ಶುಕ್ರವಾರ, ಮೇ 6, 2016

ಮುಂಜಾನೆಯ ಸಾರ್ಥಕ್ಯ ಬೈಗುಳ...!

ಕೌಶಲ್ಯಾ ಸುಪ್ರಜಾರಾಮ....... ಎಂದಿನಂತೆ ಇವತ್ತು ಕೂಡಾ ಬೆಳ್ಳಂಬೆಳ್ಳಿಗೆ ಮೊಬೈಲ್ ಸುಪ್ರಭಾತ ಹೇಳುತ್ತಿತ್ತು. ಮುಂಜಾನೆಯ ಜೊಂಪು ನಿದ್ದೆಯಲ್ಲಿಯೇ ಕರೆ ರಿಸೀವ್ ಮಾಡಿ ಕಿವಿ ಹತ್ತಿರ ತಂದೆ. ಆ ಕಡೆಯಿಂದ ಒಂದೇ ಸಮನೆ ಬೈಗುಳದ ಸುಪ್ರಭಾತ. ಅದು ಕೂಡಾ ಒಂದೇ ಓಘದಲ್ಲಿ. ಅಬ್ಬಾ...! ಅರೆ ಕ್ಷಣದಲ್ಲಿ ಜೊಂಪು ನಿದ್ದೆಯೆಲ್ಲ ಮಾಯ.
ಬಂಗಾಳಕೊಲ್ಲಿಯ ತಟದಲ್ಲಿರು ತಂಗಿ, ಪ್ರತಿದಿನವೂ ಕೆಲಸಕ್ಕೆ ಹೋಗುವ ವೇಳೆ ನನಗೆ ಕರೆ ಮಾಡುವುದು ಒಂದು ಪರಿಪಾಠ. ಇಂದು ಕೂಡಾ ಎಂದಿನಂತೆಯೇ ಕರೆ ಮಾಡಿದ್ದಳು. ಆದರೆ ಮಾತಿನ ಒರಸೆ ಬದಲಾಗಿತ್ತು. ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಳು. 'ಏನಾಯ್ತೋ... ನಿದ್ದೆ ಮಾಡ್ತಾ ಇದ್ದಂವ್ಗೆ ಎಬ್ಸಿ ಬೈತಾ ಇದ್ಯಲ್ಲೋ' ಎಂದೆ. ಉಹೂಂ... ಅದ್ಯಾವುದು ಅವಳು ಕೇಳೋ ಸ್ಥಿತಿಲೇ ಇರಲಿಲ್ಲ. ಒಂದೆರಡು ನಿಮಿಷ ಬಿಟ್ಟು, ಅವಳೇ ' ಜಾ..' ಎಂದು ಕರೆದಳು. ಅಷ್ಟರಲ್ಲಿ ಅವಳು ಶಾಂತ ಆಗಿದ್ಲು.
ಆಗಿದ್ದು ಇಷ್ಟೇ... ಆದರೂ ಚಿಂತನಾರ್ಹ.
ಪ್ರತಿದಿನ ಅವಳು ಕೆಲಸಕ್ಕೆ ಹೋಗುವಾಗ ಬೀದಿನಾಯಿಗಳಿಗೆಂದು ಒಂದೊಂದು ಬಿಸ್ಕೆಟ್ ಪ್ಯಾಕ್ ಖರೀದಿಸಿಕೊಂಡು ಹೋಗುತ್ತಾಳೆ. ಇವತ್ತು ಕೂಡಾ ಒಂದು ಬಿಸ್ಕೆಟ್ ಪ್ಯಾಕ್ ಖರೀದಿಸಿ ಸೈದಾಪೇಟೆ ಸಬರಬನ್ ರೈಲ್ವೆ ನಿಲ್ದಾಣ ಕಡೆ ಹೆಜ್ಜೆ ಹಾಕ್ತಾ ಇದ್ದಳು. ಮಾರ್ಗ ಮಧ್ಯದಲ್ಲಿರುವ ಶಿವಪ್ಪನ ದೇವಸ್ಥಾನದ ಬಳಿ ಒಂದು ಬೀದಿ ನಾಯಿ ಅವಳ ಕಣ್ಣಿಗೆ ಕಂಡಿದೆ. ಆ ನಾಯಿ ರಸ್ತೆ ದಾಟಿ ಇವಳಿದ್ದ ಕಡೆ ಆಗಮಿಸುತ್ತಿತ್ತು. ಅದೇ ವೇಳೆ ಬೈಕ್ ಸವಾರನೊಬ್ಬ ನಿಧಾನವಾಗಿ ಬಂದು, ಆ ನಾಯಿಯ ಕಾಲ ಮೇಲೆ ಬೈಕ್ ಹಾಯಿಸಿದ್ದಾನೆ. ನೋವು ತಾಳದ ಆ ಮೂಕಪ್ರಾಣಿ ಒಂದೇ ಸಮನೆ ಅಳುತ್ತಿತ್ತು. ಪುಣ್ಯಾತ್ಮ ಬೈಕ್ ಸವಾರನಿಗೆ ತಾನು ತಪ್ಪು ಮಾಡಿದ್ದೇನೆ ಎನ್ನುವ ಪಾಪ ಪ್ರಜ್ಞೆಯೂ ಕಾಡದೆ, ಯಾವುದೋ ಸಾಧನೆ ಮಾಡಿದ ನಗುಮೊಗದಿಂದ ಮುಂದೆ ಸಾಗಿದ್ದಾನೆ. ಇದೆಲ್ಲವನ್ನೂ ನೋಡುತ್ತಿದ್ದ ಸಹೋದರಿಗೆ, ಕೋಪ ನೆತ್ತಿಗೇರಿತ್ತು. ಹಿಂದೆ ಮುಂದೆ ನೋಡದೆ, 'nonsence, ರಾಕ್ಷಸ' ಎಂದು ಆತನ ಮೇಲೆ ರೇಗಾಡಿದ್ದಾಳೆ.
ನೋವು ತಾಳದ ಆ ನಾಯಿ, ಅಲ್ಲಿಯೇ ಇರುವ ಶಿವಪ್ಪನ ಗುಡಿಯ ಮೈದಾನದ ಮೂಲೆಯಲ್ಲಿ ಅಳುತ್ತಾ ಕೂತಿತ್ತು. ಸಹೋದರಿ ಅದಿದ್ದಲ್ಲಿಗೆ ಹೋಗಿ, ತನ್ನಲ್ಲಿರುವ ಬಾಟಲಿ ನೀರನ್ನು ತಲೆಗೆ, ಕಾಲಿಗೆ ಹಾಕಿ, ಮೈದವಡಿ... ಬಿಸ್ಕಿಟ್ ನೀಡಿ ಬಂದಿದ್ದಾಳೆ. ಬೈಕ್ ಸವಾರನ ಅಮಾನವೀಯತೆ ಅವಳ ಕೋಪಕ್ಕೆ ಕಾರಣವಾಗಿತ್ತು.
'ಬೈಕ್ ನಿಲ್ಲಿಸಿ, ಕಣ್ಣಲ್ಲಾದರೂ ತಾನು ತಪ್ಪು ಮಾಡಿದ್ದೇನೆ ಎಂದು ನಾಯಿ ನೋಡಿ ಮರುಕಪಡಬಹುದಿತ್ತು. ಅದು ಮಾಡದ ಆತ, ಅದಕ್ಕಿಂತ ಹೆಚ್ಚು ನೋವು ಅನುಭವಿಸುತ್ತಾನೆ. ಏನೂ ಅರಿಯದ ಮೂಕ ಪ್ರಾಣಿ ಮೇಲೆ ದೌರ್ಜನ್ಯ ಎಸಗುವ ಇವರು, ಮನುಷ್ಯರಾಗಿ ಜೀವಿಸಲು ಯೋಗ್ಯತೆಯಿಲ್ಲ. ರಾಕ್ಷಸ ಕುಲದವರು. ಅವುವೇಕಿಗಳು. ಛೀ.. ಥೂ...' ಎಂದು ಏನೇನೋ ಬೈಯ್ಯುತ್ತುದ್ದಳು.
ಹೌದು.... ನಾವು ಮನುಷ್ಯರು. ನಮ್ಮ ಭಾವನೆಯನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತೇವೆ. ಆದರೆ, ಮಾತು ಬರದ ಮೂಕ ಪ್ರಾಣಿಗಳು ಅದರದೇ ರಾಗ, ಸ್ವರದ ಮೂಲಕ ನೋವನ್ನು ಹೊರಹಾಕುತ್ತದೆ. ಮಾತು ಬರುವ ನಾವು, ಮಾತು ಬರದ ಅವರ ನೋವನ್ನು ಅರಿಯಬೇಕು. ನಮ್ಮ ಹಾಗೆ, ಆ ಮೂಕ ಪ್ರಾಣಿಗಳಿಗೂ ಹಸಿವೆ, ಸಂಸಾರ, ಬದುಕು, ನೋವು, ನಲಿವು ಎಂಬುದಿರುತ್ತದೆ. ಅದನ್ನು ಅರ್ಥೈಸಿಕೊಳ್ಳದಿದ್ದರೆ, ಮನುಷ್ಯನಾಗಿ ಹುಟ್ಟಿಯೂ ಪ್ರಯೋಜನವಿಲ್ಲ. ಇವೆಲ್ಲ ನೊಡಿದರೆ, ಪ್ರಾಣಿಗಳೇ ಎಷ್ಟೋ ಮೇಲು ಮನುಷ್ಯರಿಗಿಂತ.
ತಂಗಿಯ ಮಾನವೀಯ ಕಳಕಳಿಗೆ ಹೆಮ್ಮೆ ಪಡಲೇ, ಅಥವಾ, ಮನುಷ್ಯನಲ್ಲಿ ಮನುಷ್ಯತ್ವವೇ ಸತ್ತು ಹೋಗಿದೆ ಎಂದು ಮರುಕ ಪಡಲೇ...?