ಮಂಗಳವಾರ, ಮಾರ್ಚ್ 22, 2016

ಶಿವಪ್ಪನಿಗೊಂದು ಓಲೆ......
ಪ್ರೀತಿಯ ಅಪ್ಪಾ,
ಹೇಗಿದ್ದೀಯಾ...? ಪಾರ್ವತಮ್ಮ ಏನ್ಮಾಡ್ತಾ ಇದ್ದಾಳೆ. ನಿನ್ನ ಗಣಗಳೆಲ್ಲ ಸೌಖ್ಯ ತಾನೆ? ನೀನು ಮತ್ತು ನಿನ್ನ ಸುತ್ತೆಲ್ಲ ಇರೋರು ಸಕತ್ತಾಗಿಯೇ ಇರ್ತಿರಿ ಬಿಡಿ. ಮೃಷ್ಟಾನ್ನ ಭೋಜನ ತಿನ್ಕೋತಾ, ಅಡ್ಡಾಡ್ತಾ ಕೈಲಾಸವಷ್ಟೇ ಅಲ್ಲದೆ, ಭೂಲೋಕದ ಮೇಲೂ ಒಂದು ಕಣ್ಣು ಇಟ್ಟಿರ್ತೀರಿ. ಅದ್ರಲ್ಲೂ ನೀನಂತೂ ಹಣೆ ಮೇಲಿರುವ ಮೂರನೇ ಕಣ್ಣನ್ನು ಇಲ್ಲೇ ಇಟ್ಟಿರ್ತಿಯಾ ಬಿಡು.. ಯಾರ್ಯಾರು ಏನೇನು ಮಾಡ್ತಾ ಇದ್ದಾರೆ? ಒಳ್ಳೆ ಕೆಲಸ ಎಷ್ಟ ಮಾಡಿದ್ರು, ಪಾಪದ ಕಾರ್ಯ ಎಷ್ಟ ಮಾಡಿದ್ರು ಅಂತ ಲೆಕ್ಕ ಹಾಕ್ತಾ ಇರ್ತಿಯ. ಶಿಷ್ಟ ರಕ್ಷಕ, ದುಷ್ಟ ಶಿಕ್ಷಕನಾಗಿ ನಮ್ಮನ್ನೆಲ್ಲ ಪರಿಪಾಲನೆ ಮಾಡ್ತಾ ಇರ್ತಿಯಾ.
ಆದ್ರೂ ನೀ ಏನೇ ಹೇಳು ಅಪ್ಪಾ, ಇಲ್ಲಿ ಪಾಪ ಮಾಡಿದವ್ರೆ ಝೇಂಕರಿಸಿ ಮೆರೆದಾಡುತ್ತಾರೆ. ಪುಣ್ಯ ಮಾಡಿದವ್ರೆಲ್ಲ ಬೇಗನೇ ನಿನ್ನ ಪಾದ ಸೇರ್ಕೋತಾರೆ...! ಇದೆಂಥ ನ್ಯಾಯನೋ ಅಪ್ಪ? ಹೀಗಾದ್ರೆ ಪುಣ್ಯದ ಕೆಲಸ ಯಾಕೆ ಮಾಡ್ಬೇಕು ಹೇಳು? ಸ್ವಲ್ಪ ಯೋಚನೆ ಮಾಡು. ಮಗನೇ ನಿಂಗೆ ಹೇಳ್ತಾನೆ ಅಂತ ಬೇಜಾರು ಮಾಡ್ಕೋಬೇಡ.
ಶಿವಪ್ಪ, ಇತ್ತೀಚೆಗೆ ಈ ಭೂಲೋಕದಲ್ಲಿ ಶಾಂತಿ ಅನ್ನೋದೆ ಮರೆಯಾಗ್ಬಿಟ್ಟದ್ಯೊ. ಎಲ್ಲ ನೋಡಿದ್ರಲ್ಲಿ ಕಚ್ಚಾಟ, ಹಿಂಸೆ, ಕೊಲೆ, ಸುಲಿಗೆ ಇದ್ರದ್ದೆ ಪಾರುಪಥ್ಯ. ಬೆಳಿಗ್ಗೆ ಮನೆಯಿಂದ ಕೆಲ್ಸಕ್ಕೆ ಹೋದವ್ರು, ರಾತ್ರಿ ಸರಿಯಾಗಿ ಮನೆಗೆ ಬರ್ತಾರೆ ಅಂತ ಹೇಳೋಕು ಆಗಲ್ವೊ. ಎಲ್ಲಿ ಬಾಂಬ್ ಬ್ಲಾಸ್ಟ್ ಆಗತ್ತೋ, ಎಲ್ಲಿ ಎದೆಗೆ ಗುಂಡು ಬೀಳತ್ತೋ, ಯಾರು ಹಿಂಬದಿಯಿಂದ ಬಂದು ಹಲ್ಲೆ ಮಾಡ್ತಾರೋ ಅಂತ ಒಂದೂ ಗೊತ್ತಾಗಲ್ಲ ಅಪ್ಪ. ಅಷ್ಟೊಂದು ಆತಂಕದ ವಾತಾವರಣ. ಒಂದ್ಕಡೆ ಹೊರಗಡೆ ಭಯೋತ್ಪಾದಕರ ಆತಂಕ, ಇನ್ನೊಂದಕಡೆ ನಮ್ಮೊಳಗೇ ಭಯೋತ್ಪಾದನೆ ಮಾಡುವ ರಾಜಕಾರಣಿಗಳ ಆತಂಕ. ಒಟ್ಟಾರೆ, ನೆಮ್ಮದಿ, ಸಮಾಧಾನ ಅನ್ನೋದೆ ಇಲ್ಲ. ಇದನ್ನೆಲ್ಲ ನೀ ನೋಡ್ತಾ ಇದ್ರೂ ಯಾಕೋ ಅಪ್ಪಾ, ಏನೂ ಗೊತ್ತಾಗದೆ ಇರೋ ಥರ ಇರ್ತಿಯಾ..? ಅದ್ರಲ್ಲೂ ಯಾರಿಗೂ ಇಲ್ದೆ ಇರೋ ಎಕ್ಸಟ್ರಾ ಕಣ್ಣು ಬೇರೆ ಇದೆ ನಿಂಗೆ. ಹೀಗಿದ್ದಾಗ್ಲೂ ನೀ ಸುಮ್ನೆ ಇರೋದು ನಂಗೆ ಯಾಕೋ ಸರಿ ಕಾಣ್ಸತಾ ಇಲ್ಲ.
ಅದೆಲ್ಲ ಬಿಡು ಅಪ್ಪಾ, ಇವತ್ತು ನಾಳೆ ನಿನ್ನ ಹಬ್ಬ. ನಿನ್ನ ಗುಡಿಯನ್ನೆಲ್ಲ ಸಕತ್ತಾಗಿ ಅಲಂಕಾರ ಮಾಡಿದ್ದಾರೆ. ಇವತ್ತು ರಾತ್ರಿ ಪೂರ್ತಿ ನಿನ್ನ ಭಜನೆ ಮಾಡ್ತಾ ಜಾಗರಣೆ ಮಾಡ್ತಾರೆ. ಕೋಟಿ ಕೋಟಿ ಭಕ್ತರು ನಿನ್ನ ಒಲಿಸಿಕೊಳ್ಳೋಕೆ, ನಿನ್ನ ಕೃಪೆಗೆ ಪಾತ್ರರಾಗೋಕೆ ಕರ ಮುಗಿದು ಪ್ರಾರ್ಥಿಸುತ್ತಾರೆ. ಆತ್ಮಶುದ್ಧಿಯಿಂದ, ನಿಜ ಭಕ್ತಿಯಿಂದ ನಿನ್ನಲ್ಲಿ ಬೇಡ್ಕಳ್ಳೋ ಭಕ್ತರಿಗೆ ನೀ ಆಶೀರ್ವಾದ ಮಾಡ್ಲೇಬೇಕು ಅಪ್ಪ. ನಾ ಹೇಳದಿದ್ರು ನೀ ಹರಸಿ, ಹಾರೈಸ್ತೀಯಾ. ಯಾಕೆಂದ್ರೆ ನೀ ಯಾವತ್ತೂ 'ನಿಜ ಭಕ್ತಿ' ಗೆ ಸೋಲುವ ಶಿವಪ್ಪ.
ಅಂದಹಾಗೆ ಅಪ್ಪ, ಮರ್ತೆ ಹೋಗಿತ್ತು ನೋಡು. ಇವತ್ತು ಉಪವಾಸ, ಜಾಗರಣೆ. ನಾಳೆ ಅಮವಾಸ್ಯೆ, ಅಂದ್ರೆ ನಿನ್ನ ಹಬ್ಬ. ಈ ಎರಡು ದಿನಗಳಲ್ಲಿ ನೀ ಯಾವಾಗ, ಎಲ್ಲಿ ಬರ್ತಿಯಾ ಅಂತ ಹೇಳು. ಪಾರ್ವತಮ್ಮಗೆ ನಾನೇ ಕಟ್ಟಿರುವ ದುಂಡು ಮಲ್ಲಿಗೆ ಹೂವಿನ ದಂಡೆ ಕೊಡ್ಬೇಕಿದೆ. ಅವಳಿಗೆ ಹೇಳಿದ್ದೀನಿ, ಶಿವಪ್ಪ ಇಲ್ಲಿಗೆ ಬಂದಾಗ ಮಲ್ಲಿಗೆ ದಂಡೆ ಕಳ್ಸಿ ಕೊಡ್ತೀನಿ ಅಂತ. ನೀ ಏನಾದ್ರೂ ನಂಗೆ ಸಿಗದೆ ವಾಪಾಸ್ ಹೋದೆ ಅಂದ್ರೆ ಪಾರ್ವತಮ್ಮ ಮಾತ್ರ ನಿಂಗೆ ಬಿಡಲ್ಲ...! ಅದೆಲ್ಲ ಯಾಕೆ ಬೇಕು ಅಲ್ವಾ ಅಪ್ಪಾ.. ನಾ ಇದ್ದಲ್ಲಿಯೇ ಬಂದು ನಿನ್ನ ಮಗನ ನೋಡ್ಕೊಂಡು, ಮಲ್ಲಿಗೆ ದಂಡೆ ತಗೊಂಡು ಹೋಗ್ಬಿಡು. ನನಗೂ ನಿನ್ನ ನೋಡಿದ ಹಾಗೆ ಆಗುತ್ತೆ. ಜೊತೆಗೆ, ಮುನಿಸಿಕೊಂಡಿರುವ ಅಮ್ಮನನ್ನು ನೀ ಒಲಿಸಿಕೊಳ್ಳಬಹುದು. ಅಲ್ವೇನಪ್ಪಾ....?
- ನಿನ್ನ ಮಗ
ನಾಗರಾಜ್ ಬಿ.ಎನ್.

ಸ್ವಾರ್ಥ.... ಅವರವರ ದೃಷ್ಟಿಕೋನ

ಅಂಕೋಲಾದ ಸಾಹಿತಿ ವಿಷ್ಣು ನಾಯ್ಕ ಸಂಪಾದನೆ ಮಾಡಿರುವ 'ಗೌರೀಶ ಕಾಯ್ಕಿಣಿ ಅವರ ಆಯ್ದ ಲೇಖನಗಳು' ಅತ್ಯಂತ ಇಷ್ಟ ಪಡುವ ಹಲವು ಹೊತ್ತಿಗೆಗಳಲ್ಲಿ ಒಂದು. ಅದರಲ್ಲಿಯ ತೆನೆ- 1ರ ಭಾಗದಲ್ಲಿನ ವಿಚಾರವಾದದಲ್ಲಿ ಗೌರೀಶ ಕಾಯ್ಕಿಣಿಯವರು ಭಯ, ಪೂರ್ವಗ್ರಹಿಕೆ, ಅಜ್ಞಾನ, ಅರೆಬರೆಜ್ಞಾನ, ಸ್ವಾರ್ಥ, ಅಭಿನಿವೇಷ, ಬಗೆಗುದುರೆಯ ಪಟ್ಟಿ, ಮನೋದೌರ್ಬಲ್ಯ, ಭಾವೋದ್ರೇಕ ಮತ್ತು ಅನುಮಾನದ ಕುರಿತು ಅರ್ಥವತ್ತಾಗಿ ವಿಶ್ಲೇಷಿಸಿದ್ದಾರೆ. ಅದರಲ್ಲಿಯ ' ಸ್ವಾರ್ಥ' ಭಾಗದ ಅವರ ಬರವಣಿಗೆ ಮನುಷ್ಯನ ದೃಷ್ಟಿಕೋನದ ಕುರಿತು ಮಾರ್ಮಿಕವಾಗಿ ತಿಳಿಸುತ್ತದೆ. ಕಾಯ್ಕಿಣಿಯವರ ಆ ಬರಹ ಯಥಾರೂಪದಲ್ಲಿ......
ಪ್ರತಿಯೊಬ್ಬನೂ ಒಂದಲ್ಲ ಒಂದು ಅರ್ಥಕ್ಕೆ ಕಟ್ಟುಬಿದ್ದಿರುತ್ತಾನೆ. ಅದು ಆತನ ಕೇವಲ ಸಂಕುಚಿತ ಸ್ವಾರ್ಥವೇ ಆಗಬೇಕೆಂದಿಲ್ಲ. ಪ್ರತಿಷ್ಠೆ, ಅಭಿಮಾನ, ಭಾವಾವೇಶಗಳಿಂದ, ಅಭಿರುಚಿ, ಆಸಕ್ತಿ, ವ್ಯಾಮೋಹ ಇವೆಲ್ಲವೂ ಆತನ ಮನೋದಾಸ್ಯಕ್ಕೆ ಕಾರಣವಾಗುವ 'ಅರ್ಥಟಗಳು' ಆಗಬಲ್ಲವು. ಈ ಕೆಳಗಿನ ಒಂದು ಸಂವಾದ ಇದರದೊಂದು ಪರಿಚಯ ಕೊಡಬಹುದು.
ಮಗ ತನ್ನ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕೆಂಬ ಹಟದಿಂದ ತಂದೆಯನ್ನು ಕೇಳಿದ.
'ಅಪ್ಪಾ, ಧರ್ಮಾಂತರ ಅಂದರೇನು?'
ತಂದೆ ಹೇಳಿದ. 'ಮಗು, ಯಾವನೊಬ್ಬನು ಬೇರೊಂದು ಧರ್ಮ ಬಿಟ್ಟು ನಮ್ಮ ಧರ್ಮಕ್ಕೆ ಬಂದರೆ ಅದಕ್ಕೆ ಧರ್ಮಾಂತರ ಎನ್ನುವರು. ತಿಳಿಯಿತೇ?'
ಮಗನ ಜ್ಞಾನ ಪಿಪಾಸೆ ಅಷ್ಟಕ್ಕೇ ತಣಿಯಲಿಲ್ಲ. ' ಹಾಗಾದರೆ ಅಪ್ಪಾ, ಯಾವನೊಬ್ಬ ನಮ್ಮ ಧರ್ಮ ಬಿಟ್ಟು ಬೇರೆ ಧರ್ಮಕ್ಕೆ ಸೇರಿದರೆ....?'
ತಂದೆ ತಾಳ್ಮೆಗೆಟ್ಟು ಹೆದರಿಸಿದ, 'ಛೀ ಮಂಕೇ, ಆ ಮಾತೇ ಬಿಡು. ಅದು ಶುದ್ಧ ಧರ್ಮದ್ರೋಹ! ಅಂಥವರನ್ನು ನಂಬಬಾರದು. ದ್ರೋಹಿ ಮುಂಡೆ ಮಕ್ಕಳು!'
ಒಟ್ಟಾರೆ ಎಲ್ಲವೂ ದೃಷ್ಟಿಕೋನದಲ್ಲಿದೆ. ಅದು ಧರ್ಮಾಂತರ. ಇದು ಧರ್ಮದ್ರೋಹ. ಕ್ರಿಯೆ ಎರಡೂ ಕಡೆಗೆ ಒಂದೇ. ಧರ್ಮವನ್ನು ಬದಲಿಸುವವರು ಯಾವ ನಿಟ್ಟಿನಿಂದ ನೋಡುತ್ತಾರೆ ಎಂಬುದನ್ನು ಹೊಂದಿಕೊಂಡಿದೆ. ಹೀಗೆ ನಮ್ಮ ವಿಚಾರಸರಣಿಯ ಸ್ವರೂಪವನ್ನೇ ಬೇರೆ ಮಾಡುವ ಶಕ್ತಿ ನಮ್ಮ ಸ್ವಾರ್ಥದ, ಸ್ವಾಭಿಮಾನದ- ಸ್ವಜನಾಭಿಮಾನದ ಸೆಳೆತದಲ್ಲಿದೆ.

ಮಂಗಳವಾರ, ಮಾರ್ಚ್ 1, 2016

ಸುಮ್ಮನೆ ಅಳುತ್ತಿದ್ದಳು... ನಕ್ಕು ನಲಿಯುತ್ತಿದ್ದಳು... 
ಏನೂ ಅರಿಯದ ಎರಡು ವರ್ಷದ ಆ ಮಗು ಒಮ್ಮೊಮ್ಮೆ ಅಳುತ್ತಿತ್ತು. ಮತ್ತೆ ಕೆಲವೊಮ್ಮೆ ಸುಮ್ಮನೆ ಕೇಕೇ ಹಾಕಿ ನಗುತ್ತಿತ್ತು. ಅತ್ತಾಗ ಬಿಸ್ಕಿಟ್ ನೀಡಿ ಸುಮ್ಮನಿರಿಸಿದರೆ, ನಕ್ಕಾಗಿ ಗಲ್ಲ ಹಿಡಿದು ಇನ್ನಷ್ಟು ನಗಿಸುತ್ತಿದ್ದರು. ಬಂದ ಕೆಲ ಗಣ್ಯರು ಆಕೆಯನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರು. ಗುರುಗಳು ತಲೆ ಮೇಲೆ ಕೈ ಇಟ್ಟು ನೂರ್ಕಾಲ ಬಾಳವ್ವ ಎಂದು ಆಶೀರ್ವದಿಸುತ್ತಿದ್ದರು.
ಇದು ಶುಕ್ರವಾರ ನಗರದ ನೆಹರು ಮೈದಾನದಲ್ಲಿ ಹನುಮಂತಪ್ಪನ ಪ್ರಾರ್ಥಿವ ಶರೀರದ ಸಾರ್ವಜನಿಕ ದರ್ಶನದ ವೇಳೆ ಕಂಡು ಬಂದ ಮಾನವೀಯ ದೃಶ್ಯಗಳು. ಆಕೆ ಮೃತ ಯೋಧ ಹನುಮಂತಪ್ಪನ ಮಗಳು ನೇತ್ರಾ. ಕುಟುಂಬ ವರ್ಗದವರಿಗಾಗಿ ಅಲ್ಲಿ ವಿಶೇಷ ಆಸನಗಳ ವ್ಯವಸ್ಥೆ ಮಾಡಿ ಗ್ಯಾಲರಿ ನಿರ್ಮಿಸಲಾಗಿತ್ತು.  ಹನುಮಂತಪ್ಪನ ತಾಯಿ ಬಸಮ್ಮ, ಪತ್ನಿ ಮಾದೇವಿ ಸೇರಿದಂತೆ ಆತನ ಅಣ್ಣ, ಅತ್ತಿಗೆ, ಮಕ್ಕಳು ಹಾಗೂ ಇತರ ಸಂಬಂಧಿಗಳೆಲ್ಲ ಅಲ್ಲಿ ಆಗಮಿಸಿದ್ದರು. ಅವರಲ್ಲಿ ಈ ಪುಟ್ಟ ಮಗು ನೇತ್ರಾ ಎಲ್ಲರ ಕೇಂದ್ರ ಬಿಂದು.
ಕೆಲವು ಗಣ್ಯರು ಕೊಪ್ಪದ ಅವರ ಪ್ರಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಗ್ಯಾಲರಿಯೊಳಗೆ ಬಂದು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳುತ್ತಿದ್ದರು. ಹನುಮಂತಪ್ಪರ ಮಗಳು ಎಂದು ತಿಳಿಯುತ್ತಿದ್ದಂತೆ, ಆಕೆಯನ್ನು ಎತ್ತಿ ಮುದ್ದು ಮಾಡುತ್ತಿದ್ದರು. ಅವರು ಎತ್ತಿಕೊಳ್ಳುತ್ತಿದ್ದಂತೆ ಆಕೆ ಜೋರಾಗಿ ಅಳುತ್ತಿದ್ದಳು. ಸಂದರ್ಭದಲ್ಲಿ ಬಿಸ್ಕಿಟ್ ನೀಡಿ ಅವಳನ್ನು ಸುಮ್ಮನಿರಿಸಲಾಗುತ್ತಿತ್ತು.
ಮೂರುಸಾವಿರ ಮಠದ ಶ್ರೀಗಳು, ರಂಭಾಪುರಿ ಶ್ರೀಗಳು, ವಚನಾನಂದ ಸ್ವಾಮೀಜಿ, ಆನಂದ ಗುರೂಜಿ ಅವಳ ತಲೆಯ ಮೇಲೆ ಕೈಯಿಟ್ಟು 'ಸುಖ ಸಂತೋಷದಿಂದ ನೂಕರ್ಾಲ ಬಾಳಿ ಬದುಕವ್ವ. ಹೆಮ್ಮೆಯ ದೇಶಭಕ್ತನ ಮಗಳಾಗಿ ಜನಿಸಿದ ನೀನು ಪುಣ್ಯವಂತೆ' ಎಂದು ಹರಸಿ ಹಾರೈಸಿದ್ದರು.
ಕೆಲ ಜನಪ್ರತಿನಿಧಿಗಳು ಆಕೆಯನ್ನು ಎತ್ತಿಕೊಳ್ಳಲು ಮುಂದಾದಾಗ ಒಲ್ಲೆ ಎಂದು ವರಾತ ತೆಗೆದವಳು, ಆರ್ಮಿ ಅಧಿಕಾರಿಗಳು ಎತ್ತಿಕೊಂಡಾಗ ಸುಮ್ಮನೆ ಇರುತ್ತಿದ್ದಳು. ಸಂದರ್ಭದಲ್ಲಿ 'ನನ್ನಪ್ಪನೂ ಆರ್ಮಿಯಲ್ಲಿದ್ದ' ಎನ್ನುವ ಭಾವ ಆಕೆಯ ಒಳಮನಸ್ಸಿಗೆ ಅರ್ಥವಾಗುತ್ತಿತ್ತೇ ಎನ್ನುವ ಪ್ರಶ್ನೆ ಅಲ್ಲಿದ್ದವರನ್ನು ಕಾಡುತ್ತಿತ್ತು.
ಆಕೆ ಒಂದೇ ಸಮನೆ ಅಳುತ್ತಿದ್ದದ್ದನ್ನು ಗಮನಿಸಿದ ಹಿರಿಯ ಆರ್ಮಿ ಅಧಿಕಾರಿಯೊಬ್ಬರು ಸುಮ್ಮನಿರಿಸಲು ಅವಳನ್ನು ಎತ್ತಿಕೊಂಡರು. ಅವರ ತೋಳಲ್ಲಿ ಬಂಧಿಯಾಗುತ್ತಿದ್ದಂತೆ ಅವಳು ಅಳು ನಿಲ್ಲಿಸಿದಳು. ಸುಮ್ಮನೇ ಕತ್ತೆತ್ತಿ ಅವರ ಮುಖ ನೋಡಿದ ಆಕೆ, ನಸುನಕ್ಕು ಎದೆ ಭಾಗದ ಮೇಲೆ ಕಣ್ಣಾಡಿಸಿದಳು. ಅಲ್ಲಿ ಮಿಲಿಟರಿ ಸಂಕೇತದ ಪದಕ ಜೋತಾಡುತ್ತಿತ್ತು. ಕೈಯ್ಯಲ್ಲಿ ಬಿಗಿಯಾಗಿ ಹಿಡಿದು, ಅವರ ಮುಖವನ್ನು ಪದೆ ಪದೇ ನೋಡುತ್ತಿದ್ದಳು. 'ನನ್ನಪ್ಪನ ಆಫೀಸರ್ಸ್ ನೀವು' ಎಂದು ಆಂಗಿಕ ಭಾವದಿಂದ, ಮೂಕ ಸಂವೇದನೆ ಮೂಲಕ ಆಕೆ ಹೇಳಿದಂತೆ ಭಾಸವಾಗಿತ್ತು.
ತನ್ನ ತುಂಟಾದಿಂದ, ಅರ್ಥ ಗರ್ಭಿತ ಭಾವದಿಂದ, ಸೂಕ್ಷ್ಮ ಸಂವೇದನೆಯಿಂದ ಭಾವನೆ ತೋರ್ಪಡಿಸುತ್ತಿದ್ದ ಪುಟ್ಟ ನೇತ್ರಾಳಿಗೆ, 'ಅಪ್ಪ ಇನ್ನಿಲ್ಲ' ಎನ್ನುವ ನೋವು ಕಾಡುತ್ತಿತ್ತೇನೋ ಎಂದೆನಿಸುತ್ತಿತ್ತು.
ಆದರೂ, ಪ್ರಪಂಚ ಅರಿಯದ ಮುಗ್ಧ ಮಗುವದು. ಅಳು, ನಗು, ತುಂಟಾಟ ಬಿಟ್ಟು ಇನ್ನೇನು ಅರ್ಥವಾದೀತು? ಒಟ್ಟಾರೆ, ಆ ನೇತ್ರಾ ನೆಹರು ಮೈದಾನದಲ್ಲಿ ನೆರೆದ ಪ್ರತಿಯೊಬ್ಬರ ಕೇಂದ್ರ ಬಿಂದುವಾಗಿದ್ದಂತು ಸತ್ಯ.
ನಿಮ್ಮ ರಾಜಕೀಯಕ್ಕೆ ಕಸಾಪನೇ ಬೇಕಾ...?

ಕನ್ನಡ ಸಾಹಿತ್ಯ ಪರಿಷತ್ ಎನ್ನುವುದು ಅಕ್ಷರಶಃ ರಾಜಕೀಯ ಮನೆಯಾಗಿಬಿಟ್ಟಿದೆ. ಅದರಲ್ಲೂ ಧಾರವಾಡದ ಕಸಾಪ ಸಾಹಿತಿಗಳ ಬಣವಂತೂ ಯಾವ ರಾಜಕೀಯ ಪಕ್ಷಕ್ಕೂ ಕಡಿಮೆಯಿಲ್ಲ ಎನ್ನುವಂತಾಗಿದೆ. ಒಳಗೊಳಗೆ ಪರಸ್ಪರ ಕತ್ತಿ ಮಸೆಯುತ್ತಿದ್ದವರು ಈಗ, ಬೀದಿಗೆ ಬಂದು ಅದನ್ನು ಪ್ರಯೋಗ ಮಾಡುತ್ತಿದ್ದಾರೆ. ಇವರ ಸ್ವಾರ್ಥಲೋಲುಪತೆ, ಅಧಿಕಾರ ದಾಹ, ನಿಸ್ವಾರ್ಥದಿಂದ ಹುಟ್ಟಿಕೊಂಡ ಕಸಾಪ ಎನ್ನುವ ಸಾಹಿತ್ಯ ಸಂಸ್ಥೆಗೆ ಅವಮಾನ!
-----------------
ಕನ್ನಡ ಕಟ್ಟುವ ಕೆಲಸ ಮಾಡಬೇಕಿದ್ದ ಕಸಾಪ ಅಧ್ಯಕ್ಷರು, ಯಾರಯಾರ ಅವಧಿಯಲ್ಲಿ ಎಷ್ಟೆಷ್ಟು ಹಣ ಖಚರ್ು ಮಾಡಿದ್ದಾರೆ, ಎಲ್ಲೆಲ್ಲಿ ಉಪಯೋಗಿಸಿದ್ದಾರೆ, ಹೇಗೆ ಅವ್ಯವಹಾರ ಮಾಡಿದ್ದಾರೆ ಎನ್ನುವುದನ್ನು ದುಬರ್ೀನು ಹಾಕಿಕೊಂಡು ಲೆಕ್ಕಾಚಾರದ ಕೂಡುಕಳೆಯುವಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಅವ್ಯವಹಾರ ನಡೆದಿದ್ದರೆ ಒಂದರ್ಥದಲ್ಲಿ ಇದು ಉತ್ತಮ ಬೆಳವಣಿಗೆ. ಹಾಗೆ ನಿಷ್ಪಕ್ಷಪಾತ ತನಿಖೆಯೂ ನಡೆಯಬೇಕು. ಆದರೆ, ನಿಜವಾಗಿಯೂ ಇದು ಕಸಾಪ ಅಧ್ಯಕ್ಷ ಗಾದಿಗೆ ನಡೆಯುತ್ತಿರುವ ರಾಜಕೀಯ ತಂತ್ರವಾಗಿದ್ದರೆ ಅಕ್ಷರ ಸರಸ್ವತಿಗೆ ಮಾಡುವ ದೊಡ್ಡ ಅವಮಾನ. ಇದನ್ನು ಸಾಹಿತ್ಯಾರಾಧಕರು ಅವಶ್ಯವಾಗಿ ಗಮನಿಸಬೇಕಿದೆ.
ಏನೇ ಇರಲಿ. ಸರಸ್ವತಿಯ ಆರಾಧನೆಗೆ ಪ್ರೋತ್ಸಾಹ ನೀಡುತ್ತ ಬೆನ್ನು ತಟ್ಟಿ ಗುರುತರ ಜವಾಬ್ದಾರಿ ಸ್ಥಾನದಲ್ಲಿ ನಿಲ್ಲಬೇಕಾದ ಅಧ್ಯಕ್ಷರೇ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಿರುವುದು ನೋವಿನ ಸಂಗತಿ.
ಕಳೆದ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಜಿ ಅಧ್ಯಕ್ಷ ಡಿ.ಎಂ. ಹಿರೇಮಠ ಹೇಳಿದರೆ, ನನ್ನ ಅವಧಿಯಲ್ಲಿ ಅವ್ಯವಹಾರ ನಡೆದಿಲ್ಲ, ತನಿಖೆ ನಡೆಸುವುದಾದರೆ ಈ ಹಿಂದಿನ ಅವಧಿಯ ವ್ಯವಹಾರವೂ ತನಿಖೆಯಾಗಲಿ ಎಂದು ಹಾಲಿ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳುತ್ತಾರೆ. ಅಂದರೆ, ಇಲ್ಲಿ ಯಾರನ್ನು ನಂಬಬೇಕು? ಯಾರನ್ನು ಬಿಡಬೇಕು? ಇವರಿಬ್ಬರ ಅವಧಿಯಲ್ಲೂ ಅವ್ಯವಹಾರ ಆಗಿದೆಯಾ? ಇಲ್ಲ ಅಂದರೆ ಯಾರನ್ನು ಮಂಗ ಮಾಡಲು ಹೊರಟಿದ್ದಾರೆ?
ಬೆಂಕಿ ಇಲ್ಲದೆ ಹೊಗೆಯಾಡದು! ಅಕ್ಷರ ದೇವಿಗೆ ಅವಮಾನ ಮಾಡುವ, ಅಧಿಕಾರಕ್ಕಾಗಿ ಕೆಸರೆರಚಾಡುವ, ಹಣಕ್ಕಾಗಿ ಲಾಬಿ ಮಾಡುವ ಸಾಹಿತಿ ಮುಖವಾಡ ಧರಿಸಿದವರಿಗೆ ಧಿಕ್ಕಾರ! ಯಾರೇ ಆಗಿರಲಿ, ಕನ್ನಡ ಭಾಷೆಯ ಹೆಸರಲ್ಲಿ ರಾಜಕಾರಣ ಮಾಡುವವರನ್ನು ಹೆಡೆಮುರಿಕಟ್ಟಿ ಮೇಲೇಳದಂತೆ ಮಾಡಬೇಕು.
ರಾಜಕೀಯ ಮಾಡುವುದೇ ಆದರೆ, ಹಣಗಳಿಕೆ ಮಾಡುವುದೇ ಉದ್ದೇಶವಾಗಿದ್ದರೆ, ಕೆಸರೆರಚಾಡುವುದೇ ಮಜಾ ಎನ್ನುವುದಾದರೆ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇಕರ್ೊಳ್ಳಿ ಸ್ವಾಮಿ. ಕನ್ನಡ ಭಾಷೆ ಕಟ್ಟಿ, ಬೆಳೆಸುವಂಥ ಕನ್ನಡ ಸಾಹಿತ್ಯ ಪರಿಷತ್ ಗೆ ಯಾಕೆ ಬತರ್ೀರಾ. ಪವಿತ್ರ ದೇವಸ್ಥಾನದಂತಿರುವ ಕಸಾಪ ಮನೆಯನ್ನು ಯಾಕೆ ಅಪವಿತ್ರ ಮಾಡ್ತೀರಾ. ನಿಮ್ಮಥವರ ಅವಶ್ಯಕತೆ ಇಲ್ಲಿ ಇಲ್ಲಾರೀ....
ಪ್ರಾಮಾಣಿಕ, ಪರಿಶುದ್ಧ ಸಾಹಿತಿಗಳು ಲೆಕ್ಕವಿಲ್ಲದಷ್ಟು ಜನ ಇಲ್ಲಿದ್ದಾರೆ. ಸಾಹಿತಿ ಎಂದು ಗುರುತಿಸಿಕೊಂಡವರಿಗಿಂತಲೂ ಉತ್ತಮವಾಗಿ, ಸಾಹಿತ್ಯ ರಚನೆ ಮಾಡುವವರು ಇಲ್ಲಿ ಸಾಕಷ್ಟು ಜನರಿದ್ದಾರೆ. ಕಸಾಪ ಸದಸ್ಯರಾಗದೆ ಇರುವ ಸಾವಿರಾರು ಜನರು ನಮ್ಮ-ನಿಮ್ಮ ನಡುವೆ ಇದ್ದಾರೆ. ಎಲೆಮರೆ ಕಾಯಿಯಾಗಿರುವ ಅಂಥಹ ಸರಸ್ವತಿ ಆರಾಧಕರಿಗೆ ನಿಮ್ಮ ಕಸಾಪ ಅಧ್ಯಕ್ಷ ಸ್ಥಾನ ಬಿಟ್ಟುಕೊಡಿ. ನಿಮಗೆ ಶೆಡ್ಡು ಹೊಡೆಯುವಂತೆ ಅವರು ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸುತ್ತಾರೆ. ಅದು ಬಿಟ್ಟು ರಾಜಕೀಯ ಮಾಡುತ್ತ ಯಾಕ್ರೀ ಇನ್ನೊಬ್ಬರಿಗೆ ಊಟದ ಉಪ್ಪಿನಕಾಯಿ ಆಗ್ತೀರಾ? ಇದೇನಾ ನಿಮ್ಮ ನಾಡು, ನುಡಿ ಕೆಲಸ... ಛೀ.

'ದಂಡುಪಾಳ್ಯ'ದ ಮಹಾರಾಯ...!

'ದೊಡ್ಡ ಮಗ ಇಲ್ಲೇ ಕೂಗಳತೆ ದೂರದಲ್ಲಿದ್ದಾನೆ. ನಾಲ್ಕು ವರ್ಷದ ಹಿಂದೆ ಆಕಸ್ಮಿಕವಾಗಿ ಎದುರಾಗಿದ್ದ. ಅಂದಿನಿಂದ ಇಲ್ಲಿಯವರೆಗೂ ಆತನ ಮುಖ ನಾ ನೋಡಿಲ್ಲ'
ಇದು ದಂಡುಪಾಳ್ಯ ಹೊಟೆಲ್(ನಮ್ಮ ಸಹದ್ಯೋಗಿಗಳು ಇಟ್ಟ ಹೆಸರು)ನಲ್ಲಿರುವ ವೇರ್ಟ ನಾರಾಯಣನ ಹತಾಶೆ ನುಡಿಗಳು.
ಈತ ಮುಗ್ದ, ಬಡಕಲು ದೇಹದವನಾದರೂ ಸದಾ ನಗುಮೊಗದ ವ್ಯಕ್ತಿ. ಹೊಟೆಲ್ಗೆ ಬಂದವರನ್ನು ಮನೆಯವರಂತೆ ಸತ್ಕರಿಸಿ ಆದರಿಸುವ ಅಪರೂಪದ ಮನುಷ್ಯ. ನಯ, ವಿನಯ, ಸೌಜನ್ಯ, ಪ್ರೀತಿ, ವಿಶ್ವಾಸ ಹೀಗೆ ಎಲ್ಲವನ್ನೂ ಮೈಗೂಡಿಸಿಕೊಂಡ ಮಹಾರಾಯ!
ಎಂದಿನಂತೆ, ಮಧ್ಯಾಹ್ನ ಊಟಕ್ಕೆ ಹೋದಾಗ ನಗುನಗುತ್ತಲೇ ಸ್ವಾಗತಿಸಿ 'ಅನ್ನ-ಸಾಂಬಾರ' ಮುಂದಿಟ್ಟ. ಸುಮ್ಮನೆ ಮಾತಿಗೆಳೆದೆ. ಆತ, ಒಂದೊಂದಾಗಿ ತನ್ನ ಬದುಕಿನ ಕಥೆಯನ್ನೇ ಬಿಚ್ಚಿಡುತ್ತ ಹೋದ. ಅದನ್ನು ಕೇಳುತ್ತಿದ್ದ ನನಗೆ ಬಾಯಿಗೆ ಹಾಕುತ್ತಿರುವ ತುತ್ತೆಲ್ಲ, ಗಂಟಲಲ್ಲಿಯೇ ಉಳಿದಿದ್ದವು. ಕಣ್ಣಂಚು ಒದ್ದೆಯಾಗುತ್ತಿದ್ದರೂ, ಬಲವಂತವಾಗಿ ತಡೆದುಕೊಳ್ಳುತ್ತಿದ್ದೆ. ಆದರೆ ಆತ ಮಾತ್ರ ಒಂದೇ ಓಘದಲ್ಲಿ ಯಾವ ಮುಚ್ಚು-ಮರೆಯಿಲ್ಲದೆ ತನ್ನ ಬದುಕನ್ನು ಬೆತ್ತಲಾಗಿಸುತ್ತಿದ್ದ. ಸಂದರ್ಭದಲ್ಲಿ ಆತ ನೋವನ್ನು ನುಂಗಿಕೊಳ್ಳುವ ಪರಿ, ಭಾವನೆಯ ಏರುಪೇರು ಮನಸ್ಸನ್ನು ಶಾಂತತೆಗೆ ನೂಕಿತ್ತು.
ನಾರಾಯಣ ಮಂಗಳೂರಿನಿಂದ ಹುಬ್ಬಳ್ಳಿಗೆ ಬಂದು ಒಂಬತ್ತು ವರ್ಷಗಳು ಗತಿಸಿವೆ. ದುಡಿದು ತಿಂದರೆ ಮಾತ್ರ ಹೊಟ್ಟೆಗೆ ಕೂಳು ಎನ್ನುವ ಪರಿಸ್ಥಿತಿ ಮನೆಯದ್ದಾಗಿತ್ತು. ಹೆಂಡತಿ ಜೊತೆ ಎರಡು ಜನ ಗಂಡು ಮಕ್ಕಳು. ಒಬ್ಬ ಮಗ ಹುಬ್ಬಳ್ಳಿಯಲ್ಲಿಯೇ ಬದುಕು ಕಟ್ಟಿಕೊಂಡಿದ್ದರೆ, ಇನ್ನೊಬ್ಬ ಊರಲ್ಲಿ ಹೊಟೆಲ್ ಉದ್ಯಮದಲ್ಲಿ ತೊಡಗಿದ್ದಾನೆ.
ನಾಲ್ಕು ವರ್ಷದ ಹಿಂದೆ ದೊಡ್ಡ ಮಗ ತನ್ನದಲ್ಲದ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದ. ಅದಕ್ಕೆ ನಾರಾಯಣ ವಿರೋಧ ವ್ಯಕ್ತಪಡಿಸಿದರು ಎಂದು, ಮನೆಯವರನ್ನೆಲ್ಲ ದೂರ ಮಾಡಿಕೊಂಡು ಪ್ರೀತಿಸಿದವಳನ್ನೇ ಮದುವೆಯಾಗಿ ಹುಬ್ಬಳ್ಳಿಯಲ್ಲಿಯೇ ನೆಲೆಸಿದ್ದಾನೆ. ಕೈತುಂಬ ಸಂಬಳ ಪಡೆಯುವ ಆ ಮಗ, ಐಷಾರಾಮಿ ಜೀವನ ನಡೆಸುತ್ತಿದ್ದಾನೆ!
'ಮಗನ ಇಚ್ಛೆಯ ವಿರುದ್ಧವಾಗಿ ಅಂದು ನಾನು ನಡೆದುಕೊಂಡ ಪರಿಣಾಮ, ಕೂಗಳತೆ ದೂರದಲ್ಲಿ ಮಗ-ಸೊಸೆ ಇದ್ದರೂ ಅವರನ್ನು ನೋಡಲಾಗದ ಪರಿಸ್ಥಿತಿ ನನ್ನದು. ಅಂದು ಆಕಸ್ಮಿಕವಾಗಿ ಅಂಗಡಿಯೊಂದರಲ್ಲಿ ಭೇಟಿಯಾಗಿದ್ದ. ಜನ್ಮ ನೀಡಿದ ತಂದೆ ಎನ್ನುವ ಭಾವವೂ ಆತನಲ್ಲಿ ಕಂಡು ಬಂದಿಲ್ಲ. ನಾನು ಮಾಡಿದ್ದು ತಪ್ಪು ಎಂದು ಹೇಳಬೇಕೆಂದು ಬಾಯಿ ತೆರೆಯುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದ' ಎಂದು ನಾಲ್ಕು ವರ್ಷದ ಹಿಂದೆ ಮಗನನ್ನು ಕಣ್ತುಂಬಿಸಿಕೊಂಡ ಕ್ಷಣ ನೆನಪಿಸಿಕೊಂಡಿದ್ದ ವೇರ್ಟ ನಾರಾಯಣ.
ದೊಡ್ಡ ಮಗ ಸಣ್ಣ ಮಗನ ಸಂಪರ್ಕದಲ್ಲಿದ್ದಾನಂತೆ. ಕರೆ ಮಾಡಿದಾಗ ತಾಯಿಯ ಯೋಗ-ಕ್ಷೇಮವಷ್ಟೇ ವಿಚಾರಿಸುತ್ತಾನಂತೆ. ಆದರೆ, 'ಅಪ್ಪ ಹೇಗಿದ್ದಾನೆ, ಎಲ್ಲಿದ್ದಾನೆ' ಎಂದು ಎಂದೂ ಕೇಳಿಲ್ಲವಂತೆ. 'ಇಲ್ಲೇ ಇರುವ ಮಗನನ್ನು ಒಮ್ಮೆ ನೋಡಿಕೊಂಡು ಬರಬೇಕು ಎಂದೆನಿಸಿದರೂ, ಅವನಿಗೆ ನಾ ಬೇಡವಾದ ಮೇಲೆ ಮತ್ಯಾಕೆ ಅಲ್ಲಿಗೆ ಹೋಗಿ ಅವನ ನೆಮ್ಮದಿ ಹಾಳು ಮಾಡಲಿ' ಎಂದು ತನಗೆ ತಾನೇ ನಾರಾಯಣ ಸಾಂತ್ವನ ಹೇಳಿಕೊಳ್ಳುತ್ತಾನೆ.
--------------------------------------------
ವಿಷಯವಿಷ್ಟೇ.... ಬೆಳೆದು ನಿಂತ ಮಕ್ಕಳನ್ನು ಸ್ನೇಹಿತರ ಹಾಗೆ ಕಾಣಬೇಕು ಎನ್ನುವ ಹಿತೋಕ್ತಿಯಿದೆ. ಅವರ ಇಚ್ಛೆಯ ವಿರುದ್ಧವಾಗಿ ನಡೆದುಕೊಂಡರೆ, ಹೆತ್ತವರನ್ನೂ ದೂರ ತಳ್ಳಿಬಿಡುತ್ತಾರೆ. ಇದು ಮಕ್ಕಳ ತಪ್ಪು, ಹೆತ್ತವರ ತಪ್ಪು ಎನ್ನುವ ವಿಮಶರ್ೆಗಿಂತ.... ಬೆಳೆದು ಬಂದ ಸಂಸ್ಕಾರ ಎಂತಹದ್ದು ಎಂದು ಯೋಚಿಸಬೇಕು. ಹಾಗಂತ ಇಲ್ಲಿ ನಾರಾಯಣನ ನಿಧರ್ಾರ ತಪ್ಪು ಎಂದಲ್ಲ, ಸರಿ ಎಂತಲೂ ಅಲ್ಲ. ನಾರಾಯಣ ಬೆಳೆದು ಬಂದ ಪರಿಸರ ಹಾಗಿತ್ತು, ಅದಕ್ಕೆ ತನ್ನ ಜಾತಿಯ ಹುಡುಗಿಯಲ್ಲ ಎಂದು ಮಗನ ಆಯ್ಕೆಯನ್ನು ವಿರೋಧಿಸಿದ್ದ.
ಈಗ ನಾರಾಯಣನಿಗೆ ತನ್ನ ತಪ್ಪಿನ ಅರಿವಾಗಿದೆ. ಬದಲಾಗಿದ್ದಾನೆ. ಮಗ ಆಧುನಿಕ ಜಗತ್ತಿಗೆ ತೆರದುಕೊಂಡಿದ್ದಾನೆ. ಕೈ ತುಂಬಾ ದುಡಿದು, ಸುಖಿ ಜೀವನ ನಡೆಸುತ್ತಿದ್ದಾನೆ. ಆದರೆ ಮನದಲ್ಲಿ ಇನ್ನೂ ಅಪ್ಪನ ಬಗ್ಗೆ ತಾತ್ಸಾರ ಪುಟಿದೇಳುತ್ತಲೇ ಇದೆ.
ಈಗ ಹೇಳಿ ತಪ್ಪು ಯಾರದ್ದು...? ತಪ್ಪಿಗೆ ಕ್ಷಮೆ ಎನ್ನುವುದೇ ಇಲ್ಲವೇ..? ಇಂತಹ ಎಷ್ಟೋ ಕಥೆಗಳು ನಮ್ಮ ಕಣ್ಮುಂದೆಯೇ ಇವೆ.