ಮಂಗಳವಾರ, ಡಿಸೆಂಬರ್ 30, 2014

ನಾನು ನಿರ್ಗತಿಕನಾದರೆ.....!?

ನಾಗರಾಜ್ ಬಿ.ಎನ್.
ಈ ಬದುಕೇ ಒಂದು ವಿಚಿತ್ರ... ಹುಟ್ಟು ಸಾವಿನ ನಡುವಲ್ಲಿ ಅನಿರೀಕ್ಷಿತ ಘಟನೆಗಳೇ ಹೆಚ್ಚು. ಬಾಯಗಲಿಸಿ ನಗಬೇಕೆನ್ನುವಷ್ಟರಲ್ಲಿ ಕಣ್ಣಂಚಿನಿಂದ ನೀರು ಜಿನುಗುತ್ತದೆ. ದುಃಖದ ಬೇಗುದಿಯಲ್ಲಿ ನರಳಾಡುತ್ತಿರುವಾಗ ಎಲ್ಲಿಂದಲೋ ಬೀಸಿ ಬಂದ ತಂಗಾಳಿ ಮೈ-ಮನವನ್ನು ತಂಪಾಗಿಸುತ್ತವೆ...
ಬಹುತೇಕರ ಬದುಕು ಕೂಡಾ ಹೀಗೇನೆ. ಸಾಕಷ್ಟು ಅನಿರೀಕ್ಷಿತ ಘಟನೆಗಳಿಗ ಒಳಗಾಗುತ್ತಲೇ ಇರುತ್ತದೆ. ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕುವ ಪರಿಸ್ಥಿತಿ.ಹುಟ್ಟು ಶ್ರೀಮಂತನಾದರೂ ಹೊಟ್ಟೆಗೆ ಹಿಟ್ಟಿಲ್ಲದೆ ಬೀದಿ ಬೀದಿ ಅಲೆಯಾಬೇಕಾಗುತ್ತದೆ. ಹೊಲಸು ವಾಸನೆ ಸೂಸುವ ಹರಕು ಬಟ್ಟೆ ಧರಿಸಿ, ಅರೆಬರೆಯಾಗಿ ಮಾನ ಮುಚ್ಚಿಕೊಂಡು ಬದುಕಬೇಕಾಗುತ್ತದೆ.
ತಿಂಗಾಳುನುಗಟ್ಟಲೇ ನೀರು ನೋಡದ ದೇಹ.... ಕೆದರಿದ ತಲೆಗೂದಲು.... ಕೈಯ್ಯಲ್ಲೊಂದು ನಗ್ಗಿದ ಪಾತ್ರೆ..... ಬಿಟ್ಟು ಬಿಡದೆ ಒಂದೇ ಸಮನೆ ಬರುವ ಕೆಮ್ಮು.... ಬದುಕನ್ನು ಜರ್ಜರಿತಗೊಳಿಸಿದ ದೈಹಿಕ ಅನಾರೋಗ್ಯ.... ಸ್ಥೀಮಿತ ಕಳೆದುಕೊಂಡ ಮಸ್ಸಿನ ಸ್ಥತಿ... ಹೀಗೆ ಹತ್ತು ಹಲವು ಬಗೆಯ ಅನುಭವಗಳು ಬದುಕಲ್ಲಿ ಧುತ್ತೆಂದು ಎದುರಾಗುತ್ತದೆ.
ಒಪ್ಪತ್ತಿನ ತುತ್ತಿಗಾಗಿ ಮನೆಯ ಮುಂದೆ ಕಣ್ಣಗಲಿಸಿ ಪಾತ್ರೆ ಹಿಡಿದು, ನಿರೀಕ್ಷೆಯ ನೊಗ ಹೊರುತ್ತ ಮನೆಯ ಬಾಗಿಲನ್ನೇ ನೋಡುತ್ತಿರಬೇಕು. ತಿಂದುಂಡು ಹೆಚ್ಚಾದ ಆಹಾರ ಪದಾರ್ಥಗಳನ್ನು ಎಲ್ಲಿ ಎಸಿಯುತ್ತಾರೆ ಎಂದು ಗಂಟೆ ಗಟ್ಟಲೇ ಕಾಯುತ್ತಿರಬೇಕು. ಬೀಸಾಕಿದ ಪದಾರ್ಥ ಹೆಕ್ಕಲು ಹೋದಾಗ ನಾಯಿ, ಹಂದಿಗಳ ಜತೆ ಸೆಣಸಾಡಿ ಜಯಿಸಬೇಕು. ಒಮ್ಮೊಮ್ಮೆ ಹಳಸಿದ ಪದಾರ್ಥಗಳೇ ಪರಮಾನ್ನ...!! ಕೆಲವು ವೇಳೆ ಉಪವಾಸವೇ ಹಣೆ ಬರಹ...!! ಎಲ್ಲಿಯಾದರೂ ಗುಟುಕು ನೀರು ಕುಡಿದು, ಆಕಾಶದ ನಕ್ಷತ್ರ ಎಣಿಸುತ್ತ ಎಲ್ಲಿಯೋ ಒಂದು ಕಡೆ ಮೈ ಚಾಚಬೇಕು. ಇಂತಹ ದಿನ ನಮಗೂ ಎದರಾದರೆ.....!! ಆಶ್ಚರ್ಯವಿಲ್ಲ. ಯಾಕೆಂದರೆ ಯಾರ ಬದುಕು ಹೇಗೆ... ಏನು... ಎಂದು... ಯಾರು ಬಲ್ಲರು? ಅಲ್ಲವೇ....?

ಕಾಮೆಂಟ್‌ಗಳಿಲ್ಲ: