ಗುರುವಾರ, ನವೆಂಬರ್ 26, 2015

ಕಲ್ಪನೆಯ ಮೂಸೆಯಲ್ಲೊಂದು 'ಚರಮ ಗೀತೆ...!!'
'ಅದೊಂದು ಭೀಕರ ಕ್ಷಣ... ಎದೆ ಝಲ್ ಎನ್ನುವ ಸನ್ನಿವೇಶ...!!
ಮಧ್ಯಾಹ್ನ ಸ್ನೇಹಿತರ ಜೊತೆ ಊಟ ಮಾಡಿ ಹರಟೆ ಹೊಡೆಯುತ್ತಿದ್ದೆ. ಇದ್ದಕ್ಕಿದ್ದಂತೆ ತಲೆ ಸುತ್ತಿದ ಹಾಗಾಯಿತು. ತಲೆ ಹಿಡಿದುಕೊಂಡು ಅಲ್ಲಿಯೇ ಒರಗಿದೆ. ಏನಾಗುತ್ತಿದೆ ಎಂದು ತೋಚುತ್ತಿರಲಿಲ್ಲ. ನಿಧಾನವಾಗಿ ಕೈ-ಕಾಲುಗಳು ತಣ್ಣಗಾಗುತ್ತ ಹೋದವು....!
ಪಕ್ಕದಲ್ಲಿದ್ದ ಸ್ನೇಹಿತರು ಗರ ಬಡಿದಂತಾಗಿದ್ದರು. ಏನು ಮಾಡಬೇಕೆಂದು ತೋಚದೆ, ಕಂಗಾಲಾಗಿ ಗಾಳಿ ಹಾಕಿ ಉಪಚರಿಸಲು ಶುರುವಿಟ್ಟುಕೊಂಡಿದ್ದರು. ನನ್ನ ಕಣ್ಣಾಲಿಗಳು ಆಚೀಚೆ ಹೊರಾಳಾಡುತ್ತಿತ್ತು. ಎದೆಯಲ್ಲಿ ಉಸಿರು ಬಿಗಿಯಾಗಿ ಹಿಡಿದಂತ ಅನುಭವ. ಅಷ್ಟರಲ್ಲಾಗಲೇ, ಸ್ನೇಹಿತ ಆಸ್ಪತ್ರೆಗೆ ಕರೆದಕೊಂಡು ಹೋಗುವ ವ್ಯವಸ್ಥೆ ಮಾಡಿದ್ದ.
ಆಸ್ಪತ್ರೆಯಲ್ಲಿ....
ತುರ್ತು ಚಿಕಿತ್ಸಾ ಘಟಕದಲ್ಲಿ ನನ್ನನ್ನು ದಾಖಲಿಸಿದ್ದಾರೆ. ಅತ್ಯಾಧುನಿಕ ಉಪಕರಣಗಳ ನಡುವೆ    ನಾನು ನಿಸ್ತೇಜನಾಗಿ ಬಿದ್ದುಕೊಂಡಿದ್ದೇನೆ. ಪ್ರಾಥಮಿಕ ಚಿಕಿತ್ಸೆ ನೀಡಲು ಬಂದ ವೈದ್ಯರು ನಾಡಿ ಪರೀಕ್ಷೆ ಮಾಡಿದರು. ಕ್ಷಣ ಕ್ಷಣಕ್ಕೂ ನಾಡಿ ಬಡಿತ ಕಡಿಮೆಯಾಗುತ್ತಿರುವುದರಿಂದ ವೈದ್ಯರು ಸ್ಪಷ್ಟ ನಿಧರ್ಾರಕ್ಕೆ ಬಂದಿದ್ದರು. ಕಿವಿಗೆ ಹಾಕಿಕೊಂಡ ಸ್ಟೆತಸ್ಕೋಪನ್ನು ಕೆಳಗಿಳಿಸಿ, ದಾದಿಗೆ ಸನ್ನೆ ಮಾಡಿ ಹೊರ ನಡೆದರು.
ಅಲ್ಲಿದ್ದ ದಾದಿ ಆದೃ ಮುಖದಿಂದ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಳು. ಕೆಲವೇ ಕ್ಷಣದಲ್ಲಿ ಈತನ ಪ್ರಾಣ ಪಕ್ಷಿ ಹಾರಿ ಹೋಗಲಿದೆ ಎನ್ನುವ ಅನುಕಂಪದಿಂದಲೋ ಏನೋ...? ಆ ಕ್ಷಣವೂ ಕೂಡಾ ಹತ್ತಿರವಾಗುತ್ತ ಬಂದಿತ್ತು. ಸಂಪೂರ್ಣ ದೇಹವೇ ತಣ್ಣಗಾಯಿತು. ಅರೆಗಳಿಯಲ್ಲಿ ದೊಡ್ಡದಾದ ಉಸಿರನ್ನೆಳೆದು ಬಿಟ್ಟುಬಿಟ್ಟೆ....!! ಅಷ್ಟೊತ್ತು ಸಾವು-ಬದುಕಿನ ನಡುವೆ ಹೋರಾಡಿದ ಜೀವ ಸ್ಥಬ್ದವಾಗಿ ಅಲ್ಲಿ ಮಲಗಿತ್ತು. ಇಹಲೋಕದ ಯಾತ್ರೆ ಮುಗಿಸಿ ಪರ ಲೋಕಕ್ಕೆ ಪಯಣಿಸಿತ್ತು.
ಕಣ್ಣೀರ ಕೋಡಿ.....
ನಾನು ಅಸ್ತಂಗತನಾದ ಸುದ್ದಿ ತಿಳಿಯುತ್ತಿದ್ದಂತೆ, ಅಮ್ಮ-ಪಪ್ಪ ಅಲ್ಲಿಯೇ ಕುಸಿದು ಬಿದ್ದಿದ್ದರು. ಸಂದರ್ಭದ ಸ್ಥಿತಿಯನ್ನು ಅರಿತ ನೆರಹೊರೆಯವರು ವೈದ್ಯರನ್ನು ಕರೆಸಿ, ಅವರಿಬ್ಬರನ್ನೂ ಪ್ರಜ್ಞಾಹೀನರನ್ನಾಗಿಸಿದರು. ಮೂರ್ನಾಲ್ಕು ಗಂಟೆ ಬಿಟ್ಟು, ನನ್ನ ಮೃತದೇಹ ಆಸ್ಪತ್ರೆಯಿಂದ ಹೊರಬಿದ್ದಿತ್ತು. ಅದಾಗಲೇ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳ ಪೂರ್ವ ತಯಾರಿ ಮನೆಯಲ್ಲಿ ಭರದಿಂದ ಸಾಗಿತ್ತು.
ಅಂತೂ ನಾನು ಆಡಿ-ನಲಿದು-ದೊಡ್ಡವನಾದ ಮನೆಗೆ ನನ್ನ ನಿಸ್ತೇಜ ದೇಹವನ್ನು ತಂದರು. ನಾನು ಮನೆ ಬಿಟ್ಟು ಐದಾರು ತಿಂಗಳಾಗಿತ್ತು. ಅಂದು ಜೀವಂತಿಕೆಯಿಂದ ಹೋದ ನಾನು, ಇಂದು ಜೀವಂತಿಕೆ ಕಳೆದುಕೊಂಡು ಬಂದಿದ್ದೇನೆ. ಮೃತದೇಹವನ್ನು ಮನೆಯ ಪಡಸಾಲೆಯಲ್ಲಿಯೇ ಮಲಗಿಸಿದರು. ಮನೆಯಲ್ಲಿ ದಿನದ ಹೆಚ್ಚಿಗೆ ಸಮಯ ಕಳೆಯುತ್ತಿದ್ದ ನನ್ನ ಪ್ರೀತಿಯ ಕೊಠಡಿಯೊಳಗೆ ನನ್ನ ದೇಹವನ್ನು ಕೊಂಡೊಯ್ಯುತ್ತಾರೆ ಎಂದುಕೊಂಡಿದ್ದೆ. ಇಲ್ಲ, ಪಡಸಾಲೆಯಲ್ಲಿಯೇ ಇಟ್ಟು ತಲೆಯ ಪಕ್ಕ ಊದಬತ್ತಿ ಹಚ್ಚಿದ್ದರು. ಮೃತ ದೇಹ ಸೆಟೆದುಕೊಳ್ಳಬಾರದು ಎಂದು, ನೋಡಲು ಬಂದವರು ತಂದ ಎಣ್ಣೆಯನ್ನು ಕೈ-ಕಾಲುಗಳಿಗೆ ಗಟ್ಟಿಯಾಗಿ ತಿಕ್ಕುತ್ತಿದ್ದರು.
ಸಂಬಂಧಿಕರ, ಸ್ನೇಹಿತರ, ಆಪ್ತೇಷ್ಟರ ದುಃಖ ಮುಗಿಲು ಮುಟ್ಟುತ್ತಿತ್ತು. ಅತ್ತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಪ್ಪ-ಅಮ್ಮ ನಿಧಾನವಾಗಿ ಲೌಕಿಕ ಜಗತ್ತಿಗೆ ಬರುತ್ತಿದ್ದರು. ಹೆತ್ತವರ ನೋವು, ಕರುಳ ಕುಡಿ ಕಳೆದುಕೊಂಡ ಯಾತನೆ ಅವರಿಬ್ಬರ ಎದೆಯ ಕಟ್ಟೆಯನ್ನು ಒಡೆಸಿತ್ತು. ಅವರ ಅರಚಾಟ, ಕಿರುಚಾಟ, ಭೋರ್ಗರೆವ ಕಣ್ಣೀರು ಅಲ್ಲಿದ್ದವರನ್ನು ಇನ್ನಷ್ಟು ನೋವಿನ ಅಳುವಿನ ಕಡಲಿಗೆ ನೂಕುತ್ತಿತ್ತು. ಒಡ ಹುಟ್ಟಿದ ಜೀವಗಳು ಬದುಕು ನಾಶವಾದಂತೆ ನನ್ನ ಮೃತ ದೇಹವನ್ನು ಹಿಡಿದುಕೊಂಡು ಕಣ್ಣೀರಾಗುತ್ತಿತ್ತು. ನಮಗಿನ್ಯಾರು ದಿಕ್ಕು, ನಮ್ಮ ಸರ್ವಸ್ವವೇ ಹೋಯಿತಲ್ಲ ಎಂದು ಮನೆ ಮಂದಿಯೆಲ್ಲ ಬಿದ್ದುಬಿದ್ದು ಅಳುತ್ತಿದ್ದರು.
ಕೊನೆಗೂ ಆ ಅಂತಿಮ ಕ್ಷನ ಬಂದೇ ಬಿಟ್ಟಿತು. ನನ್ನ ದೇಹಕ್ಕೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿದರು. ಚಟ್ಟದ ಮೇಲೆ ಮಲಗಿಸಿ, ಹೂಮಾಲೆ ಹಾಕಿ ಅಂತಿಮ ನಮನ ಸಲ್ಲಿಸಿದರು. ಕೆಲವೇ ನಿಮಿಷದಲ್ಲಿ ಚಟ್ಟಕ್ಕೆ ಹೆಗಲು ಕೊಟ್ಟು ಅಂತ್ಯಸಂಸ್ಕಾರ ಸ್ಥಳಕ್ಕೆ ನನ್ನ ದೇಹನ್ನು ತಂದರು.
ರಾತ್ರಿ 11ರ ಸಮಯ. ಭೊರ್ಗರೆವ ಕಡಲಿನ ಶಬ್ದ ಅಲ್ಲಿದ್ದವರಿಗೆ ಆರ್ತನಾದದಂತೆ ಕೇಳುತ್ತಿತ್ತು. ನಿಶ್ಯಬ್ದಲ್ಲಿ ಸುಯ್ಯಂಗುಟ್ಟುವ ಕುಳಿರ್ಗಾಳಿಯು ಎದೆ ಬಡಿತವನ್ನು ಹೆಚ್ಚಿಸುತ್ತಿತ್ತು. ಮೊದಲೇ ಸಿದ್ಧಪಡಿಸಿದ ಕಟ್ಟಿಗೆ ರಾಶಿಯ ಮೇಲೆ ಮೃತ ದೇಹವನ್ನು ಮಲಗಿಸಿದು. ಅಂತಿಮ ನಮನ ಸಲ್ಲಿಸಲು ಹಾಕಿದ್ದ ಹೂ-ಮಾಲೆಗಳೆಲ್ಲವನ್ನು ಒಂದೊಂದಾಗಿ ತೆಗೆದರು. ತೊಡಿಸಿದ ಬಟ್ಟೆಯನ್ನೂ ಸಹ ತೆಗೆದು ದೇಹವನ್ನು ವಿವಸ್ತ್ರಗೊಳಿಸಿದರು.
ಹತ್ತಿರರದ ಬಂಧುವೊಬ್ಬರು(?) ಗಡಿಗೆ ಹಿಡಿದು ಮೂರು ಸುತ್ತು ಹಾಕಿ, ಹಿಮ್ಮುಖದಲ್ಲಿ ಅದನ್ನು ಅಲ್ಲಿಯೇ ಒಡೆದು ಹಾಕಿದರು. ಅಲ್ಲಿದ್ದ ಬಂಧು-ಮಿತ್ರರಿಗೆ ಇನ್ನು ಮುಂದೆ ನಾನು ಕೇವಲ ನೆನಪಷ್ಟೆ ಅನ್ನುವ ಸತ್ಯ ಸಾಕ್ಷಾತ್ಕಾರದ ಕಹಿ ಅನುಭವವಾದಂತಾಗಿ, ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಕೊನೆಗೂ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದರು. ನನ್ನ ದೇಹ ನಿಧಾನವಾಗಿ ಬೆಂಕಿಯ ಕೆನ್ನಾಲಿಗೆ ಬೆಂದು ಬೂದಿಯಾಗುತ್ತಿತ್ತು. ಮೂರ್ನಾಲ್ಕು ಗಂಟೆಯ ತರವಾಯ ಅಡಿ ಎತ್ತರಕ್ಕೆ ಹಾಕಿದ್ದ ಕಟ್ಟಿಗೆ ರಾಶಿ, ಆಳೆತ್ತರಕ್ಕೆ ವ್ಯಾಪಿಸುತ್ತಿದ್ದ ಬೆಂಕಿಯ ಅಬ್ಬರಕ್ಕೆ ಸುಟ್ಟು ಬೂದಿಯಾಗಿ ಹೋಗಿತ್ತು. ನನ್ನ ದೇಹವೂ ಕೂಡಾ ಆ ಕಟ್ಟಿಗೆಯ ಬೂದಿಯೊಳಗೆ ಬೆರೆತು ಬಿಟ್ಟಿತ್ತು. ಪಂಚ ಭೂತಗಳಲ್ಲಿ ನನ್ನ ದೇಹ ಒಂದಾಗಿ ಹೋಯಿತು.
'ಥೂ..... ಪಾಪಿ.. ಮುಂಡೇದು, ಹೊತ್ತು ನೆತ್ತಿಗೇರಿದರೂ ಇನ್ನೂ ಹಾಸಿಗೆಯ ಮೇಲೆಯೇ ಹೊರಳಾಡ್ತೀಯಾ' ಎಂದು ಅಮ್ಮ ತಣ್ಣನೆಯ ನೀರನ್ನು ತಂದು ಮುಖಕ್ಕೆ ಸಿಂಪಡಿಸಿದಳು. ಹುಸಿಕೋಪದ ಅಮ್ಮನ ಮುಖ ನೋಡಿ, 'ಅಬ್ಬಾ...!! ಬದುಕಿದ್ದೇನೆ. ಇನ್ನೂ ಸತ್ತಿಲ್ಲ' ಎಂದು ಕೊಂಡು ಮನದಲ್ಲಿಯೇ ನಸುನಕ್ಕೆ.......!!
-ನಾಗರಾಜ್ ಬಿ.ಎನ್. 
ಗೆದ್ದೇ ಗೆಲ್ಲುವೆ ಒಂದು ದಿನ........ 
ಎಲ್ಲಿಯವರೆಗೆ ಅಚಲ ಆತ್ಮವಿಶ್ವಾಸ ಇರುತ್ತದೋ ಅಲ್ಲಿಯವರೆಗೆ ಸೋಲು ಎನ್ನುವುದೇ ಇಲ್ಲ. ಸೋಲು ಎನ್ನುವುದು ನಮ್ಮ ಶತ್ರು ಆಗಬೇಕು.... ಅದರ ಜೊತೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳಬಾರದು. ಅದಕ್ಕೆ ಒಂದು ಬಾರಿ ತಲೆಬಾಗಿದೆವೆಂದರೆ, ಅನಿವಾರ್ಯತೆಯ ಸಂದರ್ಭಗಳು ಮೇಲಿಂದ ಮೇಲೆ ಆಗಮಿಸುತ್ತಲೇ ಇರುತ್ತವೆ. ಗೆದ್ದೆ ಗೆಲ್ಲುವೆ ಎನ್ನುವ ಅಚಲ ಆತ್ಮ ವಿಶ್ವಾಸ ಮೈಗೂಡಿಸಿಕೊಳ್ಳಬೇಕು. ಗೆಲುವಿನ ಮಾರ್ಗದ ಕುರಿತು ಸಕಾರಾತ್ಮಕವಾಗಿ ಚಿಂತಿಸುತ್ತಿರಬೇಕು. ಆ ನಿಟ್ಟಿನಲ್ಲಿ ಸದಾ ಕಾಯರ್ೋನ್ಮುಖವಾಗಬೇಕು. ಪರಿಶ್ರಮ, ಪ್ರಾಮಾಣಿಕ ಹಾಗೂ ನಿಸ್ವಾರ್ಥ ಹೃದಯಕ್ಕೆ ಎಂದೂ ಸೋಲೆಂಬುದೇ ಇಲ್ಲ......!! ಆಗ ಗೆಲುವು ನಮ್ಮನ್ನು ಬಿಗಿದಪ್ಪಿಕೊಳ್ಳುತ್ತದೆ.
ಪುಳಕಿತನಾದೆ ನಿಮ್ಮೀ ಪ್ರೀತಿಗೆ.....
ಎಂದೂ ನಿರೀಕ್ಷಿಸದ ಕಲ್ಪನೆಗೂ ಮೀರಿದ ಕ್ಷಣ. ಶಬ್ದಗಳ ಪದಪುಂಜಗಳಲಿ ಕಟ್ಟಿ ಹಾಕಲಾಗದ ಸನ್ನವೇಶ. ಮನಸ್ಸು ಆದೃಗೊಳಿಸಿದ ಗಳಿಗೆ. ಹಾಗೆಯೇ... ನನ್ನನ್ನು ನಾನೇ ಪ್ರಶ್ನಿಸಿಕೊಂಡ ಸಮಯವೂ ಅದಾಗಿತ್ತು.
ಸಂದರ್ಭ: ಈ ಹುಚ್ಚು ಹುಡುಗನ ಜನ್ಮದಿನ....!
ಜನ್ಮದಿನ ಎಂದರೆ ಅಷ್ಟಕ್ಕಷ್ಟೇ...! ಯಾವತ್ತೂ ಅದಕ್ಕೆ ಬೆಲೆ ನೀಡಿದವನೇ ಅಲ್ಲ. ಬದಲಾಗಿ, ಈ ಜನ್ಮದಿನದ ನೆನಪಿಗೋಸ್ಕರ ಕಳೆದ ಐದು ವರ್ಷಗಳಿಂದ ಒಂದು ಅನಾಥ ಮಗುವಿನ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದೆ. ಇದಕ್ಕೆ ಸ್ಫೂರ್ತಿಯ ಸೆಲೆಯಾಗಿ, ಬೆನ್ನೆಲುಬಾಗಿ ನಿಂತವಳು ನನ್ನಾತ್ಮ ಸಹೋದರಿ...! ಪ್ರತಿ ಬಾರಿ ಜನ್ಮ ದಿನದಂದು ಆ ಪುಟ್ಟ ಮಗುವಿದ್ದಲ್ಲಿಗೆ ಹೋಗಿ, ಕುಶಲ ಕ್ಷೇಮ ವಿಚಾರಿಸಿ, ಕಣ್ತುಂಬಿಸಿಕೊಂಡು, ಅರಿವಿಲ್ಲದೆ ಕಣ್ಣಂಚನ್ನು ಒದ್ದೆ ಮಾಡಿಕೊಂಡು ಬರುತ್ತಿದ್ದೆ. ಆದರೆ, ಈ ವರ್ಷ ಆ ಭಾಗ್ಯದಿಂದ ವಂಚಿತ. ಕಾಲಚಕ್ರದ ಉರುಳಾಟದಲ್ಲಿ ಕೆಲವು ನೈಜ್ಯತೆ ನೆನಪಾಗಷ್ಟೇ ಇರುತ್ತವೆ.
ಹೊಸ ಮನೆಯ ಮೂಲೆಯೊಂದರಲ್ಲಿ ಮೊಬೈಲ್ನ್ನು ಸೈಲೆಂಟ್ ಇಟ್ಟು, ಆ ಪುಟ್ಟ ಮಗುವಿನ ನೆನಪಲ್ಲಿಯೇ ನಿದ್ದೆ ಹೋಗಿದ್ದೆ. ನಾ ಮಲಗಿದ್ದರೂ ನನ್ನ ಮೊಬೈಲ್ ಮಲಗಿಲ್ಲ. ರಾತ್ರಿಯಿಡೀ ಸ್ನೇಹಿತರ, ಹಿತೈಷಿಗಳ ಸಂದೇಶ ಸ್ವೀಕರಿಸುವುದರಲ್ಲಿಯೇ ಅದು ನಿರತವಾಗಿತ್ತು. ಮುಂಜಾನೆದ್ದು ನೋಡಿದಾಗ ಇನ್-ಬಾಕ್ಸ್ನಲ್ಲಿ 47 ಸಂದೇಶಗಳು...! 21 ಮಿಸ್ ಕಾಲ್ಗಳು...! 
ಸುಮ್ಮನೆ ನಸುನಕ್ಕಿ ನನ್ನಷ್ಟಕ್ಕೆ ನಾನಿದ್ದೆ. ಪ್ರಾಣ ಸ್ನೇಹಿತ ಡಿವಿ ನನಗೆ ಒಂದಿನಿತೂ ಸಂದೇಹ ಬರದ ರೀತಿಯಲ್ಲಿ, ಹತ್ತಿರವಿದ್ದುಕೊಂಡೇ ಜನ್ಮದಿನಾಚರಣೆಯ ಎಲ್ಲ ತಯಾರಿಯನ್ನು ನಡೆಸಿದ್ದರು. ಲಗು ಬಗೆಯಲ್ಲಿ ಸ್ನಾನ ಮಾಡಲು ಹೇಳಿ, ಸಹದ್ಯೋಗಿ ಬಸವರಾಜ ಬಂಕಾಪುರ ಅವರೊಂದಿಗೆ ಎಲ್ಲಿಗೋ ಹೋದವರು, ಬರುವಾಗ ಕೇಕ್(ಪ್ಯೂವರ್ ವೆಜ್) ಮತ್ತು ಸ್ನ್ಯಾಕ್ಸ್ ಖರೀದಿಸಿ ತಂದಿದ್ದರು. ಅಷ್ಟರಲ್ಲಾಗಲೇ, ನನ್ನೆಲ್ಲ ವೃತ್ತಿ ಬಂಧುಗಳು ಒಬ್ಬರ ಹಿಂದೊಬ್ಬರಂತೆ ಸಾಲು ಸಾಲಾಗಿ ನಮ್ಮ ಹೊಸ ಮನೆಗೆ ಆಗಮಿಸುತ್ತಿದ್ದರು. ನೋಡು ನೋಡುತ್ತಿದ್ದಂತೆ ಇಬ್ಬರಿದ್ದದ್ದು ನಾಲ್ಕಾಗಿ, ನಾಲ್ಕಿದ್ದದ್ದು ಎಂಟಾಗಿ ಕೊನೆಗೆ ಹದಿನಾರರ ಸಂಖ್ಯೆಗೆ ಬಂದು ತಲುಪಿತ್ತು.
ಎದುರಗಡೆ ಕೇಕ್... ಅದರ ಮೇಲೊಂದು ಮಿಂಚಿನ ಸುರಬತ್ತಿ...! ಕೈಯ್ಯಲ್ಲಿ ಬೆಂಕಿ ಪೊಟ್ಟಣ ಕೊಟ್ಟ ಡಿವಿ, ಸುರಬತ್ತಿ ಹಚ್ಚಲು ಹೇಳಿದರು. ಇವೆಲ್ಲವೂ ನನಗೆ ಹೊಸ ಅನುಭವ. ಒಂದು ಬಾರಿ ಗೀರಿದ ಬೆಂಕಿ ಕಡ್ಡಿ, ಹೇಗೆ ಬೆಂಕಿಯಾಯಿತೋ ಹಾಗೆಯೇ ನಂದಿ ಹೋಯಿತು.. ಇನ್ನೊಂದು ಗೀರಿ... ತುಸು ನಿಧಾನವಾಗಿ ಸುರಬತ್ತಿಗೆ ಬೆಂಕಿ ಹೊತ್ತಿಸಿದೆ. ಸುರ್... ಎಂದು ತನ್ನ ಚಿತ್ತಾರ ಬಿಡಿಸಿ, ಅಲ್ಲೆ ಮಾಯವಾಯಿತು. ಅಷ್ಟರಲ್ಲಾಗಲೇ ನನ್ನ ಬಳಗದವರೆಲ್ಲ ಜೋರಾಗಿ ಹ್ಯಾಪಿ ಬರ್ಥಡೇ ಎಂದು ಶುಭ ಕೋರುತ್ತ, ಕೇಕ್ ಕಟ್ ಮಾಡಲು ಹೇಳಿದರು. ಕೇಕ್ ಸಂಸ್ಕೃತಿಯ ವಿರೋಧಿಯಾದ ನಾನು, ಪ್ರೀತಿಗೆ ಮಂಡಿಯೂರಿ ಶಿರಬಾಗಿ ಬಿಟ್ಟಿದ್ದೆ. ಅಂತೂ ಕೇಕ್ ಕಟ್ ಮಾಡಿ, ಸ್ನೇಹಿತ ಬಸವರಾಜ ಹೂಗಾರ(ಉದಯವಾಣಿ) ಅವರ ಅಕ್ಕನ ಪುಟ್ಟ ಮಗಳಿಗೆ ಕೇಕ್ ತಿನ್ನಿಸಿ, ಜನ್ಮದಿನ ಆಚರಿಸಿಕೊಂಡೆ. ನಂತರ ಗುರು ಸರ್, ನವೀ, ಜೋಶಿ ಸರ್, ಸಿದ್ದೇಶ, ಗುರು ಸರ್(ಫೋಟೋಗ್ರಾಫರ್), ಮಂಜಣ್ಣ, ವಿವೇಕ, ಬಾಬು, ಕಿಶನ್ ಸರ್, ವಿಕ್ರಮ, ಶಿವು, ಬಸು ಹೀಗೆ ಎಲ್ಲರೂ ಕೇಕ್ ಬಾಯಿಗೆ ತುಂಬಿ ಉಸಿರಾಡಲಾಗದಂತೆ ಮಾಡಿ ಬಿಟ್ಟರು...!
ಸಂದರ್ಭದಲ್ಲಿ ನನ್ನ ಒಳ ಮನಸ್ಸು ಸ್ಥಬ್ಧವಾಗಿ, ಅವರ ಪ್ರೀತಿಯ ಕಡಲಲ್ಲಿ ತೇಲಾಡುತ್ತಿತ್ತು. ಭಾವುಕನಾಗಿ ನನ್ನಷ್ಟಕ್ಕೇ ನಾನೇ ಮಾತನಾಡಿಕೊಳ್ಳುತ್ತಿದ್ದೆ. ಇಷ್ಟೊಂದು ಆಪ್ತವಾಗಿ ಒಂದು ಮಗುವಿನಂತೆ ಎಲ್ಲರೂ ಒಂದೆಡೆ ಸೇರಿಜನ್ಮದಿನ ಆಚರಿಸಿದರಲ್ಲಾ... ಇದಕ್ಕೆ ನಾನು ಅರ್ಹನೇ ಎಂದು..? ಖಂಡಿತ ಗೊತ್ತಿಲ್ಲ.... ಆದರೆ, ನನ್ನವರಾದ ಅವರೆಲ್ಲರ ಪ್ರೀತಿಗೆ ನಾ ಸದಾ ಋಣಿ ಎಂದಷ್ಟೇ ಹೇಳಬಲ್ಲೆ...!
ನೂರಾರು ಸ್ನೇಹಿತರು ಫೇಸ್-ಬುಕ್ ಮತ್ತು ವಾಟ್ಸ್-ಅಪ್ ನಲ್ಲಿ ಶುಭಾಶಯದ ಸುರಿಮಳೆಯನ್ನೇ ಸುರಿಸಿದ್ದಾರೆ. ಪರಿಚಿತರು, ಪರಿಚಿತರಲ್ಲದವರೂ, ಹೈಸ್ಕೂಲ್ ಸ್ನೇಹಿತರು, ಕಾಲೇಜ್ ಸ್ನೇಹಿತರು, ಬಂಧುಗಳು, ಸಹದ್ಯೋಗಿಗಳು, ಗುರುಗಳು, ಹಿತೈಷಿಗಳು, ಮಾರ್ಗದರ್ಶಕರು ಹೀಗೆ ಬಹುತೇಕರು ಜನ್ಮದಿನಕ್ಕೆ ಶುಭಕೋರಿದ್ದಾರೆ. ಅವರೆಲ್ಲರಿಗೂ ನನ್ನ ತುಂಬು ಹೃದಯದ ವಂದನೆಗಳು
-ನಾಗರಾಜ್ ಬಿ.ಎನ್. 
'ಅಬ್ಬಲ್ಲಿ ದಂಡೆ' ಮುಡಿಗೇರಿಸುವಾಸೆ, ಪ್ಲೀಸ್............ 

ಮೊಗ್ಗು ಮಲ್ಲಿಗೆ, 
ಒಪ್ಪಿಕೊಳ್ಳುತ್ತೇನೆ ನೀ ನನ್ನ ಬೆಸ್ಟ್ ಫ್ರೆಂಡ್ ಎಂದು. ಆದರೆ, ಅವತ್ತು 'ನಿನಗಾಗಿ' ಸಿನೆಮಾ ನೋಡಿದಾಗಿನಿಂದ ಮನಸ್ಸಲ್ಲಿ ಏನೋ ಗುಜುಗುಜು ಸದ್ದು ಕೇಳಿಸಲಾರಂಭಿಸಿತು. ನೋಡು ಸಿನೇಮಾದುದ್ದಕ್ಕೂ ನಾ ವಿಜಯ ರಾಘವೇಂದ್ರ, ನೀ ರಾಧಿಕಾ ಅನ್ನಿಸಿದ್ದಂತೂ ನೂರಕ್ಕೆ ನೂರು ಸತ್ಯ. ಅವತ್ತೇ ನನಗೆ ನಾ ಅರ್ಥವಾಗಿದ್ದು. ಅಲ್ಲಾ ಕಣೇ, ನೀ ನನ್ನ ಮನಸಿನ ರತಿಯಾಗಬಾರದು ಎಂದು ಕಾನೂನು ಏನಾದರೂ ಇದೆಯಾ? ನಮ್ಮಜ್ಜಿ ಆಣೆಯಾಗಲೂ ಇಲ್ಲ ನನ್ನರಗಿಣಿ.
ಆದರೆ, ಆ 'ಚಿನ್ನಾರಿ ಮುತ್ತ'ನ ತರಹ ನನಗೂ ಕಾಡಿದ್ದೂ ಅದೇ...! 'ನಿನ್ನ ಬಳಿ ನನ್ನ ಪ್ರೀತಿ ನಿವೇದಿಸಿಕೊಂಡು, ಸ್ನೇಹಕ್ಕೂ ಬ್ರೇಕ್ ಬಿದ್ದು ಬಿಟ್ಟರೆ.....?' ಅಯ್ಯಯ್ಯೋ ದಮ್ಮಯ್ಯ ಅಂತೀನಿ ಕಣೇ... ಒಂದು ಕ್ಷಣಾನೂ ನಿನ್ನ ಬಿಟ್ಟಿರೋಕೆ ಆಗದೆ ಒದ್ದಾಡ್ತಾ ಇರ್ತೀನಿ, ಅನುಕ್ಷಾ-ಕೋಯ್ಲಿ ತರಹ. ಅಂದ ಮೇಲೆ? ಇಲ್ಲ ಕಣೇ.. ಕಾಯ್ತೀನಿ. ನಿನ್ನ ಒಂದು ಕಣ್ಣಸನ್ನೆಗಾಗಿ!
ನಾನು ಸಲ್ಲುಮಿಯಾ ಅಂತೂ ಅಲ್ಲಾ. ನಾನು ನಾನೇ. ನಿನ್ನ ಅದೇ ಹಳೆಯ ಮಾಧವ. ನನ್ನ ಹೃದಯ ನುಡಿಸುವ ಮುರಳೀ ಗಾನದಲ್ಲಿ ಇರುವುದು ಒಂದೇ ಒಂದು ರಾಗ. ಅದು ಕೇವಲ ನೀನು. ನನ್ನ ಅಂತರಂಗದ ಆಗಸದಲ್ಲಿ ಸಾವಿರಾರು ನಕ್ಷತ್ರಗಳಿಲ್ಲ. ಅಲ್ಲಿರುವುದು ಚಂದ್ರನ ಪ್ರತಿಬಿಂಬದಂತಿರುವ ನೀನು ಮಾತ್ರ. ಬೆಳದಿಂಗಳ ತಂಪಲ್ಲಿ ನಾನು ತೋಯುತ್ತಿರಬೇಕು ಎಂಬ ಆಸೆ. ಪ್ಲೀಸ್... ನನ್ನ ಕಿರು ಬೆರಳು ಹಿಡಿಯುತ್ತೀಯಾ?
ಮುಂಜಾವಿನಲ್ಲಿ ಅಮ್ಮ, 'ಸಾಕು ಮಲಗಿದ್ದು. ಏಳೋ ಸೋಂಬೇರಿ' ಎಂದಾಗ ಎದ್ದು `ಕರಾಗ್ರೆ ವಸತೇ ಲಕ್ಷ್ಮೀ' ಎನ್ನುವಾಗ ಕೈ ನೋಡಿದಾಗ ಅಲ್ಲಿ 'ಹಾಯ್..' ಅನ್ನುತ್ತಾ ನಸು ನಗೆ ಬೀರುವ ತುಂಟಿ ನೀನೇ... ಎದ್ದು ಕನ್ನಡಿ ನೋಡುತ್ತಾ ಹಲ್ಲುಜ್ಜುವಾಗ ಆ ಕನ್ನಡಿಯೊಳಗಿಂದ ಕದ್ದು ಇಣುಕುವವಳೂ ನೀನೇ... ತಿಂಡಿ ಕೊಡಲೆಂದು ಅಮ್ಮ ತಟ್ಟೆ ತಂದಿಟ್ಟಾಗ, ಹೊಳೆವ ಆ ಸ್ಟೀಲ್ ತಟ್ಟೆಯಲ್ಲೂ ನೀನೇ... ಹುಡುಗಿ, ಇಡೀ ದಿನ ನಿನ್ನದೇ ಗುಂಗಿನಲ್ಲಿ ಇರೋ ನನಗೆ ಮತ್ತೇನು ಕಾಣಲು ಸಾಧ್ಯ ಹೇಳು?
ನನ್ನ ಸೈಕಲ್ ಹಿಂದೆ ನೀ ಹಾರಿ ಕುಳಿತು 'ನೋಡೋ ನಂಗೂ ಬರತ್ತೇ ಹಾರಿ ಕೂರೋಕೆ' ಎಂದು ನೀನಂದಾಗ, ನಾ ಅಂದುಕೊಳ್ಳುತ್ತೇನೆ. 'ಜೀವನದ ಸೈಕಲ್ ತುಳಿಯುವಾಗ ಹಿಂದುಗಡೆ ನೀನಿದ್ದರೆ ಎಷ್ಟು ಚೆನ್ನ' ಅಂತಾ... ಅದೇ ಸ್ನೇಹದ ಸಲಿಗೆ, ತರಲೆ ಜೊತೆಗೆ ಮೊಗೆದಷ್ಟು ಉಕ್ಕುವ ಪ್ರೀತಿ. ಸಾಕಲ್ವಾ ನಮ್ಮ ಪಾಲಿಗೆ, ಮತ್ತೀನ್ನೇನು ಬೇಕು ಹೇಳು?
ಮುಸ್ಸಂಜೆ ಹೊತ್ತಲ್ಲಿ ಮನೆ ಅಂಗಳದಲ್ಲಿ ಅರಳುವ ಮಧ್ಯಾಹ್ನ ಮಲ್ಲಿಗೆ ನೋಡುತ್ತಿದ್ದಾಗ, ಒಮ್ಮೊಮ್ಮೆ ನಿನ್ನ ಮುದ್ದು ಮುಖ ನೆನಪಾಗಿ ಬಿಡುತ್ತೇ ಕಣೇ. ಆಗ ನೀನಿದ್ದ ಹಾಸ್ಟೇಲ್ ಕಡೆ ಸುಮ್ಮನೇ ಸೈಕಲ್ ತುಳಿದು ಬಿಡುತ್ತೇನೆ. ಅರ್ಧ ದಾರಿ ಕ್ರಮಿಸುತ್ತಿದ್ದಂತೆ 'ಹೇ.. ಲೋಸು, ಬೇಡ ಕಣೋ. ಹಾಸ್ಟೇಲ್ ಮುಂದೆ ಬರಬೇಡ' ಎಂದು ಅಳುಮುಖ ಮಾಡಿಕೊಂಡು ನೀ ಹೇಳಿದ್ದು ನೆನಪಾಗಿ ಬಿಡುತ್ತದೆ. ಅದಕ್ಕೆ ಸೈಕಲ್ ದೂಡಿಕೊಂಡು ವಾಪಸ್ ಮರುಳುತ್ತೇನೆ. ಕ್ಷಣ ಕ್ಷಣವೂ ಹಿಂತಿರುಗಿ ನೋಡುತ್ತ, ಎಲ್ಲಿಯಾದರೂ ನೀ ಹೊಳಕುತ್ತೀಯಾ ಎಂದು!
ನೀ ಎಲ್ಲ ಹುಡುಗಿಯರ ತರಹ ಅಲ್ಲ ಕಣೇ. ನೀನೊಂದು ವಿಶೇಷ. ಮುಗಿಯದ ಕವನ. ನನ್ನ ಪ್ರೀತಿ ಪದಕ್ಕೆ ನೀನೇ ಪಲ್ಲವಿ, ನೀನೇ ಶೀರ್ಷಿಕೆ. ಯಾಕೇ ಹುಡುಗಿ, ಸಮಯ ಸಿಕ್ಕಾಗಲೆಲ್ಲ ನೀ ನನ್ನ ಗೋಳು ಹೊಯ್ದುಕೊಳ್ಳುತ್ತ ಇರುತ್ತೀಯಾ? ಸ್ವಲ್ಪ ಕಡಿಮೆ ಮಾಡು. ಪ್ಲೀಸ್...
ನೀನು ಹೇಳುತ್ತೀಯಲ್ಲ, 'ನಿನ್ನ ಸಂತೋಷವೊಂದು ಸಾಕು. ಮತ್ತೇನೂ ಬಯಸಲಾರೆ ಬದುಕಲ್ಲಿ' ಎಂದು. ಆದರೆ, ನನ್ನ ಸಂತೋಷ ನೀನು! ನನ್ನ ಯಶಕ್ಕಾಗಿ ಹಂಬಲಿಸುತ್ತೀಯಾ ಅಲ್ವಾ? ಅದು ನೀ ನನ್ನ ಜೊತೆಗಿದ್ದರೆ ಮಾತ್ರ....
ನಮ್ಮಮ್ಮ ಕಟ್ಟಿಟ್ಟ ಅಬ್ಬಲಿ ಹೂವಿನ ದಂಡೆಯನ್ನು ಕದ್ದುಕೊಂಡು ನಾಳೆ ನೀನಿದ್ದಲ್ಲಿಗೆ ಬರುತ್ತೇನೆ. ರೇಶಿಮೆಯಂತ ನಿನ್ನ ಕೂದಲಿಗೆ ನನ್ನ ಕೈಯ್ಯಾರೆ ಅದನ್ನು ಮುಡಿಗೇರಿಸಬೇಕೆಂಬ ಪುಟ್ಟ ಆಸೆ ಕಣೇ! ಅನುಮತಿ ನೀಡುತ್ತೀಯಾ...?
-ನಿನ್ನ ಮಾಧವ
 nrajbn@gmail.com
ಕ್ಷಮಿಸಿ....
'ಇನ್ಲ್ಯಾಂಡ್ ಲೆಟರ್ ಸಮಾಧಿಯಾಗಿದೆ.....!!'
ಮೊಬೈಲ್ ಸಂಭಾಷಣೆಯಲ್ಲಿ ಹೇಳಲಾಗದ ಎಷ್ಟೋ ಭಾವನೆಗಳು ನಮ್ಮಲ್ಲಿ ಹುದುಗಿರುತ್ತವೆ. ಹೀಗೆ ಮಾತು ಮೌನವಾದಾಗ ನೆರವಿಗೆ ಬರುವುದು ಸುಂದರ ಅಕ್ಷರ ಸರಸ್ವತಿಯೇ...! ಮುಖಕ್ಕೆ ಮುಖ ಕೊಟ್ಟು ಹೇಳಲಾಗದ ವಿಷಯಗಳನ್ನು ತಿಳಿಸುವ ತಾಕತ್ತು ಇರುವುದು ಈ ಅಕ್ಷರಕ್ಕೆ ಮಾತ್ರ. ಅಣ್ಣ ತಂಗಿಗೆ ಕಿವಿಹಿಂಡಿ ಬರೆಯುವ ಪತ್ರ, ಅಪ್ಪ-ಅಮ್ಮರಿಗೆ ಬರೆಯುವ ಭಯಮಿಶ್ರಿತ ಪತ್ರ, ಸ್ನೇಹಿತರಿಗೆ ಬರೆಯುವ ತುಂಟ ಪತ್ರ, ಹಿರಿಯರಿಗೆ ಬರೆಯುವ ಗೌರವ ಪತ್ರ, ಅಜ್ಜ-ಅಜ್ಜಿಯರಿಗೆ ಬರೆಯುವ ಮುಗ್ದ ಪತ್ರ, ಪ್ರೇಮಿಸುವ ಹುಡುಗ/ಹುಡುಗಿ ಬರೆಯುವ ಪ್ರೇಮ ಪತ್ರ... ಹೀಗೆ ಎಲ್ಲ ಪತ್ರಗಳು ಒಂದಕ್ಕೊಂದು ಭಿನ್ನ-ವಿಭಿನ್ನವಾಗಿರುತ್ತವೆ. ಇಂತಹ ಅದ್ಭುತ ಪತ್ರ ಬರೆಯುವ ಕಲೆ, ಹವ್ಯಾಸ ಕಾಲಚಕ್ರದ ಉರುಳಾದಲ್ಲಿ ನಮ್ಮಿಂದ ಕಣ್ಮರೆಯಾಗುತ್ತಿರುವುದು ವಿಪರ್ಯಾಸ.....!!
ಪ್ರತಿಯೊಂದು ಬದಲಾವಣೆಗೆ 'ಕಾಲ'ನ ಕಡೆಗೆ ಬೆರಳು ತೋರಿಸುವ ನಾವು ಎಷ್ಟೋ ಮಾನವ ಸಂಬಂಧಗಳನ್ನು ಅದರಿಂದ ದೂರ ಮಾಡಿಕೊಳ್ಳುತ್ತಿದ್ದೇವೆ. ಆಧುನಿಕತೆಯ ತೆಕ್ಕೆಗೆ ಸಿಲುಕಿ `ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಾ' ಇದ್ದೇವೆ. ಸುಂದರ, ಸವಿ ಮಧುರ ಆತ್ಮಗಳ ನಡುವಿನ ಸಂಪರ್ಕ ಸೇತುವೆಯನ್ನೆ ತುಂಡರಿಸಿಕೊಂಡು ಬಿಟ್ಟಿದ್ದೇವೆ....!!
ಹೌದು, 'ಅಭಿವೃದ್ಧಿಯೆಂಬ ಅವನತಿ'ಯೆಡೆಗೆ ಮುಖ ಮಾಡಿ, ಸಂಪೂರ್ಣ ಬದುಕನ್ನೇ ಯಾಂತ್ರಿಕರಣ ಮಾಡಿಕೊಂಡಿದ್ದೇವೆ. ಪ್ರತಿ ದಿನದ ಬೆಳಗನ್ನು ನಮ್ಮ ಎರಡೂ ಅಂಗೈನ್ನು ನೋಡಿಕೊಂಡು 'ಕರಾಗ್ರೆ ವಸತೆ ಲಕ್ಷ್ಮೀ ಕರಮಧ್ಯೆ ಸರಸ್ವತಿ.......' ಎಂಬ ಶ್ಲೋಕ ಹೇಳಿ ದೈನಂದಿನ ಕಾರ್ಯ ಪ್ರಾರಂಭಿಸುತ್ತಿದ್ದೇವು. ಆದರೆ ಈಗ, ರಾತ್ರಿ ಮಲಗುವಾಗ ತಲೆ ಪಕ್ಕದಲ್ಲಿಟ್ಟ ಮೊಬೈಲ್ನಲ್ಲಿ `ಯಾವ ಹೊಸ ಸಂದೇಶ ಬಂದಿದೆ...?', 'ಯಾರು ಶುಭೋದಯದ ಸಂದೇಶ ಕಳುಹಿಸಿದ್ದಾರೆ....?', 'ಯಾರಿಗೆ ಫೋನ್ ಮಾಡಬೇಕು?' ಎಂದು ಯೋಚಿಸುತ್ತ ಮೊಬೈಲ್ ನೋಡುತ್ತಲೇ ಕಣ್ಣರಳಿಸುತ್ತೇವೆ. ಎಲ್ಲಿ ಹೋದವು ನಮ್ಮ ಸಂಸ್ಕಾರ... ಸಂಸ್ಕೃತಿ....?
ಇಂದು ಅಂಗೈಯಲ್ಲಿಯೇ ಪ್ರಪಂಚವಿದೆ. ಪ್ರಪಂಚದ ಯಾವುದೇ ಭಾಗದ ಮಾಹಿತಿ ಅಥವಾ ಸುದ್ದಿಗಳು ಕ್ಷಣ ಮಾತ್ರದಲ್ಲಿ ನಮ್ಮ ಕಣ್ಣೆದುರು ಗೋಚರಿಸುತ್ತವೆ. ದಿನದಿಂದ ದಿನಕ್ಕೆ ಪ್ರಪಂಚ ಕಿರುದಾಗುತ್ತ ಸಾಗುತ್ತಿವೆ. ಸಾವಿರಾರು ಕಿ.ಮೀ. ದೂರದಲ್ಲಿರುವ, ಸಪ್ತಸಾಗರದ ಆಚೆ ಎಲ್ಲೋ ಇರುವ ಸ್ನೇಹಿತರನ್ನು, ಬಂಧುಗಳನ್ನು ಇಂದು ಕ್ಷಣ ಮಾತ್ರದಲ್ಲಿ ಸಂಪರ್ಕಿಸಬಹುದಾಗಿದೆ. ಆದರೆ ಈ ಸಂಪರ್ಕ ಸೀಮಿತ ಅವಧಿಯಲ್ಲಿ ಕೆಲವು ಯೋಗ ಕ್ಷೇಮಕ್ಕಷ್ಟೇ ಮೀಸಲಾಗಿರುತ್ತವೆಯೇ ಹೊರತು, ಭಾವನಾತ್ಮಕ ಸಣ್ಣಪುಟ್ಟ ಸೂಕ್ಷ್ಮ ಸಂವೇದನೆಗೆ ಅವಕಾಶ ನೀಡದು. ಅಲ್ಲೇನಿದ್ದರೂ, ಕರೆನ್ಸಿ ಅವಲಂಬಿತ ವ್ಯಾವಹಾರಿಕ ಮಾತುಕತೆ, ಇಲ್ಲವೇ ಕೆಲವು ವೇಳೆ ಯೋಗ ಕ್ಷೇಮ ವಿನಮಯವಷ್ಟೇ...!!
ಈ ಹಿಂದೆ ಸಂಬಂಧಗಳನ್ನು ಬೆಸೆಯಲು ಮುಖ್ಯ ವೇದಿಕೆಯಾಗಿ ಪತ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ದೂರದಲ್ಲೆಲ್ಲೋ ವಿದ್ಯಾಭ್ಯಾಸ, ಉದ್ಯೋಗ ಮಾಡುತ್ತಿದ್ದವರು ಈ ಪತ್ರದ ಮೂಲಕವೇ ಕುಟುಂಬದವರೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು. ಮಗನ ಪತ್ರದ ದಾರಿ ಕಾಯುವ ಅಪ್ಪ-ಅಮ್ಮ... ಅಪ್ಪ-ಅಮ್ಮರ ಪತ್ರದ ದಾರಿ ಕಾಯುವ ಮಗ... ಪ್ರೇಯಸಿಯ ಪತ್ರದ ಸಾಲುಗಳನ್ನು ಓದುವ ಕಾತುದರಲ್ಲಿರುವ ಪ್ರಿಯಕರ.... ಹೀಗೆ ತವಕ, ತಲ್ಲಣಗಳು ಆ ಪತ್ರದ ಕಾಯುವಿಕೆಯಲ್ಲಿ ಸಿಗುತ್ತಿತ್ತು. ಪತ್ರದ ಒಂದೊಂದು ಸಾಲುಗಳು ಕೂಡಾ ನೆನಪು, ಕನಸು, ಕನವರಿಕೆ, ಆಶಯ, ಅಭಿಪ್ರಾಯ, ಕೀಟಲೆ, ತುಂಟತನ, ಪ್ರೀತಿ, ಮಮತೆ, ವಿಶ್ವಾಸ, ಕಕ್ಕುಲಾತಿ, ಕಾಳಜಿಗಳನ್ನು ಸಾಕ್ಷಾತ್ಕರಿಸುತ್ತಿತ್ತು. ಈ ಮೂಲಕ ಪರಸ್ಪರ ಸಂಬಂಧ ಹಾಗೂ ಭಾವನೆಗಳು ಇನ್ನಷ್ಟು ಆಳವಾಗುತ್ತ ಹೋಗುತ್ತಿತ್ತು. ಆದರೆ, ಮೊಬೈಲ್ ಮಾಯೆಯಿಂದಾಗಿ ಪತ್ರ ಬರೆಯುವ ಹವ್ಯಾಸ ಮಾಯವಾಗಿ, ಸಂಬಂಧ-ಭಾವನೆಗಳೆಲ್ಲ ಕೇವಲ ವ್ಯಾಪಾರ ವಹಿವಾಟು ಆಗಿಬಿಟ್ಟಿವೆ.
ಮೊಬೈಲ್ನಲ್ಲಿ ಸಂಭಾಷಣೆ ಮಾಡುವಾಗ ನಮ್ಮ ಗಮನವೆಲ್ಲ ಕೇವಲ ಕರೆನ್ಸಿ ಕಡೆಗೇ ಕೇಂದ್ರಿಕೃತವಾಗಿರುತ್ತವೆ. ವ್ಯವಹಾರದ ದ್ಯೋತಕ ಮನಃಸ್ಥಿತಿಯಾದ ಇದು ಸಂಬಂಧ ಹಾಗೂ ಭಾವನೆಗಳಿಗೆ ಅವಕಾಶವಿಲ್ಲದಂತೆ ಮಾಡುತ್ತದೆ. ಮೊಬೈಲ್ ಮಾತುಕತೆಗಳು ಪತ್ರದಷ್ಟು ಆಪ್ತ ಹಾಗೂ ಮಧುರ ಎಂದೆನಿಸದು. ಪತ್ರದಲ್ಲಿ ಬರೆದಿರುವ ಅಷ್ಟೂ ಸಾಲುಗಳ ಒಂದೊಂದು ಶಬ್ದಗಳು ಭಾವನೆಯ ಕೊಳದಲ್ಲಿ ಮಿಂದೆದ್ದು ಬಂದಿರುತ್ತವೆ. ಆ ಒಂದೊಂದು ಪದಗಳು ಹೃದಯದ ಗೂಡಲ್ಲಿ ನುಗ್ಗಿ, ಬೆಚ್ಚಗೆ ಅವಿತು ಬಿಡುತ್ತವೆ.
ಮನೆಯಲ್ಲಿರುವ ನಾಯಿ-ಬೆಕ್ಕಿನ ಸ್ನೇಹ ಹೇಗಿದೆ...? ಕೊಟ್ಟಿಗೆಯಲ್ಲಿ ಹೊಸ ಅತಿಥಿಯಾರಾದರೂ ಬಂದಿದ್ದಾರೋ ಇಲ್ಲವೋ...? ಪಕ್ಕದ್ಮನೆ ಸೋಮಣ್ಣ ಮದುವೆ ಆದನಾ...? ಹಾಲು ಮಾರುವ ಹುಡುಗ ಗೋಪಿ ಈಗಲೂ ಬರುತ್ತಿದ್ದಾನಾ...? ಅಜ್ಜಿಯ ಆರೋಗ್ಯ ಈಗ ಹೇಗಿದೆ...? ನಾನು ಪ್ರೀತಿಸುವ ಮರ, ಗಿಡಗಳೆಲ್ಲ ಹೇಗಿವೆ...? ಇಂತಹ ಸಣ್ಣ ಪುಟ್ಟ ಭಾವ ಸಂವೇದನಾತ್ಮಕ ವಿಷಯಗಳನ್ನು ಪತ್ರದಲ್ಲಿ ಮಾತ್ರ ಬರೆಯಲು ಸಾಧ್ಯವೇ ಹೊರತು ಮೊಬೈಲ್ನಲ್ಲಿ ಸಾಧ್ಯವಿಲ್ಲ.
ಒಮ್ಮೆ ಬರೆದ ಅಥವಾ ಬಂದ ಪತ್ರಗಳನ್ನು ಹಾಗೆಯೇ ಜೋಪಾನ ಮಾಡಿಟ್ಟುಕೊಂಡು, ವರ್ಷಗಳ ನಂತರವೂ ಓದಬಹುದು. ಅಂದಿನ ಭಾವನೆ ಹಾಗೂ ಬದುಕನ್ನು ನೆನಪಿಸಿಕೊಂಡು ನಮ್ಮನ್ನು ನಾವು ಅರ್ಥೈಸಿಕೊಳ್ಳಬಹುದು. ಅದು ಬದುಕಿಗೆ ಹೊಸ ತಿರುವು ನೀಡಿ, ನಾವೆಲ್ಲ ಮರೆಯುತ್ತಿರುವ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯನ್ನು ಜಾಗೃತಗೊಳಿಸಲು ಸಹಕಾರಿಯಾಗಬಹುದು. ಅದು ಒಂದು ನುಡಿಚಿತ್ರವಿದ್ದಂತೆ. ಸದಾ ಹಸಿರಿನಿಂದ ಕಂಗೊಳಿಸುತ್ತ, ನಳನಳಿಸುತ್ತಲೇ ಇರುತ್ತದೆ. ಓದಿದಷ್ಟು ಸಾಲದು. ಒಂದೊಂದು ಬಾರಿ ಓದಿದಾಗಲೂ ಒಂದೊಂದು ಭಾವ. ಮೈ-ಮನ ಪುಳಕಗೊಳ್ಳುವ ಸಂತೋಷವನ್ನು ಮೊಗೆ ಮೊಗೆದು ನೀಡುತ್ತವೆ.
ಎಂದೋ... ಯಾರೋ... ಮಾಡಿದ ನಾಲ್ಕೈದು ಶಬ್ದಗಳ ಸಂದೇಶವನ್ನು ಮೊಬೈಲ್ ಇನ್ ಬಾಕ್ಸ್ನಲ್ಲಿ ಬಚ್ಚಿಟ್ಟುಕೊಂಡು, ದಿನಕ್ಕೆ ಎರಡು-ಮೂರು ಬಾರಿ ನೋಡಿ ಸಂತೋಷ ಪಡುವ ನಾವು, ಸ್ನೇಹಿತರದ್ದೋ... ಅಪ್ಪ-ಅಮ್ಮರದ್ದೋ ಪತ್ರ ಬಂದರೆ ಇನ್ನೆಷ್ಟು ಆನಂದ ಪಡಬಹುದು ಅಲ್ಲವೇ?
ಹಾಗೆಯೇ, ನಮ್ಮ ಆಪ್ತೇಷ್ಟರಲ್ಲಿ ಯಾರಿಗಾದರೂ ಒಂದು ಪತ್ರ ಬರೆಯೋಣ. ಪರಸ್ಪರ ಭಾವನೆಗಳನ್ನು ಅಕ್ಷರ ಸರಸ್ವತಿಯ ಮೂಲಕ ವಿನಿಮಯ ಮಾಡಿಕೊಳ್ಳೋಣ. ಆಗ ನೋಡಿ, ಮನಸ್ಸು ಹಕ್ಕಿಯಂತೆ ಹೇಗೆ ಗರಿ ಬಿಚ್ಚಿ ಬಾನಂಗಳದಲ್ಲಿ ತೇಲಾಡುತ್ತದೆಯೆಂದು. ಈ ಪತ್ರ ಆತ್ಮಾನುಬಂಧದ ಅನೂಹ್ಯ ಸೆಳೆತಕ್ಕೆ ಒಳಗಾಗಿಸಿ ಪ್ರೀತಿ, ಸ್ನೇಹ, ವಿಶ್ವಾಸದ ನೆಲಗಟ್ಟನ್ನು ಇನ್ನಷ್ಟು ಭದ್ರವಾಗುತ್ತದೆ.
ಸೂಕ್ಷ್ಮ ಸಂವೇದನಾಶೀಲ ಗುಣಗಳನ್ನು ನಮ್ಮಲ್ಲಿ ಜಾಗೃತವಾಗಿಸಿ, ಇಡೀ ಜಗತ್ತನ್ನೇ ಪ್ರೀತಿಸು ಮಹೋನ್ನತ ಗುಣವನ್ನು ನೀಡಿ, ಬದುಕನ್ನು ಸಂತೃಪ್ತಿಗೊಳಿಸುವ ಒಂದು ಪುಟ್ಟ ಪತ್ರ, ಪ್ರಪಂಚವನ್ನೇ ಕಿರಿದು ಮಾಡಿದ ಆಧುನಿಕ ಜಗತ್ತಿನ ಮೊಬೈಲ್ ನೀಡಲು ಸಾಧ್ಯವೇ.......!
-ನಾಗರಾಜ್ ಬಿ.ಎನ್.
ಇದು ಕಥೆಯಲ್ಲ.....!
ಇಬ್ಬರು ಆತ್ಮೀಯ ಸ್ನೇಹಿತರು. ಬಾಲ್ಯದಿಂದ ಪದವಿಯವರೆಗೂ ಒಂದೇ ಶಾಲೆ, ಕಾಲೇಜ್ ನಲ್ಲಿ ಜೊತೆಯಾಗಿಯೇ ಅಭ್ಯಸಿದವರು. ನಂತರ ಇಬ್ಬರೂ ಬೇರೆ ಬೇರೆ ವಿವಿಯಲ್ಲಿ ಸ್ನಾತಕ ಅಭ್ಯಾಸ, ಅವರಿಗೆ ಇಷ್ಟದ ವಿಷಯದ ಮೇಲೆ. ಇಬ್ಬರೂ ಉನ್ನತ ಉದ್ಯೋಗದಲ್ಲಿದ್ದಾರೆ. ವಾರಕ್ಕೆರಡು ಬಾರಿಯಾದರೂ ಮೂರ್ನಾಲ್ಕು ಬಾರಿ ದೂರವಾಣಿಯಲ್ಲಿ ಸಂಕರ್ಪವಾದರೆ, ತಿಂಗಳಿಗೊಮ್ಮೆಯಾದರೂ ಭೆಟ್ಟಿಯಾಗಲೇ ಬೇಕು... ಹೀಗಿದೆ ಅವರಿಬ್ಬರ ಸ್ನೇಹ.
ಆದರೆ,
ದೀಪಾವಳಿ ಕಳೆದ ಎರಡು ದಿನಕ್ಕೆ ರಾಕೇಶನ ಜನ್ಮದಿನ. ಹಬ್ಬಕ್ಕೆಂದು ಊರಿಗೆ ಬಂದಿದ್ದ ರಾಕೇಶನಿಗೆ, ಸ್ನೇಹಿತ ಮಿಥುನ ಬಂದಿಲ್ಲ ಎನ್ನುವ ಕೊರಗು. ಒಂದು ವಿಷಯ ಅವನಲ್ಲಿ ಎದುರಾಗೇ ಹೇಳಬೆಕು ಎಂದು ಆತ ಹಾತೊರೆಯುತ್ತಿದ್ದ. ಹುಟ್ಟಿದ ದಿನಕ್ಕಾದರೂ ಬಂದೇ ಬರುತ್ತಾನೆ ಎನ್ನುವ ನಂಬಿಕೆ ಇತ್ತು. ಅದು ಕೂಡಾ ಹುಸಿಯಾಗಿತ್ತು.
ಮುಂಜಾನೆಯಿಂದ ರಾತ್ರಿವರೆಗೂ ರಾಕೇಶನಿಗೆ ಜನ್ಮದಿನದ ಸಂದೇಶ, ಕರೆಗಳ ಸುರಿಮಳೆ. ಊಹೂಂ... ಅದರಲ್ಲಿ ಮಿಥುನನ ಕರೆ ಇರಲೇ ಇಲ್ಲ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಮೊಬೈಲ್ ರಿಂಗಣಿಸುತ್ತದೆ. ಮಿಥುನ ಆಗ ಕರೆ ಮಾಡಿದ್ದ.... ವಿಶ್ ಮಾಡಿ, ಯೋಗಕ್ಷೇಮ ವಿಚಾರಿಸುತ್ತಾನೆ. ನೂರಾರು ಹಾರೈಕೆಯ ಮಾತುಗಳನ್ನು ಒಂದೇ ಉಸಿರಿನಲ್ಲಿ ಹೇಳುತ್ತಾನೆ. ಆ ಸಂತಸದಲ್ಲಿಯೇ ಇತ್ತ ರಾಕೇಶ, ಮಿಥುನನಿಗೆ ತನ್ನಿಂದ ಒಂದು ಸಂತಸದ ವಿಷಯ ಹೇಳಲು ಮುಂದಾಗುತ್ತಾನೆ....
'ಸ್ವಲ್ಪ ತಡಿಯೋ ಮಾರಾಯ... ಏನೋ ಹೇಳ್ಬೇಕು ಅಂತ ಎರಡು ದಿನದಿಂದ ನಿನ್ನ ಕಾಲ್ ಮಾಡ್ತಾ ಇದ್ದೀನಿ...'
'ಸಾರಿ ಕಣೋ.. ಕೆಲಸದ ಒತ್ತಡ. ತುಂಬಾ ಬ್ಯುಸಿಯಾಗಿದ್ದೆ. ಕಿವಿ ಹಿಡ್ಕೊಂಡೆ. ಸರಿನಾ, ಈಗ ಹೇಳು'
'ಇದ್ಕೇನು ಕಡಿಮೆಯಿಲ್ಲ, ನಮ್ಮ ಮನೆಯಲ್ಲಿ ನನ್ನ ಮದುವೆಗೆ ಹುಡುಗಿ ನೋಡಿದ್ದಾರೆ ಕಣೋ'
'ರಿಯಲಿ... ಅಬ್ಬಾ...! ನಿನ್ನ ಜನ್ಮದಿನಕ್ಕೆ ಇದಕ್ಕಿಂತ ದೊಡ್ಡ ಸಂತೋಷ  ಬೇರೇನೂ ಇಲ್ವೋ... ಅಂತೂ, ನನ್ನ ಚಡ್ಡಿ ದೋಸ್ತ ದೊಡ್ಡವನಾದ ಅಂತಾಯ್ತು'
'ಹಾಗೇನಿಲ್ಲ ಕಣೋ.. ಜನವರಿ ಸಂಕ್ರಮಣದ ದಿನ ನಿಶ್ಚಿತಾರ್ಥ ಮಾಡಿ, ಬೇಸಿಗೆಯಲ್ಲಿ ಮದುವೆ ಮಾಡಲು ನಿರ್ಧರಿಸಿದ್ದಾರೆ. ನಿನಗೇ ಪ್ರಾಥಮವಾಗಿ ಈ ವಿಷಯ ಹೇಳ್ತಾ ಇದ್ದೀನಿ'
'ಥ್ಯಾಂಕ್ಸ್ ಕಣೋ... ಅಂದ ಹಾಗೆ, ನಮ್ಮ ಅತ್ಗ್ಯಮ್ಮ ಏನ್ಮಾಡ್ತಾ ಇದ್ದಾಳೆ?  ಎಲ್ಲಿರೋದು?  ಯಾವ ಊರು?'  ಎಂದು ಮಿಥುನ ಮರು ಪ್ರಶ್ನಿಸುತ್ತಾನೆ.
ಎಲ್ಲವನ್ನು ಎಳೆ ಎಳೆಯಾಗಿ ರಾಕೇಶ ಮೊಬೈಲ್ ನಲ್ಲಿಯೇ ಮಿಥುನನಿಗೆ ಹೇಳುತ್ತಾನೆ. ಅವೆಲ್ಲವನ್ನು ಮಿಥುನ ಸುಮ್ನೆ ಕೇಳ್ತಾ ಕೇಳ್ತಾ, ಮೌನಕ್ಕೆ ಜಾರಿ ಬಿಡುತ್ತಾನೆ.
ಅತ್ತ ರಾಕೇಶ, ಹಲೋ... ಹಲೋ... ಎಂದು ಏಳೆಂಟು ಬಾರಿ ಕೂಗಿ, ನೆಟ್-ವರ್ಕ್ ಪ್ರಾಬ್ಲಮ್ ಎಂದು ಕರೆ ಕಟ್ ಮಾಡುತ್ತಾನೆ.
ಪ್ರಾಣ ಸ್ನೇಹಿತ ರಾಕೇಶನ ಕೈ ಹಿಡಿಯಲಿರುವ ಹುಡುಗಿ, ಮಿಥುನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹುಡುಗಿಯಾಗಿದ್ದಳು. ಅವಳಿಗಾಗಿ ನೂರಾರು ಕನಸನ್ನು ಹೆಣೆದು, ಪ್ರೀತಿಯ ಮಹಲನ್ನು ಕಟ್ಟಿ, ಅಲ್ಲಿ ಎಲ್ಲವೂ ಪ್ರೀತಿನೇ ಆಗಿರಬೇಕು ಎಂದುಕೊಂಡಿದ್ದ. ತಾನು ಪ್ರೀತಿಸುತ್ತಿರುವ ವಿಷಯ ಅವಳಲ್ಲಿ ಹೇಳಿಕೊಂಡಿದ್ದ. ಅವಳು ಕೂಡಾ ಅವನನ್ನು ಮನಸಾರೆ ಇಷ್ಟಪಟ್ಟಿದ್ದಳು. ಆದರೆ, ಆಕೆ ಎಂದಿಗೂ ತಾನು ಪ್ರೀತಿಸುತ್ತಿರುವ ವಿಷಯ ಮಿಥುನನಲ್ಲಿ ಹೇಳಿರಲಿಲ್ಲ. ಒಂದಿಲ್ಲೊಂದು ಸಮಸ್ಯೆಗೆ ಒಳಪಡಿಸಿ, ಪರೀಕ್ಷೆಗೆ ಒಳಪಡಿಸುತ್ತಲೇ ಇದ್ದಳು. ಜೀವಕ್ಕಿಂತ ಹೆಚ್ಚಾಗಿ ಮಿಥುನ ತನ್ನನ್ನು ಪ್ರೀತಿಸ್ತಾ ಇದ್ದಾನೆ ಎನ್ನುವುದು ಅವಳಿಗೆ ಗೊತ್ತಿತ್ತು. ಆತ ಇಷ್ಟವಾಗಿದ್ದರೂ, ಆತನ ಪ್ರೀತಿಯ ಯಾವ ಕೋರಿಕೆಯನ್ನು ಅವಳು ಸ್ವೀಕರಿಸಿರಲಿಲ್ಲ. ಆ ಸಂದರ್ಭದಲ್ಲೆಲ್ಲ ಅವನ ಮೇಲೆ ಸುಮ್ಮನೆ ರೇಗಾಡುತ್ತಿದ್ದಳು. 'ನಾನು ಈಗಾಗಲೆ ಒಬ್ಬನನ್ನು ಪ್ರೀತಿಸ್ತಾ ಇದ್ದೇನೆ. ನನಗೆ ಈಗಾಗಲೇ ಮದುವೆ ನಿಶ್ಚಯವಾಗಿದೆ' ಎಂದು ಸುಳ್ಳು ಹೇಳುತ್ತಿದ್ದಳು. ಇನ್ನು ಮುಂದೆ ಕರೆ, ಸಂದೇಶ ಏನು ಮಾಡಬೇಡ ಎಂದು ಮಿಥುನನ ದೂರವಿಡಲು ಪ್ರಯತ್ನಿಸುತ್ತಿದ್ದಳು. ಮಿಥುನನ ಪ್ರೇಮ ಒಂದೆರಡು ದಿನದಲ್ಲ... ಎರಡ್ಮೂರು ತಿಂಗಳಿನದ್ದೂ ಅಲ್ಲ... ಬರೋಬ್ಬರಿ ನಾಲ್ಕು ವರ್ಷದ ಪ್ರೇಮ....! ಆತ ತನ್ನೆಲ್ಲ ಭಾವವನ್ನು ಆಕೆಯಲ್ಲಿ ಹೇಳಿಕೊಂಡು, ಪ್ರೇಮ ಭಿಕ್ಷೆಗಾಗಿ ಎದುರು ನೋಡುತ್ತಿದ್ದ, ನಾಲ್ಕು ವರ್ಷಗಳ ಪರ್ಯಂತ.... ಪ್ರತಿ ದಿನ... ಪ್ರತೀ ಕ್ಷಣ......!
ಹೀಗಿದ್ದಾಗ ಆತನ ಪ್ರಾಣ ಸ್ನೇಹಿತ ರಾಕೇಶನೇ ಆಕೆಯನ್ನು ವರಿಸಲು ಸಿದ್ಧನಾಗದ್ದಾನೆ ಎನ್ನುವ ಸಂಗತಿ, ಮಿಥುನನಿಗೆ ಎಷ್ಟು ಘಾಸಿ ಮಾಡಿರಬೇಡ....!?
ನಾಲ್ಕು ವರ್ಷ ಪ್ರತಿ ಕ್ಷಣವೂ ಅವಳಿಗಾಗಿ ಮಿಡಿದ ಆತನ ಹೃದಯ ಸ್ತಬ್ಧವಾಗುತ್ತಿದೆ. ಏರಳಿತದ ಪ್ರತಿಯೊಂದು ಉಸಿರಿನಲ್ಲೂ ಪ್ರೇಯಸಿ ಎನ್ನುತ್ತಿದ್ದವ, ಅರಿವಲ್ಲದೆ 'ಅತ್ಗ್ಯಮ್ಮ' ಎಂದು 'ಅಮ್ಮ'ನ ಸ್ಥಾನ ನೀಡಿ ಬಿಟ್ಟಿದ್ದ. 'ಕಾಲಚಕ್ರದ ಉರುಳಾಟ.... ಇಲ್ಲಿ ನಾವೆಲ್ಲ ನಿಮಿತ್ತ ಮಾತ್ರ' ಎನ್ನುತ್ತ ಏನೇನೋ ಯೋಚನೆ ಮಾಡುತ್ತ ಮಿಥುನ ಆಕಾಶದೆಡೆ ದೃಷ್ಟಿ ಹಾಯಿಸಿದ್ದಾನೆ. ದಟ್ಟ ಕಾರ್ಗತ್ತಲ ನೀರವ ಮೌನದಲ್ಲಿ ಕೆನ್ನೆಯಿಂದ ಕಣ್ಣೀರ ಹನಿಗಳು ಒಂದೊಂದಾಗಿ ಜಾರುತ್ತಿವೆ. ಎರಡು ಕಣ್ಣಾಲಿಗಳು ತೋಯ್ದು ತೊಪ್ಪೆಯಾಗಿವೆ. ಆತನಿಗೆ ಸಮಾಧಾನಿಸಲು ಅಲ್ಲಿ ಇದ್ದದ್ದು ಮೌನದ ಜೊತೆ ಕವಿದ ಕತ್ತಲು ಮಾತ್ರ....!
-ನಾಗರಾಜ್ ಬಿ.ಎನ್.
ನಾನು ಮತ್ತು ಅವಳು
                                               (ಹೀಗೊಂದು ಪ್ರೀತಿ)
ಕಳೆದ ಮೂರು ವರ್ಷಗಳಿಂದ ಅವಳು ನನಗೆ ಪರಿಚಯ. ಪ್ರತಿದಿನ ಆಫೀಸ್ನಿಂದ ರೂಂಗೆ ಬರುವಾಗ ಅವಳು ಎದುರಾಗುತ್ತಾಳೆ. ನನ್ನನ್ನು ನೋಡಿದ ಕೂಡಲೇ ಓಡೋಡಿ ಬರುತ್ತಾಳೆ. ಅವಳ ತಲೆಯನ್ನು ನೇವರಿಸಿ, ಮುದ್ದು ಮಾಡುತ್ತೇನೆ. ಸಂದರ್ಭದಲ್ಲಿ ಆಕೆಯ ಕಣ್ಣಲ್ಲಿ ಸ್ಫುರಿಸುವ ಮುಗ್ಧ ಪ್ರೀತಿ, ನನ್ನನ್ನು ಸಂತೃಪ್ತನನ್ನಾಗಿಸುತ್ತದೆ. ಅಷ್ಟೊಂದು ಗಾಢ ಸ್ನೇಹ ನಮ್ಮಿಬ್ಬರದ್ದು.
ಆಕೆ ಅನಾಮಧೇಯೆ, ನಾಯಿ ಸಂಕುಲಕ್ಕೆ ಸೇರಿದವಳು. ಸದ್ಯ ನಾಲ್ಕು ಮಕ್ಕಳ ಮಹಾತಾಯಿ. ನಿರ್ದಿಷ್ಟ ಸ್ಥಳವಿಲ್ಲದ ಆಕೆಗೆ, ಹಾದಿ-ಬೀದಿಯೇ ವಾಸಸ್ಥಾನ. ವಾರದಲ್ಲಿ ಮೂರ್ನಾಲ್ಕು ಬಾರಿಯಾದರೂ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ಅವಳು ವೀರಾಪುರ ರಸ್ತೆಯ(ರಾಧಾಕೃಷ್ಣ ಗಲ್ಲಿಯಿಂದ-ಅಗಸರ ಓಣಿ)ಲ್ಲಿ ಎದುರಾಗೇ ಆಗುತ್ತಾಳೆ. ಪ್ರಾರಂಭದಲ್ಲಿ ನನ್ನ ಹತ್ತಿರ ಬರಲು ತುಸು ನಾಚುತ್ತಿದ್ದ ಆಕೆ, ಈಗಂತ ನನ್ನ ಕಂಡೊಡನೇ ಓಡೋಡಿ ಬರುತ್ತಾಳೆ. ಅವಳ ತಲೆ ನೇವರಿಸಿ ಮುದ್ದು ಮಾಡಿ, ಏನಾದರೂ ತಿಂಡಿ ತಿನ್ನಿಸಿ ಕಳುಹಿಸುತ್ತೇನೆ. ಸಂದರ್ಭದಲ್ಲಿ ಅವಳ ಕಣ್ಣಲ್ಲಿ ಸ್ಫುರಿಸುವ ಪ್ರೀತಿ, ಮುಗ್ಧ ಭಾವ ನನ್ನನ್ನು ಸಂತೃಪ್ತನಾಗಿಸುತ್ತದೆ.
ಧಾವಂತದ ಬದುಕು. ಇದಕ್ಕೆ ಪೂರಕವಾದ ಬ್ಯಾಚುರಲ್ ಜೀವನ. ಏನು ತಿಂದೆ? ಯಾವಾಗ ಊಟ ಮಾಡಿದೆ? ಎಂದು ಹೇಳೊರು, ಕೇಳೋರು ಇಲ್ಲಿ ಯಾರು ಇಲ್ಲ. ವಾರದಲ್ಲಿ ನಾಲ್ಕೈದು ದಿನ ರೂಮಲ್ಲಿಯೇ ಊಟ-ತಿಂಡಿ ಮಾಡಿ, ಉಳಿದ ದಿನಗಳಿಗೆ ಹೊಟೆಲ್ ಆಶ್ರಯಿಸುತ್ತೇನೆ. ರಾತ್ರಿ ರೂಮಿಗೆ ಬರುವಾಗ ಯಾವುದಾದರೂ ಹೊಟೆಲ್ನಿಂದ ಅನ್ನ-ಸಾಂಬಾರು, ಇಡ್ಲಿ-ವಡಾ, ಪಲಾವ್, ಚಿತ್ರಾನ್ನ ಹೀಗೆ ಏನಾದರೂ ಪಾರ್ಸಲ್ ತೆಗೆದುಕೊಂಡು ಬರುವ ಪರಿಪಾಠ.
ನನ್ನ ಅವಳ ಸ್ನೇಹದ ಪ್ರಾರಂಭದ ದಿನಗಳಲ್ಲಿ, ನಾನು ಊಟ ಪಾರ್ಸಲ್ ತೆಗೆದುಕೊಂಡು ಬರುವ ಸಂದರ್ಭದಲ್ಲೆಲ್ಲ ಧುತ್ತೆಂದು ಅವಳು ಎದುರಾಗುತ್ತಿದ್ದಳು. ಇನ್ನೇನು ಬಾಲ ಕಿತ್ತೇ ಹೋಗುತ್ತದೆ ಎನ್ನಬೇಕು...! ಅಷ್ಟೊಂದು ಜೋರಾಗಿ ಬಾಲ ಅಲ್ಲಾಡಿಸುತ್ತ ಮುಂದೆ ನಿಲ್ಲುತ್ತಿದ್ದಳು. ಹಸಿದ ಹೊಟ್ಟೆಯ ತೊಳಲಾಟ ಅವಳ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪಾರ್ಸಲ್ ತಂದ ಊಟವನ್ನೇ ಅವಳಿಗೆ ನೀಡಿ, ತಲೆ ನೇವರಿಸಿ ರೂಂ ಕಡೆ ಹೆಜ್ಜೆ ಹಾಕುತ್ತಿದ್ದೆ. ಹೊಟ್ಟೆ ತುಂಬಿದ ತೃಪ್ತ ಭಾವ ಅವಳದ್ದಾದರೆ, ಹೊಟ್ಟೆ ತುಂಬಿಸಿದ ಸಂತೃಪ್ತಿ ನನ್ನದಾಗುತ್ತಿತ್ತು.
ಒಮ್ಮೊಮ್ಮೆ ರೂಮಿನಲ್ಲಿ ಏನೂ ತಿಂಡಿಗಳಿರುತ್ತಿರಲಿಲ್ಲ. ಅಡುಗೆ ಮಾಡಿಕೊಳ್ಳೋಣ ಎಂದರೆ ರಾತ್ರಿ 10 ಆಗಿರುತ್ತಿತ್ತು. ಮೊದಲೇ ದಣಿದು ಬಂದಿದ್ದಕ್ಕೆ, ಹಾಸಿಗೆ ಸಿಕ್ಕರೆ ಸಾಕು ಎನ್ನುವ ಫೀಲ್. ಆಗೆಲ್ಲ, ತಣ್ಣನೆಯ ನೀರನ್ನು ಹಸಿದ ಹೊಟ್ಟೆಗೆ ಇಳಿಸಿ ತಂಪಾಗಿಸಿಕೊಳ್ಳುತ್ತಿದ್ದೆ. ನಂತರದ ದಿನಗಳಲ್ಲಿ ಅವಳು ಎಲ್ಲಿಯಾದರೂ ಸಿಗಬಹುದು ಎಂದು, ಎರಡೆರಡು ಪಾರ್ಸಲ್ ತೆಗೆದುಕೊಂಡು ಬರುತ್ತಿದ್ದೆ. ಬಹುತೇಕ ಬಾರಿ ಸಿಗುತ್ತಿದ್ದಳು. ಸಿಗದಿದ್ದಾಗ ಅಲ್ಲಿಯೇ ಇರುವ ದನ-ಕರುಗಳಿಗೆ ಒಂದು ಪಾರ್ಸಲ್ ನೀಡಿ ಬರುತ್ತಿದ್ದೆ.
ಆದರೆ, ಆ ಪ್ರೀತಿ, ಮುಗ್ಧತೆ, ಸಂತೃಪ್ತ ಭಾವ... ಇನ್ನು ಕೇಲವೇ ಕೆಲವು ದಿನಗಳು ಮಾತ್ರ. ಬದುಕಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿ ಅವಳ ಸ್ನೇಹದಿಂದ ದೂರಾಗುವ ಸಮಯ ಎದುರಾಗುತ್ತಿದೆ. ಇನ್ನು ಮುಂದೆ, ಆಕೆಯ ಪ್ರೀತಿ....? ಆಕೆಯ ಹಸಿವು...? ಆ ಸಂತೃಪ್ತ ಭಾವ...? ಹಸಿವು ನೀಗಿಸಿದ ತಣ್ಣನೆಯ ತಣ್ಣೀರು...? ಎಲ್ಲಿ, ಹೇಗೆ, ಎಂತು....?
-ನಾಗಾರಾಜ್. ಬಿ.ಎನ್ 
ಹೀಗೂ ಇರ್ತಾರೆ... ಎಚ್ಚರ... ಎಚ್ಚರ..!!!
ಆಕೆ ನನ್ನ ಸ್ನೇಹಿತನ ಸ್ನೇಹಿತೆ. ಈಗಷ್ಟೇ ಪಿಯುಸಿ ಮುಗಿಸಿ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾಳೆ. ಸಾಮಾನ್ಯ ಕುಟುಂಬದಿಂದ ಬಂದ ಆಕೆ, ಓದಿನಲ್ಲಿ ಬುದ್ಧಿವಂತಳು. ಶಾಂತ ಸ್ವಭಾವದ ಹುಡುಗಿಯಾದ ಅವಳು, ಸ್ನೇಹಿತರ ಅಚ್ಚುಮೆಚ್ಚಿನ ಗೆಳತಿಯಾಗಿದ್ದಳು. ಚಿಕ್ಕ ಕುಟುಂಬದಲ್ಲಿ ಅಪ್ಪ ಅಮ್ಮರೇ ದೈವ ಸ್ವರೂಪಿ, ಬೆನ್ನಿಗೆ ಅಂಟಿಕೊಂಡು ಬಂದ ತಮ್ಮನೇ ಬಾಲ್ಯದ ಜೊತೆಗಾರ.
ಆಕೆಯ ಹೆಸರು ಶ್ವೇತಾ(ಹೆಸರು ಬದಲಾಯಿಸಲಾಗಿದೆ). ಬದುಕಲ್ಲಿ ತಾನು ಏನಾದರೂ ಸಾಧಿಸಬೇಕೆನ್ನುವ ಅಚಲ ಮನೋಭಾವದ ಹುಡುಗಿ. ಪದವಿ ಶಿಕ್ಷಣಕ್ಕಾಗಿ ಊರು ಬಿಟ್ಟು ನಗರಕ್ಕೆ ಬರುತ್ತಾಳೆ. ಹಾಸ್ಟೆಲ್ ಜೀವನದಲ್ಲಿ ಅವಳಿಗೆ ಎಲ್ಲವೂ ಹೊಸತಾಗಿ ಕಾಣುತ್ತದೆ.
ಹಳ್ಳಿಯಲ್ಲಿ ಬೆಳೆದ ಶ್ವೇತಾ ಆಧುನಿಕ ಜಗತ್ತಿಗೆ ನಿಧಾನವಾಗಿ ತೆರದುಕೊಳ್ಳುತ್ತಿದ್ದಾಳೆ. ಕೈಯ್ಯಲ್ಲೊಂದು ಸ್ಮಾರ್ಟ್ ಫೋನ್ ಬಂದಿದೆ. ಮೊದಮೊದಲು ಮನೆಯ ಕರೆಗಷ್ಟೇ ಸೀಮಿತವಾಗುತ್ತಿದ್ದ ಫೋನ್, ನಂತರ ನೆಟ್ ಸರ್ಫಿಂಗೆ ಬಳಕೆಯಾಗುತ್ತಿತ್ತು. ನಿಧಾನವಾಗಿ ಜಿ-ಮೇಲ್ ಅಕೌಂಟ್, ಗೂಗಲ್ ಅಕೌಂಟ್, ಪೇಸ್ಬುಕ್ ಅಕೌಂಟ್ಗಳೆಲ್ಲ ಪ್ರಾರಂಭವಾದವು. ವಿದ್ಯಾಭ್ಯಾಸದ ಜೊತೆಗೆ ಇಂಟರ್-ನೆಟ್ ಸರ್ಫಿಂಗ್ ಕೂಡಾ ಅವಳಿಗೆ ಅಭ್ಯಾಸವಾಗುತ್ತ ಹೋಯಿತು.
ಸಮಯ ದೊರೆತಾಗಲೆಲ್ಲ ಶ್ವೇತಾ ಫೇಸ್-ಬುಕ್ ಜಾಲತಾಣದಲ್ಲಿ ಮುಳುಗೇಳುತ್ತಿದ್ದಳು. ಪ್ರಾಣಿ, ಪಕ್ಷಿ, ಪ್ರಕೃತಿಯ ಚಿತ್ರ ಹಾಗೂ ಸ್ನೇಹಿತೆಯರ ಮತ್ತು ತನ್ನ ಫೊಟೋಗಳನ್ನು ಪೋಸ್ಟ್ ಮಾಡುತ್ತ, ಸ್ನೇಹಿತರಿಂದ ಸಾಕಷ್ಟು ಲೈಕ್, ಕಮೆಂಟ್ಸ್ ಪಡೆಯುತ್ತಿದ್ದಳು. ಇದೊಂದು ಅವಳಿಗೆ ಪರಿಪಾಠವೇ ಆಗಿ ಹೋಯಿತು. ಒಮ್ಮೊಮ್ಮೆ ತನ್ನ ಕ್ಲೋಸ್-ಅಪ್ ಫೊಟೋ ಹಾಕಿ ತನ್ನಷ್ಟಕ್ಕೆ ತಾನೇ ಸಂತೋಷ ಪಡೆಯುತ್ತಿದ್ದಳು. ಆ ಸಂತೋಷಕ್ಕೆ ಅನೇಕ ಸ್ನೇಹಿತರು ಮುಕ್ತವಾಗಿ ಕಮೆಂಟ್ಸ್ ಮಾಡುತ್ತಿದ್ದರು. ಆ ಕಮೆಂಟ್ಸ್ಗಳು ಅವಳಿಗೆ ಅವ್ಯಕ್ತ ಆನಂದ ಉಂಟು ಮಾಡುತ್ತಿತ್ತು.
ಹೀಗಿರಲು ಒಂದು ದಿನ ಶ್ವೇತಾಳಿಗೆ ಫೇಸ್-ಬುಕ್ನಲ್ಲಿ ಆಘಾತಕಾರಿ ಚಿತ್ರವೊಂದು ಕಣ್ಣಿಗೆ ಬೀಳುತ್ತದೆ. ಆಕೆಗೆ ಅದು ನಂಬಲೇ ಆಗುತ್ತಿಲ್ಲ. ತನ್ನ ಬದುಕೇ ನಾಶವಾಯಿತು ಎಂದೆಲ್ಲ ಯೋಚಿಸುತ್ತಾಳೆ. ಅವಳ ಕಣ್ಣೆದುರು... ಪ್ರೀತಿಯ ಅಪ್ಪ, ಮಮತೆಯ ಅಮ್ಮ, ಆತ್ಮೀಯ ತಮ್ಮ ಎಲ್ಲರೂ ಒಮ್ಮೆ ಹಾದು ಹೋಗುತ್ತಾರೆ. ಚಿಕ್ಕ ಅಚಾತುರ್ಯ ಜೀವವನ್ನೇ ಬಲಿ ತೆಗೆದುಕೊಳ್ಳುವ ಸನ್ನಿವೇಶಕ್ಕೆ ನೂಕುತ್ತದೆ ಎಂದು ಅವಳು ಕನಸು-ಮನಸಿನಲ್ಲೂ ಊಹಿಸಿರಲಿಲ್ಲ. ಅರೆಕ್ಷಣದಲ್ಲಿ ಕತ್ತಲಾವರಿಸಿದಂತಾಗಿ, ಅಲ್ಲಿಯೇ ಕುಸಿದು ಬೀಳುತ್ತಾಳೆ...!!
ಹಾಗಾದರೆ ಆಗಿದ್ದೇನು...?
ಸ್ಮಾರ್ಟ್ ಫೋನ್ ಖರೀದಿಸದ ಪ್ರಾರಂಭದಲ್ಲಿ ಕೇವಲ ಸಂಭಾಷಣೆಗಷ್ಟೇ ಬಳಕೆಯಾಗುತ್ತಿತ್ತು. ನಂತರ ಸಾಮಾಜಿಕ ಜಾಲತಾಣ ಎನ್ನುವ ಮಾಯಾಲೋಕ ಶ್ವೇತಾಳನ್ನು ಬಿಗಿದಪ್ಪಿಕೊಳ್ಳುತ್ತದೆ. ತೀರಾ ವೈಯಕ್ತಿಕ ಎಂದೆನಿಸುವ ಸಾಕಷ್ಟು ಕ್ಲೋಸ್-ಅಪ್ ಫೊಟೋಗಳನ್ನು ಅವಳು ಫೇಸ್-ಬುಕ್ ಖಾತೆಗೆ ಪೋಸ್ಟ್ ಮಾಡಿರುತ್ತಾಳೆ. ನೋಡಲು ಸುಂದರವಾಗಿರುವ ಆಕೆಯ ಫೊಟೋಗಳನ್ನು ವಿಕೃತ ಮನಸ್ಸಿನವನೊಬ್ಬ ಡೌನ್-ಲೋಡ್ ಮಾಡಿಕೊಂಡು, ಅಸಹ್ಯ ರೀತಿಯಲ್ಲಿ ಚಿತ್ರಿಸಿ ಪೋಸ್ಟ್ ಮಾಡಿದ್ದಾನೆ. ಆ ಫೊಟೋ ನೋಡಿದ ಕೂಡಲೇ ಶ್ವೇತಾಳಿಗೆ ನಿಜವಾಗಿಯೂ ಅದು ತಾನೇ ಎಂದು ಭಾಸವಾಗಿದೆ. ಸಾರ್ವಜನಿಕವಾಗಿ ಹಾಗೂ ಸ್ನೇಹಿತರೆದುರು ತನ್ನ ಮಾನ-ಮಯರ್ಾದೆ ಹರಾಜಾಯಿತಲ್ಲ ಎಂದು ಅವಳು ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾಳೆ.
ಸ್ನೇಹಿತರೇ..................
ದಯವಿಟ್ಟು ಈ ಪ್ರಕರಣದ ತೀವ್ರತೆ ಹಾಗೂ ಆಳವನ್ನು ಸೂಕ್ಷ್ಮವಾಗಿ ಅರಿಯಿರಿ. ನಿಮ್ಮ ಫೇಸ್-ಬುಕ್ ಅಕೌಂಟ್ ಜೊತೆ ನಿಮ್ಮ ಅಕ್ಕ, ತಂಗಿ, ಸ್ನೇಹಿತೆಯರದ್ದು ಇರಬಹುದು. ಎಲ್ಲರಿಗೂ ಅವರವರದ್ದೇ ಆದ ಫೇಸ್-ಬುಕ್ ಸ್ನೇಹಿತರಿರುತ್ತಾರೆ. ಅವರಲ್ಲಿ ಕೆಲವಷ್ಟು ಜನ ಪರಿಚಿತರಿದ್ದರೆ, ಬಹಳಷ್ಟು ಜನ ಅಪರಿಚಿತರೇ ಇರುತ್ತಾರೆ. ಅಲ್ಲದೆ, ಸ್ನೇಹಿತರಲ್ಲದವರೂ ಕೂಡಾ ನಮ್ಮ ಅಕೌಂಟ್ಗೆ ಪ್ರವೇಶ ಪಡೆಯಬಹುದು, ಫೋಟೋಗಳನ್ನು ಜಾಲಾಡಬಹುದು ಅಲ್ಲವೇ? ಸುಳ್ಳು ಹೆಸರಿನಲ್ಲಿಯೂ ಖಾತೆ ಹೊಂದಿ, ಸ್ನೇಹಿತರಾಗಿರಬಹುದು. ಅವರ್ಯಾರು, ಎಲ್ಲಿಯವರು ಎನ್ನುವ ಚಿಕ್ಕ ಮಾಹಿತಿಯೂ ನಮಗಿರುವುದಿಲ್ಲ.
ಕೆಲವರು ಮಹಿಳೆಯರ ಫೊಟೋಗಳನ್ನು ಸಾಮಾಜಿಕ ಜಾಲತಾಣದಿಂದ ಡೌನ್-ಲೋಡ್ ಮಾಡಿಕೊಂಡು ಅಶ್ಲೀಲ ಜಾಲತಾಣಕ್ಕೆ ಅದನ್ನು ಅಪ್-ಲೋಡ್ ಮಾಡುತ್ತಿದ್ದಾರೆ. ಅದರಲ್ಲೂ-ಕಾಲೇಜ್ ಹುಡುಗಿಯರ ಫೋಟೋಗಳನ್ನೇ ಅವರು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಫೋಟೊಗಳನ್ನು ಎಲ್ಲಿಯೂ ಅನುಮಾನ ಬರದ ರೀತಿಯಲ್ಲಿ ಕ್ರಾಪ್ ಮಾಡಿ ಅಶ್ಲೀಲ ಚಿತ್ರಕ್ಕೆ ಜೋಡಿಸುತ್ತಾರೆ. ಈ ಕಾರ್ಯ ನಿರ್ವಹಿಸಲು ಪರಿಣಿತ ಸಿಬ್ಬಂದಿ ನೇಮಿಸಿಕೊಂಡು, ಒಂದೊಂದು ಫೊಟೋ ಕ್ರಾಪ್ ಮಾಡಲು 500, 1,000 ರೂ.ಗಳನ್ನು ನೀಡುತ್ತಾರೆ. ವಿದೇಶಗಳಲ್ಲಿ ಈ ವಿಕೃತ ಮನಸ್ಸಿನ ಜಾಲವೇ ಇದ್ದು, ಅದು ಈಗ ಭಾರತಕ್ಕೂ ವ್ಯಾಪಿಸಿದೆ. ಇದೊಂದು ದೊಡ್ಡ ವ್ಯವಹಾರವಾಗಿ ಮಾರ್ಪಟ್ಟಿದೆ.
ವಿಕೃತ ಕಾಮಿಗಳು ಸಾಮಾಜಿಕ ಜಾಲಾತಾಣದಲ್ಲಿ ಕ್ರಾಪ್ ಮಾಡಿರುವ ಫೊಟೋಗಳನ್ನು ಅಪ್ಲೋಡ್ ಮಾಡಿದರೆಂದರೆ, ಜಾಲತಾಣದಲ್ಲಿರುವ ನಮ್ಮೆಲ್ಲ ಸ್ನೇಹಿತರಿಗೆ ಆ ಚಿತ್ರ ರವಾನೆಯಾಗುತ್ತದೆ. ಇದರಿಂದಾಗಿ ಎಷ್ಟೋ ಸುಂದರ ಸಂಸಾರ ಹಾದಿಗೆ ಬಂದಿವೆ. ಎಷ್ಟೋ ಮುಗ್ದ ಹೆಣ್ಣು ಮಕ್ಕಳು ಜೀವ ತೆತ್ತುತ್ತಿದ್ದಾರೆ. ವಿವಾಹ ವಿಚ್ಛೆದನದಂತ ಪ್ರಕರಣಗಳು ಸರತಿ ಸಾಲಿನಲ್ಲಿ ನಡೆಯುತ್ತಿವೆ. ಅಲ್ಲದೆ, ನಿಶ್ಚಯವಾದ ವಿವಾಹವು ಮುರಿದು ದಿಕ್ಕಾಪಾಲಾಗಿ ಹೋಗಿವೆ...!!
ನಂತರ ನಾವು ಪೊಲೀಸ್ ದೂರು ನೀಡಿ ನ್ಯಾಯಕ್ಕಾಗಿ ಮೊರೆ ಹೋಗಬಹುದು. ಆದರೆ, ಕಳೆದುಕೊಂಡ ಮಾನ... ಬದುಕು... ಮರಳಿ ಬರಲು ಸಾಧ್ಯವೇ..? ಶ್ವೇತಾಳಿಗೆ ಆದ ಅವಮಾನ ನಮ್ಮ ಯಾವ ಸ್ನೇಹಿತೆಯರಿಗೂ, ಸಹೋದರಿಯರಿಗೂ ಆಗದಿರಲಿ ಎನ್ನುವ ಪುಟ್ಟ ಕಳಕಳಿ. ಈ ಕುರಿತು ಚಿಂತಿಸಿ, ಚರ್ಚಿಸಿ.... ಸರಿ ಎಂದೆನಿಸದರೆ ಈಗಾಗಲೇ ಸಾಮಾಜಿಕ ಜಾಲಾತಾಣಕ್ಕೆ ಹಾಕಿರುವ ಕ್ಲೋಸ್-ಅಪ್ ಫೊಟೋಗಳನ್ನು ರೀಮೂವ್ ಮಾಡಿ. ಇಲ್ಲ... ಸಾಮಾಜಿಕ ಜಾಲತಾಣವೆಂದರೆ ಇವೆಲ್ಲ ಸಾಮಾನ್ಯ ಎಂದೆನಿಸಿದರೆ ನಿಮ್ಮಿಷ್ಟ. ಯಾವುದಕ್ಕೂ ವಿವೇಚನಾ ಯುಕ್ತ ತೀರ್ಮಾನ ನಿಮ್ಮದಾಗಿರಲಿ...
--ನಾಗರಾಜ್ ಬಿಎನ್.
ಇದು ನನ್ನ 'ಪ್ರೀತಿ' ಜಗತ್ತು...!
ಬದುಕು ಒಂದು ಸುಂದರ ಕಾವ್ಯ. ಅಕ್ಷರ ಲೋಕದಲ್ಲಿ ಪದಗಳು ಮೆರೆದಾಡಿದರೆ ಬದುಕಿನ ಲೋಕದಲ್ಲಿ ಗುಣಗಳು ಮೆರೆದಾಡುತ್ತವೆ. ಸುಂದರ ಕಾವ್ಯದಲ್ಲಿರುವ ಒಂದೊಂದು ಪದಗಳು ಒಂದೊಂದು ಅರ್ಥ ಹೇಳುತ್ತ ಭಾವ ಭಿತ್ತಿಯಲ್ಲಿ ಅಚ್ಚೊತ್ತಿ ಬಿಡುತ್ತವೆ. ಕಣ್ಮುಚ್ಚಿದರೂ ನಿದ್ರೆಯಲ್ಲಿ ಬಂದು ಪರಿ ಪರಿಯಾಗಿ ಕಾಡುತ್ತವೆ. ಹಾಗೆಯೇ ಬದುಕೆಂಬ ಮಹಾಕಾವ್ಯದಲ್ಲೂ ಒಂದೊಂದು ಸಾತ್ವಿಕ ಗುಣ ಪ್ರಬುದ್ಧತೆಗೆ ಕೊಂಡೊಯ್ಯತ್ತದೆ. ಅರ್ಥಪೂರ್ಣ ಜೀವನಕ್ಕೆ ಸಾಕ್ಷೀಕರಿಸಿ, ಅಳಿದ ಮೇಲೂ ಉಳಿದವರ ನಾಲಿಗೆಯ ಮೇಲೆ ಹರಿದಾಡುವಂತೆ ಮಾಡುತ್ತದೆ.
ಹುಟ್ಟು-ಸಾವಿನ ನಡುವಿರುವ ಬದುಕು ಸಾಮಾನ್ಯವಾಗಿರದೆ, ಹೊಸತನದ ಹಾದಿಯಲ್ಲಿ ಸಾಗುತ್ತಿರಬೇಕು. ಇಲ್ಲಿ ಎಲ್ಲರೂ ಜೀವಿಸುತ್ತಾರೆ; ಬಾಳಿ ಬದುಕುತ್ತಾರೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾರೆ. ಆದರೆ ಜೀವಿತದ ಒಂದೇ ಒಂದು ಕುರುಹು ಸಹ ಅವರಿಂದ ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಹಾಗಂತ ನಾಲ್ಕೈದು ಅಂತಸ್ತಿನ ಮನೆಯನ್ನು ಕಟ್ಟಿಸಿರುತ್ತಾರೆ. ಮೂರ್ನಾಲ್ಕು ತಲೆಮಾರುಗಳು ಕೂತು ಉಂಡರೂ ಕರಗದ ಆಸ್ತಿ ಮಾಡಿರುತ್ತಾರೆ. ಶ್ರೀಮಂತಿಕೆ ವೈಭವವೇ ಅವರಲ್ಲಿ ಠೇಂಕರಿಸಿ ವಿಜೃಂಭಿಸಿರುತ್ತದೆ. ಆದರೆ, ಅದು ಅವರ ಸ್ವಂತಿಕೆಗಷ್ಟೇ ಸೀಮಿತವಾಗಿರುತ್ತವೆಯೇ ಹೊರತು, ಮಾನವೀಯತೆಗೆ ಬಳಕೆಯಾಗುವುದು ತೀರಾ ಕಡಿಮೆಯೇ. ಪರಿಣಾಮ ಅಳಿದ ಮೇಲೆ, ಅಂತಸ್ತಿನ ಮನೆಯ ಪಡಶಾಲೆಯಲ್ಲಿ ಭಾವಚಿತ್ರಕ್ಕೊಂದು ಜಾಗವಷ್ಟೇ....!
ಬದುಕಿನ ಸುಂದರ ಮಹಾಕಾವ್ಯದಲ್ಲಿ ಭಾವಚಿತ್ರವಾಗಷ್ಟೇ ಇರಬಾರದು. ಸರ್ವರ ಹೃದಯಲ್ಲೂ ಜೀವಂತಿಕೆಯ ಮೂರ್ತಿಯಾಗಿ ಸದಾ ನೆನಪಿನಲ್ಲಿರುವಂತಾಗಬೇಕು. ತಾಮಸ ಗುಣಗಳನ್ನು ಸಂಹರಿಸಿ, ಸಾತ್ವಿಕ ಗುಣಗಳ ಅನುಯಾಯಿಗಳಾಗಬೇಕು. ಎಲ್ಲರೂ ನನ್ನವರು ಎನ್ನುವ ಭಾವ ಅಂಕುರಿಸಿ, ಪ್ರೀತಿಯ ಸಾಮ್ರಾಜ್ಯ ಸ್ಥಾಪಿಸಬೇಕು. ಆ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದಾಡಬೇಕು. ಸುತ್ತಮುತ್ತಲಿನವರನ್ನು ವಿಶ್ವಾಸದ ತೆಕ್ಕೆಯಲ್ಲಿ ಬಂಧಿಸಬೇಕು. ಸಾಮರಸ್ಯದ ಹಾದಿ ತುಳಿದು, ಸಹಬಾಳ್ವೆಯ ಮಂತ್ರ ಜಪಿಸಬೇಕು. ಆಗ ಅಲ್ಲಿನ ವಾತಾವರಣ ನಿಜಕ್ಕೂ ನಂದನವನ. ಸ್ವರ್ಗ ಸಮಾನ...!
ಶ್ರೀಮಂತಿಕೆಯ ದರ್ಪವಿಲ್ಲದ ಆ ಪ್ರೀತಿ ಸಾಮ್ರಾಜ್ಯದಲ್ಲಿ ಎಲ್ಲರೂ ಸುಖಿಗಳೇ; ಎಲ್ಲರೂ ಒಬ್ಬರಿಗೊಬ್ಬರು ಪ್ರೀತಿ ಪಾತ್ರರೆ. ರಾಗ-ದ್ವೇಷಗಳು ಅಲ್ಲಿ ಮಖಾಡೆ ಮಲಗಿ, ಪ್ರೀತಿ-ವಿಶ್ವಾಸಗಳು ಸದಾ ಎಚ್ಚರದಿಂದಿರುತ್ತವೆ. ತಪ್ಪು ಮಾಡಲು ಅಲ್ಲಿ ಅವಕಾಶವೇ ಇಲ್ಲ. ಇದ್ದರೂ ತಿದ್ದಿ-ತೀಡುವ ಮನಸ್ಸುಗಳು ಸುತ್ತಲೇ ಇದ್ದು, ನಮ್ಮ ಕಿವಿ ಹಿಂಡುತ್ತಲೇ ಇರುತ್ತವೆ. ಸೋಲು-ಗೆಲುವಿಲ್ಲದ ಈ ಪ್ರೀತಿ ಜಗತ್ತಲ್ಲಿ ಪ್ರೀತಿಯೇ ಉಸಿರಾಗಿ, ಪ್ರೀತಿಯೇ ಬದುಕಾಗಿ, ಪ್ರೀತಿಯೇ ಧ್ಯೇಯವಾಗಿ ಬದಲಾಗಿ ಬಿಡುತ್ತದೆ
-ನಾಗರಾಜ್ ಬಿ.ಎನ್.
ಹೆಣ್ಣು ಜಗದ ಕಣ್ಣು...
ಹೆಣ್ಣು ಅಬಲೆಯೇ...? ಮಂದಗಾಮಿಯೇ...? ಖಂಡಿತ ಅಲ್ಲ. ಅವಳು ಸಹನಾ ಮೂರ್ತಿ ... ಕ್ಷಮಯಾ ಧರಿತ್ರಿ... ಕಾದಾಟಕ್ಕೆ ನಿಂತರೆ ಎದುರಾಳಿಯನ್ನೇ ಸದೆ ಬಡೆಯುವಷ್ಟು ಪ್ರಚಂಡ ಶಕ್ತಿಯನ್ನು ಹುದುಗಿಟ್ಟುಕೊಂಡ ಅಪ್ರತಿಮ ಶೂರಳು... ಹಾಗೆ ಧೀರಳು ಹೌದು.
'ಹಾಗಾದರೆ ಸಮಾಜ ಯಾಕಾಗಿ ಅವಳನ್ನು ಹೀನಾಯವಾಗಿ ಕಾಣುತ್ತದೆ?' ಎನ್ನುವ ಸಾಮಾನ್ಯ ಪ್ರಶ್ನೆಗೆ ಉತ್ತರ, ಎಲ್ಲರಿಗೂ ತಿಳಿದಿರುವ ಹಾಗೆ 'ಪುರುಷ ಸಮಾಜ' ಮನಸ್ಥಿತಿ. ಹೆಣ್ಣಿಗೆ ಗೌರವ ಕೊಡದಿದ್ದಷ್ಟು `ಹೀನ ಮನಸ್ಥಿತಿ' ಪುರುಷ ಸಮಾಜದ್ದೇ...? ಈ ಪ್ರಶ್ನೆಗೆ ಹೆಣ್ಣಿಗೆ ಗೌರವ ನೀಡದ ಸಮಾಜ ಹಾಗೂ ಪುರುಷನೇ ಉತ್ತರ ನೀಡಬೇಕು.
ಸರಿ, ಇದು ಒತ್ತಟ್ಟಿಗಿರಲಿ.. ಮನುಷ್ಯ ಜೀವನದಲ್ಲಿ ಮಹಿಳೆಯ ಪಾತ್ರವೇನು? ಅವಳ ಸಮಸ್ಯೆಗಳೇನು? ಅವಳ ಆಕಾಂಕ್ಷೆಗಳೇನು? ಎನ್ನುವ ಕುರಿತಾದರೂ 'ಪುರುಷ ಸಮಾಜ' ಚಿಂತಿಸಿದೆಯೇ...? ಚಿಂತಿಸಿದ್ದೇ ಆಗಿದ್ದರೆ, ನಮ್ಮ ಸಮಾಜದಲ್ಲಿರುವ ಸಹೋದರಿಯರು, ಸ್ನೇಹಿತೆಯರು, ತಾಯಂದಿರು ಅತ್ಯಾಚಾರ, ದೌರ್ಜನ್ಯ, ಮಾನಸಿಕ ಕಿರುಕುಳದಂತ ಪ್ರಕರಣಕ್ಕೆ ಒಳಗಾಗುತ್ತಿರಲಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕಾಗಿ ಪುರುಷನಿಂದ ಚಿತ್ರಹಿಂಸೆ ಪಡೆಯಬೇಕಾಗಿರಲಿಲ್ಲ.(ಕೆಲವು ಮಹಿಳೆಯರು ಹಾಗೂ ಪುರುಷರು ಇದಕ್ಕೆ ಅಪವಾದದಂತಿದ್ದಾರೆ...!)
ಹೆಣ್ಣು ದೈವೀ ಸ್ವರೂಪಳು. ಅಖಿಲಾಂಡಕೋಟಿ ಬ್ರಹ್ಮಾಂಡ ಶಕ್ತಿಯನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡ ಪ್ರಚಂಡ ಶಕ್ತಿದಾತೆ. ಅವಳಿಂದಲೇ ಇಹವು.. ಅವಳಿಂದಲೇ ಪರವು. ಮಾತೃ ಹೃದಯ ಹೊಂದಿರುವ ಅವಳು ಪೂಜನೀಯ ವ್ಯಕ್ತಿ. ಪ್ರೇಮಿಯ ಆರಾಧನೆಗೆ ಒಳಪಡುವ ಆರಾಧನೀಯ ಮೂರ್ತಿ. ಬದುಕನ್ನು ತಿದ್ದಿ-ತೀಡಿ ಅದಕ್ಕೊಂದು ರೂಪ ನೀಡುವ ಅಪ್ರತಿಮ ಕಲಾವಿದೆ. ಸರ್ವರ ಪ್ರೀತಿಗೂ ಪಾತ್ರಳಾಗುವ ಸರ್ವೋತ್ತಮೆ. ಮಿಗಿಲಾಗಿ ತಾಳ್ಮೆ, ಸಹನೆಯನ್ನು ಮೈಗೂಡಿಸಿಕೊಂಡ ಸಹನಾಶೀಲೆ..!
ಸುಮ್ಮನೆ ಕಲ್ಪಿಸಿಕೊಳ್ಳಿ. ಪ್ರಪಂಚದಲ್ಲಿ ಹೆಣ್ಣೇ ಇಲ್ಲದಿದ್ದರೆ ಏನಾಗುತ್ತಿತ್ತು..? ಎಂದು. ಇಲ್ಲ.... ಕಲ್ಪನೆಗೂ ನಿಲುಕದ ಕಲ್ಪನೆಯದು...! ಹೆಣ್ಣಿಲ್ಲದೆ ಈ ಪ್ರಪಂಚವೇ ಇಲ್ಲ. ಪ್ರತಿಯೊಂದು ಜೀವ ಜಂತುಗಳ ಹುಟ್ಟಿಗೂ ಹೆಣ್ಣೆ ಕಾರಣಳು. ಹಾಗಂತ 'ಇದರಲ್ಲಿ ಗಂಡಿನ ಪಾತ್ರವೇನೂ ಇಲ್ಲವೇ?' ಎಂದು ಕೇಳಬಹುದು. ಆದರೆ, ಸೃಷ್ಟಿ ಕ್ರಿಯೆಯಲ್ಲಿ ಗಂಡಿನದು ಕೇವಲ `ನಿಮಿತ್ತ' ಮಾತ್ರ. ಹಾಗಂತ ಬದುಕಿನ ವಿವಿಧ ಮಜಲಿನಲ್ಲಿ ಗಂಡಿನ ಪಾತ್ರವೂ ಹೆಣ್ಣಿನಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ ಎನ್ನುವುದು ಬೇರೆ ಮಾತು.
ಬದುಕಿನ ಸರ್ವತೋಮುಖ ಏಳ್ಗೆಗೆ ಹೆಣ್ಣಿನ ಪಾತ್ರ ಅತೀ ಅವಶ್ಯ. ಅವಳು ಸಹನಾಶೀಲಳಾಗಿದ್ದು, ಬದುಕಲ್ಲಿ ಎದುರಾಗುವ ಎಲ್ಲ ಕಷ್ಟಗಳನ್ನು, ನೋವುಗಳನ್ನು ಹೊರ ಪ್ರಪಂಚಕ್ಕೆ ತೋರ್ಪಡಿಸದೆ ತಾನೊಬ್ಬಳೇ ಅನುಭವಿಸುತ್ತಿರುತ್ತಾಳೆ. ನೋವನ್ನು ನಲಿವಾಗಿ ಪರಿವತರ್ತಿಸಿಕೊಳ್ಳಲು ಹೆಣಗಾಡುತ್ತಾಳೆ. ತನ್ನ ಕುಟುಂಬ ವರ್ಗದವರ ಹಿತ ಕಾಯಲು ಬದುಕನ್ನೇ ಪಣಕ್ಕಿಟ್ಟು ಹಗಲು ರಾತ್ರಿ ಹೋರಾಡುತ್ತಿರುತ್ತಾಳೆ. ನಂಬಿದವರ ನಂಬಿಕೆಯನ್ನು ಕಾಯ್ದು, ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ಅರ್ಥಪೂರ್ಣವಾಗಿ ಬಾಳ್ವೆ ನಡೆಸುತ್ತಾಳೆ. ಆ ಕಾರಣಕ್ಕೆ ಹಿರಿಯರು ಹೇಳಿದ್ದು, ಒಂದು ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇದ್ದೇ ಇರುತ್ತಾಳೆ ಎಂದು.
ಹೀಗೊಂದು ವಾಸ್ತವ....!
ನವಮಾಸ ಕಾಲ ಮಗುವನ್ನು ತನ್ನ ಉದರದಲ್ಲಿಟ್ಟುಕೊಂಡು ಕಾಣದ ನೋವನ್ನು ಅನುಭವಿಸುವ ಆ ತಾಯಿಯ ಯಾತನೆ ನಿಜಕ್ಕೂ ಕಲ್ಪನಾತೀತ. ಮಗುವಿನ ಅಳುವಿನ ಕೂಗು ಕಿವಿಗೆ ಬೀಳುತ್ತಿದ್ದಂತೆ ತನ್ನೆಲ್ಲ ನೋವನ್ನು ಆಕೆ ಮರೆತು ಬಿಡುತ್ತಾಳೆ. ನೋವಿನ ಕಣ್ಣೀರು ಕ್ಷಣಮಾತ್ರದಲ್ಲಿ ಆನಂದ ಭಾಷ್ಪವಾಗಿ ಬದಲಾಗಿಬಿಡುತ್ತದೆ. ಯಮ ಯಾತನೆಯಲ್ಲೂ ಬದುಕಿ ಸಾರ್ಥಕ್ಯತೆ ಅನುಭವಿಸುವ ಅಪರೂಪದ ಘಳಿಗೆಯದು.
ನೋವಲ್ಲೂ ನಗು ಕಂಡವಳು...
ಈ ಕುರಿತು ತಾಯಿಯೊಬ್ಬಳು ಹೇಳಿದ ಮಾತು ನೆನಪಿಗೆ ಬರುತ್ತದೆ.... 'ಗರ್ಭಧರಿಸಿದ ಪ್ರಾರಂಭದಿಂದ ಒಂದಿಲ್ಲೊಂದು ಸಮಸ್ಯೆಯನ್ನು ಅನುಭವಿಸುತ್ತಲೇ ಒಂಭತ್ತು ತಿಂಗಳು ಕಳೆಯುತ್ತೇವೆ. ತಿನ್ನುವ ಬಯಕೆ ದಿನದಿಂದ ದಿನಕ್ಕೆ ಮಿತಿ ಮೀರುತ್ತವೆ. ಹಾಗಂತ ಸಿಕ್ಕಿದ್ದನ್ನೆಲ್ಲ ತಿನ್ನಲು ಆಗದು. ಹೊಟ್ಟೆಯಲ್ಲಿರುವ ಪುಟ್ಟ ಪಾಪುವಿಗೆ ಏನಾಗುತ್ತದೋ ಎನ್ನುವ ಭಯ. ಕಾಲ ಕಾಲಕ್ಕೆ ವೈದ್ಯರಲ್ಲಿಗೆ ಭೇಟಿ ನೀಡಬೇಕು. ಅವರು ಹೇಳಿದ ಹಾಗೆ ಅನುಸರಿಸಬೇಕು. ಕಡೆಗೊಂದು ದಿನ ಪಾಪು ಬರುವ ಮುನ್ಸೂಚನೆ ತೀರಾ ನೋವಿನ ಮೂಲಕ ತಿಳಿದು ಬರುತ್ತದೆ. ಪ್ರಾಣವನ್ನೇ ಕಿತ್ತು ತಿನ್ನುವ ನೋವದು. ಏಕಕಾಲದಲ್ಲಿ ನೂರಾರು ಎಲುಬುಗಳು ಮುರಿದಾಗ ಉಂಟಾಗುವಂತ ನೋವು, ಪಾಪು ಜನಿಸುವ ಸಂದರ್ಭದಲ್ಲಿ ಉದ್ಭವಿಸುತ್ತದೆ. ಆ ನೋವಿನಲ್ಲೂ ಸಂತೃಪ್ತ ಭಾವ ಮೇಳೈಸುತ್ತದೆ. ಬದುಕು ಸಾರ್ಥಕತೆ ಪಡೆಯುತ್ತದೆ'
ಪ್ರಕೃತಿ ಸಮಾನಳಾದ ಹೆಣ್ಣನ್ನು ಪೂಜಿಸೋಣ.... ಆರಾಧಿಸೋಣ.... ಗೌರಸವಿಸೋಣ... ಹಾಗೆ ಅವಳಿಂದ ಬದುಕನ್ನು ಉನ್ನತೀಕರಿಸಿಕೊಳ್ಳೊಣ.
-ನಾಗರಾಜ್ ಬಿ.ಎನ್ 
'ಇಷ್ಟ'ದ ಹುಡುಕಾಟದಲ್ಲಿ...!!
'ಇಷ್ಟ ಪಟ್ಟ ವಸ್ತು' ಬೇಕು ಎಂದಾಗ ಸಿಗದು. ಆದರೆ, ಬೇಡ ಎಂದೆನಿಸಿದಾಗ ಓಡೋಡಿ ಬಂದು ಅಪ್ಪಿಕೊಳ್ಳಲು ಹವಣಿಸುತ್ತದೆ. ಅದಾಗಲೇ ಬದುಕಿನ ಪಯಣ ಬಹು ದೂರ ಸಾಗಿ, ಹೊಸತನಕ್ಕೆ ಹೊಂದಿಕೊಂಡಿರುತ್ತದೆ.
ಇದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಸಾಮಾನ್ಯವಾಗಿ ಸರಿದು ಹೋಗುವ ಘಟನೆಗಳು. ಸುಮ್ಮನೆ ಒಂದು ಬಾರಿ, ನಿಂತ ಜಾಗದಲ್ಲಿಯೇ ಕಣ್ಮುಚ್ಚಿಕೊಂಡು `ಈವರೆಗೆ ಸಾಗಿ ಬಂದ ದಾರಿ'ಯನ್ನು ನೆನಪಿಸಿಕೊಳ್ಳಿ. ಅಲ್ಲಿ ಏನುಂಟು... ಏನಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಗ್ರಹಿಸಿ. ಸುಖ, ದುಃಖ, ನೋವು, ನಲಿವು, ನಿರಾಶೆ, ತುಂಟಾಟ, ಹುಡುಗಾಟಿಕೆ ಹೀಗೆ... ಒಂದೊಂದು ಸನ್ನಿವೇಶಗಳು ಸಾಲು ಸಾಲಾಗಿ ಕಣ್ಮುಂದೆ ಮೆರವಣಿಗೆ ಹೊರಡುತ್ತವೆ.
ಸಂತೋಷದ ಆ ದಿನಗಳು ಮತ್ತೆ ಬಾರದೆ ಎಂದೆನಿಸುತ್ತಿರುವಾಗಲೇ, ಧುತ್ತೆಂದು... ಬದುಕನ್ನೇ ಕಿತ್ತು ತಿನ್ನಲು ಹೊರಟ ಘೋರ ಘಟನೆಗಳು ನೆನಪಿನಂಗಳದಲ್ಲಿ ಪುಟಿದೇಳುತ್ತವೆ. ನಲಿವಿನ ಜೊತೆ ನೋವು ಸಹ ಆ 'ನೆನಪಿನ ಲೋಕ'ದಲ್ಲಿ ಸರಿಸಮಾನವಾಗಿ ಪಾಲುದಾರಿಕೆ ಪಡೆಯುತ್ತದೆ.
ಇಷ್ಟಪಟ್ಟಿದ್ದು ಬೇಕು ಎನ್ನುವ ಕಾರಣಕ್ಕೆ ಹಾಕಿದ ಮುಖವಾಡಗಳು ನೆನಪಿನ ಬುತ್ತಿಯಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದು ಬಿಟ್ಟಿರುತ್ತವೆ. ಆ 'ಇಷ್ಟ' ಬದುಕಿಗೊಂದು ಅರ್ಥ ಕಲ್ಪಿಸಿಕೊಡುವಲ್ಲಿಯೂ ಸಹಕಾರಿಯಾಗುತ್ತದೆ ಹಾಗೆಯೇ, ಬದುಕನ್ನು ದುರಂತಕ್ಕೆ ನೂಕುವಲ್ಲಿಯೂ ಕಾಣಿಕೆ ನೀಡುತ್ತದೆ.
ಏನೇ ಇರಲಿ, ಗತಿಸಿದ ದಿನಗಳಲ್ಲಿ ಹಾತೊರೆದ ವಸ್ತು, ಪ್ರಸ್ತುತ ದಿನಗಳಲ್ಲಿ ಕೆಲವು ಬಾರಿ ಬೇಡವೆಂದರೂ ಹತ್ತಿರಕ್ಕೆ ಬಂದು ಬಿಗಿದಪ್ಪಿಕೊಳ್ಳುತ್ತವೆ. ಅಷ್ಟರಲ್ಲಾಗಲೇ ಆ 'ಇಷ್ಟ' ಇನ್ನೊಂದು ರೂಪದಲ್ಲಿ ಬಂದು ಬದುಕನ್ನು ಹಸನಾಗಿಸಿರುತ್ತದೆ. ಕಾಲಚಕ್ರದ ಉರುಳಾದಲ್ಲಿ ಕೆಲವು 'ಬೇಕು'ಗಳ ಪ್ರಾಮುಖ್ಯತೆ ಗೌಣವಾಗುತ್ತ ಸಾಗುತ್ತದೆ. ಹಾಗಾದರೆ, 'ಇಷ್ಟ' ಎನ್ನುವುದು ಗೌಣವೇ....?
(ಇಷ್ಟ-ಅವರವರ ಭಾವಕ್ಕೆ ಬಿಟ್ಟಿದ್ದು )
-ನಾಗರಾಜ್ ಬಿ.ಎನ್. 

ಬುಧವಾರ, ನವೆಂಬರ್ 25, 2015

ಪಾಪ ಪ್ರಜ್ಞೆ ಕಾಡಿದಾಗ....!
ಬದುಕು ಒಂದು ಸುಂದರ ಕಾವ್ಯ. ಅಕ್ಷರ ಲೋಕದಲ್ಲಿ ಪದಗಳು ಮೆರೆದಾಡಿದರೆ ಬದುಕಿನ ಲೋಕದಲ್ಲಿ ಗುಣಗಳು ಮೆರೆದಾಡುತ್ತವೆ. ಸುಂದರ ಕಾವ್ಯದಲ್ಲಿರುವ ಒಂದೊಂದು ಪದಗಳು ಒಂದೊಂದು ಅರ್ಥ ಹೇಳುತ್ತ ಭಾವ ಭಿತ್ತಿಯಲ್ಲಿ ಅಚ್ಚೊತ್ತಿ ಬಿಡುತ್ತವೆ. ಕಣ್ಮುಚ್ಚಿದರೂ ನಿದ್ರೆಯಲ್ಲಿ ಬಂದು ಪರಿ ಪರಿಯಾಗಿ ಕಾಡುತ್ತವೆ. ಹಾಗೆಯೇ ಬದುಕೆಂಬ ಮಹಾಕಾವ್ಯದಲ್ಲೂ ಒಂದೊಂದು ಸಾತ್ವಿಕ ಗುಣ ಪ್ರಬುದ್ಧತೆಗೆ ಕೊಂಡೊಯ್ಯತ್ತದೆ. ಅರ್ಥಪೂರ್ಣ ಜೀವನಕ್ಕೆ ಸಾಕ್ಷೀಕರಿಸಿ, ಅಳಿದ ಮೇಲೂ ಉಳಿದವರ ನಾಲಿಗೆಯ ಮೇಲೆ ಹರಿದಾಡುವಂತೆ ಮಾಡುತ್ತದೆ.
ಹುಟ್ಟು-ಸಾವಿನ ನಡುವಿರುವ ಬದುಕು ಸಾಮಾನ್ಯವಾಗಿರದೆ, ಹೊಸತನದ ಹಾದಿಯಲ್ಲಿ ಸಾಗುತ್ತಿರಬೇಕು. ಇಲ್ಲಿ ಎಲ್ಲರೂ ಜೀವಿಸುತ್ತಾರೆ; ಬಾಳಿ ಬದುಕುತ್ತಾರೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾರೆ. ಆದರೆ ಜೀವಿತದ ಒಂದೇ ಒಂದು ಕುರುಹು ಸಹ ಅವರಿಂದ ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಹಾಗಂತ ನಾಲ್ಕೈದು ಅಂತಸ್ತಿನ ಮನೆಯನ್ನು ಕಟ್ಟಿಸಿರುತ್ತಾರೆ. ಮೂರ್ನಾಲ್ಕು ತಲೆಮಾರುಗಳು ಕೂತು ಉಂಡರೂ ಕರಗದ ಆಸ್ತಿ ಮಾಡಿರುತ್ತಾರೆ. ಶ್ರೀಮಂತಿಕೆ ವೈಭವವೇ ಅವರಲ್ಲಿ ಠೇಂಕರಿಸಿ ವಿಜೃಂಭಿಸಿರುತ್ತದೆ. ಆದರೆ, ಅದು ಅವರ ಸ್ವಂತಿಕೆಗಷ್ಟೇ ಸೀಮಿತವಾಗಿರುತ್ತವೆಯೇ ಹೊರತು, ಮಾನವೀಯತೆಗೆ ಬಳಕೆಯಾಗುವುದು ತೀರಾ ಕಡಿಮೆಯೇ. ಪರಿಣಾಮ ಅಳಿದ ಮೇಲೆ, ಅಂತಸ್ತಿನ ಮನೆಯ ಪಡಶಾಲೆಯಲ್ಲಿ ಭಾವಚಿತ್ರಕ್ಕೊಂದು ಜಾಗವಷ್ಟೇ....!
ಬದುಕಿನ ಸುಂದರ ಮಹಾಕಾವ್ಯದಲ್ಲಿ ಭಾವಚಿತ್ರವಾಗಷ್ಟೇ ಇರಬಾರದು. ಸರ್ವರ ಹೃದಯಲ್ಲೂ ಜೀವಂತಿಕೆಯ ಮೂತರ್ಿಯಾಗಿ ಸದಾ ನೆನಪಿನಲ್ಲಿರುವಂತಾಗಬೇಕು. ತಾಮಸ ಗುಣಗಳನ್ನು ಸಂಹರಿಸಿ, ಸಾತ್ವಿಕ ಗುಣಗಳ ಅನುಯಾಯಿಗಳಾಗಬೇಕು. ಎಲ್ಲರೂ ನನ್ನವರು ಎನ್ನುವ ಭಾವ ಅಂಕುರಿಸಿ, ಪ್ರೀತಿಯ ಸಾಮ್ರಾಜ್ಯ ಸ್ಥಾಪಿಸಬೇಕು. ಆ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದಾಡಬೇಕು. ಸುತ್ತಮುತ್ತಲಿನವರನ್ನು ವಿಶ್ವಾಸದ ತೆಕ್ಕೆಯಲ್ಲಿ ಬಂಧಿಸಬೇಕು. ಸಾಮರಸ್ಯದ ಹಾದಿ ತುಳಿದು, ಸಹಬಾಳ್ವೆಯ ಮಂತ್ರ ಜಪಿಸಬೇಕು. ಆಗ ಅಲ್ಲಿನ ವಾತಾವರಣ ನಿಜಕ್ಕೂ ನಂದನವನ. ಸ್ವರ್ಗ ಸಮಾನ...!
ಶ್ರೀಮಂತಿಕೆಯ ದರ್ಪವಿಲ್ಲದ ಆ ಪ್ರೀತಿ ಸಾಮ್ರಾಜ್ಯದಲ್ಲಿ ಎಲ್ಲರೂ ಸುಖಿಗಳೇ; ಎಲ್ಲರೂ ಒಬ್ಬರಿಗೊಬ್ಬರು ಪ್ರೀತಿ ಪಾತ್ರರೆ. ರಾಗ-ದ್ವೇಷಗಳು ಅಲ್ಲಿ ಮಖಾಡೆ ಮಲಗಿ, ಪ್ರೀತಿ-ವಿಶ್ವಾಸಗಳು ಸದಾ ಎಚ್ಚರದಿಂದಿರುತ್ತವೆ. ತಪ್ಪು ಮಾಡಲು ಅಲ್ಲಿ ಅವಕಾಶವೇ ಇಲ್ಲ. ಇದ್ದರೂ ತಿದ್ದಿ-ತೀಡುವ ಮನಸ್ಸುಗಳು ಸುತ್ತಲೇ ಇದ್ದು, ನಮ್ಮ ಕಿವಿ ಹಿಂಡುತ್ತಲೇ ಇರುತ್ತವೆ. ಸೋಲು-ಗೆಲುವಿಲ್ಲದ ಈ ಪ್ರೀತಿ ಜಗತ್ತಲ್ಲಿ ಪ್ರೀತಿಯೇ ಉಸಿರಾಗಿ, ಪ್ರೀತಿಯೇ ಬದುಕಾಗಿ, ಪ್ರೀತಿಯೇ ಧ್ಯೇಯವಾಗಿ ಬದಲಾಗಿ ಬಿಡುತ್ತದೆ.
-ನಾಗರಾಜ್ ಬಿ.ಎನ್. 
ತೋಳ ತೆಕ್ಕೆಯಲಿ ಬಂಧಿಯಾಗಲಿ....!
                                                                                                 (ಮಳೆ ಹುಡುಗಿ ನೆನಪಿಂದ)
ರೋಬ್ಬರಿ ಅರವತ್ಮೂರು ದಿನಗಳ ನಂತರ ನನ್ನೂರಿಗೆ(ಕುಮಟಾ) ತೆರಳುತ್ತಿದ್ದೇನೆ. ಏನೋ ಅವ್ಯಕ್ತ ಆನಂದ ಮೈ-ಮನವೆಲ್ಲ ಆವರಿಸಿ ಬಿಟ್ಟಿದೆ. ಕುಟುಂಬದವರನ್ನು ಸೇರಿಕೊಳ್ಳುತ್ತೇನೆಂಬ ಸಂತೋಷ ಒಂದೆಡೆ ಇದ್ದರೆ, ನನ್ನವಳು ಮುನಿಸಿಕೊಂಡು ಕಣ್ಣ ಮುಚ್ಚಾಲೆಯಾಟ ಆಡುತ್ತಿದ್ದಾಳೆ ಅನ್ನುವ ಬೇಸರ ಕೂಡಾ ಇನ್ನೊಂದೆಡೆ. ಹಾಗೆಯೇ, ನನ್ನಾತ್ಮ ಬಂಧು ಜೊತೆಯಿಲ್ಲ ಅನ್ನೋ ಕೊರಗು ಮತ್ತೊಂದೆಡೆ.
ನೋವು-ನಲಿವಿನ ದ್ವಂದ್ವದ ನಡುವೆಯೇ ಮನೆ ಕಡೆಗೆ ಹೆಜ್ಜೆ ಇಡುತ್ತಿದ್ದೇನೆ. ಅತ್ತ ಮಲೆನಾಡೂ ಅಲ್ಲದ, ಇತ್ತ ಬಯಲು ಸೀಮೆಯೂ ಅಲ್ಲದ ನನ್ನೂರಿನ ಹಾದಿಯಲ್ಲಿ ಪಯಣಿಸುವುದೇ ಒಂದು ವಿಶಿಷ್ಟ ಅನುಭೂತಿ. ಹುಬ್ಬಳ್ಳಿ-ಕುಮಟಾ ಮಾರ್ಗದ ಹೆದ್ದಾರಿಯ ಅಕ್ಕಪಕ್ಕದ ಸಾಲು ಸಾಲು ಮರಗಳು ಕಣ್ಮನಗಳನ್ನು ತಣಿಸುತ್ತವೆ. ಒಂದೊಂದು ಮರಗಳು ಮುಗಿಲನ್ನೆ ಮುತ್ತಿಕ್ಕಿದಂತೆ ಭಾಸವಾಗುತ್ತವೆ. ಹಚ್ಚ-ಹಸಿರಿನ ಕಾನನದ ನಡುವೆ, ಏರು-ತಗ್ಗುಗಳನ್ನು ದಾಟುತ್ತ ಏದುಸಿರು ಬಿಟ್ಟು ಸಾಗುವ ಬಸ್ನ ಮೇಲಿನ ಪಯಣ ವರ್ಣನಾತೀತ. ಅದು ಕೇವಲ ಅನುಭವಕ್ಕೆ ಮಾತ್ರ ಸೀಮಿತಿವೇನೋ...!
ನನ್ನೂರು ಕುಮಟಾ ಸಮೀಪಿಸುತ್ತಿದ್ದಂತೆ ಆ ನೆಲದ ಮಣ್ಣಿನ ಘಮ ತಂಗಾಳಿಯಲ್ಲಿ ಬೆರೆತು ಮೈ-ಮನವೆಲ್ಲ ಆವರಿಸಿಬಿಡುತ್ತದೆ. ಅರೆ ಕ್ಷಣದಲ್ಲಿ ನನ್ನ ಜೀವನದಿ ಅಘನಾಶಿನಿ ತನ್ನೆರಡು ತೋಳುಗಳನ್ನು ಚಾಚಿ ತಬ್ಬಿಕೊಳ್ಳುವಂತೆ ದೂರದಿಂದಲೇ ಸ್ವಾಗತಿಸುತ್ತಾಳೆ. ಇವೆಲ್ಲವನ್ನು ಸುಮ್ಮನೇ ನೋಡುತ್ತ, ಅನುಭವಿಸುತ್ತ ಕಣ್ಮುಚ್ಚಿಕೊಂಡು ಬಿಡುತ್ತೇನೆ. ಅಮ್ಮನ ಮಡಿಲಲ್ಲಿ ಹಾಲುಗಲ್ಲದ ಹಸುಗೂಸು ಪವಡಿಸಿದಂತೆ...! ತಾದಾತ್ಮತೆಯಿಂದ ಗಟ್ಟಿಯಾಗಿ ಉಸಿರೆಳೆದುಕೊಂಡು ಭಾವ ಪರಾಕಾಷ್ಠೆಗೆ ಜಾರಿ ಬಿಡುತ್ತೇನೆ.
ಇದು ಪ್ರತಿ ಬಾರಿ ಊರಿಗೆ ಹೋಗುವಾಗ ಆಗುವ ಸಾಮಾನ್ಯ ಭಾವಾನುಭವ. ಆದರೆ, ಈ ಬಾರಿ ಆ ಭಾವಕ್ಕೆ ನನ್ನವಳು ಜೊತೆಯಾಗಿ ಇನ್ನಷ್ಟು ಕಿಚ್ಚು ಹಚ್ಚಿಸುತ್ತಾಳೆ ಎಂದು ಕೊಂಡಿದ್ದೆ. ಆದರೆ, ಅವಳು ಕಳೆದ ಹದಿನೈದು ದಿನಗಳಿಂದ ಯಾಕೋ ಮುನಿಸಿಕೊಂಡಿದ್ದು, ಬರಲೊಲ್ಲೆ ಎನ್ನುತ್ತಿದ್ದಾಳಂತೆ. ಆದರೂ.... ಆಗೊಮ್ಮೆ, ಈಗೊಮ್ಮೆ ಎಂದು ಬಂದು ಹೋಗುತ್ತಿದ್ದಾಳೆನ್ನುವ ಅಮ್ಮನ ನುಡಿ ತುಸು ಸಾಂತ್ವನ ತಂದಿದೆ.
ಪ್ರತಿ ಬಾರಿ ಜೂನ್ ಅಂತ್ಯದ ಸಮಯಕ್ಕೆ ನಾ ನನ್ನೂರಿಗೆ ಕಾಲಿಡುತ್ತಿದ್ದೆ. ಈ ಬಾರಿ ಹೋಗಲಿಲ್ಲ ಎನ್ನುವ ಕಾರಣಕ್ಕೆ `ನನ್ನವಳು' ಮುನಿಸಿಕೊಂಡಿರಬಹುದು ಎಂದು ಭಾವಿಸಿದ್ದೇನೆ. ಇನಿಯನ ವಿರಹದ ತಾಪದಲ್ಲಿ ನೊಂದು ಬೆಂದ ಅವಳು, ಇನ್ನಿಲ್ಲದಂತೆ ಬಗೆ ಬಗೆಯಾಗಿ ಪರಿತಪಿಸುತ್ತಿರಬಹುದು. ವಿರಹದ ತಾಪದಿಂದಾಗಿಯೇ ಅವಳಲ್ಲಿರುವ 'ಜೀವ ಜಲ'ವೆಲ್ಲ ಬತ್ತಿ ಹೋಗಿದೆ ಎಂದೆನಿಸುತ್ತಿದೆ. ಹುಚ್ಚು ಹುಡುಗನ ತೋಳ ತೆಕ್ಕೆಯಲ್ಲಿ ಬಂಧಿಯಾದಾಗಲಾದರೂ ಅವಳು ತನ್ನ 'ನಿಜ ಸ್ವರೂಪ' ಪ್ರದಶರ್ಿಸಲಿ. ಭೋರ್ಗರೆದು ಅತ್ತು ಕರೆಯಲಿ. ಅವಳ ಕ(ಪ)ಣ್ಣೀರ ಧಾರೆಯಲಿ ನಾನು ತೋಯ್ದು ತೊಪ್ಪೆಯಾಗಲಿ.
ಹಾಗೆಯೇ, ಸಣ್ಣಗೆ ನೆಗಡಿಯಾಗಲಿ... ಅರೆ ಬರೆಯಾಗಿ ಮೈ ಬೆಚ್ಚಗಾಗಲಿ.... ಹಂಡೆಯಲ್ಲಿ ಅಮ್ಮ ಕಾಯಿಸಿಟ್ಟ ಬಿಸಿ ನೀರು ನನ್ನ ಮೈ ಮೇಲೆ ಬೀಳಲಿ... ಅರವತ್ಮೂರು ದಿನಗಳ ನಂತರ ನನ್ನೂರಿಗೆ ಇಟ್ಟ ಪುಟ್ಟ ಹೆಜ್ಜೆ ಬದುಕಿನ ಸಾರ್ಥಕ್ಯತೆಗೆ ಒಂದು ಮುನ್ನುಡಿ ಬರೆಯಲಿ....
ಆತ್ಮ ಬಂಧುವಿನ ವಿರಹದಲಿ, ಮಳೆ ಹುಡುಗಿಯಲಿ ನೆನಪಲ್ಲಿ... ನನ್ನೂರ ಕಡೆ ಪಯಣ....!
-ನಾಗರಾಜ್ .ಬಿ.ಎನ್ 

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ.....

ಅಲ್ಲಿ ನೀರವ ಮೌನ ತಾಂಡವವಾಡುತ್ತಿತ್ತು. ಎದುರಿನ ಗೋಡೆಗೆ ನೇತು ಹಾಕಿದ್ದ ಗಡಿಯಾರವನ್ನೊಮ್ಮೆ ತಲೆ ಎತ್ತಿ ನೋಡಿದೆ. ಗಂಟೆ ಆಗಲೇ ರಾತ್ರಿ 12.35! ಎದುರಿಗೆ ಕುಳಿತಿದ್ದ ಸ್ನೇಹಿತನ ಕಣ್ಣಿಂದ ನೀರು ಒಂದೇ ಸಮನೆ ಧರಾಕಾರವಾಗಿ ಸುರಿಯುತ್ತಿತ್ತು. ನನ್ನನ್ನು ದೃಷ್ಟಿಯಿಟ್ಟು ನೋಡಲಾರದೆ ಆತ ತಲೆ ತಗ್ಗಿಸಿ ಅಳುತ್ತಿದ್ದ. ಅವನಲ್ಲಿ ಏನೋ ಚಡಪಡಿಕೆ... ಏನೋ ಹೇಳಬೇಕೆಂದು ಬಯಸಿ, ಹೇಳಲಾಗದೆ ನಿಟ್ಟುಸಿರುಡುತ್ತಿದ್ದ. ಅಸಹಾಯಕನಾಗಿ ತನ್ನಲ್ಲಿರುವ ನೋವನ್ನು ಹೊರಹಾಕಲಾಗದೆ ತಾನೇ ಬೇಯುತ್ತಿದ್ದನು. ಅವನ ನರಳಾಟದ ವೇದನೆ ಸಹಿಸದೆ ಮೌನವನ್ನು ಸೀಳುತ್ತ, ಯಾಕೀತರ...? ಏನಾಯ್ತು ಹೇಳು... ಸ್ನೇಹಿತ!' ತಣ್ಣನೆ ಕೇಳಿದೆ. ಒತ್ತರಿಸಿ ಬರುವ ದುಃಖವನ್ನು ತಡೆಯುತ್ತ... ಬಾಚಿ ತಬ್ಬಿಕೊಂಡನು!

ಕೋಣೆಯಲ್ಲಿ ಸಣ್ಣಗೆ ಉರಿಯುತ್ತಿರುವ ದೀಪವನ್ನು ನೋಡಿ ಆತ, 'ಕಣ್ಣು ಚುಚ್ಚಿದಂತಾಗುತ್ತಿದೆ, ಪ್ಲೀಸ್, ದಯವಿಟ್ಟು ದೀಪ ಆರಿಸುತ್ತೀಯಾ' ಎಂದು ವಿನಂತಿಸಿದ. ಮರುಮಾತನಾಡದೆ ಅವನ ಮನಸ್ಥಿತಿಯನ್ನು ಅರಿತು ದೀಪ ಆರಿಸಿ, ಅವನ ಪಕ್ಕದಲ್ಲಿಯೇ ಬಂದು ಕುಳಿತೆ. ಕೋಣೆಯ ತುಂಬ ಕತ್ತಲು, ಅದರದೆ ಸಾಮ್ರಾಜ್ಯ. ಅದಕ್ಕೆ ಜೊತೆಯೆಂಬಂತೆ ನಿಶ್ಯಬ್ದ.... ನೀರವ ಮೌನ!!
ಆದರೆ, ಕಾರ್ಗತ್ತಲಲ್ಲಿ ನನ್ನ ಸ್ನೇಹಿತನ ಉಚ್ಛ್ವಾಸ ಮತ್ತು ನಿಶ್ವಾಸದ ಸದ್ದು ಮಾತ್ರ ಕೇಳಿ ಬರುತ್ತಿತ್ತು. ಆತನ ಈ ಏರಿಳಿತದ ಉಸಿರಿನ ಹೊರತು, ಮತ್ತಿನ್ಯಾವ ಸದ್ದು ಇರಲಿಲ್ಲ. ಕ್ಷಣ ಕಾಲ ಆತನ ಬಿಸಿಯುಸಿರು ತಣ್ಣಗಿನ ಕೋಣೆಯನ್ನೆಲ್ಲ ವ್ಯಾಪಿಸಿಬಿಟ್ಟಿತು.
ಇದೇ ಕತ್ತಲೆಗಾಗಿ ತವಕಿಸುತ್ತಿದ್ದವನಂತೆ.... ಮಡುಗಟ್ಟಿದ ಹೃದಯದಿಂದ `ರಾಜ' ಎಂದು ಮೆಲ್ಲನೆ ಉಸುರಿದ. ಮಾತು ಕೇಳಿತು ಎಂಬಂತೆ, 'ಹೇಳೋ' ಎಂದೆ. ಹುಣ್ಣಿಮೆಗೆ ಸಾಗರ ಭೋರ್ಗರೆವಂತೆ, ಒಮ್ಮೆಲೆ ದುಃಖ ಉಮ್ಮಳಿಸಿ, ಅದನ್ನು ಬಿಗಿಹಿಡಿಯುವ ಪ್ರಯತ್ನ ಮಾಡುತ್ತಲೇ, `ಅವಳು ನನ್ನನ್ನು ಬಿಟ್ಟು ಹೋದಳೋ, ಅವಳಿಗೆ ನಾನು ಬೇಡವಂತೆ. ಮನೆಯಲ್ಲಿ ಒಪ್ಪುತ್ತಿಲ್ಲವಂತೆ. ಅವಳನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲವೋ.. ಎಂದನು. ಹಲವು ವರ್ಷಗಳಿಂದ ಆರಾಧಿಸುತ್ತ ಬಂದಿದ್ದ ಶ್ರದ್ಧೆಯ ಪ್ರೀತಿ ಅಂದು ಅವನಿಂದ ದೂರವಾಗಿತ್ತು. ಪ್ರೀತಿಯ ಗೋಪುರ ಏಕಾಏಕಿ ಕುಸಿದು ಬಿದಿದ್ದು, ಅವನನ್ನು ಹುಚ್ಚನನ್ನಾಗಿಸಿತ್ತು. ಆಗಲೇ ಎದೆಯಲ್ಲಿ ಮಡುಗಟ್ಟಿದ ದುಃಖ ಕಟ್ಟೆ ಒಡೆದಿತ್ತು. ಬಿಕ್ಕಿಬಿಕ್ಕಿ ಒಂದೇ ಸಮನೇ ಅಳುತ್ತಿದ್ದನು. ಅವನನ್ನು ಸಮಾಧಿನಿಸುವ ಪ್ರಯತ್ನ ಮಾಡದೆ, ಅವನನ್ನೆ ನೋಡುತ್ತ ಕುಳಿತೆ. ಸಮಾಧಾನದ ಮಾತು ಕೂಡಾ ತೀರಾ ಕಠೋರ ಎಂದೆನಿಸಿ ಬಿಡಬಹುದಾದ ಸೂಕ್ಷ್ಮ ಕ್ಷಣವದು. ಪೂಜನೀಯ ಪ್ರೀತಿ ಕಳೆದುಕೊಂಡ ಸ್ನೇಹಿತನ ದುಃಖದ ತೀವೃತೆ ಮಲೆನಾಡಿನ ರಭಸವನ್ನು ಮೀರಿಸುವಂತಿತ್ತು.
ಪ್ರೀತಿಯ ಆರಂಭಕ್ಕೆ ಒಂದು ನಿಧರ್ಿಷ್ಟ ದಿನವದ್ದಂತೆ, ಅದರ ಸಾವಿಗೆ ಇಂತಹದ್ದೆ ದಿನ ಎಂದು ಹೇಳಲಾಗದು. ಏಕೆಂದರೆ, ಅದೊಂದು ದೀರ್ಘ ಪ್ರಕ್ರಿಯೆ. ಹಾಗೂ ವ್ಯವಸ್ಥಿತ ಹೊಂಚು. ಪ್ರೀತಿ ಹುಟ್ಟಿದ ದಿನವನ್ನು ಮನದ ಮೂಲೆಯೊಂದರಲ್ಲಿ ಎಲ್ಲೋ ಬರಿದಿಟ್ಟು, ವರ್ಷದ ನಂತರ ಅದನ್ನು ಕೆದಕಿದರೂ ಅದು ಒಮ್ಮೆಲೆ ದೊರೆತು ಬಿಡುತ್ತದೆ. ಆದರೆ ಪ್ರೀತಿ ಕಳೆದು ಹೋದ ಬಗ್ಗೆ ಇದೇ ದಿನ ಹೀಗಾಯಿತು ಎಂದು ಯಾರಿಂದಲೂ ಹೇಳಲು ಬಹುಶಃ ಅಸಾಧ್ಯ. ಅಪ್ಪ, ಅಮ್ಮ, ಜಾತಿ ಎಂಬುದು ಪ್ರೀತಿಯನ್ನು ಧಿಕ್ಕರಿಸಿ ಹೊರಡುವ ಹೃದಯಗಳಾಡುವ ಮಾತು. ಆ ಹೃದಯಕ್ಕೆ ನಿಜ ಪ್ರೀತಿಯ ಅರ್ಥ ಗೊತ್ತಿಲ್ಲ ಎಂದರೂ ತಪ್ಪಾಗಲಾರದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಇದ್ಯಾವುದು ಕೂಡಾ ಅವರು ತಮ್ಮ ತಪ್ಪಿಗೆ ಕೊಡುತ್ತಿರುವ ಕಾರಣಗಳಲ್ಲ. ತಾವು ಮಾಡಿದ್ದೇ ಸರಿ ಎಂದು ತಮ್ಮನ್ನು ಸಮಥರ್ಿಸಿಕೊಳ್ಳುವುದಕ್ಕೆ ನೀಡುವ ಸಮಜಾಯಿಷಿಗಳು. ಇತ್ತ ಹುಡುಗ/ಹುಡುಗಿ ಪ್ರೀತಿಸುತ್ತೇನೆ ಎಂದು ಹೇಳುವ ಸಂದರ್ಭದಲ್ಲಿ ಅತ್ತ, ಅಪ್ಪ, ಅಮ್ಮ ತನ್ನ ಮಗ/ಮಗಳ ಬರುವಿಕೆಗಾಗಿ ಕಾದು ಕುಳಿತಿರುತ್ತಾರೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ವಿಷಯ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಹೆತ್ತವರ ನೆನಪು ಬಂದರೆ ನಿಜಕ್ಕೂ ಅದು ಗೌರವಯುತ. ಅಂತಹ ಯುವ ಹೃದಯಗಳನ್ನು ಗೌರವಿಸಿ, ಬೆಂಬಲಿಸೋಣ. ಆದರೆ, ಒಮ್ಮಿಂದೊಮ್ಮೆಲೆ ಇದ್ದಕ್ಕಿದ್ದಂತೆ `ಈ ಸಂಬಂಧ ಇನ್ನು ಮುಂದುವರಿಸಲು ಅಸಾಧ್ಯ, ದಯವಿಟ್ಟು ನನ್ನನ್ನು ಮರೆತು ಬಿಡು' ಎಂದು ಹೇಳುವುದು ನಿಜಕ್ಕೂ ಒಂದು ಹೀನ ಕೃತ್ಯ. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದವರು ಬೇಡವಾಗುತ್ತಾರೆ... ಎಲ್ಲ ನೋವಿಗೆ ದನಿಯಾಗಿ ಸ್ಪಂದಿಸಿದವರು ಕ್ಷುಲ್ಲಕ ಕಾರಣಕ್ಕೆ ಹೊರೆಯಾಗಿ ಬಿಡುತ್ತಾರೆ... ಆ ವಿಕೃತ ಹೃದಯದವರಿಗೆ ಅಪ್ಪ-ಅಮ್ಮನನ್ನು ಒಪ್ಪಿಸುವುದು ಕಷ್ಟವೆನಿಸುವುದಕ್ಕಿಂತ, ಅದರ ಅಗತ್ಯವಿಲ್ಲ ಎಂದೆನಿಸಿ ಬಿಡುತ್ತವೆ.
ನಿಜ ಪ್ರೀತಿಯ ಸಂಬಂಧ ಶ್ರದ್ಧೆ ಬೇಡುತ್ತ, ಪರಸ್ಪರರ ಬಗ್ಗೆ ನಂಬಿಕೆ ವಿಶ್ವಾಸವನ್ನು ಬಯಸುತ್ತವೆ. ಈ ಶ್ರದ್ಧೆ, ನಂಬಿಕೆ ಮತ್ತು ವಿಶ್ವಾಸ ದಿಢೀರ ಎಂದು ಒಮ್ಮೆಲೆ ಬೆಳೆದು ನಿಲ್ಲುವಂತಹದ್ದಲ್ಲ. ಸಾಕಷ್ಟು ಸಮಯ ಕೇಳುತ್ತ, ದಿನ ಕಳೆದಂತೆ ಪಕ್ವಗೊಳ್ಳುತ್ತ ಸಾಗುತ್ತವೆ. ಆದರೆ ಇಂದಿನ ಧಾವಂತದ ಯುವಗದಲ್ಲಿ ಪ್ರೀತಿ ತನ್ನ ಸೊಬಗನ್ನು ಕಳೆದುಕೊಂಡು ಅರ್ಥಹೀನವಾಗುತ್ತ ಯಾಂತ್ರಿಕವಾಗಿ ಸಾಗುತ್ತಿವೆ. ಶ್ರದ್ಧೆಯಿಲ್ಲದ ಪ್ರೀತಿ, ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಬಿರುಕು ಮೂಡಿ ಬಿಡುತ್ತವೆ. ಅವನೇ ನನ್ನ ಪ್ರಪಂಚ ಎಂದು ನವ-ನವೀನ ಕನಸು ಕಾಣುತ್ತ ಬದುಕು ನಡೆಸುತ್ತಿದ್ದ ಹುಡುಗಿಗೆ, ಇನ್ನೊಂದು ಪ್ರಪಂಚ ರಂಗು ರಂಗಾಗಿ ಕಾಣುತ್ತವೆ. ಇಷ್ಟು ದಿನ ಜೊತೆಯಿದ್ದು, ಉಸಿರಲ್ಲಿ ಉಸಿರಾದ ಹುಡುಗ ಬಣ್ಣ ಕಳೆದುಕೊಂಡು ಬಿಳಿಚಿ ಕೊಂಡಂತೆ ಭಾಸವಾಗುತ್ತಾನೆ. ಧುತ್ತೆಂದು ಅಪ್ಪ, ಅಮ್ಮ, ಜಾತಿಯ ಸಬೂಬು ಅಲ್ಲಿ ಬೇರು ಬಿಟ್ಟಿರುತ್ತದೆ. ಹೀಗೆ ಸುಳ್ಳೇ ಹುಟ್ಟಿಕೊಳ್ಳುವ ತಳುಕು ಪ್ರೀತಿ ಸುಮ್ಮನೆ ಬಿಡಿಸಿಕೊಂಡು ಓಡುವ ಹುನ್ನಾರ ನಡೆಸುತ್ತಿರುತ್ತವೆ. ಆದರೆ, ನಿಜವಾದ ಪ್ರೀತಿ ಹೇಗಾದರೂ ಸೈ, ಎಲ್ಲರನ್ನು ಎದುರಿಸಿ ಒಪ್ಪಿಸೋಣ ಎನ್ನುತ್ತಿರುತ್ತದೆ. ಪ್ರೀತಿಯಿಂದ ವಿಮುಖವಾದ ಜೀವ ನರಳುತ್ತ, ತನ್ನ ಬದುಕನ್ನು ಹಾಳುಗೆಡುವಿ ತಾನು ಉಳಿದು ಹೋದದಕ್ಕೆ ಕಾರಣ ಹುಡುಕಿ, ಕೆದಕಿ ಸೋಲುತ್ತ, ತನ್ನ ಬಗ್ಗೆ ಒಂದು ವಿಧವಾದ ಕೀಳರಮೆ ಬೆಳಸಿಕೊಂಡು, ಕಾಣದ ಕತ್ತಲೆಗಾಗಿ ಹಂಬಲಿಸುತ್ತಿರುತ್ತವೆ. ವರ್ಷಗಟ್ಟಲೇ ಶ್ರದ್ಧಾ ಭಕ್ತಿಯಿಂದ ಪ್ರೀತಿಯಿಂದ ನಿಮರ್ಿಸಿದ ಪ್ರೀತಿಯ ಕನಸಿನ ಗೋಪುರ ಕೆಲವೇ ದಿನಗಳಲ್ಲಿ ನೆಲಸಮವಾಗಿರುತ್ತವೆ.
ನನ್ನಷ್ಟಕ್ಕೆ ನಾನು ಹೀಗೆಲ್ಲ ಏನೇನೋ ಯೋಚನೆ ಮಾಡುತ್ತ ಕುಳಿತಿದ್ದೆ, ಅತ್ತ ಸ್ನೇಹಿತನ ಬಿಕ್ಕಳಿಕೆ ಒಂದೇ ಸಮನೆ ಕೇಳುತಲಿತ್ತು. ಆತ ಅತ್ತು ಅತ್ತು ಕಣ್ಣಿರಾಗಿದ್ದ. ನಾನಿನ್ನು ಮೇಲೇಳಲಾರೆ ಎಂದು ಬದುಕು ಕಳೆದುಕೊಂಡವರಂತೆ ರೋಧಿಸುತ್ತಿದ್ದ. ಅವನ ಮುಂಗೈಯನ್ನು ಅಂಗೈಯಲ್ಲಿಟ್ಟು ಹೇಳಿದೆ, `ಗೆಳೆಯಾ, ಆದದ್ದೆಲ್ಲ ಒಳ್ಳೆಯದಕ್ಕೆ ಅಂದುಕೋ. ಒಂದು ಸುಂದರವಾದ ಬಾಳ್ವೆ ನಡೆಸು. ಅವಳ ನೆನಪು ಬಾರದಂತೆ ಬದುಕಿ ಬಿಡು. ಇಷ್ಟು ವರ್ಷಗಳ ಕಾಲ ನಿಮ್ಮಿಬ್ಬರಲ್ಲಿದ್ದದ್ದು ಪ್ರೀತಿಯಲ್ಲ. ಅದೊಂದು ಆಕರ್ಷಣೆಯಷ್ಟೆ. ಕೇವಲ ಸೆಳೆತ. ಪ್ರೀತಿ ಹೀಗೆ ಇರೋದಿಲ್ಲ. ಅದು ಯಾವತ್ತೂ ಪರಸ್ಪರ ಒಬ್ಬರಿಗೊಬ್ಬರಿಗೆ ಸ್ಪೂತರ್ಿಯಾಗಿರುತ್ತವೆ. ಅಲ್ಲಿ ಸೋಲು ಎಂಬುದೇ ಇರುವುದಿಲ್ಲ. ಅದು ಸೋಲಲು ಬಿಡದ ಅದಮ್ಯ ಶಕ್ತಿ. ನಿನ್ನ ಬದುಕಿನ ಬಗ್ಗೆ ನಿನಗೆ ಅತೀವ ಶ್ರದ್ಧೆಯಿರಲಿ, ನಿನ್ನ ಸ್ನೇಹಿತನಾಗಿ ಸದಾ ನಿನ್ನ ಜೊತೆಯಿರುತ್ತೇನೆ, ನಿನ್ನ ನೋವಿಗೆ ದನಿಯಾಗಿ. ಕಿವಿಯಾಗಿ'.
ಮಾತು ಬರದವನಾಗಿ ತನ್ನೆಲ್ಲ ಚೈತನ್ಯ ಕಳೆದುಕೊಂಡಿದ್ದ ಆತ. ನನ್ನ ಮಡಿಲಿಗೆ ಕುಸಿದಿದ್ದ. ನೂರ್ಮಡಿಸಿದ್ದ ದುಃಖವನ್ನು ನುಂಗಿಕೊಳ್ಳುತ್ತ, ನನ್ನನ್ನು ನೋಡದೆ ಕೇಳಿದ, `ಅವಳು ನನ್ನನ್ನು ಯಾರಿಗೋಸ್ಕರ, ಯಾಕಾಗಿ ತ್ಯಾಗ ಮಾಡಿದಳು..?'. ಮನಸಲ್ಲೆ ನಕ್ಕು ಉತ್ತರಿಸಿದೆ, `ಅಸಲಿಗೆ ತ್ಯಾಗ ಅನ್ನುವ ವಿಚಾರ ಪ್ರೀತಿಯಲ್ಲಿಲ್ಲ. ಪ್ರೀತಿಯನ್ನು ಧಿಕ್ಕರಿಸಿ ಹೊರ ನಡೆಯುವವರು, ತಮಗೆ ಇನ್ನೂ ಉತ್ತಮ ಎನ್ನುವ ಆಯ್ಕೆಯ ಕಡೆ ಪಯಣ ಬೆಳೆಸಿರುತ್ತಾರೆ. ದೂರಾಗುವ ಮುನ್ನ ತಮ್ಮನ್ನು ತಾವು ಸಮಥರ್ಿಸಿಕೊಳ್ಳಲು, ಅವರು ಉಪಯೋಗಿಸುವ ಸಮರ್ಥ ಅಸ್ತ್ರವೇ ತ್ಯಾಗ. ಕಾಣದ ಬದುಕಿಗೆ ಯಾರು ಕೂಡಾ ಕೈಯಲ್ಲಿರುವ ಸುಂದರ ಬದುಕನ್ನು ತ್ಯಾಗ ಮಾಡುವುದಿಲ್ಲ. ಅದು ಯಾರೊಬ್ಬರ ಬದುಕಿನ ವಿಚಾರದಲ್ಲಿ ಸಾಧ್ಯವೂ ಇಲ್ಲ'.
ಅತ್ತು ಅತ್ತು ಸೋತಿದ್ದ ಗೆಳೆಯ ಅರೆ ಕ್ಷಣದಲ್ಲಿ ನಿದ್ರೆಗೆ ಜಾರಿದ್ದ. ಯಾಕೋ ಅರಿವಿಲ್ಲದೆ ನಾನು ಕೂಡಾ ತುಸು ದುಃಖಿತನಾದೆ. ಮನಸ್ಸು ಪ್ರಕ್ಷುಬ್ಧವಾಗಿತ್ತು. ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಕಿಟಕಿಯಾಚೆ ಒಮ್ಮೆ ದಿಟ್ಟಿಸಿದೆ.. ಯಾವುದೋ ಹಿಂದಿನ ನೆನಪು ಮರುಕಳಿಸಿದಂತಾಗಿ ಕಾಡಿದವು...
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ.....
-ನಾಗರಾಜ್ ಬಿ.ಎನ್.

ಯಾಕೆ ಹೀಗೆ.....?

ಬದುಕೇ ಒಂದು ಭ್ರಮೆ. ವಿಚಿತ್ರ. ನಾನಾ ತಿರುವುಗಳು. ಇಲ್ಲಿ ನಿರೀಕ್ಷಿತ ಫಲಕ್ಕಿಂತ ಅನಿರೀಕ್ಷಿತ ಅವಘಡಗಳದ್ದೇ ಹೆಚ್ಚು ಪಾರುಪತ್ಯ. ಸಮಚಿತ್ತದ ತಾದಾತ್ಮತೆಯಿಂದ ಬದುಕು ಮುನ್ನಡೆಸಿದರೆ ಎಲ್ಲವೂ ಸರಾಗ... ಹಾಗೆ ನಿರಾಳ...!!
ಎಲ್ಲ ಮನಸ್ಸುಗಳು ಒಂದೇ ತೆರನಾದ ಭಾವನೆಯನ್ನು ಸ್ಫುರಿಸುವುದಿಲ್ಲ. ಒಬ್ಬನದು ಭಾವುಕ ಮನಸ್ಸಿದ್ದರೆ, ಇನ್ನೊಬ್ಬನದು ಕಟುಕ ಮನಸ್ಸಾಗಿರುತ್ತದೆ. ಅದು ಅವರವರ ಸಂಸ್ಕಾರ ಹಾಗೂ ಬೆಳೆದು ಬಂದ ವಾತಾವರಣದ ಮೇಲೆ ನಿರ್ಧರಿತವಾಗುತ್ತದೆ. ಆದರೆ, ಕೆಲವು ಬಾರಿ ಉದ್ದೇಶಪೂರ್ವಕವಾಗಿ ಮನಸ್ಸಿನ ದಾರಿಯನ್ನೂ ತಪ್ಪಿಸುವವರೂ ಇರುತ್ತಾರೆ... ಅದು ಬೇರೆ ಮಾತು..!!
ಪಾಪ... ಆ ಮನಸ್ಸಿನದ್ದು ಏನೂ ತಪ್ಪಿರುವುದಿಲ್ಲ. ಅದು ಎಲ್ಲರ ಜೊತೆಯೂ ನಗು ನಗುತ್ತಲೇ ಇರುತ್ತದೆ. ಅದಕ್ಕೆ ಗಂಡು-ಹೆಣ್ಣು, ಬಡವ-ಶ್ರೀಮಂತ, ಜಾತಿ-ಧರ್ಮ ಎನ್ನುವ ಯಾವೊಂದು ಭೇದವೂ ಇರುವುದಿಲ್ಲ. ಆದರೂ ಕೆಲವರು ಅದನ್ನು ತಪ್ಪಿತಸ್ಥ ಎನ್ನುವ ಸ್ಥಾನಕ್ಕೆ ನೂಕಿ ಬಿಡುತ್ತಾರೆ. ವಿವೇಚನಾ ರಹಿತ ವ್ಯಾಖ್ಯಾನ ನೀಡುತ್ತ, ಅಂತೆ-ಕಂತೆಗಳ ಗಂಟು-ಮೂಟೆಯನ್ನೇ ನಿಜ ಮಾಡಲು ಹೋಗುತ್ತಾರೆ. ಕಪೋಲಕಲ್ಪಿತ ನುಡಿಗಳು ಆ ಸಂದರ್ಭದಲ್ಲಿ ವಿಜ್ರಂಭಿಸಿ... ಝೇಂಕರಿಸುತ್ತದೆ...!
ಹಾಗಾದರೆ, ಆ ಮನಸ್ಸಿಗೆ 'ತಪ್ಪಿತಸ್ಥ' ಎಂದು ಹೆಸರು ಬರಲು ಕಾರಣವೇನು. ಬಹುಶಃ ಎಲ್ಲರೂ ಒಂದೇ ಎಂದು ಪ್ರೀತಿಯಿಂದ ಮಾತನಾಡುತ್ತಿದ್ದುದ್ದು ಕಾರಣವಾಗಿರಬಹುದು...! ಅಥವಾ, ಪ್ರೀತಿಯ ಸಹಬಾಳ್ವೆ ಸಹಿಸದ ಅಸೂಯೆಯೇ ಕಾರಣವಾಗಿರಬಹುದು...! ಅಥವಾ, ಎಲ್ಲರೊಳಗೊಂದಾದ ಮನಸ್ಸಿನ ಭಾವ ಅರ್ಥ ಮಾಡಿಕೊಳ್ಳದ ಸಂಕುಚಿತ ಮನಸ್ಸಿನ ಮೇಲಾಟ ಕಾರಣವಾಗಬಹುದು...! ಅಥವಾ, ತಪ್ಪಾಗಿ ಅರ್ಥೈಸಿಕೊಂಡು ಗಾಳಿ ಮಾತು ಎಬ್ಬಿಸಿದ ಇನ್ನೊಂದು ಮನಸ್ಸಿನ ತೊಳಲಾಟವೂ ಕಾರಣವಾಗಿರಬಹುದು....!
ಮನುಜ ಜಾತಿ ತಾನೊಂದೆ ವಲಂ... ಎಂದು ಅರ್ಥವಾಗುವುದು ಯಾವಾಗ...? ಮನಸ್ಸು-ಮನಸ್ಸುಗಳ ನಡುವೆ ನಿರ್ಮಲ ಪ್ರೀತಿ ಅರಳುವುದು ಯಾವಾಗ...
-ನಾಗರಾಜ್  ಬಿ.ಎನ್. 

ಭಾನುವಾರ, ನವೆಂಬರ್ 15, 2015

ಮೂಕ ಹಕ್ಕಿಯು ಹಾಡುತ್ತಿದೆ...!

ಅದೊಂದು ಕಲ್ಪನಾತೀತ ಭಾವ. ನೋವಿದೆ, ನಲಿವಿದೆ... ನಿರೀಕ್ಷೆಗೂ ಮೀರಿದ ಯಾತನೆಯಿದೆ. ಅತ್ತರೆ ಎಂದೂ ಬತ್ತದ ಕಣ್ಣೀರಿನ ಪ್ರವಾಹವೇ ಇದೆ...!
ಪುಟ್ಟ ಹಕ್ಕಿಯ ಕಣ್ಣು ಕಟ್ಟಿ, ದಟ್ಟ ಕಾನನದಲ್ಲಿ ಬಿಟ್ಟು ಹಾರು ಎಂದರೆ....! ಹಾರಲು ವಿಶಾಲವಾದ ನೀಲಾಕಾಶವಿದ್ದರೂ, ಅದರ ಹರವು ಎಲ್ಲ ಮುರುಟಿ ಹೋದ ಕನಸುಗಳಾಗಿವೆ. ಆ ಕನಸಿನ ಲೋಕದೊಳಗೊಂದು ಕನವರಿಕೆಯ ಪುಟ್ಟ ಜಗತ್ತಿದೆ. ಆ ಜಗತ್ತು ಕೂಡಾ ಗಾವುದ ದೂರ. ನನ್ನ ಧ್ವನಿ ಕೇಳದಷ್ಟು ದೂರದಲ್ಲಿ ನನ್ನ ಮನಸ್ಸಿದೆ; ಮನಸ್ಸಿನ ಒಂದು ಪಿಸುಮಾತಿದೆ. ರೋಧಿಸುವ ಮನಸ್ಸಿಗೆ ಸಾಂತ್ವನ ಹೇಳುವ ಮೇಘಗಳು ಕೂಡಾ ಮುನಿಸಿಕೊಂಡಂತಿವೆ. ಜೀವಚ್ಛವವಾಗಬಾರದೆಂದು ತಿನ್ನುವ ಕಾಳು-ಕಡಿಯೂ ಕೂಡಾ, ವಿಷಯವಾಗುತ್ತಿದೆ. ಒಡಲಲ್ಲಿ ಧಗಧಗನೆ ಉರಿವ ಬೆಂಕಿ ಕಿಚ್ಚು, ಮೈ-ಮನವೆಲ್ಲ ಸುಡುತ್ತಿದೆ.
ಅನಿವಾರ್ಯತೆಗೆ ತಲೆಬಾಗಿ ಮಂಡಿಯೂರಿ ಕುಳಿತಂತಾಗಿದೆ. ದೈನ್ಯವು ಗಂಟಲಲ್ಲಿ ನೋವಾಗಿ ಕುಳಿತು, ಅಳುವೇ ತುಟಿಗೆ ಬಂದಂತಾಗಿದೆ. ಭಾವ ಪ್ರವಾಹದಲ್ಲಿ ತೋಯ್ದು, ತೊಪ್ಪೆಯಾದ ಅನುಭವ. ಕಣ್ಣೀರ ಝರಿಯು ಬಿರುಸಾಗಿ ಹರಿಯುತ್ತಿದ್ದು, ರುದ್ರ ಭಯಂಕರವೆಂದೆನಿಸುತ್ತಿದೆ.
ದಟ್ಟ ಕಾನನದಲ್ಲಿ ಒಂಟಿ ನಡಿಗೆ. ನೀರವ ಮೌನದಲ್ಲಿ, ಮೂಕ ಹಕ್ಕಿಯ ಹಾಡು. ಕಾಪಿಟ್ಟ ಮೋಡ ಕೂಡಾ ಮಾತಾಡುತ್ತಿಲ್ಲ. ಗಿಡ ಗಂಟೆಗಳ ಕೊರಳ ಗಾನವೂ ಸ್ಥಬ್ದವಾಗಿದೆ. ಭಾರವಾದ ಹೆಜ್ಜೆ ಗುರುತುಗಳು, ತರಗೆಲೆಯ ಮೇಲೂ ಅಚ್ಚೊತ್ತುತಿವೆ. ಮರದ ಮೇಲೆಲ್ಲೂ ಕೂತ ಮರಿ ಹಕ್ಕಿ, ಮುಂಜಾನೆದ್ದು ಹೋದ ತಾಯಿ ಹಕ್ಕಿಗಾಗಿ ಪರಿತಪಿಸುತ್ತಿದೆ. ಒಂಟಿತನದ ಬೇಗುದಿ ಇನ್ನೆಷ್ಟು ದಿನ...? ಬರುವ ಸುದನವನ್ನು ನೆನೆದುಕೊಂಡೇ ಕಾಲ ಕಳೆಯಬೇಕಿದೆ. ನನಸಿನಲ್ಲಿ ಆಗದ್ದನ್ನು ಕನಸಿನಲ್ಲಿ ಕಾಣಬೇಕಿದೆ. ಸಂತಸ ಪಡೆಯಬೇಕಿದೆ. ಬದುಕು ಇಷ್ಟೇನಾ....?
ನಾ ನಿನಗೆ ಬೇಡವಾಗಿರಬಹುದು, ಆದರೆ ನಿನ್ನ ಹೃದಯಕ್ಕಲ್ಲ....!