ಸೋಮವಾರ, ಸೆಪ್ಟೆಂಬರ್ 25, 2017

ಗುಪ್ತಾ೦ಗ ಛೇದನ...! ಇದು ಈಗಲೂ ಜೀವಂತ!!!
(ಓದಲೇ ಬೇಕಾದ ಹೊತ್ತಿಗೆ ‘ಮರುಭೂಮಿಯ ಹೂ’)

ಇಲ್ಲಿನ ಪುರುಷ ಸಮಾಜಕ್ಕೆ ಹೆಣ್ಣನ್ನು ಮತ್ತು ಅಧಿಕಾರವನ್ನು ಸದಾ ತನ್ನ ಅಧೀನದಲ್ಲಿಟ್ಟುಕೊಳ್ಳಬೇಕೆಂಬ ಬಯಕೆ. ಹಾಗಾಗಿ ಇವರಿಗೆ ಮಾನವೀಯತೆಯಾಗಲಿ, ಅಂತಃಕರಣವೆಂಬುದಾಗಲಿ ಇಲ್ಲ. ಅವೆಲ್ಲವೂ ಇವರಿಗೆ ಅಪರಿಚಿತ ಶಬ್ಧಗಳು. ಆಫ್ರಿಕಾದ ಮಹಿಳೆಯರೆಂದರೆ ಇವರಿಗೆಲ್ಲ ತಾವು ಸಾಕುತ್ತಿರುವ ಪ್ರಾಣಿಗಳ ಸಮಾನ. ಇದು ಕಠಿಣ ಶಬ್ದವಾದರೂ ಸರಿಯೇ, ನಾನು ಎಷ್ಟೋ ಬಾರಿ ಇಲ್ಲಿನ ಪುರುಷರ ಬಗ್ಗೆ ಈ ರೀತಿ ಯೋಚಿಸುತ್ತಾ ಇರುತ್ತೀನಿ. ಆಫ್ರಿಕಾದ ಪುರುಷರ ಗುಪ್ತಾ೦ಗಗಳನ್ನು ಕತ್ತರಿಸಿ ಬಿಸಾಡಬೇಕು. ದ್ವಿಚಕ್ರ ವಾಹನಕ್ಕೆ ಕಾಲು ಸಿಕ್ಕಿಸಿಕೊಂಡ ನಾಯಿಮರಿ ಘೀಳಿಡುವ ಹಾಗೆ, ಸುರಿಯುವ ರಕ್ತದ ಜೊತೆ ಇವರು ಅತ್ತಿ೦ದ ಇತ್ತ, ಇತ್ತಿ೦ದ ಅತ್ತ ಓಡಾಡುವುದನ್ನು ನಾನು ನೋಡಬೇಕು. ಆಗ ಮಾತ್ರ ಇವರಿಗೆ ಯೋನಿ ಛೇದನ ಮಾಡಿಸಿಕೊಂಡ ಹೆಣ್ಣೊಬ್ಬಳ ಸಂಕಟ ಏನೆಂದು ಅರಿವಾಗುತ್ತದೆ. ತಮ್ಮ ಸ್ವಾರ್ಥಕ್ಕೆ ದೇವರನ್ನು, ಧರ್ಮವನ್ನು ಯಾವುದೇ ಎಗ್ಗಿಲ್ಲದೆ ಬಳಸಿಕೊಂಡ ನಾಚಿಕೆಗೇಡಿನ ಪುರುಷ ಸಮಾಜಕ್ಕೆ ಒಂದಿಷ್ಟು ಪ್ರಜ್ಞೆ ಮೂಡಲು ಸಾಧ್ಯವಾಗಬಲ್ಲದು....
ಕೊನೆಯ ಅಧ್ಯಾಯದಲ್ಲಿ ಹೀಗೆ ಸಾಗುತ್ತದೆ.......

 ಡಾ. ಎನ್. ಜಗದೀಶ್ ಕೊಪ್ಪ ಅವರು ಕನ್ನಡದಲ್ಲಿ ಅನುವಾದಿಸಿದ ‘ಮರುಭೂಮಿಯ ಹೂ’ ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡೀರೀ ಅವರ ‘ಡೆಸಾರ್ಟ್ ಫ್ಲವರ್’ ಎಂಬ ಆಂಗ್ಲ ಆತ್ಮಕತೆಯ ‘ಸಾವಿಗೆ ಎದುರಾಗಿ ನಿಂತ ಕ್ಷಣ’ ಹೊತ್ತಿಗೆಯ ಕೊನೆಯ ಅಧ್ಯಾಯದಲ್ಲಿ.

ಆಫ್ರಿಕಾದ ಬುಡಕಟ್ಟುಗಳ ಮಹಿಳೆಯರು ಪವಿತ್ರವಾಗಿ ಬದುಕಬೇಕಾದರೆ ನಾಗರಿಕ ಸಮಾಜ ಕಂಡು-ಕೇಳರಿಯದಂತಹ ಅನಿಷ್ಟ ಪದ್ಧತಿಗೆ ಒಳಗಾಗಲೇಬೇಕು. ಅದೊಂದು ಕಡ್ಡಾಯ ಧಾರ್ಮಿಕ ಕ್ರಿಯೆಯಾಗಿ ಅಲ್ಲಿ ಬದಲಾಗಿದೆ. ಹೆಣ್ಣು ಕೆಲವು ಪವಿತ್ರ ಭಾಗಗಳನ್ನು ಇಟ್ಟುಕೊಂಡು ಜನಿಸುವುದರಿಂದ, ಅವಳು ಪವಿತ್ರಳಾಗಿ ಮುಂದಿನ ದಿನಗಳಲ್ಲಿ ವಿವಾಹಕ್ಕೆ ಮತ್ತು ತಾಯಿಯಾಗಲು ಅರ್ಹತೆ ಗಳಿಸಬೇಕಾದರೆ, ಗುಪ್ತಾ೦ಗ ವಿಚ್ಛೇದನ ಕ್ರಿಯೆಗೆ ಒಳಗಾಗಬೇಕಾಗಿರುವುದು ಕಡ್ಡಾಯ. ಈ ಕ್ರಿಯೆಗೆ ಒಳಗಾಗದ ಮಹಿಳೆಯರನ್ನು ಮದುವೆಯಾಗಲು ಪುರುಷ ಸಮಾಜ ನಿರಾಕರಿಸುತ್ತಿರುವುದು ಇಂದಿಗೂ ಅಲ್ಲಿ ಜೀವಂತವಿದೆ ಎನ್ನುವ ಕಟು ವಾಸ್ತವವನ್ನು, ಬೆದರಿಕೆಗಳ ನಡುವೆಯೂ ವಾರಿಸ್ ನಾಗರಿಕ ಸಮಾಜಕ್ಕೆ ತಿಳಿಸುವ ಪರಿ ಅನನ್ಯವಾದದ್ದು.

ಈ ಅನಿಷ್ಟ ಕ್ರಿಯೆಗೆ ತನ್ನ ಅಕ್ಕನನ್ನು ಒಳಪಡಿಸಿದ್ದು, ಆಕೆ ಅನುಭವಿಸಿದ ನೋವು, ಸಂಕಟ, ಚೀರಾಟಗಳನ್ನು ಸ್ವತಃ ವಾರಿಸ್ ಕಣ್ಣಾರೆ ಕಂಡು ಭಯ ಭೀತಗೊಂಡಿದ್ದಳು. ಹಾಗಿದ್ದಾಗಲೂ, ತಾನು ಆ ಕ್ರಿಯೆಗೆ ಒಳಪಡಬೇಕೆಂದು ತಾಯಿಯ ಬೆನ್ನು ಬಿದ್ದು ಕಾಡಿ, ಕೊನೆಗೊಂದು ದಿನ ಆ ಅನಿಷ್ಟ ಕ್ರಿಯೆಗೆ ತನ್ನನ್ನು ಒಳಗಾಗಿಸಿಕೊಳ್ಳುತ್ತಾಳೆ. ಆದರೆ, ಇವೆಲ್ಲ ಏನೂ ಅರಿಯದ ಆಕೆಯ ಐದನೇ ವರ್ಷದಲ್ಲಿ ಕುತೂಹಲ ಹಾಗೂ ತಾನು ಗಟ್ಟಿಗಿತ್ತಿ ಎಂದು ತೋರಿಸಿಕೊಳ್ಳಲೋಸುಗ ಮಾತ್ರ. ಕತ್ತರಿಸಿದ ಆಕೆಯ ಗುಪ್ತಾ೦ಗದ ಎರಡು ಭಾಗಗಳನ್ನು ಸೇರಿಸಿ, ಮೂತ್ರ ವಿಸರ್ಜಿಸಲಷ್ಟೇ ಚಿಕ್ಕ ರಂಧ್ರದಷ್ಟು ಜಾಗ ಬಿಟ್ಟು ಹೊಲಿಗೆ ಹಾಕಲಾಗುತ್ತದೆ. ಅರಿಯದ ವಯಸ್ಸಲ್ಲಿ ಅಮ್ಮನ ಬೆನ್ನು ಬಿದ್ದು(ಬೆನ್ನು ಬೀಳದಿದ್ದರೂ ಆ ಕ್ರಿಯೆಗೆ ಒಳಪಡಲೇಬೇಕಿತ್ತು) ವಿಚ್ಛೇದನ ಕ್ರಿಯೆಗೆ ಒಳಪಟ್ಟ ಪರಿಣಾಮ ವಾರಿಸ್, ಇಪ್ಪತ್ತೆ೦ಟು ವರ್ಷಗಳ ಕಾಲ ಮೂತ್ರ ವಿಸರ್ಜನೆ ಮಾಡಲು ಅರ್ಧಗಂಟೆ ಸಮಯ ತೆಗೆದುಕೊಳ್ಳುತ್ತಿದ್ದಳು! ಪಿರೀಯಡ್ಸ್ ಸಮಯದಲ್ಲಂತೂ ರಕ್ತ ಸರಾಗವಾಗಿ ಹರಿಯದ ಕಾರಣ ನರಕ ಯಾತನೆ ಅನುಭವಿಸುತ್ತಿದ್ದಳು. ಕೊನೆಗೆ ಮೂವತ್ತನೇ ವಯಸ್ಸಲ್ಲಿ ಶಸ್ತ್ರ ಚಿಕಿತ್ಸೆ ಮೂಲಕ ಎಲ್ಲ ನೋವಿಗೂ ಪರಿಹಾರ ಕಂಡುಕೊಂಡಳು.

ಆಫ್ರಿಕಾದ ಸೋಮಾಲಿಯಾದ ಮರುಭೂಮಿಯ ಬಡುಟಕಟ್ಟಿನಲ್ಲಿರುವ ಅನಿಷ್ಟ ಪದ್ಧತಿಯನ್ನು ವಾರಿಸ್, 'ರೆಸಾರ್ಟ್ ಫ್ಲವರ್’ ಹೊತ್ತಿಗೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಸ್ವತಃ ತಾನು ಆ ಕ್ರಿಯೆಗೆ ಒಳಗಾಗಿದ್ದು, ಆ ಸಂದರ್ಭದಲ್ಲಿ ತಾನು ಅನುಭವಿಸಿದ ನೋವು, ಮುಂದೆ ಎದುರಾದ ಸಂಕಷ್ಟ ಇವೆಲ್ಲವನ್ನು ಆಕೆ ಎದುರಿಗೆ ಕೂತು ಹೇಳಿದಂತೆ ಭಾಸವಾಗುತ್ತದೆ. ಇಂದಿಗೂ ಅಲ್ಲಿ ಲಕ್ಷಾ೦ತರ ಹೆಣ್ಣು ಮಕ್ಕಳು ಯೋನಿ ಛೇದದಂತಹ ಅನಿಷ್ಟ ಪದ್ಧತಿಗೆ ಒಳಗಾಗುತ್ತಿದ್ದಾರೆ ಎಂದು ವಾರಿಸ್ ಅಂಕಿ-ಸಂಖ್ಯೆ ತಿಳಿಸುವಾಗ, ಆಕ್ರೋಶಗಳೆಲ್ಲ ಒಂದೆಡೆ ಕೇಂದ್ರಿಕೃತವಾಗುತ್ತದೆ. ವಿಶ್ವಸಂಸ್ಥೆಯ ರಾಯಭಾರಿಯಾಗಿ, ಈ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ನಡೆಸಿರುವ ಆಕೆ, ವಿಯನ್ನಾದಲ್ಲಿ ‘ಡೆಸಾರ್ಟ್ ಫ್ಲವರ್ ಫೌಂಡೇಶನ್’ ಸಂಸ್ಥೆ ಹುಟ್ಟು ಹಾಕಿದ್ದಾಳೆ. ರೂಪದರ್ಶಿಯಾಗಿ ಗಳಿಸಿದ, ಗಳಿಸುತ್ತಿರುವ ಎಲ್ಲ ಆದಾಯವನ್ನು ಅದಕ್ಕೆ ಮೀಸಲಿಟ್ಟು, ಜಾಗೃತಿ ಅಭಿಯಾನದಲ್ಲಿ ತೊಡಗಿಕೊಂಡಿದ್ದಾಳೆ. ‘ಸೋಮಾಲಿಯಾದಲ್ಲಿ ಯೋನಿ ಛೇದನ ಶಿಕ್ಷೆ ನಿರ್ಬಂಧಿಸಲಾಗಿದೆ’ ಎನ್ನುವ ಸುದ್ದಿ ಕೇಳಲು ಕಾತುರಳಾಗಿದ್ದಾಳೆ.

ಒಟ್ಟಾರೆ, ‘ಮರುಭೂಮಿಯ ಹೂ’ ಭಾಷಾಂತರ ಕೃತಿ ಎಂದು ಎಲ್ಲಿಯೂ ಭಾಸವಾಗುವುದಿಲ್ಲ. ವಾರಿಸ್ ತನ್ನ ಬಾಲ್ಯದ ಜೀವನವನ್ನು ತೆರೆದಿಡುತ್ತ, ಮರಳುಗಾಡಿನ ಬುಡಕಟ್ಟು ಜನರ ಆಚಾರ, ವಿಚಾರ, ಸಂಸ್ಕೃತಿ, ಬದುಕು ಹೀಗೆ ಎಲ್ಲ ವಿಷಯವನ್ನು ಸೂಕ್ಷ್ಮವಾಗಿ ತಿಳಿಸಿಕೊಡುತ್ತಾರೆ. ಇದೊಂದು ಆತ್ಮಕಥನ ಎನ್ನುವುದಕ್ಕಿ೦ತ, ಕತ್ತಲ ಕೂಪದಲ್ಲಿರುವ ಜನಾಂಗದ ಅನಿಷ್ಟ ಪದ್ಧತಿ ವಿವರಿಸುವ ಜಾಗೃತ ಕಥಾಗುಚ್ಛ ಎನ್ನಬಹುದು. ಹೊತ್ತಿಗೆಯ ಹಿಂಬರಹದಲ್ಲಿ ಎಚ್. ದುಂಡಪ್ಪ ಅವರು ಹೇಳಿದಂತೆ, ಎಷ್ಟೋ ಜನರ ಮುಚ್ಚಿದ ಕಣ್ಣನ್ನು ಈ ಕೃತಿ ತೆರೆಯುವಂತೆ ಮಾಡಬಹುದು’.

ಇಂತಹದ್ದೊ೦ದು ಅದ್ಭುತ ಕೃತಿಯನ್ನು ಕನ್ನಡಲ್ಲಿ ಓದುವಂತೆ ಮಾಡಿದ ಡಾ. ಡಾ. ಎನ್. ಜಗದೀಶ ಕೊಪ್ಪ ಅವರಿಗೆ ಅಕ್ಷರದ ಅಭಿನಂದನೆ.

ಶನಿವಾರ, ಸೆಪ್ಟೆಂಬರ್ 9, 2017

ಪ್ರೇಮ ಕಾವ್ಯ

ಬಾನಂಗಳದ ಸೌಂದರ್ಯ ವರ್ಣಿಸುವುದೇ ಒಂದು ಮಹಾಕಾವ್ಯ. ಅಂತಹ ಅದ್ಭುತ ಮಹಾಕಾವ್ಯವೊಂದು ಶುಕ್ರವಾರ(ಸೆ. ೮) ಸಾಯಂಕಾಲ ವಾಣಿಜ್ಯ ನಗರಿಯ ನೆತ್ತಿಯ ಮೇಲೆ ಓಡಾಡಿತ್ತು. ಆಗಷ್ಟೇ ಸಮಯ ಐದಾಗಿತ್ತು. ದಿನ ಬೆಳಗೋ ಭಾನು ಶುಭ್ರ ನೀಲಾಕಾಶದಲ್ಲಿ ನಿಧಾನವಾಗಿ ಕೆಂಪೇರುತ್ತ ಪಡುವಣದತ್ತ ಜಾರುತ್ತಿದ್ದ. ಅರೆ ಕ್ಷಣದಲ್ಲಿ ಮೂಡಣದ ತುಂಬೆಲ್ಲ ಕರಿಯ ಮೋಡಗಳ ಚೆಲ್ಲಾಟ. ಸಣ್ಣನೆಯ ಗಾಳಿಗೆ ಎಲ್ಲೆಲ್ಲೆಂದರಲ್ಲಿ ಚದುರಿ ಹೋಗಿದ್ದ ಮೋಡಗಳೆಲ್ಲ, ತುಸು ಬಿರುಸಾಗಿ ಬೀಸಿದ ಗಾಳಿಗೆ ಒಂದುಗೂಡಿ ಐಕ್ಯತೆ ಮಂತ್ರ ಪಠಿಸಿದ್ದವು. ಪಡುವಣದಿ ಅರೆಗೆಂಪು ಬಣ್ಣದ ಗಾಢ ಬಿಸಿಲು, ಮೂಡಣದಿ ಕಾಪಿಟ್ಟ ಮೋಡಗಳ ಕಪ್ಪುು ಛಾಯೆ. ಈ ನೆರಳು-ಬೆಳಕಿನ ಜುಗಲ್ ಬಂಧಿ ವಾಣಿಜ್ಯ ನಗರಿಯ ಜನರ ಮನದಲ್ಲಿ ಪ್ರೇಮ ಕಾವ್ಯವನ್ನೇ ಸೃಷ್ಟಿಸಿತ್ತು. ಇಂತಹ ಅಪರೂಪದ ಚಿತ್ರ ವಿಶ್ವವಾಣಿ ಛಾಯಾಗ್ರಾಹಕ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.


ಶನಿವಾರ, ಸೆಪ್ಟೆಂಬರ್ 2, 2017

ಅರಬ್ಬೀ ಮಹಿಮೆ

ಮಸಣಕ್ಕೂ ಉತ್ಸವಕ್ಕೂ ಒಂದೇ ಕಿರು ದಾರಿ
ಮರಳ ರಾಶಿಯ ಒಂದೆಡೆ ಶವಕ್ಕೆ ಅಗ್ನಿ ಸ್ಪರ್ಶ
ಇನ್ನೊಂದೆಡೆ ಗಣಪನಿಗೆ ವಿದಾಯದ ಮಹಾಪೂಜೆ
ಒಂದರಲ್ಲಿ ಸಂಭ್ರಮ ಇನ್ನೊಂದರಲ್ಲಿ ನೋವು!
ಸುಟ್ಟ ಶವದ ಮೇಲಣ ಕಿಡಿ ಇನ್ನೂ ಆರಿಲ್ಲ
ಗಾಳಿಗೆ ತೊನೆದಾಡುತ್ತಿದೆ ಕೊನೆಯ ಉರಿ
ಸುರುಳಿ ಸುತ್ತುತ್ತಿವೆ ಕರದಲ್ಲಿ ಹಿಡಿದ ಊದುಬತ್ತಿ
ಮೋರೆಯಾರೆ ಬೊಪ್ಪ ಮೋರೆಯಾರೆ!
ಕಾಪಿಟ್ಟ ಮೋಡದೊಳಗೆ ಪಡುವಣದ ದಿನಕರ
ಹೆಜ್ಜೆ ಅಳಿಸೋ ಭೋರ್ಗರೆವ ಕಡಲಲ್ಲಿ ನರ್ತನ
ಸಾವಿನ ನೋವೆಲ್ಲಿ ನಗುವಿನ ಸಂಭ್ರಮವೆಲ್ಲಿ
ಸಮರಸದ ಬದುಕಾಯ್ತು ಅಬ್ಬರಿಸುವ ಅರಬ್ಬೀಗೆ!
ಹೆಗಲೇರಿದ ಗಣಪ ಮತ್ತೆ ಬರುವೆನೆಂದು ಹೊರಟ
ಏರಿಳಿತದ ತೆರೆಗಳ ನಡುವೆ ಮಸುಕು ಮುಸುಕಾಗಿ
ತಟದಲ್ಲಿ ತಣ್ಣನೆ ಹೊಯ್ದಾಡುತ್ತಿದೆ ಕಳೆಬರದ ಬೂದಿ
ಸೂತಕದ ಛಾಯೆ ಹೊದ್ದು ಮಲಗಿದೆ ಪಂಚಮಿ ರಾತ್ರಿ!

ಗುರುವಾರ, ಆಗಸ್ಟ್ 24, 2017

ಇದೊಂದು ಅದ್ಭುತ ಪ್ರಪಂಚ!

ಇನ್ನು ಹತ್ತತ್ರ ನಿಲ್ಲಿ... ಮುಖ ಸ್ವಲ್ಪ ಮೇಲೆ ಮಾಡಿ... ಓಕೆ... ರೆಡಿನಾ... ಸ್ಮೈಲ್ ಪ್ಲೀಸ್... ಇದೊಂದು ಮಗ್ಗುಲಾದರೆ, ಜನದಟ್ಟಣೆಯ ನೂಕುನುಗ್ಗಲಿನ ನಡುವೆಯೇ ಮುನ್ನಗ್ಗಬೇಕು. ಮಳೆ-ಗಾಳಿ, ನಿಷೇಧಾಜ್ಞೆ, ಲಾಠಿ ಚಾರ್ಜ್ ಯಾವುದನ್ನೂ ಲೆಕ್ಕಿಸದೆ ಪ್ರಾಣದ ಹಂಗು ತೊರೆದು ಘಟನಾ ಸ್ಥಳದಲ್ಲಿರಬೇಕು. ಅರೆಕ್ಷಣ ತಡವಾದರೂ ಸಹ ಬಹು ಮುಖ್ಯವಾದ ಸ್ನ್ಯಾಪ್ ತಪ್ಪಿಹೋಗುತ್ತದೆ!! ಸದಾ ಧಾವಂತದ ಬದುಕು, ಸಮಯದ ಹಿಂದೆಯೇ ಓಡುತ್ತಿರಬೇಕು. ಇದು ಇನ್ನೊಂದು ಮಗ್ಗಲು.
ಇದು ವೃತ್ತಿ ನಿರತ ಛಾಯಾಗ್ರಾಹಕರು ಪ್ರತಿನಿತ್ಯ ಎದುರಿಸಬೇಕಾದ ಸವಾಲುಗಳು. ಪ್ರತಿನಿತ್ಯ ಒಂದಿಲ್ಲೊಂದು ಸಮಾರಂಭದಲ್ಲಿ ಪಾಲ್ಗೊಂಡು, ಭಿನ್ನ-ವಿಭಿನ್ನ ನೋಟದ ಚಿತ್ರಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಆಯೋಜಕರ ಮನ ಗೆಲ್ಲುವ ಛಾಯಾಗ್ರಾಹಕರು ಒಂದು ಕಡೆಯಾದರೆ, ಮಾಧ್ಯಮಕ್ಕೆ ಬೇಕಾಗುವ ಪತ್ರಿಕಾ ಫೊಟೋಗಳನ್ನು ಸೆರೆ ಹಿಡಿಯಲು ಸಮಯದ ಹಿಂದೆ ಓಡುವ ಛಾಯಾಗ್ರಾಹಕರು ಇನ್ನೊಂದೆಡೆ. ಹಾಗೆಯೇ ಹವ್ಯಾಸಿ ಛಾಯಾಗ್ರಾಹಕರು, ವನ್ಯಜೀವಿ ಛಾಯಾಗ್ರಾಹಕರು ಕೂಡಾ ತಮ್ಮ ಆಸಕ್ತಿಗನುಗುಣವಾಗಿ ಫೊಟೋಗಳನ್ನು ಕ್ಲಿಕ್ಕಿಸುತ್ತಾರೆ.
ಫೊಟೋಗ್ರಫಿ ಎನ್ನುವುದು ಒಂದು ತಪಸ್ಸು. ತಾಳ್ಮೆ ಇದ್ಸವನು ಮಾತ್ರ ಇಲ್ಲಿ ಯಶಸ್ವಿಯಾಗುತ್ತಾನೆ. ಈ ಮೊದಲು ಹಣವಿದ್ದವರ ಕೈಯ್ಯಲ್ಲಿ ಮಾತ್ರ ಕ್ಯಾಮರಾ ಕಂಡು ಬರುತ್ತಿತ್ತು. ಅವರ ಕೈಯ್ಯಲ್ಲಿರುವ ಕ್ಯಾಮರಾ ನೋಡಿ ‘ಏಯ್, ಅವನು ಕ್ಯಾಮರಾ ತಗೊಂಡಿದ್ದಾನೆ, ನೋಡ್ರೋ...’ ಎಂದು ಹುಬ್ಬೇರಸುತ್ತಿದ್ದರು. ಆದರೆ, ಈಗ ಕ್ಯಾಮರಾ ಎನ್ನುವುದು ಮಕ್ಕಳ ಆಟಿಕೆ ಸಾಮಾನಿನಂತಾಗಿದೆ. ಶ್ರೀಸಾಮಾನ್ಯನ ಕೊರಳಲ್ಲೂ ಅದು ತೂಗಾಡುತ್ತ, ಸುತ್ತಮುತ್ತಲಿನ ಚಿತ್ರಗಳನ್ನು ಸೆರೆಹಿಡಿಯುತ್ತಲೇ ಇರುತ್ತವೆ. ಕ್ಯಾಮರಾದ ಕುರಿತು ಸ್ವಲ್ಪ ಮಾಹಿತಿಯಿದ್ದರೆ ಯಾರೂ ಬೇಕಾದರೂ ಸಹ ಫೊಟೋ ತೆಗೆಯಬಹುದು. ಆದರೆ, ತೆಗೆದ ಫೋಟೋ ಎಷ್ಟು ಚೆನ್ನಾಗಿದೆ, ಅದರ ಹಿನ್ನೆಲೆ ಹೇಗಿದೆ, ಯಾವ ಶೈಲಿಯಲ್ಲಿ ಬಂದಿದೆ ಜೊತೆಗೆ ಆ ಫೋಟೋ ಸಕಾಲಿಕವೋ ಅಥವಾ ಸರ್ವಕಾಲಿಕವೋ ಎನ್ನುವುದು ಅತೀ ಮುಖ್ಯ.
ನಾವೆಲ್ಲ ಸಕಾಲಿಕ ಛಾಯಾಗ್ರಾಹಕರು...!! ಕೈಯ್ಯಲ್ಲಿರುವ ಕ್ಯಾಮಾರಾದಲ್ಲಿ ಮನಸ್ಸಿಗೆ ಬಂದ ಫೋಟೋ ಕ್ಲಿಕ್ಕಿಸಿ, ‘ಅದ್ಭುತ ಫೊಟೋ’ ಎಂದು ನಮಗೆ ನಾವೇ ಬೆನ್ನು ತಟ್ಟಿಕೊಳ್ಳುತ್ತೇವೆ. ನಮ್ಮ ಸುತ್ತಲಿರುವವರಿಗೆಲ್ಲ ಆ ಫೊಟೋವನ್ನು ಬಲವಂತಾಗಿ ತೋರಿಸಿ, ಹೊಗಳಿಸಿಕೊಳ್ಳುತ್ತೇವೆ. ಆ ಫೊಟೋ ಬಗ್ಗೆ ಅವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದರು ಅಂದ ಮೇಲೆ, ಅದರ ಜೀವಿತಾವಧಿ ಬಹುತೇಕ ಮುಗಿದಂತೆ...!! ಅಂದರೆ ಅದು ಆ ಸಮಯಕ್ಕಷ್ಟೇ ಸೀಮಿತ. ಸಕಾಲಿಕ. ಆದರೆ, ವೃತ್ತಿನಿರತ ಛಾಯಾಗ್ರಾಾಹಕರು ತೆಗೆಯುವ ಕೆಲವು ಫೊಟೋಗಳು ಸಕಾಲಿಕವಾಗಿಯೂ, ಸರ್ವಕಾಲಿಕವಾಗಿಯೂ ವೇದ್ಯವಾಗಿರುತ್ತದೆ. ವನ್ಯಜೀವಿ ಛಾಯಾಗ್ರಾಹಕರು ತೆಗೆಯುವ ನೂರಾರು ಚಿತ್ರಗಳಲ್ಲಿ ಒಂದೋ-ಎರಡೋ ಫೋಟೋಗಳು ಮಾತ್ರ ಆಯ್ಕೆಗೆ ಯೋಗ್ಯವಾಗಿರುತ್ತವೆ. ಒಮ್ಮೊಮ್ಮೆ ಅಷ್ಟೊಂದು ಫೊಟೋಗಳನ್ನು ಕ್ಲಿಕ್ಕಿಸಿದರೂ ಸಹ ಬೇಕಾದ ಕೋನದಲ್ಲಿ ಫೋಟೋ ದೊರೆಯುವುದಿಲ್ಲ.
ಕಾಡು ಹಕ್ಕಿಯ ಅಥವಾ ಪ್ರಾಣಿಗಳ ಜೀವನ ಕ್ರಮ ಸಮಗ್ರವಾಗಿ ಸೆರೆ ಹಿಡಿಯಲು ಈ ಛಾಯಾಗ್ರಾಹಕರು ಮನೆ-ಮಠಗಳನ್ನು ತೊರೆದಿರುತ್ತಾರೆ. ಮಳೆ-ಗಾಳಿ-ಚಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ತಿಂಗಳಾನುಗಟ್ಟಲೇ ದಟ್ಟ ಕಾನನದ ನಡುವೆ ಅಲೆಯುತ್ತಾರೆ. ಆ ಸಂದರ್ಭದಲ್ಲಿ ಅವರು ಅನುಭವಿಸುವ ಯಾತನೆಗಳೆಷ್ಟೋ? ಅದ್ಯಾವುದೂ ನಮ್ಮ ಕಲ್ಪನೆಗೂ ನಿಲುಕದಂತಹದ್ದು! ಹಕ್ಕಿಯ ಜೀವನ ಕ್ರಮದ ಬಗ್ಗೆ ಅಧ್ಯಯನ ಮಾಡಬೇಕೆಂದರೆ ಅಥವಾ ತಾಯಿ ಹಕ್ಕಿ ಮರಿ ಹಕ್ಕಿಗೆ ಗುಟುಕು ನೀಡುವಂತಹ ಅಪರೂಪದ ದೃಶ್ಯ ಸೆರೆ ಹಿಡಿಯಬೇಕೆಂದರೆ ಗಂಟೆ, ಒಪ್ಪತ್ತು, ದಿನ, ತಿಂಗಳಾನುಗಟ್ಟಲೇ ಛಾಯಾಗ್ರಾಹಕ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಭಿನ್ನವಾದ ಚಿತ್ರ ಬೇಕೆಂದರೆ ವಿಭಿನ್ನ ದೃಷ್ಟಿಕೋನ, ಚಿಂತನೆ, ಅಧ್ಯಯನ ಜೊತೆಗೆ ಸಹನೆ ಅನ್ನೋದು ಆತನಿಗೆ ಅತಿಮುಖ್ಯ.
ಮಾಧ್ಯಮ ಕ್ಷೇತ್ರದಲ್ಲಿರುವ ಛಾಯಾಗ್ರಾಹಕರು ಇನ್ನೂ ಭಿನ್ನವಾಗಿ ಕಂಡು ಬರುತ್ತಾರೆ. ಸದಾ ಸಮಯದ ಜೊತೆ-ಜೊತೆಗೇ ಓಡುತ್ತಿರಬೇಕು. ಸಭೆ, ಸಮಾರಂಭದ ಉದ್ಘಾಟನೆ ಚಿತ್ರ ಸಾಮಾನ್ಯವಾಗಿ ಎಲ್ಲರಿಗೂ ದೊರೆಯುತ್ತದೆ. ಇಂದಿನ ಮಾಧ್ಯಮಗಳಲ್ಲಿ ಅಂತಹ ಚಿತ್ರಗಳಿಗೆ ಅಷ್ಟೊಂದು ಬೇಡಿಕೆಯೂ ಇಲ್ಲ. ಜನರನ್ನು ಹಿಡಿದಿಟ್ಟುಕೊಳ್ಳುವ ಚಿತ್ರ ಛಾಯಾಗ್ರಾಹರಿಂದ ಮಾಧ್ಯಮ ಎದುರು ನೋಡುತ್ತವೆ. ಪ್ರಚಲಿತ ವಿದ್ಯಮಾನಕ್ಕೆ ಚಿತ್ರ ಪೂರಕವಾಗಿದೆ ಎಂದಾದರೆ ಪತ್ರಿಕೆ ಎಂಟು ಕಾಲಂಗಳನ್ನು ಅದೇ ಚಿತ್ರಕ್ಕೆ ಮೀಸಲಿಟ್ಟು ಬಿಡುತ್ತದೆ. ನಡೆಯುತ್ತಿರುವ ಸಭೆಗೆ ಪೂರಕವಾದ ಇನ್ನೊಂದು ದೃಷ್ಟಿಕೋನದ ಚಿತ್ರ, ಅತಿಥಿ-ಮಹೋದಯರ ಹಾವ-ಭಾವ, ಪ್ರಸ್ತುತ ಸನ್ನಿವೇಶ ಹಾಗೂ ಪ್ರಚಲಿತ ವಿದ್ಯಮಾನಕ್ಕೆ ಹೊಂದಿಕೆಯಾಗುವ ಚಿತ್ರ, ಸಾವಿರಾರು ಸಭಿಕರ ನಡುವೆ ಅರೆ ಕ್ಷಣದಲ್ಲಿ ಸೆರೆಯಾಗಬಹುದಾದ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾದರೆ ಅದಕ್ಕಿರುವ ತಾಕತ್ತೇ ಬೇರೆ! ಅಂದರೆ, ಸಭೆ, ಸಮಾರಂಭ ನಡೆಯುವ ವೇಳೆ ಛಾಯಾಗ್ರಾಹಕ ಕಣ್ಣಲ್ಲಿ ಕಣ್ಣಿಟ್ಟು, ಹದ್ದಿನ ಕಣ್ಣಿನಂತೆ ಸುತ್ತೆಲ್ಲ ಸೂಕ್ಷ್ಮವಾಗಿ ಗ್ರಹಿಸುತ್ತಲೇ ಇರಬೇಕಾಗುತ್ತದೆ.
ಕೆಲವು ಸಂದರ್ಭದಲ್ಲಿ ಮಾಧ್ಯಮ ಛಾಯಾಗ್ರಾಾಹಕ ಪ್ರಾಣವನ್ನೇ ಒತ್ತೆಯಿಡಬೇಕಾಗುತ್ತದೆ. ಲಾಠಿ ಚಾರ್ಜ್, ಗೋಲಿಬಾರ್, ಯುದ್ಧ, ಗುಂಪು ಘರ್ಷಣೆಯಂತಹ ಸಂದರ್ಭ, ಎದುರಾಗುವ ಎಲ್ಲ ಅಡೆ-ತಡೆಗಳನ್ನು ಅವರು ಎದುರಿಸಬೇಕು. ಗಲಭೆ ನಿಯಂತ್ರಿಸಲು ಪೊಲೀಸ್‌ರು ಎಲ್ಲಿಯಾದರೂ ಗುಂಡು ಹಾರಿಸಿದರೆ ಅದು ಛಾಯಾಗ್ರಾಹಕನ ಎದೆಯನ್ನೂ ಸೀಳಬಹುದು, ಲಾಠಿ ಚಾರ್ಜ್ ವೇಳೆ ಬೆನ್ನಿನ ಮೂಳೆಯೂ ಮುರಿಯಬಹುದು! ಯುದ್ಧದಂತಹ ಅಪರೂಪದ ದೃಶ್ಯ ಸೆರೆ ಹಿಡಿಯಲು ಹೋಗುವ ಛಾಯಾಗ್ರಾಹಕ ಬದುಕುವ ಎಲ್ಲ ಸಾಧ್ಯತೆಯನ್ನೂ ದೂರ ತಳ್ಳಿಯೇ ರಣರಂಗಕ್ಕೆ ಕಾಲಿಡಬೇಕು. ಗಟ್ಟಿ ಎದೆಗಾರಿಕೆ ಜೊತೆಗೆ, ಸಾವಿನ ಜೊತೆ ಪಯಣಿಸುತ್ತಿದ್ದೇನೆ ಎನ್ನುವ ಮೊಂಡು ಧೈರ್ಯ ಮೈಗೂಡಿಸಿಕೊಂಡು ಆತ ಕ್ಯಾಮರಾ ಆನ್ ಮಾಡಬೇಕು. ಯುದ್ಧದ ಚಿತ್ರಣ ಸೆರೆ ಹಿಡಿಯುವ ಅವಕಾಶ ಎಲ್ಲರಿಗೂ ಒಲಿದು ಬರುವಂತಹದ್ದಲ್ಲ, ಬಂದಿತೆಂದರೆ ಅದನ್ನು ತಪ್ಪಿಸಿಕೊಳ್ಳುವುದು ಸರಿಯಲ್ಲ!
ಫೋಟೋಗ್ರಫಿ ಒಂದು ಅದ್ಭುತ ಪ್ರಪಂಚ. ಒಂದು ಬಾರಿ ಅದರ ಹುಚ್ಚು ಹಿಡಿಯಿತೆಂದರೆ ಜೀವಿತಾವಧಿಯವರೆಗೂ ಅದು ಬೆನ್ನು ಬಿಡದು. ಫೋಟೋಗ್ರಫಿ ಬದುಕಿಗಾಗಿ ಎಷ್ಟೋ ಜನರು ಮನೆ, ಮಠಗಳನ್ನು ಸಹ ತೊರೆದಿದ್ದಾರೆ. ಸಾಲ ಮಾಡಿ ತೀರಿಸಲಾಗದೆ ಎಲ್ಲೆಲ್ಲೋ ನಾಪತ್ತೆಯಾಗಿದ್ದಾರೆ. ಅದು ಈಗಲೂ ಮುಂದುವರಿದಿದೆ. ಅಂದರೆ, ಸಾವಿರ ಚಿತ್ರಗಳ ನಡುವೆ ದೊರೆಯುವ ಒಂದೇ ಒಂದು ಅದ್ಭುತ ಚಿತ್ರ, ಸೆರೆ ಹಿಡಿದಾತನ ಆತ್ಮ ತೃಪ್ತಿಗೆ ಕಾರಣವಾಗುತ್ತದೆ. ಆತನಿಗೆ ಆ ಚಿತ್ರ ಜಗತ್ತೆ ಗೆದ್ದಷ್ಟು ಸಂತೃಪ್ತಿ ನೀಡಿರುತ್ತದೆ. ಸಾವಿರ ಪದಗಳು ಹೇಳಲಾಗದ ಭಾವವನ್ನು ಒಂದೇ ಒಂದು ಚಿತ್ರ ಹೇಳಿ ಬಿಡುತ್ತದೆ.
ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಛಾಯಾಗ್ರಾಹಕ ಕಂಡ....!
ವನ್ಯಜೀವಿ, ಹವ್ಯಾಸಿ, ವೃತ್ತಿನಿರತ, ಮೊಬೈಲ್ ಹಾಗೂ ಮಾಧ್ಯಮ ಕ್ಷೇತ್ರದ ನನ್ನೆಲ್ಲ ಛಾಯಾಗ್ರಾಹಕರಿಗೆ ವಿಶ್ವ ಛಾಯಾಗ್ರಾಹಕರ ದಿನದ ಶುಭಾಶಯಗಳು.

ಮೋಸದ ಕುಣಿಕೆ...!

ಸದ್ದಿಲ್ಲದೆ ಗಂಟಿಕ್ಕಿದೆ ಎದೆಯಲ್ಲೊಂದು ಬಾವು
ನೋವಿಲ್ಲದೆ ಅರಿವಿಲ್ಲದೆ ಹೆಚ್ಚುತ್ತಿದೆ ಕಾವು
ಪ್ರೀತಿಸಿದ್ದಾಯ್ತು, ಕಾಳಜಿ ತೋರಿಸಿದ್ದಾಯ್ತು
ಕೇಳಲೊಲ್ಲದು ಮಾತು ಬೆಳೆಯುತ್ತಲೇ ಹೋಯ್ತು!


ದಿನ ಒಪ್ಪತ್ತು ಕಳೆದು ನವ ಮಾಸ ತುಂಬಿತ್ತು
ರೆಪ್ಪೆ ಮಿಟುಕಿಸುವುದರೊಳಗೆ ವಸಂತ ಸರಿದಿತ್ತು
ಪರಿಧಿ ಇಲ್ಲದ ಬಾವು ಹಲ್ಕಿರಿದು ಗಹಗಹಿಸಿ ನಕ್ಕಿತ್ತು
ನಸುಕಿನ ನಿದ್ದೆಯಲಿ ಬೆಚ್ಚಿ ಮೈ ಬೆವರಿಳಿಸಿತ್ತು!

ಕರುಳು ಚುರ್ರ ಎನ್ನುವ ಬಿಳಿಹಾಳೆ ಪರೀಕ್ಷೆಯಲಿ
ಹರಿತ ಖಡ್ಗದಿಂದ ಒಸರಿತ್ತು ರಕ್ತ ವರ್ಣದ ಶಾಯಿ
ಒತ್ತರಿಸಿ ಬಂದರೂ ಕಾಣದಾಗಿತ್ತು ಎದೆಯ ಹನಿ
ಇರುವುದೊಂದೇ ದಾರಿ ಕೃಷ್ಣಾರ್ಪಣಮಸ್ತು!

ನೆಲಗುದ್ದಿ ನೀರೆತ್ತೋ ದೇಹದಲಿ ಈಗಿಲ್ಲ ಶಕ್ತಿ
ಜರ್ಝರಿತ ಮನಕೆ ಬೇಕಿದೆ ಹಿಡಿಯಷ್ಟು ಮುಕ್ತಿ
ಕರಗುತ್ತಿದೆ ಬಾವು ಉರಿವ ಶಾಖದ ಬೇಗುದಿಗೆ
ದೇಹ ಮಾಡುವ ಮೋಸ ಕಾಣದ ಕಡಲೆಡೆಗೆ!

ತೀರದ ದಾಹ!

ಚಾಚಿದೆ ಬರದ ಕರಿನೆರಳು ಮಲೆನಾಡ ಬುಡದಲ್ಲೂ
ಗುಟುಕು ನೀರಿಗೂ ಹಾಹಾಕಾರ ಸಹ್ಯಾದ್ರಿ ಹಾಸಲ್ಲೂ
ಬಾನಿಗೆ ಬಾಯಾನಿಸಿದೆ ಜೀವಜಲ ಹೊತ್ತ ಬಿಂದಿಗೆ
ಧರೆಗೊತ್ತುತಿದೆ ಗಟ್ಟಿಪಾದ ತೀರದ ಬದುಕಿಗೆ!
ಕೂಳು ಬೇಯಿಸಲು ಬೇಕು, ದಾಹ ನೀಗಲು ಬೇಕು
ಸುಡು ಬಿಸಲಲ್ಲೂ ನೆತ್ತಿ ಮಣ ಭಾರ ಹೊರಲೇಬೇಕು
ಸಿಹಿ ನೀರ ಬಾವಿಗೆ ಮೂರ್ನಾಲ್ಕು ಮೈಲಿ ಪರ್ಲಾಂಗು
ಅಘಳ ಲವಣಾಂಶ ನೀರಿಗೆ ಮನೆಯಂಗಳವೇ ಜಂಪು!

ನೈಟಿ, ದುಪ್ಪಟ, ಚೂಡಿ ಬಣ್ಣ ಬಣ್ಣದ ಉಡುಪು
ಬಳಕುವ ಸೊಂಟದಿ ನೋಡ ಜೀವ ಜಲದ ಒನಪು
ಕುತೂಹಲದ ದೃಷ್ಟಿಗೆ ಹುಬ್ಬೇರಿಸೋ ಅಂದಚಂದ
ನೆಲದ ಕಣ್ಣಿಗೆ ಸುತ್ತಲ ಜಲರಾಶಿಯೇ ಪರಮಾನಂದ!

ಹಸಿರೊದ್ದ ಹಾದಿ ಸವಿಸಲೇಬೇಕು ನಿತ್ಯ ಮೂರೊತ್ತು
ಎಳೆ ಬಾಲೆ, ವೃದ್ಧೆಯೆಂಬ ಭೇದಗಳ ಬದಿಗೊತ್ತು
ಅಂಗಳದಿ ಓಡಾಡೋ ಅಳಕು ಬಳಕಿನ ಅಘಳು
ಬದುಕು ಕಟ್ಟಿಕೊಟ್ಟು ದಾಹ ತೀರಿಸದೇ ಹೋದಳು!
ಗಣೇಶೋತ್ಸವದ ಸಂಭ್ರಮ, ಸಡಗರ ಎಲ್ಲೆಡೆ ಮನೆಮಾಡಿದೆ. ಚೆಂದದ ಗಣಪ ಮೂರ್ತಿಗಳನ್ನು ಮನೆಗೆ ತರಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ, ಇವುಗಳ ಮಧ್ಯೆ ಪಿಒಪಿ ಗಣೇಶನ ಅಬ್ಬರ ಒಂದಡೆಯಾಗಿದ್ದು, ಇದಕ್ಕೆ ಮಾರುಹೋಗದೆ ಪಾರ್ವತಿ ಪುತ್ರ ಪರಿಸರ ಪೂರಕವಾಗಿರಲಿ ಎನ್ನುವುದು ನಮ್ಮ ಕಳಕಳಿ.

ಶಾಸ್ತ್ರಕ್ಕೂ, ಹಿತಕ್ಕೂ ಮಣ್ಣಿನ ಗಣಪನೇ ಸೈ!!

ನಾವು ಆಧುನಿಕ ಜಗತ್ತಿನಲ್ಲಿದ್ದೇವೆ, ತಾಂತ್ರಿಕವಾಗಿ-ವೈಜ್ಞಾನಿಕವಾಗಿ ಮಹತ್ತರ ಮೈಲಿಗಲ್ಲು ಸಾಧಿಸಿದ್ದೇವೆ ಎಂದೆಲ್ಲ ಜಂಭ ಕೊಚ್ಚಿಕೊಳ್ಳುತ್ತ, ಆಡಿ-ನಲಿದ ನೆಲದ ಮಣ್ಣಿನ ಒಲವನ್ನೇ ಮರೆಯುತ್ತಿದ್ದೇವೆ.
ಆಧುನಿಕತೆಯ ಸೋಗಿನಲ್ಲಿ ಎಲ್ಲವನ್ನೂ ತಾಂತ್ರಿಕತೆಯ ಕೈಯ್ಯಲ್ಲಿಟ್ಟು ಯಂತ್ರ ಮಾನವರಾಗಿ ಬಿಟ್ಟಿದ್ದೇವೆ. ಕಣ್ಣಿಗೆ ಕಾಣುವ ಆಕರ್ಷಕ ವಸ್ತುಗಳ ಹಿಂದೆ ಬಿದ್ದು, ಬೆಳೆದು ಬಂದ ಪರಂಪರೆಯ ಹೆಜ್ಜೆ ಗುರುತನ್ನೇ ಅಳಿಸಿ ಬಿಟ್ಟಿದ್ದೇವೆ. ಮೈ ಸುಡವ ಕಾಂಕ್ರಿಟ್ ಕಾಡಿನಲ್ಲಿಯೇ ಜೀವನ ಸವೆಸುತ್ತ, ಹಸಿರೊದ್ದ ತಂಪನೆಯ ಪರಿಸರವನ್ನು ಮರೆಯುತ್ತಿದ್ದೇವೆ. ನಗರದಲ್ಲಿ ಕುಳಿತು ಅಭಿವೃದ್ಧಿಯ ರಾಜಮಾರ್ಗ ಮಂತ್ರಕ್ಕೆ ಲಕ್ಷಾ೦ತರ ಮರಗಿಡಗಳನ್ನು ಆಹುತಿ ನೀಡುತ್ತಿದ್ದೇವೆ. ಪರಿಣಾಮ ನೀರು, ಮಣ್ಣು, ಗಾಳಿ ಎಲ್ಲವೂ ಕಲುಷಿತ! ಎಲ್ಲವೂ ವಿಷಮಯ!! ಉಸಿರಾಡುವ ಉಸಿರು ಕೂಡಾ!!!

ಮತ್ತೆ ಬಂದಿದೆ ಗಣೇಶನ ಹಬ್ಬ. ಎಲ್ಲೆಡೆ ಪರಿಸರ ಪ್ರೇಮಿ ಗಣಪನ ಹಬ್ಬ ಆಚರಣೆಗೆ ಜಾಗೃತಿ, ಅಭಿಯಾನ ನಡೆಯುತ್ತಿದೆ. ಸಂಘ, ಸಂಸ್ಥೆಗಳು ಹಗಲಿರುಳೆನ್ನದೇ ಮಣ್ಣಿನ ಗಣಪನ ಸ್ಥಾಪನೆಗೆ ಸಾರ್ವಜನಿಕರನ್ನು ಉತ್ತೇಜಿಸುತ್ತಿವೆ. ಇವುಗಳ ನಡುವೆಯೇ ನ್ಯಾಯಾಲಯದ ಆದೇಶ ಎಂದು ಸರಕಾರದ ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿ ಪ್ರತಿಷ್ಠಾಪಿಸಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡುತ್ತಿವೆ. ಇಷ್ಟಾಗಿಯೂ ಕೆಲವು ಸಂಘಟನೆಗಳು ಪಿಒಪಿ ಮೂರ್ತಿಯನ್ನೇ ಪ್ರತಿಷ್ಠಾಪಿಸುತ್ತೇವೆಂದು ಭಂಡತನ ಪ್ರದರ್ಶಿಸುತ್ತ, ಪರಿಸರಕ್ಕೆ ಮಾರಕವಾದ ಹೆಜ್ಜೆಯಿಡುತ್ತಿವೆ.

ಪ್ರಸ್ತುತ ಸಂದರ್ಭದಲ್ಲೊ೦ದು ನಮ್ಮ, ನಿಮ್ಮ ಉಳಿವಿಗಾಗಿ, ಮುಂದಿನ ಪೀಳಿಗೆಗಾಗಿ ನಾವು-ನೀವೆಲ್ಲ ಒಗ್ಗಟ್ಟಾಗಿ ಗಂಭೀರ ಚಿಂತನೆ ಮಾಡಲೇಬೇಕಿದೆ. ಪರಿಸರ ಉಳಿವಿಗಾಗಿ ಎಚ್ಚರಿಕೆಯ ಹೆಜ್ಜೆ ಇಡಲೇಬೇಕಿದೆ. ಈಗಾಗಲೇ ಪ್ರಕೃತಿ ಮಾತೆ ತಿದ್ದಿಕೊಳ್ಳಲೆಂದು ಸಾಕಷ್ಟು ಅವಕಾಶ ನೀಡಿದೆ. ಆದರೂ ಆ ನಿಟ್ಟಿನಲ್ಲಿ ನಾವು ಚಿಂತಿಸಿಲ್ಲ! ಈಗ ನಮ್ಮೆದುರಿಗೆ ಇರುವುದು ಕಟ್ಟ ಕಡೆಯ ಅವಕಾಶ, ಪರಿಸರ ರಕ್ಷಿಸಿ, ಮನುಕುಲ ಉಳಿಸಿ! ಬೇರೆ ದಾರಿಯೇ ಇಲ್ಲ!

ಪರಿಸರ ರಕ್ಷಣೆಯ ಸಾಕಷ್ಟು ಅಭಿಯಾನದ ನಡುವೆ, ಪಿಒಪಿ ಮೂರ್ತಿ ನಿಷೇಧವೂ ಒಂದು. ಪಿಒಪಿ ಮೂರ್ತಿ ನೀರಿನಲ್ಲಿ ಸುಲಭವಾಗಿ ಕರಗದು. ಕರಗುವ ಪ್ರಕ್ರಿಯೆಯಲ್ಲಿಯೂ ಅದು ನೀರಿನಲ್ಲಿ ವಿಷಯುಕ್ತ ರಾಸಾಯನಿಕ ಬಿಡುತ್ತಲೇ ಹೋಗುತ್ತದೆ. ಇದು ಅಲ್ಲಿರುವ ಜಲಚರಗಳಿಗೆ, ಜೀವ ಜಂತುಗಳಿಗೆ, ಜೀವ ವೈವಿಧ್ಯಕ್ಕೆ ಪಾಷಾಣ ಹಾಕಿದಂತೆಯೇ! ಸುಮ್ಮನೇ ಒಂದು ಪ್ರಾಾತ್ಯಕ್ಷಿಕೆ ಮಾಡಿ ನೋಡಿ. ನಿಮ್ಮ ಅನುಭವಕ್ಕೇ ಬಂದೀತು. ಒಂದು ಮುಷ್ಠಿಯಷ್ಟು ಪಿಒಪಿ ಹುಡಿಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚಿರಿ. ಅದು ದಟ್ಟವಾದ ವಿಷಕಾರಕ ಹೊಗೆ ಉಗುಳುತ್ತ ಸುತ್ತಲಿನ ವಾತಾವರಣವನ್ನೇ ಕಾಪಿಡುತ್ತದೆ. ಅಲ್ಲದೇ, ಪಿಒಪಿ ಸುಟ್ಟ ಜಾಗದಲ್ಲಿ ಒಂದೇ ಒಂದು ಹುಲ್ಲು ಕಡ್ಡಿ ಸಹ ಮೊಳಕೆ ಒಡೆಯದು! ಭೂಮಿಯನ್ನು ಸಹ ಬಂಜರನ್ನಾಗಿಸುತ್ತದೆ. ಮೊದಲೇ ಹೇಳಿದಂತೆ, ವಿಸರ್ಜನೆಗೊಂಡ ಮೂರ್ತಿ ಕರಗದಿದ್ದರೆ ಅದನ್ನು ಯಂತ್ರದ ಸಹಾಯದಿಂದ ಮೇಲೆತ್ತಬೇಕಾಗುತ್ತದೆ. ಎಷ್ಟೋ ಬಾರಿ ಚಪ್ಪಲಿ ಹಾಕಿದ ಕಾಲನ್ನು ಮೂರ್ತಿ ಮೇಲೆ ಇಟ್ಟು ವಿಸರ್ಜನೆಗೊಂಡ ಮೂರ್ತಿ ಮೇಲೆತ್ತುತ್ತೇವೆ. ಪೂಜಿಸುವ ಗಣಪನಿಗೆ ನಾವು ನೀಡುವ ಗೌರವ ಇದು!

ಬದಲಾಗಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸೋಣ. ಪರಿಸರಕ್ಕೆ ಪೂರಕವಾಗಿ ಪೂಜೆ, ಪುನಸ್ಕಾಾರ ಉತ್ಸವ ಆಚರಿಸಿ ಸಂಭ್ರಮಿಸೋಣ. ನೀರಿನಲ್ಲಿ ಮಣ್ಣಿನ ಗಣಪನ ಮೂರ್ತಿ ವಿಸರ್ಜಿಸಿದಾಗ ಐದಾರು ಗಂಟೆಯಲ್ಲಿ ಸಹಜವಾಗಿ ಕರಗುತ್ತದೆ. ಆ ಮಣ್ಣನ್ನು ಮೇಲೆತ್ತಿ ಅದಕ್ಕೊ೦ದಿಷ್ಟು ಸಗಣಿ ಗೊಬ್ಬರ ಮಿಶ್ರಣ ಮಾಡಿ ಗಿಡ ಅಥವಾ ಮರ ಆಗುವ ಬೀಜವೊಂದು ಬಿತ್ತೋಣ. ತಿಂಗಳೊಪ್ಪತ್ತರಲ್ಲಿ ಸಣ್ಣದೊಂದು ಮೊಳಕೆ ಒಡೆದು, ನಂತರದ ದಿನಗಳಲ್ಲಿ ಚಿಗುರೊಡೆದು ಹಸಿರು ಚೆಲ್ಲುತ್ತದೆ. ಅದೇ ಗಿಡಕ್ಕೆ ಹಾಡು ಹಕ್ಕಿ ಬಂದು ಹಣ್ಣು ತಿನ್ನುತ್ತ ಚಿಲಿಪಿಲಿ ದನಿಯಲ್ಲಿ ಹಾಡು ಹೇಳುತ್ತದೆ. ಮನೆಯ ಜಗುಲಿ ಮೇಲೆ ಕುಳಿತು ಆ ಸೌದರ್ಯ ಆಸ್ವಾದಿಸೋಣ. ಸಾರ್ಥಕವಾಯಿತಲ್ಲ ಗಣಪನ ಹಬ್ಬ ಎಂದು ಮನದಲ್ಲಿಯೇ ಮುಂದೊಂದು ದಿನ ಹೇಳೋಣ. ಇದರ ಮುಂದುವರಿದ ಜಾಗೃತಿ ಅಭಿಯಾನವೇ ‘ಬೀಜ ಗಣಪ..!’ ಶಾಸ್ತ್ರಕ್ಕೂ, ಹಿತಕ್ಕೂ ಮಣ್ಣಿನ ಗಣಪನೇ ಸೈ!!

ಗಣೇಶನ ಹಬ್ಬದ ಆಚರಣೆಯಲ್ಲಿ ಸ್ವೇಚ್ಛಾಚಾರ ಎಲ್ಲೆ ಮೀರುತ್ತದೆ. ಹಬ್ಬದ ಪರಂಪರೆಗೆ ಧಕ್ಕೆ ಬರುತ್ತಿದೆ ಎಂದು ಹೇಳಿದಾಗಲೆಲ್ಲ ಕೆಲವರು, ಇನ್ನೊ೦ದು ಧರ್ಮದ ಕಡೆ ಬೊಟ್ಟು ತೋರಿಸುತ್ತ ‘ಆಗೇಕೆ ನೀವ್ಯಾರೂ ಮಾತನಾಡುವುದಿಲ್ಲ’ ಎಂದು ಪ್ರಶ್ನಿಸುತ್ತಾರೆ. ಯಾರೇ ಮಾಡಿದರೂ ಅದು ತಪ್ಪೇ! ಖಂಡನೀಯವೇ. ಒಬ್ಬರು ಮಾಡುವ ತಪ್ಪನ್ನೇ ಇನ್ನೊಬ್ಬರು ಮಾಡಿದರೆ ಅದು ಸರಿಯಾಗುತ್ತದೆಯೇ? ಪರಿಸರಕ್ಕೆ ಹಾನಿ ಮಾಡುವ ರೀತಿಯಲ್ಲಿ ಹಾಗೂ ಜನರ ಮಾನಸಿಕ ಶಾಂತಿಗೆ ಧಕ್ಕೆ ಬರುವ ರೀತಿಯಲ್ಲಿ ಉತ್ಸವಗಳನ್ನು ಯಾರೇ ಆಚರಿಸಿದರೂ ಅದು ತಪ್ಪೇ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ನಮ್ಮಿ೦ದಲೇ ಆರಂಭವಾದರೆ ಒಳಿತು. ಏನಂತೀರಾ?

ಬುಧವಾರ, ಜೂನ್ 7, 2017

ಕೈ ಕಟ್ಟಿ, ಹೇಳಿದ್ದಕ್ಕೆಲ್ಲ ಗೋಣು ಅಲ್ಲಾಡಿಸದಿರಿ....
ಇದೊಂದೆರಡು ತಿಂಗಳು ಪತ್ರಿಕೆಯ ಬಹುಪಾಲು ಜಾಗ ಪರಿಸರ ದಿನಾಚರಣೆ ಸುದ್ದಿಗೇ ಮೀಸಲು. ನಮ್ಮ ಪರಿಸರಕ್ಕೆ ನಾವು ಅಷ್ಟೂ ಮಾಡದಿದ್ದರೇ ಏನರ್ಥ? ಆದರೆ, ಪತ್ರಿಕೆಯಲ್ಲಿ ಫೋಟೋ ಬರುತ್ತದೆ ಎನ್ನುವ ಉದ್ದೇಶಕ್ಕೇ ಕೆಲವರು ವನಮಹೋತ್ಸವ ಆಚರಿಸುತ್ತಾರೆ. ಇನ್ನು ಕೆಲವರು ಪ್ರಚಾರ ಗಿಟ್ಟಿಸಿಕೊಳ್ಳಲು ಸಂಘ-ಸಂಸ್ಥೆಯ ಜತೆಗೂಡಿ ಕಾರ್ಯಕ್ರಮ ನಡೆಸುತ್ತಾರೆ. ಬಹುತೇಕ ಜನಪ್ರತಿನಿಧಿಗಳಿಗಂತೂ ಈ ಆಚರಣೆ ಪುಕ್ಕಟೆ ಪ್ರಚಾರ ನೀಡಿ ಬಿಡುತ್ತದೆ.

ಪರಿಸರ ನಮ್ಮಮ್ಮ. ಅವಳು ಎಲ್ಲರನ್ನೂ ಸಲುಹಿ, ಪೊರೆಯುವವಳು. ಅವಳು ನಳನಳಿಸಿದರೆ ಮಾತ್ರ, ನಾವು ನೆಮ್ಮದಿಯ ಉಸಿರೆಳೆಯಬಹುದು. ಅವಳು ಬದುಕಬೇಕೆಂದರೆ ಹಸಿರು ಚಿಗುರಬೇಕು. ಚಿಗುರೊಡೆದ ಹಸಿರನ್ನು ಬೆಳೆಸಿ ಪೋಷಿಸಬೇಕು. ಅಭಿವೃದ್ಧಿ ಎನ್ನುತ್ತ ಬೆಳೆದು ನಿಂತ ಮರ-ಗಿಡಗಳನ್ನು ಕಡಿದು, ನಮ್ಮ ಅವನತಿಗೆ ನಾವೇ ಕಾರಣರಾಗುತ್ತಿದ್ದೇವೆ. ಈಗಾಗಲೇ ಪರಿಸರಕ್ಕೆ ಸಂಬಂಧಿಸಿದ ಸಾಕಷ್ಟು ವರದಿಗಳು, ‘ಪರಿಸರದ ಮೇಲೆ ಹೀಗೆ ದೌರ್ಜನ್ಯ ನಡೆಯುತ್ತ ಹೋದರೆ ಕೆಲವೇ ವರ್ಷಗಳಲ್ಲಿ ಮನುಕುಲ ಊಹಿಸಲಾಗದಷ್ಟು ಗಂಭೀರ ಸ್ಥಿತಿಗೆ ತಲುಪುತ್ತದೆ’ ಎಂದು ಹೇಳುತ್ತಿವೆ. ಸಾಕಷ್ಟು ವಿಜ್ಞಾನಿಗಳು ಸಹ ಈ ಕುರಿತು ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಆದರೂ ಸರಕಾರಕ್ಕೆ ಅಭಿವೃದ್ಧಿ ಎದುರು ಇದ್ಯಾವುದೂ ಗಮನಕ್ಕೆ ಬರುತ್ತಿಲ್ಲ. ಅವೈಜ್ಞಾನಿಕ ಯೋಜನೆ ಸಿದ್ಧಪಡಿಸುತ್ತದೆ, ಕಣ್ಣುಮುಚ್ಚಿ ತೆರೆಯುವುದರೊಳಗೆ ಅದನ್ನು ಅನುಷ್ಠಾನಕ್ಕೂ ತಂದು ಬಿಡುತ್ತದೆ. ಪರಿಣಾಮ ಲಕ್ಷೋಪ ಲಕ್ಷ ಮರಗಳ ಮಾರಣಹೋಮ ವಾರ ಕಳೆಯುವುದರೊಳಗೆ ನಡೆದು ಬಿಡುತ್ತದೆ. ಇವೆಲ್ಲದರ ಒಟ್ಟು ಪರಿಣಾಮ ಬರ!

ವರ್ಷದಿಂದ ವರ್ಷಕ್ಕೆ ಬರ ತನ್ನ ಕಬಂಧ ಬಾಹುವನ್ನು ಇಕ್ಕೆಲುಗಳಲ್ಲಿ ಚಾಚುತ್ತಲೇ ಇದೆ. ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆ ಹತ್ತು-ಹದಿನೈದು ಅಡಿಗೆ ನೀರು ದೊರೆಯುತ್ತಿತ್ತು. ಈಗ ಮೂವತ್ತು-ನಲವತ್ತು ಅಡಿ ಆಳ ಅಗೆದರೂ ನೀರು ಸಿಗುವುದು ಅಪರೂಪ. ಕೆರೆ, ಕಟ್ಟೆ, ಬಾವಿಗಳೇ ಅಲ್ಲಿಯ ಜನರಿಗೆ ನೀರಿನ ಮೂಲವಾಗಿತ್ತು. ಶಾಲೆ ಹಾಗೂ ಕೆಲವು ಸರಕಾರಿ ಆವರಣದಲ್ಲಿ ಬೆರಳೆಣಿಕೆಯಷ್ಟು ಕೊಳವೆ ಬಾವಿ ಹಾಗೂ ಬೋರ್‌ವೆಲ್‌ಗಳು ಇರುತ್ತಿದ್ದವು. ಆದರೆ, ಇತ್ತೀಚಿನ ಎರಡು ವರ್ಷಗಳಲ್ಲಿ ಅಲ್ಲೂ ಕೊಳವೆ ಬಾವಿ ಸಂಸ್ಕೃತಿ ಉತ್ತುಂಗಕ್ಕೇರಿದೆ. ವಿಶೇಷವೆಂದರೆ, ಕಡಲಂಚಿನ ಪ್ರದೇಶದ ಮನೆ-ಮನೆಗಳಲ್ಲೂ ಕೊಳವೆ ಬಾವಿಯದ್ದೇ ಕಾರುಬಾರು! ಅಂದರೆ, ವಿಷಯವಿಷ್ಟೇ, ಸದಾ ನೀರಿರುವ ಕರಾವಳಿ ಪ್ರದೇಶದಲ್ಲಿಯೂ ಅಂತರ್ಜಲ ಮಟ್ಟ ಕುಸಿದಿದೆ. ಮುಂದೊಂದು ದಿನ ಆ ಭಾಗದ ಜನರು ಸಹ ಉತ್ತರ ಕರ್ನಾಟಕ ಭಾಗದ ಜನರಂತೆ ಹನಿ ನೀರಿಗಾಗಿ ಬಿಂದಿಗೆ ಹಿಡಿದು ಏಳೆಂಟು ಕಿ.ಮೀ. ಪಯಣಿಸುವ ಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಯಾಕೆಂದರೆ, ಈಗಾಗಲೇ ನೀರಿಲ್ಲದ ಅಲ್ಲಿಯ ಕೆಲವು ಪ್ರದೇಶಗಳಿಗೆ ತಾಲೂಕಾಡಳಿತ ಟ್ಯಾ೦ಕರ್ ಮೂಲಕ ನೀರು ಪೂರೈಸುವ ಯೋಜನೆಗೆ ಮುನ್ನುಡಿ ಬರೆದಾಗಿದೆ.

ಈ ಮೊದಲು ಮಲೆನಾಡಿನ ಆಗುಂಬೆ, ಶಿಕಾರಿಪುರ, ಸಾಗರ, ಚಿಕ್ಕಮಗಳೂರು, ಕೊಡಗು, ಶಿರಸಿ ಹಾಗೂ ಕರಾವಳಿಯ ಕೆಲವು ಸ್ಥಳಗಳ ಹೆಸರು ಕೇಳಿದರೆ ಸಾಕಿತ್ತು, ಬಿಟ್ಟು ಬಿಡದೆ ಸುರಿವ ಮಳೆ ಹಾಗೂ ಹಸಿರ ಹಾಸು ಕಣ್ಮುಂದೆ ಬಂದು ನಿಲ್ಲುತ್ತಿತ್ತು. ಮಳೆ ಅಬ್ಬರಿಸುವಾಗ ದಟ್ಟವಾದ ಮಂಜು ಪರ್ವತಗಳ ಸಾಲಿನ ನಡುವೆ ಭುಗಿಲೇಳುತ್ತಿತ್ತು. ಯಾವುದಾದರೂ ಗುಡ್ಡದ ನೆತ್ತಿ ಮೇಲೆ ನಿಂತರೆ ಮೋಡಗಳು ಎಲ್ಲಿ ತಲೆಗೆ ತಾಕುತ್ತವೋ ಎಂದು ಭಾಸವಾಗುತ್ತಿತ್ತು. ಇದ್ದಬಿದ್ದ ಚಿಕ್ಕ ಜಲಪಾತಗಳೆಲ್ಲ ಮೈದುಂಬಿ ಹರಿಯುತ್ತಿದ್ದವು. ಆದರೆ ಈಗೀಗ ಮಳೆ ಕಾಡು ಖ್ಯಾತಿಯ ಈ ಪಶ್ಚಿಮಘಟ್ಟ ಪ್ರದೇಶಗಳು ಸದ್ದಿಲ್ಲದೆ ಒಣಗಲಾರಂಭಿಸಿವೆ. ವರ್ಷದಿಂದ ವರ್ಷಕ್ಕೆ ಈ ಪ್ರದೇಶದಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗುತ್ತಿದೆ. ಕರಾವಳಿ ಸೇರಿ ಈ ಪ್ರದೇಶದಲ್ಲಿ ಮುಂಗಾರು ವೇಳೆ ಪ್ರತಿದಿನ 40-50 ಮಿ.ಮೀ. ಪ್ರಮಾಣದಷ್ಟು ಮಳೆಯಾಗಿ, ತಿಂಗಳಿಗೆ 2900 ಮಿ.ಮೀ ದಾಖಲಾಗುತ್ತಿತ್ತು. ಅದು ಕಳೆದ ವರ್ಷ 30-40 ಮಿ.ಮೀ.ಗೆ ಇಳಿಕೆಯಾಗಿದೆ. ಆಗುಂಬೆ ಒಂದೇ ಪ್ರದೇಶದಲ್ಲಿ ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ 1750 ಮಿ.ಮೀ.ರಷ್ಟು ಮಳೆಯಾಗುತ್ತಿತ್ತು. ಐದಾರು ವರ್ಷದ ಮಳೆ ವರದಿಯಿಟ್ಟುಕೊಂಡು ಲೆಕ್ಕ ಹಾಕಿದರೆ ಕಳೆದ ವರ್ಷ ಶೇ.10ರಷ್ಟು ಮಳೆ ಕಡಿಮೆಯಾಗಿದೆ. ಎಡೆಬಿಡದೆ ಭೋರ್ಗರೆದು ಮಳೆ ಸುರಿಯುವ ಪ್ರದೇಶದಲ್ಲಿಯೇ ಮಳೆ ಪ್ರಮಾಣ ಕಡಿಮೆಯಾಗಿದೆ ಎಂದರೆ ಇನ್ನು ಉಳಿದ ಪ್ರದೇಶಗಳ ಕಥೆ ಏನಾಗಿರಬೇಡ?

ಮಳೆಗಾಗಿ ಪ್ರಾಾರ್ಥಿಸುವ ಕೈಗಳು ಸಾಕಷ್ಟು ಇವೆ. ಕೆಲವು ಗ್ರಾಮೀಣ ಭಾಗಗಳಲ್ಲಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವ ಮೂಲಕ ವರುಣ ದೇವನ ಮೊರೆ ಹೋಗುತ್ತಾರೆ. ಅದು ಆಯಾಯ ಭಾಗದ ಸಮುದಾಯದ, ಪರಂಪರೆಯ ಒಂದು ಆಚರಣೆ, ನಂಬಿಕೆ. ಆದರೆ, ವೈಜ್ಞಾನಿಕ ನೆಲೆಗಟ್ಟಿನಡಿ ಆಡಳಿತ ನಡೆಸುವ ಸರಕಾರವೇ ಮೌಢ್ಯತೆಗೆ ಬಿದ್ದು, ನದಿಗೆ ಬಾಗಿನ ಅರ್ಪಿಸುವ ಮೂಲಕ ಮಳೆಗೆ ಪ್ರಾರ್ಥಿಸುತ್ತದೆ ಎಂದರೆ ಇದಕ್ಕಿ೦ತ ಕುಚೋದ್ಯ ಇನ್ನೇನಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ ಎಂದರೆ ‘ಮೋಡ ಬಿತ್ತನೆ’ಗೆ ಮುಂದಾಗುತ್ತದೆ, ಭೀಕರ ಬರ ತಲೆದೋರುತ್ತಿದೆ ಎಂದು ‘ಪಾತಾಳ ಗಂಗೆ’ಯ ಮೇಲೆ ಕಣ್ಣಿಡುತ್ತದೆ. ಈ ಕುರಿತು ಬೇಕಾಬಿಟ್ಟಿ ಪ್ರಚಾರಗಿಟ್ಟಿಸಿ ಸಾರ್ವಜನಿಕ ಅಭಿಪ್ರಾಯಕ್ಕೆ ಮುಂದಾಗುತ್ತದೆ. ಹಾಗಂತ ‘ಮರ-ಗಿಡಗಳನ್ನು ಕಡಿದ ಪರಿಣಾಮ ಈ ಸಮಸ್ಯೆ ತಲೆದೋರುತ್ತಿದೆ. ಇನ್ನು ಮುಂದೆ ಅಭಿವೃದ್ಧಿ ಹೆಸರಲ್ಲಿ ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುವುದಿಲ್ಲ. ಪ್ರಾಾಮಾಣಿಕವಾಗಿ ಪರಿಸರ ರಕ್ಷಣೆಯಲ್ಲಿ ತೊಡಗಿಕೊಳ್ಳುತ್ತೇವೆ’ ಎಂದು ಎಲ್ಲಿಯೂ ಹೇಳುವುದಿಲ್ಲ. ಯಾಕೆಂದರೆ, ಜಡ್ಡುಗಟ್ಟಿದ ಆಡಳಿತಕ್ಕೆ ಪರಿಸರ ನಾಶ ಮಾಡಿ ರಸ್ತೆ, ಸ್ಥಾವರ, ಬಂದರು, ಕಟ್ಟಡ ನಿರ್ಮಿಸುವುದೇ ಒಂದು ಅಭಿವೃದ್ಧಿಯೆನ್ನುವಂತಾಗಿದೆ.

ಅನಕ್ಷರಸ್ಥ ಜನಪ್ರತಿನಿಧಿಗಳಿಗಿಂತ ಅಕ್ಷರಸ್ಥ ಜನಪ್ರತಿನಿಧಿಗಳು ಬಲು ಅಪಾಯಕಾರಿ. ಯಾಕೆಂದರೆ, ಅಕ್ಷರಸ್ಥ ರಾಜಕಾರಣಿಗೆ ಕಾನೂನಿನ ಹಾಗೂ ಸರಕಾರದ ಕೆಲವು ನಿಯಮಾವಳಿಗಳು ಅರಿವಿರುತ್ತದೆ. ಅದರಿಂದಾಗಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿದಾರನಾದರೂ ಸುಲಭವಾಗಿ ಮೈಕೊಡವಿ ಎದ್ದು ಬರುತ್ತಾನೆ. ಸಾಲದೆಂಬಂತೆ ಉನ್ನತ ಅಧಿಕಾರಿಗಳ ಜತೆಗೆ ‘ಸಹಭಾಗಿತ್ವ’ದ ಹೆಜ್ಜೆ ಇಟ್ಟಿರುತ್ತಾನೆ. ಅಂದರೆ ನಮ್ಮ ಬಹುತೇಕ ಐಎಎಸ್, ಕೆಎಎಸ್ ಅಧಿಕಾರಿಗಳ ಜತೆಗೆ ಸಣ್ಣ-ಪುಟ್ಟ ಅಧಿಕಾರಿಗಳು ಸಹ ಭ್ರಷ್ಟ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಜನಪ್ರತಿಗಳು ದಾರಿ ತಪ್ಪಿದಾಗ, ಅವೈಜ್ಞಾನಿಕ ಯೋಜನೆಗೆ ಮುಂದಾಗ ಉನ್ನತ ಅಧಿಕಾರಿಗಳು ಅದರಿಂದಾಗುವ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಕಾರಣ ನೀಡಬೇಕು. ಮುಂದೆ ತಲೆದೋರುವ ಸಮಸ್ಯೆಗಳನ್ನು ಅವರಿಗೆ ಸೂಕ್ಷ್ಮವಾಗಿ ಮನವರಿಕೆ ಮಾಡಿಕೊಡಬೇಕು. ಅದು ಬಿಟ್ಟು ಅವರ ಎದುರು ಕೈ ಕಟ್ಟಿ, ಹೇಳಿದ್ದಕ್ಕೆಲ್ಲ ಗೋಣು ಅಲ್ಲಾಡಿಸಿದರೆ, ಹುಬ್ಬಳ್ಳಿ ಧಾರವಾಡ ಅವಳಿನಗರದ ಮಧ್ಯೆ ನಡೆಯುತ್ತಿರುವ ಬಿಆರ್‌ಟಿಎಸ್ ಕಾಮಗಾರಿಯ ಕಥೆಯಂತೆಯೇ ಆಗುತ್ತದೆ.

ಏನೇ ಇರಲಿ. ಕೋಟಿ ವೃಕ್ಷಾ೦ದೋಲನಕ್ಕೆ ಸರಕಾರ ಮುಂದಾಗಿದೆ. ಪ್ರತಿಯೊಂದು ಮನೆ-ಮನೆಗಳಲ್ಲಿ ಒಂದೊಂದು ಗಿಡ ಚಿಗುರೊಡೆಯಲಿ. ರಸ್ತೆ, ಶಾಲೆ, ಊರು, ಕೇರಿ ಎನ್ನದೆ ಖಾಲಿಯಿದ್ದ ಜಾಗದಲ್ಲೆಲ್ಲ ಗಿಡಗಳು ತಲೆ ಎತ್ತಲಿ. ಗಿಡ ನೆಟ್ಟು ನೀರುಣಿಸಿದರಾಗಲಿಲ್ಲ; ಅದನ್ನು ಜತನದಿಂದ ಕನಿಷ್ಠ ಮೂರು ವರ್ಷಗಳ ಕಾಲವಾದರೂ ಆರೈಕೆ ಮಾಡುವಂತಾಗಲಿ. ವನಮಹೋತ್ಸವ ಎನ್ನುತ್ತ ಫೋಟೋಗೆ ಪೋಸ್ ಕೊಡುವ ಬದಲು, ಪ್ರಾಮಾಣಿಕವಾಗಿ ‘ನನ್ನ ಪರಿಸರದ ಉಳಿವಿಗೆ ನಾನೊಂದು ಗಿಡ ನೆಡುತ್ತೇನೆ’ ಎನ್ನುವ ಮನೋಭಾವ ಒಡಮೂಡಲಿ.

ಶುಕ್ರವಾರ, ಮೇ 19, 2017

ಕಡಲ ಕನವರಿಕೆ

ಓ ಕಡಲೇ...
ಯಾಕೋ... ನಿನ್ನ ಎದೆ ಹರಿವಿನ ಮೇಲೆ ಅಂಗಾತ ಬಿದ್ದು ತೇಲಾಡಬೇಕೆನಿಸಿದೆ. ನಿನ್ನ ಕಡು ನೀಲ ಬಣ್ಣದ ಎದೆಯಾಳದಲ್ಲಿ ಧುಮುಕಿ ಉಸಿರು ಬಿಗಿಡಿಯಬೇಕೆನಿಸಿದೆ. ನಿನ್ನ ನೆತ್ತಿಯ ಮೇಲೆ ಓಡಾಡುವ ಕಾರ್ಮೋಡದೊಳಗೆ ಅವಿತುಕೊಳ್ಳಬೇಕೆನಿಸಿದೆ....

ಹೌದು.... ಒಂದು ದಿನ ಪೂರ್ತಿ ನಿನ್ನ ಜೊತೆ ಕಳೆದು ಭಾರವಾದ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕಿದೆ. ನಾಚುತ್ತ ಬಂದು ಕಾಲಿಗೆ ಕಚಗುಳಿಯಿಡುವ ನಿನ್ನ ಹಾಲ್ನೊರೆಯ ಗುಳ್ಳೆಯನ್ನು ಬೆರಳಲ್ಲಿ ಎತ್ತಿ ಆಡಬೇಕು. ಕೆನ್ನೆ ಕೆಂಪೇರಿಸಿಕೊಂಡು ಪ್ರಸ್ತದ ಕೋಣೆಗೆ ಹೋಗುವ ಮಧುವಣಗಿತ್ತಿಯಂತೆ ಕಾಣುವ ಭಾನುವನ್ನು ಕಣ್ತುಂಬಿಸಿಕೊಳ್ಳಬೇಕು. ನಿನ್ನ ಉಬ್ಬರದ ಆರ್ಭಟದಲ್ಲಿ ನೀರ್ಗಲ್ಲು ಮುರಿವ ಸದ್ದನ್ನು ಕೇಳಿ ಎದೆ ಬಡಿತ ಹೆಚ್ಚಿಸಿಕೊಳ್ಳಬೇಕು. ಹೀಗೆ, ಏನೇನೋ ಹುಚ್ಚು ಆಸೆ... ಕಲ್ಪನೆಯಂತೂ ಅಲ್ಲ. ಯಾಕೆಂದರೆ, ನಾ ನಿನ್ನ ಮಡಿಲಲ್ಲೇ ಬೆಳೆದ ಹುಚ್ಚ ಹುಡುಗ.
ಇರಲಿ, ಹತ್ತಿರದವರಲ್ಲಿ ಹೇಳಿಕೊಳ್ಳಲಾಗದ ಭಾವವನ್ನು ನಿನ್ನ ಮುಂದಾದರೂ ಹೇಳಿಕೊಳ್ಳೋಣ ಎಂದುಕೊಂಡಿದ್ದೆ. ಆದರೆ, ಅಬ್ಬರಿಸುವ ನೀನೇ ಬಿಸಿಲ ಬೇಗೆಗೆ ತಣ್ಣಗಾಗಿ ಹೋಗಿದ್ದೀಯ. ನಾನೇ ಆದಿ, ನಾನೇ ಅಂತ್ಯ ಎಂದೆಲ್ಲ ಬೀಗುತ್ತಿದ್ದ ನೀನು, ಎಷ್ಟೊಂದು ಕೃಶವಾಗಿದ್ದೀಯ?  ನಿನ್ನ ತಟಕ್ಕೆ ಬಂದು ಒಂದು ಹೆಜ್ಜೆ ಊರಿದರೆ ಸಾಕಿತ್ತು, ಓಡೋಡಿ ಬಂದು ಪಾದಸ್ಪರ್ಶಿಸಿ ಪುನೀತರನ್ನಾಗಿಸುತ್ತಿದ್ದೆ. ಆದರೆ, ಈಗ... ಗಾವುದ ದೂರ ಸುಡುವ ಮರಳ ರಾಶಿ ಮೇಲೆ ಹೆಜ್ಜೆ ಹಾಕಬೇಕು. ಎರಡ್ಮೂರು ಮೈಲಿ ದೂರವಿದ್ದರೂ ನಿನ್ನ ಅಬ್ಬರದ ಸದ್ದು ರಾತ್ರಿ ನಿದ್ದೆಗೆ ಜೋಗುಳ ಹಾಡಿದಂತಿರುತ್ತಿತ್ತು. ನಿನ್ನ ಸನಿಹ ಬಂದರೂ ಈಗ ಆ ಸದ್ದು ಕೇಳಲೊಲ್ಲದು. ಬಿರು ಬೇಸಿಗೆ ನಿನ್ನನ್ನು ಸಹ ಇಷ್ಟು ಹೈರಾಣಾಗಿಸಿದೆಯೇ?

ಬಿಡು, ಇನ್ನೊಂದು ವಾರವಷ್ಟೇ! ಕೊತ ಕೊತನೆ ಕುದಿಯುತ್ತಿದ್ದ ನಿನ್ನ ಮೈ-ಮನವೆಲ್ಲ ತಣ್ಣಗಾಗಲಿದೆ. ಮುಗ್ಧನಂತೆ ಶಾಂತವಾಗಿದ್ದ ನೀನು ಹುಚ್ಚೆದ್ದು ಅಬ್ಬರಿಸುತ್ತೀಯಾ. ಎಷ್ಟು ಹುಚ್ಚನೆಂದರೆ, ಆಗತಾನೆ ಅಂಬೆಗಾಲಿಡುವ ಮಗುವನ್ನು ಮಣ್ಣಲ್ಲಿ ಬಿಟ್ಟರೆ, ಏನೆಲ್ಲ ಮಾಡುತ್ತದೆಯೋ.. ಹಾಗೆ! ಅಂದರೆ, ಈಗಿರುವ ಶುಭ್ರ ನೀಲಿಯ ಬದಲಾಗಿ, ಹೊಲಸನ್ನು ಮೈಗೆ ಮೆತ್ತಿಕೊಂಡ ಕೊಳಕನಂತೆ! ನಿನ್ನ ಅಲೆಗಳ ಆರ್ಭಟಕ್ಕೆ ನಿನ್ನದೇ ತಟದಲ್ಲಿದ್ದ ಮರಗಳೆಷ್ಟು ಧರೆಗುರಳಬೇಕೋ? ನಿನ್ನಂಗಳದಲ್ಲಿ ಬೆಚ್ಚನೆಯ ಗೂಡು ಕಟ್ಟಿಕೊಂಡಿದ್ದ ಗುಡಿಸಲುಗಳೆಷ್ಟು ನುಚ್ಚು-ನೂರಾಗಬೇಕೋ? ಇಂತಹದ್ದೇ ಹುಚ್ಚಾಟಕ್ಕೆ ನೀನು ಎದುರು ನೋಡುತ್ತಿದ್ದೀಯಾ ಎನ್ನುವುದು ನನಗೆ ಚೆನ್ನಾಗಿ ಗೊತ್ತು!

ದೂರದ ಅಂಡಮಾನ-ನಿಕೋಬಾರ ಸಮುದ್ರ ತೀರಕ್ಕೆ ಮುಂಗಾರು ಕಾಲಿಟ್ಟು, ಅದಾಗಲೇ ವಾರ ಕಳೆದಿದೆ. ಇನ್ನೊಂದು ವಾರದಲ್ಲಿ ಬಂಗಾಳಕೊಲ್ಲಿ ಮೂಲಕ ಕೇರಳ ಪ್ರವೇಶಿಸಿ ನಿನ್ನನ್ನು(ಅರಬ್ಬೀ) ಬಿಗಿದಪ್ಪಿಕೊಳ್ಳಲಿದೆ. ಆ ಸಂದರ್ಭದಲ್ಲಿ ನೀ ವರ್ತಿಸುವ ರೀತಿ ಹಾಗೂ ಆ ದೃಶ್ಯ ನಿಜಕ್ಕೂ ಭಯಾನಕ. ನೆನೆಸಿಕೊಂಡರೆ ಎದೆ ಸಣ್ಣಗೆ ಕಂಪಿಸುತ್ತದೆ. ನೆತ್ತಿಯ ಮೇಲೆ ಕಾಪಿಟ್ಟ ಮೋಡಗಳ ಸಾಲು ಸಾಲು, ಶರವೇಗದಿಂದ ಎಲ್ಲಿಂದಲೂ ತೂರಿ ಬರುವ ಬಿರುಗಾಳಿ, ನಿನ್ನ ಕಡಲಿನ ಮೊರೆತದ ಅಬ್ಬರ, ಬಾನಂಗಳದಿಂದ ಕಬ್ಬಿಣ ಚೂರನ್ನು ಎಸೆದಂತೆ ಭಾಸವಾಗುವ ಮಳೆ ಹನಿಗಳ ಥಕಧಿಮಿತ, ಸುತ್ತೆಲ್ಲ ಆವರಿಸುವ ಕತ್ತಲು, ನೋಡು ನೋಡುತ್ತಲೇ ಮಂಜಿಗೆ ಮುಸುಕಾಗುವ ಕಾಗಾಲ ಗುಡ್ಡ, ಗಾಳಿ ರಭಸಕೆ ಎಲ್ಲಿಯೋ ತೂರಿ ಹೋಗುವ ಚಿತೆಯೇರಿದವರ ಭಸ್ಮ.......

ಈ ಭೀಭತ್ಸ ಸನ್ನಿವೇಶದಲ್ಲಿ ನಾನು ಏಕಾಂಗಿಯಾಗಿ, ಧರಿಸಿದ ಮೇಲಂಗಿಯ ಗುಂಡಿ ತೆಗೆದು, ಎರಡು ಕೈ ಅಗಲಿಸಿ ‘ಈ ಕಡಲೆಲ್ಲ ನನ್ನದು’ ಎನ್ನಬೇಕು! ಮನದಣಿಯೇ ‘ಕಣ್ಣಂಚು ಒದ್ದೆ ’ ಮಾಡಿಕೊಳ್ಳಬೇಕು.

ಇಂತಿ ನಿನ್ನ.. 
ಎದೆಯಾಳೋ ಹುಡುಗ


ಬುಧವಾರ, ಮೇ 3, 2017

ನನ್ನ ಮನೆಯಂಗಳದ ಸೌಂದರ್ಯ ರಾಶಿ
ಕಣ್ಣ ಅಳತೆಗೆ ನಿಲುಕದಷ್ಟು ವಿಶಾಲವಾದ ಗದ್ದೆ ಬಯಲು. ಈ ಅನಂತವನ್ನು ಸೀಳಿವೆಯೇನೋ ಎಂದೆನಿಸುವ ಹೆಬ್ಬಾವಿನಂತೆ ಸುಮ್ಮನೆ ಮಲಗಿದ ರಸ್ತೆ. ಕತ್ತೆೆತ್ತಿದರೆ ಹತ್ತಿಯ ರಾಶಿ ಒಂದೆಡೆ ಕೂಡಿ ಹಾಕಿದ ಬಿಳಿ ಮೋಡಗಳ ಸರತಿಯ ಓಟ. ಬಯಲಿಗೆ ಎದುರಾಗಿ ನಾಲ್ಕು ಹೆಜ್ಜೆ ಹಾಕಿದರೆ ಅಘನಾಶಿನಿಯ ಝುಳು ಝುಳು ನಾದ. ಸುತ್ತೆಲ್ಲ ಕಣ್ಣಾಡಿಸಿದರೆ ಮಂಜು ಮುಸುಕಿದ ಸಹ್ಯಾದ್ರಿ ಪರ್ವತಗಳ ಸಾಲು...
ಇದು ನಮ್ಮನೆಯಂಗಳದ ಸೌಂದರ್ಯ ರಾಶಿ. ತೆಂಗು, ಅಡಿಕೆ, ಮಾವು, ಹಲಸು, ಪೇರಲ, ಚಿಕ್ಕು ಮರಗಳ ಜೊತೆ ಜೊತೆಗೆ ಅಬ್ಬಲ್ಲಿ, ಮಲ್ಲಿಗೆ, ಮುತ್ತು ಮಲ್ಲಿಗೆ, ಕಾಬಾಳಿ, ಸಂಪಿಗೆ, ಮಧ್ಯಾಹ್ನ ಮಲ್ಲಿಗೆ, ಜಿನ್ನಿ, ತುಳಸಿಯಂತಹ ಚಿಕ್ಕ ಪುಟ್ಟ ಗಿಡಗಳ ಹಸಿರ ತೋರಣದ ನಡುವೆ ಪುಟ್ಟದೊಂದು ಮನೆ. ಮನೆ ಹೊಸ್ತಿಲು ತುಳಿದು ಐದತ್ತು ಹೆಜ್ಜೆ ಇಟ್ಟರೆ ಮೈ-ಮನಗಳ ಬೇಗುದಿಗೆ ಮುಲಾಮು ಹಚ್ಚುವ ಗದ್ದೆ ಬಯಲು. ದೂರದಿಂದ ತೂರಿ ಬರುವ ಬಿಸಿ ಗಾಳಿಯನ್ನು ಸಹ ಈ ಗದ್ದೆ, ತಂಪು ಗಾಳಿಯನ್ನಾಗಿ ಬದಲಾಯಿಸುತ್ತದೆ. ಅಳತೆಗೋಲಾಗಿ ಕಾಲುದಾರಿಯಾಗಿರುವ ಕಂಟದ ಮೇಲಿನ ಪ್ರತಿ ನಡಿಗೆ ಹೊಸ ಹೊಸ ಭಾವಾನುಭವಕ್ಕೆ ನಾಂದಿ. ಅಲ್ಲೇ ಕಂಟದ ಮೇಲೆ ಗಂಭೀರವಾಗಿ ತಲೆ ಎತ್ತಿ ನಿಂತಿದ್ದ ತೆಂಗಿನ ಮರ, ಈಗ ಬಳಲಿ ಬೆಂಡಾಗಿ ಗೂನು ಬೆನ್ನು ಹಾಕಿದೆ.
ಗದ್ದೆಗುಂಟ ಸರತಿ ಸಾಲಾಗಿ ನಿಂತಿರುವ ವಿದ್ಯುತ್ ಕಂಬಗಳು, ಅಘನಾಶಿನಿ ಹೊಳೆಯಲ್ಲಿ ಮೀನು ಹಿಡಿಯಲು ಗಾಳ ಹಾಕಿದೆಯೇನೋ ಎನ್ನುವ ಭಾವ ಒಡಮೂಡಿಸುತ್ತದೆ. ವಿದ್ಯುತ್ ತಂತಿಯ ಮೇಲೆ ಕುಳಿತು ಮರಿ ಹಕ್ಕಿಗೆ ಗುಟುಕು ನೀಡುವ ತಾಯಿ ಹಕ್ಕಿಯ ತಾಯ್ತನ, ಜೀಕುತ್ತ ಜೋಕಾಲಿಯಾಡುವ ಹರೆಯದ ಹಕ್ಕಿಗಳ ತುಂಟತನ, ಪಕ್ಕದಲ್ಲಿ ಬೇಲಿ ಮೇಲಿನ ಹಸಿರು ಪದೆಯೊಳಗೆ ಅವಿತು ಟುವ್ವಿ... ಟುವ್ವಿ.. ಎಂದು ಕೂಗುವ ಪಿಳ್ಳಕ್ಕಿಗಳ ಇಂಚರ, ಒಣಗಿದ ತರಗೆಲೆಯ ಅಡಿಯಲ್ಲಿ ಸದ್ದು ಮಾಡುತ್ತ ಹರಿದಾಡುವ ಸರಿಸೃಪಗಳು, ಇವುಗಳ ಹರಿದಾಟವನ್ನು ಬಾನಂಗಳದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತ ಹೊಂಚು ಹಾಕಿ ರೆಕ್ಕೆ ಬಿಚ್ಚಿ ಹಾರಾಡುವ ಹದ್ದುಗಳು, ಗದ್ದೆ ಮಣ್ಣಿನಲ್ಲಿಯೇ ಕಣ್ಣಿಗೆ ಕಾಣದಷ್ಟು ಚಿಕ್ಕ ಗೂಡು ಕಟ್ಟಿಕೊಂಡು ವಾಸಿಸುವ ಗುಬ್ಬಿ ಹುಳಗಳು, ಆ ಗೂಡುಗಳ ಮೇಲೆಯೇ ಆಹಾರ ಹುಡುಕುತ್ತ ಸಾಗುವ ಇರುವೆಯ ಸರತಿ ಸಾಲುಗಳು.... ಒಂದೇ ಎರಡೇ, ಪ್ರಕೃತಿಯ ಎಲ್ಲ ಅನುಭೂತಿಗಳು ಒಂದೆಡೆ ಸೆರೆಯಾದ ಪವಿತ್ರ ಸ್ಥಳ.
ಗದ್ದೆ ಮೇಲಿನ ಕಂಟದ ಮೇಲೆ ಅಘನಾಶಿನಿ ಕಡೆ ಮುಖ ಮಾಡಿ ಹೆಜ್ಜೆ  ಹಾಕಿದರೆ, ತಾತ, ಮುತ್ತಾರ ಕಾಲದ ಮಾರ್ಗ ಸೂಚಕ ಬೃಹತ್ ಅರಳಿ ಮರ ಎದುರಾಗುತ್ತದೆ. ಅಲ್ಲಲ್ಲಿ ಇರುವ ಈ ಅರಳಿ ಮರಗಳು ಅಂದಿನ ಕಾಲುದಾರಿಯ ಪಯಣದಲ್ಲಿ ಹಿರಿಯರಿಗೆ ದಾರಿಯ ಹೆಗ್ಗುರುತಾಗಿತ್ತು. ನಡೆದು ಸುಸ್ತಾದಾಗ ಅರಳಿ ಕಟ್ಟೆಯ ಮೇಲೆಯೇ ವಿಶ್ರಮಿಸಿ, ಬುತ್ತಿ ತಿಂದು ಮುಂದೆ ಪಯಣಿಸುತ್ತಿದ್ದರು. ಈಗ ಈ ಅರಳಿ ಮರ ಕಾಗೆ, ಪಾರಿವಾಳ, ಹದ್ದುಗಳಿಗೆ ನೆಲೆ ನೀಡಿದ ಮಹಾ ವೃಕ್ಷ. ಮುಂಜಾನೆಯ ಸೂರ್ಯೋದಯದ ಮೊದಲ ಕಿರಣ, ಅಘನಾಶಿನಿಯ ಬಳಕುವ ಮೈ ಮೇಲೆ ಬಿದ್ದು ಈ ಅರಳಿಗೆ ನಮಿಸಿ ಮೇಲೇಳುತ್ತದೆ. ಹಾಗೆಯೇ, ಮುಸ್ಸಂಜೆಯ ಸೂರ್ಯಾಸ್ತದ ಕೊನೆಯ ಕಿರಣ ಅರಳಿಯ ನೆತ್ತಿಯ ಮೇಲಿರುವ ಚಿಗುರೆಲೆಗೆ ಸ್ಪರ್ಶಿಸಿ ಮಾಯವಾಗುತ್ತದೆ.
ದೈವೀದತ್ತ ಈ ಹಸಿರು ಹೊನ್ನ ರಾಶಿಯ ಪ್ರಕೃತಿಯ ಮಡಿಲಲ್ಲಿ ಉಸಿರು ಪಡೆದ ನಾನೇ ಧನ್ಯ! ಕ್ಷಮಿಸಿ..... ನಾವೇ ಧನ್ಯ!!

ಮಂಗಳವಾರ, ಮೇ 2, 2017

ವರ್ಷೆಯ ತೆಕ್ಕೆಗೆ ಬಿದ್ದು ಬಿಟ್ಟೆ
ಮುಂಗಾರು ಆರಂಭಕ್ಕೂ ಪೂರ್ವವೇ ವರ್ಷೆಯ ತೆಕ್ಕೆಗೆ ಬಿದ್ದು ಬಿಟ್ಟೆ...! ಎಂದೂ ಬಾರದ ವಿರಹಾಗ್ನಿ ಇಂದು ಮೈ ಮನವನ್ನೆಲ್ಲ ಆವರಿಸಿ ಧಗಧಗನೆ ಬೇಯಿಸುತ್ತಿತ್ತು. ಅದರ ಬೇಗುದಿಗೆ ಬೆಂದು ಹೋಗುತ್ತೇನೋ ಎನ್ನುವ ಭೀಭತ್ಸ ಭಾವ ಕಾಡುತ್ತಲೇ ಇತ್ತು.   ಇನಿಯನ ತೊಳಲಾಟ ನೋಡದ ವರ್ಷೆ, ಮುಸ್ಸಂಜೆ ಹೊತ್ತಲ್ಲಿ ಬಾನಂಗಳದಿಂದ ಓಡೋಡಿ ಬಂದಳು. ಎದೆಯ ಹರವಿನ ಮೇಲೆ ಬಿದ್ದು ಓಲಾಡಿದಳು. ಕಚಕುಳಿ ಇಡುತ್ತ ಮನದಣಿಯೇ ಕುಣಿದಾಡಿದಳು. ಕೊತಕೊತನೆ ಕುದಿಯುತ್ತಿದ್ದ ಇನಿಯನ ವಿರಹಾಗ್ನಿಯನ್ನು ತನ್ನ ತಣ್ಣನೆಯ ಸ್ಪರ್ಷದಿಂದ ಮಾಯವಾಗಿದಳು. ನನ್ನ ವರ್ಷೆಯ ಧ್ಯಾನದಲ್ಲಿಯೇ ಇನ್ನೊಂದೆರಡು ದಿನ ಕಳೆಯಬಹುದು. ತದನಂತರ ಮತ್ತೆ ಆರಂಭ, ವಿರಹ, ವೇದನೆ... ಮುಂಗಾರು ಆರಂಭವಾಗುವವರೆಗೂ!

ಸರ್ವಜನಾಂಗದ ಶಾಂತಿಯ ತೋಟ
(ಹೂಬಳ್ಳಿಯಲ್ಲಿ  ಇದು ನಿಮ್ಮ ಗಮನಕ್ಕೂ ಬಂದಿರಬಹುದು....!)

ಇಲ್ಲಿ ಜಾತಿ-ಧರ್ಮದ ಹಂಗಿಲ್ಲ, ಬಡವ-ಬಲ್ಲಿದ ಎನ್ನುವ ಭೇದವಿಲ್ಲ. ಕಂಠಪೂರ್ತಿ ಕುಡಿದು ನಶೆ ಏರಿದವರೂ ಬರುತ್ತಾರೆ, ಒಂದರ್ಧ ಗಂಟೆ ಧ್ಯಾನಕ್ಕೆ ಮೊರೆ ಹೋಗುವವರೂ ಬರುತ್ತಾರೆ. ಒಂದರ್ಥದಲ್ಲಿ ಎಲ್ಲರನ್ನೂ ಒಂದೆಡೆ ಸೆಳೆದುಕೊಳ್ಳುವ ಆಕರ್ಷಣೀಯ ಸ್ಥಳ!
ಈ ಭಿನ್ನ ಸೆಳೆತದ ಸ್ಥಳ ಇನ್ನೂ ಬೆಳಕಿಗೆ ಬಾರದ ಊರ ಹೊರಗಡೆಯೆಲ್ಲೆಲ್ಲೂ ಇಲ್ಲ. ಹುಬ್ಬಳ್ಳಿ ನಗರದ ಕೇಂದ್ರ ಭಾಗವಾದ ಹುಧಾ ಮಹಾನಗರ ಪಾಲಿಕೆಯ ಬೆನ್ನಿಗೆ ಒರಗಿಕೊಂಡೇ ಇದೆ. ಹೌದು, ಅಂದ ಹಾಗೆ ಈ ಸ್ಥಳದ ಹೆಸರು ಚಿಟಗುಪ್ಪಿ ಪಾರ್ಕ್!
 ಹೆಸರಿಗೆ ಇದು ಉದ್ಯಾನವಾದರೂ ಹೇಳಿಕೊಳ್ಳಲು ಸಹ ಒಂದೇ ಒಂದು ಅಂದದ ಗಿಡ ಇಲ್ಲಿಲ್ಲ. ಎಲ್ಲಿಯಾದರೂ ಹಸಿರು ಹುಲ್ಲಿನ ಹಾಸಿಗೆ ಇದೆಯೇ ಎಂದು ಕಣ್ಣಾಡಿಸಿದರೆ, ಅದು ಕೂಡಾ ಗೋಚರಿಸದು. ಉದ್ಯಾನದ ಮಧ್ಯ ಭಾಗದಲ್ಲಿ ಇತಿಹಾಸದ ಕಥೆ ಹೇಳುತ್ತ ಗಾಂಭೀರ್ಯದಿಂದ ಬೃಹದಾಕಾರವಾಗಿ ಅರಳಿ ಮರ ಬೆಳೆದು ನಿಂತಿದ್ದರೆ, ಸುತ್ತೆಲ್ಲ ಅಲ್ಲಲ್ಲಿ ಎಂದು ಒಂದಿಷ್ಟು ಮರಗಳು ತಲೆದೂಗುತ್ತ ನಿಂತಿವೆ. ಈ ಮರಗಳು ಮನುಷ್ಯ ಎಂಬ ಪ್ರಾಣಿಗೆ ನೆರಳನ್ನು ನೀಡಿದರೆ, ಚಿಕ್ಕಪುಟ್ಟ ಪಕ್ಷಿಗಳಿಗೆ ತನ್ನ ಮಡಿಲಲ್ಲಿ ಬೆಚ್ಚನೆಯ ಜಾಗವನ್ನೇ ನೀಡಿ ಸಾರ್ಥಕತೆ ಪಡೆದುಕೊಡಿದೆ.
ವಾಣಿಜ್ಯ ನಗರಿಯ ಕೇಂದ್ರ ಭಾಗದಲ್ಲಿ ಇಂದಿರಾ ಗಾಜಿನ ಮನೆ ಉದ್ಯಾನ ಹಾಗೂ ಈ ಚಿಟಗುಪ್ಪಿ ಉದ್ಯಾನ ಹೊರತು ಪಡಿಸಿದರೆ ಮತ್ಯಾವ ಉದ್ಯಾನವೂ ಇಲ್ಲ. ಈ ಚಿಟಗುಪ್ಪಿ ಉದ್ಯಾನಕ್ಕೆ ಹೊಂದಿಕೊಂಡು ಮಹಾನಗರ ಪಾಲಿಕೆ, ಆಸ್ಪತ್ರೆ, ಸಂಸದರ ಕಚೇರಿ ಹಾಗೂ ಕಲಾ ಮಹಾವಿದ್ಯಾಲಯ ಇರುವುದರಿಂದ ಸಹಜವಾಗಿಯೇ ದಿನಪೂರ್ತಿ ಉದ್ಯಾನ ಜನಜಂಗುಳಿಯಿಂದ ತುಂಬಿರುತ್ತದೆ. ಒಂದಿಲ್ಲೊಂದು ಕಾರ್ಯದ ನಿಮಿತ್ತ ಪಾಲಿಕೆಗೆ ಬರುವ ನಾಗರಿಕರು, ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು, ಕಲಾ ಮಹಾವಿದ್ಯಾಲಯಕ್ಕೆ ಬರುವ ನೂರಾರು ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆ ಕಳೆಯಲು ಇಲ್ಲಿಯ ಮರದ ನೆರಳನ್ನೇ ಆಶ್ರಯಿಸುತ್ತಾರೆ. ಇವರ ಹೊರತಾಗಿಯೂ ಈ ಪುಟ್ಟ ಉದ್ಯಾನ ಎಷ್ಟೋ ಜೀವಗಳಿಗೆ ಆಸರೆಯಾಗಿದೆ ಎನ್ನುವುದು ಸೋಜಿಗವೇ!
ಜಾತಿ, ಧರ್ಮದ ಹಂಗಿಲ್ಲದೆ ಪ್ರತಿಯೊಬ್ಬರೂ ಚಿಟಗುಪ್ಪಿ ಉದ್ಯಾನಕ್ಕೆ ಬಂದು ಬಿಡುವಿನ ಕಾಲ ಕಳೆಯುತ್ತಾರೆ. ಅಪರಿಚಿತರಾಗಿ ಬಂದು ಪರಿಚಿತರಾಗಿ ಹೆಜ್ಜೆ ಕೀಳುತ್ತಾಾರೆ. ಧರ್ಮದ ಎಲ್ಲೆ ಮೀರಿದ ಸಣ್ಣದಾದ ಎಳೆಯೊಂದು ಉದ್ಯಾನ ಅನ್ಯ ಧರ್ಮಿಯರನ್ನು ಒಂದುಗೂಡಿಸುತ್ತದೆ. ಉದ್ಯಾನದ ಪ್ರವೇಶ ದ್ವಾರದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವಿರುವುದರಿಂದ ಕೆಲವರು ದಾಹ ನೀಗಿಸಿಕೊಳ್ಳಲು ಬಾಟಲು ಹಿಡಿದು ಬಂದರೆ, ಬೀದಿ ವ್ಯಾಪಾರಸ್ಥರು ತಮ್ಮ ಉದ್ಯಮಕ್ಕೆಂದು ಕ್ಯಾನ್ ಹಿಡಿದು ಬರುತ್ತಾರೆ. ಹಾಗೆಯೇ, ದೃಷ್ಟಿಯನ್ನು ಪಕ್ಕಕ್ಕೆ ಹೊರಳಿಸಿದರೆ ಪುಟ್ಟ ಮಕ್ಕಳು ಜೋಕಾಲಿಯಲ್ಲಿ ಕುಳಿತು ತೂಗುಯ್ಯಾಲೆಯಲ್ಲಿ ತೂಗುವುದು ಕಂಡು ಬರುತ್ತದೆ. ಅನತಿ ದೂರದಲ್ಲಿ ಮಕ್ಕಳ ಈ ಆಟವನ್ನು ನೋಡುತ್ತ ಕುಳಿತಿರುವ ಹೆತ್ತಾಕೆಯ ಕಣ್ಣಲ್ಲಿ ಸಂಭ್ರಮದ ಬುಗ್ಗೆ ಎದ್ದೇಳುತ್ತದೆ.
ಉದ್ಯಾನದ ಮೂಲೆಯಲ್ಲಿರುವ ಮರದ ನೆರಳಲ್ಲಿ, ಇಲ್ಲವೇ ಅಲ್ಲಿಯೇ ಇರುವ ಆಸನದಲ್ಲಿ ಬದುಕಿನ ಯಾವ ಜಂಜಾಟವೂ ಇಲ್ಲದೆ ನಿಶ್ಚಿಂತೆಯಿಂದ ಮಲಗಿರುವವರು ಇಲ್ಲಿ ಸಾಮಾನ್ಯವಾಗಿ ಕಾಣ ಸಿಗುತ್ತಾರೆ. ಅವರಲ್ಲಿ ಕೆಲವರು ಹಿರಿಯರಾದರೆ ಇನ್ನು ಕೆಲವರು ದೂರದ ಊರಿನಿಂದ ನಗರಿಗೆ ವಲಸೆ ಬಂದವರೋ ಇನ್ಯಾರೋ ಆಗಿರುತ್ತಾರೆ. ಮಾನಸಿಕ ಸ್ಥೀಮಿತ ಕಳೆದುಕೊಂಡವರು ಸಹ ಉದ್ಯಾನದಲ್ಲಿ ಆಶ್ರಯ ಪಡೆದು, ತಮ್ಮಲ್ಲಿರುವ ಒಬ್ಬಂಟಿತನದ ಬೇಗುದಿಯನ್ನು ಬಾನಿಗೆ ಬಾಯಾನಿಸಿರುವ ಮರದ ಬುಡದ ಕೆಳಗೆ ಕೂತು ತೋಡಿಕೊಳ್ಳುತ್ತಾರೆ. ಅಲ್ಲಿಯೇ ಪಕ್ಕದ ಕಟ್ಟೆಯ ಮೇಲೆ ಸಾರ್ವಜನಿಕರು ಕೂತು, ತಮ್ಮ ಕಷ್ಟ-ಸುಖ ಹಂಚಿಕೊಳ್ಳುತ್ತ ಪಂಚಾಯಿತಿ ಕಟ್ಟೆಯನ್ನು ಸೃಷ್ಟಿಸುತ್ತಾರೆ. ಇದ್ಯಾವುದರ ಅರಿವಿಲ್ಲದ ಯುವಕನೋರ್ವ ಅಂದಿನ ಪತ್ರಿಕೆಯೊಂದು ಕೈಯ್ಯಲ್ಲಿ ಹಿಡಿದು, ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಮಸ್ತಕಕ್ಕೆ ತುರುಕುತ್ತಿರುತ್ತಾನೆ.

ಇವೆಲ್ಲಕ್ಕೂ ಮಿಗಿಲಾಗಿ ಚಿಟಗುಪ್ಪಿ ಉದ್ಯಾನ ವಧು-ವರರ ಅನ್ವೇಷಣಾ ಕೇಂದ್ರವಾಗಿಯೂ ಮಾರ್ಪಟ್ಟಿದೆ. ಸಂಬಂಧಿಗಳು ವಧು-ವರರನ್ನು ಕರೆತಂದು ಪರಸ್ಪರ ಒಪ್ಪಿಗೆಯನ್ನು ಪಡೆದು ಸಂಬಂಧಕ್ಕೆ ನಾಂದಿ ಹಾಡುತ್ತಾರೆ. ಕೆಲವು ಪಡ್ಡೆ ಹುಡುಗರು ಕೇಕೆ ಹಾಕುತ್ತ, ಪೋಲಿ ಮಾತುಗಳ ಡೈಲಾಗ್ ಹೇಳುತ್ತ ಹರಟೆ ಹೊಡೆದರೆ, ಕೆಲವು ಕುಡುಕರು ಉದ್ಯಾನದ ಉದ್ದ-ಅಗಲ ಎಷ್ಟಿದೆ ಎಂದು ಓಲಾಡುತ್ತ ಸರ್ವೇ ನಡೆಸುತ್ತಾರೆ. ಹೆಂಗಳೆಯರೇನಾದರೂ ಎದುರಾದರೆ, ಅಮಲಿನ ಕಣ್ಣಲ್ಲೇ ಅವರನ್ನು ದುರುಗುಟ್ಟಿ ನೋಡುತ್ತಾರೆ. ಯ್ಯಾಕ್... ಥೂ... ಎಂದು ಉಗಿಸಿಕೊಳ್ಳುತ್ತಾರೆ. ಸುತ್ತೆಲ್ಲ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಮಯ ಕಳೆಯುತ್ತಿದ್ದರೆ, ಕಡ್ಲೆ-ಪುರಿ ಮಾರುವ ಅಂಗವಿಲಕ ಸ್ವಾಭಿಮಾನಿಯೊಬ್ಬ ಅವರಿಗೆ ಎದುರಾಗಿ, 'ಸರ್.... ಪ್ಲೀಸ್' ಎನ್ನುತ್ತಾನೆ. ಅಷ್ಟಾದ ಕೆಲವೇ ಕ್ಷಣದಲ್ಲಿ ಟೀ ಮಾರುವ ಹುಡುಗ ಬಂದು, 'ಟೀ...' ಎಂದು ಮುಗುಳ್ನಗುತ್ತಾನೆ. ಇವೆಲ್ಲದ ನಡುವೆ ಕೊರವಂಜಿಯರು ಸದ್ದಿಲ್ಲದೆ ಅಲ್ಲಿದ್ದವರ ಹಣೆ ಬರಹ ಓದಿ ಹೇಳಿ, ತಮ್ಮ ಬದುಕಿನ ಚೀಲ ತುಂಬಿಸಿಕೊಳ್ಳುತ್ತಾರೆ.

ವೈವಿಧ್ಯಮಯ ಬದುಕು, ಭಿನ್ನ-ವಿಭಿನ್ನ ಮನಸ್ಸುಗಳು, ನಾನಾ ತೆರನಾದ ಬದುಕುಗಳು, ನಗುವಿನ ಜತೆಗೆ ಅಳು, ಕಷ್ಟ-ಸುಖದ ಪಾಠ... ಹೀಗೆ ಜೀವನದ ಸೂಕ್ಷ್ಮಾತಿ ಸೂಕ್ಷ್ಮತೆಯ ಎಷ್ಟೋ ಸಂಗತಿಗಳನ್ನು ಚಿಟಗುಪ್ಪಿ ಉದ್ಯಾನ ತಿಳಿಸಿಕೊಡುತ್ತದೆ. ಇಷ್ಟೊಂದು ಜೀವಿಗಳಿಗೆ ಅವರಿಷ್ಟದಂತೆ ನೆಮ್ಮದಿಯ ಆಸರೆ ನೀಡುತ್ತಿರುವ ಚಿಟಗುಪ್ಪಿ ಉದ್ಯಾನ ಆದಷ್ಟು ಬೇಗ ಹಸಿರಿನಿಂದ ನಳನಳಿಸುವಂತಾಗಲಿ.
(ಮೇ. ೨, ೨೦೧೭... ವಿಶ್ವವಾಣಿಯಲ್ಲಿ ಪ್ರಕಟಿತ ಬರಹ)

ಶುಕ್ರವಾರ, ಏಪ್ರಿಲ್ 28, 2017

ವಿಜ್ಞಾನಕ್ಕೇ ಸವಾಲೆಸೆದ ಗ್ರಾಮ, ಇಲ್ಲಿ ಬರೋಬ್ಬರಿ 400 ಟ್ವೀನ್ಸ್’ಗಳು!

ಎರಡು ಸಾವಿರ ಕುಟುಂಬವಿರುವ ಗ್ರಾಮದಲ್ಲಿ ಬರೋಬ್ಬರಿ ನಾಲ್ಕು ನೂರು(400) ಜೋಡಿ ಅವಳಿಗಳಿಗಳು! ತರಗತಿಯ ಕೊಠಡಿಯಲ್ಲಿ ಶಿಕ್ಷಕರಿಗೆ ತಪ್ಪದ ಗೋಳಾಟ! ವಿಜ್ಞಾನ ಲೋಕಕ್ಕೇ ಸವಾಲೆಸೆದ 'ಅವಳಿ' ಹುಟ್ಟುಗಳು!

ಇಂತಹ ಕೌತುಕದ ರಹಸ್ಯ ಸಂಗತಿಯೊಂದನ್ನು ಕೇರಳದ ಮಲಪ್ಪುುರಂ ಜಿಲ್ಲೆೆಯ ಕೊಡಿಹ್ನಿ ಗ್ರಾಮ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಅಲ್ಲಿರುವ ಸುಮಾರು ಎರಡು ಸಾವಿರ ಕುಟುಂಬಗಳ ಜನಸಂಖ್ಯೆಯಲ್ಲಿ 400 ಜೋಡಿ ಅವಳಿಗಳಿವೆ. 2008ರ ಸಮೀಕ್ಷೆಯಲ್ಲಿ 280 ಜೋಡಿ ಅವಳಿಗಳಿವೆ ಎಂದು ತಿಳಿದು ಬಂದಿತ್ತು. ನಂತರ ಅದರ ಸಂಖ್ಯೆ ಹೆಚ್ಚುತ್ತಾ ಸಾಗಿದ್ದು, ಈಗ ಸುಮಾರು 400 ಜೋಡಿ ಅವಳಿಗಳಿವೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಟ್ವೀನ್ಸ್(ಅವಳಿಗಳು)ಗಳಿರುವ ಗ್ರಾಮ ಎನ್ನುವ ಖ್ಯಾತಿಗೆ ಒಳಗಾದ ಕೊಡಿಹ್ನಿ, ದೇಶ-ವಿದೇಶದ ನೂರಾರು ಸಂಶೋಧಕರನ್ನು ತನ್ನತ್ತ ಸೆಳೆಯುತ್ತಿದೆ. 'ಬರ್ಮುಡಾ ಟ್ರೈಆ್ಯಂಗಲ್'ನಂತೆ ಅರಿವಿಗೆ ಬಾರದ ರಹಸ್ಯವನ್ನು ಬಚ್ಚಿಟ್ಟುಕೊಂಡು, ವಿಜ್ಞಾನ ಲೋಕಕ್ಕೂ ಸವಾಲೆಸೆದಿದೆ.
 ಕೊಡಿಹ್ನಿ ಅತಿ ಹೆಚ್ಚು ಜೋಡಿ ಅವಳಿಗಳನ್ನು ಹೊಂದಿರುವ ಗ್ರಾಮ ಎಂದು ಗುರುತಿಸಿಕೊಂಡಿರುವುದರಿಂದ, ಗ್ರಾಮದ ಪ್ರವೇಶ ದ್ವಾರದಲ್ಲಿಯೇ 'ಸುಸ್ವಾಗತ, ದೇವರ ಸ್ವಂತ ಅವಳಿ ಗ್ರಾಮಕ್ಕೆ' ಎಂದು ನೀಲಿ ಬಣ್ಣದ ಬೋರ್ಡ್ ಹಾಕಲಾಗಿದೆ. ರಾಷ್ಟ್ರಿಯ ಸರಾಸರಿ ಪ್ರಕಾರ 1000ಕ್ಕೆ 9ರಷ್ಟು ಅವಳಿಗಳ ಜನನವಾಗುತ್ತದೆ. ಆದೆ, ಈ ಕೊಡಿಹ್ನಿ ಗ್ರಾಮದಲ್ಲಿ 1000ಕ್ಕೆ 45ರಷ್ಟು ಪ್ರಮಾಣದಲ್ಲಿ ಅವಳಿಗಳು ಜನ್ಮ ಪಡೆಯುತ್ತಾರೆ. 2016ರ ಅಕ್ಟೋಬರ್‌'ನಲ್ಲಿ ಸಿಎಸ್‌ಐಆರ್-ಸೆಂಟರ್ ಫಾರ್ ಸೆಲ್ಯುಲರ್ ಮತ್ತು ಮಾಲಿಕ್ಯೂಲರ್ ಬಯಾಲಜಿ, ಹೈದರಬಾದ್-ಕೇರಳ ಯೂನಿವರ್ಸಿಟಿ ಆಫ ಫಿಶರಿಸ್ ಮತ್ತು ಓಶನ್ ಸ್ಟಡೀಸ್(ಕುಪೋಸ್) ಮತ್ತು ಯೂನಿವರ್ಸಿಟಿ ಆಫ್ ಲಂಡನ್ ಮತ್ತು ಜರ್ಮನಿಯ ವಿವಿಧ ಸಂಸ್ಥೆಗಳ ಜಂಟಿ ತಂಡ 'ಅವಳಿ' ರಹಸ್ಯ ಭೇದಿಸಲು ಈ ಗ್ರಾಮಕ್ಕೆ ಭೇಟಿ ನೀಡಿತ್ತು. ಸಂಶೋಧಕರು ಡಿಎನ್‌ಎ ಪರೀಕ್ಷೆಗಾಗಿ ಅವಳಿಗಳ ಲಾಲಾರಸ ಮತ್ತು ಕೂದಲು ಮಾದರಿಯನ್ನು ಸಂಗ್ರಹಿಸಿದ್ದರು.

ಅಧ್ಯಯನದ ನಂತರ ಕುಪೋಸ್'ನ ಪ್ರೊ. ಇ. ಪ್ರೇಥಾಮ್, ಇಷ್ಟೊಂದು ಅವಳಿಗಳು ಇಲ್ಲಿಯೇ ಏಕೆ ಜನಿಸುತ್ತವೆ? ಎನ್ನುವುದರ ಕುರಿತು ಅನೇಕ ಊಹಾಪೋಹಗಳಿದ್ದು, ಕೆಲವರು ಇದು ಆನುವಂಶಿಕ ಎನ್ನುತ್ತಾರೆ. ಆದರೆ, ಹಳ್ಳಿಯಲ್ಲಿನ ಗಾಳಿ ಅಥವಾ ನೀರಿನ ನಿರ್ದಿಷ್ಟ ಅಂಶ ಈ ವಿದ್ಯಮಾನಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಕೊಡಿಹ್ನಿ ಜನರ ಮಾದರಿಗಳನ್ನು ಬೇರೆ ಸಮುದಾಯದ ಮಾದರಿಗಳ ಜತೆಗೆ ಹೋಲಿಕೆ ಮಾಡಿ ನಿಖರ ಕಾರಣವೇನೆಂದು ತಿಳಿಯಬೇಕಿದೆ ಎಂದು ಹೇಳುತ್ತಾರೆ.
 ಕೊಡಿಹ್ನಿ ಗ್ರಾಮದಲ್ಲಿ ಕೆಲವು ಕುಟುಂಬ ಮೂರು ತಲೆ ಮಾರಿನಿಂದಲೂ ವಾಸಿಸುತ್ತಿದ್ದರೆ, ಇನ್ನು ಕೆಲವು ಕುಟುಂಬ ನಗರ ಪ್ರದೇಶಗಳಿಗೆ ವಲಸೆಯೂ ಹೋಗಿದೆ. ಮತ್ತೆ ಕೆಲವು ವಲಸೆ ಹೋಗಿ ಮರಳಿ ಬಂದಿದ್ದಾರೆ. ಹಾಗೆಯೇ ಇನ್ನು ಕೆಲವರು ಆ ಗ್ರಾಮಕ್ಕೆ ಬಂದು ವಾಸ್ತವ್ಯವನ್ನೂ ಮಾಡಿದ್ದಾರೆ. ಧರ್ಮ, ಸಂಸ್ಕೃತಿ ಹೊರತಾಗಿ ಅಲ್ಲಿ ವಾಸಿಸುವ ಜನರನ್ನು ಮೂರು ತಲೆ ಮಾರುಗಳಿಂದ 'ಅವಳಿ' ಎನ್ನುವ ವಿಲಕ್ಷಣ ಎಳೆಯೊಂದು ಬಲವಾಗಿ ಬಂಧಿಸುತ್ತಿದೆ.

2006 ರಲ್ಲಿ ಸಮೀರಾ ಮತ್ತು ಫೆಮಿನಾ ಎಂಬ ಅವಳಿ ಜೋಡಿಯಿಂದ ಜಗತ್ತಿಗೆ ಕೊಡಿಹ್ನಿ ಗ್ರಾಮದ ಅಚ್ಚರಿ ಬೆಳಕಿಗೆ ಬಂದಿತು. ಆ ಸಮಯದಲ್ಲಿ ಈ ಅವಳಿ ಸಹೋದರಿಯರು ಐಐಎಸ್ಸಿ ಶಾಲೆಯಲ್ಲಿ 8ನೆ ತರಗತಿಯ ವಿದ್ಯಾರ್ಥಿಯಾಗಿದ್ದರು. ಅವರಿಬ್ಬರನ್ನು ಗುರುತಿಸುವುಯಾವುದು ಶಾಲೆಯ ಶಿಕ್ಷಕರಿಗೆ ತಲೆ ನೋವಿನ ವಿಷಯವಾಗಿತ್ತು. ಇವರ ಹೊರತಾಗಿಯೂ ಅದೇ ತರಗತಿಯಲ್ಲಿ ಎಂಟು ಜೊಡಿ ಅವಳಿಗಳು ಅಭ್ಯಸಿಸುತ್ತಿದ್ದವು. ಬೇರೆ ತರಗತಿಯಲ್ಲಿಯೂ ಅವಳಿ ಸಹೋದರ, ಸಹೋದರಿಯರು ಎಂದು ಒಟ್ಟು 24 ಜೋಡಿಗಳಿದ್ದವು. ಶಿಕ್ಷಕರಿಗೆ ವೈಯಕ್ತಿಕವಾಗಿ ಅವಳಿಗಳನ್ನು ಗುರುತಿಸುವುದೇ ದೊಡ್ಡ ಸವಾಲಿನ ಪ್ರಶ್ನೆಯಾಗಿತ್ತು. ಪ್ರತಿ ದಿನ ಗೊಂದಲದಲ್ಲಿಯೇ ಹೆಸರು ಹೇಳುತ್ತ ತರಗತಿ ಮುಗಿಸುತ್ತಿದ್ದರು. ಈ ಗೊಂದಲ ಶಾಲೆಯಲ್ಲಿ ಈಗಲೂ ಮುಂದುವರಿದ್ದಿದ್ದು, ಅದು ಮತ್ತಷ್ಟು ಹೆಚ್ಚುತ್ತಲೇ ಸಾಗಿದೆ ಎಂದು ಟ್ವೀನ್ಸ್ ಸಂಘಟನೆ ಅಧ್ಯಕ್ಷ ಭಾಸ್ಕರನ್ ಹೇಳುತ್ತಾರೆ.
2008 ರಲ್ಲಿ ನಾವು ಸಣ್ಣ ಸಮಿತಿಯನ್ನು ರಚಿಸಿ, ಗ್ರಾಮದ ಎಲ್ಲಾ ಮನೆಗಳ ಸಮೀಕ್ಷೆ ನಡೆಸಿದ್ದೇವು. 280 ಜೊಡಿ ಅವಳಿಗಳಿರುವುದು ಬೆಳಕಿಗೆ ಬಂದು ಆಶ್ಚರ್ಯವಾಯಿತು. ಹಳ್ಳಿಯಲ್ಲಿ ಕೆಲವು ಸಂಶೋಧನೆಗಳನ್ನುನಡೆಸಲಾಯಿತು. ಇಂತಹ ವಿಚಿತ್ರ ವಿದ್ಯಮಾನವಿರುವ ಇನ್ನೊಂದು ಸ್ಥಳ ಬ್ರೆಜಿಲ್‌'ನಲ್ಲಿದೆ ಎಂದು ತಿಳಿದುಬಂದಿದೆ. ಏನೇ ಇರಲಿ, ನಮ್ಮದೇ ಆದ ಒಂದು ಸಂಘಟನೆ ರಚಿಸಿಕೊಂಡು ಕಾನೂನಾತ್ಮಕವಾಗಿ ನೋಂದಣಿ ಮಾಡಿ, ಅವಳಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ ಎನ್ನುತ್ತಾರೆ ಭಾಸ್ಕರನ್.

ಕೊಡಿಹ್ನಿಯ ಮಜಿದ್ ಎಂಬಾತ ಪರಸ್ಥಳದ ಸಂಶದಾ ಎಂಬಾಕೆಯನ್ನು 2000ದಲ್ಲಿ ಮದುವೆಯಾಗುತ್ತಾರೆ. ಮೊತ್ತ ಮೊದಲ ಬಾರಿಗೆ ಆ ಗ್ರಾಮದಲ್ಲಿ ಅವರಿಗೆ ಅವಳಿ ಮಕ್ಕಳು ಜನಿಸುತ್ತವೆ. ಆರಂಭದಲ್ಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಅವರು, ನಂತರದ ವರ್ಷಗಳಲ್ಲಿ ದೇಶದಲ್ಲಿಯೇ ಕೊಡಿಹ್ನಿ ಅತಿ ಹೆಚ್ಚು ಅವಳಿಗಳನ್ನು ಹೊಂದಿರುವ ಗ್ರಾಮ ಎಂದು ಅರಿವಾಗುತ್ತದೆ. ಅದಕ್ಕೆ ಕಾರಣವೇನೆಂದು ತಿಳಿಯ ಹೊರಟಾಗ ಮಜಿದ್ ಅವರ ತಂದೆ ಅವಳಿ ಸಹೋದರರು ಹೊಂದಿದ್ದರು ಎನ್ನುವುದು ತಿಳಿಯುತ್ತದೆ.

ಸರಕಾರಿ ಉದ್ಯೋಗಿಯಾಗಿ ನಿವೃತ್ತಿಯಾದ ಸುಕುಮಾರ(71) ಕುಟುಂಬ ಕೊಡಿಹ್ನಿ ಗ್ರಾಮದಲ್ಲಿ ಎರಡು ತಲೆ ಮಾರುಗಳಿಂದ ವಾಸಿಸುತ್ತಿದೆ. ಈವರೆಗೆ ಅವರ ಕುಟುಂಬ ಒಂದೇ ಒಂದು ಅವಳಿಗಳನ್ನು ಹೊಂದಿರಲಿಲ್ಲವಾಗಿತ್ತು. ಆದರೆ, ಅವರ ಮಗಳು ಪ್ರಸಿನಾ(31) ಅವಳಿಗೆ ಜನ್ಮ ನೀಡುವ ಮೂಲಕ ಕುಟುಂಬದ ಕುತೂಹಲಕ್ಕೆ ಕಾರಣವಾಗಿದ್ದಾರೆ. ವಿಶೇಷವೆಂದರೆ ಪ್ರಸಿನಾ ಮದುವೆ ನಂತರ ಗಂಡನ ಜತೆ ಕತಾರ್ಗೆಯಲ್ಲಿ ವಾಸಿಸುತ್ತಿದ್ದಳು. ಆವಾಗವಾಗ ಎನ್ನುವಂತೆ ಕೊಡಿಹ್ನಿ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಳು. ಈ ಭೇಟಿಯೇ ಅವಳ ಅವಳಿ ಮಗುವಿಗೆ ಕಾರಣವಾಗಿದೆ ಎಂದು ಸುಕುಮಾರ ಕುತೂಹಲದ ಉತ್ತರ ನೀಡುತ್ತಾರೆ.

ಒಟ್ಟಾರೆ... ಕೇರಳದ ಕೊಡಿಹ್ನಿ ವಿಜ್ಞಾನಕ್ಕೆ ಹಾಗೂ ಸಂಶೋಧಕರಿಗೆ ಸವಾಲೆಸೆದ ಗ್ರಾಮ! ಆದಷ್ಟು ಬೇಗ ಅಲ್ಲಿಯ 'ಅವಳಿ ವೃತ್ತಾಂತ'ದ ಹಿಂದಿನ ವೈಜ್ಞಾನಿಕ ಕಾರಣವೇನೆಂಬುದು ಬೆಳಕಿಗೆ ಬರಲಿ.

ಬುಧವಾರ, ಏಪ್ರಿಲ್ 26, 2017

ಒಂದು ಬಾರಿ 'ಕಾವೇರಿ' ತಾಯಿ ಆಗಿ ಯೋಚಿಸಿ

ಪುಟ್ಟ ಕಂದಮ್ಮ ಕಾವೇರಿ ಇನ್ನು ನೆನಪು ಮಾತ್ರ. ಬಟ್ಟಲು ಕಣ್ಣುಗಳಲ್ಲಿ ಆಕೆ ಕಾಣುತ್ತಿದ್ದ ಅದೆಷ್ಟೋ ಕನಸುಗಳು ಆಳದ ಕೊಳವೆ ಬಾವಿಯಲ್ಲಿ ಹೂತು ಹೋಗಿವೆ. ಅದನ್ನು ನನಸು ಮಾಡಬೇಕೆನ್ನುವ ಹೆತ್ತಾಕೆಯ ಕನಸುಗಳು ಸಹ ಕತ್ತಲ ಕೂಪದಲ್ಲಿ ಸಮಾಧಿಯಾಗಿವೆ!
 ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿನ ತೋಟವೊಂದರಲ್ಲಿ ಕೊರೆಸಲಾದ ಕೊಳವೆ ಬಾವಿಯಲ್ಲಿ ಶನಿವಾರ ಅರಿವಿಲ್ಲದೆ ಇಟ್ಟ ಹೆಜ್ಜೆಯೊಂದು ಕಾವೇರಿಯನ್ನು ಆಪೋಶನ ತೆಗೆದುಕೊಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆಗಷ್ಟೇ ತೋಟದ ಕೆಲಸ ಮುಗಿಸಿಕೊಂಡು ಅಪ್ಪ-ಅಮ್ಮರ ಕೈ ಹಿಡಿದು ಬರುತ್ತಿದ್ದ ಪುಟ್ಟ ಬಾಲೆ, ಅನತಿ ದೂರ ಬರುತ್ತಿದ್ದಂತೆ ಬೆರಳಿನ ಹಿಡಿತ ಸಿಡಿಲಗೊಳಿಸಿ ಮುಂದೋಡೋಡಿ ಹೋದಳು. ಮುದ್ದು ಮಗಳ ಪುಟ್ಟ ಪುಟ್ಟ ಹೆಜ್ಜೆ, ತಲೆಯಾನಿಸಿ ಓಡುವ ಭಂಗಿಯನ್ನು ಹಿಂದಿನಿಂದ ಅಪ್ಪ-ಅಮ್ಮರು ಧನ್ಯೋಸ್ಮಿ ಸ್ಥಿತಿಯಿಂದ ನೋಡುತ್ತ ಮುಂದಡಿಯಿಡುತ್ತಿದ್ದರು. ಅತೀತವಾದ ಸಾರ್ಥಕ್ಯ ಆನಂದದಲ್ಲಿ ಅವರು ಮುಳುಗೇಳುತ್ತಿದ್ದರು. ನೋಡು ನೋಡುತ್ತಿದ್ದಂತೆ ಕಾವೇರಿ ಮುಗ್ಗರಿಸಿದಂತಾದಳು, ಕ್ಷಣಮಾತ್ರದಲ್ಲಿ ಆಕೆಯ ಎರಡು ಕೈಗಳು ಮೇಲಿನಿಂದ ಭೂಮಿಯಾಳಕ್ಕೆ ಸರಿದು ಹೋದವು. ಆನಂದದ ಕಡಲಲ್ಲಿ ತೇಲುತ್ತಿದ್ದ ಹಡಿದ ಜೀವಕ್ಕೆ ಏನಾಗುತ್ತಿದೆ ಎನ್ನುವುದೇ ಅರಿವಾಗಲಿಲ್ಲ. ಮಗಳು ಕರಗಿಹೋದ ಜಾಗಕ್ಕೆ ಬಂದು ನೋಡುವಷ್ಟರಲ್ಲಿ, ಪಾತಾಳದಿಂದಲೋ ಎನ್ನುವಂತೆ ಕ್ಷೀಣ ದನಿಯೊಂದು ಅಮ್ಮಾ... ಅಮ್ಮಾ ಎಂದು ಕೇಳಿಬರುತ್ತಿತ್ತು. ಕರುಳ ಬಳ್ಳಿ ಕತ್ತರಿಸಿದ ಅನುಭವ!

ಕೊಳವೆ ಬಾವಿಯಲ್ಲಿ ಆರು ವರ್ಷದ ಹಸುಗಲ್ಲದ ಮಗು ಕಾವೇರಿ ಬೀಳುವುದನ್ನು ಹೆತ್ತಾಕೆ ಸವಿತಾ ಹಾಗೂ ಅಪ್ಪ ಅಜಿತ್ ಕಣ್ಣಾರೆ ಕಂಡಿದ್ದರು. ಕಣ್ಣೆದುರಿಗೆಯೇ ಕರಳು ಕುಡಿ ಕಣ್ಮರೆಯಾಗಿ, ಅದರ ಜೀವ ಭಯದ ಕೂಗು ಕಿವಿಗಪ್ಪಳಿಸುತ್ತದೆ ಎಂದರೆ ಅದಕ್ಕಿಂತ ದೊಡ್ಡ ದುರಂತ ಇನ್ನೇನಿದೆ? ಶನಿವಾರ ಸಾಯಂಕಾಲ 5ರ ವೇಳೆಗೆ ಕಾಲು ಜಾರಿ ಬಿದ್ದಿದ್ದ ಕಂದಮ್ಮನ ರಕ್ಷಣೆಗೆ ರಾತ್ರಿ ಹಗಲೆನ್ನದೆ ಬರೋಬ್ಬರಿ 53 ಗಂಟೆಗಳ ಕಾಲ ತಾಲೂಕಾಡಳಿತ, ಜಿಲ್ಲಾಡಳಿತ ಹರಸಾಹಸ ಪಟ್ಟಿತು. ಕತ್ತಲ ಕೂಪದಲ್ಲಿ ಉಸಿರು ಬಿಗಿಹಿಡಿದುಕೊಂಡು ಪ್ರಾಣಕ್ಕಾಗಿ ಒದ್ದಾಡುತ್ತಿದ್ದ ಮಗುವಿದ್ದಲ್ಲಿಗೆ ರಕ್ಷಣಾ ಪಡೆ ಸಿಬ್ಬಂದಿ ತಲುಪುವವರೆಗೆ ಸಮಯ ಮೀರಿತ್ತು. ಮಗಳು ಜೀವಂತವಾಗಿ ಮೇಲೆದ್ದು ಬರುತ್ತಾಳೆಂದು ಆಸೆ ಕಂಗಳಿಂದ ನೋಡುತ್ತಿದ್ದ ಹೆತ್ತಾಕೆಗೆ ಬರಸಿಡಿಲು ಬಡಿದ ಅನುಭವ!
 ಇಂತಹ ಘೋರ, ಅಷ್ಟೇ ಕ್ರೂರ ಘಟನೆಗಳು ಆವಾಗೀವಾಗ ನಮ್ಮ ನಡುವೆ ನಡೆಯುತ್ತಲೇ ಇರುತ್ತವೆ. ಕೊಳವೆ ಬಾವಿಯಲ್ಲಿ ಸಮಾಧಿಯಾದ ಹಸಿ ಜೀವ ಮೇಲೆ ಬರುವವರೆಗೂ ಕಾನೂನು, ನಿಯಮಾವಳಿಗಳು, ಶಿಕ್ಷೆ ಎಂಬೆಲ್ಲ ಮಾತುಗಳು ಜೋರು ದನಿಯಲ್ಲಿ ಸದ್ದಾಗಿ ಸುದ್ದಿಯಾಗುತ್ತವೆ. ಆಳುವ ಪಕ್ಷದ ಜತೆಗೆ ಕೆಲವು ಜನಪ್ರತಿನಿಧಿಗಳು ಮೈ ಕೊಡವಿಕೊಂಡು ಎದ್ದೇನೋ ಬಿದ್ದೇನೋ ಎನ್ನುತ್ತ ಘಟನಾ ಸ್ಥಳಕ್ಕೆ ಬಂದು ಮರುಗುತ್ತಾರೆ, ಇನ್ನು ಕೆಲವರು ಮೊಸಳೆ ಕಣ್ಣೀರು ಹಾಕುತ್ತಾರೆ! ಘಟನೆಯ ಕಹಿ ನೆನಪು ವಾರ, ಹದಿನೈದು, ತಿಂಗಳ ಕಾಲ ಮಾತ್ರ ಹಸಿಯಾಗಿರುತ್ತದೆ. ನಂತರ ದಿನಗಳುರುಳಿದಂತೆ ಸಾಮಾನ್ಯರಾದಿಯಾಗಿ ಎಲ್ಲರಿಂದಲೂ ಮಾಸಿ ಹೋಗುತ್ತದೆ. ಪಾಪದ ಇನ್ನೊಂದು ಮಗು ಮತ್ತಿನ್ನೆಲ್ಲಿಯಾದರೂ ಕೊಳವೆ ಬಾವಿಯಲ್ಲಿ ಬಿದ್ದಾಗ ಮಾತ್ರ ಕಾನೂನು, ನಿಯಮಾವಳಿ ಮತ್ತೆ ಗರಿಗೆದರುತ್ತದೆ. ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಸಾಧ್ಯವಾದರೆ ಒಂದು ಬಾರಿ ಆ ಮುದ್ದು ಕಂದಮ್ಮ ಕಾವೇರಿಯ ತಾಯಿಯಾಗಿ ಯೋಚಿಸಿ. ಕಣ್ಮುಂದೆಯೇ ಮಗಳು ಇನ್ನಿಲ್ಲವಾಗುತ್ತಾಳೆ, ಪಾತಾಳದಿಂದ ಆಕೆಯ ಪ್ರಾಣ ಭಿಕ್ಷೆಯ ಕೂಗು ಕೇಳಿ ಬರುತ್ತದೆ, ಗಂಟೆ ಕಳೆಯುವುದರೊಳಗೆ ಜನಸಾಗರ ಸೇರುತ್ತದೆ, ದೊಡ್ಡ ದೊಡ್ಡ ಯಂತ್ರಗಳು ಮಣ್ಣಿನ ರಾಶಿಯನ್ನು ಎತ್ತಿ ಹಾಕುತ್ತವೆ, ಎಂದೂ ನೋಡದ ಜನಪ್ರತಿನಿಧಿಗಳು ಎದುರಾಗಿ ಸಾಂತ್ವನದ ಮಾತು ಹೇಳುತ್ತಾರೆ, ಹಗಲು ಕಳೆದು ರಾತ್ರಿ ಎದುರಾಗುತ್ತವೆ. ಇತ್ತ ಸದ್ದಿಲ್ಲದೆ ಸಮಯ ಜಾರುತ್ತಿದ್ದರೆ, ಅತ್ತ ಆಳದಲ್ಲಿ ಬಿದ್ದ ಮಗುವಿನ ಮಿಸುಕಾಟ ಸಹ ನಿಧಾನವಾಗಿ ಸ್ತಬ್ಧವಾಗುತ್ತದೆ. ಇದ್ಯಾವುದರ ಅರಿವಿಲ್ಲದ ಹೆತ್ತಾಕೆ ಸವಿತಾ ಮಾತ್ರ ನನ್ನ ಮಗಳು ಬದುಕಿ ಬರುತ್ತಾಳೆ ಎನ್ನುವ ನಿರೀಕ್ಷೆಯಿಂದ ಬೊಗಸೆಯೊಡ್ಡಿ ನೂರಾರು ದೇವರಿಗೆ ಪ್ರಾರ್ಥನೆ, ಹರಕೆ ಹೊರುತ್ತಾಳೆ. ಅವಳ ಜತೆ ಸಹಸ್ರಾರು ಕೈಗಳು ಭಗವಂತನಲ್ಲಿ ಕಾವೇರಿಯ ಪ್ರಾಣ ಉಳಿಸು ಎಂದು ಬೇಡಿಕೊಳ್ಳುತ್ತವೆ. ವಿಧಿಯ ಮುಂದೆ ದೇವರ ಆಟ ಏನೂ ನಡೆಯದು ಎನ್ನುವ ಸತ್ಯ ಕಾರಿರುಳ ರಾತ್ರಿಯಲಿ ಅನಾವರಣವಾಗುತ್ತದೆ.

ಮಗಳನ್ನು ಕಳೆದುಕೊಂಡು ಎದೆಬಡಿದುಕೊಳ್ಳುತ್ತ ಗೋಗರೆಯುವ ತಾಯಿಯ ಆಕ್ರಂದನ, ಅಧಿಕಾರದ ಸುಪ್ಪತ್ತಿಗೆಯಲ್ಲಿ ಮೈಮರೆಯುವ ಆಳುವ ವರ್ಗಕ್ಕೆ ಎಲ್ಲಿ ಅರ್ಥವಾಗಬೇಕು? ಹೂತ ಮಗುವಿನ ಮೇಲೆತ್ತುವ ಕಾರ್ಯಾಚರಣೆ ನೋಡುತ್ತಲೇ ಪ್ರಜ್ಞೆ ಕಳೆದುಕೊಂಡ ಹೆತ್ತಾಕೆಯ ಸ್ಥಿತಿ, ದರ್ಪದಿಂದ ಮೆರೆವ ಜನಪ್ರತಿನಿಧಿಗಳಿಗೆ ಎಲ್ಲಿ ಅರಿವಾಗಬೇಕು? ನಿರುಪಯುಕ್ತ ಕೊಳವೆ ಬಾವಿ ಎಂದು ಮಣ್ಣು ಮುಚ್ಚದ  ಅದರ ವಾರಸುದಾರರಿಗೆ ಮಕ್ಕಳನ್ನು ಕೆಳೆದುಕೊಂಡವರ ನೋವೇನೆಂಬುದು ಎಲ್ಲಿ ಅರ್ಥವಾಗಬೇಕು?   ಕಂದಮ್ಮ ಆಡಿ, ಬೆಳೆದ ಮಡಿಲು ಬರಿದಾಗಿದೆ ಎನ್ನುವ ಕಟು ಸತ್ಯ ಒಂಬತ್ತು ತಿಂಗಳು ಹೊತ್ತ ಆ ಉದರದ ಕರುಳು ಹೇಗೆ ಸಹಿಸಿಕೊಳ್ಳಬೇಕು? ಕುಡಿಯ ಮುಖ ನೋಡದ ಹೊರತು ಅನ್ನ, ಆಹಾರ, ನೀರು ಸೇವಿಸಲಾರೆನೆಂದು ಶಪಥ ಮಾಡಿದ ಹೆತ್ತಾಕೆಗೆ, ಕಣ್ಮುಚ್ಚಿದ ಒಡಲ ಕುಡಿಯನ್ನು ನೋಡುವ ಪರಿ ಎಂತಹ ವೈರಿಗೂ ಬಾರದಿರಲಿ!

ಇಂತಹ ಘಟನೆ ಇನ್ನೆಂದೂ ಮರುಕಳಿಸದಿರಲಿ, ಎಲ್ಲ ಕಂದಮ್ಮಗಳು ನಮ್ಮದೇ ಎನ್ನುವ ಭಾವ ಎಲ್ಲ ಅಧಿಕಾರಿಗಳಲ್ಲೂ ಒಡಮೂಡಲಿ, ಕೇವಲ ಕಾಗದ ಪತ್ರಕ್ಕಷ್ಟೇ ಕಾನೂನು, ನಿಯಮಾವಳಿ ಎನ್ನುವ ಜಡ್ಡು ಗಟ್ಟಿದ ಮನಸ್ಸು ಹೊಡೆದೋಡಲಿ. ಇದಕ್ಕೆಲ್ಲ ಕಾವೇರಿಯ ಸಾವೇ ಕೊನೆಯಾಗಿ, ಅವಳ ಆತ್ಮವೇ ಸಾಕ್ಷಿಯಾಗಲಿ.

ಮಂಗಳವಾರ, ಏಪ್ರಿಲ್ 25, 2017

ವಿಕೆಂಡ್'ನಲ್ಲಿ ಜೀವನ ಪ್ರೀತಿ ಬಿಚ್ಚಿಟ್ಟ ಜಯಂತಣ್ಣ

ಬದುಕು, ಭಾವನೆ, ಬರವಣಿಗೆ.... ಇದು ಸಾಹಿತಿಗಳಲ್ಲಿರುವ ಮೂಲ ಬಂಡವಾಳ. ಬದುಕಿನ ಚಿತ್ರಣವನ್ನೇ ಅಕ್ಷರ ರೂಪಕ್ಕೆ ಇಳಿಸುತ್ತಾರೆ, ಭಾವನೆಗಳನ್ನೇ ಗೀಚುತ್ತಾರೆ. ಕಲ್ಪನಾ ಲೋಕದಲ್ಲಿ ವಿಹರಿಸಿ ಪದಗಳ ದಂಡೆ ಕಟ್ಟುತ್ತಾರೆ. ಇದರ ಹೊರತಾಗಿಯೂ ಕಾಣದ ಬದುಕೊಂದು ಅವರಲ್ಲಿ ಉಸಿರಾಡುತ್ತಿರುತ್ತದೆ. ಹೇಳಿಕೊಳ್ಳಲಾಗದ ಎಷ್ಟೋ ರಸಾನುಭವಗಳು ಅಲ್ಲಿ ಹುದುಗಿರುತ್ತವೆ.
ಇಂತಹ ಸೂಕ್ಷ್ಮವೊಂದು ಅರಿವಾಗಿದ್ದು ವಿಕೆಂಡ್-ವಿಥ್-ರಮೇಶ ಕಾರ್ಯಕ್ರಮದಲ್ಲಿ ಜಯಂತಿ ಕಾಯ್ಕಿಣಿ ಅವರ ಜೀವನ ಪ್ರೀತಿ ಮಾತುಗಳು. ಭಾನುವಾರ ಝೀ ವಾಹಿನಿಯಲ್ಲಿ ಪ್ರಸಾರವಾದ ಮೂರು ಗಂಟೆಗಳ ಸಂಪೂರ್ಣ ಎಪಿಸೋಡ್‌ನಲ್ಲಿ ಅವರು, ಎಲ್ಲಿಯೂ ಮೈಮರೆತು ಮಾತನಾಡಿಲ್ಲ; ಹಾಗೆಯೇ ಬದುಕಿನ ಪ್ರೀತಿಗೆ ಚ್ಯುತಿ ತಂದಂತಹ ಘಟನೆಗಳನ್ನು ಎಲ್ಲಿಯೂ ನೆನಪಿಸಿಕೊಂಡಿಲ್ಲ. ಹಾಗಂತ ಅವರ ಬದುಕಲ್ಲಿ ನೋವುಗಳೇ ಇರಲಿಲ್ಲ, ದುಃಖಗಳನ್ನೇ ಅನುಭವಿಸಿಲ್ಲ ಎಂದರ್ಥವಲ್ಲ. ತಮ್ಮಲ್ಲಿರುವ ಕೊರಗನ್ನು ಸಹ ಪ್ರೀತಿಯಿಂದಲೇ, ಸ್ಫೂರ್ತಿದಾಯಕವಾಗಿಯೇ ಹಂಚಿಕೊಂಡರು. ಅವರಾಡಿರುವ ಪ್ರತಿಯೊಂದು ಮಾತು ಸಹ, ಬದುಕು ಇನ್ನಿಲ್ಲ ಎಂದು ಮಖಾಡೆ ಮಲಗಿದವನನ್ನು ಬಡಿದೆಬ್ಬಿಸುವಂತಿತ್ತು.
ಅವರ ಬಾಲ್ಯದ ಬದುಕು ಎಲ್ಲರಂತೆ ಪುಂಡು-ಪೋಕರಿಯಂತಿದ್ದರೂ, ಅಕ್ಷರದ ಮೇಲೆ ಪ್ರೇಮ ಹಾಗೂ ಆಸಕ್ತಿ ಹೊಂದಿದ್ದರು. ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಸ್ನೇಹಿತರಿಗೆ ಪ್ರೇಮ ಪತ್ರ ಬರೆದುಕೊಡುತ್ತ ಕನ್ನಡದಲ್ಲಿ ಕೃಷಿ ಮಾಡುತ್ತ, ಪದಗಳ  ಜೊತೆಗೆ ಆಟವಾಡುತ್ತಿದ್ದರು. ಗೋಕರ್ಣ, ಕುಮಟಾ, ಅರಬ್ಬೀಯ ತಟ, ಅಘನಾಶಿನ ಒಡಲು, ತದಡಿ ಬಂದರು ಇವೇ ಅವರ ಬಾಲ್ಯದ ಒಡನಾಡಿ. ಅಲ್ಲಿಯ ಮಣ್ಣಿನ ಗುಣ ಹಾಗೂ ಸುತ್ತಲಿನ ಪರಿಸರವೇ ಅವರನ್ನು ನಾಡು ಗುರುತಿಸುವಂತೆ ಮಾಡಿದ್ದು ಎಂದು ಅವರ ಆಪ್ತ ಸ್ನೇಹಿತರೇ ತುಂಬು ಹೃದಯದಿಂದ ಹೇಳಿಕೊಳ್ಳುತ್ತಾರೆ.
ಭಾನುವಾರದ ಸಪೂರ್ಣ ಎಪಿಸೋಡ್ ಸಂಗ್ರಹಯೋಗ್ಯ. ಆದರೂ ಅದರಲ್ಲಿ ಅವರು ಹೇಳಿದ ಎರಡು ಮಾತುಗಳು ಚಿಂತನೆಗೆ ಒಡ್ಡುತ್ತವೆ. ಮೊದಲನೆಯದು, ಅವರ ಕೈ ಹಿಡಿದಾಕೆ ಸ್ಮೀತಾ, ಬುದ್ಧಿವಂತೆ, ಅಷ್ಟೇ ಪ್ರತಿಭಾವಂತೆ. ಅವಳು ತನ್ನೆರಡು ಮಕ್ಕಳನ್ನು ಸಾಕಿ, ಸಲುಹುವುದರಲ್ಲೇ ಬದುಕು ವ್ಯಯಿಸಿದಳು. ಅವಳಲ್ಲಿರುವ ಪ್ರತಿಭೆಗೆ ಸೂಕ್ತ ನ್ಯಾಯ ಕೊಡಲು ನನ್ನಿಂದ ಸಾಧ್ಯವಾಗಿಲ್ಲ ಎನ್ನುವ ಕೊರಗು ಈಗಲೂ ಕಾಡುತ್ತಿದೆ ಎಂದು ಜಯಂತ ಅವರು ಬಿಚ್ಚಿಟ್ಟಿದ್ದು. ಎಷ್ಟೋ ಜನರು ಸಂಸಾರ ಸುಖಮಯವಾಗಿದ್ದರೆ ಸಾಕು, ಬದುಕು ಆನಂದಮಯ ಎಂದು ತೇಲಾಡುತ್ತಿರುತ್ತಾರೆ. ಆದರೆ, ಇಲ್ಲಿ ಜಯಂತ ಅವರು, ತನ್ನ ಸಂಸಾರ-ಮಕ್ಕಳು ಎನ್ನುವ ಸ್ವಾರ್ಥ ಮರೆತು, ಮಡದಿಯಲ್ಲಿರುವ ಪ್ರತಿಭೆ ಹಾಗೆಯೇ ಉಳಿದುಹೋಯಿತಲ್ಲ ಎಂದು ಕೊರಗುತ್ತಾರೆ.
ಎರಡನೆಯದು, ನಾವೆಲ್ಲ ನಿದ್ದೆಗೆ ಜಾರಿದಾಗ, ಚಾಲಕನೊಬ್ಬನೇ ಎಚ್ಚರವಾಗಿ ವಾಹನ ಓಡಿಸುತ್ತಾನೆ. ಎಲ್ಲರ ಪ್ರಾಣ ಆತನಲ್ಲಿಯೇ ಕೇಂದ್ರೀಕೃತವಾಗಿರುತ್ತದೆ. ಆತನ ಕರ್ತವ್ಯ ಹಾಗೂ ಜವಾಬ್ದಾರಿ ಮುಂದೆ ಎಲ್ಲರೂ ಶೂನ್ಯ ಎನ್ನುವ ಅವರ ಸೂಕ್ಷ್ಮ ಯೋಚನೆಗೆ ತಲೆಬಾಗಲೇ ಬೇಕು. ಇದು ಅವರಲ್ಲಿರುವ ಸೂಕ್ಷ್ಮ ಮತಿಯನ್ನು ತಿಳಿಸಿಕೊಡುತ್ತದೆ. ಸಾಮಾನ್ಯರ ಜೊತೆಯಲ್ಲಿಯೇ ಕೂಡಿ, ಆಡಿ ಬೆಳೆದ ಜಯಂತ ಕಾಯ್ಕಿಣಿಯವರ ಬದುಕಲ್ಲಿ, ಗೋಕರ್ಣ, ಕುಮಟಾ ಮಣ್ಣಿನ ವಾಸನೆಯಿದೆ. ಅದರ ಘಮಲು ಕನ್ನಡ ಸಾರಸ್ವತ ಲೋಕದಲ್ಲಿ ಅವರ ಅಪ್ಪ ಗೌರೀಶ ಕಾಯ್ಕಿಣಿಯವರಂತೆ ಸದಾ ಪಸರಿಸುತ್ತಿರಲಿ. ಅವರ ಜೀವನ ಪ್ರೀತಿಯ ಬದುಕು ಇತರರಿಗೂ ಜೀವನೋತ್ಸಾಹ ತುಂಬಲಿ.
ಇದರ ಹೊರತಾಗಿಯೂ..... 
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ತು ಅಂತ ಸಂಭ್ರಮ ಪಡುತ್ತೇವೆ. ಅದು ಹೇಗಿದೆ ಅಂದ್ರೆ ಮುಳುಗುತ್ತಿರುವ ಟೈಟಾನಿಕ್ ನಲ್ಲಿ ವಿಂಡೋ ಸೈಡ್ ಸೀಟ್ ಸಿಕ್ತು ಅಂತ ಖುಷಿಪಟ್ಟಂಗೆ.
-ಕನ್ನಡ ಕಲಿತೋನು, ನಂಬಿಕೊಂಡವನು ಬೆಂಗಳೂರಿಗೆ ಬಂದವನು ಏನ್ ಮಾಡಬೇಕು? ಆಪಾರ್ಟ್ ಮೆಂಟ್ ನಲ್ಲಿ ಇಸ್ತ್ರಿ ಮಾಡಬೇಕಾ? ಅಥವಾ ಸೊಪ್ಪು ಮಾರಬೇಕಾ? ಓಲಾ ಟ್ಯಾಕ್ಸಿ ಓಡಿಸಬೇಕಾ? ಅನ್ನೋದೆ ದೊಡ್ಡ ಪ್ರಶ್ನೆ. ಬೆಂಗಳೂರಿನ ಟ್ರಾಫಿಕ್'ನಲ್ಲಿ ಎಲ್ಲರದ್ದೂ ಒಂದು ಸಾಮಾನ್ಯ ದೂರು ಇರುತ್ತದೆ. ಈ ಡ್ರೈವರ್'ಗಳು ತುಂಬಾ ಹಾರ್ನ್ ಮಾಡ್ತಾರೆ ಅಂತ. ನನಗೆ ಅದು ಡ್ರೈವರ್'ಗಳ ಹಾಂಕಿಂಗ್ ಅಂತ ಅನಿಸೊಲ್ಲ. ಅದು ಕನ್ನಡ ಆರ್ತನಾದದ ರೀತಿ ಕೇಳುತ್ತದೆ ಎಂದು ಜಯಂತ್ ಕಾಯ್ಕಿಣಿ ಹೇಳುತ್ತಾರೆ.

ಶುಕ್ರವಾರ, ಏಪ್ರಿಲ್ 21, 2017

ಬಣ್ಣ ಬಳಿದುಕೊಂಡ ಅಕ್ಕಿ ಕಾಳು, ಚಪ್ಪಲಿಯಡಿಯಲ್ಲಿ ನಲುಗಿತು!

ಮಾವಿನ ಚಿಗುರೆಲೆಯ ಹಸಿರು ತೋರಣದ ಮಧ್ಯೆ ಹಸೆಮಣೆಯ ಮೇಲೆ ಕೋರಿರುವ ವಧು-ವರರಿಗೆ ಆರತಿ ಬೆಳಗಿ, ಸೋಬಾನೆ ಪದ ಹಾಡಿ ಅಕ್ಷತೆ ಕಾಳು ಹಾಕಿ ಶುಭಾಶೀರ್ವಾದ ಮಾಡುವ ಪದ್ಧತಿ ಈಗ ಕಾಲಗರ್ಭದಲ್ಲಿ ಹೂತು ಹೋಗಿದೆಯೇನೋ ಎಂದೆನಿಸುತ್ತದೆ. ಅದಕ್ಕೂ ಮಿಗಿಲಾಗಿ ಶುಭದ ಸಂಕೇತವಾದ 'ಅಕ್ಷತೆ' ಅರಿಸಿಣ-ಕುಂಕುಮ ಬಣ್ಣದ ಬದಲಾಗಿ ನವರಂಗೀಯಂತೆ ಒಂದೊಂದು ಬಣ್ಣ ಬಳಿದುಕೊಳ್ಳುತ್ತಿರುವುದು ಬಣ್ಣದ ಮನಸ್ಸಿನ ದ್ಯೋತಕ. ಇದು ಇಷ್ಟಕ್ಕೆ ನಿಲ್ಲದು; ವಧು-ವರರ ಬೈತಲೆಯ ಮೇಲೆ ಬಿದ್ದು ಶುಭಕೋರಿದ ಅಕ್ಕಿ ಕಾಳು ಅವರದ್ದೇ ಕಾಲ ಕೆಳಗೆ ಬಿದ್ದು ಒದ್ದಾಡುತ್ತದೆ! ಸಾಲದೆಂಬಂತೆ ಹರಸಲು ಬಂದ ಬಂಧು-ಬಾಂಧವರ, ಹಿತೈಷಿಗಳ ಪಾದದಡಿಯಲ್ಲೂ ದೀನವಾಗಿ ಬಿದ್ದಿರುತ್ತದೆ!
ಕೆಲದಿನಗಳ ಹಿಂದೆ ಸಾಮೂಹಿಕ ವಿವಾಹಕ್ಕೆ ಹೋಗಿದ್ದೆ. ವಧು-ವರರಿಗೆ ಹರಿಸಿದ ಅಕ್ಷತೆ ಕಾಳುಗಳೆಲ್ಲ ಮದುವೆ ಆವರಣದ ತುಂಬೆಲ್ಲ ಬಿದ್ದಿತ್ತು. ಶುಭ ಹಾರೈಸಿದ ಅಕ್ಕಿ ಕಾಳು ಕೆಲವರ ಪಾದದಡಿಯಲ್ಲಿ ಸಿಲುಕಿದ್ದರೆ, ಇನ್ನು ಕೆಲವರ ಚಪ್ಪಲಿಯಡಿ ಸಿಲುಕಿ ನರಳುತ್ತಿತ್ತು. ವಿಚಿತ್ರವೆಂದರೆ ನೂತನ ವಧು-ವರರ ಕಾಲಡಿಯಲ್ಲಿಯೂ ಅದು ಸಿಲುಕಿ ಹೊಸಕಿ ಹೋಗುತ್ತಿತ್ತು. 'ನಾನೆಲ್ಲರಿಗೂ ಬೇಕಾದವಳು' ಎನ್ನುವ ಅಕ್ಕಿಯ ಮೂಕ ರೋದನ, ಮದುವೆ ಗದ್ದಲದಲ್ಲಿ ಯಾರೊಬ್ಬರಿಗೂ ಕೇಳಿಸಲಿಲ್ಲ. ದಾಂಪತ್ಯಕ್ಕೆ ಮುನ್ನಡಿ ಬರೆದ ನವ ದಂಪತಿಯೂ ಸೇರಿದಂತೆ!
ಇದು ಬದಲಾದ ಮದುವೆಯ ಪದ್ಧತಿಯ ಆಚಾರದಲ್ಲಿ ಕಂಡು ಬರುವ ಹೀನ ನಡೆ ಎಂದೇ ಹೇಳಬಹುದು. ಕಾಲಕ್ಕೆ ತಕ್ಕಂತೆ ಪದ್ಧತಿಯಲ್ಲಿನ, ಆಚರಣೆಯಲ್ಲಿನ ವಿಧಿ-ವಿಧಾನಗಳನ್ನು ಅನಿವಾರ್ಯವಾಗಿಯಾದರೂ ಒಂದಷ್ಟು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂತಹ ಬದಲಾವಣೆ ಮೂಲ ಆಚಾರದಲ್ಲಿ, ಪದ್ಧತಿಯಲ್ಲಿ ತರವಲ್ಲ. ಸಂಪ್ರದಾಯಗಳು ಯಾಕೆ ಇರುತ್ತಿದ್ದವು, ಅವುಗಳ ಅರ್ಥ, ಆಶಯಗಳು ಏನಿದ್ದವು ಎನ್ನುವುದು ಅರಿತುಕೊಳ್ಳುವುದು ಬದಲಾವಣೆಗೆ ಒಗ್ಗುವ ಮನಸ್ಸು ತಿಳಿದುಕೊಳ್ಳಬೇಕು.
'ಅಕ್ಷತ' ಎಂದರೆ ಸಂಸ್ಕೃತ ಭಾಷೆಯಲ್ಲಿ ತುಂಡಾಗದ ಎಂದರ್ಥ. ಕನ್ನಡದಲ್ಲಿ ಸ್ವಲ್ಪ ಅಪಭ್ರಂಶಗೊಂಡು ಅದು 'ಅಕ್ಷತೆ' ಎಂದಾಗಿದೆ. ಅಕ್ಷತೆಯಲ್ಲಿ ಬಳಸುವ ಒಂದೊಂದು ಅಕ್ಕಿ ಕಾಳು ಸಹ ಇಡಿ ಇಡಿಯಾಗಿರಬೇಕು. ಅಲ್ಲಿ ತುಂಡಾಗಿರುವ, ನುಚ್ಚಿನ ಅಕ್ಕಿಗೆ ಒಂದಿನಿತೂ ಅವಕಾಶವಿಲ್ಲ. ಅಲ್ಲದೆ, ಅದಕ್ಕೆ ಎಷ್ಟೇ ಅರಿಶಿಣ ಕುಂಕುಮ ಹಚ್ಚಿದರೂ ಪ್ರಯೋಜನವಿಲ್ಲ, ಹಾಗೆಯೇ ಅದು ಅಕ್ಷತೆಯೂ ಆಗುವುದಿಲ್ಲ. ಎಲ್ಲ ಧಾರ್ಮಿಕ ಕಾರ್ಯಗಳಲ್ಲೂ ಅಕ್ಷತೆಗೆ ಪ್ರಥಮ ಸ್ಥಾನ. ಭಗವಂತನಿಗೆ ಅರ್ಪಿಸುವ ಪ್ರಮುಖ ಪೂಜಾದ್ರವ್ಯ. ಜತೆಗೆ ದೈವಾನುಗ್ರಹಕ್ಕೆ ಹಾಗೂ ಗುರುಹಿರಿಯರ ಆಶೀರ್ವಚನಕ್ಕೆ ಇಡಿಯಾದ ಅಕ್ಕಿಕಾಳು ಶುಭ ನುಡಿಯುತ್ತದೆ. ಇದರ ಹೊರತಾಗಿ ಅಧ್ಯಾತ್ಮಿಕವಾಗಿ ಹೇಳಬೇಕೆಂದರೆ 'ಅಕ್ಷತೆ' ಎನ್ನುವುದು ಫಲಾಪೇಕ್ಷೆಯ ಬೀಜ; ಬೀಜ ಮೊಳೆತು ಪಕ್ವವಾಗಿ ಅದರೊಳಗಿಂದ ಮೊಳಕೆ ಬಂದು ದೊರೆಯುವ ಫಲ!
ಅಧ್ಯಾತ್ಮಿಕ ಹಾಗೂ ಆಶೀರ್ವಾದದ ಅನುಗ್ರಹಕ್ಕೆ ಅಕ್ಷತೆ ಬಳಸುತ್ತಾರಾದರೂ, ಮದುವೆಯ ಮುಹೂರ್ತದ ವೇಳೆ ವಧು-ವರರು ಪರಸ್ಪರ ಮಾಲೆ ಹಾಕಿಕೊಂಡ ನಂತರ ಗಟ್ಟಿಮೇಳ ಮೊಳಗುತ್ತಿದ್ದಂತೆ, ಆಗಮಿಸಿದ ಅತಿಥಿ ಮಹೋದಯರೆಲ್ಲ ಅಕ್ಷತೆ ಪ್ರೋಕ್ಷಣೆ ಮಾಡುವ ಮೂಲಕ ನೂತನ ದಂಪತಿಯನ್ನು ಆಶೀರ್ವದಿಸುತ್ತಾರೆ. ಅದಕ್ಕೂ ಪೂರ್ವ ಅಂದರೆ ಅಂತಃಪಟ ಸರಿಯುವ ಮುನ್ನ, ವಧು-ವರರು ಎದುರುಬದುರಾಗಿ ನಿಲ್ಲುವುದು ಇದೇ ಅಕ್ಕಿಯ ಮೇಲೆ. ಸಪ್ತಪದಿ ತುಳಿಯುವುದು ಸಹ ಅಕ್ಕಿಯಿಂದ ಮಾಡಿದ ಏಳು ರಾಶಿಗಳ ಮೇಲೆಯೇ. ಇವೆಲ್ಲ ಮುಗಿದು ಗಂಡನ ಮನೆ ಪ್ರವೇಶಿಸುವ ಮೊದಲು ವಧು, ಹೊಸ್ತಿಲಲ್ಲಿಟ್ಟ ಅಕ್ಕಿ ಪಾತ್ರೆಯನ್ನು ಕಾಲಿನಿಂದ ಚೆಲ್ಲಿ ಒಳಬರುತ್ತಾಳೆ. ಇದರರ್ಥ ವರನ ಕೈ ಹಿಡಿದಾಕೆ ಧಾನ್ಯ ಲಕ್ಷ್ಮಿಯಂತೆ, ಬಾಳಿ-ಬದುಕುವ ಮನೆ ತುಂಬಿ ತುಳುಕಲಿ ಎಂದು.
ಅಕ್ಷತೆಗೆ ಇಷ್ಟೊಂದು ಸಮೃದ್ಧ ಅರ್ಥಗಳಿವೆ, ಸಾಕ್ಷಾತ್ ದೈವೀ ಸ್ವರೂಪದ ಅಕ್ಕಿ ಕಾಳನ್ನು ತಲೆ ಮೇಲಿಟ್ಟು ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ, ಇಂದಿನ ಆಡಂಬರದ ಜೀವನದಲ್ಲಿ, ವಿವಾಹ ಮಹೋತ್ಸವದಲ್ಲಿ ಅದಕ್ಕೆ ಬೆಲೆಯೇ ಇಲ್ಲದಂತೆ ಮಾಡಿದ್ದೇವೆ. ಧಾರ್ಮಿಕ ಪರಂಪರೆ, ಸಂಪ್ರದಾಯಗಳನ್ನು ಗಾಳಿಗೆ ತೂರಿ ಅಕ್ಕಿ ಕಾಳನ್ನು ಫ್ಯಾಶನ್ ವಸ್ತುವನ್ನಾಾಗಿ ಬಳಸುತ್ತಿದ್ದೇವೆ. ಮೊದಲೆಲ್ಲ ಅರಿಶಿಣ -ಕುಂಕುಮ ಬಳಿದುಕೊಂಡಿದ್ದ ಅಕ್ಷತೆ ಇರುತ್ತಿತ್ತು. ಆದರೀಗ ಅದಕ್ಕೆ ಬಣ್ಣ ಬಣ್ಣದ ರಾಸಾಯನಿಕ ಹಚ್ಚಿ ಆಕರ್ಷಿಸುತ್ತಿದ್ದಾರೆ. ಕ್ರಿಯಾಶೀಲತೆಯ ಕಲಾತ್ಮಕತೆಯನ್ನು ಧಾರ್ಮಿಕ ಆಚಾರದಲ್ಲಿ ನುಸುಳಿಸಿ, ಅಕ್ಷತೆಯ ಪಾವಿತ್ರ್ಯತೆಯನ್ನು ಹಾಳುಗೆಡವಿದಿದ್ದಾರೆ.

ಬುಧವಾರ, ಮಾರ್ಚ್ 8, 2017

ನಂದಿನಿಯಂಥ ಮಾತೆಗೆ......

'ಕಣ್ಣಿದ್ದೂ ಕುರುಡರಾದರು' ಎನ್ನುವ ಮಾತಿದೆ. ಅದು ಅಕ್ಷರಶಃ ಸತ್ಯವೂ ಹೌದು. ಆದರೆ, `ಕಣ್ಣಿಲ್ಲದೇ ಬೆಳಕಾಗುವವರು' ಎನ್ನುವ ಮಾತು ವಿರಳಾತಿ ವಿರಳ. ಇಂದಿನ ದಿನಗಳಲ್ಲಿ ಇಂತವರು ಕಾಣಸಿಗುವುದು ಸಹ ತೀರಾ ಅಪರೂಪವೇ. ಈ ಅಪರೂಪದ ನಡುವೆಯೇ ಒಂದು ಆತ್ಮವಿಶ್ವಾಸದ ಜ್ಯೋತಿ ದೇದೀಪ್ಯಮಾನವಾಗಿ ಬೆಳಗುತ್ತಿದೆ. ಕಣ್ಣಿದ್ದವರೂ ತಲೆ ತಗ್ಗಿಸುವಂತೆ ಮಾಡಿ, ಅರಿವಿಲ್ಲದೆ ಕಣ್ಣಂಚನ್ನು ಒದ್ದೆ ಮಾಡಿಸುತ್ತದೆ.
ಆ ಭಿನ್ನ ವ್ಯಕ್ತಿಯೇ ನಂದಿನಿ.
ಬೆಂಗಳೂರಿನ ನಿವಾಸಿಯಾದ ಇವರು, ಸದ್ಯ ಅಲ್ಲಿಯ ಆ್ಯಕ್ಷನ್ ಆ್ಯಡ್ ಸಮಾಜ ಸೇವಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಟ್ಟುತ್ತಲೇ ತನ್ನೆರಡು ಕಣ್ಣನ್ನು ಕಳೆದುಕೊಂಡು ಅಂಧತ್ವನ್ನೇ ವರವನ್ನಾಗಿ ಪಡೆದುಕೊಂಡು ಬಂದವರು. ಬೆಳಕು ನೋಡದ, ಬಣ್ಣಗಳ ಅರಿವಿಲ್ಲದ ಇವರಿಗೆ ಒಂದು ಹಂತದವರೆಗೆ ಆಸರೆಯಾಗಿ ನಿಂತವರು ಹೆತ್ತವರು. ಮಗಳು ಬೆಳೆದು ದೊಡ್ಡವಳಾಗುತ್ತಿದ್ದಂತೆ ಮದುವೆ ಚಿಂತೆ ಕಾಡಲಾರಂಭಿಸುತ್ತದೆ. ಅಂಧತ್ವದ ಮಗಳನ್ನು ಯಾರು ವರಿಸುತ್ತಾರೆ ಎಂದು ಹೆತ್ತವರು ಒಂದಷ್ಟು ವರ್ಷ ತಟಸ್ಥರಾಗುತ್ತಾರೆ. ಆ ವೇಳೆ ನಂದಿನಿಯವರಿಗೆ ಅನ್ಯ ಧರ್ಮಿಯ ವ್ಯಕ್ತಿಯೊಬ್ಬ ಪರಿಚಯವಾಗುತ್ತಾನೆ. ಆ ಪರಿಚಯ ಸ್ನೇಹವಾಗಿ ಮದುವೆ ಹಂತಕ್ಕೆ ತಲುಪುತ್ತದೆ. ಧರ್ಮಿಷ್ಟರಾದ ಹೆತ್ತವರಿಗೆ ಮಗಳನ್ನು ಅನ್ಯ ಕೋಮಿನ ವ್ಯಕ್ತಿಗೆ ಕೊಡುವುದು ಇಷ್ಟವಿರುವುದಿಲ್ಲ. ಹೆತ್ತವರ, ಕುಟುಂಬದವರ ವಿರೋಧದ ನಡುವೆಯೂ ನಂದಿನಿ ಆತನನ್ನು ಮದುವೆಯಾಗುತ್ತಾರೆ.
ಮದುವೆಯಾಗಿ ಎರಡು ವರ್ಷಗಳ ನಂತರ ಅವರು ಗರ್ಭಿಣಿಯಾಗುತ್ತಾರೆ. ತಾಯ್ತನದ ತುಮುಲ ಹಾಗೂ ಭಾವುಕತೆ ಅವರನ್ನು ಮೈಮರೆಸುತ್ತದೆ. ಸಂದರ್ಭದಲ್ಲಿ ಅವರ ಕೆಲವು ಆಪ್ತೇಷ್ಟರು, `ನಿನಗೆ ಹುಟ್ಟುವ ಮಗು ಅಂಧತ್ವದಿಂದಲೇ ಹುಟ್ಟಬಹುದು, ಗರ್ಭಪಾತ ಮಾಡಿಸು' ಎಂದು ಬಿಟ್ಟಿ ಸಲಹೆ ನೀಡುತ್ತಾರೆ. ಸಾಕಷ್ಟು ಬಾರಿ ಒತ್ತಾಯ ಮಾಡಿ ಅವರ ಗರ್ಭವನ್ನು ತೆಗೆಸಲು ಪ್ರಯತ್ನಿಸುತ್ತಾರೆ. ಆದರೆ ಅವರ ಯಾವ ಸಲಹೆ, ಸೂಚನೆಗೂ ಬೆಲೆ ನೀಡದ ನಂದಿನಿ, `ನಾನು ತಾಯಿ ಆಗಲೇ ಬೇಕು, ತಾಯ್ತನದ ಸುಖವೇನೆಂದು ಅರಿಯಲೇ ಬೇಕು. ಅಂಧತ್ವದ ಮಗು ಜನಿಸಿದರೂ ಅದನ್ನು ಎಲ್ಲಿಗಿಂತಲೂ ಭಿನ್ನವಾಗಿ ಬೆಳೆಸುತ್ತೇನೆ` ಎಂದು ಅಮ್ಮನಾಗುವ ದೃಢ ಸಂಕಲ್ಪ ಮಾಡುತ್ತಾರೆ.
ನವಮಾಸಗಳ ಕಾಲ ತಮ್ಮ ಗರ್ಭದಲ್ಲಿ ಮಗುವನ್ನು ಜೋಪಾನವಾಗಿ ಸಲುಹಿ, ಕೊನೆಗೊಂದು ದಿನ ತಾನಿದ್ದ ಭೂಮಿಗೆ ಪುಟ್ಟ ಕಂದನನ್ನು ಪರಿಚಯಿಸುತ್ತಾರೆ. ಬಿಟ್ಟಿ ಸಲಹೆ ನೀಡಿದವರೆಲ್ಲ ಕಣ್ಣು ಒದ್ದೆಮಾಡಿಕೊಂಡು ಮಾತು ಬರದೆ ಮೌನಕ್ಕೆ ಜಾರುವ ಸಮಯವದು. ತಮಗರಿವಿಲ್ಲದೆ ಎಳೆಯ ಹಸಗೂಸನ್ನು ಎತ್ತಿಕೊಂಡು ಎದೆಗೆ ಬಿಗಿದಪ್ಪಿಕೊಳ್ಳುತ್ತಾರೆ. ನಂದಿನಿಯ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸಕ್ಕೆ ತಲೆದೂಗಿ, ಗಟ್ಟಿಗಿತ್ತಿ ಹೆಣ್ಣು ಎಂದು ಬೆನ್ನು ತಟ್ಟುತ್ತಾರೆ. ಕಾರಣ, ನಂದಿನಿಗೆ ಜನ್ಮಿಸಿದ ಮಗು ಯಾವ ವೈಕಲ್ಯವನ್ನೂ ಹೊಂದಿರದ ಆರೋಗ್ಯವಂತ ಹೆಣ್ಣು ಮಗುವಾಗಿತ್ತು. ಆ ಪುಟ್ಟ ಕಂದಮ್ಮ ಈಗ ಆಳೆತ್ತರಕ್ಕೆ ಬೆಳೆದು ಬೆಂಗಳೂರಿನಲ್ಲಿಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ಎಂಟನೇ ತರಗತಿ ಅಭ್ಯಸಿಸುತ್ತಿದ್ದಾಳೆ.
ಇವಗಳ ನಡುವೆಯೇ ನಂದಿನಿ, ತನ್ನಂತೆಯೇ ಅಂಧತ್ವ ಇರುವ ಅನಾಥ ಹೆಣ್ಣು ಮಗುವೊಂದನ್ನು ದತ್ತು ಪಡೆಯುತ್ತಾರೆ. ಆಕೆಯ ಎಲ್ಲ ಕೆಲಸ ಕಾರ್ಯಗಳನ್ನು ಅವರೇ ಮಾಡುತ್ತ, ಆಕೆಗೆ ತಾನು ಪರಾವಲಂಬಿ ಎನ್ನುವ ಭಾವ ಮೂಡದಂತೆ ನೋಡಿಕೊಳ್ಳುತ್ತಾರೆ. ನಂದಿನಿಯ ಗರಡಿಯಲ್ಲಿ ಬೆಳೆಯುತ್ತಿರುವ ಪುಟ್ಟ ಮಗುವಿಗೆ ಈಗ ಆರು ವರ್ಷ. ಸಾಮಾನ್ಯರಿಗಿಂತ ಬಲು ಚೂಟಿಯಾಗಿ ಎಲ್ಲರ ಗಮನ ಸೆಳೆಯುತ್ತ, ಕಣ್ಣಿದ್ದವರೂ ಬೆರಗಾಗುವಂತೆ ಮಾಡುತ್ತಿದ್ದಾಳೆ.
ತಾನು ನಿಸ್ಸಹಾಯಕಳು, ಪರಾವಲಂಬಿ ಎನ್ನುವ ಭಾವ ನಂದಿಯವರನ್ನು ಎಂದೂ ಕಾಡಿಲ್ಲ. ಅದಕ್ಕೆ ಅವಕಾಶವನ್ನು ಸಹ ನೀಡದೆ, ತಮ್ಮ ಬಿಡುವಿನ ವೇಳೆಯನ್ನು ಬ್ರೈಲ್ ಲಿಪಿಯಲ್ಲಿ ಕಥೆ, ಕವನ ಬರೆಯುವ ಮೂಲಕ ಸಾಹಿತ್ಯದ ರಸ ಅನುಭವಿಸುತ್ತಿದ್ದಾರೆ. ಮಹಿಳಾ ಸಬಲೀಕರಣದ ಕುರಿತಾಗಿ ಸಾಕಷ್ಟು ಲೇಖನಗಳನ್ನು ಬರೆದು ಮಹಿಳಾ ವರ್ಗದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮದೇ ಆದ ಜಾಗೃತ ಬಳಗ ಸೃಷ್ಟಿಸಿಕೊಂಡು, ನಾಡಿನಾದ್ಯಂತ ಮಹಿಳೆಯ ಕುರಿತಾಗಿ ಅಭಿಯಾನ ನಡೆಸುತ್ತಿದ್ದಾರೆ. ಕನ್ನಡ, ಇಂಗ್ಲೀಷ, ಹಿಂದಿ, ತಮಿಳು ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಇವರು, ರಾಷ್ಟ್ರಮಟ್ಟದ ಹೋರಾಟಗಾರರು. ದೆಹಲಿ, ಕಲ್ಕತ್ತಾ, ಮುಂಬೈ ನಗರಗಳಿಗೆ ಒಬ್ಬರೇ ಹೋಗಿ, ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ.
ಅನುಕಂಪ ಬೇಡ ಎನ್ನುವ ಇವರು, ಇನ್ನೊಬ್ಬರ ಬದುಕಲ್ಲಿ ಜೀವನೋತ್ಸಾಹ ತುಂಬುವ ಪರಿ ಎಂಥವರನ್ನಾದರೂ ನಿಬ್ಬೆರಗಾಗಿಸುತ್ತದೆ. ಬೆಂಗಳೂರಿನ ಹೆಣ್ಣೂರಿನಲ್ಲಿರುವ ಅವರ ಮನೆ ಎಷ್ಟು ಶುಚಿಯಾಗಿದೆಯೆಂದರೆ, ಎಂತವರಾದರೂ ಆಶ್ಚರ್ಯ ಚಕಿತರಾಗಬೇಕು. ಯಾರ ಸಹಾಯ, ಸಹಕಾರವಿಲ್ಲದೆ ಮನೆಗೆಲಸವನ್ನು ತಾವೇ ಮಾಡಿಕೊಳ್ಳುವ ಮೂಲಕ ಪರಾವಲಂಬಿಯಾಗಿ ಹೇಗೆ ಬದುಕಬಹುದು ಎಂದು ಹೇಳುತ್ತಾರೆ. ದತ್ತು ಪಡೆದ ಅನಾಥ ಅಂಧ ಮಗುವನ್ನು ಮಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವ ಪರಿ ಎಂಥವರನ್ನಾದರೂ ಮೂಕರನ್ನಾಗಿಸುತ್ತದೆ.
ಪ್ರೀತಿ, ವಿಶ್ವಾಸ, ಮಮತೆ, ಕರುಣೆ ಇವುಗಳ ಜತೆಗೆ ಬದುಕಿನ ಪ್ರೀತಿಯನ್ನು ಮೈ ಗೂಡಿಸಿಕೊಂಡ 'ನಂದಿನಿ'ಯಂಥ ಮಾತೆಯರಿಗೆ ಮಹಿಳಾ ದಿನದ ಶುಭಾಶಯಗಳು.
-ನಾಗರಾಜ್ ಬಿ.ಎನ್. 

ಗುರುವಾರ, ಫೆಬ್ರವರಿ 2, 2017

ತವರಿಗೆ ಬಂದ ಯಶೋಧೆ.....
ಅರಿಯದ ವಯಸ್ಸಲ್ಲಿ ದಿಕ್ಕು ತೋಚದೆ ದಿಕ್ಕೆಟ್ಟು ಹೋದಾಗ, ಮೈದವಡಿ ರಟ್ಟೆ ಹಿಡಿದು ಎಬ್ಬಿಸಿದ್ದು ಸೇವಾ ಭಾರತಿ. ಮೂರೊತ್ತು ಮೃಷ್ಟಾನ್ನ ತಿನ್ನಿಸಿ, ಸಂಸ್ಕಾರದ ಜತೆಗೆ ಶಿಕ್ಷಣ ನೀಡಿದ್ದು ಬಾಲಕಲ್ಯಾಣ. ಪ್ರಾಪ್ತೆಯಾದಾಗ ಹಸೆಮಣೆ ಏರಿಸಿ, ಸಪ್ತಪದಿ ತುಳಿಸಿದ್ದು ಸೇವಾಸದನ. ತವರಿಲ್ಲದಾ ಕೂಸಿಗೆ ತವರಿನಾ ವಾತ್ಸಲ್ಯ ತೋರಿಸಿದ್ದು ಮಾತೃಛಾಯಾ...

ಸರಿಸುಮಾರು ದಶಕಗಳ ಕಾಲ ಹುಬ್ಬಳ್ಳಿ ಕೇಶ್ವಾಪುರದ ಮಾತೃಛಾಯ ಆಶ್ರಯದಲ್ಲಿ ಬೆಳೆದು, ಕೊಪ್ಪಳದ ಸುಧೀಂದ್ರ ಎಂಬಾತನೊಂದಿಗೆ ವಿವಾಹ ಬಂಧನಕ್ಕೊಳಗಾದ ಯಶೋಧಾಗೆ ಬುಧವಾರ(ಫೆ. 1, 2017; ಸಂ. 6) ಸಂತಸದ ಕ್ಷಣ. ಅಲ್ಲಿದ್ದ ಮೂವತೈದು ಮಕ್ಕಳ ಸಾಮೂಹಿಕ ಜನ್ಮದಿನದ ಸಂಭ್ರಮದಲ್ಲಿ ಹಿರಿಯಕ್ಕನ ಪಾತ್ರ. ಪುಟ್ಟ ಪಾಪು ಸುರಭಿಯನ್ನು ಕಂಕುಳಲ್ಲಿ ಎತ್ತಿಕೊಂಡು ಅತ್ತಿಂದಿತ್ತ ಓಡಾಡುತ್ತ, ವಹಿಸಿದ್ದ ಜವಾಬ್ದಾರಿಯನ್ನು ನಿಭಾಯಿಸುತ್ತ ನೆರೆದ ಸಹೃದಯಿಗಳ ಕೇಂದ್ರಬಿಂದುವಾಗಿದ್ದಳು.
ಒಂದಿಷ್ಟು ವರ್ಷ ಯಶೋಧಾ ಸೇವಾಸನದ ವೇದಿಕೆಯಲ್ಲಿಯೇ ತನ್ನ ಸಂಗಡಿಗರೊಂದಿಗೆ ಜನ್ಮದಿನ ಆಚರಿಸಿಕೊಂಡಿದ್ದಳು. ನೂರಾರು ಮಾತೆಯರು ಸೆರಗು ತುಂಬು  ಹಾರೈಕೆಯ ಅಕ್ಷತೆ ತಂದು, ನೂರ್ಕಾಲ ಬಾಳಿ ಬದುಕವ್ವ ಎಂದು ನೆತ್ತಿ ಮೇಲೆ ಸುರಿದಿದ್ದರು. ದೇದೀಪ್ಯಮಾನವಾಗಿ ಬೆಳಗುವ ಪರಂಜ್ಯೋತಿಯ ಆರತಿ ಎತ್ತಿ ಮನದುಂಬಿ ಆಶೀರ್ವದಿಸಿದ್ದರು. ಅದೇ ದಿನಗಳ, ಅದೇ ಕ್ಷಣಗಳು ಯಶೋಧಾಳ ಕಣ್ಮುಂದೆ ಒಂದೊಂದಾಗಿ ಮೆರವಣಿಗೆ ಹೊರಟಿದ್ದವು. ಆ ಭಾವುಕ ಕ್ಷಣಗಳು ಅವಳನ್ನು ಆನಂದದ ಮಡುವಿಗೆ ನೂಕಿದಂತಿತ್ತು. ಅಲ್ಲಿಯೇ ಇರುವ ಆರತಿ ಬಟ್ಟಲಿಗೆ ಎಣ್ಣೆ ಸುರಿಯುತ್ತ, ಹಾಕಿದ ಬತ್ತಿ ಹಿಂಡುತ್ತ ತನ್ನನ್ನೇ ತಾನು ಮರೆತಿದ್ದಳು. ಅಷ್ಟೊಂದು ಭಾವಪರವಶಳಾಗಿ ಸಾಗಿ ಬಂದ ಹಾದಿಯ ಕಡೆ ಮನಸ್ಸು ನೆಟ್ಟಿದ್ದಳು!
ಯಶೋಧಾಗೆ, ಮಾತೃಛಾಯ ತವರು ಮನೆ. ಅಲ್ಲಿಯೇ ಆಡಿ, ಬೆಳೆದಾಕೆಗೆ ಅಲ್ಲಿದ್ದ ಮಾತೆಯರೇ ಅಮ್ಮಂದಿರು. ಮಡಿಲು ತುಂಬಿಸಿಕೊಂಡು ತವರಿಗೆ ಬಂದ ಸಂಭ್ರಮ ಆಕೆಯ ಮೊಗದಲ್ಲಿ ಕಳೆಕಟ್ಟಿತ್ತು. ಕರುಳ ಕುಡಿ ತನ್ನ ಅಜ್ಜಿ ಮನೆಯಲ್ಲಿ ಮನದಣಿಯೇ ಕುಣಿದು ಕುಪ್ಪಳಿಸಿತ್ತು. ಕೈಯ್ಯಲ್ಲಿ ಬಾಳೆಹಣ್ಣು ಹಿಡಿದು ವೇದಿಕೆಯ ಮೇಲೆಲ್ಲ ಓಡಾಡಿ, ತನ್ನ ಪುಟ್ಟ ಹೆಜ್ಜೆಯನ್ನು ಅಚ್ಚೊತ್ತಿತ್ತು. ಪುಟ್ಟ ಕಂದನ ಕೇಕೆ, ತುಂಟಾಟಗಳನ್ನೆಲ್ಲ ವೇದಿಕೆ ಮುಂಭಾಗದಲ್ಲಿ ಕುಳಿತ ಸಹೃದಯಿಗಳು ಶಾಂತಚಿತ್ತದಿಂದ ಆಸ್ವಾದಿಸುತ್ತಿದ್ದರು. ಮಹಾಮನೆಯಲ್ಲಿ ತನ್ನಂತೆಯೇ ಇರುವ ಸಹೋದರ, ಸಹೋದರಿಯರ ಸಾಮೂಹಿಕ ಜನ್ಮದಿನಕ್ಕೆ ಮನೆಯ ಹಿರಿ ಮಗಳಾಗಿ ಯಶೋಧಾ ಓಡಾಡಿದಳು.

'ಕೈಹಿಡಿದಾತ(ಸುಧೀಂದ್ರ) ಅನ್ಯಕಾರ್ಯದ ನಿಮಿತ ಬೇರೆಡೆ ಹೋಗಿದ್ದರಿಂದ, ಕರೆದುಕೊಂಡು ಬರಲಾಗಲಿಲ್ಲ. ಈ ಸುಮಧುರ ಕ್ಷಣದಲ್ಲಿ ಅವರಿಲ್ಲ ಎನ್ನುವ ಕೊರಗು ಕಾಡುತ್ತಿದೆಯಾದರೂ, ಪುಟ್ಟ ಮಕ್ಕಳ ಸಂಭ್ರಮದಲ್ಲಿ ನಾ ತೇಲಿ ಹೋಗಿದ್ದೇನೆ. ನನ್ನ ತವರಿನ ಮಕ್ಕಳ  ಜನ್ಮದಿನದಲ್ಲಿ ಪಾಲ್ಗೊಳ್ಳುವ ಖುಷಿಗಿಂತ, ಬೇರೊಂದು ಖುಷಿ ನನಗ್ಯಾವುದೂ ಇಲ್ಲ. ಯಾಕೆಂದರೆ, ಇದೇ ವೇದಿಕೆ ಮೇಲೆ ನಾನು ಕೂಡಾ ನಾಲ್ಕೈದು ಬಾರಿ ನೂರಾರು ಮಾತೆಯರಿಂದ ಆರತಿ ಬೆಳಗಿಸಿಕೊಂಡಿದ್ದೆ' ಎಂದು ತವರಿಗೆ ಬಂದ ಯಶೋಧಾ ಆನಂದಭಾಷ್ಪ ಹರಿಸಿದಳು.

-ಶುಭವಾಗಲಿ ಸಹೋದರಿ....... ಬದುಕು ಬಂಗಾರವಾಗಲಿ, ನಿನ್ನ ತವರು ಜಗದೆತ್ತರಕ್ಕೆ ಬೆಳಗಲಿ.

ಬುಧವಾರ, ಜನವರಿ 25, 2017

ಕರುಳ ಕುಡಿ ಇನ್ನಿಲ್ಲದಾಗ...
ಹಸಿ-ಹಸಿ ಕನಸುಗಳು ಇನ್ನೂ ಕಣ್ಮುಂದೆಯೇ ಇವೆ. ಇನ್ನೇನು ಆ ಕನುಸುಗಳೆಲ್ಲ ನನಸಾಯಿತು ಎನ್ನುವಷ್ಟರಲ್ಲಿಯೇ ಬಹುದಿನಗಳಿಂದ 'ಅತ್ಮ'ವನ್ನು ಕಾಡುತ್ತಿದ್ದ 'ಹತ್ಯೆ' ಧುತ್ತೆಂದು ಎದುರಾಗಿಯೇ ಬಿಟ್ಟಿತು. ಕ್ಷಣಾರ್ಧದಲ್ಲಿ ಎಲ್ಲವೂ ಶಾಂತ. ಸ್ಮಶಾನ ಮೌನ...!!
ಎದೆಗೆ ಒದ್ದ ಪುಟ್ಟ ಕಾಲುಗಳು, ಕಿರುಬೆರಳ ಹಿಡಿದು ನಡೆದ ದಾರಿ, ಎದೆ ಹಾಲು ಹೀರಿದ ಆ ಚೆಂದುಟಿ, 'ಅಮ್ಮಾ' ಎಂದು ಕರೆದ ಮಮತೆಯ ಕೂಗು.... ಎಲ್ಲವೂ ಆ ತಾಯಿಯ ಕಣ್ಮುಂದೆ ಮೆರವಣಿಗೆ ಹೊರಟಿವೆ.

'ಹೋಗಿ ಬರುತ್ತೇನೆ ಅಮ್ಮಾ...' ಎಂದು ಪಾದಕ್ಕೆರಗಿ ಹೊಸ್ತಿಲು ತುಳಿದ ಮಗ, ಕಾಣದ ಲೋಕಕ್ಕೆ ಪಯಣಿಸಿದ್ದ. ಆತ ತುಳಿದು ಹೋದ ಹೆಜ್ಜೆ ಗುರುತು ಮುಸ್ಸಂಜೆಯ ಬೆಳಕಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ.
ಅತ್ತು, ಗೋಗರೆದು ತನು-ಮನವೆಲ್ಲ ನಿತ್ರಾಣವಾಗಿದೆ. ಕಣ್ಣಂಚಿನಿಂದ ಒಂದೇ ಒಂದು ಹನಿ ಕೂಡಾ ಉರುಳುತ್ತಿಲ್ಲ. ಎದೆಯಾಳ ಬತ್ತಿ, ಬಂಜರು ಭೂಮಿಯಂತಾಗಿದೆ.
ಬೆಚ್ಚನೆಯ ಮಡಿಲಲ್ಲಿ ಮಲಗಿರುತ್ತಿದ್ದ ಮಗ, ಈಗ ಚಿತೆಯ ಮೇಲೆ ನಿಸ್ತೇಜ. ಉಸಿರಿಲ್ಲದ ದೇಹಕ್ಕೆ ಬಿಳಿಯ ಹೊದಿಕೆ. ಇದ್ದಾಗ ಇಲ್ಲದ ಹಾರ-ತುರಾಯಿ, ಈಗ ಮುಖವೂ ಕಾಣಿಸದೆ ತುಂಬಿಕೊಂಡಿವೆ. ಒಂದು ಕಡೆ ಸಂಬಂಧಿಗಳ ರೋದನ, ಇನ್ನೊಂದು ಕಡೆ ಸಮಯ ಮೀರುತ್ತಿದೆ ಎನ್ನುವ 'ಸುಡುವ' ಮಾತು.
ಒಂದರೆ ಘಳಿಗೆ.... ಆತ್ಮವೇ ಇಲ್ಲದ ದೇಹ, ಪಂಚಭೂತಗಳಲ್ಲಿ ಲೀನ, ಎಲ್ಲವೂ ನೋಡು ನೋಡುತ್ತಲೇ!
ಅರೆ, ಒಂಬತ್ತು ತಿಂಗಳು ಗರ್ಭದಲ್ಲಿದ್ದು, ಪ್ರಸವದಲ್ಲಿ ನೋವನ್ನು ಉಂಡು, ಅಳುವ ದನಿ ಕೇಳಿದಾಗ 'ನೋವು ಮರೆತವಳು' ನಾನಲ್ಲವೇ!
ಪುಟ್ಟ ಹೆಜ್ಜೆಯನ್ನಿಟ್ಟು, ಅಂಗಳದ ರಂಗವಲ್ಲಿಯ ಅಳಿಸಿ ಹಿರಿಹಿರಿ ಹಿಗ್ಗಿದವನು ಇವನಲ್ಲವೇ!
ಹೌದು, ಕರಿಮಣಿ ಮಾಲೀಕನ ಹಿಂಸೆಗೆ ನಲುಗಿದಾಗ, ಕಾರ್ಗತ್ತಲ ಇರುಳಿನಲಿ ಒಬ್ಬಂಟಿಯಾದಾಗ, 'ಅಮ್ಮಾ' ಅನ್ನೋ ಒಂದೇ ಪದದಿಂದ ನೋವ ಮರೆಸಿದವನು ಇವನೇ! ಕರುಳ ಕುಡಿಯಾದರೂ ಆತ್ಮ ಬಂಧುವಿನಂತಾದವನು, ಆತ್ಮ ಸಖನೇ ಆದವನು, ನನ್ನಾತ್ಮವೇ ಆದವನು.
ಹ್ಹ...ಹ್ಹ........... ಹ್ಹ
ಆತ್ಮ, ಆತ್ಮ ಸಖ, ಆತ್ಮ ಬಂಧು.... ಕಣ್ತೆರೆಯುವ ಮೊದಲೇ ಆತ್ಮಾರ್ಪಣೆ ಮಾಡಿದನೆ? ಹತ್ಯೆಯಾಗದ ಆತ್ಮ, ಹತ್ಯೆಯ ಕರಾಳ ಮೊನಚಿಗೆ ಸಿಲುಕಿತೆ?
ಭವಿಷ್ಯದ ಕೈಯ್ಯಲ್ಲಿ ಭೂತದ ನರ್ತನ, ಕಾರಿರುಳ ಮಾರ್ಗದಲಿ ಮಿಂಚುಳ್ಳಿಯ ಬೆಳಕು. ಎಷ್ಟು ದೂರ ಸಾಗಬಲ್ಲೆ? ಇರುಳಿನ ಪರದೆ ಸರಿದು ಬೆಳಕು ಹರಿಯುತ್ತದೆ. ಮತ್ತದೆ 'ಆತ್ಮ' ಬಂದೆನ್ನ ಕಾಡುತ್ತದೆ. ನೆತ್ತಿಯ ಮೇಲೆ ಸುಡು ಸೂರ್ಯ. ದೂರದಲ್ಲೆಲ್ಲೋ ಬಿಸಿಲ್ಗುದುರೆ. ಮತ್ತೆ ಆವರಿಸುತ್ತದೆ ಸದ್ದಿಲ್ಲದೆ ಇರುಳು.
'ಹೋಗಿ ಬರುತ್ತೇನೆ' ಎಂದು ಹೊಸಿಲು ತುಳಿದ ಮಗ. ಭರವಸೆಯ ಬೆಳಕು ಕ್ಷಣ ಕ್ಷಣಕೂ ಕ್ಷೀಣ. ಹುಚ್ಚು ಭರವಸೆಯ ಕಿರಣ, ಅಮಾವಸ್ಯೆಯಲಿ ಬೆತ್ತಲು. ಬದಲಾಯ್ತು ಬದುಕು, ಬರಲಿಲ್ಲ ಆತ್ಮ.......!!!!
-ನಾಗರಾಜ್ ಬಿ.ಎನ್. 

ಶನಿವಾರ, ಜನವರಿ 7, 2017

ವಲಸೆಯ ಬಂಡಿ ಉರುಳಿದಾಗ......
'ಗೇಣುದ್ದ ಹೊಟ್ಟೆ ತುಂಬಿಸಿಕೊಳ್ಳಲು ಊರು ತೊರೆಯುತ್ತಿದ್ದೇವೆ ಎನ್ನುವ ಚಿಕ್ಕ ನೋವು ಬಿಟ್ಟರೆ, ನಮ್ಮದು ತುಂಬು ಕುಟುಂಬ. ಸಂಪಾದಿಸಿದ ಅಷ್ಟೋ ಇಷ್ಟೋ ಹಣದಲ್ಲಿ ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಸಮಾನವಾಗಿ ತಿನ್ನುತ್ತೇವೆ. ಕೂಡಿ ಬಾಳುತ್ತೇವೆ. ನೆಮ್ಮದಿಯ ಬದುಕಿಗೆ ಇನ್ನೇನು ಬೇಕು?'
ಸುರಪುರ ತಾಲೂಕಿನಿಂದ ವಲಸೆ ಹೊರಟ ಕುಟುಂಬವೊಂದರ ಯಜಮಾನನ ಮಾತಿತು. ಶನಿವಾರ ಶಿರಸಿಯಿಂದ ಹುಬ್ಬಳ್ಳಿಗೆ ಬೈಕ್ ಮೇಲೆ ಬರುವಾಗ ಮುಂಡಗೋಡ ಸನಿಹ ಈ ವಲಸೆ ಕುಟುಂಬ ಎದುರಾಯಿತು. ಮೊದಲೇ ಹೆಗಲಿಗೆ ನೇತಾಡುತ್ತಿದ್ದ ಕ್ಯಾಮರಾ, ದೂರದಿಂದಲೇ ಚಕ್ಕಡಿ ಮೇಲೆ ಸಾಲಾಗಿ ಬರುತ್ತಿದ್ದ 'ವಲಸೆ' ಚಿತ್ರವನ್ನು ಸೆರೆಹಿಡಿಯಲು ಪ್ರಯತ್ನಿಸಿತು. ಹತ್ತಿರ ಬರುತ್ತಿದ್ದಂತೆ ಅವರನ್ನು ಮಾತನಾಡಿಸಿದಾಗ, ಕುಟುಂಬದ ಯಜಮಾನ ಹತ್ತು ನಿಮಿಷ ನನಗಾಗಿ ಮೀಸಲಿಟ್ಟ. ಆ ಸೀಮಿತ ಸಮಯದಲ್ಲಿ ನಾ ಮಾತಾಡಿದ್ದು 'ಎಲ್ಲಿಂದ ಬಂದಿದ್ದು? ಯಾಕೆ?' ಎನ್ನು ಎರಡೇ ಎರಡು ಮಾತು. ಅದು ಕೂಡಾ ಒಂದೋ, ಎರಡು ಸೆಕೆಂಡ್. ಉಳಿದದ್ದೆಲ್ಲ ಆತನದ್ದೇ ಮಾತು... ಮಾತು....!
 ಯಜಮಾನನ ಹೆಸರು ಭರಮಪ್ಪ ಚನ್ನಬಸಪ್ಪ. ಸುರಪುರದ ಬಿದೊಡ್ಡಿ ಅನ್ನೋ ಪುಟ್ಟ ಕುಗ್ರಾಮದಲ್ಲಿ ವಾಸ. ಅಣ್ಣ, ತಮ್ಮ, ಅಕ್ಕ ಹಾಗೂ ಅವರ ಸಂಸಾರವೆಂದು ಹದಿಮೂರು ಜನರಿರುವ ತುಂಬು ಕುಟುಂಬ. 36 ಎಕರೆ ಹೊಲವಿರುವ ವಾರಸ್ದಾರ. ಜೋಳ, ಸೂರ್ಯಕಾಂತಿ ಮತ್ತಿನ್ಯಾವುದೋ ಎರಡು ಬೆಳೆ ಬೆಳೆದಿದ್ದನಂತೆ. ಮೊದಲೇ ಬಿಸಿಲು ನಾಡು... ಮಳೆಯೂ ಇಲ್ಲದ ಕಾರಣ ಅವೆಲ್ಲ ಮೊಳಕೆಯೂ ಬರದೆ ಬಿತ್ತಿದ್ದಲ್ಲಿಯೇ ಸುಟ್ಟು ಕರಕಲಾಯ್ತಂತೆ. ತುಂಬ ಕುಟುಂಬ ಊರಲ್ಲೇ ಇದ್ದರೆ ಸಂಸಾರ ಅಸಾಧ್ಯ ಎಂದರಿತ ಆತ, ಊರು ಬಿಡಲು ನಿರ್ಧರಿಸಿ ಕುಟುಂಬದವರ ಜೊತೆ ಚರ್ಚಿಸಿ ಹದಿನೈದು ದಿನದ ಹಿಂದೆ, ಕುಟುಂಬ ಸಮೇತನಾಗಿ ವಲಸೆ ಬಂದಿದ್ದಾನೆ.
ತಮ್ಮ ಪಯಣದ ಗಮ್ಯ ಎಲ್ಲಿಗೆ ಎನ್ನುವುದು ಆ ಕುಟುಂಬಕ್ಕೆ ಗೊತ್ತಿಲ್ಲ. ಬರುವಾಗ ಮನೆಯಲ್ಲಿದ್ದ ಒಂದಿಷ್ಟು ಅಕ್ಕಿ, ಕಾಳು, ಕಡಿಗಳನ್ನು ಹೊತ್ತುಕೊಂಡು ಚಕ್ಕಡಿಗೆ ಹಾಕಿಕೊಂಡು ಬಂದಿದ್ದಾರೆ. ಸಾಯಂಕಾಲವಾಗುತ್ತಿದ್ದಂತೆ ಎಲ್ಲಿ ತಲುಪಿದ್ದಾರೋ ಅದೇ ಊರಲ್ಲಿ ಟೆಂಟ್ ಕಟ್ಟಿಕೊಂಡು, ಬಯಲಲ್ಲಿಯೇ ಅಡುಗೆ ಮಾಡಿ ಅಲ್ಲಿಯೇ ರಾತ್ರಿ ಬೆಳಗು ಮಾಡುತ್ತಾರೆ. ಮುಂಜಾನೆ ಕಿರಣ ಭೂಮಿ ಸ್ಪರ್ಶಿಸುತ್ತಿದ್ದಂತೆ, ಮತ್ತೆ ದಾರಿ ಕಾಣದ ಹಾದಿಯಲ್ಲಿ ಬಂಡಿಯ ಚಕ್ರಗಳು ಉರುಳುತ್ತವೆ, ಬದುಕಿನ ಚಕ್ರ ಉರುಳಿದಂತೆ.
ವಿಶೇಷವೆಂದರೆ ಈ ಕುಟುಂಬ ಕಮ್ಮಾರಿಕೆ ಕಾರ್ಯದಲ್ಲೂ ನಿಪುಣವಿದೆ ಎನ್ನುವುದು. ಇದೇ ಧೈರ್ಯ ಹಾಗೂ ಆತ್ಮವಿಶ್ವಾಸ ವಲಸೆ ಕುಟುಂಬದ ಯಜಮಾನನಿಗೆ. ಆ ಕುಟುಂಬದ ಪಯಣ ಮಲೆನಾಡ ದಿಕ್ಕಿನತ್ತ ಇರುವುದರಿಂದ, ಅಲ್ಲಿಯ ರೈತಾಪಿ ವರ್ಗದವರ ನೇಗಿಲು, ಕತ್ತಿ, ಕೊಡಲಿ, ಹಾರಿ, ಪಿಕಾಸುಗಳಂತ ಸಾಮಗ್ರಿಗಳಿಗೆ ಈ ಸಮಯದಲ್ಲಿ ಒಂದಿಷ್ಟು ಹದ ಹಾಕಬೇಕಾಗುತ್ತದೆ. ಸೂಕ್ತ ಗ್ರಾಮಕ್ಕೆ ಹೋಗಿ ಅಲ್ಲಿಯೇ ಒಂದಿಷ್ಟು ದಿನ, ವಾರವೋ ಉಳಿದು ಸಂಸಾರದ ನೊಗ ಹೊರುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಆತನ ಮಾತಿನಿಂದಲೂ ತಿಳಿದು ಬಂದ ಅಂಶ.
ಏಳು ಎತ್ತಿನ ಬಂಡಿಯಲ್ಲಿ ಹದಿಮೂರು ಜನರಷ್ಟೇ ಪಯಣಿಸುತ್ತಿಲ್ಲ. ಆ ಪಯಣದಲ್ಲಿ ಎರಡು ನಾಯಿ, ನಾಲ್ಕು ಕುರಿ, ಐದು ಕೋಳಿಗಳು ಸಹ ಕಾಣದ ಊರಿನತ್ತ ಮುಖ ಮಾಡಿವೆ. ಎತ್ತುಗಳಿಗೆ ಸಾಕಾಗುವಷ್ಟು ಹುಲ್ಲುಗಳನ್ನು ಒಂದು ಚಕ್ಕಡಿಯಲ್ಲಿ ತುಂಬಿಸಿಕೊಂಡಿದ್ದಾರೆ. ಹಾಸಿಗೆ, ದಿಂಬು, ಪಾತ್ರೆ, ಬಿಂದಿಗೆ, ಕೊಡ, ವಸ್ತ್ರ ಹೀಗೆ ಬದುಕಲು ಏನೇನು ಬೇಕೋ ಎಲ್ಲವೂ ಇನ್ನುಳಿದ ಆರು ಚಕ್ಕಡಿಯಲ್ಲಿ ತುಂಬಿವೆ. ಹಗಲಿನ ಹಾದಿಯಲ್ಲಿ ಹೆಂಗಸರು, ಮಕ್ಕಳು ವಿಶ್ರಮಿಸಲೆಂದು ಚಾಪೆಯನ್ನು ಹಾಸಲಾಗಿದೆ. ಒಂದು ವೇಳೆ ರಾತ್ರಿ ಪಯಣಿಸಬೇಕಾದರೆ ಯಾವುದಕ್ಕೂ ಇರಲಿ ಎಂದು, ಕಂದೀಲುಗಳನ್ನು ಸಹ ವ್ಯವಸ್ಥೆ ಮಾಡಿಟ್ಟುಕೊಂಡಿದ್ದಾರೆ.
'ತುತ್ತು ಕೂಳಿಗಾಗಿ ಮನೆ ಬಿಟ್ಟು ಬಂದಿರಬಹುದು. ಆದರೆ ನಾವು(ಅಣ್ಣ-ತಮ್ಮ) ಪ್ರೀತಿ ವಿಶ್ವಾಸದಿಂದ ಕೂಡಿ ಬಾಳುತ್ತಿದ್ದೇವೆ. ಸಂಪಾದಿಸಿದ ಒಂದಿಷ್ಟು ಹಣದಲ್ಲಿ ಎಲ್ಲರೂ ಹಂಚಿಕೊಂಡು ತೃಪ್ತಿಯಿಂದ ನಗುತ್ತೇವೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕುವ ಶಕ್ತಿ ನಮ್ಮ ಅಣ್ಣ-ತಮ್ಮರಿಗಿಲ್ಲ. ಹೆಣ್ಣು ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಬೇಸಿಗೆ ಬರುವವರೆಗೆ ವಲಸೆ ಇರುತ್ತೇವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಊರಿನ ಕಡೆ ಮುಖ ಮಾಡುತ್ತೇವೆ. ಎಲ್ಲವೂ ಭಗವಂತನ ಚಿತ್ತ. ಇರುವಷ್ಟು ದಿನ ಮನೆ&ಮಂದಿಯೊಂದಿಗೆ ಪ್ರೀತಿಯಿಂದ ನಗುತ್ತ ಬದುಕುವುದಷ್ಟೇ ನಮಗೆ ಗೊತ್ತು' ಎನ್ನುವುದು ಭರಮಪ್ಪನ ಬದುಕಿನ ಮಾತು.

ನಿಜಕ್ಕೂ ಆ ಕ್ಷಣದಲ್ಲಿ ಕಣ್ಣಾಲಿಗಳು ತೇವಗೊಂಡವು. ಹೊಟ್ಟೆಗೆ ಕೂಳಿಲ್ಲದಿದ್ದರೂ ಸಂತೃಪ್ತಿಯಿಂದ ಕುಟುಂಬದವರೊಂದಿಗೆ ಹೇಗೆ ಬದುಕಬೇಕೆನ್ನುವ ನೀತಿ ಪಾಠ ಭರಮಪ್ಪ ಹೇಳಿದ್ದ.......