ಗುರುವಾರ, ಆಗಸ್ಟ್ 24, 2017

ಗಣೇಶೋತ್ಸವದ ಸಂಭ್ರಮ, ಸಡಗರ ಎಲ್ಲೆಡೆ ಮನೆಮಾಡಿದೆ. ಚೆಂದದ ಗಣಪ ಮೂರ್ತಿಗಳನ್ನು ಮನೆಗೆ ತರಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ, ಇವುಗಳ ಮಧ್ಯೆ ಪಿಒಪಿ ಗಣೇಶನ ಅಬ್ಬರ ಒಂದಡೆಯಾಗಿದ್ದು, ಇದಕ್ಕೆ ಮಾರುಹೋಗದೆ ಪಾರ್ವತಿ ಪುತ್ರ ಪರಿಸರ ಪೂರಕವಾಗಿರಲಿ ಎನ್ನುವುದು ನಮ್ಮ ಕಳಕಳಿ.

ಶಾಸ್ತ್ರಕ್ಕೂ, ಹಿತಕ್ಕೂ ಮಣ್ಣಿನ ಗಣಪನೇ ಸೈ!!

ನಾವು ಆಧುನಿಕ ಜಗತ್ತಿನಲ್ಲಿದ್ದೇವೆ, ತಾಂತ್ರಿಕವಾಗಿ-ವೈಜ್ಞಾನಿಕವಾಗಿ ಮಹತ್ತರ ಮೈಲಿಗಲ್ಲು ಸಾಧಿಸಿದ್ದೇವೆ ಎಂದೆಲ್ಲ ಜಂಭ ಕೊಚ್ಚಿಕೊಳ್ಳುತ್ತ, ಆಡಿ-ನಲಿದ ನೆಲದ ಮಣ್ಣಿನ ಒಲವನ್ನೇ ಮರೆಯುತ್ತಿದ್ದೇವೆ.
ಆಧುನಿಕತೆಯ ಸೋಗಿನಲ್ಲಿ ಎಲ್ಲವನ್ನೂ ತಾಂತ್ರಿಕತೆಯ ಕೈಯ್ಯಲ್ಲಿಟ್ಟು ಯಂತ್ರ ಮಾನವರಾಗಿ ಬಿಟ್ಟಿದ್ದೇವೆ. ಕಣ್ಣಿಗೆ ಕಾಣುವ ಆಕರ್ಷಕ ವಸ್ತುಗಳ ಹಿಂದೆ ಬಿದ್ದು, ಬೆಳೆದು ಬಂದ ಪರಂಪರೆಯ ಹೆಜ್ಜೆ ಗುರುತನ್ನೇ ಅಳಿಸಿ ಬಿಟ್ಟಿದ್ದೇವೆ. ಮೈ ಸುಡವ ಕಾಂಕ್ರಿಟ್ ಕಾಡಿನಲ್ಲಿಯೇ ಜೀವನ ಸವೆಸುತ್ತ, ಹಸಿರೊದ್ದ ತಂಪನೆಯ ಪರಿಸರವನ್ನು ಮರೆಯುತ್ತಿದ್ದೇವೆ. ನಗರದಲ್ಲಿ ಕುಳಿತು ಅಭಿವೃದ್ಧಿಯ ರಾಜಮಾರ್ಗ ಮಂತ್ರಕ್ಕೆ ಲಕ್ಷಾ೦ತರ ಮರಗಿಡಗಳನ್ನು ಆಹುತಿ ನೀಡುತ್ತಿದ್ದೇವೆ. ಪರಿಣಾಮ ನೀರು, ಮಣ್ಣು, ಗಾಳಿ ಎಲ್ಲವೂ ಕಲುಷಿತ! ಎಲ್ಲವೂ ವಿಷಮಯ!! ಉಸಿರಾಡುವ ಉಸಿರು ಕೂಡಾ!!!

ಮತ್ತೆ ಬಂದಿದೆ ಗಣೇಶನ ಹಬ್ಬ. ಎಲ್ಲೆಡೆ ಪರಿಸರ ಪ್ರೇಮಿ ಗಣಪನ ಹಬ್ಬ ಆಚರಣೆಗೆ ಜಾಗೃತಿ, ಅಭಿಯಾನ ನಡೆಯುತ್ತಿದೆ. ಸಂಘ, ಸಂಸ್ಥೆಗಳು ಹಗಲಿರುಳೆನ್ನದೇ ಮಣ್ಣಿನ ಗಣಪನ ಸ್ಥಾಪನೆಗೆ ಸಾರ್ವಜನಿಕರನ್ನು ಉತ್ತೇಜಿಸುತ್ತಿವೆ. ಇವುಗಳ ನಡುವೆಯೇ ನ್ಯಾಯಾಲಯದ ಆದೇಶ ಎಂದು ಸರಕಾರದ ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿ ಪ್ರತಿಷ್ಠಾಪಿಸಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡುತ್ತಿವೆ. ಇಷ್ಟಾಗಿಯೂ ಕೆಲವು ಸಂಘಟನೆಗಳು ಪಿಒಪಿ ಮೂರ್ತಿಯನ್ನೇ ಪ್ರತಿಷ್ಠಾಪಿಸುತ್ತೇವೆಂದು ಭಂಡತನ ಪ್ರದರ್ಶಿಸುತ್ತ, ಪರಿಸರಕ್ಕೆ ಮಾರಕವಾದ ಹೆಜ್ಜೆಯಿಡುತ್ತಿವೆ.

ಪ್ರಸ್ತುತ ಸಂದರ್ಭದಲ್ಲೊ೦ದು ನಮ್ಮ, ನಿಮ್ಮ ಉಳಿವಿಗಾಗಿ, ಮುಂದಿನ ಪೀಳಿಗೆಗಾಗಿ ನಾವು-ನೀವೆಲ್ಲ ಒಗ್ಗಟ್ಟಾಗಿ ಗಂಭೀರ ಚಿಂತನೆ ಮಾಡಲೇಬೇಕಿದೆ. ಪರಿಸರ ಉಳಿವಿಗಾಗಿ ಎಚ್ಚರಿಕೆಯ ಹೆಜ್ಜೆ ಇಡಲೇಬೇಕಿದೆ. ಈಗಾಗಲೇ ಪ್ರಕೃತಿ ಮಾತೆ ತಿದ್ದಿಕೊಳ್ಳಲೆಂದು ಸಾಕಷ್ಟು ಅವಕಾಶ ನೀಡಿದೆ. ಆದರೂ ಆ ನಿಟ್ಟಿನಲ್ಲಿ ನಾವು ಚಿಂತಿಸಿಲ್ಲ! ಈಗ ನಮ್ಮೆದುರಿಗೆ ಇರುವುದು ಕಟ್ಟ ಕಡೆಯ ಅವಕಾಶ, ಪರಿಸರ ರಕ್ಷಿಸಿ, ಮನುಕುಲ ಉಳಿಸಿ! ಬೇರೆ ದಾರಿಯೇ ಇಲ್ಲ!

ಪರಿಸರ ರಕ್ಷಣೆಯ ಸಾಕಷ್ಟು ಅಭಿಯಾನದ ನಡುವೆ, ಪಿಒಪಿ ಮೂರ್ತಿ ನಿಷೇಧವೂ ಒಂದು. ಪಿಒಪಿ ಮೂರ್ತಿ ನೀರಿನಲ್ಲಿ ಸುಲಭವಾಗಿ ಕರಗದು. ಕರಗುವ ಪ್ರಕ್ರಿಯೆಯಲ್ಲಿಯೂ ಅದು ನೀರಿನಲ್ಲಿ ವಿಷಯುಕ್ತ ರಾಸಾಯನಿಕ ಬಿಡುತ್ತಲೇ ಹೋಗುತ್ತದೆ. ಇದು ಅಲ್ಲಿರುವ ಜಲಚರಗಳಿಗೆ, ಜೀವ ಜಂತುಗಳಿಗೆ, ಜೀವ ವೈವಿಧ್ಯಕ್ಕೆ ಪಾಷಾಣ ಹಾಕಿದಂತೆಯೇ! ಸುಮ್ಮನೇ ಒಂದು ಪ್ರಾಾತ್ಯಕ್ಷಿಕೆ ಮಾಡಿ ನೋಡಿ. ನಿಮ್ಮ ಅನುಭವಕ್ಕೇ ಬಂದೀತು. ಒಂದು ಮುಷ್ಠಿಯಷ್ಟು ಪಿಒಪಿ ಹುಡಿಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚಿರಿ. ಅದು ದಟ್ಟವಾದ ವಿಷಕಾರಕ ಹೊಗೆ ಉಗುಳುತ್ತ ಸುತ್ತಲಿನ ವಾತಾವರಣವನ್ನೇ ಕಾಪಿಡುತ್ತದೆ. ಅಲ್ಲದೇ, ಪಿಒಪಿ ಸುಟ್ಟ ಜಾಗದಲ್ಲಿ ಒಂದೇ ಒಂದು ಹುಲ್ಲು ಕಡ್ಡಿ ಸಹ ಮೊಳಕೆ ಒಡೆಯದು! ಭೂಮಿಯನ್ನು ಸಹ ಬಂಜರನ್ನಾಗಿಸುತ್ತದೆ. ಮೊದಲೇ ಹೇಳಿದಂತೆ, ವಿಸರ್ಜನೆಗೊಂಡ ಮೂರ್ತಿ ಕರಗದಿದ್ದರೆ ಅದನ್ನು ಯಂತ್ರದ ಸಹಾಯದಿಂದ ಮೇಲೆತ್ತಬೇಕಾಗುತ್ತದೆ. ಎಷ್ಟೋ ಬಾರಿ ಚಪ್ಪಲಿ ಹಾಕಿದ ಕಾಲನ್ನು ಮೂರ್ತಿ ಮೇಲೆ ಇಟ್ಟು ವಿಸರ್ಜನೆಗೊಂಡ ಮೂರ್ತಿ ಮೇಲೆತ್ತುತ್ತೇವೆ. ಪೂಜಿಸುವ ಗಣಪನಿಗೆ ನಾವು ನೀಡುವ ಗೌರವ ಇದು!

ಬದಲಾಗಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸೋಣ. ಪರಿಸರಕ್ಕೆ ಪೂರಕವಾಗಿ ಪೂಜೆ, ಪುನಸ್ಕಾಾರ ಉತ್ಸವ ಆಚರಿಸಿ ಸಂಭ್ರಮಿಸೋಣ. ನೀರಿನಲ್ಲಿ ಮಣ್ಣಿನ ಗಣಪನ ಮೂರ್ತಿ ವಿಸರ್ಜಿಸಿದಾಗ ಐದಾರು ಗಂಟೆಯಲ್ಲಿ ಸಹಜವಾಗಿ ಕರಗುತ್ತದೆ. ಆ ಮಣ್ಣನ್ನು ಮೇಲೆತ್ತಿ ಅದಕ್ಕೊ೦ದಿಷ್ಟು ಸಗಣಿ ಗೊಬ್ಬರ ಮಿಶ್ರಣ ಮಾಡಿ ಗಿಡ ಅಥವಾ ಮರ ಆಗುವ ಬೀಜವೊಂದು ಬಿತ್ತೋಣ. ತಿಂಗಳೊಪ್ಪತ್ತರಲ್ಲಿ ಸಣ್ಣದೊಂದು ಮೊಳಕೆ ಒಡೆದು, ನಂತರದ ದಿನಗಳಲ್ಲಿ ಚಿಗುರೊಡೆದು ಹಸಿರು ಚೆಲ್ಲುತ್ತದೆ. ಅದೇ ಗಿಡಕ್ಕೆ ಹಾಡು ಹಕ್ಕಿ ಬಂದು ಹಣ್ಣು ತಿನ್ನುತ್ತ ಚಿಲಿಪಿಲಿ ದನಿಯಲ್ಲಿ ಹಾಡು ಹೇಳುತ್ತದೆ. ಮನೆಯ ಜಗುಲಿ ಮೇಲೆ ಕುಳಿತು ಆ ಸೌದರ್ಯ ಆಸ್ವಾದಿಸೋಣ. ಸಾರ್ಥಕವಾಯಿತಲ್ಲ ಗಣಪನ ಹಬ್ಬ ಎಂದು ಮನದಲ್ಲಿಯೇ ಮುಂದೊಂದು ದಿನ ಹೇಳೋಣ. ಇದರ ಮುಂದುವರಿದ ಜಾಗೃತಿ ಅಭಿಯಾನವೇ ‘ಬೀಜ ಗಣಪ..!’ ಶಾಸ್ತ್ರಕ್ಕೂ, ಹಿತಕ್ಕೂ ಮಣ್ಣಿನ ಗಣಪನೇ ಸೈ!!

ಗಣೇಶನ ಹಬ್ಬದ ಆಚರಣೆಯಲ್ಲಿ ಸ್ವೇಚ್ಛಾಚಾರ ಎಲ್ಲೆ ಮೀರುತ್ತದೆ. ಹಬ್ಬದ ಪರಂಪರೆಗೆ ಧಕ್ಕೆ ಬರುತ್ತಿದೆ ಎಂದು ಹೇಳಿದಾಗಲೆಲ್ಲ ಕೆಲವರು, ಇನ್ನೊ೦ದು ಧರ್ಮದ ಕಡೆ ಬೊಟ್ಟು ತೋರಿಸುತ್ತ ‘ಆಗೇಕೆ ನೀವ್ಯಾರೂ ಮಾತನಾಡುವುದಿಲ್ಲ’ ಎಂದು ಪ್ರಶ್ನಿಸುತ್ತಾರೆ. ಯಾರೇ ಮಾಡಿದರೂ ಅದು ತಪ್ಪೇ! ಖಂಡನೀಯವೇ. ಒಬ್ಬರು ಮಾಡುವ ತಪ್ಪನ್ನೇ ಇನ್ನೊಬ್ಬರು ಮಾಡಿದರೆ ಅದು ಸರಿಯಾಗುತ್ತದೆಯೇ? ಪರಿಸರಕ್ಕೆ ಹಾನಿ ಮಾಡುವ ರೀತಿಯಲ್ಲಿ ಹಾಗೂ ಜನರ ಮಾನಸಿಕ ಶಾಂತಿಗೆ ಧಕ್ಕೆ ಬರುವ ರೀತಿಯಲ್ಲಿ ಉತ್ಸವಗಳನ್ನು ಯಾರೇ ಆಚರಿಸಿದರೂ ಅದು ತಪ್ಪೇ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ನಮ್ಮಿ೦ದಲೇ ಆರಂಭವಾದರೆ ಒಳಿತು. ಏನಂತೀರಾ?

ಕಾಮೆಂಟ್‌ಗಳಿಲ್ಲ: