ಗುರುವಾರ, ಆಗಸ್ಟ್ 24, 2017

ತೀರದ ದಾಹ!

ಚಾಚಿದೆ ಬರದ ಕರಿನೆರಳು ಮಲೆನಾಡ ಬುಡದಲ್ಲೂ
ಗುಟುಕು ನೀರಿಗೂ ಹಾಹಾಕಾರ ಸಹ್ಯಾದ್ರಿ ಹಾಸಲ್ಲೂ
ಬಾನಿಗೆ ಬಾಯಾನಿಸಿದೆ ಜೀವಜಲ ಹೊತ್ತ ಬಿಂದಿಗೆ
ಧರೆಗೊತ್ತುತಿದೆ ಗಟ್ಟಿಪಾದ ತೀರದ ಬದುಕಿಗೆ!
ಕೂಳು ಬೇಯಿಸಲು ಬೇಕು, ದಾಹ ನೀಗಲು ಬೇಕು
ಸುಡು ಬಿಸಲಲ್ಲೂ ನೆತ್ತಿ ಮಣ ಭಾರ ಹೊರಲೇಬೇಕು
ಸಿಹಿ ನೀರ ಬಾವಿಗೆ ಮೂರ್ನಾಲ್ಕು ಮೈಲಿ ಪರ್ಲಾಂಗು
ಅಘಳ ಲವಣಾಂಶ ನೀರಿಗೆ ಮನೆಯಂಗಳವೇ ಜಂಪು!

ನೈಟಿ, ದುಪ್ಪಟ, ಚೂಡಿ ಬಣ್ಣ ಬಣ್ಣದ ಉಡುಪು
ಬಳಕುವ ಸೊಂಟದಿ ನೋಡ ಜೀವ ಜಲದ ಒನಪು
ಕುತೂಹಲದ ದೃಷ್ಟಿಗೆ ಹುಬ್ಬೇರಿಸೋ ಅಂದಚಂದ
ನೆಲದ ಕಣ್ಣಿಗೆ ಸುತ್ತಲ ಜಲರಾಶಿಯೇ ಪರಮಾನಂದ!

ಹಸಿರೊದ್ದ ಹಾದಿ ಸವಿಸಲೇಬೇಕು ನಿತ್ಯ ಮೂರೊತ್ತು
ಎಳೆ ಬಾಲೆ, ವೃದ್ಧೆಯೆಂಬ ಭೇದಗಳ ಬದಿಗೊತ್ತು
ಅಂಗಳದಿ ಓಡಾಡೋ ಅಳಕು ಬಳಕಿನ ಅಘಳು
ಬದುಕು ಕಟ್ಟಿಕೊಟ್ಟು ದಾಹ ತೀರಿಸದೇ ಹೋದಳು!

ಕಾಮೆಂಟ್‌ಗಳಿಲ್ಲ: