ಶುಕ್ರವಾರ, ಜುಲೈ 29, 2016

ರೊಚ್ಚಿಗೆದ್ದ ಮಲಪ್ರಭೆ ಮಕ್ಕಳು
ಮಲಪ್ರಭೆ ಮಕ್ಕಳು ಮತ್ತೆ ರೊಚ್ಚಿಗೆದ್ದಿದ್ದಾರೆ. ತಾತ, ಅಪ್ಪಂದಿರು ಬುದುಕುವ ಹಕ್ಕಿಗಾಗಿ ಹಾಕಿಕೊಟ್ಟ ಹೋರಾಟದ ಹಾದಿಯನ್ನು ಮೊಮ್ಮಕ್ಕಳು, ಮಕ್ಕಳು ತುಳಿದು ಗಮ್ಯ ತಲುಪೇ ತೀರುತ್ತೇವೆ ಎಂದು ದಂಡ ಹಿಡಿದು ಹೊರಟಿದ್ದಾರೆ. ಅಂದು ಹೋರಾಡಿದ ಎಷ್ಟೋ ಜೀವಗಳು ಮಣ್ಣಲ್ಲಿ ಬೆರತುಹೋಗಿವೆ. ಉಳಿದ ಕೆಲವಷ್ಟು ತಲೆಗಳ ಕೂದಲುದುರಿ ಮಾಸಿ ಹೋಗಿವೆ. ಆದರೆ ಅವರ ಬೆನ್ನಹಿಂದೆಯೇ ಬಂದ ಕುಡಿಗಳು, ಹಿರಿತನದ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡಲೇ ಬೇಕು ಅಬ್ಬರಿಸಿ ಹೂಂಕರಿಸುತ್ತಿದ್ದಾರೆ. ರಾಜ್ಯ, ಕೇಂದ್ರ ಸರಕಾರದ ವಿರುದ್ಧ ತೊಡೆ ತಟ್ಟಿ, ತಾಕತ್ತಿದ್ದರೆ ಕಣಕ್ಕಿಳಿಯಿರಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ!
ಪರಿಣಾಮ, ನಲವತ್ತು ವರ್ಷಗಳ ಕಾಲದ ಮಹದಾ ಯಿ-ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ಹೋರಾಟದ ಕೆಂಡವೀಗ ನಿಗಿನಿಗಿಸುತ್ತಿವೆ. ಎದೆಯಲ್ಲಿಯೇ ಉಳಿದಿದ್ದ ದಾವಾಗ್ನಿ, ಅಪಧಮನಿ, ಅಭಿಧಮನಿಯನ್ನು ಸೀಳಿ ನರ ನಾಡಿಗಳ ಮೂಲಕ ಹೊರ ಬರುತ್ತಿವೆ. ಕಾಡ್ಗಿಚ್ಚಿನಂತೆ ಸುತ್ತೆಲ್ಲ ಪಸರಿಸಿ ಎದುರಿಗೆ ಬಂದ ಅಧಿಕಾರಶಾಹಿಗಳ ಹಾಗೂ ಅವರ ಕಚೇರಿಗಳನ್ನ ಆಪೋಶನ ತೆಗೆದುಕೊಳ್ಳುತ್ತಿವೆ!
ಇದು ಮಲಪ್ರಭೆ ಅಚ್ಚುಕಟ್ಟು ಪ್ರದೇಶಗಳಲ್ಲಿ ವಾಸಿಸುವ ರೈತ ಸಮುದಾಯದ ಆಕ್ರೋಶದ ಕಿಚ್ಚು. ಹಂತ ಹಂತವಾಗಿ ಹೊರಬಂದು, ಈಗ ಹೋಮದ ಅಗ್ನಿಕುಂಡವಾಗಿ ಮಾರ್ಪಟ್ಟಿದೆ. ಹುಣ್ಣಿಮೆ ಶರಧಿ ಎಲ್ಲೆ ಮೀರಿ ಉಕ್ಕುವಂತೆ, ಅಂತರಾಳದಲ್ಲಿ ಮಡುಗಟ್ಟಿದ್ದ ತಾಳ್ಮೆ ಕಟ್ಟೆ ಒಡೆದು ಜ್ವಾಲೆಯಾಗಿ ಬದಲಾಗಿದೆ. ತಾತ, ಅಪ್ಪಂದಿರ ಕಾಲದಿಂದ, ಮಕ್ಕಳು, ಮರಿ-ಮೊಮ್ಮಕ್ಕಳ ಕಾಲವಾದ ಇಂದಿನವರೆಗೂ ಕುಡಿಯುವ ನೀರಿಗಾಗಿ ಒತ್ತಾಯಿಸುತ್ತ ಬಂದರೂ, ಆಡಳಿತಾರೂಢ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೇ ಎನ್ನಲಿಲ್ಲ. ಹೋರಾಟ, ಪ್ರತಿಭಟನೆ, ಬಂದ್, ಗಲಭೆ ನಡೆದಾಗಲೆಲ್ಲ ಪಕ್ಷಗಳ ಪ್ರತಿಷ್ಠೆ, ಒಣ ರಾಜಕೀಯ ಮಾಡುತ್ತ ಕಾಲ ಕಳೆದರು. ಜತೆಗೆ, ರೈತ ಸಮುದಾಯದ ಹೋರಾಟ ಹತ್ತಿಕ್ಕಲು ತೆರೆಮರೆಯಲ್ಲಿ ಏನೇನು ಮಾಡಬೇಕೋ ಅವೆಲ್ಲವನ್ನು ಶಿಸ್ತುಬದ್ಧವಾಗಿ ಮಾಡಿದರು. ಇನ್ನೂ ಮುಂದುವರಿದರು, ಮೂರು ಪಕ್ಷದ ಮುಖಂಡರು ಪ್ರತ್ಯೇಕ ಪ್ರತಿಭಟನೆ ಮಾಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದರು. ಮೂರು ಪಕ್ಷಗಳ ಜನಪ್ರತಿನಿಧಿಗಳು ಪರಸ್ಪರ ಒಬ್ಬರ ಮೇಲೊಬ್ಬರು ಕೆಸರೆರಚಾಡುತ್ತ ಪ್ರತಿಭಟನಾಕಾರರ ದಿಕ್ಕನ್ನು ಸಹ ಬದಲಿಸಲು ಪ್ರಯತ್ನಿಸಿದರು. ಕುಚೋದ್ಯವೆಂದರೆ ಅವರ ಅಂದಿನ ಆ ಪ್ರತಿಭಟನೆಗಳು ಯಾರ ವಿರುದ್ಧವಾಗಿತ್ತು ಎನ್ನುವುದು?
ಇರಲಿ, ಶಾಂತಿಯಿಂದಾಗದ್ದು ಕ್ರಾಂತಿಯಿಂದಾದರೂ ನಡೆಯಲೇಬೇಕು. ಅದೇ ಅಂತಿಮ ಎಂದಾದರೆ ಯಾರು ಏನೂ ಮಾಡಲು ಅಸಾಧ್ಯ. ಇನ್ನೊಬ್ಬರಿಗೆ ಅನ್ಯಾಯವಾಗಲೆನ್ನುವ ದುರುದ್ದೇಶವಿಟ್ಟುಕೊಂಡು ಭರತ ಭೂಮಿಯಲ್ಲಿ ಎಂದೂ ಜನಾಂದೋಲನ ನಡೆದಿಲ್ಲ. ಸಾರ್ವಜನಿಕ ಹಿತಾಸಕ್ತಿಗೋಸ್ಕರ ಮುಂದಿನ ದಿನಗಳನ್ನು ಅವಲೋಕಿಸಿ, ಅನಿವಾರ್ಯ ಸ್ವಾರ್ಥಗಳಿಂದ ಬೃಹತ್ ಪ್ರತಿಭಟನೆ, ಗಲಭೆಗಳು ಸರಕಾರದ ವಿರುದ್ಧ ನಡಿದಿವೆ. ಅಂತಹ ಬಹುತೇಕ ಹೋರಾಟವೆಲ್ಲ ಯಶಸ್ಫವಿಯೂ  ಆಗಿವೆ. ಆದರೆ, ನಲವತ್ತು ವರ್ಷಗಳ ಕಾಲದಷ್ಟು ಸುದೀರ್ಘವಾದ ನಡೆಯುತ್ತಿರುವ ಹೋರಾಟವೆಂದರೆ ಬಹುಶಃ ಇದೊಂದೆ ಇರಬೇಕು. ಹಾಗೆಯೇ, ರಾಜಕೀಯ ನೇತಾರರೆನಿಸಿಕೊಂಡವರ ಸ್ವಾರ್ಥದ ಗಂಜಿ ಬಟ್ಟಲಲ್ಲಿ ಬಿದ್ದ ನೊಣದ ಗತಿಯಂತಾದ್ದು ಸಹ ಇದೊಂದೆ ಯೋಜನೆಯಿರಬೇಕು.
ಮಾಡು ಇಲ್ಲವೇ ಮಡಿ ಎನ್ನುವ ಧ್ಯೇಯ ವಾಕ್ಯವನ್ನು ಹಸಿ ಎದೆಯಲ್ಲಿ ಕೊರೆಸಿಕೊಂಡು, ರಕ್ತ ಚಿಮ್ಮಿ ಹರಿದು ಉಸಿರು ನಿಲ್ಲುವವರೆಗೂ ಹೋರಾಟ ಕೈ ಬಿಡಲಾರೆವು ಎನ್ನುತ್ತ ರೈತರು ಬಂಡಾಯವೆದ್ದಿದ್ದಾರೆ. ನ್ಯಾಯ ದೇವತೆ ಎಂದು ಎರಡು ಕೈ ಕಟ್ಟಿ, ತಲೆ ಬಗ್ಗಿಸಿ ನಿಲ್ಲುತ್ತಿದ್ದವರು, ಈಗ ಅದೇ ಕೈಯ್ಯಲ್ಲಿ ಪಾಶು ಪತಾಸ್ತ್ರ ಹಿಡಿದು, ತಲೆಯಲ್ಲಿ ಕಿಚ್ಚು ತುಂಬಿಕೊಂಡು ನ್ಯಾಯ ದೇಗುಲವನ್ನು ಧ್ವಂಸ ಮಾಡಿದ್ದಾರೆ. ಗಂಟಲ ಪಸೆ ಒಣಗಿಸಿಕೊಳ್ಳಲು ನೀರು ನೀಡದೆ ನ್ಯಾಯ ದೇವತೆಯೇ ಅನ್ಯಾಯ ಎಸಗಿದ್ದಾಳೆಂದು, ಅವಳ ಮೇಲಿದ್ದ ನಂಬಿಕೆಯನ್ನು ಸಹ ಸುಟ್ಟು ಬೂದಿ ಮಾಡಿದ್ದಾರೆ. ಆ ಬೂದಿಯನ್ನೇ ಹಣೆಗೆ ಮೆತ್ತಿಕೊಂಡು ಗೆದ್ದೇ ಗೆಲ್ಲುತ್ತೇವೆ ಎಂದು ಸಪಥ ಗೈದಿದ್ದಾರೆ.
ಇಷ್ಟು ದಿನದ ಶಾಂತಿಯುತ ಹೋರಾಟಕ್ಕೆ ತೆರೆ ಎಳೆದ ಅವರು ಸಂಪೂರ್ಣ ಕಾನೂನನ್ನೇ ಕೈಗೆತ್ತಿಕೊಂಡು ನಟ್ಟ ನಡು ರಸ್ತೆಯಲ್ಲಿ ಹೊಟ್ಟೆ-ಬೆನ್ನು ಒಂದಾಗುವಂತೆ ಕೂಗುತ್ತ ಕೆಂಡದುಂಡೆಯನ್ನು ಉಗುಳುತ್ತಿದ್ದಾರೆ. ಅದರ ಕಾವಿಗೆ ಕೆಲವು ಸ್ಥಳೀಯ ಜನಪ್ರತಿನಿಧಿಗಳು ಥರಥರನೆ ನಡುಗುತ್ತ, ಖುರ್ಚಿಯಿಂದ ಮೇಲೇಳುತ್ತಿದ್ದಾರೆ. ಸಾಕಪ್ಪ ಈ ರಾಜಕೀಯ ಎಂದು ರೈತರ ಹೆಗಲಿಗೆ ಹೇಗಲಾಗಿ, ದನಿಗೆ ದನಿ ಸೇರಿಸಿ ಕದನದ ಕಹಳೆ ಊದುತ್ತಿದ್ದಾರೆ. ಸಂಸತ್ ಭವನದಲ್ಲಿ ಆಸೀನರಾಗುವ ಉಕ ಭಾಗದ ಜಪ್ರತಿನಿಧಿಗಳು ಒಗ್ಗಟ್ಟಾಗಬೇಕು, ಇಲ್ಲ ಖುರ್ಚಿ ಬಿಟ್ಟು ಸಿಡಿದೇಳಬೇಕು ಎಂದು ಸ್ಪಷ್ಟ ಸಂದೇಶ ಸಾರಿದ್ದಾರೆ. ಇವೆಲ್ಲದರ ಪರಿಣಾಮ ನರಗುಂದ-ನವಲಗುಂದ ಬಂಡಾಯ ನೆಲದ ರೈತರ ರಕ್ತವೆಲ್ಲ ಕೊಪ್ಪರಿಗೆಯಲ್ಲಿ ಹಾಕಿದ ಎಣ್ಣೆಯಂತೆ ಕೊತಕೊತನೆ ಕುದಿಯುತ್ತಿದೆ.
ಮುಂದೇ........!! ಆ ಭಗವಂತನಿಗೂ ಊಹಿಸಲು ಅಸಾಧ್ಯವೇನೋ.....!!
-ನಾಗರಾಜ್ ಬಿ.ಎನ್ 

ಬುಧವಾರ, ಜುಲೈ 6, 2016

ಎಲೆಗಳ ಮೇಲೆ ಮಳೆ ಹನಿಗಳ ಥಕಧಿಮಿತ...

ಇವನು ನಮ್ಮ ಆತ್ಮೀಯ ದಿನು. ಹುಚ್ಚು ಪರಿಸರ ಪ್ರೇಮಿ. ಮರ ಎಂದರೆ ನೆರಳು, ಗಿಡ ಎಂದರೆ ಬದುಕು, ಹಸಿರು ಎಂದರೆ ಉಸಿರು, ಪರಿಸರ ಎಂದರೆ ಮನುಕುಲ ಎನ್ನುವ ಈತ ನಿಜಕ್ಕೂ ನಿಸ್ವಾರ್ಥ.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ, 'ಜಾ, ಕುಮಟಾ ಬಸ್ ಸ್ಟ್ಯಾಂಡಿನಲ್ಲಿ ಗಿಡ ಹಾಕೋಣ, ರೈಲ್ವೆ ಪ್ಲಾಟ್ ಫಾರ್ಂ ಅಕ್ಕ ಪಕ್ಕ ಗಿಡ ನೆಡೋಣ, ಮಂಗಳೂರು-ಕಾರವಾರ ರಸ್ತೆ ಇಕ್ಕೆಲಗಳಲ್ಲಿ ಗಿಡ ಹಾಕಿದರೆ ಹೇಗೆ? ಶಾಲೆಗಳಿಗೆ ಭೇಟಿ ನೀಡಿ ಗಿಡ ನೆಡಲು ಹೇಳೋಣ...... ಹೀಗೆ ಒಂದೇ ಓಘದಲ್ಲಿ ಆತನ ಮಾತುಗಳು ಸಾಗುತ್ತಿತ್ತು. ಮಳೆ ಹನಿ ಭೂಮಿಗೆ ಬೀಳುತ್ತಿದ್ದಂತೆ ಗಿಡ ನೆಡುವ ಆತನ ಕನಸು ಗರಿಗೆದರುತ್ತಿತ್ತು. ವಿಚಿತ್ರವೆಂದರೆ ಆತ ಕರೆ ಮಾಡಿದಾಗಲೆಲ್ಲ ಮೊದಲ ಮಾತು 'ಜಾ ಎಲ್ಲಿ ಗಿಡ ಹಾಕುವುದು?' ಎನ್ನುವುದೇ ಆಗಿರುತ್ತಿತ್ತು. ಉತ್ತರ-ದಕ್ಷಿಣ ದಿಕ್ಕಿನತ್ತಿರುವ ನಾವಿಬ್ಬರು ಸಂಧಿಸುವುದು ವರ್ಷಕ್ಕೆ ಮೂರು, ನಾಲ್ಕು ಬಾರಿ ಮಾತ್ರ! ಹಾಗಿದ್ದಾಗ, ಆತ ಗಿಡ ಹಾಕುವ ಮಾತಿಗೆಲ್ಲ ನನ್ನದು ಮೌನ ಹಾಗೂ 'ಮಾಡೋಣ' ಎನ್ನುವುದಾಗಿತ್ತು.
ಆದರೆ, ಛಲದಂಕ ಮಲ್ಲನಂತೆ ಈ ವರ್ಷ ಗಿಡ ನೆಟ್ಟೇ ನೆಡುತ್ತೇನೆ ಎನ್ನುವ ದೃಢ ಸಂಕಲ್ಪ ಮಾಡಿಕೊಂಡು, ಒಂದು ತಿಂಗಳಿನಿಂದ ಅಲ್ಲಿ, ಇಲ್ಲಿ ಎಂದು ಓಡಾಡಲು ಪ್ರಾರಂಭಿಸಿದ್ದ. ಕೆಲ ದಿನಗಳ ಹಿಂದೆ, ಸುರತ್ಕಲ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿರುವ ಎಟಿಎಂ ಅಧಿಕಾರಿಯಿಂದ ನಂದಿಕೂರ, ಸುರತ್ಕಲ್ ಹಾಗೂ ಇನ್ನೆರಡು ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಂ ಅಕ್ಕಪಕ್ಕ ಗಿಡ ನೆಡಲು ಅನುಮತಿ ಪಡೆದಿದ್ದ. ಒಂದು ದಿನ ರಾತ್ರಿ ದೂರವಾಣಿ ಕರೆ ಮೂಲಕ ಎರಡು ಗಂಟೆಗಳ ಕಾಲ ಮಾತನಾಡಿ ಪರವಾನಿಗೆ ದೊರೆತ ಸಂತೋಷವನ್ನು ಹಂಚಿಕೊಂಡಿದ್ದ. ಪರವಾನಿಗೆಯೇನೋ ಪಡೆದಿದ್ದ. ಆದರೆ, ಗಿಡ ಎಲ್ಲಿಂದ ಖರೀದಿಸುವುದು? ಎನ್ನುವ ಪ್ರಶ್ನೆ ಆತನ ತಲೆಯಲ್ಲಿ ನುಸುಳಿದಾಗ, ಯಾರೋ ಪರಿಸರ ಪ್ರೇಮಿ ಹೇಳಿದನಂತೆ, 'ಮಂಗಳೂರಿನ ಪಡೀಲ್ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಗಿಡ ದೊರೆಯುತ್ತದೆ' ಎಂದು. ಒಂದು ಸೋಮವಾರ ಕಂಪನಿಗೆ ರಜೆ ಹಾಕಿ, ಅಲ್ಲಿಗೆ ಹೋಗಿ ಮೂವತ್ತು ಗಿಡಗಳಿಗೆ ಅರ್ಜಿ ಸಲ್ಲಿಸಿದ್ದ. ಆತ ಇರುವುದು ಸುರತ್ಕಲ್ ಆಗಿರುವುದರಿಂದ, ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿರುವ ನರ್ಸರಿಯಿಂದ ಗಿಡ ತರವುದು ತುಸು ತ್ರಾಸದಾಯಕವೇ ಆಗಿತ್ತು. ಬಾಡಿಗೆ ರಿಕ್ಷಾ ಕೇಳಿದಾಗ ಅವರು 1,200 ರು. ಬೇಡಿಕೆ ಮುಂದಿಟ್ಟಿದ್ದರು. ನಂತರ, ತನ್ನ ಸ್ನೇಹಿತರಿಗೆ ಹೇಳಿ, ಅವರ ಕಾರಿನಲ್ಲಿ ಅಲ್ಲಿಂದ ಸುರತ್ಕಲ್ಗೆ ಗಿಡವನ್ನು ತಂದಿದ್ದ.
ಅಂತೂ... ಇಂದು ಬುಧವಾರ(ಜು. 6) ತನ್ನ ಕನಸನ್ನು ನನಸಾಗಿಸಿಕೊಂಡ. ತನ್ನ ಇಚ್ಛೆಯಂತೆ ಸುರತ್ಕಲ್ ಹಾಗೂ ನಂದಿಕೂರ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಂ ಅಕ್ಕ ಪಕ್ಕ ಮಹಾಗನಿ, ಕಕ್ಕೆ, ಬಾಗೆ, ಅವಲಾಂಡ, ಸೀಮೆರೂಬ, ರೇಂಜ, ಹೂವರಸಿ ಎಂದು ಮೂವತ್ತು ಗಿಡಗಳನ್ನು ಭೂ ಮಾತೆ ಮಡಿಲಿಗೆ ಹಾಕಿದ. ಸರ್ವ ಸ್ವತಂತ್ರವಾಗಿ ಯಾರೊಬ್ಬರ ಸಹಾಯವೂ ಇಲ್ಲದೆ ಏಕಾಂಗಿಯಾಗಿ ಕನಸನ್ನು ಮೆಟ್ಟಿ ನಿಂತ. ಮೂವತ್ತು ಗಿಡ ಬೆಳೆದು ದೊಡ್ಡದಾಗುವವರೆಗೂ ಅದರ ಜವಾಬ್ದಾರಿ ತಾನೇ ಹೊರುತ್ತೇನೆ ಎಂದು ರೈಲ್ವೆ ಅಧಿಕಾರಿಗಳಿಗೆ ಮಾತು ಕೊಟ್ಟ. ಆತನಲ್ಲಿರುವ ಪರಿಸರ ಕಾಳಜಿ ಹಾಗೂ ಪ್ರಾಮಾಣಿಕತೆ ಅರಿತ ರೈಲ್ವೆ ಅಧಿಕಾರಿಗಳು, 'ನಾವೇ ಮಾಡಬೇಕಾದ ಕಾರ್ಯಕ್ಕೆ ನೀವು ಸಾಥ್ ನೀಡಿದ್ದೀರಿ. ಇದರ ಸಂಪೂರ್ಣ ಹೊಣೆ ರೈಲ್ವೆ ಇಲಾಖೆಯೇ ಹೊರುತ್ತದೆ' ಎಂದು ಅವನಿಗೆ ಅವರು ಪ್ರತಿ ಭರವಸೆ ನೀಡಿದರು.
ಸ್ನೇಹಿತ ದಿನುವಿನ ಮೊಗದಲ್ಲಿ ಆತ್ಮ ಸಂತೃಪ್ತಿಯ ನಗು. ಎದೆ ಗೂಡಿನ ಬಿಸಿ ಉಸಿರಲ್ಲಿ, ತಣ್ಣನೆಯ ಹಸಿ ಉಸಿರು. ಭೂ ಮಾತೆಯ ಮಡಿಲಲ್ಲಿರುವ ಆ ಪುಟ್ಟ ಗಿಡಗಳ ಎಲೆಗಳ ಮೇಲೆ ಮಳೆ ಹನಿಯ ಥಕಧಿಮಿತ. ಸುಂಯ್ಯನೆ ಬೀಸುವ ಕುಳಿರ್ಗಾಳಿಗೆ  ಓಲಾಡುವ ಭಾಗ್ಯ! ಮುಂದೊಂದು ದಿನ ಗಿಡ(ಬದುಕು) ಮರ(ನೆರಳು)ವಾಗಿ ಹಸಿರು(ಉಸಿರು) ಚೆಲ್ಲಲಿದೆ. ಈ ದಿನಕ್ಕೆ ಸಾಕ್ಷಿಯಾಗಿ ಇತಿಹಾಸ ಪುಟ ಸೇರಲಿದೆ. ಆಗ, ರೈಲಿನ ಮೇಲೆ ಪಯಣಿಸುವಾಗ, ಬಾಗಿಲ ಬಳಿ ನಿಂತು, 'ನಮ್ಮ ದಿನುವಿನ ಮರ' ಎಂದು ಕಣ್ತುಂಬಿಸಿಕೊಳ್ಳುತ್ತೇವೆ.