ನಿಶ್ಯಬ್ದದ ವೇದನೆ
ಅದು ಇಷ್ಟಪಟ್ಟು ಆಹ್ವಾನಿಸಿಕೊಂಡ ಯಾತನೆ.... ಸ್ಥಿಮಿತ ಕಳೆದುಕೊಂಡ ಮನಸ್ಸು ಅರೆ ಹುಚ್ಚರಂತೆ ಅಲೆದಾಡುತ್ತದೆ.... ಒಮ್ಮೊಮ್ಮೆ ನೆನಪಿನ ಅಲೆಯಲ್ಲಿ ತೇಲಾಡಿದರೆ.... ಇನ್ನೊಮ್ಮೆ ಧುತ್ತೆಂದು ಆವರಿಸಿ ಬಿಡುತ್ತದೆ ದುಃಖದ ಕಾರ್ಮೋಡ .....!! ಇವುಗಳೇ ನನ್ನ ಬಾಳ ಸಂಗಾತಿಗಳು.... ಒಂಟಿ ತನಕೆ ಜೊತೆಯಾಗೋ ವಿಷಾದದ ಅಲೆಗಳು...
ಇಲ್ಲಿ ನಾನು ಎಂಬುದು ನೆಪ ಮಾತ್ರ. ನನ್ನದೆಂಬುದು ಏನೂ ಇಲ್ಲ. ಆದರೂ ಭಗವಂತ ಕೊಟ್ಟ ಈ ಬದುಕನ್ನು ಪ್ರೀತಿಸುತ್ತೇನೆ. ಬದುಕಿಗೆ ಆಸರೆಯನ್ನು ಹುಡುಕುತ್ತೇನೆ. ಸುಂದರ ಕನಸನ್ನು ಕಾಣುತ್ತೇನೆ. ನಾನು ಎಂಬ ಬದುಕು ನೆಪ ಮಾತ್ರವಾದರೂ.... ಅದಕ್ಕೆ ಸ್ವಾರ್ಥದ ಲೇಪ ಬಳಿದು, ಬಣ್ಣಬಣ್ಣದ ಚಿತ್ತಾರ ಮೂಲಕ ಅದನ್ನು ಅಲಂಕರಿಸಲು ಇಷ್ಟಪಡುತ್ತೇನೆ.ಒಡಲಾಳದ ಕತ್ತಲಲ್ಲಿ ಹೂತು ಹೋಗುತ್ತಿದೆ! ಬದುಕ ಗೂಡಿಗೆ ಕೈ ಹಿಡಿದು ಕರೆತರಲು ಅಣಿಯಾದ ಮನಸ್ಸಿಗೆ ರಾಹುಕಾಲ ಬಂದೆರಗಿದೆ.
ಇಂಥಹ ತರಹೇವಾರಿ ಹುಚ್ಚು (ಭರವಸೆಯ) ಕಲ್ಪನೆಗಳು ಬದುಕಿನ ಗಾಲಿಗಳನ್ನು ಎಳೆಯುತ್ತವೆ. ಎದುರಾಗೋ ಆಕಸ್ಮಿಕಗಳಿಗೆ ಮೌನವಾಗಿ ಸ್ಪಂದಿಸುತ್ತ ಗುರಿಯಿಲ್ಲದ ಕಡೆ ಪಯಣಿಸುತ್ತವೆ. ಬಟ್ಟಬಯಲಲ್ಲಿ ಏಕಾಂಗಿ ನಡೆ..... ನಟ್ಟ ನಡುರಾತ್ರಿಯಲಿ ಭೀಭತ್ಸ ನೋಟ.... ಧೋ ಎಂದು ಸುರಿವ ಸಲಿಲದಲಿ ಜ್ವಾಲಾಮುಖಿ ಸ್ಪೋಟ.... ಭಾರದ ಹೆಜ್ಜೆಯಿಡುತ, ದಿಕ್ಕು ದೆಸೆಯಿಲ್ಲದೆ ಅಲೆವಾಗ ಕೆನ್ನೆಯನು ತೋಯಿಸುವ ಆ ಕಣ್ಣೀರ ಹನಿಗಳು, ಆ ಬಯಲಲ್ಲಿ... ನಡುರಾತ್ರಿಯಲಿ... ಸಲಿಲದಲಿ ಯಾರಿಗೂ ತೋರದು. ಮೂಕ ಮನಸಿನ ಭಾವನೆಗಳನ್ನು ಅಲ್ಲೆ ಮಡುಗಟ್ಟಿಸಿ ಏಕಾಂಗಿಯ ಹೆಜ್ಜೆಯಿಡುವಾಗ, ನೋವಿನ ಕತ್ತಲೆ ಆವರಿಸಿ ಬಿಡುತ್ತವೆ. ಪ್ರಕ್ಷುಬ್ಧಗೊಂಡ ಮನದ ಕೊಳದಲ್ಲಿ ಜಲಧಾರೆಯ ಭೋರ್ಗರೆವ ನರ್ತನ ಪ್ರಾರಂಭವಾಗುತ್ತವೆ. ಸಂದರ್ಭದಲ್ಲೆಲ್ಲ ನಿಂತಲ್ಲೆ, ಕೂತಲ್ಲೆ ಈ ಭೂಮಿ ನನ್ನ ಹಾಗೆ ನುಂಗಬಾರದಾ? ಎಂದು ಪ್ರಾರ್ಥಿಸುತ್ತೇನೆ . ಈ ನಿಶ್ಯಬ್ದದ ವೇದನೆ ಆ ಭಗವಂತನಿಗೆಲ್ಲಿ ಕೇಳಿಸಿತು...?
ಭಾವ ಶರಧಿಯಲ್ಲಿ ಎದ್ದ ಅಲೆಗಳು, ಮುಸ್ಸಂಜೆಯ ಅಸ್ತಕ್ಕೆ ಭೋರ್ಗಯುತ್ತವೆ. ಭರವಸೆಯ ಮುಂಜಾನೆಗೆ ಕಾದು ಕುಳಿತು, ಕಾಗುಣಿತದ ಕೂಡು-ಕಳೆಯುವಿಕೆಯ ಲೆಕ್ಕಾಚಾರದಲ್ಲಿ ಮುಳುಗುತ್ತವೆ. ಉದಯದ ಬೆಳಕು ಹರಿಯುತ್ತಿದ್ದಂತೆ ಮತ್ತೆ ಕನಸುಗಳು ಗರಿಬಿಚ್ಚಿ, ಹುಚ್ಚೆದ್ದು ಕುಣಿಯುತ್ತವೆ. ಕನಸು ನನಸಾಗಿಸೋ ಛಲ, ಆದರೆ, ಸ್ವಾಭಿಮಾನದ ಗೋಡೆ... ಧಿಕ್ಕರಿಸುವ ಛಾಟಿ ಏಟು... ಹೆಪ್ಪುಗಟ್ಟಿದ ದುಗುಡ... ಇವೆಲ್ಲ ತೊಡರಾಗುತ್ತಿವೆ!
ಇವುಗಳ ನಡುವೆಯೇ ಕತ್ತಲಾವರಿಸಿದ ಮನದ ಕೋಣೆಯಲಿ ಮೊಂಬೆಳಕಿನ ಬತ್ತಿ ಹಚ್ಚಲೇ ಬೇಕು. ಕರಕಲಾಗಿ ಬಿದ್ದ ಎಷ್ಟೋ ಕನಸುಗಳು ಜೀವಂತಿಕೆ ಪಡೆಯಬೇಕು. ಅದಕ್ಕೆ ಆ ನನ್ನ ಒಲವಿನ ಬಣ್ಣ ಹೃದಯ ಸೇರಲೇ ಬೇಕು............
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ