ಗುರುವಾರ, ನವೆಂಬರ್ 26, 2015

ಪುಳಕಿತನಾದೆ ನಿಮ್ಮೀ ಪ್ರೀತಿಗೆ.....
ಎಂದೂ ನಿರೀಕ್ಷಿಸದ ಕಲ್ಪನೆಗೂ ಮೀರಿದ ಕ್ಷಣ. ಶಬ್ದಗಳ ಪದಪುಂಜಗಳಲಿ ಕಟ್ಟಿ ಹಾಕಲಾಗದ ಸನ್ನವೇಶ. ಮನಸ್ಸು ಆದೃಗೊಳಿಸಿದ ಗಳಿಗೆ. ಹಾಗೆಯೇ... ನನ್ನನ್ನು ನಾನೇ ಪ್ರಶ್ನಿಸಿಕೊಂಡ ಸಮಯವೂ ಅದಾಗಿತ್ತು.
ಸಂದರ್ಭ: ಈ ಹುಚ್ಚು ಹುಡುಗನ ಜನ್ಮದಿನ....!
ಜನ್ಮದಿನ ಎಂದರೆ ಅಷ್ಟಕ್ಕಷ್ಟೇ...! ಯಾವತ್ತೂ ಅದಕ್ಕೆ ಬೆಲೆ ನೀಡಿದವನೇ ಅಲ್ಲ. ಬದಲಾಗಿ, ಈ ಜನ್ಮದಿನದ ನೆನಪಿಗೋಸ್ಕರ ಕಳೆದ ಐದು ವರ್ಷಗಳಿಂದ ಒಂದು ಅನಾಥ ಮಗುವಿನ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದೆ. ಇದಕ್ಕೆ ಸ್ಫೂರ್ತಿಯ ಸೆಲೆಯಾಗಿ, ಬೆನ್ನೆಲುಬಾಗಿ ನಿಂತವಳು ನನ್ನಾತ್ಮ ಸಹೋದರಿ...! ಪ್ರತಿ ಬಾರಿ ಜನ್ಮ ದಿನದಂದು ಆ ಪುಟ್ಟ ಮಗುವಿದ್ದಲ್ಲಿಗೆ ಹೋಗಿ, ಕುಶಲ ಕ್ಷೇಮ ವಿಚಾರಿಸಿ, ಕಣ್ತುಂಬಿಸಿಕೊಂಡು, ಅರಿವಿಲ್ಲದೆ ಕಣ್ಣಂಚನ್ನು ಒದ್ದೆ ಮಾಡಿಕೊಂಡು ಬರುತ್ತಿದ್ದೆ. ಆದರೆ, ಈ ವರ್ಷ ಆ ಭಾಗ್ಯದಿಂದ ವಂಚಿತ. ಕಾಲಚಕ್ರದ ಉರುಳಾಟದಲ್ಲಿ ಕೆಲವು ನೈಜ್ಯತೆ ನೆನಪಾಗಷ್ಟೇ ಇರುತ್ತವೆ.
ಹೊಸ ಮನೆಯ ಮೂಲೆಯೊಂದರಲ್ಲಿ ಮೊಬೈಲ್ನ್ನು ಸೈಲೆಂಟ್ ಇಟ್ಟು, ಆ ಪುಟ್ಟ ಮಗುವಿನ ನೆನಪಲ್ಲಿಯೇ ನಿದ್ದೆ ಹೋಗಿದ್ದೆ. ನಾ ಮಲಗಿದ್ದರೂ ನನ್ನ ಮೊಬೈಲ್ ಮಲಗಿಲ್ಲ. ರಾತ್ರಿಯಿಡೀ ಸ್ನೇಹಿತರ, ಹಿತೈಷಿಗಳ ಸಂದೇಶ ಸ್ವೀಕರಿಸುವುದರಲ್ಲಿಯೇ ಅದು ನಿರತವಾಗಿತ್ತು. ಮುಂಜಾನೆದ್ದು ನೋಡಿದಾಗ ಇನ್-ಬಾಕ್ಸ್ನಲ್ಲಿ 47 ಸಂದೇಶಗಳು...! 21 ಮಿಸ್ ಕಾಲ್ಗಳು...! 
ಸುಮ್ಮನೆ ನಸುನಕ್ಕಿ ನನ್ನಷ್ಟಕ್ಕೆ ನಾನಿದ್ದೆ. ಪ್ರಾಣ ಸ್ನೇಹಿತ ಡಿವಿ ನನಗೆ ಒಂದಿನಿತೂ ಸಂದೇಹ ಬರದ ರೀತಿಯಲ್ಲಿ, ಹತ್ತಿರವಿದ್ದುಕೊಂಡೇ ಜನ್ಮದಿನಾಚರಣೆಯ ಎಲ್ಲ ತಯಾರಿಯನ್ನು ನಡೆಸಿದ್ದರು. ಲಗು ಬಗೆಯಲ್ಲಿ ಸ್ನಾನ ಮಾಡಲು ಹೇಳಿ, ಸಹದ್ಯೋಗಿ ಬಸವರಾಜ ಬಂಕಾಪುರ ಅವರೊಂದಿಗೆ ಎಲ್ಲಿಗೋ ಹೋದವರು, ಬರುವಾಗ ಕೇಕ್(ಪ್ಯೂವರ್ ವೆಜ್) ಮತ್ತು ಸ್ನ್ಯಾಕ್ಸ್ ಖರೀದಿಸಿ ತಂದಿದ್ದರು. ಅಷ್ಟರಲ್ಲಾಗಲೇ, ನನ್ನೆಲ್ಲ ವೃತ್ತಿ ಬಂಧುಗಳು ಒಬ್ಬರ ಹಿಂದೊಬ್ಬರಂತೆ ಸಾಲು ಸಾಲಾಗಿ ನಮ್ಮ ಹೊಸ ಮನೆಗೆ ಆಗಮಿಸುತ್ತಿದ್ದರು. ನೋಡು ನೋಡುತ್ತಿದ್ದಂತೆ ಇಬ್ಬರಿದ್ದದ್ದು ನಾಲ್ಕಾಗಿ, ನಾಲ್ಕಿದ್ದದ್ದು ಎಂಟಾಗಿ ಕೊನೆಗೆ ಹದಿನಾರರ ಸಂಖ್ಯೆಗೆ ಬಂದು ತಲುಪಿತ್ತು.
ಎದುರಗಡೆ ಕೇಕ್... ಅದರ ಮೇಲೊಂದು ಮಿಂಚಿನ ಸುರಬತ್ತಿ...! ಕೈಯ್ಯಲ್ಲಿ ಬೆಂಕಿ ಪೊಟ್ಟಣ ಕೊಟ್ಟ ಡಿವಿ, ಸುರಬತ್ತಿ ಹಚ್ಚಲು ಹೇಳಿದರು. ಇವೆಲ್ಲವೂ ನನಗೆ ಹೊಸ ಅನುಭವ. ಒಂದು ಬಾರಿ ಗೀರಿದ ಬೆಂಕಿ ಕಡ್ಡಿ, ಹೇಗೆ ಬೆಂಕಿಯಾಯಿತೋ ಹಾಗೆಯೇ ನಂದಿ ಹೋಯಿತು.. ಇನ್ನೊಂದು ಗೀರಿ... ತುಸು ನಿಧಾನವಾಗಿ ಸುರಬತ್ತಿಗೆ ಬೆಂಕಿ ಹೊತ್ತಿಸಿದೆ. ಸುರ್... ಎಂದು ತನ್ನ ಚಿತ್ತಾರ ಬಿಡಿಸಿ, ಅಲ್ಲೆ ಮಾಯವಾಯಿತು. ಅಷ್ಟರಲ್ಲಾಗಲೇ ನನ್ನ ಬಳಗದವರೆಲ್ಲ ಜೋರಾಗಿ ಹ್ಯಾಪಿ ಬರ್ಥಡೇ ಎಂದು ಶುಭ ಕೋರುತ್ತ, ಕೇಕ್ ಕಟ್ ಮಾಡಲು ಹೇಳಿದರು. ಕೇಕ್ ಸಂಸ್ಕೃತಿಯ ವಿರೋಧಿಯಾದ ನಾನು, ಪ್ರೀತಿಗೆ ಮಂಡಿಯೂರಿ ಶಿರಬಾಗಿ ಬಿಟ್ಟಿದ್ದೆ. ಅಂತೂ ಕೇಕ್ ಕಟ್ ಮಾಡಿ, ಸ್ನೇಹಿತ ಬಸವರಾಜ ಹೂಗಾರ(ಉದಯವಾಣಿ) ಅವರ ಅಕ್ಕನ ಪುಟ್ಟ ಮಗಳಿಗೆ ಕೇಕ್ ತಿನ್ನಿಸಿ, ಜನ್ಮದಿನ ಆಚರಿಸಿಕೊಂಡೆ. ನಂತರ ಗುರು ಸರ್, ನವೀ, ಜೋಶಿ ಸರ್, ಸಿದ್ದೇಶ, ಗುರು ಸರ್(ಫೋಟೋಗ್ರಾಫರ್), ಮಂಜಣ್ಣ, ವಿವೇಕ, ಬಾಬು, ಕಿಶನ್ ಸರ್, ವಿಕ್ರಮ, ಶಿವು, ಬಸು ಹೀಗೆ ಎಲ್ಲರೂ ಕೇಕ್ ಬಾಯಿಗೆ ತುಂಬಿ ಉಸಿರಾಡಲಾಗದಂತೆ ಮಾಡಿ ಬಿಟ್ಟರು...!
ಸಂದರ್ಭದಲ್ಲಿ ನನ್ನ ಒಳ ಮನಸ್ಸು ಸ್ಥಬ್ಧವಾಗಿ, ಅವರ ಪ್ರೀತಿಯ ಕಡಲಲ್ಲಿ ತೇಲಾಡುತ್ತಿತ್ತು. ಭಾವುಕನಾಗಿ ನನ್ನಷ್ಟಕ್ಕೇ ನಾನೇ ಮಾತನಾಡಿಕೊಳ್ಳುತ್ತಿದ್ದೆ. ಇಷ್ಟೊಂದು ಆಪ್ತವಾಗಿ ಒಂದು ಮಗುವಿನಂತೆ ಎಲ್ಲರೂ ಒಂದೆಡೆ ಸೇರಿಜನ್ಮದಿನ ಆಚರಿಸಿದರಲ್ಲಾ... ಇದಕ್ಕೆ ನಾನು ಅರ್ಹನೇ ಎಂದು..? ಖಂಡಿತ ಗೊತ್ತಿಲ್ಲ.... ಆದರೆ, ನನ್ನವರಾದ ಅವರೆಲ್ಲರ ಪ್ರೀತಿಗೆ ನಾ ಸದಾ ಋಣಿ ಎಂದಷ್ಟೇ ಹೇಳಬಲ್ಲೆ...!
ನೂರಾರು ಸ್ನೇಹಿತರು ಫೇಸ್-ಬುಕ್ ಮತ್ತು ವಾಟ್ಸ್-ಅಪ್ ನಲ್ಲಿ ಶುಭಾಶಯದ ಸುರಿಮಳೆಯನ್ನೇ ಸುರಿಸಿದ್ದಾರೆ. ಪರಿಚಿತರು, ಪರಿಚಿತರಲ್ಲದವರೂ, ಹೈಸ್ಕೂಲ್ ಸ್ನೇಹಿತರು, ಕಾಲೇಜ್ ಸ್ನೇಹಿತರು, ಬಂಧುಗಳು, ಸಹದ್ಯೋಗಿಗಳು, ಗುರುಗಳು, ಹಿತೈಷಿಗಳು, ಮಾರ್ಗದರ್ಶಕರು ಹೀಗೆ ಬಹುತೇಕರು ಜನ್ಮದಿನಕ್ಕೆ ಶುಭಕೋರಿದ್ದಾರೆ. ಅವರೆಲ್ಲರಿಗೂ ನನ್ನ ತುಂಬು ಹೃದಯದ ವಂದನೆಗಳು
-ನಾಗರಾಜ್ ಬಿ.ಎನ್. 

ಕಾಮೆಂಟ್‌ಗಳಿಲ್ಲ: