ಬುಧವಾರ, ಡಿಸೆಂಬರ್ 21, 2016

ಮಸ್ಟ್ ರೀಡ್......
ಮಾನವ ಕಳ್ಳಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಮುರಿಯಿತು...!

ನೋಟು ಅಪಮೌಲ್ಯೀಕರಣದ ಕುರಿತು ಯಾರು ಎಷ್ಟೇ ವಿರೋಧಿಸಲಿ. ಬೊಬ್ಬಿರಿದು ಬಾಯಿ ಬಡಿದುಕೊಳ್ಳಲಿ. ಮನಸ್ಸೋ ಇಚ್ಛೆಯಾಗಿ ಬೈದುಕೊಳ್ಳಲಿ. ಆದರೆ, ಮಾನವೀಯತೆಯ ಒಳಗಣ್ಣಿನಿಂದ ನೋಡಿದಾಗ, ಸೂಕ್ಷ್ಮವಾಗಿ ಅವಲೋಕಿಸಿದಾಗ ಎಷ್ಟೋ... ಎಷ್ಟೋ.... ಸಾವಿರ ಲೆಕ್ಕಾಚಾರದಲ್ಲಿ ನನ್ನ ಅಕ್ಕ, ತಂಗಿಯರು ಜತನವಾಗಿದ್ದಾರೆ. ಭಯಾನಕ ಕೂಪದೊಳಗೆ ಬಲವಂತವಾಗಿ ಬೀಳುವಂತ ಸನ್ನಿವೇಶದಿಂದ ತಪ್ಪಿಸಿಕೊಂಡಿದ್ದಾರೆ!

Yes... ಮಾನವ ಕಳ್ಳ ಸಾಗಾಣಿಕೆಯಿಂದ ಪ್ರತಿವರ್ಷ ಸಾವಿರಾರು ಅಪ್ರಾಪ್ತೆಯರು ವೇಶ್ಯಾವಾಟಿಕೆ ಗೃಹಕ್ಕೆ ನೂಕಲ್ಪಡುತ್ತಿದ್ದರು. ದೇಶಾದ್ಯಂತ ವ್ಯಾಪಿಸಿರುವ ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ನಮ್ಮ ಸುತ್ತ ಮುತ್ತಲಿರುವ ಪುಟ್ಟ ಪುಟ್ಟ ಕಂದಮ್ಮಗಳೇ ಸಿಲುಕುತ್ತಿದ್ದವು. ಶಾಲೆಗೆ ಹೋಗುವಾಗ, ಬರುವಾಗ ಅವರನ್ನು ಅಪಹರಿಸುವುದು, ಬಡ ಮಕ್ಕಳಿಗೆ ಆಮೀಷ ತೋರಿಸಿ ಕರೆದೊಯ್ಯುವುದು, ಕೆಲಸದ ನೆಪದಲ್ಲಿ ಕರೆದುಕೊಂಡು ಹೋಗುವುದು....  ಹೀಗೆ ನಾನಾ ವಿಧದಲ್ಲಿ ಇನ್ನೂ ವಯಸ್ಸಿಗೆ ಬರದ ಹೆಣ್ಣು ಮಕ್ಕಳನ್ನು ದುರುಳರು ಹೊತ್ತೊಯ್ಯುತ್ತಿದ್ದರು. ದೆಲ್ಲಿ, ಓರಿಸ್ಸಾ, ಮುಂಬೈ ಸೇರಿದಂತೆ ಬಾಂಗ್ಲಾ, ನೇಪಾಳದಂತಹ ಹೊರ ರಾಷ್ಟ್ರಗಳಿಗೂ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸಾಗಾಣಿಕೆ ಮಾಡುತ್ತಿದ್ದರು. ಹೊಸವರ್ಷದ ಹಿನ್ನೆಲೆಯಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಳ್ಳ ಸಾಗಾಣಿಕೆ ವ್ಯವಹಾರ ಎಲ್ಲೆ ಮೀರುತ್ತಿತ್ತು. ಆದರೆ, ನವೆಂಬರ್ 8ರ ನಂತರ ಈ ವ್ಯವಹಾರ ಸಂಪೂರ್ಣ ನೆಲಕಚ್ಚಿದೆ! ಇದ್ದ ಬಿದ್ದ ವೇಶ್ಯಾಗೃಹಗಳೆಲ್ಲ ಅರಚಾಟ, ಗೂಗಾಟಗಳಿಂದ ಶಾಂತವಾಗಿದೆ. ಗಬ್ಬೆದ್ದು ನಾರುತ್ತಿದ್ದ ಹಾಸಿಗೆ, ದಿಂಬುಗಳೆಲ್ಲ ಮತ್ತಷ್ಟು ನಾರುತ್ತ, ಧೂಳು ತಿನ್ನುತ್ತ ಬಿದ್ದಿವೆ! ಕಾರಣ 500, 1000 ಮುಖಬೆಲೆಯ ನೋಟುಗಳ ಅಪಮೌಲ್ಯ!
ಇಂತಹ ವಿಭಿನ್ನ ದೃಷ್ಟಿಕೋನದ ಮಾಹಿತಿಯೊಂದನ್ನು POST.COM ಹೊರಹಾಕಿದೆ.

ಕಳ್ಳ ಸಾಗಾಣಿಕೆ ವ್ಯವಹಾರದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳಿಗೇ ಹೆಚ್ಚು ಬೇಡಿಕೆ. 10 ರಿಂದ 12 ವರ್ಷದ ಒಳಗಿನ ಮಕ್ಕಳಿಗೆ 5 ಲಕ್ಷ ರು. ನಿಗದಿ ಪಡಿಸಿದರೆ, 13 ರಿಂದ 15 ವರ್ಷದೊಳಗಿನ ಮಕ್ಕಳಿಗೆ 4 ಲಕ್ಷ ರು.  ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 3, 2 ಲಕ್ಷ ರು.ನಂತೆ ವೇಶ್ಯಾಗೃಹದ ಮಾಲೀಕರಿಗೆ ಮಾರಾಟ ಮಾಡುತ್ತಾರೆ. ಅವರನ್ನು ಖರೀದಿಸಿದ ಮಾಲೀಕರು ಬಲವಂತವಾಗಿ ವೇಶ್ಯಾವೃತ್ತಿಗೆ ನೂಕುತ್ತಾರೆ. ಒಂದು ವೇಳೆ ತಪ್ಪಿಸಿಕೊಳ್ಳಲೇನಾದರೂ ಪ್ರಯತ್ನಿಸಿದರೆ ಕ್ರೂರವಾದ ಶಿಕ್ಷೆಗೆ ಒಳಪಡಿಸುತ್ತಾರೆ. ಇನ್ನೂ ಪ್ರಪಂಚದ ಅರಿವಿಲ್ಲದ ಮುಗ್ಧ ಕಂದಮ್ಮಗಳು ದುರುಳ ಹಣದಾಸೆಗೆ ತಮ್ಮ ಬದುಕನ್ನು ಒತ್ತೆ ಇಡಬೇಕು. ಪರಿಣಾಮ ಅವರು ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಜರ್ಜರಿತವಾಗಿ ಹೋಗುತ್ತಾರೆ. ನಂತರ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಮೊದಲಿನ ಬದುಕು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಕ್ರಮೇಣ ಕಷ್ಟವಾದರೂ ಸರಿಯೇ ಎಂದು ಹಗಲಿರುಳೆನ್ನದೆ ವೇಶ್ಯಾವೃತ್ತಿಯಲ್ಲಿಯೇ ಕಣ್ಣೀರು ಸುರಿಸುತ್ತ ಬದುಕುತ್ತಾರೆ. ಅಂದ ಹಾಗೆ, ಈ ಮಾನವ ಕಳ್ಳ ಸಾಗಾಣಿಕೆ ಆಡಳಿತ ಯಂತ್ರಕ್ಕೆ ತಿಳಿಯದ ವಿಷಯವೇನಲ್ಲ. ಪೊಲೀಸ್ ಹಾಗೂ ಸರಕಾರಿ ಇಲಾಖೆ ಅಧಿಕಾರಿಗಳ ಮೂಗಿನ ನೇರಕ್ಕೇ ನಡೆಯುವ ಕಾನೂನು ಬಾಹಿರ ವ್ಯವಹಾರವಿದು. ಇದಕ್ಕೆ ಬಿಳಿ ಬಟ್ಟೆ ತೊಟ್ಟ ಜನಪ್ರತಿನಿಧಿಗಳ ಕೃಪಾಕಟಾಕ್ಷವೂ ಇದೆ ಎನ್ನುವುದು ಕನ್ನಡಿಯಷ್ಟೇ ಸತ್ಯ.

ಒಂದು ಮಗುವಿನ ಕಳ್ಳ ಸಾಗಾಣಿಕೆಗೆ 2.5 ರಿಂದ 3 ಲಕ್ಷ ರು. ವೆಚ್ಚವಾಗುತ್ತದೆ. ಜನಪ್ರತಿನಿಧಿಗಳಿಗೆ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ, ಆಡಳಿತದಲ್ಲಿರುವ ಅಧಿಕಾರಿ ವರ್ಗದವರಿಗೆ ಹಾಗೂ ಮಕ್ಕಳನ್ನು ಅಂದಗೊಳಿಸುವ ಕೆಲಸಗಾರರಿಗೆಂದು ಕನಿಷ್ಠ ಇಷ್ಟಾದರೂ ಅವರು ವೆಚ್ಚಮಾಡಲೇಬೇಕು. ಇದರಲ್ಲಿ ಸಾಗಾಣಿಕೆ ವೆಚ್ಚ ಮಾತ್ರ ಕೇವಲ 20ಸಾವಿರ ರು. ಇರಬಹುದು. ಪ್ರತಿ ವರ್ಷ 19 ಕೋಟಿ ರು.ಗಳ ವ್ಯವಹಾರ ಮಕ್ಕಳ ಕಳ್ಳ ಸಾಗಾಣಿಕೆಯಿಂದ ನಡೆಯುತ್ತಿದೆ ಎಂದು ರಾಷ್ಟ್ರೀಯ ಬಾಲ ಕಾರ್ಮಿಕ ಸಂಸ್ಥೆ, ಕಾರ್ಮಿಕ ಸಂಘಗಳ ಜಾಲ ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳು ನಡೆಸಿದ ಅಧ್ಯಯನ ಹೇಳುತ್ತದೆ. ಪ್ರತಿ ದಿನ ಹತ್ತರಿಂದ ಹದಿನೈದು ಮಕ್ಕಳು ಕಳ್ಳ ಸಾಗಾಣಿಕೆಗೆ ಒಳಗಾಗುತ್ತಿದ್ದರು. ಆದರೆ, ನ. 8ರ ನಂತರ ಒಂದೇ ಒಂದು ಮಗು ಸಾಗಾಣಿಕೆಯಾದ, ಅಪಹರಣವಾದ ಕುರಿತು ಎಲ್ಲಿಯೂ ದೂರು ದಾಖಲಾಗಿಲ್ಲ. ಇದೊಂದು ಅದ್ಭುತ ಬೆಳವಣಿಗೆ ಅಲ್ಲವೇ? ಎಂದು ಬಚಪನ್ ಬಚಾವೋ ಆಂದೋಲನ ಸಂಸ್ಥೆಯ ರಾಕೇಶ ಸೆಂಗಾರರ ಅಭಿಪ್ರಾಯಪಡುತ್ತಾರೆ.

ಹಳೆ ನೋಟಿನ ಅಪಮೌಲ್ಯದಿಂದ ವೇಶ್ಯಾಗೃಹದ ಕಡೆಗೆ ಗ್ರಾಹಕರು ಮುಖಮಾಡುತ್ತಿಲ್ಲ. ಇದರಿಂದ ಮಾಲೀಕರು ತಮ್ಮ ವ್ಯಾಪಾರ ಕಳೆದುಕೊಂಡು ತೆಪ್ಪಗೆ ಕುಳಿತಿದ್ದಾರೆ. ಮಕ್ಕಳ ಸಾಗಾಣಿಕೆ ಉದ್ಯಮದ ಬೆನ್ನು ಮೂಳೆಯೇ ಕಪ್ಪು ಹಣ ಆಗಿತ್ತು. ಅದಕ್ಕೆ ಪ್ರಧಾನಿ ಮೋದಿ ಕಡಿವಾಣ ಹಾಕಿದ್ದರಿಂದ, ಉದ್ಯಮದ ಮೂಳೆಯೇ ಮುರಿದು ಬಿದ್ದಂತಾಗಿದೆ. ಹೊಸ ನೋಟು ಬಂದಾಗ ಈ ವ್ಯವಹಾರಕ್ಕೆ ಅವಕಾಶ ಇಲ್ಲದಂತೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ನೊಬೆಲ್ ಪುರಸ್ಕೃತ ಕೈಲಾಸ ಸತ್ಯಾರ್ಥ ಹೇಳುತ್ತಾರೆ.....

ಕಾಮೆಂಟ್‌ಗಳಿಲ್ಲ: