ಬುಧವಾರ, ಡಿಸೆಂಬರ್ 31, 2014

ಮೌನ ಗರ್ಭದಲಿ........!!!!!!!!!

ಯಾಕೋ..... ಮಳೆ ಎಂದರೆ, ಮನಸ್ಸೇ ಹುಚ್ಚೆದ್ದು ಕುಣಿಯುತ್ತದೆ. ಮೈ-ಮನವೆಲ್ಲ ಪುಲಕಿತವನ್ನಾಗಿಸುತ್ತದೆ. ಸೃಷ್ಠಿ ಕ್ರಿಯೆಯಲ್ಲಿ ಮಳೆಗಿರುವ ಉತ್ಕೃಷ್ಠ ಸ್ಥಾನ ಬಹುಶಃ ಇನ್ಯಾವುದಕ್ಕೂ ಇಲ್ಲವೇನೋ....!
ಮುಂಗಾರು ಪ್ರಾರಂಭವಾಗುವುದೇ ತಡ, ಸದ್ದಿಲ್ಲದೆ ಇಳೆ ಹಸಿರಾಗುತ್ತಾಳೆ. ಬಿರು ಬಿಸಲ ಬೇಸಿಗೆಯಿಂದ ಬಾಯ್ತೆರೆದ ಬರಡು ಜಾಗದಲ್ಲೆಲ್ಲ ಹಸಿರು. ದೃಷ್ಟಿ ಹಾಯಿಸಿದಲ್ಲೆಲ್ಲ ಹಸಿರೋ... ಹಸಿರು...!! ಹಸಿರು ಹೊದ್ದ ಭೂಮ್ತಾಯಿ ಕಾರ್ಮುಗಿಲನ್ನೇ ದಿಟ್ಟಿಸಿ ನೋಡುವ ದೃಶ್ಯ ವರ್ಣನಾತೀತ!
ದಿನಂಪ್ರತಿ ಓಡಾಡುತ್ತಿರುವ ಸುತ್ತಮುತ್ತಲಿನ ಸ್ಥಳದಲ್ಲೆಲ್ಲ, ಈವರೆಗೆ ಇಲ್ಲದ ಹಸಿರುಗಳು ಚಿಕ್ಕದಾಗಿ ತಲೆ ಎತ್ತಿ ನಿಂತಿವೆ. ಅವುಗಳ ಮೇಲೆ ಬಿದ್ದ ಮಳೆ ಹನಿ, ಮೋಡದ ಮರೆಯಲ್ಲಿ ಇಣುಕು ಹಾಕುವ ರವಿಯ ನೋಟಕ್ಕೆ ನಾಚಿ ನೀರಾಗುತ್ತಿದೆ. ತಂಪನೆಯ ಬೀಸುವ ತಂಗಾಳಿಗೆ ಓಲಾಡುತ್ತ, ಫಳಫಳಿಸಿ ಅಲ್ಲೇ ಮರೆಯಾಗುತ್ತಿದೆ. ಪ್ರಕೃತಿಯ ಮಡಿಲಲ್ಲಿ ಸೃಷ್ಟಿಯಾಗುವ ಈ ನಿಸರ್ಗ ಸೌಂದರ್ಯಕ್ಕೆ ಮೈ-ಮನವೆಲ್ಲ ಪುಳಕ.
ಬೆಟ್ಟ-ಗುಡ್ಡಗಳೆಲ್ಲ ಮಂಜಿನಿಂದ ಆವರಿಸಿಕೊಂಡು, ಇಲ್ಲಿ ಕೇವಲ ಹಸಿರಿಗಷ್ಟೇ ಸ್ಥಾನಮಾನ... ಏನಿದ್ದರೂ ಅದರದ್ದೇ ಕಾರು ಬಾರು' ಎಂದು ತಮ್ಮ ಇರುವಿಕೆಯನ್ನೇ ಮರೆ ಮಾಚಿಸುತ್ತಾರೆ. ಭೋರ್ಗರೆದು ಸುರಿವ ವರ್ಷಧಾರೆಗೆ ಹಾದಿ-ಬೀದಿಗಳಲ್ಲೆಲ್ಲ ಹೊಂಡಬಿದ್ದು, ನೀರು ತುಂಬಿಕೊಂಡು... ಕಾರ್ಮುಗಿಲ ಮೋಡವನ್ನು ಅದರಲ್ಲಿ ಪ್ರತಿಫಲಿಸುತ್ತವೆ. ನಿಮಿಷಾರ್ಧದಲ್ಲಿ ಬಿಸಿಲು.... ಕಣ್ಣು ಮಿಟುಕಿಸುವಷ್ಟರಲ್ಲಿ ಮತ್ತೆ ವರ್ಷ...!! ಅವರಿಬ್ಬರ ಕಣ್ಣಾ-ಮುಚ್ಚಾಲೆಯಾಟ ಕಣ್ತುಂಬಿಸಿಕೊಳ್ಳುವುದೇ ಒಂದು ಹಿತಾನುಭವ. ಹಸಿ-ಹಸಿ ಮನಸ್ಸಲ್ಲಿ ಬೆಚ್ಚನೆಯ ನೆನಪುಗಳ ಮೆರವಣಿಗೆ....!! ಬಾನಂಗಳದಿ ಕಾರ್ಮೋಡ ಸರಿಯುವವರೆಗೂ....!!

ಅಘನಾಶಿನಿ ನೀ.... ಸೌಂದರ್ಯವತಿ...!!

ಇಂದಿನ ಧಾವಂತದ ದಿನಗಳಲ್ಲಿ ಪ್ರಕ್ಷುಬ್ಧಗೊಂಡ ಮೈಮನಗಳಿಗೆ ಅಘನಾಶಿನಿ' ತುಸು ನೆಮ್ಮದಿಯನ್ನು ನೀಡುವಲ್ಲಿ ಯಾವುದೇ ಸಂಶಯವಿಲ್ಲ. ವಿರಹ ತಾಳದೆ ನಲ್ಲೆಗಾಗಿ ಪರಿತಪಿಸುವ ನಲ್ಲನಂತೆ ಅರಬ್ಬೀ, ಅಘನಾಶಿನಿಯನ್ನು ಭೋರ್ಗರೆದು ಕರೆಯುತ್ತಾನೆ.
ಅವನ ಮನ ತಣಿಸಲೆಂದು `ಅಘನಾಶಿನಿ' ಅಳುಕುತ್ತ, ಬಳುಕುತ್ತ ವಯ್ಯಾರದಿಂದಲೇ ಅವನಲ್ಲಿ ಮಿಲನವಾಗುತ್ತಾಳೆ. ಆಹಾ.... ನಿಸರ್ಗ ಸೌಂದರ್ಯ ಎಂದರೆ ಇದೇ ಅಲ್ಲವೇ...!?
ಭಾವನಾತ್ಮಕ ಬೆಸುಗೆ.................
ಉದ್ಯೋಗದ ನಿಮಿತ್ತ ದೂರ ದೂರದ ಊರುಗಳಲ್ಲಿರುವವರು ವರ್ಷಕ್ಕೊಮ್ಮೆಯೋ, ಎರಡು ಬಾರಿಯೋ ಊರ 'ಮಣ್ಣ ಘಮ'ಕ್ಕೆ ಮೂಗೊಡ್ಡುತ್ತಾರೆ. ತವರಿಗೆ ತರಾತುರಿಯಿಂದ ಹೊರಟು ರಾತ್ರಿ ಇಡೀ ನಿದ್ದೆ ಮಾಡದೆ ಕಿಟಕಿ ಹೊರಗೆ ದೃಷ್ಟಿ ಹಾಯಿಸುತ್ತ, ಕೈಯ್ಯಲ್ಲಿರೋ ವಾಚಲ್ಲೋ, ಮೊಬೈಲಲ್ಲೋ ಸಮಯ ನೋಡುತ್ತ... ಯಾವಾಗ ಬೆಳಗಾಯಿತೋ ಎಂದು ಕಾತುರತೆಯಿಂದ ಕಾಯುತ್ತಿರುತ್ತಾರೆ. ಅವರ ಆ ಕಾತುರತೆಯನ್ನು ಕೊನೆಗೊಳಿಸುವುದು ಈ ಅಘನಾಶಿನಿ ತಾಯಿಯೆ! ದೊಡ್ಡಮನೆ ಘಟ್ಟದ ಹಾದಿಯಿಂದ ಬಂದರೆ ಶರಾವತಿಯು ಸೆರಗೊಡ್ಡಿ ಸ್ವಾಗತಿಸಿದರೆ, ಶಿರಸಿ-ಕಾರವಾರದ ಮಾರ್ಗದಿಂದ ಬಂದರೆ ಆಡಿದ, ಕುಣಿದ, ಕುಪ್ಪಳಿಸಿದ, ಈಜಿದ, ಗಾಳ ಹಾಕಿದ ಪಾಪನಾಶಿನಿ.... ಬಾ ಕಂದ ಎಂದು ಮಡಿಲು ಹಾಸಿ ಮಮತೆಯಿಂದ ಬರ ಮಾಡಿಕೊಳ್ಳುತ್ತಾಳೆ. ಆಕೆಯನ್ನು ಕಂಡೊಡನೆ ಕರಾವಳಿಯ ಕಂಪು, ನಮ್ಮದು ಅನ್ನೋ ಭಾವ ಸ್ವಜಾಗೃತವಾಗಿ ಬಿಡುತ್ತದೆ. ಆಕೆಯನ್ನೇ ದಿಟ್ಟಿಸಿ ನೋಡುತ್ತ ಸಾಗುವ ಆ ಕ್ಷಣದಲ್ಲಿ ಅಮಿತಾನಂದದ ಕಣ್ಣೀರು ಅರಿವಿಲ್ಲದೇ....!
ತಾಯಿ ಜೊತೆಗಿನ ಭಾವನಾತ್ಮಕ ಬೆಸುಗೆಯೇ ಅಂತಹದ್ದು...!!

ಮಂಗಳವಾರ, ಡಿಸೆಂಬರ್ 30, 2014

ಅವಳನ್ನು.... ಅವಳ ಪಾಡಿಗೆ ಬಿಟ್ಟು ಬಿಡೋಣ..... ಪ್ಲೀಸ್...!! 

ಇವೆಲ್ಲ ಆಗಬಾರದಿತ್ತು. ಆಗಿಹೋಗಿದೆ. ವಿಷಾದವೇ...! ಈ ಘಟನೆಗಳು ನಮಗೆಲ್ಲರಿಗೂ ಪಾಠವಾಗಲಿ.ಇನ್ನಾದರೂ ಪ್ರಕೃತಿ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಲಿ. ಹರಿಯುವ ನದಿಗೆ, ತೊರೆಗೆ ಎಂದೂ ತಡೆಯೊಡ್ಡುವುದು ಬೇಡ. ಸ್ವಚ್ಛಂದವಾಗಿ ಬೆಳೆದು ನಿಂತ ಮರ-ಗಿಡಗಳನ್ನು ಕಡಿಯದೇ ಅಲ್ಲಿ ಇನ್ನಷ್ಟು ಮರಗಳನ್ನು ಬೆಳೆಸೋಣ. ಪ್ರಕೃತಿ ವಿರುದ್ಧ ಈಜಿ ಜಯಸಲು ನಮ್ಮಿಂದ ಸಾಧ್ಯವಾಗದು. ಒಂದು ವೇಳೆ ಗೆದ್ದೆನೆಂದು ಬೀಗಿದರೂ ಅದು ಕ್ಷಣಿಕವೇ ಹೊರತು ನಿರಂತರವಲ್ಲ.

ನಾಗರಾಜ್ ಬಿ.ಎನ್.
ಪ್ರಕೃತಿ ಮಾತೆ ಈ ಹಿಂದೆ ಎಂದೂ ಯಾರ ಮೇಲೂ ದಬ್ಬಾಳಿಕೆ ನಡೆಸಿಲ್ಲ. ಈಗಲೂ ನಡೆಸುತ್ತಿಲ್ಲ. ಹಾಗೆಯೇ ಮುಂದೆಯೂ ನಡೆಸುವುದಿಲ್ಲ. ಹಾಗಂತ ಅವಳ ತಂಟೆಗೆ ಬಂದವರನ್ನು ಮಾತ್ರ ಅವಳು ಎಂದೂ ಬಿಟ್ಟಿಲ್ಲ. ಬಿಡುವುದೂ ಇಲ್ಲ...!!
ಪ್ರಕೃತಿ ಹೇಗಿದ್ದಾಳೋ ಹಾಗೆಯೇ ನಾವು ಅವಳನ್ನು ಸ್ವೀಕರಿಸಬೇಕು... ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು, ನಮ್ಮ ಸ್ವಾರ್ಥಕ್ಕಾಗಿ ಅವಳ ಮೇಲೆ ದೌರ್ಜನ್ಯ ಎಸಗುತ್ತ, ಅವಳ ಅಸ್ತಿತ್ವಕ್ಕೆ ಪೆಟ್ಟು ನೀಡಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ತಾಜಾ
ಉದಾಹರಣೆ... ಮಹಾರಾಷ್ಟ್ರ ಪುಣೆಯ 'ಮಾಲಿನ್' ಗ್ರಾಮ.
ಸಹ್ಯಾದ್ರಿ ತಪ್ಪಲಿನಲ್ಲಿ ವಾಸಿಸುತ್ತಿರುವ ವನವಾಸಿ ಸಮಾಜದ ಸುಮಾರು 60 ಕುಟುಂಬಗಳು ಜುಲೈ 30ರಂದು ಗುಡ್ಡ ಜರಿದ ಪರಿಣಾಮ ಸಂಪೂರ್ಣ ನೆಲಸಮವಾಗಿದೆ. 300ರಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿ, ಹೂತುಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈವರೆಗೆ ಅವಶೇಷದಡಿ ಸಿಲುಕಿರುವ ಕೇವಲ 40ರಷ್ಟು ಮೃತ ದೇಹಗಳು ಮಾತ್ರ ದೊರಕಿವೆ. ಕಾರ್ಯಾಚರಣೆ ಸಮರೋಪಾದಿಯಲ್ಲಿ ಮುಂದುವರಿದೆ.
 ಪುಣೆಯಿಂದ ಕೇವಲ 120 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಜನರು ಆಧುನಿಕತೆಗೆ ಈಗಷ್ಟೆ ತೆರೆದುಕೊಳ್ಳುತ್ತಿದ್ದರು. ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಕೃಷಿ ಬೇಸಾಯ ಮಾಡಿ ಜೀವನ ಸಾಗಿಸುತ್ತಿದ್ದರು. ತಾವು ವಾಸಿ
ಸುವ ಮನೆಗಳ ಹಿಂದೆ ಇರುವ ಇರುವ ಬೆಟ್ಟವು ಇವರಿಗೆ ಸದಾ ಕಾಲ ನೆರಳಾಗಿ ಆಸರೆ ನೀಡುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಡದೆ ಸಉರಿಯುತ್ತಿರುವ ಮಳೆಯಿಂದಾಗಿ, ಆಸರೆ ನೀಡಿದ ಬೆಟ್ಟವೇ ಇವರ ಪ್ರಾಣಕ್ಕೆ ನೆರವಾಯಿತು. ನೋಡು ನೋಡುತ್ತಿದ್ದಂತೆ ಆ ಬೆಟ್ಟ ಮುನ್ನೂರಕ್ಕೂ ಹೆಚ್ಚು ಜೀವಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು...!!
ಬೆಟ್ಟ ಕುಸಿಯಲು ಕಾರಣವೇನು.....?
ಇತ್ತೀಚೆಗೆ ಅಲ್ಲಿ ವಾಸಿಸುವ ವನವಾಸಿ ಕುಟುಂಬದವರು ಕೃಷಿ ಚಟುವಟಿಕೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುಡ್ಡದ ತಪ್ಪಲಿನಲ್ಲಿರುವ ಭೂಮಿಯನ್ನು ಕಡಿದು, ಕೊಚ್ಚಿ ಸಮತಟ್ಟು ಮಾಡಿದ್ದರು. ಅಲ್ಲದೆ, ವ್ಯವಸಾಯಕ್ಕೆ ಬೇಕಾಗುವ ರೀತಿಯಲ್ಲಿ ಬೆಟ್ಟವನ್ನು ಕಡಿದಿದ್ದರು. ಬೆಟ್ಟಕ್ಕೆ ಹೊಂದಿಕೊಂಡಿರುವ ನೂರಾರು ಮರಗಳನ್ನು ಕಡಿದು ಬೆಟ್ಟದ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದರು. ಅಲ್ಲದೆ, ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿ, ತಮ್ಮಲ್ಲಿರುವ ಶಕ್ತಿ ಪ್ರದರ್ಶಿಸಿದ್ದರು. ಸಂದರ್ಭದಲ್ಲಿ ಭಾರೀ ಗಾತ್ರದ ಯಂತ್ರಗಳು ಓಡಾಡಿ ಬೆಟ್ಟವನ್ನೇ ಅಲುಗಾಡಿಸಿತ್ತು. ಇವೆಲ್ಲದರ ಪರಿಣಾಮವಾಗಿ ಬೆಟ್ಟದ ಮಣ್ಣು ಸಡಿಲಗೊಂಡಿದ್ದವು. ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಸಡಿಲಗೊಂಡ ಮಣ್ಣುಗಳು ಕುಸಿಯತೊಡಗಿದ್ದವು. ಕ್ಷಣ ಮಾತ್ರದಲ್ಲಿ ಮಣ್ಣು, ಕೆಸರಿನಡಿ ನೂರಾರು ಜೀವಗಳು ಹೂತು ಹೋದವು..!!
ಪ್ರಕೃತಿ ತನಗೆ ಹೇಗೇ ಬೇಕೋ ಹಾಗೆ ತನ್ನ ಸುತ್ತಮುತ್ತಲಿನ ವಾತಾವರಣವನ್ನು ನಿರ್ಮಿಸಿಕೊಂಡಿರುತ್ತಾಳೆ. ಅವಳ ಪಾಡಿಗೆ ಅವಳನ್ನು ಬಿಟ್ಟು ಬಿಡಬೇಕು. ಅವಳು ಎಂದಿಗೂ ಮಾನವನ ಮೇಲೆ ತನ್ನ ಬಲ ಪ್ರದರ್ಶನ ಮಾಡಿಲ್ಲ. ಮಾನವನೇ ತನ್ನ ಸ್ವಾರ್ಥಕ್ಕಾಗಿ ಅವಳ ಮುಂದೆ ತನ್ನ ಬಲ ಪ್ರದರ್ಶನ ಮಾಡುತ್ತಾನೆ. ಕಳೆದ ವರ್ಷ ನಡೆದ ಕೇದಾರನಾಥದ ರುದ್ರ ಪ್ರಳಯಕ್ಕೂ ಕೂಡಾ ಮಾನವನ ಸ್ವಾರ್ಥವೇ ಕಾರಣ..!
ಇವೆಲ್ಲ ಆಗಬಾರದಿತ್ತು. ಆಗಿಹೋಗಿದೆ. ವಿಷಾದವೇ...! ಈ ಘಟನೆಗಳು ನಮಗೆಲ್ಲರಿಗೂ ಪಾಠವಾಗಲಿ.ಇನ್ನಾದರೂ ಪ್ರಕೃತಿ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಲಿ. ಹರಿಯುವ ನದಿಗೆ, ತೊರೆಗೆ ಎಂದೂ ತಡೆಯೊಡ್ಡುವುದು ಬೇಡ. ಸ್ವಚ್ಛಂದವಾಗಿ ಬೆಳೆದು ನಿಂತ ಮರ-ಗಿಡಗಳನ್ನು ಕಡಿಯದೇ ಅಲ್ಲಿ ಇನ್ನಷ್ಟು ಮರಗಳನ್ನು ಬೆಳೆಸೋಣ. ಪ್ರಕೃತಿ ವಿರುದ್ಧ ಈಜಿ ಜಯಸಲು ನಮ್ಮಿಂದ ಸಾಧ್ಯವಾಗದು. ಒಂದು ವೇಳೆ ಗೆದ್ದೆನೆಂದು ಬೀಗಿದರೂ ಅದು ಕ್ಷಣಿಕವೇ ಹೊರತು ನಿರಂತರವಲ್ಲ.
ಪ್ರಕೃತಿ ಮಾತೆಯನ್ನು ಅವಳ ಪಾಡಿಗೆ ಬಿಟ್ಟು ಬಿಡೋಣ... ಹಾಗೆಯೇ, ಅವಳ ಮಡಿಲಲ್ಲಿ ಅವಳ ಮಕ್ಕಳಾಗಿ ನಾವು ಬದುಕೋಣ.... ಪ್ಲೀಸ್....!

ಹಸಿರೊಡಲ ಭಾವ.....!

ಚಿತೆಯಿಂದ ಎದ್ದು ಬಂದರೂ
ಚಿತ್ತದಲ್ಲಿಲ್ಲ ಯಾವೊಂದು ಭಾವ
ಸತ್ತು ಕಿತ್ತ ಭಾವನೆಯ ಕಳೇಬರದಿ
ಕತ್ತೆತ್ತಿ ನೋಡುತಿಹೆ ದಿಗಂತದೆಡೆ...!!
ಪಟಪಟನೇ ಹಾರಾಡಿದ ಬಣ್ಣದ ಪಟ
ಕುಳಿರ್ಗಾಳಿಗೆ ಸಿಲುಕಿ ಮಾಯವಾಗಿದೆ
ಸದ್ದಿಲ್ಲದೆ ಸುಡುತಿರುವ ಭಾವ ದೀಪ್ತಿ
ಇತಿಹಾಸ ಬರೆಯಲು ಸಜ್ಜಾಗಿದೆ...!!
ಬಳೆಯ ರಿಂಗಣಗಳಿಲ್ಲ, ಗೆಜ್ಜೆಯ ನಾದಗಳಿಲ್ಲ
ಕಾಡುವ ಸವಿ ಮಧುರ ನೆನಪುಗಳಿಲ್ಲ
ಬಿದಪ್ಪಿ ಸಂತೈಸಿ ನೇವರಿಸಿದ ಕೈಗಳಿಲ್ಲ
ರುದ್ರತಾಂಡವದ ನರ್ತನವೇ ಎಲ್ಲ...!!
ನಟ್ಟ ನಡು ದಾರಿಯಲಿ ಕತ್ತಲೆಯ ಅಧಿಪತ್ಯ
ಭಾರವಾದ ಹೆಜ್ಜೆಯಲಿ ಬದುಕು ನೇಪಥ್ಯ
ಇರಲಿರಲಿ ಇದೊಂದು ಒಬ್ಬಂಟಿ ಜೀವ
ಸ್ಮಶಾನದಲೂ ಇದ್ದಾನೆ ಆ ರುದ್ರ ದೇವ...!
ಬಟ್ಟ ಬಯಲಲ್ಲಿ ನಿಂತ ಒಂಟಿ ಗಿಡ
ಜೀವ ಜಲದ ಹಂಗಿಲ್ಲದೆ ಮರವಾಗಿದೆ ನೋಡ
ಒಡಲಾಳದ ಬೇಗುದಿಯ ಬಚ್ಚಿಟ್ಟುಕೊಂಡು
ಬೆಳೆಯುತ್ತಿದೆ ಎತ್ತರಕೆ ತಲೆಯೆತ್ತಿ ನೋಡ...!
-ನಾಗರಾಜ್ ಬಿ.ಎನ್. 

ಸಂಬಂಧಗಳು ಕೂಡಿ ಕಳೆಯುವ ಲೆಕ್ಕಾಚಾರವೇ...?
ಕಾಲಾಯ ತಸ್ಮೈ ನಮಃ.................!
 

'ಮಾನವ ಜನ್ಮ ಹಾಳು ಮಾಡಿಕೊಳ್ಳಬೇಡಿರಾ ಹುಚ್ಚಪ್ಪಗಳಿರಾ....' ಎಂಬಂತೆ ಭಗವಂತ ನೀಡಿದ ಸುಂದರ ಮಾನವ ಜನ್ಮವನ್ನು ಪ್ರೀತಿ, ಸ್ನೇಹ, ವಿಶ್ವಾಸದಿಂದ ಕಾಪಾಡಿಕೊಂಡು ಹೋಗಬೇಕು. ನಂಬಿ ಬಂದ ಬಾಳ ಸಂಗಾತಿಯ ಜೊತೆ ನಂಬಿಕಸ್ಥರಾಗಿ ಬದುಕಿನ ಬಂಡಿಯನ್ನು ಮುನ್ನಡೆಸಬೇಕು. ಮನಸ್ಸು ಮತ್ತು ದೇಹ ಒಬ್ಬರಿಗೇ ಮೀಸಲಾಗಿ ಸಮರ್ಪಣಾ ಭಾವದಿಂದ ದಾಂಪತ್ಯ ಗೀತೆಯನ್ನು ಬರೆಯಬೇಕು.....

ನಾಗರಾಜ್ ಬಿ.ಎನ್.
ಕಾಲಚಕ್ರದ ಉರುಳಾಟದಲ್ಲಿ ಬದುಕಿನ ಶೈಲಿಯೂ ಹಂತ ಹಂತವಾಗಿ ಬದಲಾಗಿಬಿಟ್ಟಿದೆ. ಪ್ರತಿಕ್ಷಣವೂ ಕೂಡಾ ಆಧುನಿಕತೆಯ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗಿ ಒದ್ದಾಡುತ್ತಿದ್ದೇವೆ. ಮಾನವ ಸಂಬಂಧಗಳೆಲ್ಲ ಕೂಡಿ-ಕಳೆಯುವ ಲೆಕ್ಕಾಚಾರವಾಗಿ, ವ್ಯವಹಾರದ ದ್ಯೋತಕವಾಗಿಬಿಟ್ಟಿದೆ. ಸಂಸ್ಕಾರ, ಸಂಸ್ಕೃತಿ ಎನ್ನುವುದು ಮಖಾಡೆ ಮಲಗಿ ಇನ್ನಿಲ್ಲವಾಗಿದೆ. 'ಪರಿವರ್ತನೆ ಜಗದ ನಿಯಮ' ಎಂದರೆ ಇದೇನಾ....!!? ಹಿರಿಯರು ನಡೆದ ಸನ್ಮಾರ್ಗಗಳು ಈಗ ಮುಸುಕು ಮುಸುಕಾಗಿ, ಕಂಡೂ ಕಾಣದಂತಾಗಿವೆ. ಅವರ ಭವ್ಯ ಪರಂಪರೆ ಅವರ ಜೊತೆ ಜೊತೆಯಲ್ಲಿಯೇ ಮಣ್ಣಾಗಿ ಇತಿಹಾಸದ ಕಾಲ ಗರ್ಭದಲ್ಲಿ ಹೂತು ಹೋಗುತ್ತಿವೆ. ಅಪ್ಪಟ ಸಾಂಪ್ರದಾಯಿಕ ಶೈಲಿಯ ಆ ಬದುಕು ಬೇಕೆನಿಸಿದರೂ ಈಗ ನಮಗೆ ಸಿಗಲಾರದು. ಈಗೇನಿದ್ದರೂ ವ್ಯಾವಹಾರಿಕ ಜಗತ್ತಿನ ಬೇಕು-ಬೇಡಗಳ ಜೀವನ ಮಾತ್ರ. ಲೌಕಿಕ ಪ್ರಪಂಚದಲ್ಲಿ ಸ್ವಾರ್ಥಕ್ಕೆ ಪ್ರಾಮುಖ್ಯತೆ ನೀಡಿ ನಮ್ಮದಾದಂತ ಸಂಸ್ಕಾರವನ್ನೇ ಅಧೋಗತಿಗೆ ಕೊಂಡೊಯ್ಯುತ್ತಿದ್ದೇವೆ.
 ಸ್ವೇಚ್ಛಾಚಾರದ ಬದುಕು ಬೇಕೇ...?
ಈ ಹಿಂದೆ ನಮ್ಮ ಶರಣರು ದೇಹವನ್ನು ದೇವಾಲಯಕ್ಕೆ ಹೋಲಿಸಿ 'ದೇಹವೆ ದೇವಾಲಯ' ಎಂದು ಹಾಡಿ ಹೊಗಳಿದ್ದರು. ದೇಹದಲ್ಲಿರುವ ಜೀವಾತ್ಮನಿಗೆ ಪರಮಾತ್ಮನ ಸ್ಥಾನ ನೀಡಿ, ಪೂಜಿಸಿ, ಆರಾಧಿಸಿ ಎಂದು ಸೂಕ್ಷ್ಮವಾಗಿ ತಿಳಿ ಹೇಳಿದ್ದರು. ಅಷ್ಟೊಂದು ಉತ್ಕೃಷ್ಠ ಸ್ಥಾನಕ್ಕೆ ಏರಿಸಿದ ದೇಹ, ಪ್ರಸ್ತುತ ದಿನಗಳಲ್ಲಿ ವ್ಯಾವಹಾರಿಕ ಸರಕಾಗುತ್ತಿರುವುದು ವಿಪಯರ್ಾಸದ ಸಂಗತಿ....! ಈ ಜಗತ್ತಿನಲ್ಲಿ ಹಣಕ್ಕಾಗಿ ಏನೆಲ್ಲ ನಡೆಯುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು ಕಾಯಾ, ವಾಚಾ, ಮನಸಾ ಜೀವನ ಪರ್ಯಂತ ಜೊತೆಯಾಗಿಯೇ ಬಾಳಿ ಬದುಕುತ್ತೇನೆ ಎಂದು ಹೇಳಿದವರು, ಎಲ್ಲ ರೀತಿ-ನೀತಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವತರ್ಿಸುತ್ತಾರೆ. ನಾಲ್ಕು ಗೋಡೆಗಳ ನಡುವೆ ಮಾತ್ರ ಸೀಮಿತವಾಗಿರಬೇಕಾದ ಕೆಲವು ವೈಯಕ್ತಿಕ ಬದುಕು, ಹಾದಿ-ಬೀದಿಯಲ್ಲಿ ಹರಾಜಾಗುತ್ತಿವೆ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ಆಡುವವರ ನಾಲಿಗೆಯ ಮೇಲೆ ಅಂಕೆಯಿಲ್ಲದೆ ಅದು ಹರಿದಾಡುತ್ತಿದೆ. ಆದರೂ ಕೂಡಾ ಇದ್ಯಾವುದರ ಪರಿವೇ ಇಲ್ಲದಂತೆ ಸ್ವೇಚ್ಛೆಯಿಂದ ಬದುಕು ಮುನ್ನಡೆಸುತ್ತಾರೆ.ದೈವ ಸಂಕಲ್ಪಿತ ಜೋಡಿಗಳು....!!ದಾಂಪತ್ಯದ ಗೀತೆ ಹಾಡಿದವರೇ ಇರಲಿ... ಪ್ರೇಮ ರಾಗದಲ್ಲಿ ಓಲಾಡುತ್ತಿರುವ ಜೋಡಿಗಳೇ ಇರಲಿ... ಇಬ್ಬರು ಸಹ ಪರಸ್ಪರ ಒಬ್ಬರನ್ನೊಬ್ಬರು ಅರಿತು ಬಾಳಬೇಕು.
'ಒಂದು ಗಂಡಿಗೊಂದು ಹೆಣ್ಣು' ಎಂಬ ಕೆ.ಎಸ್. ನರಸಿಂಹಸ್ವಾಮಿಯವರ ಮಾತಿನಂತೆ, ನಂಬಿ ಬಂದ ಹುಡಗಿ/ಹುಡುಗನಿಗೆ ಜೀವನ ಪರ್ಯಂತ ನಂಬಿಕಸ್ಥರಾಗಿಯೇ ಬದುಕಬೇಕು. ಹೆಣ್ಣು ಹೇಗೆ ತನ್ನ ಗಂಡ ಶ್ರೀರಾಮನಂತೆ ಇರಬೇಕೆಂದು ಬಯಸುತ್ತಾಳೆಯೋ ಹಾಗೆಯೇ, ಗಂಡು ಕೂಡಾ ತನ್ನ ಹೆಂಡತಿ ಸೀತೆಯಂತೆಯೇ ಇರಬೇಕೆಂದು ಬಯಸುವುದರಲ್ಲಿ ಯಾವ ತಪ್ಪಿಲ್ಲ ಅಲ್ಲವೇ?
ಅಮ್ಮನ ಮಡಿಲಲ್ಲಿ ಬೆಳೆದ ಹುಡುಗ ಮದುವೆಯಾದ ನಂತರ ಜೊತೆಯಾಗಿ ಬಂದ ಹುಡುಗಿಯ ಜೊತೆ ಬಾಳಿ ಬದುಕ ಬೇಕಾಗುತ್ತದೆ. ಅವನಿಗೆ ಅವಳೇ ಸರ್ವಸ್ವವಾಗಿ, ತನ್ನೆಲ್ಲ ಬೇಕು ಬೇಡಗಳನ್ನು ಪೂರೈಸುವ ದೇವತೆಯಾಗುತ್ತಾಳೆ. ಹಾಗೆಯೇ, ಹೆಣ್ಣು ಕೂಡಾ ತನ್ನೆಲ್ಲ ರಕ್ತ ಸಂಬಂಧಿಗಳನ್ನು ಬಿಟ್ಟು ಸುಂದರ ಬದುಕಿನ ಕನಸು ಕಟ್ಟಿಕೊಂಡು ಹುಡುಗನನ್ನು ಹಿಂಬಾಲಿಸುತ್ತಾಳೆ. ಅವಳ ಪಾಲಿಗೆ ಆಕೆಯ ಗಂಡ ಸಾಕ್ಷಾತ್ ಭಗವಂತನೇ...!! ಹೀಗೆ ಇಬ್ಬರೂ ಕೂಡಾ ಪರಸ್ಪರ ಒಬ್ಬರಿಗೊಬ್ಬರು ದೈವ ಸಮಾನರಾಗಿ ಕಂಡು ಬರುತ್ತಾರೆ. ಇಂತಹ ಅದ್ಭುತ ದೈವ ಸಂಕಲ್ಪಿತ ಕೆಲವು ಜೋಡಿಗಳು ಬರ ಬರುತ್ತ ಹಾದಿ ತಪ್ಪಿ ಎಲ್ಲೆ ಮೀರುತ್ತಿರುವುದು ವಿಷಾದನೀಯ.
ಪಿಸುಮಾತಿನ ಪ್ರೀತಿ.....!!
ಪ್ರೀತಿ ಯಾವಾಗಲೂ ಒತ್ತಾಯ ಪೂರ್ವಕವಾಗಿ ಹುಟ್ಟಿಕೊಳ್ಳುವುದಿಲ್ಲ. ಅದೊಂದು ಆಕಸ್ಮಿಕ ಅವಘಡ. ಆ ಸನ್ನಿವೇಶದಲ್ಲಿ ಮೇಳೈಸಿದ ಹೃದಯಾಂತರಾಳದ ಪ್ರೀತಿ ಪರಸ್ಪರ ವಿನಿಮಯ ಮಾಡಿಕೊಂಡಾಗ ಅದು ಅರ್ಥ ಪಡೆದುಕೊಳ್ಳುತ್ತದೆ. ಆಗ ಸುಂದರ ಪ್ರೀತಿಯ ಮಹಾಕಾವ್ಯ ರಚನೆಯಾಗಿ, ಪರಸ್ಪರ ಬದುಕಿಗೆ ಸ್ಪೂರ್ತಿಯಾಗುತ್ತದೆ. ಅಲ್ಲಿ ಮನಸ್ಸುಗಳು ಪಿಸುಮಾತಿನೊಂದಿಗೆ ಬೆರೆತಿರುತ್ತವೆ. ಕನಸಿನ ಗೂಡನ್ನು ಹೆಣೆದುಕೊಂಡು ನೀಲಾಕಾಸದಲ್ಲಿ ತೇಲಾಡುತ್ತಿರುತ್ತವೆ. ಅಂದರೆ ಮಾನಸಿಕವಾಗಿ ಅವರ ಮನಸ್ಸುಗಳು ಒಂದಾಗಿರುತ್ತವೆ
 ಹೀಗೆ ಒಂದಾದ ಮನಸ್ಸುಗಳು ಉದ್ದೇಶ ಪೂರ್ವಕವಾಗಿಯೋ, ಅನಿವಾರ್ಯವಾಗಿಯೋ ದೂರಾಗುತ್ತವೆ. ಆಗ ಆ ಮನಸ್ಸುಗಳು ಇನ್ನೊಂದು ಮನಸ್ಸಿನೊಂದಿಗೆ ಸಮ್ಮಿಲನಗೊಳ್ಳುತ್ತವೆ. ಈಗಾಗಲೇ ಒಬ್ಬರಿಗೆ ಮನಸ್ಸು ನೀಡಿ ಬದುಕಿನ ಎಲ್ಲ ಪುಟಗಳಲ್ಲಿ ಸುಂದರ ಕಾವ್ಯ ಬರೆದಿರುತ್ತಾರೆ. ಆದರೆ, ಬದಲಾದ ಸನ್ನಿವೇಶದಿಂದ ದೇಹ ಇನ್ನೊಬ್ಬರಿಗೆ ನೀಡಲು ಅಣಿಯಾಗಬೇಕಾಗುತ್ತದೆ. ಮನಸ್ಸು ಒಬ್ಬರಿಗೆ ನೀಡಿ ದೇಹ ಇನ್ನೊಬ್ಬರಿಗೆ ನೀಡಿದರೆ ಅದಕ್ಕೇನರ್ಥ...!? ಆ ವೈವಾಹಿಕ ಜೀವನ ನಿಜವಾಗಿಯೂ ಸಾರ್ಥಕತೆ ಪಡೆದುಕೊಳ್ಳುತ್ತವೆಯೇ...?

ಕುಕ್ಕಿ ತಿನ್ನದ ಹತ್ತಿಕ್ಕಿದ ಭಾವನೆ...!!

-ನಾಗರಾಜ ಬಿ.ಎನ್
ಕರೆದಾಗ ಬಂದು ಸಂತೈಸುತ್ತದೆ
ತಲೆಯ ನೇವರಿಸುತ್ತ ಬಗಿದಪ್ಪಿ ಮುದ್ದಾಡುತ್ತದೆ
ಜೋಗುಳವ ಹಾಡಿ ಮಲಗಿಸುತ್ತದೆ
ಸದ್ದಿಲ್ಲದೆ ಸರಸರನೆ ಹೊರಟು ಹೋಗುತ್ತದೆ
ಪಾಪ... ಹತ್ತಿಕ್ಕಿದ ಭಾವನೆ ಕುಕ್ಕಿ ತಿನ್ನುವುದಿಲ್ಲ...!!
ಆಡಿ ನಲಿದ, ಕೂಡಿ ಬೆಳೆದ ವರುಷಗಳೆಷ್ಟೋ
ಕೋಪ-ತಾಪಕ್ಕೆ ಬಲಿಯಾದ ದಿನಗಳೆಷ್ಟೋ
ಜೊತೆ ಜೊತೆಯಾಗಿ ಹಣೆದ ಕನಸುಗಳೆಷ್ಟೋ
ಅವೆಲ್ಲ ರಾತ್ರಿ ಬಿದ್ದ ಕನಸುಗಳಂತಾಗಿ
ಕುಳಿರ್ಗಾಳಿಯ ಹೊಡೆತಕ್ಕೆ ಎಲ್ಲೊ ಹಾರಿ ಹೋಗಿವೆ
ಪಾಪ... ಹತ್ತಿಕ್ಕಿದ ಭಾವನೆ ಕುಕ್ಕಿ ತಿನ್ನುವುದಿಲ್ಲ...!!

ಉಸಿರಲ್ಲಿ ಉಸಿರಾಗಿ, ಸರ್ವಸ್ವವೇ ಆಗಿ
ಎರಡು ದೇಹದಲಿ ಬೆರೆತ ಒಂದೇ ಆತ್ಮವಾಗಿ
ಭಾವನೆ ಜೊತೆಯಲ್ಲಿ ಕಾಲವ ದೂಡಿ
ಮುಸ್ಸಂಜೆ ಬದುಕಿನ ಹೆಜ್ಜೆಯ ನೋಡಿ
ಅರಿವಿಲ್ಲದೆ ಸುರಿದ ಜಡಿ ಮಳೆಗೆ ಮೈಯೊಡ್ಡಿ
ಇದ್ದ-ಬಿದ್ದ ಭಾವನೆ ದೂರವಾದವಲ್ಲ
ಪಾಪ... ಹತ್ತಿಕ್ಕಿದ ಭಾವನೆ ಕುಕ್ಕಿ ತಿನ್ನುವುದಿಲ್ಲ...!!

ಭಾವ ಪರಿಧಿಯಲಿ ತನ್ನದೆಲ್ಲವ ಎಂದೆ
ಇತಿಹಾಸ ತಿಳಿದು ಯೋಗಿಯಂತಾದೆ
ಇರುವುದ ಬಿಟ್ಟು ಇರದುದರೆಡೆ ಜಾರಿದೆ
ಭಾವ ಸಾಗರದಿ ಮುಳುಗುತ್ತಲೇ ಹೋದೆ
ಚಿತ್ತ ಸಮಾಧಿಯಾಗಿ, ನೆನಪಾಗಷ್ಟೇ ಉಳಿದೆ
ಪಾಪ... ಹತ್ತಿಕ್ಕಿದ ಭಾವನೆ
ಕೊನೆಗೂ ಕುಕ್ಕಿ ತಿನ್ನಲೇ ಇಲ್ಲ...!!

ಬರ ಸಿಡಿಲು ಎರಗಿದಾಗ......!!

ತೇನ ವಿನಾ ತೃಣಮಪಿ ನ ಚಲತೆ...

ಇತ್ತ ಮನೆಯಲ್ಲಿ ಆತಂಕ ಮಡುಗಟ್ಟಿತ್ತು. ಯಜಮಾನನ ಹೆಂಡತಿ ಒಂದೇ ಸಮನೆ ಅಳುತ್ತ, ಕಣ್ಣೆಲ್ಲ ಕೆಂಪಾಗಿಸಿಕೊಂಡಿದ್ದಳು. ಹೊಸ ಮನೆಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಆನಂದ ಭಾಷ್ಪ ಹರಿಸಬೇಕಾದ ಕಣ್ಣಾಲಿಗಳು, ದುಃಖದಿಂದ ಕಣ್ಣೀರ ಹೊಳೆಯನ್ನು ಹರಿಸುತ್ತಿತ್ತು. ಇಪ್ಪತ್ತು ವರ್ಷಗಳಿಂದ ಕಂಡ ಕನಸು ನನಸಾಗೋ ಅಂತಿಮ ಕ್ಷಣದಲ್ಲಿ, ಅನಿರೀಕ್ಷಿತವಾಗಿ ಬಂದೆರಗಿದ ಬರಸಿಡಿಲು ಬದುಕನ್ನೇ ಹಿಂಡಿ-ಹಿಪ್ಪೆ ಮಾಡಿದಂತಿತ್ತು
ವಿಪರ್ಯಾಸ... ನೋವು... ನಿರಾಶೆ... ದುಃಖ... ಕಣ್ಣಿರು... ಸಾಂತ್ವನ... ಹತಾಶೆ... ಇವುಗಳ ನಡುವೆಯೇ ಭಗವಂತನಲ್ಲಿ ಆರ್ತ ಮೊರೆ...!!
ಅದೊಂದು ಅಪೂರ್ವ ಸಂಗಮ. ಅಲ್ಲಿದ್ದ ಪ್ರತಿಯೊಬ್ಬರಲ್ಲೂ ಸಂಭ್ರಮ-ಉತ್ಸಾಹ ಎಲ್ಲೆ ಮೀರಿತ್ತು. ತಳಿರು-ತೋರಣಗಳಿಂದ ಮನೆ ಸಿಂಗಾರಗೊಂಡು ಮಧುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ವಿದ್ಯುದ್ದೀಪಗಳ ಬೆಳಕು ಕಣ್ಮನಗಳನ್ನು ಸೂರೆಗೊಳಿಸುತ್ತಿತ್ತು. ಮನೆ-ಮಂದಿಯೆಲ್ಲ ಹಿರಿಹಿರಿ ಹಿಗ್ಗುತ್ತ ಅತ್ತಿಂದಿತ್ತ ಓಡಾಡುತ್ತಿದ್ದರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅದು ಸ್ವರ್ಗಕ್ಕೆ ಕಿಚ್ಚು ಹಚ್ಚುವ ವಾತಾವರಣ...!!
ಇನ್ನೇನು ಬೆಳಕು ಹರಿದರೆ ಸಾಕು, ಕನಸಿನ ಮನೆಗೆ ಪ್ರವೇಶ ಮಾಡುವ ನಾಂದಿ ಕಾರ್ಯಕ್ರಮಕ್ಕೆ ಚಾಲನೆ. ಪೂರ್ವ ನಿಯೋಜಿತವಾಗಿ ಎಲ್ಲ ಕಾರ್ಯಗಳು ಮುಗಿದಿದ್ದವು. ನೆಂಟರಿಷ್ಟರು ಒಂದೆಡೆ ಸೇರಿ ರಾತ್ರಿ 12ರ ವರೆಗೂ ಹರಟೆ ಹೊಡೆಯುತ್ತಿದ್ದರು. ಅಷ್ಟರಲ್ಲಾಗಲೇ ಅಲ್ಲೆ, ಪಕ್ಕದಲ್ಲಿ ಕುಳಿತ ಮನೆ ಯಜಮಾನ ಚಿಕ್ಕದಾಗಿ ಕೆಮ್ಮಲು ಪ್ರಾರಂಭಿಸಿದ. ಆ ಕೆಮ್ಮು ನಿಧಾನವಾಗಿ ಹೆಚ್ಚುತ್ತ ಹೋಯಿತು. ನೋಡು ನೋಡುತ್ತಿದ್ದಂತೆ ವಾಂತಿ ಮಾಡಲಾರಂಭಿಸಿದ. ಹರಟೆಯಲ್ಲಿ ತೊಡಗಿದ್ದ ನೆಂಟರೆಲ್ಲ ಗಾಬರಿಯಾದರು. ಕಾರ್ಗತ್ತಲ ರಾತ್ರಿಯಲ್ಲಿ ಗರ ಬಡಿದವರಂತಾದ ಮನೆಯವರು ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿದರು. ಅವರನ್ನು ಕೂಲಕಂಷವಾಗಿ ಪರೀಕ್ಷಿಸಿದ ವೈದ್ಯರು ಹೃದಯದಲ್ಲಿ ಹೋಲ್ ಆಗಿದೆ. ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಸಲಹೆ ನೀಡಿದರು.
ಇತ್ತ ಮನೆಯಲ್ಲಿ ಆತಂಕ ಮಡುಗಟ್ಟಿತ್ತು. ಯಜಮಾನನ ಹೆಂಡತಿ ಒಂದೇ ಸಮನೆ ಅಳುತ್ತ, ಕಣ್ಣೆಲ್ಲ ಕೆಂಪಾಗಿಸಿಕೊಂಡಿದ್ದಳು. ಹೊಸ ಮನೆಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಆನಂದ ಭಾಷ್ಪ ಹರಿಸಬೇಕಾದ ಕಣ್ಣಾಲಿಗಳು, ದುಃಖದಿಂದ ಕಣ್ಣೀರ ಹೊಳೆಯನ್ನು ಹರಿಸುತ್ತಿತ್ತು. ಇಪ್ಪತ್ತು ವರ್ಷಗಳಿಂದ ಕಂಡ ಕನಸು ನನಸಾಗೋ ಅಂತಿಮ ಕ್ಷಣದಲ್ಲಿ, ಅನಿರೀಕ್ಷಿತವಾಗಿ ಬಂದೆರಗಿದ ಬರಸಿಡಿಲು ಬದುಕನ್ನೇ ಹಿಂಡಿ-ಹಿಪ್ಪೆ ಮಾಡಿದಂತಿತ್ತು. ಹೊಸ ಮನೆಯ ಪ್ರವೇಶದ ಉತ್ಸಾಹದಲ್ಲಿ ಪಾಲ್ಗೊಳ್ಳಲು ಬಂದ ಸಂಬಂಧಿಗಳ ಹೃದಯಗಳೆಲ್ಲ ಆದ್ರಗೊಂಡಿತ್ತು.ಕಂಡ-ಕಂಡ ದೇವರಿಗೆ ಸಾಲು ಸಾಲಾಗಿ ಮೆರವಣಿಗೆ ರೂಪದಲ್ಲಿ ಪ್ರಾರ್ಥನೆಗಳು ಹೋಗುತ್ತಿದ್ದವು. ಹರಕೆಗಳನ್ನು ಹೊತ್ತು ಕರಗಳನ್ನು ಜೋಡಿಸಿ, ಎದುರಾದ ಸಂಕಷ್ಟ ದೂರಮಾಡಪ್ಪ ಎಂದು ಮೊರೆಯಿಡುತ್ತಿದ್ದರು. ಅಳುವ ಮನಸ್ಸುಗಳಿಗೆ ಸಾಂತ್ವನ ಹೇಳುವ ಪ್ರಬುದ್ಧ ಜೀವಗಳು ಅಲ್ಲಿದ್ದು, ಧೈರ್ಯ ತುಂಬುತ್ತಿದ್ದವು.
ದೈವಿಚ್ಛೆಯೋ.... ಪ್ರಾರ್ಥನೆಯ ಫಲವೋ.... ಬಂಧುಗಳ ಆರ್ತ ಮೊರೆಯೋ.... ಏನೋ, ಆಸ್ಪತ್ರೆಯಲ್ಲಿ ದಾಖಲಾದ ಯಜಮಾನ ನಿಧಾನವಾಗಿ ಚೇತರಿಕೊಳ್ಳಲಾರಂಭಿಸಿದ. ಅನ್ನಾಹಾರ ತಿನ್ನುತ್ತ, ಗೆದ್ದು ಬಂದೆ ಎನ್ನುವ ಸಂತಸವನ್ನು ಮೊಗದಲ್ಲಿ ಕಾಣಿಸುತ್ತಿದ್ದ. ಆ ಸುದ್ದಿ ಇತ್ತ ಕಿವಿಗೆ ಅಪ್ಪಳಿಸುತ್ತಿದ್ದಂತೆ, ತುಪ್ಪದ ದೀಪಗಳು ದೇವರ ಮುಂದೆ ಪ್ರತ್ಯಕ್ಷವಾದವು. ದುಃಖದ ಕಣ್ಣೀರಿನಿಂದ ತೇವವಾದ ಕಣ್ಣಾಲಿಗಳು, ಆನಂದ ಭಾಷ್ಪ ಹರಿಸುತ್ತಿದ್ದವು.
ಅನಿವಾರ್ಯವೆಂಬಂತೆ ಮನೆಯ ಪ್ರವೇಶವನ್ನು ಮುಂದೂಡಲಾಗಿದೆ. ಒಂದೆಡೆ ಸೇರಿದ ನೆಂಟರಿಷ್ಟರೆಲ್ಲ ತಮ್ಮ ತಮ್ಮ ಮನೆಗೆಳಿಗೆ ವಾಪಸ್ಸಾಗಿದ್ದಾರೆ. ಯಜಮಾನ ಗುಣಮುಖನಾಗಿ ಮನೆಗೆ ಬಂದ ಮೇಲೆ `ಮನೆ ಪ್ರವೇಶ'ದ ದಿನವನ್ನು ನಿಗದಿ ಮಾಡಲು ನಿರ್ಧರಿಸಲಾಗಿದೆ. ಈ ಬಂಧು-ಬಾಂಧವರ ಜೊತೆ ಆಪ್ತೇಷ್ಟರೂ ಕೂಡಾ ಮುಂದೂಡಿದ `ಮನೆ ಪ್ರವೇಶ'ಕ್ಕೆ ಜೊತೆಯಾಗಲಿದ್ದಾರೆ. ಸಂಭ್ರವ, ಸಂತೋಷ, ಉತ್ಸಾಹ ಇನ್ನೊಮ್ಮೆ ತುಂಬಿ ತುಳಕಲಿದೆ. ಆ ಕುಟುಂಬ ನೂರ್ಕಾಲ ಸುಖ-ಸಂತೋಷದಿಂದ ನೂತನ ಮನೆಯಲ್ಲಿ ಬದುಕಿ ಬಾಳಿ ಎಂದು ಹರಸಿ ಹಾರೈಸೋಣ....!!

ನಾನು ನಿರ್ಗತಿಕನಾದರೆ.....!?

ನಾಗರಾಜ್ ಬಿ.ಎನ್.
ಈ ಬದುಕೇ ಒಂದು ವಿಚಿತ್ರ... ಹುಟ್ಟು ಸಾವಿನ ನಡುವಲ್ಲಿ ಅನಿರೀಕ್ಷಿತ ಘಟನೆಗಳೇ ಹೆಚ್ಚು. ಬಾಯಗಲಿಸಿ ನಗಬೇಕೆನ್ನುವಷ್ಟರಲ್ಲಿ ಕಣ್ಣಂಚಿನಿಂದ ನೀರು ಜಿನುಗುತ್ತದೆ. ದುಃಖದ ಬೇಗುದಿಯಲ್ಲಿ ನರಳಾಡುತ್ತಿರುವಾಗ ಎಲ್ಲಿಂದಲೋ ಬೀಸಿ ಬಂದ ತಂಗಾಳಿ ಮೈ-ಮನವನ್ನು ತಂಪಾಗಿಸುತ್ತವೆ...
ಬಹುತೇಕರ ಬದುಕು ಕೂಡಾ ಹೀಗೇನೆ. ಸಾಕಷ್ಟು ಅನಿರೀಕ್ಷಿತ ಘಟನೆಗಳಿಗ ಒಳಗಾಗುತ್ತಲೇ ಇರುತ್ತದೆ. ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕುವ ಪರಿಸ್ಥಿತಿ.ಹುಟ್ಟು ಶ್ರೀಮಂತನಾದರೂ ಹೊಟ್ಟೆಗೆ ಹಿಟ್ಟಿಲ್ಲದೆ ಬೀದಿ ಬೀದಿ ಅಲೆಯಾಬೇಕಾಗುತ್ತದೆ. ಹೊಲಸು ವಾಸನೆ ಸೂಸುವ ಹರಕು ಬಟ್ಟೆ ಧರಿಸಿ, ಅರೆಬರೆಯಾಗಿ ಮಾನ ಮುಚ್ಚಿಕೊಂಡು ಬದುಕಬೇಕಾಗುತ್ತದೆ.
ತಿಂಗಾಳುನುಗಟ್ಟಲೇ ನೀರು ನೋಡದ ದೇಹ.... ಕೆದರಿದ ತಲೆಗೂದಲು.... ಕೈಯ್ಯಲ್ಲೊಂದು ನಗ್ಗಿದ ಪಾತ್ರೆ..... ಬಿಟ್ಟು ಬಿಡದೆ ಒಂದೇ ಸಮನೆ ಬರುವ ಕೆಮ್ಮು.... ಬದುಕನ್ನು ಜರ್ಜರಿತಗೊಳಿಸಿದ ದೈಹಿಕ ಅನಾರೋಗ್ಯ.... ಸ್ಥೀಮಿತ ಕಳೆದುಕೊಂಡ ಮಸ್ಸಿನ ಸ್ಥತಿ... ಹೀಗೆ ಹತ್ತು ಹಲವು ಬಗೆಯ ಅನುಭವಗಳು ಬದುಕಲ್ಲಿ ಧುತ್ತೆಂದು ಎದುರಾಗುತ್ತದೆ.
ಒಪ್ಪತ್ತಿನ ತುತ್ತಿಗಾಗಿ ಮನೆಯ ಮುಂದೆ ಕಣ್ಣಗಲಿಸಿ ಪಾತ್ರೆ ಹಿಡಿದು, ನಿರೀಕ್ಷೆಯ ನೊಗ ಹೊರುತ್ತ ಮನೆಯ ಬಾಗಿಲನ್ನೇ ನೋಡುತ್ತಿರಬೇಕು. ತಿಂದುಂಡು ಹೆಚ್ಚಾದ ಆಹಾರ ಪದಾರ್ಥಗಳನ್ನು ಎಲ್ಲಿ ಎಸಿಯುತ್ತಾರೆ ಎಂದು ಗಂಟೆ ಗಟ್ಟಲೇ ಕಾಯುತ್ತಿರಬೇಕು. ಬೀಸಾಕಿದ ಪದಾರ್ಥ ಹೆಕ್ಕಲು ಹೋದಾಗ ನಾಯಿ, ಹಂದಿಗಳ ಜತೆ ಸೆಣಸಾಡಿ ಜಯಿಸಬೇಕು. ಒಮ್ಮೊಮ್ಮೆ ಹಳಸಿದ ಪದಾರ್ಥಗಳೇ ಪರಮಾನ್ನ...!! ಕೆಲವು ವೇಳೆ ಉಪವಾಸವೇ ಹಣೆ ಬರಹ...!! ಎಲ್ಲಿಯಾದರೂ ಗುಟುಕು ನೀರು ಕುಡಿದು, ಆಕಾಶದ ನಕ್ಷತ್ರ ಎಣಿಸುತ್ತ ಎಲ್ಲಿಯೋ ಒಂದು ಕಡೆ ಮೈ ಚಾಚಬೇಕು. ಇಂತಹ ದಿನ ನಮಗೂ ಎದರಾದರೆ.....!! ಆಶ್ಚರ್ಯವಿಲ್ಲ. ಯಾಕೆಂದರೆ ಯಾರ ಬದುಕು ಹೇಗೆ... ಏನು... ಎಂದು... ಯಾರು ಬಲ್ಲರು? ಅಲ್ಲವೇ....?

ನಕ್ಷತ್ರ ವನಕ್ಕೆ ಬನ್ನಿ.... ಬದಲಾವಣೆ ಕಾಣಿರಿ....!!

ನಿಮ್ಮ ಮನದಿಷ್ಟಾರ್ಥಗಳನ್ನು ಪೂರೈಸಿಕೊಳ್ಳಬೇಕೇ...? ನಿಮ್ಮ ಅದೃಷ್ಟ ಬದಲಾಯಿಸಿಕೊಳ್ಳಬೇಕೆ...? ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಬೇಕೆ...? ಆರೋಗ್ಯ ಸಂಪತ್ತನ್ನು ಗಳಿಸಬೇಕೆ...? ಹಾಗಾದರೆ ತಡವೇಕೆ..... ಹುಬ್ಬಳ್ಳಿಯ ಕೇಶ್ವಾಪುರದ ಪಾರಸ್ವಾಡಿ-ವಿನಯಕಾಲೋನಿ ಬಳಿಯಿರುವ ನಕ್ಷತ್ರ ವನಕ್ಕೆ ಭೆಟ್ಟಿ ನೀಡಿ. ಅಲ್ಲಿರುವ ಪವಿತ್ರ ವೃಕ್ಷಗಳಿಗೆ ನೀರುಣಿಸಿ. ನಿಮ್ಮಲ್ಲಾದ ಬದಲಾವಣೆ ತಿಂಗಳೊಳಗೆ ಕಾಣಿರಿ...!!
ನಾಗರಾಜ್ ಬಿ.ಎನ್.
ಇದು ಉತ್ಪ್ರೇಕ್ಷೆಯಲ್ಲ. ಜನಸಾಮಾನ್ಯರ ಹಾದಿ ತಪ್ಪಿಸುವ ಕಾರ್ಯವೂ ಅಲ್ಲ. ನಂಬಿಕೆ ಮತ್ತು ವೈಜ್ಞಾನಿಕತೆಯ ನೆಲಗಟ್ಟಿನಡಿ ಹಲವರು ಕಂಡುಕೊಂಡ ಸತ್ಯ. 
ಪ್ರತಿನಿತ್ಯ ಶ್ರದ್ಧಾ-ಭಕ್ತಿಯಿಂದ  ಕೆಲವರು ಅಲ್ಲಿರುವ ವೃಕ್ಷಗಳಿಗೆ ಪ್ರದಕ್ಷಿಣೆ ಹಾಕಿ, ಹನಿ-ಹನಿ ನೀರುಣಿಸಿ ಕಮರಿಹೋದ ಬದುಕನ್ನು ಮತ್ತೆ ಚಿಗುರೊಡಿಸಿಕೊಂಡಿದ್ದಾರೆ. ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಮೊಗದಲ್ಲಿ ನಗು ಅರಳಿಸಿಕೊಂಡಿದ್ದಾರೆ. ನೆನಗುದಿಗೆ ಬಿದ್ದ ಎಷ್ಟೋ ಜನರ ಕೆಲಸ-ಕಾರ್ಯಗಳು, ವಾರದೊಳಗೆ ಮತ್ತೆ ಕೈಹಿಡಿದಿದೆ. ಇಳಿ ವಯಸ್ಸಿನ ಜೀವಗಳು ಸಹ ಉತ್ತಮ ಆರೋಗ್ಯವನ್ನು ಪಡೆದು, ಪಾದರಸದಂತೆ ಪುಟಿದೇಳುತ್ತಿದ್ದಾರೆ. ಗುಟ್ಕಾ, ಪಾನ್, ಸಾರಾಯಿಗಳಂತ ದುಶ್ಚಟಗಳಿಂದ ದೂರಾದ ಯುವ ಸಮುದಾಯವೇ ಇದೆ. ಚಿಕ್ಕ ಮಕ್ಕಳಲ್ಲಂತೂ ಪರಿಸರ ಜಾಗೃತಿ ಹುಟ್ಟಿಸುತ್ತ, ಅವರಲ್ಲಿ ಗಿಡ-ಮರ ಬೆಳೆಸಿ ಪೋಷಿಸುವ ಶಿಕ್ಷಣ ನೀಡುತ್ತಿದೆ. ಒಟ್ಟಾರೆ ನಗರದಲ್ಲಿರುವ ಈ ಅಪರೂಪದ 'ನಕ್ಷತ್ರ ವನ' ಪವಿತ್ರ ಸ್ಥಳವಾಗಿ ರೂಪುಗೊಳ್ಳುತ್ತ, ಜಾಗೃತ ಸ್ಥಳವಾಗಿ ಮಾರ್ಪಡುತ್ತಿದೆ. ವಿಶೇಷವೆಂದರೆ, ಈ ವನಕ್ಕೆ ಆಗಮಿಸುವವರಿಗೆ ಯಾವ ಪ್ರವೇಶ ಧನವೂ ಇಲ್ಲ. ಆದರೆ, ಸ್ವ ಇಚ್ಛೆಯಿಂದ ಅಲ್ಲಿಯ ಕಸ, ಕಲ್ಲುಗಳನ್ನು ಎತ್ತಿ, ಹುಲ್ಲುಗಳನ್ನು ಕಿತ್ತೆಸೆದು ಕರ ಸೇವೆ ಮಾಡಬಹುದಾಗಿದೆ.

ಜನ್ಮರಾಶಿಗೆ ತಕ್ಕಂತೆ ವೃಕ್ಷ.....!
ಈ ನಕ್ಷತ್ರ ವನದಲ್ಲಿ ಒಟ್ಟು ಇಪ್ಪತ್ತೇಳು ಪವಿತ್ರ ವೃಕ್ಷಗಳಿವೆ. ಜ್ಯೋತಿಶಾಸ್ತ್ರದಲ್ಲಿರುವ ಇಪ್ಪತ್ತೇಳು ನಕ್ಷತ್ರಗಳಿಗೆ ಹೊಂದಿಕೆಯಾಗುವ, ಇಪ್ಪತ್ತೇಳು ಬಗೆಯ ವೃಕ್ಷಗಳನ್ನು ಇಲ್ಲಿ ನೆಡಲಾಗಿದೆ. ಮೃಗಶಿರ ನಕ್ಷತ್ರಕ್ಕೆ ಕಗ್ಗಲಿ ವೃಕ್ಷ, ಶತತಾರ ನಕ್ಷತ್ರಕ್ಕೆ ಕದಂಬ ವೃಕ್ಷ, ಮಘ ನಕ್ಷತ್ರಕ್ಕೆ ಆಲ ವೃಕ್ಷ, ಪುಷ್ಯ ನಕ್ಷತ್ರಕ್ಕೆ ಅರಳಿ ವೃಕ್ಷ, ಧನಿಷ್ಟಾ ನಕ್ಷತ್ರಕ್ಕೆ ಬನ್ನಿ ವೃಕ್ಷ, ಶ್ರವಣ ನಕ್ಷತ್ರಕ್ಕೆ ಎಕ್ಕಿ ವೃಕ್ಷ, ಪುನರ್ವಸು ನಕ್ಷತ್ರಕ್ಕೆ ಬಿದಿರು ವೃಕ್ಷ(ಬೊಂಬು), ಭರಣಿ ನಕ್ಷತ್ರಕ್ಕೆ ನೆಲ್ಲಿ ವೃಕ್ಷ, ಆರಿದ್ರ ನಕ್ಷತ್ರಕ್ಕೆ ಶಿರಣಿ ವೃಕ್ಷ ಹೀಗೆ ಇಪ್ಪತ್ತೇಳು ನಕ್ಷತ್ರಕ್ಕೆ ಹೊಂದಿಕೆಯಾಗುವ, ಇಪ್ಪತ್ತೇಳು ವೃಕ್ಷಗಳಿವೆ. ಈ ಒಂದೊಂದು ವೃಕ್ಷಗಳು ಒಂದೊಂದು ನಕ್ಷತ್ರಗಳ ಜನ್ಮರಾಶಿಯ ಮೇಲೆ ಜನಿಸಿದ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತವೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.
ಅವಳಿನಗರದ ಕೆಲವು ಭಾಗದ ಸಾರ್ವಜನಿಕರು ಹಾಗೂ ಆ ವನದ ಸುತ್ತಲಿನ ನಿವಾಸಿಗಳು ಪ್ರತಿನಿತ್ಯ ಕುಟುಂಬ ಸಮೇತರಾಗಿ 'ಪವಿತ್ರ ವನ'ಕ್ಕೆ ಆಗಮಿಸಿ, ವೃಕ್ಷಗಳಿಗೆ ನೀರೆರೆಯುತ್ತಾರೆ. ಶ್ರದ್ಧಾ-ಭಕ್ತಿಯಿಂದ ಇಪ್ಪತ್ತೇಳು ವೃಕ್ಷಗಳಿಗೂ ಪ್ರದಕ್ಷಿಣೆ ಹಾಕಿ, ಮನದಿಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸುತ್ತಾರೆ. ಗಿಡಕ್ಕೆ ನೀರೆರೆಯುತ್ತಲೇ ಕೆಲವರು ವಾಯುವಿಹಾರ ಮಾಡಿ, ಪ್ರಸನ್ನತೆ ಪಡೆಯುತ್ತ ನಿರಾಳರಾಗುತ್ತಾರೆ. ಶಾಲಾ ವಿದ್ಯಾರ್ಥಿಗಳು ಹಾಗೂ ಚಿಕ್ಕ ಮಕ್ಕಳಂತೂ ನಿಷ್ಕಳಂಕ ಮನಸ್ಸಿನಿಂದ, ಗಿಡಗಳಿಗೆ ನೀರುಣಿಸಿ ಸಂತೋಷಿಸುತ್ತಾರೆ. ಇದು ಅವರಲ್ಲಿ ಪರಿಸರ ಪ್ರಜ್ಞೆ ಬೆಳೆಯಲು ಸಹಾಯಕವಾಗುವುದರ ಜೊತೆಗೆ, ಗಿಡ-ಮರಗಳ ರಕ್ಷಣೆಗೆ ಬಾಲ್ಯದಲ್ಲಿಯೇ ಪಾಠ ನೀಡಿದಂತಾಗುತ್ತದೆ. ಅಲ್ಲದೆ, ಇಲ್ಲಿರುವ ವಿವಿಧ ವೃಕ್ಷಗಳು ಸುತ್ತ-ಮುತ್ತಲಿನ ಇಂಗಾಲದ ಡೈಆಕ್ಸೈಡ್ ನ್ನು ಸೇವಿಸಿ, ಮಾನವನಿಗೆ ಅವಶ್ಯಕವಿರುವ ಆಮ್ಲಜನಕನವನ್ನು ಹೇರಳ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತವೆ. ಇದು ಸಹಜವಾಗಿಯೇ ವ್ಯಕ್ತಿಯ ಆರೋಗ್ಯದ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಲು ಸಹಕಾರಿಯಾಗಿದೆ. ಈ ನೀರೆರೆಯುವ ಪ್ರಕ್ರಿಯೆಯಿಂದ ಪ್ರತಿನಿತ್ಯ ಒಂದೊಂದು ವೃಕ್ಷಕ್ಕೆ ಕನಿಷ್ಠ ಏಳೆಂಟು ಕೊಡ ನೀರು ಹಾಕಿದಂತಾಗುತ್ತದೆ.
`ಜನರಲ್ಲಿಯ ನಂಬಿಕೆ ಮತ್ತು ವೈಜ್ಞಾನಿಕ ಸತ್ಯ ಒಂದಕ್ಕೊಂದು ಮೇಳೈಸಿಕೊಂಡು ಎಷ್ಟೋ ಜನರ ಬದುಕನ್ನು ಈ ಪವಿತ್ರ ನಕ್ಷತ್ರ ವನ ಹಸನಾಗಿಸಿದೆ. ಸ್ನೇಹಿತರ ಸಲಹೆ ಮೇರೆಗೆ ಕಳೆದ ಒಂದು ವಾರದಿಂದ ಪ್ರತಿನಿತ್ಯ ಸಾಯಂಕಾಲ ನಕ್ಷತ್ರ ವನಕ್ಕೆ ಬಂದು, ಅಲ್ಲಿರುವ ಗಿಡಗಳಿಗೆ ಭಕ್ತಿಯಿಂದ ನೀರುಣಿಸುತ್ತಿದ್ದೇನೆ. ಎರಡು ವರ್ಷದಿಂದ ಆಗದ ಕೆಲಸವೊಂದು ಇಲ್ಲಿಗೆ ಬಂದ ಮೇಲೆ ಯಾವೊಂದು ಸಮಸ್ಯೆಯಿಲ್ಲದೆ ಬಗೆಹರಿದಿದೆ. ಇಲ್ಲಿರುವ ವೃಕ್ಷಗಳು ಪುರಾಣೇತಿಹಾಸ ಹೊಂದಿದ್ದು, ಭಕ್ತಿಯಿಂದ ನೀರೆರೆದು ಪ್ರಾಥರ್ಿಸಿಕೊಂಡರೆ ಎಲ್ಲ ಕಷ್ಟಗಳು ಬಗೆಹರಿಯುತ್ತವೆ' ಎಂದು ಗಿಡಗಳಿಗೆ ನೀರುಣಿಸಿ ಸಮಸ್ಯೆಯಿಂದ ಎದ್ದು ಬಂದ ಶಾಂತಿಕಾಲೋನಿ ನಿವಾಸಿ ನಾಗರಾಜ ಗಾಂವಕಾರ ಅವರ ಅನುಭವದ ನುಡಿಗಳಿವು.

ಪವಿತ್ರ ವನದ ರೂವಾರಿ...
ಕೇಶ್ವಾಪುರದ ಪಾರಸ್ವಾಡಿ-ವಿನಯಕಾಲೋನಿಯ ಆರ್.ಆರ್. ಬಿಜಾಪುರ ಅವರ ದೃಢ ಸಂಕಲ್ಪಿತ ಕೂಸೆ ಈ ಪವಿತ್ರ ನಕ್ಷತ್ರ ವನ. ಸರಿ ಸುಮಾರು ಮೂವತ್ತೈದು ವರ್ಷಗಳ ಹಿಂದೆ ಇವರು ನಕ್ಷತ್ರಗಳಿಗೆ ಒಂದೊಂದು ವೃಕ್ಷವಿರುತ್ತದೆ ಎಂಬ ವಿಷಯದ ಪುಸ್ತಕವೊಂದನ್ನು ಓದಿದ್ದರಂತೆ. ಅಂದಿನಿಂದ ಅವರು, ಆ ಇಪ್ಪತ್ತೇಳು ವೃಕ್ಷಗಳನ್ನು ಒಂದೆಡೆ ನೆಟ್ಟು, 'ನಕ್ಷತ್ರ ವನ' ನಿಮರ್ಿಸಬೇಕು ಎಂದು ಮನಸ್ಸಿನಲ್ಲಿಯೇ ಯೋಜನೆಯೊಂದನ್ನು ಸಿದ್ಧಪಡಿಸಿದ್ದರು. ಮನೆಯ ಮುಂದೆಯೇ ಇದ್ದ ಪಾಲಿಕೆಯ ಜಾಗವನ್ನು `ನಕ್ಷತ್ರ ವನ' ನಿಮರ್ಾಣಕ್ಕೆ ಯಾಕಾಗಿ ಬಳಸಿಕೊಳ್ಳಬಾರದೆಂದು ಚಿಂತಿಸಿ, ಸುತ್ತ-ಮುತ್ತಲಿನ ಕಾಲೋನಿ ನಿವಾಸಿಗಳಲ್ಲಿ ಚಚರ್ಿಸಿದರು. ಪುರಂದರ ಹೆಗಡೆ, ಬಿ.ಎಸ್. ವಿರಕ್ತಿಮಠ, ವಿ.ಕೆ. ಕಲಬುಗರ್ಿ, ಪ್ರಕಾಶ ಕುಲಕಣರ್ಿ, ಆರ್.ಎ. ಪೈ, ಮೈಕಲ್ ಸೇರಿದಂತೆ ಅನೇಕರು ಅವರ ಬೆಂಬಲಕ್ಕೆ ನಿಂತರು. ಪಾಲಿಕೆಗೆ ಮನವಿ ಪತ್ರ ಸಲ್ಲಿಸಿ, ನಕ್ಷತ್ರ ವನ ನಿಮರ್ಾಣಕ್ಕೆ ಒಪ್ಪಿಗೆ ಪಡೆದರು. ಆ ಸಂದರ್ಭದಲ್ಲಿ ಆ ಖುಲ್ಲಾ ಜಾಗ ಗಿಡಗಂಟಿಗಳಿಂದ ತುಂಬಿದ್ದು, ಏನೂ ಬೆಳೆಯದ ಬರಡು ನೆಲದಂತಿತ್ತು. ಕಾಲೋನಿ ನಿವಾಸಿಗಳ ಸಹಾಯದಿಂದ ಆ ಜಾಗವನ್ನು ತಕ್ಕಮಟ್ಟಿಗೆ ಶುಚಿಗೊಳಿಸಿದರು. ಬೆಂಗಳೂರು, ಹಾಸನ, ಕಾರವಾರ, ತುಮಕೂರು, ಶೃಂಗೇರಿ ಹಾಗೂ ಇನ್ನಿತರ ನರ್ಸರಿಗಳಿಂದ ಇಪ್ಪತ್ತೇಳು ಬಗೆಯ ವೃಕ್ಷಗಳನ್ನು ತಂದು ನೆಟ್ಟು, ಜೋಪಾನವಾಗಿ ಬೆಳೆಸಿದರು. ಪರಿಣಾಮವಾಗಿ ಇಂದು ಅದು ಪವಿತ್ರ ಸ್ಥಳವಾಗಿ ಮಾರ್ಪಟ್ಟಿದೆ.
ಧರ್ಮಗಳ ಎಲ್ಲೆ ಮೀರಿದ್ದು....!
ಸುಮಾರು 16 ಗುಂಟೆಯಷ್ಟಿರುವ ಪಾಲಿಕೆಯ ಈ ಜಾಗಕ್ಕೆ ವರ್ಷದ ಹಿಂದಷ್ಟೇ ತಡೆಗೋಡೆಯನ್ನು ನಿಮರ್ಿಸಲಾಗಿದೆ. ಈ ವನದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು ಎಂದು ಕಾಲೋನಿ ನಿವಾಸಿಗಳು ಪಾಲಿಕೆಗೆ ಸಾಕಷ್ಟು ಬಾರಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅದು ನಿರ್ಮಾಣವಾಗುವ ನಿರೀಕ್ಷೆಯಿದ್ದು, ಅವಳಿನಗರದ ಏಕೈಕ ಅಪರೂಪದ ನಕ್ಷತ್ರ ವನ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಜಾತಿ, ಮತ, ಧರ್ಮದ ಬೇಧ ಮರೆತು ಎಲ್ಲರೂ ಈ ವನಕ್ಕೆ ಬಂದು ಗಿಡಗಳಿಗೆ ನೀರುಣಿಸುತ್ತಾರೆ. ಗಿಡಗಳಿಗೆ ಗಂಧ ಹಚ್ಚುವುದು, ಹೂವು ಮುಡಿಸುವುದು ಹಾಗೂ ಪೂಜೆ ಕಾರ್ಯಗಳಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿಗೆ ಬರುವವರು ಮನೆಯಿಂದ ಒಂದು ಬಾಟಲಿ ನೀರನ್ನಷ್ಟೇ ತಂದರೆ ಸಾಕು. ಈ ವನ ಪ್ರವೇಶಿಸುತ್ತಿದ್ದಂತೆ ಅರಿವಿಲ್ಲದೆ ಮನಸ್ಸಿನಲ್ಲಿ ಪ್ರಶಾಂತ ಭಾವ ಮೂಡುತ್ತದೆ. ಶುದ್ಧ ಗಾಳಿಯನ್ನು ಸೇವಿಸುತ್ತ ಗಿಡಗಳಿಗೆ ನೀರುಣಿಸುವ ಪರಿ ಮನಸ್ಸಿಗೆ ಅಮಿತಾನಂದ ಉಂಟುಮಾಡುತ್ತದೆ.
-ಆರ್.ಆರ್. ಬಿಜಾಪುರ(ನಕ್ಷತ್ರ ವನದ ರೂವಾರಿ)

ಸೋಮವಾರ, ಡಿಸೆಂಬರ್ 29, 2014

'ಛೇ.., ಗಂಟೆ ಐದಾಗ್ತಾ ಬಂತು, ಮನೆಗ್ಹೋಗ್ಬೇಕು'

ಇದು ಧಾರಾವಾಹಿ ಮಾಡಿದ ಮೋಡಿ...!!

ಹೆಣ್ಣುಮಕ್ಕಳ  ಮೃದು ಮನಸ್ಸನ್ನೆ ಲಾಭಕ್ಕಾಗಿ ಉಪಯೋಗಿಸಿ,ಕಟ್ಟು ಕತೆಗಳ ಮೂಲಕ ಅವರ ಕಣ್ಣಲ್ಲಿ ನೀರು ತರಿಸಿ ಧಾರಾವಾಹಿ ನಿಮಾತೃರು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುವುದು ಎಷ್ಟು ಸರಿ....? ಒಟ್ಟಾರೆ ಎಲ್ಲ ಟಿವಿ ಧಾರಾವಾಹಿಗಳನ್ನು ಸಾರಾಸಗಟಾಗಿ ತೆಗಳಲು ಆಗುವುದಿಲ್ಲ. ಆದರೆ, ಬಹುಪಾಲು ಸಿರಿಯಲ್ಗಳು ಆರೋಗ್ಯಪೂರ್ಣ ಕೌಟುಂಬಿಕ ವ್ಯವಸ್ಥೆಗೆ ಕೊಂಚ ಧಕ್ಕೆ ತರುತ್ತವೆ ಎಂಬ ಮಾತನ್ನು ಸಹ ಅಲ್ಲಗಳೆಯಲಾಗುವುದಿಲ್ಲ. ಇಲ್ಲೊಂದಿಷ್ಟು ಚಿಂತನೆ...
ನಾಗರಾಜ್ ಬಿ.ಎನ್
ಮಾರುಕಟ್ಟೆಗೋ.. ನೆಂಟರ ಮನೆಗೋ... ಅಥವಾ ಇನ್ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋದ ಕೆಲವು ಮಹಿಳೆಯರಿಗೆ ಸಂಜೆ ಐದಾದರೆ ಸಾಕು, ಏನೋ ಗಡಿಬಿಡಿ, ಧಾವಂತ, ತವಕ, ಕುತೂಹಲ....!! 'ಛೇ.. ಮೊದಲೇ ಬರಬಾರದಿತ್ತಾ ಮಾರುಕಟ್ಟೆಗೆ.. ಲೇಟಾಗಿ ಹೋಯ್ತು' ಎನ್ನುತ್ತ ಸರಸರನೇ ಎದ್ದನೋ ಬಿದ್ದನೋ ಎಂದು ಮನೆಯ ಹಾದಿ ಹಿಡಿಯುತ್ತಾರೆ.
ಏದುಸಿರುವ ಬಿಡುತ್ತ, ಕಾಲಿಗೆ ಹಾಕಿದ ಚಪ್ಪಲಿಯನ್ನು ತೆಗೆಯದೆ, ಟಿವಿ ಸ್ವಿಚ್ ಆನ್ ಮಾಡುತ್ತಾರೆ.
ಅದು ಧಾರಾವಾಹಿಯ ವ್ಯಾಮೋಹ, ಮೋಡಿ... ಅದರ ಕಬಂಧ ಬಾಹುವಿನ ತೆಕ್ಕೆಯಲ್ಲಿ ಸಿಲುಕಿ ನಲಗುವ ಸನ್ನಿವೇಶ...
ಸಂಜೆ 5ರಿಂದ ರಾತ್ರಿ 11ರ ವರೆಗೂ ನಿರಂತರವಾಗಿ ಒಂದಿಲ್ಲೊಂದು ಧಾರಾವಾಹಿ ಒಂದೊಂದು ವಾಹಿನಿಯಲ್ಲಿ ಪ್ರಸಾರವಾಗುತ್ತಲೇ ಇರುತ್ತವೆ. ಈ ಅವಧಿಯಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಪ್ರಸಾರವಾಗುವ ಕನಿಷ್ಠ 10 ಧಾರಾವಾಹಿಗಳಲ್ಲಿ, ಎಲ್ಲವೂ ಸಮಾಜವನ್ನು ಹಾಳು ಹಾಳುಗೆಡುವಂತ ಧಾರಾವಾಹಿಗಳೇ..! ಕೌಟುಂಬಿಕ ಸಂಬಂಧಗಳ ನಡುವೆ ಬಿರುಕು ಹುಟ್ಟುವುದೇ ಆ ಧಾರಾವಾಹಿಗಳ ಕಥಾ ವಸ್ತುಗಳು. ಮೊದ ಮೊದಲು ಜೊತೆ ಜೊತೆಗೆ ಕೂಡಿ ಬಾಳುತ್ತಿದ್ದ ಸಂಸಾರ, ಕೊನೆ ಕೊನೆಗೆ ಒಡೆದು ಚೂರಾಗಿ ಮನೆಯೊಂದು ಮೂರು ಬಾಗಿಲಾಗುತ್ತದೆ.

ಇಳಿ ವಯಸ್ಸಲ್ಲಿ ನೆಮ್ಮದಿಯ ಬದುಕು ಕಾಣುವ ಹಂಬಲದಲ್ಲಿರುವ ಅಪ್ಪ-ಅಮ್ಮರು ತನ್ನದೇ ಮಕ್ಕಳ ಒಡೆದ ಸಂಸಾರ ನೋಡಿ ಕಣ್ಣೀರಾಗುತ್ತಾರೆ. ಅಣ್ಣ-ತಮ್ಮರ ಹೆಂಡತಿ ಆಸ್ತಿಗಾಗಿ ಕಚ್ಚಾಡುತ್ತಾರೆ. ಮನೆಗೆಲಸದಲ್ಲಿ ಒಬ್ಬರನ್ನೊಬ್ಬರು ಕಿತ್ತಾಡುತ್ತಾರೆ. ಪರಸ್ಪರ ಕಿವಿ ಊದುತ್ತ(ಚಾಡಿ ಮಾತು) ಸಂಸಾರದಲ್ಲಿ ಹುಳಿ ಹಿಂಡುತ್ತಾರೆ. ಎರಡು-ಮೂರು ಮದುವೆಯಾಗುತ್ತಾರೆ. ಗಂಡ-ಹೆಂಡತಿ ಕಚ್ಚಾಡುತ್ತಾರೆ. ಮಕ್ಕಳು ಅಪ್ಪ-ಅಮ್ಮರಿಗೆ ಹೊಡೆಯುತ್ತಾರೆ. ಅಲ್ಲದೆ, ಸ್ವಾರ್ಥಕ್ಕಾಗಿ ಅಪ್ಪ-ಅಮ್ಮರನ್ನು ವೃದ್ಧಾಶ್ರಮದಲ್ಲಿಡುತ್ತಾರೆ. ಹೀಗೆ ಈ ಧಾರಾವಾಹಿಯ ಪ್ರತಿಯೊಂದು ಸನ್ನಿವೇಶವು ಕೂಡಾ ಕೌಟುಂಬಿಕ ಸಂಬಂಧ ಹಾಳು ಮಾಡುವಂತಹುದ್ದೇ ಆಗಿದೆ.
ಪ್ರೀತಿ-ವಿಶ್ವಾಸದ ನೆಲಗಟ್ಟಿನಡಿ ಯಾವುದೋ ಕಾರಣದಿಂದ ಒಡೆದು ಹೋದ ಕುಟುಂಬವನ್ನು ಒಂದು ಮಾಡುವ ಸಂದೇಶ ಸಾರುವಂತ ಧಾರಾವಾಹಿಗಳು ಬೇಕೆನಿಸಿದರೂ ಭಿತ್ತರವಾಗುವುದಿಲ್ಲ. ಹಾಳು ಹರಟೆ, ಕಲಹ, ಸಂಬಂಧ ಹದಗೆಡೆಸುವ ಸಂಭಾಷಣೆಗಳ ತುಣುಕುಗಳ ಧಾರಾವಾಹಿಗಳೇ ಭರ್ಜರಿಯಾಗಿ ಭಿತ್ತರವಾಗುತ್ತವೆ. ಹೃದಯಕ್ಕೆ ನಾಟುವ ಮೃದು ಸಂಭಾಷಣೆಗೆ, ಹಿನ್ನೆಲೆ ಸಂಗೀತ ನೀಡಿ ಹೆಂಗಳೆಯರ ಮನಸ್ಸನ್ನು ನಾಟುವಂತೆ ಮಾಡುತ್ತಾರೆ. ಅದರಿಂದಾಗಿ ಅವರಲ್ಲಿರುವ ಮೃದು ಮನಸ್ಸು ಒಮ್ಮಿಂದೊಮ್ಮೆಲೆ ಜಾಗೃತವಾಗಿ, ಭಾವನೆಯ ಕೂಪದಲ್ಲಿ ಬಿದ್ದು ಬಿಡುತ್ತವೆ.
ಧಾರಾವಾಹಿಯಲ್ಲಿ ಪ್ರಸಾರವಾಗುವ ಒಂದೊಂದು ದೃಶ್ಯದ ಸನ್ನಿವೇಶಗಳು ಸಹ ಮಹಿಳೆಯರನ್ನು ಗಟ್ಟಿಯಾಗಿ ಬಿಗಿ ಹಿಡಿದಿಡುತ್ತದೆ. ಸಂದರ್ಭದಲ್ಲಿ ಆ ಧಾರಾವಾಹಿಯ ಕೆಲವು ಪಾತ್ರಗಳು ಅವರೇ ಆಗಿ ಪ್ರತಿಬಿಂಬವಾಗುತ್ತಾರೆ. ಪರಿಣಾಮ, ಅರಿವಿಲ್ಲದೆ ಅವರ ಮನಸ್ಸು ಆದೃಗೊಂಡಿರುತ್ತದೆ... ಕಣ್ಣಾಲಿಗಳಿಂದ ನೀರು ಜಿನುಗುತ್ತಿರುತ್ತದೆ... ಮುಂದೇನಾಗುತ್ತದೆ ಎನ್ನುವಷ್ಟರಲ್ಲಿ, ನಾಳೆಯ ಕುತೂಹಲ ಸನ್ನಿವೇಶದ ದೃಶ್ಯದೊಂದಿಗೆ `ಮುಂದುವರಿಯುವುದು.....' ಎಂಬ ಸ್ಲೋಗನ್ ಅಲ್ಲಿ ಪ್ರತ್ಯಕ್ಷವಾಗುತ್ತದೆ....!! ಮತ್ತೆ ನಾಳೆ ದಿನಕ್ಕೆ ಕಾತುರ..!
ಆ ಭಾವುಕ ಲೋಕದಲ್ಲಿಯೇ ತೇಲಾಡುತ್ತಿರುವ ಅವರಿಗೆ, ನಾಳೆ ಎಷ್ಟೊತ್ತಿಗೆ ಆಗುವುದು ಎನ್ನುವ ತವಕ. ನಾಳೆಯಾದರೆ, ಸಾಯಂಕಾಲಕ್ಕಾಗಿ ತಡಬಡಿಕೆ. ಮತ್ತೆ ಆ ಧಾರಾವಾಹಿ ಎಷ್ಟೊತ್ತಿಗೆ ಆರಂಭವಾಗುತ್ತದೆ ಎನ್ನುವ ನಿರೀಕ್ಷೆ. ಒಂದೊಂದು ಕ್ಷಣ, ನಿಮಿಷಗಳು ಆ ಸಂದರ್ಭದಲ್ಲಿ ಅವರಿಗೆ ಒಂದೊಂದು ಯುಗ ಕಳೆದಂತೆ. ಮನೆಗೆಲಸ, ಮಕ್ಕಳ ಪಾಠ, ತುರ್ತು ಕೆಲಸಗಳೆಲ್ಲವೂ ನೇಪಥ್ಯಕ್ಕೆ ಸರಿದಿರುತ್ತವೆ. ಅಷ್ಟು ಹೊತ್ತಿನಿಂದ ಕಾಯುತ್ತಿದ್ದ ಸಮಯ ಎದುರಾಗುತ್ತದೆ. ಧಾರಾವಾಹಿ `ಟೈಟಲ್ ಸಾಂಗ್'ನೊಂದಿಗೆ ಆರಂಭವಾಗುತ್ತಿದ್ದಂತೆ, ಸುತ್ತೆಲ್ಲ ನಿಶ್ಯಬ್ದ ಆವರಿಸುತ್ತದೆ. ಧಾರವಾಹಿ ನೋಡುವ ಕಣ್ಣುಗಳ ಜೊತೆಗೆ ಮನಸ್ಸುಗಳು ಸಹ ಕೇಂದ್ರಿಕೃತವಾಗಿ, ಟಿವಿಯಲ್ಲಿಯೇ ತಲ್ಲೀನವಾಗುತ್ತವೆ. ಆ ಸಂದರ್ಭದಲ್ಲೇನಾದರೂ ಅಪರೂಪದ ಸ್ನೇಹಿತರು, ನೆಂಟರು, ಬಂಧುಗಳು, ಆಪ್ತೇಷ್ಟರೇನಾದರೂ ಮನೆಗೆ ಬಂದರೆ... ಅವರು ಧಾರಾವಾಹಿ ಮುಗಿಯುವವರೆಗೂ ಮೂಕರಾಗಿಯೇ ಕುಳಿತುಕೊಳ್ಳಬೇಕು. ಯಾಕೆಂದರೆ ಧಾರಾವಾಹಿ ಮುಗಿಯಿತು ಎಂದರೆ... ಅದು ಮತ್ತೆ ಸಿಗದು, ನೆಂಟರು ಹೇಗಿದ್ದರೂ ಇಲ್ಲೆ ಇರುತ್ತಾರಲ್ಲ...!!
ಹೀಗೆ, ಸ್ನೇಹ-ಸಂಬಂಧದ ಸಾಮರಸ್ಯಕ್ಕೆ ದೈನಂದಿನ ಧಾರಾವಾಹಿ ಮಾರಕವಾಗಿ ಪರಿಣಮಿಸಿದೆ. ಅಂದು ಕುಟುಂಬ ಸದಸ್ಯರೆಲ್ಲ ಜೊತೆ ಜೊತೆಯಾಗಿ ಕೂತು ಊಟ, ತಿಂಡಿ ಮಾಡುತ್ತ ಸಂಭ್ರಮಿಸುತ್ತಿದ್ದರು. ಈಗ ಧಾರಾವಾಹಿ ನೋಡುತ್ತ ಊಟ ಮಾಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಶಾಲೆ ಬಿಟ್ಟು ಮನೆಗೆ ಬಂದ ಮಕ್ಕಳಿಗೆ, 'ಶಾಲೆಯಲ್ಲಿ ಏನು ಕಲಿಸಿದ್ದಾರೆ' ಎಂದು ಕೇಳುವ ತಂದೆ-ತಾಯಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಯಾಕೆಂದರೆ ಮಕ್ಕಳು ಶಾಲೆ ಬಿಟ್ಟು ಮನೆಗೆ ಪ್ರವೇಶಿಸುತ್ತಿದ್ದಂತೆ, ಪಾಲಕರು ಧಾರಾವಾಹಿಯಲ್ಲಿ ಮುಳುಗಿರುತ್ತಾರೆ. ಮನೆಯ ಈ ವಾತಾವರಣ ಮಕ್ಕಳ ಕಲಿಕೆಯ ಮೇಲೆ ಗಣನೀಯ ಪರಿಣಾಮ ಬೀರುತ್ತ, ಅವರನ್ನು ಸಹ ಧಾರಾವಾಹಿಗಳು ಆಕರ್ಷಿಸಲು ಪ್ರಾರಂಭಿಸುತ್ತಿವೆ. ಕೂಡಿ ಬಾಳುವ ಕುಟುಂಬವು ಧಾರಾವಾಹಿಯ ಪ್ರಭಾವಕ್ಕೆ ಒಳಗಾಗಿ ದ್ವೇಷ-ಅಸೂಯೆಯನ್ನು ಸೃಷ್ಟಿಸುತ್ತಿದೆ. ಪರಸ್ಪರ ಕಂದಕವನ್ನು ನಿರ್ಮಿಸಿಕೊಂಡು ಒಂದೇ ಮನೆಯಲ್ಲಿ ದಾಯಾದಿಗಳಂತೆ ಬದುಕುವಂತೆ ಮಾಡುತ್ತದೆ. ನೆಮ್ಮದಿಯನ್ನು ಹಾಳುಗೈದು ಮನೆ-ಮನಗಳಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುತ್ತವೆ.
ಸುಂದರ, ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡಬೇಕಾದ ದೃಶ್ಯ ಮಾಧ್ಯಮಗಳು... ಸಮಾಜದ ಸ್ವಾಸ್ಥ್ಯ ಹಾಳುಗೆಡುವದೆ ಪ್ರೀತಿ, ವಿಶ್ವಾಸದ ನೆಲಗಟ್ಟಿನಡಿ ಉತ್ತಮ ಸಂದೇಶ ರವಾನಿಸಬೇಕಾದ ಧಾರಾವಾಹಿಗಳು... ಹೆಂಗಳೆಯರ ಮೃದು ಮನಸ್ಸನ್ನೆ ತಮ್ಮ ಲಾಭಕ್ಕಾಗಿ ಉಪಯೋಗಿಸಿ, ಕಟ್ಟು ಕತೆಗಳ ಮೂಲಕ ಅವರ ಕಣ್ಣಲ್ಲಿ ನೀರು ತರಸಿ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವುದು ಎಷ್ಟು ಸರಿ....? ಇದು ಹೀಗೆ ಮುಂದುವರಿದರೆ ನಮ್ಮ ಮುಂದಿನ ಸಮಾಜ ಏನು...? ಎಂತು....?

ನಾನು ಮಾಡಿದ್ದೇ ಸರಿ, ನನಗ್ಹೇಳಲು ನೀನ್ಯಾರು..?


ನಾಗರಾಜ್ ಬಿ.ಎನ್.
ಹೆತ್ತವರಿಗೆ ಮುದ್ದು ಮಕ್ಕಳಾಗಿ... ಸ್ನೇಹಿತರಿಗೆ ಆತ್ಮೀಯನಾಗಿ... ಸಮಾಜಕ್ಕೆ ಮಾದರಿಯಾಗಿ... ಮಾನವೀಯ ಮೌಲ್ಯಗಳ ಖಣಿಯಾಗಿ... ಬೇಕು-ಬೇಡಗಳನ್ನು ಅರ್ಥೈಸಿಕೊಳ್ಳುವ ಸತಿ-ಪತಿಗಳಾಗಿ... ನೈತಿಕತೆ ಮೀರದ ಪ್ರೇಮಿಗಳಾಗಿ... ಭವ್ಯ-ಭಾರತ ರೂಪಿಸುವ ಹೆಮ್ಮೆಯ ಶಿಕ್ಷಕರಾಗಿ... 

ನಾನು ಮಾಡಿದ್ದೆ ಸರಿ... ನಾನು ಹೇಳಿದ್ದೆ ಆಗಬೇಕು... ಎನ್ನುವ ಮನಸ್ಥಿತಿ ಸರ್ವಥಾ ತರವಲ್ಲ. ಅದರಿಂದ ನಾವು ನಮ್ಮ ಸ್ನೇಹಿತರನ್ನು ಹಾಗೂ ಪ್ರೀತಿ-ಪಾತ್ರರನ್ನು ದೂರ ಮಾಡಿಕೊಳ್ಳುತ್ತೇವೆಯೇ ಹೊರತು, ಬದುಕಿನ ಬೆಳವಣಿಗೆಗೆ ಒಂದಿನಿತೂ ಪ್ರಯೋಜನವಿಲ್ಲ.
ಋಷಿ-ಮುನಿಗಳ, ಸಾಧು-ಸಂತರ ಸಂಸ್ಕಾರಗಳು ನಮಗಿಲ್ಲ. ಗಡ್ಡೆ-ಗೆಣೆಸುಗಳಷ್ಟೇ ತಿನ್ನುವ ಸಾತ್ವಿಕ ಆಹಾರಿಗಳೂ ನಾವಲ್ಲ. ನಾವು ಆಧುನಿಕ ಜಗತ್ತಿಗೆ ತೆರದುಕೊಂಡು, ವೈಜ್ಞಾನಿಕ ಉಪಕರಣಗಳ ನಡುವೆ ಬದುಕು ಸಾಗಿಸುವವರು. ಮಾಂಸಾಹಾರವೇ ಪರಮ ಭಕ್ಷ್ಯ ಎಂದು ಸೇವಿಸುವವರು. ಹೀಗಿದ್ದಾಗ ಸಹಜವಾಗಿಯೇ ನಮ್ಮ ಆಲೋಚನೆಗಳು, ಆಚಾರ-ವಿಚಾರಗಳು ಸಂಸ್ಕಾರವನ್ನು ಮರೆಮಾಚುವಂತೆ ಮಾಡುತ್ತವೆ. ಹಾಗಂತ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಅಲ್ಲವೇ...? ನಮ್ಮ ಜೊತೆ ಬದುಕಿ-ಬಾಳುವವರಿಗೂ ಕೂಡಾ, ನಮ್ಮ ಹಾಗೆಯೇ ಒಂದು ಬದುಕು ಇದೆ ಎನ್ನುವುದು ಸತ್ಯ ಅಲ್ಲವೇ...?
ಈ ಆಧುನಿಕ ಬದುಕಿನ ನಾಗಾಲೋಟದಲ್ಲಿ ಯಾವುದು ಸರಿ...? ಯಾವುದು ತಪ್ಪು...? ಎಂದು ನಮಗೆ ಅರಿವಿಗೆ ಬಾರದು. ವಿವೇಚನಾ ರಹಿತ ವ್ಯಾಖ್ಯಾನವೇ ನಮ್ಮ ಜೀವಾಳವಾಗಿ ಬಿಟ್ಟಿದೆ. ಪರಿಣಾಮ, ನಾನು ಮಾಡಿದ್ದೆ ಸರಿ... ನಾನು ಹೇಳಿದ್ದೇ ಸರಿ... ನನಗೆಲ್ಲವೂ ಗೊತ್ತು... ನನ್ನದು ಇದೇ ಇದೇ ಸ್ವಭಾವ... ಬೇಕಾದರೆ ಒಪ್ಪಿಕೋ, ಬೇಡವಾದರೆ ಬಿಡು... ನನ್ನಿಷ್ಟದ ಹಾಗೆ ನಾನು ಬದುಕುತ್ತೇನೆ... ನನ್ನ ಬದುಕು ನನ್ನದು... ನನಗೆ ಹೇಳಲು ನೀನ್ಯಾರು...? ನೀನು ನನ್ನ ಸಂಬಂಧಿನಾ...? ಹೀಗೆ ಮನಸ್ಸಿಗೆ ಬಂದ ಹಾಗೆ, ಏನೇನೋ ಬಡಬಡಿಸಿ ನಮ್ಮ ಮನಸ್ಸು ಎಂತಹದ್ದು ಎಂದು ಪ್ರದರ್ಶಿಸಿ ಬಿಡುತ್ತೇವೆ. ಇದು ನಮ್ಮ ಸಂಸ್ಕಾರದ ಫಲನೇ ಅಲ್ಲವೇ...? ಗಡ್ಡೆ-ಗೆಣಸು ತಿನ್ನುತ್ತಿದ್ದ ಸಾಧು-ಸಂತರು ಹೀಗೆ ವರ್ತಿಸುತ್ತಿದ್ದರೆ..? ಹಾಗಂತ ಮಾಂಸಾಹಾರ ತಿನ್ನುವವರೆಲ್ಲರೂ ಹೀಗೆ ವರ್ತಿಸುತ್ತಾರೆ ಅಂತಲ್ಲ. ಈಗಿನ ಬಹುತೇಕರ ಮನಸ್ಥಿತಿ ಹೀಗೆಯೇ ಇದೆ. ಆದರೆ, ಅದು ತಪ್ಪು ಎಂದು ನಮಗೆ ಅರ್ಥವಾಗುವುದಿಲ್ಲ. ಯಾರಾದರೂ, `ಹಾಗೆ ಮಾತನಾಡುವುದು ತಪ್ಪು, ಹಾಗೆಲ್ಲ ಹೇಳ ಬೇಡ' ಎಂದರೆ... ಅದನ್ನು ಕೇಳುವ ವ್ಯವಧಾನವೂ ನಮಗಿರುವುದಿಲ್ಲ. ಸಂದರ್ಭದಲ್ಲಿ `ನಾನು ಮಾಡಿದ್ದೆ ಸರಿ ಎನ್ನುವ ಅಹಂ' ನಮ್ಮಲ್ಲಿ ಪುಟಿದೇಳುತ್ತಿದೆ. ಅದರ ಮೇಲಾಟದಲ್ಲಿ `ಸರಿ-ತಪ್ಪು'ಗಳ ವಿವೇಚನೆಯೇ ಮಖಾಡೆ ಮಲಗಿರುತ್ತವೆ. ಆದರೆ ಇವೆಲ್ಲ ನಮ್ಮ ಸಂಸ್ಕಾರದ ಫಲನೇ ಅಲ್ಲವೇ...?

ಇರಲಿ, ಕ್ಯಾಲೆಂಡರ್ನಲ್ಲಿ ವರ್ಷ ಬದಲಾಗುವ ದಿನಕ್ಕೆ ಎದುರು ನೋಡುತ್ತಿದ್ದೇವೆ. `ಹಿಂದು ವರ್ಷಾಚರಣೆಯಲ್ಲ, ಅದನ್ನು ಆಚರಿಸುವುದು ಬೇಡ' ಎನ್ನುವ ಕೂಗು ಸಹ ಅಲ್ಲಲ್ಲಿ ಕೇಳಿ ಬರುತ್ತಿವೆ. ನೂತನ ವರ್ಷವನ್ನು ಆಚರಣೆ ಮಾಡುವುದು ಬೇಡ. ಆದರೆ, ವರ್ಷ ಬದಲಾವಣೆಯಾಗುವ ಸಂದರ್ಭದಲ್ಲಿ ದೃಢ ಸಂಕಲ್ಪ ಮಾಡೋಣ. ವಿಚಾರ, ಆಚಾರ, ನಡೆ, ನುಡಿಗಳನ್ನು ಬದಲಿಸಿಕೊಳ್ಳೋಣ. ನಾನು ಮಾಡಿದ್ದೇ ಸರಿ, ನಾನು ಹೇಳಿದ್ದೇ ಆಗಬೇಕು ಎನ್ನುವ ತುಚ್ಛ ಮನಸ್ಥಿತಿಯನ್ನು ಈ ವರ್ಷದಲ್ಲಿಯೇ ಬಿಟ್ಟು ಹೋಗೋಣ. ಇನ್ನೊಬ್ಬರು ಆಡುವ ಮಾತನ್ನು ತಾಳ್ಮೆಯಿಂದ ಕೇಳೋಣ... `ಅವರು ಯಾಕಾಗಿ ನನಗೆ ಹೇಳುತ್ತಿದ್ದಾರೆ?' ಎಂದು ನಮ್ಮಲ್ಲಿಯೇ ಮಂಥನ ಮಾಡಿಕೊಳ್ಳೊಣ. ಸಂಬಂಧವನ್ನು ಹಾಳು ಮಾಡಿಕೊಳ್ಳುವ, `ನೀನು ನನಗೆ ಸಂಬಂಧಿನಾ, ನನ್ನ ಸ್ವಭಾವವೇ ಹಾಗೆ, ನನ್ನ ಬದುಕು ನನ್ನಿಷ್ಟ, ನನಗೆ ಹೇಳಲು ನಿನ್ಯಾರು... ಎನ್ನುವ ಮಾತುಗಳನ್ನು ಬಿಟ್ಟು ಬಿಡೋಣ. ಕುಟುಂಬದವರ, ಸ್ನೇಹಿತರ, ಜೊತೆಯಿರುವ, ಪ್ರೀತಿಸುವವರ ಜೊತೆ ಕೂಡಿ-ಬಾಳೋಣ. ಅಹಂನ ಕಪಿಮುಷ್ಟಿಯಲ್ಲಿ ಸಿಲುಕಿ, ಅದರ ಪ್ರತಿಷ್ಠಗಾಗಿ ಜೊತೆಗಾರರನ್ನು ಕಳೆದುಕೊಳ್ಳದಿರೋಣ. ಅವರ ಮಾತುಗಳನ್ನು ಕೇಳಿ ಅವರ ಬದುಕಿಗೂ ಗೌರವ ನೀಡೋಣ. ಹೆತ್ತವರಿಗೆ ಮುದ್ದು ಮಕ್ಕಳಾಗಿ... ಸ್ನೇಹಿತರಿಗೆ ಆತ್ಮೀಯನಾಗಿ... ಸಮಾಜಕ್ಕೆ ಮಾದರಿಯಾಗಿ... ಮಾನವೀಯ ಮೌಲ್ಯಗಳ ಖಣಿಯಾಗಿ... ಬೇಕು-ಬೇಡಗಳನ್ನು ಅರ್ಥೈಸಿಕೊಳ್ಳುವ ಸತಿ-ಪತಿಗಳಾಗಿ... ನೈತಿಕತೆ ಮೀರದ ಪ್ರೇಮಿಗಳಾಗಿ... ಭವ್ಯ-ಭಾರತ ರೂಪಿಸುವ ಹೆಮ್ಮೆಯ ಶಿಕ್ಷಕರಾಗಿ... ಒಟ್ಟಾರೆ ಸಮಾಜದ ಆದರ್ಶ ವ್ಯಕ್ತಿಯಾಗಲು ಪಣ ತೊಡೋಣ.ನಮ್ಮ ಬದುಕಿನಾಚೆಗೂ ಒಂದು ಸುಂದರ ಬದುಕಿದೆ ಎನ್ನುವುದು ಮರೆಯದಿರೋಣ..