಿಮ್ಮ್ ಸಂಗವೇ ಬೇಡ ಎಂಬಂತೆ ಮುಂದೆ ಮುಂದೆ ಸಾಗುತ್ತಿದ್ದ. ಅಷ್ಟರಲ್ಲಿ ತುಂತುರು ಮಳೆ ಪ್ರಾರಂಭವಾಯಿತು. ಓಡಿ ಬಂದ ಪುಟ್ಟಾ ಅವಳ ಕೈಯಲಿದ್ದ ಛತ್ರಿಯನ್ನು ಕಿತ್ತುಕೊಂಡು ಓಡಿದ. ಅನಿವಾರ್ಯವಾಗಿ ಅವಳು ನನ್ನ ಛತ್ರಿಯಡಿಗೆ ಬರಬೇಕಾಯಿತು. ಮೌನವಾಗಿ ನಡೆದವು. ಅವಳ ತಲೆ ಒದ್ದೆಯಾಗಿ ಮುಂಗುರುಳಿನಿಂದ ನೀರ ಹನಿ ಒಂದೊಂದೆ ಇಳಿಯುತ್ತಿರುವಾಗ ನನ್ನ ಕೈಯನ್ನು ಅಡ್ಡ ಹಿಡಿದು, ಆ ನೀರನ್ನು ಹಿಡಿದೆ.
ಏನೋ ಇದು ಎಂದ ಅವಳ ಮಾತಿಗೆ `ಸ್ವಾತಿಮುತ್ತು' ಎಂದೆ. ಸುಮ್ಮನಾದಳು. ಥಟ್ಟನೆ ಕೊಡೆಯನ್ನು ಎಸೆದು, ತುಂತುರು ಮಳೆಗೆ ಮೈ ಒಡ್ಡಿ ಆಸ್ವಾದಿಸಿದೆ..... ಓಡಿ ಹೋಗಿ ಛತ್ರಿಎ ತ್ತಿಕೊಂಡು, `ಕತ್ತೆ ತರಾ ಆಡಬೇಡಾ... ಬಾ' ಎಂದು ಬೈದು ಛತ್ರಿಯನ್ನು ಹಿಡಿದಳು. ಕಾನನವ ಸುತ್ತಿ, ಬಿದಿರಿನ ಕಳಿಲನ್ನು ಮುರಿದುಕೊಂಡು ಹಿಂತಿರುಗುವಾಗ ಮತ್ತೆ ಸೂರ್ಯ ಇಣುಕಿದ್ದ. ಮನೆಗೆ ಬಂದಾಗ ಮಧ್ಯಾಹ್ನ 2 ಗಂಟೆ. ಅವರಮ್ಮ ಊಟ ಸಿದ್ಧ ಮಾಡಿಟ್ಟಿದ್ದರು. ಊಟ ಮುಗಿಸಿ 2 ತಾಸು ಗಡದ್ದಾಗಿ ನಿದ್ದೆ ಹೊಡೆದೆ. ರಾತ್ರಿ 8ಕ್ಕೆ ಬಸ್, ಎದ್ದೇಳು ಎಂದವಳಿಗೆ `ನೀ ನನ್ನ ಕರ್ಕೊಂಡು ಬಂದಿದ್ದು ಯಾಕೆ? ಎಂದೆ. ಮೌನವಾದಳು.
ಗಡಿಯಾರ ಆರು ಗಂಟೆ ತೋರಿಸುತ್ತಿತ್ತು. ಹಾಲು ಕುಡಿದು ಜೀಕುತ್ತಿದ್ದ ಕರು ಕನಕಳನ್ನು ಬಾಚಿ ತಬ್ಬಿಕೊಂಡು ಮುದ್ದುಗರೆದೆ. ಅವಳು ನನ್ನನ್ನೆ ದುರುಗುಟ್ಟಿ ನೋಡುತ್ತಿದ್ದಳು. ಹೆದರಿವನಂತೆ ಕರುವನ್ನು ಬಿಟ್ಟು `ಹೊಟ್ಟೆಕಿಚ್ಚಾ....?' ಎಂದೆ.
8ಕ್ಕೆ ಬಸ್ ಹತ್ತಬೇಕಾದ್ದರಿಂದ ಏಳು ಗಂಟೆಗೆ ಅವರಮ್ಮ ಊಟಕ್ಕೆ ಬಡಿಸಿದ್ದರು. ಬಾಳೆ ಎಲೆ ತಂದಿಟ್ಟು ಉಪ್ಪಿನಕಾಯಿ ಬಡಿಸುತ್ತಿದ್ದ ಅವಳ ಕೈ ಹಿಡಿದು `ಹೋಗುತ್ತಿದ್ದೇವೆ, ಧಾವಂತದಲ್ಲಿ ಕರೆ ತಂದಿದ್ದು ಯಾಕೆ ಎಂದು ಇನ್ನೂ ಹೇಳಲಿಲ್ಲವಲ್ಲ' ಎಂದು ಹಲ್ಲು ಕಡಿಯುತ್ತಾ ಹೇಳಿದೆ. ಆಗಲೂ ಮೌನ. ಪಕ್ಕ ಬಂದು ಊಟಕ್ಕೆ ಕೂತಳು. ಅವರಮ್ಮ ಅಕ್ಕಿರೊಟ್ಟಿ ತಂದು ಎಲೆಗೆ ಹಾಕಿದರು. ಘಮಘಮಿಸುತ್ತಿದ್ದ ಸಾಂಬಾರು ಹಾಕಿದಾಗ ಅವಳು ಸಣ್ಣಗೆ ನಕ್ಕಿದ್ದು ಕೇಳಿಸಿತು.
ಏನಿದು? ಅಂದೆ. `ಚಿಕನ್.... ತಿನ್ನು' ಎಂದಳು. `ಛೀ... ನಾನು ತಿನ್ನಲ್ಲ' ಎಂದು ಏಳಲು ಹೋದಾಗ, `ಅಲ್ವೋ ಮಾರಾಯಾ... ತಿಂದು ನೋಡು' ಎಂದಳು. ರೊಟ್ಟಿಯನ್ನು ಮುರಿದು ಸಾಂಬಾರಿಗೆ ಅದ್ದಿಸಿ ಅದರಲ್ಲಿದ್ದ ತುಂಡನ್ನು ಅಳುಕುತ್ತ ಬಾಯಿಗಿರಿಸಿದ್ದೆ. ಸಂತಷದಿಂದ `ಅಣಬೆನಾ?' ಎಂದು ಕೇಳಿದೆ. ಹೂಂ, ಮೊನ್ನೆ ಆಯಿ ಫೋನ್ ಮಾಡಿ `ಕಾಡಲ್ಲಿ ಅಣಬೆ ಮೊಳಕೆಯೊಡೆಯುತ್ತಿದೆ. ಎರಡು ದಿನಕ್ಕೆ ದೊಡ್ಡದಾಗುತ್ತೆ. ಬಂದುಬಿಡು' ಎಂದಿದ್ದಳು. ಅಣಬೆ ಎಂದರೆ ನಿನಗಿಷ್ಟ ಅಲ್ವಾ ಅದಕ್ಕೆ..... ಅಂದಾಗ ಕಕ್ಕುಲತೆಯಿಂದ ಅವಳ ಮುಖ ನೋಡಿದ್ದೆ.
ಚಿಮಣಿ ದೀಪದ ಬೆಳಕಲ್ಲಿ ಅವಳ ಮುಖ ಮಿಂಚುತ್ತಿತ್ತು...... ನನಗಿಷ್ಟವಾದ ಅಣಬೆ ಸಾರು ತಿನ್ನಿಸಿದ ಧನ್ಯತೆಯಿಂದ... 

ಮಂಗಳವಾರ, ಆಗಸ್ಟ್ 6, 2013

ಮುಂಗಾರಿನ ಅಭಿಷೇಕಕೆ......

ಮುಂದುವರಿದ ಭಾಗ........

ಅಲ್ವೋ, ನಾವು ಬಸ್ಸಲ್ಲಿದ್ದೀವಿ ಅನ್ನೋ ಜ್ಞಾನಾ ಆದ್ರೂ ಇದ್ಯಾ ನಿಂಗೆ. ಸುಮ್ನೆ ಮಲ್ಕೊ' ಎಂದಳು. ಅವಳ ಮಾತಲ್ಲಿನ ಸತ್ಯಾಂಶ ಅರಿತು, 'ಹುಂ ಕಣೆ' ಎಂದು, ಅವಳ ಕಾಲ ಮೇಲೆಯೇ ತಲೆ ಇಟ್ಟು ಮಲಗಿದೆ. ಅವಳು ನನ್ನ ತಲೆಯನ್ನು ನೇವರಿಸುತ್ತಾ,'ರಾತ್ರಿ 10.30ರ ಸುಮಾರಿಗೆ ನಮ್ಮೂರಲ್ಲಿರುತ್ತೇವೆ. ಬೇಜಾರು ಮಾಡ್ಕೋ ಬೇಡ' ಎಂದಳು. ಆಗ ಸಾಯಂಕಾಲ ಏಳರ ಸಮಯ.
ಪ್ರಥಮವಾಗಿ ಅವಳ ಕಾಲ ಮೇಲೆ ಮಲಗಿದ ಅನುಭೂತಿಯನ್ನು ಅನುಭವಿಸುತ್ತಲೇ ಕಣ್ಣನ್ನು ಮುಚ್ಚಿಕೊಂಡೆ. ಎಚ್ಚರಾದಾಗ ರಾತ್ರಿ 9.50. ಹತ್ತರ ಸುಮಾರಿಗೆ ಅವಳೂರಿನ ಪಕ್ಕದ ಪಟ್ಟಣದಲ್ಲಿದ್ದೇವು. ಅಲ್ಲಿಂದ ರಿಕ್ಷಾ ಮಾಡಿಕೊಂಡು ಅವಳ ಗ್ರಾಮಕ್ಕೆ ರಾತ್ರಿ 10.45ಕ್ಕೆ ಕಾಲಿಟ್ಟೆವು.
ನಮ್ಮ ಬರುವಿಕೆಗಾಗಿಯೇ ಕಾದು ಕುಳಿತಿದ್ದ ಅವಳಮ್ಮ, ತುಂಬು ಹೃದಯದಿಂದ ನನ್ನನ್ನು ಬರಮಾಡಿಕೊಂಡರು. ಸಂಕೋಚದಿಂದಲೇ ಮನೆಯೊಳಗೆ ಕಾಲಿಟ್ಟ ನಾನು ಸುತ್ತಲೂ ಒಮ್ಮೆ ಕಣ್ಣಾಡಿಸಿದೆ. ಅಪ್ಪಟ ಮಲೆನಾಡ ಶೈಲಿಯಲ್ಲಿ ನಿರ್ಮಿಸಿದ ಮನೆ. ಪ್ರಥಮ ನೋಟದಲ್ಲೆ ಅದು ನನ್ನನ್ನು ಸೆಳೆದುಕೊಂಡು ಬಿಟ್ಟಿತು. ಅಷ್ಟರಲ್ಲಾಗಲೆ, ಅಮ್ಮ 'ಕೈ-ಕಾಲು ತೊಳೆದುಕೊಂಡು ಬನ್ನಿ' ಎಂದು ಸ್ನಾನದ ಗೃಹದ ಕಡೆ ಕೈ ತೋರಿಸಿದರು.
ಅವರ ಆಣತಿಯಂತೆ ಸ್ನಾನದ ಕೊಠಡಿಗೆ ತೆರಳುತ್ತಿದ್ದೆ. ಒಮ್ಮೆಲೆ ಕತ್ತಲಾವರಿಸಿತು...! ಏನಿದು ಎಂದು ಅರಿಯುವಷ್ಟರಲ್ಲಿಯೇ, 'ಅಯ್ಯೋ, ಕರೆಂಟ್ ಹೊಯ್ತಾ? ಅವರು ಸ್ನಾನದ ಕೊಠಡಿಗೆ ಹೋಗಿದ್ದಾರೆ, ಬೇಗ ಮೊಂಬತ್ತಿ ಹಚ್ಚಿಕೊಂಡು ಹೋಗು' ಎಂದು ಅಮ್ಮ ಮಗಳಿಗೆ ಹೇಳಿದ್ದು ಕಿವಿಗೆ ಬಿತ್ತು. ಸುತ್ತೆಲ್ಲ ಕತ್ತಲಾವರಿಸಿದ್ದು, ಏನೂ ಕಾಣದಂತಾಗಿ ನಿಂತಲ್ಲೆ ತಡವರಿಸುತ್ತಿದ್ದೆ.
ಅರೆಕ್ಷಣದಲ್ಲಿ ಮಗ(ನನ್ನವ)ಳು ಮೊಂಬತ್ತಿ ಹಿಡಿದುಕೊಂಡು ನನ್ನೆಡೆಗೆ ಬಂದಳು. ಹೊರಗೆ ಸುಯ್ಯನೆ ಬೀಸುವ ಸುಳಿಗಾಳಿಗೆ ಮೊಂಬತ್ತಿಯ ಬೆಳಕು ಆಕಡೆ, ಈಕಡೆ ಓಲಾಡುತ್ತಿತ್ತು. ಬೆಳಕು ಆರಿ ಹೋಗುವುದೆಂದು ಅದಕ್ಕೆ ಅಡ್ಡವಾಗಿ ತನ್ನ ಕೈ ಹಿಡಿದಿದ್ದಳು. ಆ ಕಾರ್ಗತ್ತಲಲ್ಲಿ ಮೊಂಬತ್ತಿಯ ಬೆಳಕು ಬಿಟ್ಟರೆ ಮತ್ತ್ಯಾವ ಬೆಳಕು ಗೋಚರಿಸುತ್ತಿರಲಿಲ್ಲ. ಅಡ್ಡವಾಗಿ ಹಿಡಿದ ಮೊಂಬತ್ತಿಯ ಬೆಳಕಿಗೆ ಅವಳ ಮೊಗ ಚಂದ್ರನಂತೆ ಹೊಳೆಯುತ್ತಿತ್ತು. 'ಅಮವಾಸ್ಯೆಯ ಕತ್ತಲಲ್ಲಿ ಚಂದ್ರನ ದರ್ಶನವೇ...?' ಎಂದು ನಸುನಗುತ್ತ ಕೇಳಿದೆ. 'ಬೇಗ ಮುಖ ತೊಳಿರಿ, ಯಾವ ಘಳೀಗೆಲಿ ನಮ್ಮನೆಗೆ ಕಾಲಿಟ್ಟಿದ್ದಿರೋ... ಏನೋ? ಕರೆಂಟೇ ಹೋಯ್ತು; ಥೂ... ನಿಮ್ಮ' ಎಂದು ಸುಮ್ಮನೇ ರೇಗಿದಳು. 'ಬೇಗ ಬನ್ನಿ, ಊಟಕ್ಕೆ ಬಡಸಿದ್ದೀನಿ' ಅನ್ನೋ ಅಮ್ಮನ ಮಾತು ದೂರದಿಂದ ಸಣ್ಣಗೆ ಕೇಳಿಸಿತು.
ಕಾಯಿ ಚಟ್ನಿ, ತಂಬಳಿ, ಹಪ್ಪಳ ಮತ್ತು ಸಂಡಿಗೆಯ ಊಟ, ಬಾಯಿ ಚಪ್ಪರಿಸುವಂತೆ ಮಾಡಿತು. ಹೊಟ್ಟೆ ತುಂಬಿದರೂ ಮತ್ತೂ ಸ್ವಲ್ಪ ತಿನ್ನೋಣ ಎಂದುಕೊಂಡೆ. ಪಕ್ಕದಲ್ಲೆ ಊಟ ಮಾಡುತ್ತ ಕುಳಿತ ಅವಳಿಗೆ ನನ್ನ ಬಯಕೆ ಅರ್ಥವಾಗಿರಬೇಕು. `ಯಾಕೋ ಹೊಟ್ಟೆಬಾಕ... ನಾಚ್ಕೋತಿಯಾ? ನಿನಗೆ ಇಷ್ಟ ಅಂತಾನೆ ಅಮ್ಮ ಮಾಡಿದ್ದು, ಬೇಕಾದಷ್ಟು ಇಳಿಸು' ಎಂದು ಖಾರವಾಗಿ ಉತ್ತೇಜಿಸಿದಳು. ಸ್ವಲ್ಪ ಅನ್ನ ಹಾಕಿಸಿಕೊಂಡು ತಂಬಳಿ ಜತೆ ಊಟ ಮಾಡಿ ತೇಗಿದೆ. 'ಈಗ ತೃಪ್ತಿ ಆಯ್ತು ನೋಡು ಹುಡುಗಿ' ಎಂದು, ಕೈ ತೊಳೆಯಲು ಹೊರಟೆ, ಮಾಯವಾದ ಕರೆಂಟ್ ಆಗ ಪ್ರತ್ಯಕ್ಷವಾಗಿತ್ತು.
'ಬಾ ಮೇಲೆ ಹೋಗೋಣ' ಎಂದು ನನ್ನನ್ನು ಅಟ್ಟದ ಮೇಲೆ ಅವಳು ಕರೆದೊಯ್ದಳು. ಅಲ್ಲಿ ಎರಡು ಕೊಠಡಿಯಿದ್ದು, ಒಂದು ಕೊಠಡಿ ಮನೆಗೆ ಬಂದ ಅತಿಥಿಗೆಂದು ಸಿದ್ದಪಡಿಸಲಾಗಿತ್ತು. ಅಲ್ಲಿಗೆ ನನ್ನನ್ನು ಕರೆದೊಯ್ದ ಅವಳು, 'ಎರಡು ದಿನ ಈ ಕೊಠಡಿ ನಿನಗಾಗಿ ಮೀಸಲು' ಎಂದಳು. 'ಹೌದಾ.. ನನಗೊಬ್ಬನಿಗೆ ಇಲ್ಲಿ ಮಲಗಲು ಭಯವಾಗುತ್ತದೆ, ಹೊಸ ಜಾಗ' ಎಂದೆ. ಏನೋ ಅರ್ಥ ಮಾಡಿಕೊಂಡವಳಂತೆ. 'ಪರ್ವಾಗಿಲ್ಲ, ನಮ್ಮ ತೋಟದ ಕೆಲಸ ಮಾಡುವ ತಿಮ್ಮನನ್ನು ಕಳುಹಿಸುತ್ತೇನೆ' ಎಂದು ಕೆನ್ನೆ ಕೆಂಪಗೆ ಮಾಡಿಕೊಂಡು, ಬಾಗಿಲನ್ನು ಧಡಕ್ಕನೇ ಹಾಕಿ ಹೊರ ಹೋದಳು....!
ಪಯಣದ ಆಯಾಸ ಮೈ-ಮನಗಳನ್ನು ಹೈರಾಣವಾಗಿಸಿತ್ತು. ಹಾಸಿಗೆ ಮೇಲೆ ಮಲಗಿದ್ದೊಂದು ಗೊತ್ತು. ಯಾವ ಕ್ಷಣದಲ್ಲಿ ನನ್ನನ್ನು ನಿದ್ರೆ ಆವರಿಸಿತ್ತೋ ಗೊತ್ತಿಲ್ಲ. ಎಚ್ಚರವಾದಾಗ ಮುಂಜಾನೆ ಒಂಬತ್ತು. ಸೂರ್ಯನ ಕಿರಣ ನನ್ನನ್ನು ಅಣಕಿಸುವಂತೆ ಕಿಟಕಿಯನ್ನು ನುಸಳಿ ಬರುತ್ತಿತ್ತು. ಆಲಸ್ಯ ನನ್ನನ್ನು ಬಿಗಿದಪ್ಪಿಕೊಂಡಿದೆಯೇನೋ ಎಂಬಂತೆ, ಮೈ ಮುರಿದು ಮತ್ತೆ ಹೊರಳಿ ಮಲಗಿದೆ. ಮುಂಜಾನೆಯ ಆ ನಿದ್ರೆಯ ಸುಖ.... ಅನುಭವಿಸಿದವನಿಗೇ ಗೊತ್ತು. ಆ ಸುಖದ ಮತ್ತಲಿನಲ್ಲಿ ಪವಡಿಸಿ ತೇಲಾಡುತ್ತಿದ್ದ ನನಗೆ, ಹೊರಗಡೆಯಿಂದ ಯಾವುದೋ ದೇವಿಯ ಸ್ತೋಸ್ತ್ರ ಸಣ್ಣದಾಗಿ ಕೇಳಿ ಬರುತ್ತಿತ್ತು? ಬರಬರುತ್ತ ಆ ಸ್ತೋಸ್ತ್ರ ದೊಡ್ಡದಾಗಿ ಅದು, ಶ್ರೀದೇವಿಯದಲ್ಲ ನನ್ನ ದೇವಿಯ ಬೈಗುಳದ ಸ್ತೋಸ್ತ್ರ ಎಂದು ಮನದಟ್ಟಾಯಿತು. 'ನಾಚಿಕೆ ಬಿಟ್ಟವನೆ, ಒಂಬತ್ತಾಯಿತು; ಇನ್ನೂ ಹಾಸಿಗೆ ಮೇಲೆ ಹೊರಳಾಡ್ತಾ ಇದ್ದಿಯಾ? ಥೂ... ನಿನ್ನ, ಏಳೋ ಮೇಲೆ' ಎಂದು ಚಾದರ ಎಳೆದು ತಂಬಿಗೆಯಿಂದ ನೀರು ಸುರಿಯಲು ಅಣಿಯಾದಳು...!
ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಎಚ್ಚೆತ್ತುಕೊಂಡು ನನ್ನತ್ತ ಎಳೆದುಕೊಂಡೆ....................................!

ಮುಂದುವರಿಯುವುದು........

ಗುರುವಾರ, ಆಗಸ್ಟ್ 1, 2013


ಮುಂಗಾರಿನ ಅಭಿಷೇಕಕೆ...

`ಮಲೆನಾಡಿನ ಮಳೆಯ ವೈಭವವನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಈ ಬಾರಿ ಇಲ್ಲವೇನೋ' ಎಂದುಕೊಂಡಿದ್ದೆ. ಆದರೆ `ದಿಢೀರ್ ಎಂದು ಬದಲಾದ ಕಾರ್ಯ' ಆ ಸಂತೋಷವನ್ನು ಅನುಭವಿಸುವ ಜೀವನೋತ್ಸಾಹಕ್ಕೆ ಎಡೆಮಾಡಿಕೊಟ್ಟಿತು. ಹಾಗೆ, ಪ್ರೀತಿಸಿದವಳ ಜೊತೆ ಪ್ರಥಮ ಮಲೆನಾಡ ಪಯಣಕ್ಕೆ ಇದು ಮುನ್ನುಡಿಯನ್ನು ಸಹ ಬರೆದಿತ್ತು. ಒಟ್ಟೊಟ್ಟೆಗೆ ಎರಡೆರಡು ಸಂತೋಷವನ್ನು ಆಸ್ವಾದಿಸುವ ಭಾಗ್ಯ ನನಗೊದಗಿ ಬಂದಿತ್ತು ಎನ್ನಬಹುದೇನೋ....
ಬಯಲು ಸೀಮೆಯ ಹೆಬ್ಬಾಗಿಲಾದ ಹುಬ್ಬಳ್ಳಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಜಿಟಿಜಿಟಿ ಮಳೆ ನಿರಂತರವಾಗಿ ಒಂದೇ ಸಮನೆ ಸುರಿಯುತ್ತಿತ್ತು. ನಗರದಲ್ಲಿ ಇತ್ತೀಚೆಗೆ ಕೈಗೊಂಡ ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆ, ಹಾದಿ, ಬೀದಿಗಳೆಲ್ಲ ಹೊಲಸೆದ್ದು ಹೋಗಿದ್ದವು. ಪ್ರತಿನಿತ್ಯ ಅವುಗಳ ಮೇಲೆಯೇ ಓಡಾಡಿ ಓಡಾಡಿ ಮನಸ್ಸೆಲ್ಲ ಅವುಗಳ ಹಾಗೆಯೇ ರಾಡಿಯಾದಂತೆ ಭಾಸವಾಗುತ್ತಿತ್ತು. ಅವುಗಳಿಂದ ಮಲಿನವಾದ ಮನಸ್ಸನ್ನು ಮಲೆನಾಡ ಮಳೆಯಲ್ಲಿ ಶುಚಿಗೊಳಿಸಿಕೊಳ್ಳುವ ಸುವರ್ಣಾವಕಾಶ ಬಂದೊದಗಿ ಬಂದದ್ದಕ್ಕೆ ಹುಚ್ಚೆದ್ದು ಕುಣಿದು ಬಿಟ್ಟೆ...!
****************************************
ಊರಿಗೆ ಹೋಗದೆ ಒಂದೆರಡು ತಿಂಗಳಾಗಿತ್ತು. ಅದರಲ್ಲೂ ಈ ಮುಂಗಾರು ಮಳೆಯನ್ನು ಒಂದು ವರ್ಷವೂ ಕೂಡಾ ನಾ ತಪ್ಪಿಸಿಕೊಂಡಿರಲಿಲ್ಲ. ಆದರೆ ಕೆಲಸದ ಒತ್ತಡದಿಂದಾಗಿ ಈ ವರ್ಷ ಅದನ್ನು ತಪ್ಪಿಸಿಕೊಂಡೆನಲ್ಲ ಎಂದು ನೊಂದುಕೊಳ್ಳುತ್ತಿದ್ದೆ. ಆದರೆ, ಅನಿರೀಕ್ಷಿತವಾಗಿ ಎದುರಾದ ಸಂದರ್ಭವೊಂದು ನನ್ನನ್ನು ಊರಿಗೆ ಕರೆದುಕೊಂಡು ಹೋಗಿಲ್ಲವಾದರೂ, ಮಲೆನಾಡ ಮಳೆಯಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡಿತು.
ಹೇಗಪ್ಪಾ ಅಂತೀರಾ..........?
ಅಂದು ಯಾಕೋ ಏನೋ ಹಾಸಿಗೆಯಿಂದ ಎದ್ದೇಳಲು ಮನಸ್ಸೆ ಬರ್ತಾ ಇರ್ಲಿಲ್ಲ. ಆಗಲೇ ಗಂಟೆ 9ರ ಸನೀಹಕ್ಕೆ ಬಂದಿತ್ತು. 11ಕ್ಕೆ ಪೂರ್ವ ನಿಯೋಜಿತವಾಗಿ ಕಾರ್ಯಕ್ರಮವೊಂದಕ್ಕೆ ಹಾಜರಾಗಬೇಕಿದ್ದ ನಾನು ಲಘುಬಗೆಯಲ್ಲಿ ಎದ್ದು, ರೂಮ್ಲಿದ್ದ ಕೆಲವಷ್ಟು ತಿಂಡಿ-ತಿನಿಸುಗಳನ್ನು ತಿಂದು ತಯಾರಾಗುತ್ತಿದ್ದೆ. ಆಗಲೇ ನನ್ನ ಮೊಬೈಲ್ `ಕರೆದರೂ ಕೇಳದೆ....' ಎಂದು ಹಾಡಲು ಸುರುವಿಟ್ಟುಕೊಂಡಿತು. `ಮೊದಲೇ ಸಮಯವಿಲ್ಲ. ಅದರಲ್ಲಿ ಈ ಕರೆ ಬೇರೆ' ಎಂದು ಗೊಣಗುತ್ತಲೇ ಮೊಬೈಲ್ ನೋಡಿದೆ. ಅದು ನಾ ಪ್ರೀತಿಸಿದ ಹುಡುಗಿಯ ಕರೆಯಾಗಿತ್ತು. ಆಮೇಲೆ ನಾನೇ ಕರೆ ಮಾಡಿ ಮಾತಾಡೋಣ ಎಂದು, ಆ ಕರೆಯನ್ನು ರಿಸೀವ್ ಮಾಡದೆ ಹಾಗೆ ಬಿಟ್ಟೆ. ಒಂದೆರಡು ನಿಮಿಷ ಪುನಃ ಕರೆ ಮಾಡಿದಳು. ಆಗಲೂ ಸುಮ್ಮನೇ ಇದ್ದೆ. ಮತ್ತೆ ಮಾಡಿದಳು..... ಯಾಕಪ್ಪ ಇವಳು ಒಂದೇ ಸಮನೆ ಹೀಗೆ ತೊಂದರೆ ಕೊಡುತ್ತಿದ್ದಾಳೆ ಎಂದು ಕರೆಯನ್ನು ರಿಸೀವ್ ಮಾಡಿದೆ.
`ಅಲ್ಲಾ, ಎಷ್ಟಂತ ನಿನಗೆ ಕಾಲ್ ಮಾಡ್ಬೇಕು. ನಾನ್ ಕಾಲ್ ಮಾಡಿದ್ರೂ ನಿನಗೆ ರಿಸೀವ್ ಮಾಡುವಷ್ಟು ಟೈಮ್ ಇಲ್ವಾ? ಇದ್ಕೇನಾ ನನ್ನ ಪ್ರೀತಿಸಿದ್ದು?' ಎಂದು ನಾನ್ ಸ್ಟಾಪ್ ಆಗಿ ಏನೇನೋ ಹೇಳಿದಳು. `ಸಾರಿ ಕಣೆ.... ಏನಾಯ್ತು ಹೇಳು ಪಾಪು...' ಎಂದೆ.
`ನಾಳೆ ನಾವಿಬ್ರು ನಮ್ಮ ಊರಿಗೆ ಹೋಗ್ತಾ ಇದ್ದೀವಿ. ನನ್ನ ಸ್ನೇಹಿತರೊಬ್ಬರನ್ನು ಮನೆಗೆ ಕರ್ಕೊಂಡು ಬರ್ತೀನಿ ಎಂದು ಹೇಳಿದ್ದೇನೆ. ಅದ್ಕೆ ನಾಳೆ ಮಧ್ಯಾಹ್ನ 4ಕ್ಕೆ ಬಸ್ ನಿಲ್ದಾಣದಲ್ಲಿ ಇರ್ತೀಯಾ ಅಷ್ಟೆ' ಎಂದು, ನನಗೆ ಮಾತನಾಡಲು ಅವಕಾಶ ಕೊಡದೆ ಕಾಲ್ ಕಟ್ ಮಾಡಿದಳು.
ಅನಿರೀಕ್ಷಿತವಾಗಿ ಒದಗಿ ಬಂದ ಅವಕಾಶ ಹಾಳು ಮಾಡಿಕೊಳ್ಳುವ ಮನಸ್ಸಿರಲಿಲ್ಲ. ಆದರೆ ಮೂರು ದಿನ ರಜೆ ಹಾಕಬೇಕು. ಏನು ಮಾಡುವುದೆಂದು ಯೋಚಿಸುತ್ತಲೇ, ಲಗು ಬಗೆಯಲ್ಲಿ ತಯಾರಾಗಿ ನಿಯೋಜಿತ ಕರ್ತವ್ಯಕ್ಕೆ ಹಾಜಾರಾದೆ.
ಅಂತೂ ಇಂತೂ ಎಂದು ಹರಸಾಹಸ ಪಟ್ಟು ನಾಲ್ಕು ದಿನ ರಜೆ ಪಡೆದೆ. ಅವಳ ಕೋರಿಕೆಯಂತೆ, ಅವಳು ಹೇಳಿದ ಸಮಯಕ್ಕಿಂತ ಅರ್ಧಗಂಟೆ ಮುಂಚಿತವಾಗಿಯೇ ಬಸ್ ನಿಲ್ದಾಣದಲ್ಲಿ ನಾನು ಅವಳಿಗಾಗಿ ಕಾಯುತ್ತಿದ್ದೆ. ಮಳೆಯಂತೂ ಧೋ ಧೋ ಎಂದು ಸುರಿಯುತ್ತಿತ್ತು. ಆ ಮಳೆಯಲ್ಲಿಯೇ ದೂರದಿಂದ ನನ್ನನ್ನು ಗಮನಿಸಿದ ಅವಳು, ನಸುನಕ್ಕಳು. ಬಿಂಕದಿಂದ ಹೆಜ್ಜೆ ಹಾಕುತ್ತ ಹತ್ತಿರ ಬಂದು `ಪ್ರೀತಿಸೋ ಹುಡುಗ ಅಂದ್ರೆ ಹೀಗಿರಬೇಕು' ಎಂದು ಗಲ್ಲ ಹಿಡಿದು, `ನಮ್ಮೂರ ಕಡೆ ಹೋಗೋ ಬಸ್ ಬಂದಿಲ್ವಾ' ಎಂದು ಕೇಳಿದಳು.
ಐದತ್ತು ನಿಮಿಷದಲ್ಲಿ ಮಲೆನಾಡ ಕಡೆ ಪಯಣಿಸೂ ಬಸ್ ಬಂದು ನಿಂತಿತು. ಮಧ್ಯದಲ್ಲಿ ಆಸನದಲ್ಲಿ ಹೋಗಿ ಆಸೀನರಾದೇವು. ಬಸ್ಸ ಹೊರಡಲು ಇನ್ನೂ ಹದಿನೈದು ನಿಮಿಷವಿತ್ತು. ಆಗಲೇ ಶುರುವಿಟ್ಟುಕೊಂಡೆ ಅವಳ ತಲೆ ತಿನ್ನಲು.....
`ನಾನು ಯಾಕಾಗಿ ನಿಮ್ಮ ಮನೆಗೆ ಬರಬೇಕು? ಅಲ್ಲಿಯ ವಾತಾವರಣ ಹೇಗಿದೆ? ಗುಡ್ಡ ಬೆಟ್ಟಗಳಿವೆಯಾ? ಎಷ್ಟು ಗಂಟೆ ಪಯಣದ ಹಾದಿ? ಕತ್ತಲಾದರೆ ಏನು ಮಾಡುವುದು? ಹಸಿವೆಯಾದರೆ ತಿನ್ನಲು ಏನಾದರೂ ತಂದಿದ್ದೇಯಾ?' ಹೀಗೆ ಅವಳ ಮಾತಿನ ಶೈಲಿಯಲ್ಲಿಯೇ ನಾನು ಕೂಡಾ ಮಾತನಾಡತೊಡಗಿದೆ. ಅವಳ ತಲೆ ಕೆಟ್ಟು ಹೋಗಿತ್ತು. ಉಕ್ಕಿ ಬರುವ ಕೋಪವನ್ನೆಲ್ಲ ಬಿಗಿ ಹಿಡಿದು ಹಲ್ಲನ್ನು ಕಟಕಟನೇ ಕಡಿಯ ಹತ್ತಿದಳು. ನಾನು ನನ್ನ ಪಾಡಿಗೆ ಮಾತನಾಡುತ್ತಲೇ ಇದ್ದೆ. `ಅಯ್ಯೋ ಭಗವಂತ, ದಯವಿಟ್ಟು ಇಲ್ಲೆ ಇಳಿದು ಬಿಡು. ನೀನು ನಮ್ಮ ಮನೆಗೆ ಬರುವುದು ಬೇಡ. ಅಲ್ಲಿಯೂ ಕೂಡಾ ಹೀಗೆ ಮಾತನಾಡಿದರೆ ನನ್ನ ಮರ್ಯಾದೆ ಹೋದ ಹಾಗೆ' ಎಂದು ಬಯ್ಯತೊಡಗಿದಳು. ಪೆಚ್ಚು ಮೋರೆ ಹಾಕಿ ಸುಮ್ಮನೆ ಕುಳಿತುಕೊಂಡೆ.
*********************************************
ಒಮ್ಮೆಲೆ ಎಚ್ಚರಾಯಿತು. ಅವಳು ನಿದ್ರೆಯಲ್ಲಿದ್ದಳು. ಕಿಟಕಿಯಾಚೆ ಕಣ್ಣಾಡಿಸಿದೆ. ಅಬ್ಬಾ!! ಹಸಿರು ಕಾನನಗಳ ನಡುವೆ ಭೋರ್ಗರೆವ ವರ್ಷಧಾರೆಯ ಅಬ್ಬರ ಮನಸ್ಸನ್ನು ಹುಚ್ಚು ಹಿಡಿಸಿದವು. ಬಸ್ನ್ನು ಒಮ್ಮೆ ನಿಲ್ಲಿಸಿದರೆ ಕೆಳಗಿಳಿದು ಮಳೆಯಲ್ಲಿ ತೋಯ್ದು ಬರಬೇಕು ಎಂದೆನಿಸಿತ್ತು. ಬೆಟ್ಟಗಳ ಸಾಲುಗಳ ನಡುವೆ ಹೆಬ್ಬಾವಿನಂತ ರಸ್ತೆಯಲ್ಲಿ ಮಳೆಗಾಲದ ಪಯಣ ನಿಜಕ್ಕೂ ವರ್ಣನಾತೀತ. ವರ್ಣಿಸಲಸದಳ. ನಿಜವಾದ ಪ್ರಕೃತಿಯ ಸೌಂದರ್ಯ ಅನುಭವಿಸಬೇಕೆಂದರೆ ಇಂತಹ ಪಯಣ ಮಾಡಲೇ ಬೇಕು. ಆಗೊಮ್ಮೆ ಈಗೊಮ್ಮೆ ಧುತ್ತೆಂದು ಎದುರಾಗುವ ಘಟ್ಟಗಳು .... ಬಿದ್ದೆ ಬಿಟ್ಟೆವು ಎಂದು ಭಾಸವಾಗುವ ಇಳಿಜಾರುಗಳು.... ದೂರದಲ್ಲೆಲ್ಲೋ ಕಾಣುವ ಚಿಕ್ಕ ಪುಟ್ಟ ಝರಿಗಳು.... ಗಾಳಿಯ ರಭಸಕ್ಕೆ ತಡವರಿಸುತ್ತ ಓಲಾಡುತ್ತಿರುವ ಮರಗಿಡಗಳು.... ಹೃದಯ ಬಡಿತ ಹೆಚ್ಚಿಸುವ ರಸ್ತೆ ಪಕ್ಕದ ಕಂದಕಗಳು.....ಅಬ್ಬಾ!! ಒಂದೇ ಎರಡೇ..... ಹೀಗೆ ಹಲವು ವೈವಿದ್ಯಮ ಪ್ರಾಕೃತಿಕ ಸೌಂದರ್ಯಗಳು  ಕಣ್ಣಿಗೆ ಎದುರಾಗುತ್ತ ಹೋದವು.
ನಾನು ಸಂಪೂರ್ಣ ಪ್ರಕೃತಿ ಮಡಿಲಲ್ಲಿಯೇ ಲೀನವಾಗಿದ್ದೆ. `ನನ್ನವಳು ಕೂಡಾ ಒಂದರ್ಥದಲ್ಲಿ ಪ್ರಕೃತಿಯೇ ಅಲ್ವಾ? ಅವಳ ಮನಸ್ಸು, ನೋಟ, ಮಾತು, ವರ್ತನೆ ಹೀಗೆ ಯಾವೊಂದರಲ್ಲಿಯೂ ಕಲ್ಮಶಗಳಿಲ್ಲ. ಪ್ರಕೃತಿಯಷ್ಟೇ ಪರಿಶುದ್ದವಾದ ಅವಳ ಪ್ರೀತಿಯನ್ನು ಪಡೆದ ನಾನು ನಿಜಕ್ಕೂ ಅದೃಷ್ಟವಂತ ಎಂದು ಮನಸ್ಸಲ್ಲೆ ಅವಳನ್ನು ಪ್ರಕೃತಿಗೆ ಹೋಲಿಕೆ ಮಾಡಿಕೊಳ್ಳುತ್ತ, ಅವಳ ಕೈಯನ್ನು ಹಿಡಿದುಕೊಂಡಿದ್ದೆ.
ಭಾವೋನ್ಮಾದ ಎಲ್ಲೇ ಮೀರಿ ಅರಿವಿಲ್ಲದೆ ಅವಳ ಕೈಯನ್ನು ಗಟ್ಟಿಯಾಗಿ ಹಿಚುಕಿಬಿಟ್ಟೆ..!! ನಿದ್ರೆಯಲ್ಲಿದ್ದ ಅವಳು, ದುರುಗುಟ್ಟಿ ನನ್ನನ್ನು ನೋಡಿದಳು. ಅಮ್ಮನ ಎದುರು ಮಗು ತಪ್ಪು ಮಾಡಿದಾಗ ಕೆಳ ಮುಖ ಹಾಕಿ ನಿಲ್ಲುವಂತೆ, ನಾನು ಕೂಡಾ ಮುಖವನ್ನು ಕೆಳಗಡೆ ಹಾಕಿ `ಯಾಕೆ ಹಾಗೆ ನೋಡ್ತಾ ಇದ್ದೀಯಾ? ಕಣ್ಣನ್ನು ಚಿಕ್ಕದಾಗಿ ಮಾಡು' ಎಂದೆ.

.............................................ಮುಂದುವರಿದು....? ಭಾಗ ಎರಡರಲ್ಲಿ.......