ಶನಿವಾರ, ಡಿಸೆಂಬರ್ 28, 2013

ಪ್ರೀತಿ ಹುಟ್ಟುವುದು ಕಣ್ಣಿನಿಂದ, ಆದರೆ......!

ಪ್ರೀತಿ ನಮಗೆ ಬೇಕು ಅಂದಾಗ ಹುಟ್ಟುವುದಿಲ್ಲ. ಹಾಗೆ, ನಾನು ಪ್ರೀತಿಸಲೇ ಬೇಕು ಎಂದು ಹುಡುಕುತಾ ಹುಡುಕುತಾ ಹೋದರೆ ಸಿಗುವ ವಸ್ತುವು ಅದಲ್ಲ. ಸಿಗದೆ ಇದ್ದಾಗಲೂ ಯಾರೋ ಸುಂದರವಿರುವ ಹುಡುಗ/ಹುಡುಗಿಯರನ್ನು ಕಂಡು ಅವರು ನಮಗೆ ಇಷ್ಟ ಆಗಿ, ಇವರೆ ಸರಿ ಎಂದು ಪ್ರಸ್ತಾಪ ಮಾಡಿ `ನನ್ನನ್ನು ಪ್ರೀತಿಸು, ನಿನ್ನನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲಾ ಎಂದು' ಕೇಳಿಕೊಳ್ಳುವುದು ನಿಜವಾದ ಪ್ರೀತಿಯಲ್ಲ.
'ನಿಜವಾದ ಪ್ರೀತಿ' ಹುಟ್ಟೋದೆ ಒಂದು 'ವಿಸ್ಮಯ'. ಅದು ಹುಟ್ಟೊದು ಕಣ್ಣಿಂದ; ಅಕಸ್ಮಾತಾಗಿ ನಮ್ಮ ನೋಟ ಮತ್ಯಾರದೊ ನೋಟ ಆಗಿ ಮನಸ್ಸಿಗೆ ತಾಗಿ ಒಂದು ಕ್ಷಣ ಅಂತರಾಳದಲ್ಲಿ ನಡುಕವಾಗಿ, ಚಿತ್ತ ಚಂಚಲವಾಗಿ, ಮನಸ್ಸು ಶಾಂತವಾಗಿ, ಮತ್ತೊಂದು ಅರಿಯದ ಲೋಕದಲ್ಲಿ ತೇಲಾಡಿದಂತ ಅನುಭವವಾಗುತ್ತದೆ. ಜೊತೆಗೆ ನಮ್ಮ ನೋಟಕ್ಕೆ ನೋಟ ಪರಸ್ಪರ ಢಿಕ್ಕಿಯಾಗಿ, ನಮಗಿಷ್ಟದ ಮೊಗದಲ್ಲಿ ಸೂಕ್ಷ್ಮ ಬದಲಾವಣೆ, ಕಣ್ಣಿನಲ್ಲಿ ಚಂಚಲತೆ ಮತ್ತು ನಮ್ಮ ನೋಟಕ್ಕೆ ಸಿಕ್ಕಿಹಾಕಿಕೊಂಡೆನೆಂಬ ಭಾವದಿಂದ ತಪ್ಪಿಸಿಕೊಂಡು ಹೋಗುವ ಆತುರ ಉಂಟಾಗುತ್ತದೆ. ಈ ಅನುಭವ ಮತ್ತು ಆತುರ ನಮಗೂ ಆಗುತ್ತದೆ. ಈ ರೀತಿಯಲ್ಲಿ ಉಂಟಾಗುವ ಮಧುರ ಕ್ಷಣವೆ 'ನಿಜವಾದ ಪ್ರೀತಿಯ ಉಗಮ'.
ಹೀಗೆ ಹುಟ್ಟಿದ ಪ್ರೀತಿ ಮತ್ತೆ ಮತ್ತೆ ಅನಿರೀಕ್ಷಿತವಾಗಿ ಎದುರಾಗುತ್ತದೆ. ನಮಗೆ ತಿಳಿಯದೆ ನಮ್ಮ ಮನಸ್ಸು ಪ್ರೀತಿಯ ಸನಿಹದಲ್ಲೆ ಇರಲು ಚಡಪಡಿಸುತ್ತದೆ. ಎದುರು ಬರಲು ಭಯವಾಗುತ್ತದೆ. ದೂರವಿರಲು ಬೇಸರವಾಗುತ್ತದೆ. ಮಾತನಾಡಬೇಕೆನಿಸಿದರು ಮಾತನಾಡಲು ಸಂಕೋಚವಾಗಿ ನಾಲಿಗೆ ತೊದಲುತ್ತದೆ. ಇಷ್ಟಾದರು ಮತ್ತೆ ಮತ್ತೆ ನೋಡಬೇಕು, ಮಾತನಾಡಬೇಕು ಅನಿಸುತ್ತಲೇ ಇರುತ್ತದೆ.
ಹೀಗೆ ಮನಸ್ಸು ಮನಸ್ಸು ಒಂದಾಗಿ, ಕನಸು ಕಲ್ಪನೆಗಳಲ್ಲಿ ಒಂದಾಗಿ `ಪ್ರೀತಿ ಭಾವ' ನುಡಿಯಾಗಿ `ನಾನು ನಿನ್ನನ್ನು ಪ್ರೀತಿಸುತ್ತೇನೆ' ಅಂತಾ ಹೃದಯದಿಂದ ಹೊರಬರುವ ಉಸಿರಿಗೆ ಪ್ರತಿಯಾಗಿ `ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂಬ ಉಸಿರು ಒಂದಾಗುತ್ತದೆ. ಕಣ್ಣಿಂದ ಹುಟ್ಟಿದ ಪ್ರೀತಿ ಎರಡು ಹೃದಯಗಳನ್ನು ಒಂದಾಗಿಸಿ ಪ್ರೀತಿಯನ್ನು ಗೆಲ್ಲಿಸುತ್ತದೆ. ಹೀಗಿರುವಾಗ....
ಸಾಮಾನ್ಯವಾಗಿ ಎಲ್ಲರಿಗೂ ಪ್ರೀತಿಯನ್ನು ಹುಡುಕುವ ಆತುರ. ಹುಡುಕಿ... ಅದು ತಪ್ಪಲ್ಲ. ಪ್ರೀತಿ ಅನ್ನೋದು ಸುಂದರ ಭಾವನೆಗಳ ವಿಲಾಸ. ಹಾಗೆಯೇ ಪ್ರೀತಿ ಕಣ್ಣಿಂದ ಹುಟ್ಟುತ್ತದೆ ಎಂದು, ಕಣ್ಣನ್ನೆ ನೋಡುತ್ತಾ ಹುಡುಕುವುದು ತಪ್ಪು. ನೋಟಕ್ಕೆ ನೋಟ ಢಿಕ್ಕಿ ಆಗೋದು ಅರಿವಿಲ್ಲದೆ! ಪ್ರೀತಿ ಹುಡುಕುವ ಗುಂಗಿನಲ್ಲಿ ಸೌಂದರ್ಯ, ಮೋಹ, ಆಸೆಗೆ ಬಲಿಯಾಗಿ ನಿಜವಾದ ಪ್ರೀತಿ ಇರದೆ ಯಾರನ್ನೋ ಇಷ್ಟ ಪಟ್ಟು ಮೋಸ ಹೋಗಿ ಬದುಕನ್ನು ಹಾಳು ಮಾಡಿಕೊಳ್ಳಬಾರದು. ಪ್ರೀತಿ ಬದುಕಿಗೆ ಸ್ಪೂತರ್ಿಯಾಗಿ ಉನ್ನತ ಮಟ್ಟಕ್ಕೆ ಒಯ್ಯಬೇಕೆ ಹೊರತು ಪ್ರೀತಿಯಿಂದ ಬದುಕೇ ಅವನತಿಯಾಗಬಾರದು. 

ಶುಕ್ರವಾರ, ಡಿಸೆಂಬರ್ 27, 2013

ನಾನು... 'ಚಿಂದಿ' ಆಯುವ ಹುಡುಗಿ!

ಚಿಂದಿಯಾಯಿತಮ್ಮ ಈ ಬದುಕು ಚಿಂದಿಯಾಯಿತಮ್ಮ
ಓದು-ಬರಹ ಇಲ್ಲದ ಬಾಳು ಕುಂದಿಹೋಯಿತಮ್ಮ
ದುಡಿಮೆಯಲ್ಲಿಯೇ ಈ ಬದುಕು ಬಂಧಿಯಾಯಿತಮ್ಮ
ಹಕ್ಕಿಯ ಹಾಗೆ ಹಾರುವ ಆಸೆ ಕಮರಿ ಹೋಯಿತಮ್ಮ....
"ನಾನು ಮೀನಾ, 11 ವರ್ಷ ಆಗಿರಬಹುದು. ಅಪ್ಪ-ಅಮ್ಮ ಯಾರು ಅಂತ ಗೊತ್ತಿಲ್ಲ. ಚಿಂದಿ ಆಯುವುದು ನನ್ನ ನಿತ್ಯ ಕಾಯಕ. ಕೆಲಸದ ಮಧ್ಯೆ ಮಧ್ಯೆ ಸಾರ್ವಜನಿಕ ಪಾಕರ್್ಗಳಲ್ಲಿ ಜೋಕಾಲಿಯಾಡುತ್ತ ದಿನ ಕಳೆಯುತ್ತೇನೆ. ಕೆಳಗಿನಿಂದ ಮೇಲಕ್ಕೇರುತ್ತ ಹೋಗುವುದು ಎಷ್ಟು ಮೋಜೆನಿಸುತ್ತದೆ ಗೊತ್ತಾ...? ಆದರೆ, ಇದು ಆಟಕ್ಕೆ ಮಾತ್ರ ಸೀಮಿತ. ಬದುಕೆನ್ನುವುದು ಜೋಕಾಲಿಯಾಗಲಿಲ್ಲ; ಜಾರು ಬಂಡಿಯಷ್ಟೆ! ದಿನ-ಪ್ರತಿದಿನ ಈ ಬದುಕು ನನ್ನನ್ನು ಪ್ರಪಾತಕ್ಕೆ ಇಳಿಸುತ್ತಲೇ ಹೋಯಿತು. ಅಲ್ಲಿಂದ ಮೇಲೇಳೊ ಆಸೆ ಇದ್ದರೂ... ಉತ್ಸಾಹ ಇಲ್ಲ. ಕಾರಣ ನನಗೆ ಗೊತ್ತು, ಅದು ನಿಲುಕದ ನಕ್ಷತ್ರ... ಬತ್ತಿ ಹೋದ ಚಿಲುಮೆ.
ಬೀದಿಯಲ್ಲಿ ಅಲೆಯುವೆನು ಕಸವ ಹುಡುಕಿ ಹುಡುಕಿ
ರಟ್ಟು, ಪ್ಲಾಸ್ಟಿಕ್, ಕಬ್ಬಿಣ ಆಯುವೆನು ಕೆದಕಿ ಕೆದಕಿ...
ನನ್ನ ಹಾಗೆ ಚಿಂದಿ ಆಯ್ದು ಭಿಕ್ಷೆ ಬೇಡುವವರೆ ನನ್ನ ಸ್ನೇಹಿತರು, ಬಂಧುಗಳು ಎಲ್ಲವೂ. ನನ್ನದೊಂದು ಕಥೆಯಾದರೆ ನನ್ನ ಸ್ನೇಹಿತೆ ಗಂಗಾಳದು ಇನ್ನೊಂದು ಕಥೆ. ಅವಳು ತನ್ನ ತಮ್ಮನನ್ನು ಕಂಕುಳಲ್ಲಿ ಕಟ್ಟಿಕೊಂಡೆ ಓಡಾಡಬೇಕು. ನಾನು ಜೋಕಾಲಿ ಆಡುವಾಗ, ಅವಳ ಕಣ್ಣಂಚಿನಲಿ ಜಿನುಗುವ ನೀರು...! ನನಗೆ ಜೋಕಾಲಿ ಆಡಲಾದರೂ ಸ್ವಾತಂತ್ರ್ಯವಿದೆ, ಸುಖವಿದೆ. ಅವಳು ಆಡಲೆಂದು ಕೂತಾಗ ಅವಳ ಪುಟ್ಟ ತಮ್ಮ ಜೋಕಾಲಿಯನ್ನು ಹಿಡಿದು ನಿಂತಿರುತ್ತಾನೆ. ಈ ಕಡೆ ಜೋಕಾಲಿ ತೂಗುವ ಹಾಗೂ ಇಲ್ಲ, ತಮ್ಮನನ್ನು ಕುಳ್ಳಿರಿಸಿಕೊಂಡು ಆಡುವ ಹಾಗೂ ಇಲ್ಲ. ಯಾಕೆಂದರೆ ಅವನೆಲ್ಲಿಯಾದರೂ ಬಿದ್ದು ಹೋದರೆಂಬ ಭಯ. ಹಾಗೆ ಅವಳ ದಿನವೆಲ್ಲ ಚಿಂದಿ ಆಯುವುದರಲ್ಲಿಯೆ, ತಮ್ಮನ ಕಾಪಿಡುವುದರಲ್ಲಿಯೆ ಕಳೆದು ಹೋಗುತ್ತದೆ. ಹೆಗಲಲ್ಲೊಂದು ಚೀಲ, ಬಗಲಲ್ಲೊಂದು ಕೂಸು, ಮಗ್ಗಲುಗಳೆರಡು ನಗ್ಗಿಹೋಗಿವೆ. ತೊಗಲೆಂಬುದು ದೊಗಲಾಗಿದೆ...
ನಮಗೆ ದಿಕ್ಕು, ದೆಸೆ, ಮನೆ-ಮಠ ಎಂಬುದಿಲ್ಲ. ಹಾದಿ ಬೀದೆಯೇ ವಾಸಸ್ಥಾನ. ಗಿಡ-ಮರಗಳ ನೆರಳೆ ಆಶ್ರಯ ತಾಣ. ಶಾಲೆ-ಮಂದಿರಗಳೆ ಗುಡಿಸಲುಗಳು. ಒಮ್ಮೊಮ್ಮೆ ಆಕಾಶವೆ ಹೊದಿಕೆ! ನಮ್ಮಲ್ಲಿ ಕೆಲವರಿಗೆ ಅಪ್ಪ-ಅಮ್ಮರಿದ್ದಾರೆ. ಬಹುತೇಕರಿಗೆ ಆ `ಬಂಧ'ದ ಅರ್ಥವೇ ತಿಳಿದಿಲ್ಲ. ಜೀವನ ನಿರ್ವಹಣೆಗೆ ಈ ಚಿಂದಿ ಆಯೋ ಕಾಯಕ. ಅದನ್ನು ಬಿಟ್ಟರೆ ಬೇರೆ ಕೆಲಸ ತಿಳಿದಿಲ್ಲ.
ಬೀದಿಯುದ್ದಕ್ಕೂ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ, ಬೇಡೆವೆಂದು ಬೀಸಾಕಿದ ಅನುಪಯುಕ್ತ ವಸ್ತುಗಳಲ್ಲಿ, ತ್ಯಾಜ್ಯಗಳಲ್ಲಿ ಹಾಲಿನ ಕೊಟ್ಟೆ, ರಟ್ಟು, ತಗಡಿನ ಚೂರು ಇನ್ನಿತರ ವಸ್ತುಗಳನ್ನು ಹೆಕ್ಕುತ್ತೇವೆ. ಅದನ್ನು ಮಾರಿ ಅಂದಿನ ಬದುಕನ್ನು ದೂಡುತ್ತೇವೆ. ಒಂದರ್ಥದಲ್ಲಿ ಬೇಡೆವೆಂದು ಬೀಸಾಕಿದ ಕಸಗಳಲ್ಲಿ ಬದುಕನ್ನು ಕಾಣುವವರು ನಾವು... ನನಸಾಗದ ಕನಸನ್ನು ಹೆಣೆಯುತ್ತ ಸಂಭ್ರಮಿಸುವವರು ನಾವು... ಇಲ್ಲದ್ದರಲ್ಲಿ ಇದ್ದದ್ದನ್ನು ಹುಡುಕುವವರು ನಾವು...
ತಿಪ್ಪೆಯ ಕಸವನ್ನು ಹುಡುಕುತ್ತ, ಹುಡುಕುತ್ತ ಅಲೆಮಾರಿಯ ಹಾಗೆ ಎಲ್ಲೆಲ್ಲಿಗೋ ಹೋಗುತ್ತೇವೆ. ಗುರಿಯಿಲ್ಲದ ಜೀವನ ಸಾಗಿಸುವ ನಮಗೆ ನಾಳೆಯ ಚಿಂತೆಯಿಲ್ಲ. ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ಜನವಸತಿ ಹೆಚ್ಚಿರುವ ನಗರ ಪ್ರದೇಶಗಳಲ್ಲಿ ನಾವು ಹೆಚ್ಚಾಗಿ ಕಾಣ ಸಿಗುತ್ತೇವೆ. ಚರಂಡಿ, ಕೊಳಕು ಪ್ರದೇಶವೆ ನಮ್ಮ ಕಾರ್ಯ ಕ್ಷೇತ್ರವಾಗಿರುವದರಿಂದ ಕೊಳಕಾಗಿ ಕಾಣುತ್ತೇವೆ. ಇದರಿಂದ ಬಹುತೇಕರು ನಮ್ಮನ್ನು ಕಂಡರೆ ದೂರ ಸರಿಯುತ್ತಾರೆ. ಅದೂ ಸಹಜ ಬಿಡಿ. ನಮ್ಮಗಳ ವೇಷ ಅವರ ಮನಸ್ಸಿಗೆ ಸರಿ ಹೊಂದುವಂತದಲ್ಲ. ಕೊಳಕು ಬಟ್ಟೆ, ಹರಿದ ಅಂಗಿ, ಕೃಶ ಕಾಯ, ಎಣ್ಣೆ ಕಾಣದ ತಲೆ, ಬಾಚಣಿಗೆ ನೋಡದ ಕೂದಲು, ಸ್ನಾನವಿಲ್ಲದ ದೇಹ, ಗಬ್ಬೆದ್ದು ನಾರುತ್ತಿರುವ ಮೈ... ಹೀಗೆ ಅನೇಕ ಕುಂದುಗಳು ನಮ್ಮನ್ನು ಬಿಗಿದಪ್ಪಿವೆ.
ಕಣ್ಣಂಚಿನಲ್ಲಿದ್ದ ಕನಸುಗಳು ಕಸದಲ್ಲಿ ಕಸವಾಗಿ ಹೋಗಿವೆ. ಒಂದೇ ತರದ ಸಮವಸ್ತ್ರ ತೊಟ್ಟು ಕುಣಿಯುತ್ತ, ನಲಿಯುತ್ತ ಶಾಲೆಗೆ ಓಡುವ ಮಕ್ಕಳನ್ನು ಕಂಡಾಗ ನಮ್ಮಲ್ಲಿ ಅಸೂಯೆ ಹುಟ್ಟುವುದು ಸಹಜವಲ್ಲವೇ? ಯಾವ ತಪ್ಪಿಗಾಗಿ ನಮಗೆ ಈ ಶಿಕ್ಷೆ? ನಮ್ಮೆಲ್ಲ ಕಷ್ಟ-ಕಾರ್ಪಣ್ಯಗಳು, ನೋವುಗಳು ಯಾರಿಗೆ ತಾನೆ ಅರ್ಥವಾದೀತು? ಯಾರಲ್ಲಿ ಹೇಳಿಕೊಂಡು ಮನಸ್ಸಿನ ಭಾರ ಇಳಿಸಿಕೊಳ್ಳುವುದು? ಹಿಂದು-ಮುಂದಿಲ್ಲದ ನಮಗೆ ಬಡತನ ಎಂಬುದು ಬೆನ್ನಿಗಂಟಿಕೊಂಡು ಬಂದ ಶಾಪವಾಗಿದೆ. ಒಮ್ಮೊಮ್ಮೆ ಯಾವ್ಯಾವುದೋ ಕಾರಣಕ್ಕೆ ಒಬ್ಬರನ್ನೊಬ್ಬರು ಕಿತ್ತಾಡಿಕೊಂಡು ಜೋರಾಗಿ ಅಳುತ್ತೇವೆ. ಆಗ ನಮ್ಮನ್ನು ಯಾರೂ ಕೇಳುವುದಿಲ್ಲ.. ಸಂತೈಸುವುದಿಲ್ಲ.. ಮರುಗುವುದಿಲ್ಲ.. ನಾವೇ ನಮಗೆ ಅಪ್ಪ, ಅಮ್ಮ. ಅಮ್ಮನ `ಮಮತೆಯ ಮಡಿಲು... ಅಪ್ಪನ ಬೆಚ್ಚನೆ ಆಸರೆ...' ಎರಡನ್ನು ಕಾಣದ, ನೋಡದ ನತದೃಷ್ಟರು, ಅನಾಥರು.
ನಮ್ಮ ಜೀವನದ ಏಕೈಕ ಗುರಿ `ಒಪ್ಪತ್ತಿನ ಗಂಜಿ..!' ತುತ್ತಿನ ಚೀಲ ತುಂಬಿಸಲು ಅನಿವಾರ್ಯವಾಗಿ ಚಿಂದಿ ಆಯಬೇಕಾಗಿದೆ. ಕೆಲವೊಮ್ಮೆ ಸಂಬಂಧಗಳ ಅರ್ಥ ಗೊತ್ತಿಲ್ಲದ ನಾವು, ಮನುಷ್ಯ ರೂಪದ ಮೃಗಗಳೆ? ಎಂದೆನಿಸುತ್ತವೆ. ನಮ್ಮಯ ಬದುಕು, ಶೈಲಿ, ಆಚಾರ, ವಿಚಾರ ಎಲ್ಲವೂ ಭಿನ್ನ-ವಿಭಿನ್ನ. ನಾವು ಪಾರ್ಕಲ್ಲೋ.. ಬೀದಿಯಲ್ಲೂ.. ಎಲ್ಲೆಂದರಲ್ಲಿ ಮಲಗಿ ನಿದ್ರಿಸುತ್ತೇವೆ. ನಿದ್ದೆ ಎಂಬುದು ದೇವರು ಕೊಟ್ಟ ವರ. ಅದರಲ್ಲಷ್ಟೆ ನಾವು `ಆಗರ್ಭ ಶ್ರೀಮಂತ'ರು!" ಎಂದು ಕಣ್ಣರಳಿಸುತ್ತ, ಅಲ್ಲೇ ಪಕ್ಕದ ಚರಂಡಿಯಲ್ಲಿ ಬಿದ್ದ ಪ್ಲಾಸ್ಟಿಕ್ ಆಯಲು ಹೊರಟಳು.
ಇದು ಚಿಂದಿ ಆಯೋ ಮುಗ್ಧ ಬಾಲೆಯ ಮನದಾಳದ ಮಾತುಗಳು. ಅವಳ ಮಾತಲ್ಲಿ ನೋವಿದೆ, ನಲಿವಿದೆ.. ಕಂಡೂ ಕಾಣದ ಕನಸಿದೆ. ನಗರ ಪ್ರದೇಶದ ಕೊಳಚೆಯಲ್ಲಿ, ಚರಂಡಿಗಳಲ್ಲಿ ಕಂಡು ಬರುವ ಇವರು ಪ್ರಜ್ಞಾವಂತರ ಸೋಗಿನಲ್ಲಿರುವ ನಮಗೆ ಹೇಸಿಗೆ ಹುಟ್ಟಿಸುತ್ತಾರೆ..? `ಅಸಹ್ಯ.. ಹೊಲಸು ಸ್ಥಳಗಳಲ್ಲಿ ಓಡಾಡುತ್ತ, ನಿರುಪಯುಕ್ತ ವಸ್ತುಗಳನ್ನು ಹೆಕ್ಕುತ್ತಾರಲ್ಲ' ಎಂದು. ಹಾಗೆ ಮಾಡಿದರೆ ಮಾತ್ರ ಅವರ ತುತ್ತಿನ ಚೀಲ ತುಂಬುವುದು ಎಂಬ ಸಾಮಾನ್ಯ ಜ್ಞಾನ ನಮ್ಮಲ್ಲಿಲ್ಲ. ಹಿಂಬಾಲಿಸಿಕೊಂಡು ಬಂದ ಬಡತನ ಅವರನ್ನು ಹಿಂಡಿ, ಹಿಪ್ಪಿ ಮಾಡಿ ತೇಗಿ ಬಿಡುತ್ತಿವೆ. ಸುಂದರ ಕನಸನ್ನು ಕಟ್ಟಿಕೊಂಡು ಆಡಿ ನಲಿಯಬೇಕಾದ ವಯಸ್ಸಲ್ಲಿ ಹಲವು ಭಾರಗಳನ್ನು ಹೊತ್ತು ಸಾಗಬೇಕಾದ ಶೋಚನೀಯ ಸ್ಥಿತಿ.
ಪ್ರಪಂಚ ಅರಿಯದ ಪುಟ್ಟ ಕಂದಮ್ಮಗಳು ಮೈ ಕೈಗೆ ಕೊಳಕು ಅಂಟಿಸಿಕೊಂಡು ತಿಪ್ಪೆಯಲ್ಲಿ ಓಡಾಡುವ ದೃಶ್ಯ ಕರುಣಾಜನಕ. ಅಮ್ಮ ಲಗುಬಗೆಯಿಂದ ಚಿಂದಿ ಆಯುತ್ತ ಮುಂದೆ ಸಾಗುತ್ತಿದ್ದರೆ, ಹಿಂದೆ ಹಾಲುಗಲ್ಲದ ಪುಟ್ಟ ಮಗು ಅಳುತ್ತ, `ಅಮ್ಮಾ.. ಎಂದು ಕೈ ಮುಂದೆ ಮಾಡಿ ಓಡುವ ದೃಶ್ಯ'ವಂತೂ ಕರಳು ಹಿಂಡುವಂಥದ್ದು. ಒಮ್ಮೊಮ್ಮೆ ಸೊಂಟಕ್ಕೆ ಹಾಲು ಕುಡಿಯುವ ಮಗುವನ್ನು ಕುಳ್ಳಿರಿಸಿಕೊಂಡು, ಇನ್ನೊಂದು ಬಗಲಲ್ಲಿ ಚಿಂದಿ ಮೂಟೆ ಇಟ್ಟುಕೊಂಡು ತನ್ನ ಕಾಯಕದಲ್ಲಿ ತೊಡಗುತ್ತಾಳೆ. ಕೆಲವು ಬಾರಿ ಕಸದ ರಾಶಿಯಲ್ಲೆ ಮಗುವನ್ನು ಕುಳ್ಳಿರಿಸಿ ಹೊಟ್ಟೆ ತುಂಬಿಸುತ್ತಾಳೆ.
ಹೀಗೆ ಚಿಂದಿ ಆಯುವವರು ದಿನವಿಡೀ ಆಯ್ದ ಚಿಂದಿಯನ್ನು ಬೇರ್ಪಡಿಸಿ ಮಾರಿ, ಗಂಜಿಗೆ ಅಲ್ಪ ಸ್ವಲ್ಪ ಕಾಸು ಸಂಪಾದಿಸುತ್ತಾರೆ. ಹಾದಿಬೀದಿಯಲ್ಲೆ ಗಂಜಿ ಬೇಯಿಸಿ ಹಸಿದ ಹೊಟ್ಟೆ ತುಂಬಿಸಿಕೊಂಡು, ಆಕಾಶ ನೋಡುತ್ತ ಸಂತೃಪ್ತಿಯಿಂದ ನಿದ್ರೆಗೆ ಜಾರುತ್ತಾರೆ. ಬೆಳಕು ಹರಿಯುತ್ತಿದ್ದಂತೆ ಮತ್ತದೆ ಕಾಯಕ...!
2010ರಲ್ಲಿ ನವದೆಹಲಿಯ ಚರಂಡಿಯೊಂದಲ್ಲಿ ಚಿಂದಿ ಆಯುವಾಗ ಕೆಲವು ಮಕ್ಕಳು ಅಶ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಅವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿತ್ತು. ಕೊನೆಗೆ ಆತ ನರಳಿ ನರಳಿ ಪ್ರಾಣ ಬಿಟ್ಟ. ಕಾರಣ ಚರಂಡಿಯಲ್ಲಿರುವ ವಿಷಾನಿಲ ಆತನ ಶ್ವಾಸಕೋಶದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಿತ್ತು. 2011ರಲ್ಲಿ ಬೆಂಗಳೂರಿನ ಬಡಾವಣೆಯೊಂದರಲ್ಲಿ ಚಿಂದಿ ಆಯುವ ಹುಡುಗರು ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದ್ದರು. ಅವರಲ್ಲಿ ಒಬ್ಬನು ಕೋಪದಿಂದ ಇಟ್ಟಿಗೆ ತುಂಡೊಂದನ್ನು ಇನ್ನೊಬ್ಬನ ತಲೆ ಮೇಲೆ ಎತ್ತಿ ಹಾಕಿ ಪ್ರಾಣ ತೆಗೆದಿದ್ದಾನೆ. ಇದು ಕೆಲವು ನಿದರ್ಶನಗಳು ಮಾತ್ರ. ಪ್ರಪಂಚ ಜ್ಞಾನವಿಲ್ಲದ ಅವರು ಅನಾಗರಿಕರ ಹಾಗೆ ವರ್ತಿಸುವಲ್ಲಿ ಪ್ರಜ್ಞಾವಂತ ಸಮಾಜದ ನಿರ್ಲಕ್ಷ್ಯವೂ ಕಾರಣವಾಗಿದೆ.
ಒಂದು ಹೊತ್ತಿನ ಊಟಕ್ಕೆ ಐದತ್ತು ನಿಮಿಷ ತಡವಾದರೆ ಆಕಾಶವೆ ಕಳಚಿ ಬಿದ್ದ ಹಾಗೆ ನಾವು ವರ್ತಿಸುತ್ತೇವೆ. ಆದರೆ,  ತಿಂಗಳಾನುಗಟ್ಟಲೆ ಸರಿಯಾಗಿ ಊಟ-ತಿಂಡಿಯಿಲ್ಲದ ಅವರ ಬಾಳು ಹೇಗಿರಬೇಡ..? ಹಸಿದ ಹೊಟ್ಟೆಯ ವೇದನೆ ಹಸಿದವರಿಗೆ ಗೊತ್ತು. ಬಡತನ ನಿರ್ಮೂಲನೆಗಾಗಿ ಸರಕಾರ ಸಾವಿರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತವೆ. ಅವೆಲ್ಲ ಕಾಗದ ಪತ್ರಗಳ ದಾಖಲೆಗೆ ಮಾತ್ರವೆ ಹೊರತು, ಇಂತಹ ನಿರ್ಗತಿಕರಿಗೆ ತಲುಪುವಲ್ಲಿ ವಿಫಲವಾಗಿದೆ. ನೂರಾರು ಕೋಟಿ ರೂ.ಗಳನ್ನು ಸರಕಾರ ಪ್ರತಿನಿತ್ಯ ಖರ್ಚು ಮಾಡುತ್ತವೆ. ಬಂಡವಾಳ ಶಾಹಿಗಳ ಲಕ್ಷಾಂತರ ಕೋಟಿ ರೂ. ತೆರಿಗೆಯನ್ನು ಮನ್ನಾ ಮಾಡುತ್ತಿವೆ. ಈ ಬಹುಪಾಲುಗಳಲ್ಲಿ ಒಂದು ಅಂಶವನ್ನಾದರೂ ಈ ಚಿಂದಿ ಆಯುವ ನಿರ್ಗತಿಕರಿಗೆ ಮೀಸಲಿಟ್ಟರೆ ಅವರು ಸ್ವಚ್ಛಂದವಾಗಿ ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದರು. ಇದಕ್ಕೆಲ್ಲ ರಾಜಾಕೀಯ ಇಚ್ಛಾಶಕ್ತಿ... ಅಧಿಕಾರಿಗಳ ಕಾಳಜಿ... ಸಂಘ ಸಂಸ್ಥೆಗಳ ಪರಿಶ್ರಮ ಹಾಗೂ ಸಮಸ್ತ ನಾಗರಿಕರ ಸಹಾಯ ಸಹಕಾರ ಬೇಕಾಗಿದೆ.
ಭ್ರಷ್ಟಾಚಾರದ ಕಬಂಧ ಬಾಹು ಎಲ್ಲೆಡೆ ವ್ಯಾಪಿಸಿ, ರುದ್ರ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ, `ಚಿಂದಿ' ಆಯುವ ಚಿನ್ನರ ಬದುಕು ಚಂದವಾಗಲು ಸಾಧ್ಯವೇ....?
-ನಾಗರಾಜ ಬಿ. ಎನ್.
ಬಾಡ-ಕುಮಟಾ
೯೪೮೧೦೫೨೩೭೮

ಮಂಗಳವಾರ, ಡಿಸೆಂಬರ್ 3, 2013

ವಿದ್ಯಾವಂತರೇ ಜೋಕೆ....

ಖೊಟ್ಟಿ ಉದ್ಯೋಗ ಮಾಹಿತಿ ಕೇಂದ್ರಗಳು ಹೆಚ್ಚಾಗುತ್ತಿವೆ..... 

-ನಾಗರಾಜ್ ಬಿ. ಏನ್. 
ಅಕ್ಷರ ಜ್ಞಾನವಿಲ್ಲದ ಅನಾಗರಿಕರು ಮೋಸ ಹೋಗುತ್ತಿರುವುದು ಕೇಳಿದ್ದೇವೆ... ಆದರೆ, ಎರಡು ಮೂರು ಪದವಿ ಪಡೆದು `ಬುದ್ಧಿವಂತರು' ಎನಿಸಿಕೊಂಡವರು ಮೋಸ ಹೋಗುತ್ತಿರುವುದು ಕೇಳಿದ್ದೀರಾ...? ಕೇಳಿದ್ದರೂ... ಕೇಳದಿದ್ದರೂ ಅವಶ್ಯವಾಗಿ ಓದಲೇ ಬೇಕಾದ ಲೇಖನ....
ಶೈಕ್ಷಣಿಕವಾಗಿ ಕರ್ನಾಟಕ ರಾಷ್ಟ್ರದಲ್ಲಿಯೇ ತೃತೀಯ ಸ್ಥಾನದಲ್ಲಿದೆ ಎನ್ನುವುದು ಸಂತೋಷದ ವಿಷಯವಾದರೂ, ವಿದ್ಯೆಗೆ ತಕ್ಕ ಉದ್ಯೋಗ ದೊರೆಯದಿರುವುದು ಕೂಡಾ ಅಷ್ಟೇ ವಿಷಾದ! ದಿನ ಕಳೆದಂತೆ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು, ಉದ್ಯೋಗದ ಸಂಖ್ಯೆ ಹೆಚ್ಚುತ್ತಿಲ್ಲ. ಕೆಲವು ಉದ್ಯೋಗದಾತ ಕಂಪನಿಗಳು, ಸಂಸ್ಥೆಗಳು `ವಿದ್ಯಾರ್ಹತೆ ಒಂದಿದ್ದರೆ ಸಾಲದು, ಪ್ರತಿಭೆಯೂ ಇರಬೇಕು' ಎನ್ನುತ್ತವೆ. ಇದರಿಂದ ಕೆಲವೆ ಕೆಲವರಿಗಷ್ಟೆ ಉದ್ಯೋಗ ಪ್ರಾಪ್ತಿ. ಇವೆಲ್ಲವುಗಳ ಪರಿಣಾಮ ಉದ್ಯೋಗದ ಬರ!
ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡ ಕೆಲವರು `ಉದ್ಯೋಗ ಸಲಹಾ ಕೇಂದ್ರ' (ಜಾಬ್ಸ್ ಕನ್ಸಲ್ಟೆನ್ಸಿ) ಪ್ರಾರಂಭಿಸಿಕೊಂಡಿದ್ದಾರೆ. ಈ ಮೂಲಕ ಉದ್ಯೋಗ ಹುಡುಕಿಕೊಂಡು ಬರುವವರಿಗೆ ನಂಬಿಸಿ, ವಿಶ್ವಾಸದಿಂದಲೆ ದ್ರೋಹ ಎಸಗುತ್ತಾರೆ.
ಬೆಂಗಳೂರಿನಂತ ಮಹಾನಗರದಲ್ಲಿ ಸಾವಿರಕ್ಕೂ ಹೆಚ್ಚು ಜಾಬ್ಸ್ ಕನ್ಸಲ್ಟೆನ್ಸಿಗಳು ಕಾರ್ಯ ನಿರತವಾಗಿದೆ. ಅವುಗಳಲ್ಲಿ ಕೆಲವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರೆ, ಬಹುತೇಕವು ಹಣ ದೋಚುವುದನ್ನೆ ಕಸುಬನ್ನಾಗಿ ಮಾಡಿಕೊಂಡಿವೆ. ಇದರಿಂದ ಬರುವ ಆದಾಯವನ್ನರಿತ ಕೆಲವು ಕುತ್ಸಿತ ಮತಿಯರು ರಾಜ್ಯದ ಹುಬ್ಬಳ್ಳಿ, ಮೈಸೂರು, ಗುಲಬರ್ಗಾ, ದಾವಣಗೇರಿ, ಮಂಗಳೂರು, ಉಡುಪಿ ನಗರಗಳಲ್ಲಿ ಜಾಬ್ಸ್ ಕನ್ಸಲ್ಟೆನ್ಸಿಗಳನ್ನು ಹುಟ್ಟು ಹಾಕುತ್ತಿದ್ದಾರೆ. ಐದಾರು ವರ್ಷಗಳ ಹಿಂದೆ ಈ ನಗರಗಳಲ್ಲಿ ಬೆರಳೆಣಿಕೆಯಷ್ಟಿದ್ದ (ಕೆಲವು ಕಡೆ ಅದೂ ಇರಲಿಲ್ಲ) ಉದ್ಯೋಗ ಸಲಹಾ ಕೇಂದ್ರಗಳು, ಇಂದು ಬರೋಬ್ಬರಿ ಶತಕದ ಅಂಚಿನಲ್ಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಾಗೆ, ಈ ಭಾಗಗಳಲ್ಲಿಯೂ ಸಹ ಗಲ್ಲಿ ಗಲ್ಲಿಗಳಲ್ಲಿ ನಾಯಿ ಕೊಡೆಯಂತೆ ಈ ಕೇಂದ್ರಗಳು ತಲೆ ಎತ್ತಿದರೂ ಆಶ್ಚರ್ಯ ಪಡಬೇಕಾಗಿಲ್ಲ!
ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಕೆಲವು ವಿದ್ಯಾರ್ಥಿಗಳು ಪೋಷಕರಿಗೂ ಸಹ ತೊಂದರೆ ನೀಡದೆ, ಬ್ಯಾಂಕಿನಲ್ಲಿ ಶೈಕ್ಷಣಿಕ ಸಾಲ ಪಡೆದು ಶಿಕ್ಷಣ ಮುಗಿಸಿರುತ್ತಾರೆ. ಲಕ್ಷಗಟ್ಟಲೆ ಸಾಲ ತೆಗೆದು, ಪಡೆದ ಶಿಕ್ಷಣಕ್ಕೆ ನ್ಯಾಯ ಒದಗಿಸಲು ಹಾಗೂ ಬ್ಯಾಂಕಿನ ಸಾಲ ತುಂಬಲು ಅನಿವಾರ್ಯವಾಗಿ ಒಂದು ಉದ್ಯೋಗದ ಬೆನ್ನು ಹಿಡಿಯಬೇಕಾಗುತ್ತದೆ. ಹಳ್ಳಿಯಲ್ಲಿ ಕೈತುಂಬಾ ಸಂಪಾದಿಸಲಾಗದ ಕಾರಣ ಪಟ್ಟಣದ ಕಡೆ ಮುಖ ಮಾಡುತ್ತಾರೆ. ನಗರ ಜೀವನದ ಅಷ್ಟೊಂದು ಪರಿಚಯ ಇಲ್ಲದ ಇವರು, ಯೋಗ್ಯ ಉದ್ಯೋಗ ಪಡೆಯಲು ಅನಿವಾರ್ಯವೆಂಬಂತೆ ಜಾಬ್ಸ್ ಕನ್ಸಲ್ಟೆನ್ಸಿಯ ಮೊರೆ ಹೋಗುತ್ತಾರೆ.
ಮೋಸ ಮಾಡ್ತಾರೆ....?
ವಿದ್ಯಾರ್ಥಿಗಳು ಯಾವುದಾದರೊಂದು ಕನ್ಸಲ್ಟೆನ್ಸಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು, ಸ್ವ-ವಿವರದ ಜೊತೆಗೆ ಭಾವಚಿತ್ರಗಳನ್ನು ನೀಡಿ, ನೋಂದಣಿ ಶುಲ್ಕವಾಗಿ ರೂ. 300 ರಿಂದ 500 ನೀಡುತ್ತಾರೆ. ನಂತರ ಕನ್ಸಲ್ಟೆನ್ಸಿ ಸಿಬ್ಬಂದಿ, `ಒಂದು ವಾರದಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ನೋಡಿ, ಸಂದರ್ಶನಕ್ಕೆ ಕಳುಹಿಸುತ್ತೇವೆ' ಎಂದು ಉದ್ಯೋಗದ ಭರವಸೆ ನೀಡುತ್ತಾನೆ. ಅಲ್ಲದೆ `ಉದ್ಯೋಗ ದೊರೆತ ಮೇಲೆ ಪ್ರಥಮ ತಿಂಗಳ ಅರ್ಧದಷ್ಟು ಅಥವಾ ಸಂಪೂರ್ಣ ಸಂಬಳವನ್ನು ನೀಡಬೇಕು' ಎಂದು ಅಲಿಖಿತ ಒಪ್ಪಂದ ಮಾಡಿಕೊಳ್ಳುತ್ತಾನೆ!
ಪ್ರಾರಂಭದ ಒಂದೆರಡು ವಾರ ತಮ್ಮ ಪ್ರಾಮಾಣಿಕತೆ ಪ್ರದರ್ಶಿಸಲು ಹಾಳು ಮೂಳು ಕಂಪನಿಗಳಿಗೆ, ಸಂಸ್ಥೆಗಳಿಗೆ ಸಂದರ್ಶನಕ್ಕೆ ಹಾಜರಾಗಲು ತಿಳಿಸುತ್ತಾರೆ. ಸಂದರ್ಶಿತ ಕಂಪನಿಗಳು ಮತ್ತು ಜಾಬ್ಸ್ ಕನ್ಸಲ್ಟೆನ್ಸಿಗಳು ಕಾಣದ `ಕಳ್ಳ' ಒಪ್ಪಂದವೊಂದು ಮಾಡಿಕೊಂಡಿರುತ್ತದೆ! ಆ ಮೂಲಕ ಉದ್ಯೋಗ ಇಲ್ಲದಿದ್ದರೂ ಸಂದರ್ಶನ ನಡೆಸಿ ನೋಂದಣಿ ಶುಲ್ಕದಲ್ಲಿ ಪಾಲು ಮಾಡಿಕೊಳ್ಳುತ್ತಾರೆ. ಕೆಲವು ಕಂಪನಿಗಳು ಮಾನವ ಸಂಪನ್ಮೂಲ ವಿಭಾಗದಲ್ಲಿ, ವರ್ಷಕ್ಕೆ ಎಷ್ಟು ಉದ್ಯೋಗಾಂಕ್ಷಿಗಳು ಬಂದು ಸಂದರ್ಶನ ನೀಡಿದ್ದಾರೆ? ಎಷ್ಟು ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ? ಎಂದು ನಮೂದಿಸಬೇಕಾಗುತ್ತದೆ. ಇದರಿಂದ ಸಂದರ್ಶನ ಅವರಿಗೂ ಅನಿವಾರ್ಯವಾಗಿರುತ್ತದೆ.
ಉದ್ಯೋಗ ಕನಸನ್ನು ಹೊತ್ತ ನಿರುದ್ಯೋಗಿಗೆ ಕನ್ಸಲ್ಟೆನ್ಸಿಯವರ ಈ ಮೋಸದ ಅರಿವಿರುವುದಿಲ್ಲ. ಬಹುತೇಕ ಇಂತಹ ಕೇಂದ್ರಗಳು ಹಣ ಸಂಪಾದನೆಗಾಗಿಯೇ ತೆರೆದಿರುತ್ತವೆ. ಇದನ್ನು ನಡೆಸುವ ಮುಖ್ಯಸ್ಥನಿಗೆ ಹಾಗೂ ಕೆಲವು ಕೇಂದ್ರಕ್ಕೆ ಯಾವ ಕಂಪನಿಯ ಪರಿಚಯವೂ ಇರುವುದಿಲ್ಲ. ಜತೆಗೆ ಉದ್ಯೋಗ ಕಲ್ಪಿಸಿಕೊಡುವ ಯಾವೊಂದು ಸಂಪರ್ಕ ಜಾಲವೂ ಇರುವುದಿಲ್ಲ! ಸ್ವಯಂ ಘೋಷಿತ ನಾಯಕನ ಬೆಂಬಲ ಹಾಗೂ ಪುಡಿಗಾಸು ರಾಜಕಾರಣಿಯ ಬೆಂಬಲ ಮಾತ್ರ ಇವರಿಗಿರುವ ಆಸ್ತಿ. ಕೆಲವು ಕನ್ಸಲ್ಟೆನ್ಸಿಗಳು ಕಾನೂನು ಪ್ರಕಾರ ನೋಂದಣಿ ಸಹ ಆಗಿರದೆ ಮೋಸ ಎಸಗುತ್ತಿವೆ. ಈ ಕುರಿತು ಪ್ರಶ್ನಿಸಿದರೆ, `ನಮ್ಮ ಕೇಂದ್ರ ಕಚೇರಿ ಮಂಗಳೂರಿನಲ್ಲಿದೆ, ಬೆಂಗಳೂರಿನಲ್ಲಿದೆ, ಬೆಳಗಾವಿಯಲ್ಲಿದೆ' ಎಂದು ಹಾರಿಕೆ ಉತ್ತರ ನೀಡುತ್ತ, `ಇಲ್ಲಿ ಉದ್ಯೋಗ ಕೇಂದ್ರ ಪ್ರಾರಂಭಿಸಿ ಒಂದು ವಾರವಷ್ಟೆ ಆಗಿದೆ. ಕೆಲವೆ ದಿನಗಳಲ್ಲಿ ನೋಂದಣಿ ನಂ. ಪಡೆಯುತ್ತೇವೆ' ಎಂದು ಸಮಜಾಯಿಶಿ ನೀಡುತ್ತಾರೆ.


ಬೋರ್ಡ್ ಇರದ ಕಚೇರಿ...
ಕೆಲವು ಜಾಬ್ಸ್ ಕನ್ಸಲ್ಟೆನ್ಸಿ ಕಚೇರಿಗೆ ಯಾವ ವಿಳಾಸವೂ ಇರುವುದಿಲ್ಲ. ವಿಳಾಸ ದೊರೆತರೂ ಕಚೇರಿಗೆ `ಬೋರ್ಡ್' ಇರುವುದಿಲ್ಲ! ಹರಸಾಹಸ ಪಟ್ಟು ಹಾಗೋ ಹೀಗೋ ವಿಳಾಸ ಹುಡುಕಿಕೊಂಡು ಹೋದರೆ ಅಲ್ಲಿ `ಮುಖ್ಯಸ್ಥ'ನೇ ಇರುವುದಿಲ್ಲ. ಅವನನ್ನು ದೂರವಾಣಿ ಮೂಲಕ ಸಂಪಕರ್ಿಸಿ ಮಾಹಿತಿ ಪಡೆಯಬೇಕಾಗುತ್ತದೆ. ನಂತರ ಅವನ ಆದೇಶದಂತೆ ಬೋಡರ್್ ಇಲ್ಲದ ಕಚೇರಿ ಕೋಣೆಗೆ ಹೋಗಿ, ಅಲ್ಲಿದ್ದವರಿಗೆ ಸ್ವ-ವಿವರದ ಜಾತಕ ನೀಡಬೇಕಾಗುತ್ತದೆ. ಮಹಿಳಾ ಉದ್ಯೋಗಾಕಾಂಕ್ಷಿಗಳು ಇಂತಹ ಕನ್ಸಲ್ಟೆನ್ಸಿಗಳ ಬಗ್ಗೆ ತುಸು ಎಚ್ಚರಿಕೆ ವಹಿಸುವುದು ಒಳಿತು. ಆದರೆ, ನಂಬಿ ಮೋಸ ಮಾಡುವ ಇಂತಹ ಬ್ಲೇಡ್ ಕನ್ಸಲ್ಟೆನ್ಸಿಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಾಬ್ಸ್ ಕನ್ಸಲ್ಟೆನ್ಸಿಗಳಿಗೆ ಕೆಟ್ಟ ಹೆಸರು.

ಮಂಗಳವಾರ, ಆಗಸ್ಟ್ 27, 2013

ಮುಂಗಾರಿನ ಅಭಿಷೇಕಕೆ....... 


ಒಂದೇ ಸಲ ಆವೇಶ ಬಂದವಳಂತೆ ನಾ ಎಳೆದ ಚಾದರವನ್ನು ಅವಳು ಗಟ್ಟಿಯಾಗಿ ಹಿಡಿದೆಳೆದಳು. ನಮ್ಮಿಬ್ಬರ ಜಗ್ಗಾಟದಲ್ಲಿ ನನ್ನ ಕ್ಯ ಮೇಲಾದರೂ ಎಂದಿನಂತೆ ಅವಳ ಸೋಲನ್ನು ಅಪೇಕ್ಷೀಸದ ನಾನು ಸೋತು ಬಿಟ್ಟೆ. ತಾನು ಗೆದ್ದ ಸಂತೋಷದಲ್ಲಿ ಮಕ್ಕಳಂತೆ ಅವಳು ಕುಣಿಯ ಹತ್ತಿದಳು. ನಾನು ಮೆಲ್ಲನೆ ಎದ್ದು ಅವಳ ಕೈ ಸವರಿ `ನೋವಾಯಿತಾ ಚಿನ್ನಾ' ಎಂದೆ. ಗಕ್ಕನೆ ನಿಂತ ಅವಳು ವ್ಯಾಕುಲತೆಯಿಂದ ನನ್ನ ಕಣ್ಣನ್ನೇ ದಿಟ್ಟಿಸಿ ನೋಡುತ್ತ ನಿಂತಳು..... ಒಮ್ಮೆಲೆ ಅಲ್ಲಿಂದ ಓಡಿದಳು. ತಾನು ಎಲ್ಲಿದ್ದೆನೆಂದು ಅರಿವಾಗಿರಬೇಕು.
ಎದ್ದು ಬಿಸಿಬಿಸಿಯಾದ ಹಂಡೆ ಸ್ನಾನ ಮಾಡಿ ಬಂದೆ. ಮೈಮನಗಳೆಲ್ಲ ಹಗುರೆನಿಸಿತು. ಇಣುಕುತ್ತಿದ್ದ ಸೂರ್ಯನಿಗೆ ನಮಸ್ಕರಿಸಿ ಗಾಯತ್ರಿ ಮಂತ್ರ ಪಠಿಸಿ ಒಳಗೆ ಬಂದೆ. ನನಗಿಂತ ಮೊದಲೆ ಫ್ರೆಸ್ಅಪ್ ಆಗಿ ಲಂಗದಾವಣಿಯಲ್ಲಿ ಮಿಂಚುತ್ತ ನಾಚುತ್ತ ನಿಂತಿದ್ದ ನನ್ನವಳನ್ನು ನೋಡುತ್ತ ಹಾಗೆ ನಿಂತುಬಿಟ್ಟೆ.
ಒಂದು ಹೆಜ್ಜೆ ಇಟ್ಟು ಕೈ ಮುಂದೆ ಮಾಡಿದವನನ್ನು, ಕೊಟ್ಟಿಗೆಯಲ್ಲಿನ `ಅಂಬಾ' ಎಂಬ ಧ್ವನಿ ಎಚ್ಚರಿಸಿತು. ಥಟ್ಟನೆ ಸಾವರಿಸಿಕೊಂಡು ತಿಂಡಿ, ತೀರ್ಥ ಏನೂ ಇಲ್ವ; ಹೊಟ್ಟೆ ಲಬೋ ಲಬೋ ಎನ್ನುತ್ತಿದೆ ಎಂದೆ. `ಬೆಳಗಾಯ್ತು ನಿನಗೆ, ಬರೀ ಹೊಟ್ಟೆ ಹೊರೆಯೋ ಚಿಂತೆ. ರಾತ್ರಿ 2 ಗಂಟೆಗೆ ಎಬ್ಬಿಸಿ 3ಕೆಜಿ ಸ್ವೀಟ್ ತಂದಿಟ್ಟರೂ ಮುಗಿಸಿಯೇ ಮಲ್ಗೋ ಜಾತಿ ನೀ... ಬಾ ಬಾ... ನಮ್ಮ ಆಯಿ ಸವತೆಕಾಯಿ ಇಡ್ಲಿ ಮಾಡಿದ್ದಾರೆ' ಎನ್ನುತ್ತ ಕೈ ಹಿಡಿದೆಳೆದೊಯ್ದವಳು.
ಅಡುಗೆ ಮನೆ ಬಾಗಿಲಲ್ಲಿ ಬಿಟ್ಟಳು. ಅವರಮ್ಮ ನಗುತ್ತ `ಬಾರಪ್ಪ' ಎಂದು ತಿಂಡಿಯನ್ನು ಮುಂದಿಟ್ಟರು. ನೀನು ಕುತ್ಕೊಳ್ಳೆ ಎನ್ನುತ್ತ ನನ್ನ ಪಕ್ಕದಲ್ಲಿ ಅವಳಿಗೂ ಪ್ಲೇಟನ್ನು ಇಟ್ಟರು. ತಿಂಡಿಪೋತ ಮುಕ್ಕು ಮುಕ್ಕು ಎಂದು ಅವಳು ಒಟಗುಡುತ್ತಿದ್ದುದು ನನಗೆ ಮಾತ್ರ ಕೇಳಿಸುತ್ತಿತ್ತು. ನಗು ನಿಯಂತ್ರಿಸಲಾಗದೇ ಬಾಯಿಗಿಟ್ಟ ಇಡ್ಲಿ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಕೆಮ್ಮತೊಡಗಿದಾಗ, ಅವರಮ್ಮ ಓಡಿ ಬಂದು ನೀರು ಕೊಟ್ಟು `ಅಯ್ಯೋ.... ಮಗ ನೀರು ಕೊಡಲು ಮರೆತೆ, ನೀನಾದ್ರೂ ಕೊಡಬಾರದೆನೇ ಪಾಪ' ಎಂದು ತಲೆಯ ಮೇಲೆ ನಿಧಾನವಾಗಿ ಹೊಡೆದು ಬೆನ್ನು ತಿಕ್ಕಿದಾಗ, ಆ ತಾಯಿ ಪ್ರೀತಿಗೆ ನನ್ನ ಮನ ತುಂಬಿ ಬಂತು. ಆದರೆ ಪಕ್ಕದಲ್ಲಿದ್ದವಳು ನಿಧಾನವಾಗಿ ನನ್ನ ಭುಜ ಚಿವುಟಿ ತಿನ್ನೋ ಚಪಲಕ್ಕೆ ಬಕಬಕ ಮೇಯಬೇಕಿತ್ತಾ, ನಿಧಾನಕ್ಕೆ ಇಳಿಸು, ಮತ್ತೆ ಬೇಕಾದ್ರೂ ಇದೆ ಡೋಟ್ ವರಿ... ಎಂದಾಗ ನಸುನಕ್ಕು ಸುಮ್ಮನಾದೆ.
ತಿಂಡಿ ಮುಗಿಸಿ ಅವರಮ್ಮನ ಅಪ್ಪಣೆ ಪಡೆದು ಕಾಡಿನ ಕಡೆಗೆ ಹೊರಟೆವು. ನಮಗೆದುರಾದ ಪಕ್ಕದ್ಮನೆ ಪುಟ್ಟನನ್ನು ಜತೆ ಬರುತ್ತೀಯೇನೋ ಅಂದವಳು, ತುಟಿಕಚ್ಚಿಕೊಂಡು ಏನೋ ತಪ್ಪು ಮಾಡಿದವಳಂತೆ ನನ್ನ ನೋಡಿದಳು. ಶಿವ ಪೂಜೆಯಲ್ಲಿ ಕರಡಿ... ಎಂದು ನಾ ಬುಸುಗುಡುತ್ತಿದ್ದುದು ಅವಳಿಗೆ ಅರಿವಾಗಿ, ಬೇಡಾ ಪುಟ್ಟಾ ಎಂದು ಬಾಯಿ ತೆಗೆಯುವಷ್ಟರಲ್ಲಿ ಅವನು ನಮ್ಮನ್ನು ಬಿಟ್ಟು ಅಂಗಳ ದಾಟಿಯಾಗಿತ್ತು. ಸಿಕ್ಕ ಸಿಕ್ಕ ಮರಕ್ಕೆ ಕಲ್ಲು ಹೊಡೆಯುತ್ತ ಅವನು ಸಾಗುತ್ತಿದ್ದರೆ, ಅವನ ಹಿಂದೆ ಅವಳಿಟ್ಟ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತ ನಾನು ನಡೆಯುತ್ತಿದ್ದೆ.
`ಏನು ಸಪ್ತಪದಿ ತುಳಿತಿದ್ದೀಯಾ? ಬಾ ಕೋತಿ ಥರಾ ಆಡಬೇಡಾ ನೀ' ಎಂದು ಎಳೆದು ಜತೆ ನಡೆದಳು. ಮಗುಮ್ಮಾಗಿ ನಡೆಯುತ್ತಿದ್ದ ನನಗೆ `ಏನು ಬೇಜಾರಾಯ್ತಾ? ಸಾರಿ ಕಣೋ, ಪಾಪ ಮಗು ಅಲ್ವಾ? ಪ್ಲಿಸ್....' ಅಂದಳು. ಇದಕ್ಕೇನಾ ನನ್ನ ಇಷ್ಟು ದೂರ ಕರೆದುಕೊಂಡು ಬಂದಿದ್ದು? ಎಂದಾಗ ಹೇಳಿದ್ನಲ್ಲಾ `ಸಾ..........ರಿ' ಎಂದು ಗಟ್ಟಿಯಾಗಿ ಕೈ ಹಿಡಿದಳು. ಸರಿಬಿಡು ಎನ್ನುತ್ತಾ ಜಗಳ ಕಾಯುತ್ತಾ ನಡೆದೆವು. ಪುಟ್ಟ ತನಗೆ ನಿಮ್ಮ್ ಸಂಗವೇ ಬೇಡ ಎಂಬಂತೆ ಮುಂದೆ ಮುಂದೆ ಸಾಗುತ್ತಿದ್ದ. ಅಷ್ಟರಲ್ಲಿ ತುಂತುರು ಮಳೆ ಪ್ರಾರಂಭವಾಯಿತು. ಓಡಿ ಬಂದ ಪುಟ್ಟಾ ಅವಳ ಕೈಯಲಿದ್ದ ಛತ್ರಿಯನ್ನು ಕಿತ್ತುಕೊಂಡು ಓಡಿದ. ಅನಿವಾರ್ಯವಾಗಿ ಅವಳು ನನ್ನ ಛತ್ರಿಯಡಿಗೆ ಬರಬೇಕಾಯಿತು. ಮೌನವಾಗಿ ನಡೆದವು. ಅವಳ ತಲೆ ಒದ್ದೆಯಾಗಿ ಮುಂಗುರುಳಿನಿಂದ ನೀರ ಹನಿ ಒಂದೊಂದೆ ಇಳಿಯುತ್ತಿರುವಾಗ ನನ್ನ ಕೈಯನ್ನು ಅಡ್ಡ ಹಿಡಿದು, ಆ ನೀರನ್ನು ಹಿಡಿದೆ.
ಏನೋ ಇದು ಎಂದ ಅವಳ ಮಾತಿಗೆ `ಸ್ವಾತಿಮುತ್ತು' ಎಂದೆ. ಸುಮ್ಮನಾದಳು. ಥಟ್ಟನೆ ಕೊಡೆಯನ್ನು ಎಸೆದು, ತುಂತುರು ಮಳೆಗೆ ಮೈ ಒಡ್ಡಿ ಆಸ್ವಾದಿಸಿದೆ..... ಓಡಿ ಹೋಗಿ ಛತ್ರಿಎ ತ್ತಿಕೊಂಡು, `ಕತ್ತೆ ತರಾ ಆಡಬೇಡಾ... ಬಾ' ಎಂದು ಬೈದು ಛತ್ರಿಯನ್ನು ಹಿಡಿದಳು. ಕಾನನವ ಸುತ್ತಿ, ಬಿದಿರಿನ ಕಳಿಲನ್ನು ಮುರಿದುಕೊಂಡು ಹಿಂತಿರುಗುವಾಗ ಮತ್ತೆ ಸೂರ್ಯ ಇಣುಕಿದ್ದ. ಮನೆಗೆ ಬಂದಾಗ ಮಧ್ಯಾಹ್ನ 2 ಗಂಟೆ. ಅವರಮ್ಮ ಊಟ ಸಿದ್ಧ ಮಾಡಿಟ್ಟಿದ್ದರು. ಊಟ ಮುಗಿಸಿ 2 ತಾಸು ಗಡದ್ದಾಗಿ ನಿದ್ದೆ ಹೊಡೆದೆ. ರಾತ್ರಿ 8ಕ್ಕೆ ಬಸ್, ಎದ್ದೇಳು ಎಂದವಳಿಗೆ `ನೀ ನನ್ನ ಕರ್ಕೊಂಡು ಬಂದಿದ್ದು ಯಾಕೆ? ಎಂದೆ. ಮೌನವಾದಳು.
ಗಡಿಯಾರ ಆರು ಗಂಟೆ ತೋರಿಸುತ್ತಿತ್ತು. ಹಾಲು ಕುಡಿದು ಜೀಕುತ್ತಿದ್ದ ಕರು ಕನಕಳನ್ನು ಬಾಚಿ ತಬ್ಬಿಕೊಂಡು ಮುದ್ದುಗರೆದೆ. ಅವಳು ನನ್ನನ್ನೆ ದುರುಗುಟ್ಟಿ ನೋಡುತ್ತಿದ್ದಳು. ಹೆದರಿವನಂತೆ ಕರುವನ್ನು ಬಿಟ್ಟು `ಹೊಟ್ಟೆಕಿಚ್ಚಾ....?' ಎಂದೆ.
8ಕ್ಕೆ ಬಸ್ ಹತ್ತಬೇಕಾದ್ದರಿಂದ ಏಳು ಗಂಟೆಗೆ ಅವರಮ್ಮ ಊಟಕ್ಕೆ ಬಡಿಸಿದ್ದರು. ಬಾಳೆ ಎಲೆ ತಂದಿಟ್ಟು ಉಪ್ಪಿನಕಾಯಿ ಬಡಿಸುತ್ತಿದ್ದ ಅವಳ ಕೈ ಹಿಡಿದು `ಹೋಗುತ್ತಿದ್ದೇವೆ, ಧಾವಂತದಲ್ಲಿ ಕರೆ ತಂದಿದ್ದು ಯಾಕೆ ಎಂದು ಇನ್ನೂ ಹೇಳಲಿಲ್ಲವಲ್ಲ' ಎಂದು ಹಲ್ಲು ಕಡಿಯುತ್ತಾ ಹೇಳಿದೆ. ಆಗಲೂ ಮೌನ. ಪಕ್ಕ ಬಂದು ಊಟಕ್ಕೆ ಕೂತಳು. ಅವರಮ್ಮ ಅಕ್ಕಿರೊಟ್ಟಿ ತಂದು ಎಲೆಗೆ ಹಾಕಿದರು. ಘಮಘಮಿಸುತ್ತಿದ್ದ ಸಾಂಬಾರು ಹಾಕಿದಾಗ ಅವಳು ಸಣ್ಣಗೆ ನಕ್ಕಿದ್ದು ಕೇಳಿಸಿತು.
ಏನಿದು? ಅಂದೆ. `ಚಿಕನ್.... ತಿನ್ನು' ಎಂದಳು. `ಛೀ... ನಾನು ತಿನ್ನಲ್ಲ' ಎಂದು ಏಳಲು ಹೋದಾಗ, `ಅಲ್ವೋ ಮಾರಾಯಾ... ತಿಂದು ನೋಡು' ಎಂದಳು. ರೊಟ್ಟಿಯನ್ನು ಮುರಿದು ಸಾಂಬಾರಿಗೆ ಅದ್ದಿಸಿ ಅದರಲ್ಲಿದ್ದ ತುಂಡನ್ನು ಅಳುಕುತ್ತ ಬಾಯಿಗಿರಿಸಿದ್ದೆ. ಸಂತಷದಿಂದ `ಅಣಬೆನಾ?' ಎಂದು ಕೇಳಿದೆ. ಹೂಂ, ಮೊನ್ನೆ ಆಯಿ ಫೋನ್ ಮಾಡಿ `ಕಾಡಲ್ಲಿ ಅಣಬೆ ಮೊಳಕೆಯೊಡೆಯುತ್ತಿದೆ. ಎರಡು ದಿನಕ್ಕೆ ದೊಡ್ಡದಾಗುತ್ತೆ. ಬಂದುಬಿಡು' ಎಂದಿದ್ದಳು. ಅಣಬೆ ಎಂದರೆ ನಿನಗಿಷ್ಟ ಅಲ್ವಾ ಅದಕ್ಕೆ..... ಅಂದಾಗ ಕಕ್ಕುಲತೆಯಿಂದ ಅವಳ ಮುಖ ನೋಡಿದ್ದೆ.
ಚಿಮಣಿ ದೀಪದ ಬೆಳಕಲ್ಲಿ ಅವಳ ಮುಖ ಮಿಂಚುತ್ತಿತ್ತು...... ನನಗಿಷ್ಟವಾದ ಅಣಬೆ ಸಾರು ತಿನ್ನಿಸಿದ ಧನ್ಯತೆಯಿಂದ... 

ಮಂಗಳವಾರ, ಆಗಸ್ಟ್ 6, 2013

ಮುಂಗಾರಿನ ಅಭಿಷೇಕಕೆ......

ಮುಂದುವರಿದ ಭಾಗ........

ಅಲ್ವೋ, ನಾವು ಬಸ್ಸಲ್ಲಿದ್ದೀವಿ ಅನ್ನೋ ಜ್ಞಾನಾ ಆದ್ರೂ ಇದ್ಯಾ ನಿಂಗೆ. ಸುಮ್ನೆ ಮಲ್ಕೊ' ಎಂದಳು. ಅವಳ ಮಾತಲ್ಲಿನ ಸತ್ಯಾಂಶ ಅರಿತು, 'ಹುಂ ಕಣೆ' ಎಂದು, ಅವಳ ಕಾಲ ಮೇಲೆಯೇ ತಲೆ ಇಟ್ಟು ಮಲಗಿದೆ. ಅವಳು ನನ್ನ ತಲೆಯನ್ನು ನೇವರಿಸುತ್ತಾ,'ರಾತ್ರಿ 10.30ರ ಸುಮಾರಿಗೆ ನಮ್ಮೂರಲ್ಲಿರುತ್ತೇವೆ. ಬೇಜಾರು ಮಾಡ್ಕೋ ಬೇಡ' ಎಂದಳು. ಆಗ ಸಾಯಂಕಾಲ ಏಳರ ಸಮಯ.
ಪ್ರಥಮವಾಗಿ ಅವಳ ಕಾಲ ಮೇಲೆ ಮಲಗಿದ ಅನುಭೂತಿಯನ್ನು ಅನುಭವಿಸುತ್ತಲೇ ಕಣ್ಣನ್ನು ಮುಚ್ಚಿಕೊಂಡೆ. ಎಚ್ಚರಾದಾಗ ರಾತ್ರಿ 9.50. ಹತ್ತರ ಸುಮಾರಿಗೆ ಅವಳೂರಿನ ಪಕ್ಕದ ಪಟ್ಟಣದಲ್ಲಿದ್ದೇವು. ಅಲ್ಲಿಂದ ರಿಕ್ಷಾ ಮಾಡಿಕೊಂಡು ಅವಳ ಗ್ರಾಮಕ್ಕೆ ರಾತ್ರಿ 10.45ಕ್ಕೆ ಕಾಲಿಟ್ಟೆವು.
ನಮ್ಮ ಬರುವಿಕೆಗಾಗಿಯೇ ಕಾದು ಕುಳಿತಿದ್ದ ಅವಳಮ್ಮ, ತುಂಬು ಹೃದಯದಿಂದ ನನ್ನನ್ನು ಬರಮಾಡಿಕೊಂಡರು. ಸಂಕೋಚದಿಂದಲೇ ಮನೆಯೊಳಗೆ ಕಾಲಿಟ್ಟ ನಾನು ಸುತ್ತಲೂ ಒಮ್ಮೆ ಕಣ್ಣಾಡಿಸಿದೆ. ಅಪ್ಪಟ ಮಲೆನಾಡ ಶೈಲಿಯಲ್ಲಿ ನಿರ್ಮಿಸಿದ ಮನೆ. ಪ್ರಥಮ ನೋಟದಲ್ಲೆ ಅದು ನನ್ನನ್ನು ಸೆಳೆದುಕೊಂಡು ಬಿಟ್ಟಿತು. ಅಷ್ಟರಲ್ಲಾಗಲೆ, ಅಮ್ಮ 'ಕೈ-ಕಾಲು ತೊಳೆದುಕೊಂಡು ಬನ್ನಿ' ಎಂದು ಸ್ನಾನದ ಗೃಹದ ಕಡೆ ಕೈ ತೋರಿಸಿದರು.
ಅವರ ಆಣತಿಯಂತೆ ಸ್ನಾನದ ಕೊಠಡಿಗೆ ತೆರಳುತ್ತಿದ್ದೆ. ಒಮ್ಮೆಲೆ ಕತ್ತಲಾವರಿಸಿತು...! ಏನಿದು ಎಂದು ಅರಿಯುವಷ್ಟರಲ್ಲಿಯೇ, 'ಅಯ್ಯೋ, ಕರೆಂಟ್ ಹೊಯ್ತಾ? ಅವರು ಸ್ನಾನದ ಕೊಠಡಿಗೆ ಹೋಗಿದ್ದಾರೆ, ಬೇಗ ಮೊಂಬತ್ತಿ ಹಚ್ಚಿಕೊಂಡು ಹೋಗು' ಎಂದು ಅಮ್ಮ ಮಗಳಿಗೆ ಹೇಳಿದ್ದು ಕಿವಿಗೆ ಬಿತ್ತು. ಸುತ್ತೆಲ್ಲ ಕತ್ತಲಾವರಿಸಿದ್ದು, ಏನೂ ಕಾಣದಂತಾಗಿ ನಿಂತಲ್ಲೆ ತಡವರಿಸುತ್ತಿದ್ದೆ.
ಅರೆಕ್ಷಣದಲ್ಲಿ ಮಗ(ನನ್ನವ)ಳು ಮೊಂಬತ್ತಿ ಹಿಡಿದುಕೊಂಡು ನನ್ನೆಡೆಗೆ ಬಂದಳು. ಹೊರಗೆ ಸುಯ್ಯನೆ ಬೀಸುವ ಸುಳಿಗಾಳಿಗೆ ಮೊಂಬತ್ತಿಯ ಬೆಳಕು ಆಕಡೆ, ಈಕಡೆ ಓಲಾಡುತ್ತಿತ್ತು. ಬೆಳಕು ಆರಿ ಹೋಗುವುದೆಂದು ಅದಕ್ಕೆ ಅಡ್ಡವಾಗಿ ತನ್ನ ಕೈ ಹಿಡಿದಿದ್ದಳು. ಆ ಕಾರ್ಗತ್ತಲಲ್ಲಿ ಮೊಂಬತ್ತಿಯ ಬೆಳಕು ಬಿಟ್ಟರೆ ಮತ್ತ್ಯಾವ ಬೆಳಕು ಗೋಚರಿಸುತ್ತಿರಲಿಲ್ಲ. ಅಡ್ಡವಾಗಿ ಹಿಡಿದ ಮೊಂಬತ್ತಿಯ ಬೆಳಕಿಗೆ ಅವಳ ಮೊಗ ಚಂದ್ರನಂತೆ ಹೊಳೆಯುತ್ತಿತ್ತು. 'ಅಮವಾಸ್ಯೆಯ ಕತ್ತಲಲ್ಲಿ ಚಂದ್ರನ ದರ್ಶನವೇ...?' ಎಂದು ನಸುನಗುತ್ತ ಕೇಳಿದೆ. 'ಬೇಗ ಮುಖ ತೊಳಿರಿ, ಯಾವ ಘಳೀಗೆಲಿ ನಮ್ಮನೆಗೆ ಕಾಲಿಟ್ಟಿದ್ದಿರೋ... ಏನೋ? ಕರೆಂಟೇ ಹೋಯ್ತು; ಥೂ... ನಿಮ್ಮ' ಎಂದು ಸುಮ್ಮನೇ ರೇಗಿದಳು. 'ಬೇಗ ಬನ್ನಿ, ಊಟಕ್ಕೆ ಬಡಸಿದ್ದೀನಿ' ಅನ್ನೋ ಅಮ್ಮನ ಮಾತು ದೂರದಿಂದ ಸಣ್ಣಗೆ ಕೇಳಿಸಿತು.
ಕಾಯಿ ಚಟ್ನಿ, ತಂಬಳಿ, ಹಪ್ಪಳ ಮತ್ತು ಸಂಡಿಗೆಯ ಊಟ, ಬಾಯಿ ಚಪ್ಪರಿಸುವಂತೆ ಮಾಡಿತು. ಹೊಟ್ಟೆ ತುಂಬಿದರೂ ಮತ್ತೂ ಸ್ವಲ್ಪ ತಿನ್ನೋಣ ಎಂದುಕೊಂಡೆ. ಪಕ್ಕದಲ್ಲೆ ಊಟ ಮಾಡುತ್ತ ಕುಳಿತ ಅವಳಿಗೆ ನನ್ನ ಬಯಕೆ ಅರ್ಥವಾಗಿರಬೇಕು. `ಯಾಕೋ ಹೊಟ್ಟೆಬಾಕ... ನಾಚ್ಕೋತಿಯಾ? ನಿನಗೆ ಇಷ್ಟ ಅಂತಾನೆ ಅಮ್ಮ ಮಾಡಿದ್ದು, ಬೇಕಾದಷ್ಟು ಇಳಿಸು' ಎಂದು ಖಾರವಾಗಿ ಉತ್ತೇಜಿಸಿದಳು. ಸ್ವಲ್ಪ ಅನ್ನ ಹಾಕಿಸಿಕೊಂಡು ತಂಬಳಿ ಜತೆ ಊಟ ಮಾಡಿ ತೇಗಿದೆ. 'ಈಗ ತೃಪ್ತಿ ಆಯ್ತು ನೋಡು ಹುಡುಗಿ' ಎಂದು, ಕೈ ತೊಳೆಯಲು ಹೊರಟೆ, ಮಾಯವಾದ ಕರೆಂಟ್ ಆಗ ಪ್ರತ್ಯಕ್ಷವಾಗಿತ್ತು.
'ಬಾ ಮೇಲೆ ಹೋಗೋಣ' ಎಂದು ನನ್ನನ್ನು ಅಟ್ಟದ ಮೇಲೆ ಅವಳು ಕರೆದೊಯ್ದಳು. ಅಲ್ಲಿ ಎರಡು ಕೊಠಡಿಯಿದ್ದು, ಒಂದು ಕೊಠಡಿ ಮನೆಗೆ ಬಂದ ಅತಿಥಿಗೆಂದು ಸಿದ್ದಪಡಿಸಲಾಗಿತ್ತು. ಅಲ್ಲಿಗೆ ನನ್ನನ್ನು ಕರೆದೊಯ್ದ ಅವಳು, 'ಎರಡು ದಿನ ಈ ಕೊಠಡಿ ನಿನಗಾಗಿ ಮೀಸಲು' ಎಂದಳು. 'ಹೌದಾ.. ನನಗೊಬ್ಬನಿಗೆ ಇಲ್ಲಿ ಮಲಗಲು ಭಯವಾಗುತ್ತದೆ, ಹೊಸ ಜಾಗ' ಎಂದೆ. ಏನೋ ಅರ್ಥ ಮಾಡಿಕೊಂಡವಳಂತೆ. 'ಪರ್ವಾಗಿಲ್ಲ, ನಮ್ಮ ತೋಟದ ಕೆಲಸ ಮಾಡುವ ತಿಮ್ಮನನ್ನು ಕಳುಹಿಸುತ್ತೇನೆ' ಎಂದು ಕೆನ್ನೆ ಕೆಂಪಗೆ ಮಾಡಿಕೊಂಡು, ಬಾಗಿಲನ್ನು ಧಡಕ್ಕನೇ ಹಾಕಿ ಹೊರ ಹೋದಳು....!
ಪಯಣದ ಆಯಾಸ ಮೈ-ಮನಗಳನ್ನು ಹೈರಾಣವಾಗಿಸಿತ್ತು. ಹಾಸಿಗೆ ಮೇಲೆ ಮಲಗಿದ್ದೊಂದು ಗೊತ್ತು. ಯಾವ ಕ್ಷಣದಲ್ಲಿ ನನ್ನನ್ನು ನಿದ್ರೆ ಆವರಿಸಿತ್ತೋ ಗೊತ್ತಿಲ್ಲ. ಎಚ್ಚರವಾದಾಗ ಮುಂಜಾನೆ ಒಂಬತ್ತು. ಸೂರ್ಯನ ಕಿರಣ ನನ್ನನ್ನು ಅಣಕಿಸುವಂತೆ ಕಿಟಕಿಯನ್ನು ನುಸಳಿ ಬರುತ್ತಿತ್ತು. ಆಲಸ್ಯ ನನ್ನನ್ನು ಬಿಗಿದಪ್ಪಿಕೊಂಡಿದೆಯೇನೋ ಎಂಬಂತೆ, ಮೈ ಮುರಿದು ಮತ್ತೆ ಹೊರಳಿ ಮಲಗಿದೆ. ಮುಂಜಾನೆಯ ಆ ನಿದ್ರೆಯ ಸುಖ.... ಅನುಭವಿಸಿದವನಿಗೇ ಗೊತ್ತು. ಆ ಸುಖದ ಮತ್ತಲಿನಲ್ಲಿ ಪವಡಿಸಿ ತೇಲಾಡುತ್ತಿದ್ದ ನನಗೆ, ಹೊರಗಡೆಯಿಂದ ಯಾವುದೋ ದೇವಿಯ ಸ್ತೋಸ್ತ್ರ ಸಣ್ಣದಾಗಿ ಕೇಳಿ ಬರುತ್ತಿತ್ತು? ಬರಬರುತ್ತ ಆ ಸ್ತೋಸ್ತ್ರ ದೊಡ್ಡದಾಗಿ ಅದು, ಶ್ರೀದೇವಿಯದಲ್ಲ ನನ್ನ ದೇವಿಯ ಬೈಗುಳದ ಸ್ತೋಸ್ತ್ರ ಎಂದು ಮನದಟ್ಟಾಯಿತು. 'ನಾಚಿಕೆ ಬಿಟ್ಟವನೆ, ಒಂಬತ್ತಾಯಿತು; ಇನ್ನೂ ಹಾಸಿಗೆ ಮೇಲೆ ಹೊರಳಾಡ್ತಾ ಇದ್ದಿಯಾ? ಥೂ... ನಿನ್ನ, ಏಳೋ ಮೇಲೆ' ಎಂದು ಚಾದರ ಎಳೆದು ತಂಬಿಗೆಯಿಂದ ನೀರು ಸುರಿಯಲು ಅಣಿಯಾದಳು...!
ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಎಚ್ಚೆತ್ತುಕೊಂಡು ನನ್ನತ್ತ ಎಳೆದುಕೊಂಡೆ....................................!

ಮುಂದುವರಿಯುವುದು........

ಗುರುವಾರ, ಆಗಸ್ಟ್ 1, 2013


ಮುಂಗಾರಿನ ಅಭಿಷೇಕಕೆ...

`ಮಲೆನಾಡಿನ ಮಳೆಯ ವೈಭವವನ್ನು ಕಣ್ತುಂಬಿಸಿಕೊಳ್ಳುವ ಅವಕಾಶ ಈ ಬಾರಿ ಇಲ್ಲವೇನೋ' ಎಂದುಕೊಂಡಿದ್ದೆ. ಆದರೆ `ದಿಢೀರ್ ಎಂದು ಬದಲಾದ ಕಾರ್ಯ' ಆ ಸಂತೋಷವನ್ನು ಅನುಭವಿಸುವ ಜೀವನೋತ್ಸಾಹಕ್ಕೆ ಎಡೆಮಾಡಿಕೊಟ್ಟಿತು. ಹಾಗೆ, ಪ್ರೀತಿಸಿದವಳ ಜೊತೆ ಪ್ರಥಮ ಮಲೆನಾಡ ಪಯಣಕ್ಕೆ ಇದು ಮುನ್ನುಡಿಯನ್ನು ಸಹ ಬರೆದಿತ್ತು. ಒಟ್ಟೊಟ್ಟೆಗೆ ಎರಡೆರಡು ಸಂತೋಷವನ್ನು ಆಸ್ವಾದಿಸುವ ಭಾಗ್ಯ ನನಗೊದಗಿ ಬಂದಿತ್ತು ಎನ್ನಬಹುದೇನೋ....
ಬಯಲು ಸೀಮೆಯ ಹೆಬ್ಬಾಗಿಲಾದ ಹುಬ್ಬಳ್ಳಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಜಿಟಿಜಿಟಿ ಮಳೆ ನಿರಂತರವಾಗಿ ಒಂದೇ ಸಮನೆ ಸುರಿಯುತ್ತಿತ್ತು. ನಗರದಲ್ಲಿ ಇತ್ತೀಚೆಗೆ ಕೈಗೊಂಡ ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆ, ಹಾದಿ, ಬೀದಿಗಳೆಲ್ಲ ಹೊಲಸೆದ್ದು ಹೋಗಿದ್ದವು. ಪ್ರತಿನಿತ್ಯ ಅವುಗಳ ಮೇಲೆಯೇ ಓಡಾಡಿ ಓಡಾಡಿ ಮನಸ್ಸೆಲ್ಲ ಅವುಗಳ ಹಾಗೆಯೇ ರಾಡಿಯಾದಂತೆ ಭಾಸವಾಗುತ್ತಿತ್ತು. ಅವುಗಳಿಂದ ಮಲಿನವಾದ ಮನಸ್ಸನ್ನು ಮಲೆನಾಡ ಮಳೆಯಲ್ಲಿ ಶುಚಿಗೊಳಿಸಿಕೊಳ್ಳುವ ಸುವರ್ಣಾವಕಾಶ ಬಂದೊದಗಿ ಬಂದದ್ದಕ್ಕೆ ಹುಚ್ಚೆದ್ದು ಕುಣಿದು ಬಿಟ್ಟೆ...!
****************************************
ಊರಿಗೆ ಹೋಗದೆ ಒಂದೆರಡು ತಿಂಗಳಾಗಿತ್ತು. ಅದರಲ್ಲೂ ಈ ಮುಂಗಾರು ಮಳೆಯನ್ನು ಒಂದು ವರ್ಷವೂ ಕೂಡಾ ನಾ ತಪ್ಪಿಸಿಕೊಂಡಿರಲಿಲ್ಲ. ಆದರೆ ಕೆಲಸದ ಒತ್ತಡದಿಂದಾಗಿ ಈ ವರ್ಷ ಅದನ್ನು ತಪ್ಪಿಸಿಕೊಂಡೆನಲ್ಲ ಎಂದು ನೊಂದುಕೊಳ್ಳುತ್ತಿದ್ದೆ. ಆದರೆ, ಅನಿರೀಕ್ಷಿತವಾಗಿ ಎದುರಾದ ಸಂದರ್ಭವೊಂದು ನನ್ನನ್ನು ಊರಿಗೆ ಕರೆದುಕೊಂಡು ಹೋಗಿಲ್ಲವಾದರೂ, ಮಲೆನಾಡ ಮಳೆಯಲ್ಲಿ ಕುಣಿದು ಕುಪ್ಪಳಿಸುವಂತೆ ಮಾಡಿತು.
ಹೇಗಪ್ಪಾ ಅಂತೀರಾ..........?
ಅಂದು ಯಾಕೋ ಏನೋ ಹಾಸಿಗೆಯಿಂದ ಎದ್ದೇಳಲು ಮನಸ್ಸೆ ಬರ್ತಾ ಇರ್ಲಿಲ್ಲ. ಆಗಲೇ ಗಂಟೆ 9ರ ಸನೀಹಕ್ಕೆ ಬಂದಿತ್ತು. 11ಕ್ಕೆ ಪೂರ್ವ ನಿಯೋಜಿತವಾಗಿ ಕಾರ್ಯಕ್ರಮವೊಂದಕ್ಕೆ ಹಾಜರಾಗಬೇಕಿದ್ದ ನಾನು ಲಘುಬಗೆಯಲ್ಲಿ ಎದ್ದು, ರೂಮ್ಲಿದ್ದ ಕೆಲವಷ್ಟು ತಿಂಡಿ-ತಿನಿಸುಗಳನ್ನು ತಿಂದು ತಯಾರಾಗುತ್ತಿದ್ದೆ. ಆಗಲೇ ನನ್ನ ಮೊಬೈಲ್ `ಕರೆದರೂ ಕೇಳದೆ....' ಎಂದು ಹಾಡಲು ಸುರುವಿಟ್ಟುಕೊಂಡಿತು. `ಮೊದಲೇ ಸಮಯವಿಲ್ಲ. ಅದರಲ್ಲಿ ಈ ಕರೆ ಬೇರೆ' ಎಂದು ಗೊಣಗುತ್ತಲೇ ಮೊಬೈಲ್ ನೋಡಿದೆ. ಅದು ನಾ ಪ್ರೀತಿಸಿದ ಹುಡುಗಿಯ ಕರೆಯಾಗಿತ್ತು. ಆಮೇಲೆ ನಾನೇ ಕರೆ ಮಾಡಿ ಮಾತಾಡೋಣ ಎಂದು, ಆ ಕರೆಯನ್ನು ರಿಸೀವ್ ಮಾಡದೆ ಹಾಗೆ ಬಿಟ್ಟೆ. ಒಂದೆರಡು ನಿಮಿಷ ಪುನಃ ಕರೆ ಮಾಡಿದಳು. ಆಗಲೂ ಸುಮ್ಮನೇ ಇದ್ದೆ. ಮತ್ತೆ ಮಾಡಿದಳು..... ಯಾಕಪ್ಪ ಇವಳು ಒಂದೇ ಸಮನೆ ಹೀಗೆ ತೊಂದರೆ ಕೊಡುತ್ತಿದ್ದಾಳೆ ಎಂದು ಕರೆಯನ್ನು ರಿಸೀವ್ ಮಾಡಿದೆ.
`ಅಲ್ಲಾ, ಎಷ್ಟಂತ ನಿನಗೆ ಕಾಲ್ ಮಾಡ್ಬೇಕು. ನಾನ್ ಕಾಲ್ ಮಾಡಿದ್ರೂ ನಿನಗೆ ರಿಸೀವ್ ಮಾಡುವಷ್ಟು ಟೈಮ್ ಇಲ್ವಾ? ಇದ್ಕೇನಾ ನನ್ನ ಪ್ರೀತಿಸಿದ್ದು?' ಎಂದು ನಾನ್ ಸ್ಟಾಪ್ ಆಗಿ ಏನೇನೋ ಹೇಳಿದಳು. `ಸಾರಿ ಕಣೆ.... ಏನಾಯ್ತು ಹೇಳು ಪಾಪು...' ಎಂದೆ.
`ನಾಳೆ ನಾವಿಬ್ರು ನಮ್ಮ ಊರಿಗೆ ಹೋಗ್ತಾ ಇದ್ದೀವಿ. ನನ್ನ ಸ್ನೇಹಿತರೊಬ್ಬರನ್ನು ಮನೆಗೆ ಕರ್ಕೊಂಡು ಬರ್ತೀನಿ ಎಂದು ಹೇಳಿದ್ದೇನೆ. ಅದ್ಕೆ ನಾಳೆ ಮಧ್ಯಾಹ್ನ 4ಕ್ಕೆ ಬಸ್ ನಿಲ್ದಾಣದಲ್ಲಿ ಇರ್ತೀಯಾ ಅಷ್ಟೆ' ಎಂದು, ನನಗೆ ಮಾತನಾಡಲು ಅವಕಾಶ ಕೊಡದೆ ಕಾಲ್ ಕಟ್ ಮಾಡಿದಳು.
ಅನಿರೀಕ್ಷಿತವಾಗಿ ಒದಗಿ ಬಂದ ಅವಕಾಶ ಹಾಳು ಮಾಡಿಕೊಳ್ಳುವ ಮನಸ್ಸಿರಲಿಲ್ಲ. ಆದರೆ ಮೂರು ದಿನ ರಜೆ ಹಾಕಬೇಕು. ಏನು ಮಾಡುವುದೆಂದು ಯೋಚಿಸುತ್ತಲೇ, ಲಗು ಬಗೆಯಲ್ಲಿ ತಯಾರಾಗಿ ನಿಯೋಜಿತ ಕರ್ತವ್ಯಕ್ಕೆ ಹಾಜಾರಾದೆ.
ಅಂತೂ ಇಂತೂ ಎಂದು ಹರಸಾಹಸ ಪಟ್ಟು ನಾಲ್ಕು ದಿನ ರಜೆ ಪಡೆದೆ. ಅವಳ ಕೋರಿಕೆಯಂತೆ, ಅವಳು ಹೇಳಿದ ಸಮಯಕ್ಕಿಂತ ಅರ್ಧಗಂಟೆ ಮುಂಚಿತವಾಗಿಯೇ ಬಸ್ ನಿಲ್ದಾಣದಲ್ಲಿ ನಾನು ಅವಳಿಗಾಗಿ ಕಾಯುತ್ತಿದ್ದೆ. ಮಳೆಯಂತೂ ಧೋ ಧೋ ಎಂದು ಸುರಿಯುತ್ತಿತ್ತು. ಆ ಮಳೆಯಲ್ಲಿಯೇ ದೂರದಿಂದ ನನ್ನನ್ನು ಗಮನಿಸಿದ ಅವಳು, ನಸುನಕ್ಕಳು. ಬಿಂಕದಿಂದ ಹೆಜ್ಜೆ ಹಾಕುತ್ತ ಹತ್ತಿರ ಬಂದು `ಪ್ರೀತಿಸೋ ಹುಡುಗ ಅಂದ್ರೆ ಹೀಗಿರಬೇಕು' ಎಂದು ಗಲ್ಲ ಹಿಡಿದು, `ನಮ್ಮೂರ ಕಡೆ ಹೋಗೋ ಬಸ್ ಬಂದಿಲ್ವಾ' ಎಂದು ಕೇಳಿದಳು.
ಐದತ್ತು ನಿಮಿಷದಲ್ಲಿ ಮಲೆನಾಡ ಕಡೆ ಪಯಣಿಸೂ ಬಸ್ ಬಂದು ನಿಂತಿತು. ಮಧ್ಯದಲ್ಲಿ ಆಸನದಲ್ಲಿ ಹೋಗಿ ಆಸೀನರಾದೇವು. ಬಸ್ಸ ಹೊರಡಲು ಇನ್ನೂ ಹದಿನೈದು ನಿಮಿಷವಿತ್ತು. ಆಗಲೇ ಶುರುವಿಟ್ಟುಕೊಂಡೆ ಅವಳ ತಲೆ ತಿನ್ನಲು.....
`ನಾನು ಯಾಕಾಗಿ ನಿಮ್ಮ ಮನೆಗೆ ಬರಬೇಕು? ಅಲ್ಲಿಯ ವಾತಾವರಣ ಹೇಗಿದೆ? ಗುಡ್ಡ ಬೆಟ್ಟಗಳಿವೆಯಾ? ಎಷ್ಟು ಗಂಟೆ ಪಯಣದ ಹಾದಿ? ಕತ್ತಲಾದರೆ ಏನು ಮಾಡುವುದು? ಹಸಿವೆಯಾದರೆ ತಿನ್ನಲು ಏನಾದರೂ ತಂದಿದ್ದೇಯಾ?' ಹೀಗೆ ಅವಳ ಮಾತಿನ ಶೈಲಿಯಲ್ಲಿಯೇ ನಾನು ಕೂಡಾ ಮಾತನಾಡತೊಡಗಿದೆ. ಅವಳ ತಲೆ ಕೆಟ್ಟು ಹೋಗಿತ್ತು. ಉಕ್ಕಿ ಬರುವ ಕೋಪವನ್ನೆಲ್ಲ ಬಿಗಿ ಹಿಡಿದು ಹಲ್ಲನ್ನು ಕಟಕಟನೇ ಕಡಿಯ ಹತ್ತಿದಳು. ನಾನು ನನ್ನ ಪಾಡಿಗೆ ಮಾತನಾಡುತ್ತಲೇ ಇದ್ದೆ. `ಅಯ್ಯೋ ಭಗವಂತ, ದಯವಿಟ್ಟು ಇಲ್ಲೆ ಇಳಿದು ಬಿಡು. ನೀನು ನಮ್ಮ ಮನೆಗೆ ಬರುವುದು ಬೇಡ. ಅಲ್ಲಿಯೂ ಕೂಡಾ ಹೀಗೆ ಮಾತನಾಡಿದರೆ ನನ್ನ ಮರ್ಯಾದೆ ಹೋದ ಹಾಗೆ' ಎಂದು ಬಯ್ಯತೊಡಗಿದಳು. ಪೆಚ್ಚು ಮೋರೆ ಹಾಕಿ ಸುಮ್ಮನೆ ಕುಳಿತುಕೊಂಡೆ.
*********************************************
ಒಮ್ಮೆಲೆ ಎಚ್ಚರಾಯಿತು. ಅವಳು ನಿದ್ರೆಯಲ್ಲಿದ್ದಳು. ಕಿಟಕಿಯಾಚೆ ಕಣ್ಣಾಡಿಸಿದೆ. ಅಬ್ಬಾ!! ಹಸಿರು ಕಾನನಗಳ ನಡುವೆ ಭೋರ್ಗರೆವ ವರ್ಷಧಾರೆಯ ಅಬ್ಬರ ಮನಸ್ಸನ್ನು ಹುಚ್ಚು ಹಿಡಿಸಿದವು. ಬಸ್ನ್ನು ಒಮ್ಮೆ ನಿಲ್ಲಿಸಿದರೆ ಕೆಳಗಿಳಿದು ಮಳೆಯಲ್ಲಿ ತೋಯ್ದು ಬರಬೇಕು ಎಂದೆನಿಸಿತ್ತು. ಬೆಟ್ಟಗಳ ಸಾಲುಗಳ ನಡುವೆ ಹೆಬ್ಬಾವಿನಂತ ರಸ್ತೆಯಲ್ಲಿ ಮಳೆಗಾಲದ ಪಯಣ ನಿಜಕ್ಕೂ ವರ್ಣನಾತೀತ. ವರ್ಣಿಸಲಸದಳ. ನಿಜವಾದ ಪ್ರಕೃತಿಯ ಸೌಂದರ್ಯ ಅನುಭವಿಸಬೇಕೆಂದರೆ ಇಂತಹ ಪಯಣ ಮಾಡಲೇ ಬೇಕು. ಆಗೊಮ್ಮೆ ಈಗೊಮ್ಮೆ ಧುತ್ತೆಂದು ಎದುರಾಗುವ ಘಟ್ಟಗಳು .... ಬಿದ್ದೆ ಬಿಟ್ಟೆವು ಎಂದು ಭಾಸವಾಗುವ ಇಳಿಜಾರುಗಳು.... ದೂರದಲ್ಲೆಲ್ಲೋ ಕಾಣುವ ಚಿಕ್ಕ ಪುಟ್ಟ ಝರಿಗಳು.... ಗಾಳಿಯ ರಭಸಕ್ಕೆ ತಡವರಿಸುತ್ತ ಓಲಾಡುತ್ತಿರುವ ಮರಗಿಡಗಳು.... ಹೃದಯ ಬಡಿತ ಹೆಚ್ಚಿಸುವ ರಸ್ತೆ ಪಕ್ಕದ ಕಂದಕಗಳು.....ಅಬ್ಬಾ!! ಒಂದೇ ಎರಡೇ..... ಹೀಗೆ ಹಲವು ವೈವಿದ್ಯಮ ಪ್ರಾಕೃತಿಕ ಸೌಂದರ್ಯಗಳು  ಕಣ್ಣಿಗೆ ಎದುರಾಗುತ್ತ ಹೋದವು.
ನಾನು ಸಂಪೂರ್ಣ ಪ್ರಕೃತಿ ಮಡಿಲಲ್ಲಿಯೇ ಲೀನವಾಗಿದ್ದೆ. `ನನ್ನವಳು ಕೂಡಾ ಒಂದರ್ಥದಲ್ಲಿ ಪ್ರಕೃತಿಯೇ ಅಲ್ವಾ? ಅವಳ ಮನಸ್ಸು, ನೋಟ, ಮಾತು, ವರ್ತನೆ ಹೀಗೆ ಯಾವೊಂದರಲ್ಲಿಯೂ ಕಲ್ಮಶಗಳಿಲ್ಲ. ಪ್ರಕೃತಿಯಷ್ಟೇ ಪರಿಶುದ್ದವಾದ ಅವಳ ಪ್ರೀತಿಯನ್ನು ಪಡೆದ ನಾನು ನಿಜಕ್ಕೂ ಅದೃಷ್ಟವಂತ ಎಂದು ಮನಸ್ಸಲ್ಲೆ ಅವಳನ್ನು ಪ್ರಕೃತಿಗೆ ಹೋಲಿಕೆ ಮಾಡಿಕೊಳ್ಳುತ್ತ, ಅವಳ ಕೈಯನ್ನು ಹಿಡಿದುಕೊಂಡಿದ್ದೆ.
ಭಾವೋನ್ಮಾದ ಎಲ್ಲೇ ಮೀರಿ ಅರಿವಿಲ್ಲದೆ ಅವಳ ಕೈಯನ್ನು ಗಟ್ಟಿಯಾಗಿ ಹಿಚುಕಿಬಿಟ್ಟೆ..!! ನಿದ್ರೆಯಲ್ಲಿದ್ದ ಅವಳು, ದುರುಗುಟ್ಟಿ ನನ್ನನ್ನು ನೋಡಿದಳು. ಅಮ್ಮನ ಎದುರು ಮಗು ತಪ್ಪು ಮಾಡಿದಾಗ ಕೆಳ ಮುಖ ಹಾಕಿ ನಿಲ್ಲುವಂತೆ, ನಾನು ಕೂಡಾ ಮುಖವನ್ನು ಕೆಳಗಡೆ ಹಾಕಿ `ಯಾಕೆ ಹಾಗೆ ನೋಡ್ತಾ ಇದ್ದೀಯಾ? ಕಣ್ಣನ್ನು ಚಿಕ್ಕದಾಗಿ ಮಾಡು' ಎಂದೆ.

.............................................ಮುಂದುವರಿದು....? ಭಾಗ ಎರಡರಲ್ಲಿ.......

ಮಂಗಳವಾರ, ಜುಲೈ 2, 2013

ಪ್ರೇಮ ಜೀವನದಲ್ಲೊಂದು ಸುತ್ತು....

ಬೀಡಿ ವೆಂಕ ಮತ್ತು ಸತ್ತ ಗಿಳಿ

ತುಂಬಾ ದಿನಗಳ ನಂತರ ಆಕೆಗೆ ಫೋನ್ ಮಾಡಿದ್ದೆ. ಅವಳು ಬದಲಾಗಿದ್ದು ಗೊತ್ತಿತ್ತು... ಆದರೆ, ಆ ಬದಲಾವಣೆಯಲ್ಲಿ ನನ್ನ ಪ್ರೀತಿಯನ್ನೂ ಸಹ ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾಳೆ ಎಂದು ಕೊಂಡಿದ್ದೆ! ಆದರೆ ಅವೆಲ್ಲ ಹುಸಿಯೆಂದು, ಅವಳ ಮಾತಿನಿಂದಲೇ ಅರಿವಾಯಿತು. ಅರಿವಿಲ್ಲದೆ ಹೃದಯ ಭಾರವಾಗುತ್ತ, ಕಣ್ಣಂಚುಗಳು ತೇವಗೊಂಡವು.
ಜೊತೆ ಜೊತೆಯಾಗಿಯೇ ಅರ್ಥೈಸಿಕೊಂಡು ಬದುಕಿದವಳು... ಅರಿಯದ ವಯಸ್ಸಲ್ಲಿ ಪ್ರಬುದ್ಧತೆ ಮೆರೆದವಳು.... ನನ್ನೆಲ್ಲ ಸರ್ವಸ್ವ ನೀನೆ ಎಂದು ನನ್ನಲ್ಲೇ ಒಂದಾದವಳು... ಅಗಲಿಕೆಯ ಸಹಿಸದೆ ಅತ್ತು ಕರಗಿ ಬಳಲಿ ಬೆಂಡಾದವಳು... ಪರಿಸ್ಥಿಯ ಕೈಗೊಂಬೆಯಾಗಿ ಪ್ರೀತಿಸುತ್ತಲೇ ದೂರ ದೂರಕೆ ಪಯಣಿಸಿದಳು! ಅವಳ ಪಯಣದ ಹಾದಿಯಲಿ, ಪ್ರೀತಿ ಮಸುಕಾಗಿ ಹೋಗಿತ್ತು? ಪ್ರತೀ ನೋವಿಗೂ ಕಾಲವೇ ದಿವ್ಯೌಷದ ಎಂಬಂತೆ, ಅವಳಿಗೆ ನನ್ನ ಅಗಲಿಕೆಯ ನೋವಿಗೂ ಸಹ `ಕಾಲ'ನೇ ಸಾಂತ್ವನ ಹೇಳಿ ಸಂತೈಸಿತ್ತು.
ಅನಿರೀಕ್ಷಿತವಾಗಿ ಅಂದು ನನಗೆ ಅವಳ ದೂರವಾಣಿ ನಂ. ದೊರೆಯಿತು. ಪರಸ್ಪರ ದೂರವಾಗಿ ಹಲವು ವರ್ಷಗಳು ಸಂದಿದ್ದವು. `ಹೇಗೂ ನಂ. ದೊರೆತಿದೆಯಲ್ಲಾ..... ಸಂಪರ್ಕಿಸಿ ನೋಡೋಣ, ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ವಿಚಾರಿಸೋಣ' ಎಂದು ಅವಳ ನಂ.ಗೆ ಕರೆ ಮಾಡಿದೆ. ಒಮ್ಮೆಲೆ ನನ್ನ ಧ್ವನಿ ಗ್ರಹಿಸಿದ ಆಕೆ, `ನೀನಾ...?' ಎಂದು ಒಂದೇ ಸಮನೆ ಹುಸಿಕೋಪದಿಂದ `ಹೋಗೆಲೋ...' ಎಂದು ಎರ್ರಾಬಿರ್ರಿ ಬಯ್ಯತೊಡಗಿದಳು.
ನಂತರ ನಿಧಾನವಾಗಿ `ಕಷ್ಟಪಟ್ಟು ಹಾಗೋ ಹೀಗೋ ಎಂದು ವಿದ್ಯಾಭ್ಯಾಸ ಮಾಡಿ ಒಂದು ಉದ್ಯೋಗಕ್ಕೆ ಸೇರಿದೆ. ಬದುಕಲ್ಲಿ ಅನುಭವಿಸಿದ ನೋವು ಹತಾಶೆಗಳೇ ನನ್ನ ಸಾಧನೆಯ ಮೆಟ್ಟಿಲುಗಳಾದವು. ಕಷ್ಟದಲ್ಲೇ ಬದುಕಿದ ನಾನು ಎಲ್ಲಿಯೂ ಸಂತೋಷದ ಬದುಕು ಕಂಡಿಲ್ಲ. ಓದು ಅಭ್ಯಾಸ ಎನ್ನುತ್ತಲೇ ಭವಿಷ್ಯದ ಗೂಡು ಹಣೆದೆ. ಅದರಲ್ಲಿ ಕೆಲವಷ್ಟು ಕನಸು ನನಸಾದರೂ... ಬಹಳಷ್ಟು ಕನಸು ಕನಸಾಗೇ ಉಳಿದು ಬಿಟ್ಟಿತು' ಎಂದು ನಿರಾಸೆಯಿಂದಲೇ ಏನೇನೋ ಹೇಳತೊಡಗಿದಳು.
ಸುಮ್ಮನೆ `ಹುಂ' `ಹಾ' ಎನ್ನುತ್ತ ಕೇಳುತ್ತ ಹೋದೆ.
`ಕೆಲವೊಮ್ಮೆ ಮನಸ್ಸು ತುಂಬಾ ವಿನಾ ಕಾರಣಕ್ಕೆ ಸುಮ್ಮನಾಗಿ ಬಿಡುತ್ತವೋ.. ಆಗ ಅರಿವಿಲ್ಲದೆ ನನ್ನ ಕಣ್ಣಾಲಿಗಳಿಂದ ನೀರು ಜಿನುಗುತ್ತವೆ. ಸಂದರ್ಭದಲ್ಲೆಲ್ಲ ನಿನ್ನ ನೆನಪು ಕಾಡುತ್ತವೆ. ಆಗ ಸುಮ್ಮನೆ ಆಕಾಶ ನೋಡುತ್ತ ಕುಳಿತು ಬಿಡುತ್ತೇನೆ' ಎಂದು ಮೌನಕ್ಕೆ ಜಾರಿಬಿಟ್ಟಳು.
ಆದರೆ ಅವಳಾಡಿದ ಬಹಳಷ್ಟು ಮಾತುಗಳಲ್ಲಿ ಈ ಮಾತು ಮಾತ್ರ ನನ್ನ ಹೃದಯವನ್ನೇ ತಾಕುವಂತೆ ಮಾಡಿತು. ಬೇಡ ಬೇಡ ಎಂದರೂ ಮನಸ್ಸು ಹಿಂದಿನ ದಿನಗಳತ್ತ ಜಾರುತ್ತಿತ್ತು. ಬಲವಂತವಾಗಿ ಅದನ್ನು ಹಿಡಿದಿಡಲು ಪ್ರಯತ್ನಿಸಿದೆ. ಇಲ್ಲ, ಅದು ಯಾವ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಹಿಡಿದ ಹಠ ಸಾಧಿಸುವಂತೆ, ನನ್ನನ್ನು ಧಿಕ್ಕರಿಸಿ ಹಳೆಯ ನೆನಪಿನ ಗೂಡಿಗೆ ಹೋಗಿ ಕುಳಿತು ಬಿಟ್ಟಿತು...!
ಅವಳ ಜೊತೆ ಕಳೆದ, ಆಡಿತ, ಹರಟಿದ ಎಲ್ಲ ಕ್ಷಣಗಳಗಳನ್ನು ನನ್ನ ಮನಸ್ಸು ಒಂದಾದಾಗಿ ಮೆಲುಕು ಹಾಕತೊಡಗಿತು.
ನೆನಪು 1........
ಅವತ್ತು ಯಾರಿಗೂ ಹೇಳದೆ, ನಾವಿಬ್ಬರೂ ಸಮುದ್ರಕ್ಕೆ ತೆರಳಿದ್ದೆವು. ಆಗ ತಾನೆ ಸೂರ್ಯ ತನ್ನ ಕಾರ್ಯ ಮುಗಿಸಿ ವಿಶ್ರಾಂತಿಗೆ ತೆರಳುತ್ತಿದ್ದ. ಭೋರ್ಗರೆವ ಕಡಲ ಮೊರೆತದ ನಡುವೆ, ತುಂತುರು ಮಳೆ ಹನಿಗಳು ಜಿನುಗುತ್ತ ಮುಸ್ಸಂಜೆಯ ಸೊಬಗನ್ನು ಹೆಚ್ಚಿಸಿದ್ದವು. ಏರಿಳಿತದ ಅಲೆಗಳ ಮೇಲೆ ನಮ್ಮಿಬ್ಬರದು ಭಾವ ಲಹರಿಗಳ ಪಯಣ. ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ, ಕತ್ತಲಾವರಿಸಿಬಿಟ್ಟಿತ್ತು. ತುಸು ತಡವರಿಸಿದ ಆಕೆ, `ಏನೋ... ಕತ್ತಲಾಯ್ತಲ್ಲೊ... ಭಯವಾಗ್ತಿದೆ, ಹೋಗೋಣ ಬಾ' ಎಂದಳು. `ಇಲ್ಲ ಕಣೆ, ಹತ್ತು ನಿಮಿಷ ಬಿಟ್ಟು ಹೊರಡೋಣ' ಎಂದೆ!
ಅದೇ ಸಮಯದಲ್ಲಿ ಆಕೆಗೆ ದೂರದಲ್ಲಿ ಯಾವುದರದೋ ಒಂದು ಆಕೃತಿ ಕಣ್ಣಿಗೆ ಬಿತ್ತು! ಭಯಭೀತಳಾದ ಅವಳು ಏದುಸಿರು ಬಿಡುತ್ತ ಬಾಚಿ ನನ್ನನ್ನು ತಬ್ಬಿಕೊಂಡು, `ಅಲ್ಲಿ ನೋಡು.... ಎಂದು ಬೆರಳು ತೋರಿಸಿದಳು. ಅವಳು ತೋರಿಸಿದ ಬೆರಳ ದಿಕ್ಕಿಗೆ ದಿಟ್ಟಿಸಿ ನೋಡಿದೆ! ನಮ್ಮೂರ ವೆಂಕ ಬೀಡಿ ಸೇದುತ್ತ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದ!
ಮನಸ್ಸಲ್ಲೆ `ವೆಂಕ'ನಿಗೊಂದು ಧನ್ಯವಾದ ಅರ್ಪಿಸಿ, ಇಂತಹ ಕ್ಷಣಗಳು ಸದಾ ಎದುರಾಗುತ್ತಿರಲಿ ಎಂದು ಭಗವಂತನಲ್ಲಿಯೂ ಪ್ರಾರ್ಥಿಸಿದೆ.
ನೆನಪು 2.............
ಆಗ ತಾನೆ ಶಾಲೆ ಮುಗಿಸಿ ಮನೆ ಕಡೆ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಬಂದ ಆಕೆ, `ನಾನು ಇಂದು ತುರ್ತಾಗಿ ಮನೆಗೆ ಹೋಗ್ತಾ ಇದ್ದೇನೆ. ಬರಲು ಇನ್ನೆರಡು ದಿನ ತಡವಾಗಬಹುದು' ಎಂದಳು. ಯಾಕೆ ಏನು ಎಂದು ಕೇಳುವಷ್ಟರಲ್ಲಿ, ಭರಭರನೆ ಮನೆ ಕಡೆ ಹೆಜ್ಜೆ ಹಾಕಿದಳು. ಹುಚ್ಚು ಹಿಡಿದಂತಾಗ ಅವಳಿದ್ದ ಮನೆಯೆಡೆ ನಾನು ಕೂಡಾ ಹೆಜ್ಜೆ ಹಾಕಿದೆ. ಮನೆಯ ಮೂಲೆಯೊಂದರಲ್ಲಿ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದಳು. ಒಮ್ಮೆ ಸುತ್ತಲೂ ಕಣ್ಣಾಡಿಸಿದೆ.... ಯಾರೂ ಇಲ್ಲದಿರುವದನ್ನು ಗಮನಿಸಿ, ಅವಳ ಪಕ್ಕ ಹೋಗಿ ಕುಳಿತು, ತಲೆ ನೇವರಿಸುತ್ತ `ಏನಾಯ್ತೋ ಪಾಪು..? ಯಾಕೆ ಹೀಗೆ ಅಳ್ತಾ ಇದ್ದೀಯಾ..?' ಎಂದು ಕೇಳಿದೆ. ಒತ್ತರಿಸುವ ಬರುವ ದುಃಖವನ್ನು ಹಿಡಿದುಕೊಳ್ಳುತ್ತ `ನನ್ನ ಮುದ್ದಿನ ಗಿಳಿ ಸತ್ತೊಯ್ತಂತೆ! ಎಲ್ಲಿಯದೋ ಬೆಕ್ಕು ಬಂದು ಅದನ್ನು ಮುರಿದು ತಿಂದು ಬಿಟ್ಟಿದೆಯಂತೆ' ಎಂದಳು. ನನ್ನವಳ ಮುಗ್ದತೆಗೆ ಮರುಗಿದೆ. ಅವಳಲ್ಲಿರುವ ಸ್ನಿಗ್ದ ಪ್ರೀತಿಗೆ ಸೋತು ಹೋದೆ.
ಸಾಂತ್ವನಕ್ಕೆಂದು `ನನಗೂ ಕೂಡಾ ತುಂಬಾ ನೋವಾಗ್ತಿದೆ ಪಾಪು. ಏನು ಮಾಡುವುದು? ಅದರ ಆಯುಷ್ಯಾನೇ ಅಷ್ಟು ಅಂತ, ಸುಮ್ಮನಾಗಬೇಕು. ಇವತ್ತು ನಿನ್ನ ಗಿಣಿ... ನಾಳೆ ಇನ್ನೇನೋ.... ನಾಡಿದ್ದು ನಾನು....' ಎನ್ನುವಷ್ಟರಲ್ಲಿ, ತನ್ನ ಕೈಯಿಂದ ನನ್ನ ಬಾಯಿಯನ್ನು ಮುಚ್ಚಿಸಿದಳು.
ಬೇಡ ಕಣೋ.... ಇನ್ಯಾವತ್ತೂ ಅಂಥಹ ಮಾತನ್ನು ಆಡಬೇಡ. ಎಲ್ಲರೂ ಸಾಯಲೂ ಬಂದವರೇ! ಆದರೆ, ನೀನು ಮಾತ್ರ ಎಂದಿಗೂ ನಗು ನಗುತ್ತ ಇರಬೇಕು. ಇನ್ಮುಂದೆ `ತಮಾಷೆ'ಗೂ ಕೂಡಾ ಅಂತಹ ನಿದರ್ಶನ ಕೊಡಬೇಡ' ಎಂದು ಅಳುತ್ತಲೇ ತಾಕೀತು ಮಾಡಿದಳು.
ಹುಚ್ಚಿ.... ಅದಕ್ಕೆಲ್ಲ ಯಾಕೆ ಹೀಗಾಡ್ತಿಯಾ?' ಎಂದು ಪ್ರೀತಿಯಿಂದ ಅವಳ ಕೆನ್ನೆ ಸವರಿದೆ. ಕೆನ್ನೆ ಸವರಿದ ಕೈಯನ್ನೆ ಹಿಡಿದುಕೊಳ್ಳುತ್ತ, `ಈ ಕೈ ಯಾವಾಗಲೂ ನನ್ನದೇ ಅಲ್ವಾ? ಈ ಕೈ ನನ್ನ ಕೈಯನ್ನು ಹಿಡಿಯುತ್ತದೆ ಅಲ್ವಾ? ಈ ಕೈಯಲ್ಲೇ ಅಲ್ವಾ ನಾನು ನೆಮ್ಮದಿಯಾಗಿ ಬದುಕೋದು? ಎಂದು ತನ್ನೆದೆಗೆ ಒತ್ತಿಕೊಂಡು ಅರೆ ಕ್ಷಣ ಕಣ್ಮುಚ್ಚಿದಳು.
ಮಾತು ಬರದವನಾಗಿ ಅವಳನ್ನೇ ನೋಡುತ್ತ ಕುಳಿತು ಬಿಟ್ಟೆ. `ನಿನಗೆ ಏನೋ ಕೊಡಬೇಕು ಎಂದುಕೊಂಡಿದ್ದೆ, ನೆನಪೇ ಇಲ್ಲ.... ಕಣ್ಣು ಮುಚ್ಕೊ' ಎಂದು ತನ್ನ ಶಾಲಾ ಬ್ಯಾಗ್ ತೆರೆದಳು. ಅವಳ ಆಣತಿಯಂತೆ ನಾನು ಕಣ್ಣು ಮುಚ್ಚಿಕೊಂಡಿದ್ದೆ. ಏನು ಕೊಡುತ್ತಾಳೆ ಎಂದು ಊಹಿಸುವಷ್ಟರಲ್ಲಿ ಹಣೆಯ ಮೇಲೊಂದು ಅವಳ `ಮುತ್ತು' ಇತ್ತು..!
ಬೆಕ್ಕು ತಿಂದ ನನ್ನವಳ ಗಿಳಿಯ ಆತ್ಮಕ್ಕೆ ಮನಸ್ಸಲ್ಲೆ ಪ್ರಾರ್ಥನೆ ಸಲ್ಲಿಸಿದೆ...!
-ನಾಗರಾಜ ಬಿ.ಎನ್. 

ಮಂಗಳವಾರ, ಜೂನ್ 25, 2013

ಕಲ್ಪನೆಯ ಮೂಸೆಯಲಿ.....

ಹೀಗೊಂದು ಬದುಕು

ಶ್ರೀಮಂತರ ಕುಟುಂಬದಲ್ಲಿ ಜನಿಸಿದವನಾದರೂ, ಹಣದ ಮೌಲ್ಯ ಏನು ಎಂದು ಬಾಲ್ಯದಿಂದಲೇ ಅರಿತಿದ್ದೆ. ಅಪ್ಪ-ಅಮ್ಮರಲ್ಲಿ ತಿಂದು ತೇಗಲಾರದಷ್ಟು ಸಂಪತ್ತಿದ್ದರೂ, ತಮ್ಮ ಮಕ್ಕಳನ್ನು ಉತ್ತಮ ಸಂಸ್ಕಾರಯುತ ಪ್ರಜೆಗಳನ್ನಾಗಿ ರೂಪಿಸಬೇಕೆಂಬ ದೂರದೃಷ್ಟಿ ಉಳ್ಳವರಾಗಿದ್ದರು.
ಒಮ್ಮೊಮ್ಮೆ ಹೆತ್ತವರು ಕೈ ತುಂಬ ಹಣ ನೀಡಿ `ಜೋಪಾನವಾಗಿ ಎತ್ತಿಡು. ಬೇಕಾದಾಗ ಕೇಳುತ್ತೇವೆ' ಎನ್ನುತ್ತಿದ್ದರು. ದಾರಿತಪ್ಪಿ ಎಡವಿ ಬೀಳುವ ವಯಸ್ಸಲ್ಲಿ ಜವಾಬ್ದಾರಿಯನ್ನು ಹೊರಸಿ, ದೂರದಿಂದ ಪರೀಕ್ಷಿಸುತ್ತಿದ್ದರು. ಅವರು ನೀಡಿದ ಹಣದ ಲೆಕ್ಕಾಚಾರದಲ್ಲಿ ಎಲ್ಲಿಯೂ ಏರುಪೇರಾಗುತ್ತಿರಲಿಲ್ಲ. `ಅವನು ನನ್ನ ಮಗ, ಅವನು ನನ್ನ ಮಗ' ಎಂದು, ಹೆಮ್ಮೆಯಿಂದ ಅಪ್ಪ-ಅಮ್ಮರಿಬ್ಬರೂ ಕಿತ್ತಾಡುತ್ತಿದ್ದರು...!  ಈ ಪ್ರಾಮಾಣಿಕತೆಗೆ, ಬದುಕಿನ ಪಾಠಕ್ಕೆ ಕೈ ಹಿಡಿದು ಮುನ್ನುಡಿ ಬರೆಸಿದವರೂ ಅವರೇ ಆದರೂ, ಸಹೋದರಿಯ ಅಧ್ಯಾತ್ಮ ಹಾಗೂ ವ್ಯಕ್ತಿತ್ವ ವಿಕಸನದ ಹೊತ್ತಿಗೆಯು ಕೂಡಾ ನನಗೆ ಪ್ರಭಾವ ಬೀರುವಲ್ಲಿ ಸಾಕಾರವಾಯಿತೇನೋ...!
ಒಂದರ್ಥದಲ್ಲಿ ನಮ್ಮದು ಅಧ್ಯಾತ್ಮ ಕುಟುಂಬ. ಸಂಸ್ಕಾರ, ಸಂಸ್ಕೃತಿ ಹಾಸುಹೊಕ್ಕಾಗಿತ್ತು. ಮನೆ ಮಂದಿಯೆಲ್ಲರೂ ಸದಾ ದೈವತ್ವದ ಚಿಂತನೆ ಮಾಡುತ್ತ, ಪರರ ನೋವಿಗೆ ಸ್ಪಂದಿಸುತ್ತಲೆ ದಿನದ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಚಿಕ್ಕಂದಿನಿಂದಲೂ ಪ್ರಾಣಿ, ಪಕ್ಷಿ ಮತ್ತು ಪರಿಸರ ಎಂದು ಜೀವ ಬೀಡುತ್ತಿದ್ದ ನಾನು, ಕ್ರಮೇಣ ನನ್ನ ಭೌತಿಕ ಶರೀರವವನ್ನೆ ಪ್ರಕೃತಿಯನ್ನಾಗಿ ಮಾಡಿಕೊಂಡುಬಿಟ್ಟೆ! ಕನಸು-ಮನಸಲ್ಲೂ ಕೂಡಾ ಅವರದೇ ಚಿಂತನೆ. ಬಿಡುವಿದ್ದಾಗ ಹೆಚ್ಚಿನ ಸಮಯ ಅವರ ಜೊತೆ ಕಳೆಯುತ್ತ, ಅವರನ್ನು ಮಾತನಾಡಿಸುತ್ತ, ಮೈ ನೇವರಿಸುತ್ತ, ಪ್ರೀತಿಯಿಂದ ಮುದ್ದಿಸುತ್ತ, ನಗಿಸುತ್ತ ಅವರಲ್ಲಿಯೇ ಒಂದಾಗುತ್ತಿದ್ದೆ. ಒಮ್ಮೊಮ್ಮೆ ಅವರ ಮೂಕ ರೋದನಕ್ಕೆ ನಾನು ಭಾವುಕನಾಗಿ ಅತ್ತಿದ್ದು ಇದೆ. ಒಂದರ್ಥದಲ್ಲಿ ನನ್ನ ಪ್ರಪಂಚವೇ ಈ ಪ್ರಾಣಿ, ಪಕ್ಷಿ, ಮರ-ಗಿಡವಾಗಿ ಬಿಟ್ಟಿದ್ದವು.
ಸಮಾಜದ ಅರ್ಥಹೀನ ಆಚರಣೆ ಹಾಗೂ ಆಡಂಬರತೆಯನ್ನು ಸಹಿಸದ ನಾನು, ಸದಾ ವಿರೋಧಿಸುತ್ತಿದ್ದೆ. ದೇವರ ಹೆಸರಲ್ಲಿ ಬಲಿ ನೀಡುವುದು... ಕೆಲವು ನೆಪದಲ್ಲಿ ದೇಣಿಗೆ ಸಂಗ್ರಹಿಸುವುದು... ಚುನಾವಣಾ ಮುನ್ನಾದಿನ ನಡೆಯುವ ಅವ್ಯವಹಾರ... ಜಾತಿ-ಜಾತಿಗಳ ನಡುವಿನ ಕಚ್ಚಾಟ... ಗುಟ್ಕಾ-ತಂಬಾಕು-ಸಾರಾಯಿಯ ದಾಸರಾಗಿ ಬದುಕನ್ನು ಹಾಳು ಮಾಡಿಕೊಳ್ಳುವುದು... ಹೀಗೆ ಬದುಕಿನ ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಎಲ್ಲ ವಿಷಯವನ್ನು ಖಂಡಿಸಿ ಧ್ವನಿ ಎತ್ತುತ್ತಿದ್ದೆ.
ನಾನು ವೃತ್ತಿ ಜೀವನಕ್ಕೆ ಆಯ್ಕೆ ಮಾಡಿಕೊಂಡ ಶಿಕ್ಷಣ ಪತ್ರಿಕೋದ್ಯಮ. ಈ ಸಂದರ್ಭದಲ್ಲಿ ಪಾಲಕರು ಪ್ರತಿಷ್ಠಿತ ಕಾಲೇಜಿನಲ್ಲಿ ಮಗನಿಗೆ ಪ್ರವೇಶ ಕೊಡಿಸಬೇಕೆಂದು ಬೆಂಗಳೂರು, ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಮುಖ್ಯಸ್ಥರೊಡನೆ ಮಾತನಾಡಿ, ಸೀಟು ಕಾಯ್ದಿರಿಸಿದ್ದರು. ಇದ್ಯಾವುದಕ್ಕೂ ಒಪ್ಪದ ನಾನು ನಮ್ಮದೆ ವಿಶ್ವವಿದ್ಯಾಲಯದ, ಪ್ರವೇಶ ಪರೀಕ್ಷೆ ಬರೆದು, ಅರ್ಹತೆ ದೊರೆತರೆ ಮಾತ್ರ ಕಾಲೇಜಿಗೆ ಹೋಗುತ್ತೇನೆ ಎಂದೆ. ಮಗ ಕೈಗೊಂಡ ನಿರ್ಧಾರದಿಂದ ಹಿಂದೆ ಸರಿಯಲಾರ ಎಂದು ತಿಳಿದ ಅವರು, `ನಿನ್ನಿಷ್ಟ' ಎಂದು ಸುಮ್ಮನಾದರು. ಅಂತೂ ವಿಶ್ವವಿದ್ಯಾಲಯವೊಂದರಲ್ಲಿ ಪ್ರವೇಶ ಪರೀಕ್ಷೆ ಬರೆದು, ಸೀಟು ಪಡೆದು ಪತ್ರಿಕೋದ್ಯಮ ಅಧ್ಯನದಲ್ಲಿ ನಿರತನಾದೆ.
ಹೊಸಹೊಸ ಅನುಭವಗಳು....
ಬದುಕಿನ ಹೊಸಹೊಸ ಆಯಾಮಗಳು ಒಂದಾದಾಗಿ ಪರಿಚಯವಾಗತೊಡಗಿತು. ಭಿನ್ನ-ವಿಭಿನ್ನ ವರ್ಗದ ಸ್ನೇಹಿತರು... ಉಪನ್ಯಾಸಕರ ವಿಚಾರಾಧಾರೆಗಳು... ಆಹಾರ ಪದ್ಧತಿಗಳು... ನಡವಳಿಕೆಗಳು... ಬದುಕಿನ ಶೈಲಿಗಳು... ಹೀಗೆ ಎಲ್ಲವೂ ಹೊಸತಾಗಿ ಕಾಣತೊಡಗಿತು. ಸಾತ್ವಿಕ ಆಹಾರದ ವ್ಯಕ್ತಿಯಾಗಿ ಬೆಳೆದ ನನಗೆ ಸ್ನೇಹಿತರ ಮಾಂಸಾಹಾರದ ಪದ್ಧತಿ ಒಗ್ಗಿ ಬರಲಿಲ್ಲ. ಪ್ರತಿನಿತ್ಯ ಅವರಿಗೆ, ಕುರಿ-ಕೋಳಿ-ಮೀನುಗಳ ಮಾಂಸಾಹಾರಗಳು ಕಡ್ಡಾಯವಾಗಿ ಬೇಕಿತ್ತು! ಹಾಸ್ಟೆಲ್ ಸುತ್ತಮುತ್ತಲೇ ಇಂತಹ ಅಂಗಡಿಗಳಿದ್ದದ್ದು ಅವರಿಗೆ ವರದಾನವಾಗಿತ್ತು. ಆದರೆ ಸಸ್ಯಹಾರಿಯಾದ ನನಗೆ, ಹಾಸ್ಟೆಲ್ನ ತಿಳಿ ಸಾರಿನ ಊಟವೇ ಮೃಷ್ಟಾನ್ನವಾಗಿತ್ತು. ಉತ್ತಮ ಸಸ್ಯಹಾರದ ಹೊಟೆಲ್ನ್ನ ಊಟ ಬೇಕಾದರೆ 7ರೂ. ತೆತ್ತು ದೂರದ ಬಸ್ ಪ್ರಯಾಣ ಮಾಡಬೇಕಿತ್ತು!  ತಿಂಗಳಿಗೊಮ್ಮೊಮ್ಮೆ ನನ್ನೆಲ್ಲ ಸ್ನೇಹಿತರನ್ನು ಕರೆದುಕೊಂಡು ಅಲ್ಲಿಗೆ ಹೋಗಿ, ತೃಪ್ತಿಯಿಂದ ಊಟ ಮಾಡಿ ಬರುತ್ತಿದ್ದೆ!
ಕಾಲೇಜಿಗೆ ಸೇರುವ ಪೂರ್ವದಲ್ಲಿ ಹೆತ್ತವರು ಹೇಳಿದ್ದರು. ನಿನಗೆ ಎಷ್ಟು ಹಣ ಬೇಕಾದರೂ ಕೇಳು. ನಾವು ನೀಡುತ್ತೇವೆ. ನಿನ್ನ ಕಲಿಕೆಗೆ ಎಲ್ಲಿಯೂ ಕೊರತೆ ಮಾಡಿಕೊಳ್ಳಬೇಡ ಎಂದಿದ್ದರು. ಸ್ವಾಭಿಮಾನದ ಕಿಡಿಯಾದ ನಾನು, `ಕ್ಷಮಿಸಿ, ನನ್ನ ವಿದ್ಯಾಭ್ಯಾಸಕ್ಕೆ ನಾನೇ ಹಣ ಹೊಂದಿಸಿಕೊಳ್ಳುತ್ತೇನೆ. ಅವಶ್ಯಕತೆಯಿದ್ದಾಗ ನಿಮ್ಮಲ್ಲಿ ಕೇಳುತ್ತೇನೆ. ಆಗ ಖಂಡಿತ ನಾನು ಕೇಳಿದಷ್ಟು ಹಣ ನೀವು ಕೊಡಲೇಬೇಕು ಎಂದು ತಾಕೀತು ಹಾಕಿ ಸಮಾಧಾನ ಪಡಿಸಿದ್ದೆ. ಕಲಿಕೆಯ ಹಣಕ್ಕಾಗಿ ಬ್ಯಾಂಕ್ನಲ್ಲಿ ಶಿಕ್ಷಣ ಸಾಲ ಪಡೆದೆ.(ಈ ಶಿಕ್ಷಣ ಸಾಲ ಪಡೆದುಕೊಂಡಿದ್ದು ನನ್ನ ಬದುಕಿನ ದೊಡ್ಡ ಸಾಹಸಗಳಲ್ಲೊಂದು ಎನ್ನಬಹುದು!)
ಎರಡು ವರ್ಷದ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿಯ ಕಾಲೇಜಿನ ಜೀವನಕ್ಕೆ ನಾನು ವ್ಯಯಿಸಿದ್ದ ಹಣ ಕೇವಲ 1,29,000 ರೂಪಾಯಿಗಳು. ನನ್ನ ಉಳಿದೆಲ್ಲ ಸ್ನೇಹಿತರು ಕನಿಷ್ಠವೆಂದರೂ ಬರೋಬ್ಬರಿ 2ಲಕ್ಷಕ್ಕಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ! ಎಲ್ಲಿಯೂ ಊಟ-ತಿಂಡಿ-ಬಟ್ಟೆಗೆ ಮಾತ್ರ ಕಡಿಮೆ ಮಾಡಿಕೊಳ್ಳುತ್ತಿರಲಿಲ್ಲ. ಶಿಸ್ತುಬದ್ಧ ಜೀವನ ಅಳವಡಿಸಿಕೊಂಡಿದ್ದ ನಾನು, ಹೆಚ್ಚುಹೆಚ್ಚಾಗಿ ಫ್ಯಾಶನೇಬಲ್ ಬಟ್ಟೆಯನ್ನು ತೊಡುತ್ತಿದ್ದೆ. ಬಿಳಿ-ನೀಲಿ-ಕಪ್ಪು ಇಷ್ಟದ ಬಣ್ಣಗಳಾಗಿದ್ದು, ಅಂತಹ ಬಟ್ಟೆಯನ್ನೆ ಹೆಚ್ಚಾಗಿ ಖರೀದಿಸುತ್ತಿದ್ದೆ. ಅಪ್ಪ ಪ್ರತಿ ತಿಂಗಳು ನನ್ನ ಖರ್ಚಿಗೆಂದು 2ರಿಂದ 3ಸಾವಿರ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು. ಅವಶ್ಯಕತೆಯಿದ್ದಾಗ ಮಾತ್ರ ಆ ಹಣವನ್ನು ಬಳಸುತ್ತಿದ್ದು, ಬೇಕಾಬಿಟ್ಟಿಯಾಗಿ ಎಂದಿಗೂ ಹಾಳು ಮಾಡುತ್ತಿರಲಿಲ್ಲ.
ಸರಳಬದ್ಧ ಅಚ್ಚುಕಟ್ಟಾದ ನನ್ನ ಜೀವನ ಶೈಲಿ ನನ್ನ ಹೆತ್ತವರಿಗೆ, ಪಾಲಕರಿಗೆ ಅಭಿಮಾನವಾಗಿ ಕಾಣುತ್ತಿತ್ತು. `ನಮ್ಮಲ್ಲಿ ಇಷ್ಟೊಂದು ಹಣವಿದ್ದರೂ ನಮ್ಮ ಮಗ ನಮ್ಮನ್ನು ಆಶ್ರಯಿಸದೆ, ಸ್ವಾಭಿಮಾನದಿಂದ ಬದುಕು ಮುನ್ನಡೆಸುತ್ತಿದ್ದಾನಲ್ಲ ಎಂದು. ಪತ್ರಿಕೋದ್ಯಮ ಶಿಕ್ಷಣ ಮುಗಿಸಿ ವಾಪಸ್ಸು ಬರೋವಾಗ ನನ್ನ ಬ್ಯಾಂಕ್ ಖಾತೆಯಲ್ಲಿ 48,456 ರೂ.ಗಳಿತ್ತು. ನನ್ನದಲ್ಲದ ಆ ಹಣವನ್ನು ಮುಖ ಮುರಿತು ಅಪ್ಪನಿಗೆ ವಾಪಸ್ಸು ನೀಡುವಾದರೂ ಹೇಗೆ ಎಂದು ಚಿಂತಿಸುತ್ತಿದ್ದೆ...!
ಒಡಹುಟ್ಟಿದವಳಾ.....?
ಸ್ವಾಭಿಮಾನದಿಂದ ಶಿಕ್ಷಣ ಮುಗಿಸಿ ಉದ್ಯೋಗ ಹುಡುಕುತ್ತ ಬೆಂಗಳೂರೆಂಬ ಮಾಯಾನಗರಿಗೆ ಕಾಲಿಟ್ಟೆ! ಒಂದೆರಡು ತಿಂಗಳು ಸ್ನೇಹಿತರ ಜೊತೆ ಅಡ್ಡಾಡಿದೆ. ಅಲ್ಪಸ್ವಲ್ಪ ಬೆಂಗಳೂರಿನ ನಾಲ್ದೆಸೆಗಳನ್ನು ಪರಿಚಯಿಸಿಕೊಂಡೆ. ಆಗಲೇ ಕಣ್ಣಿಗೆ ಬಿದ್ದರು... ನಮ್ಮ ಚಿಂದಿ ಆಯುವ ಹುಡುಗರು! ಅವರ ಬದುಕು, ಜೀವನ, ಆಹಾರ ಎಲ್ಲವುಗಳ ಕುರಿತು ಸ್ವಲ್ಪ ಮಾಹಿತಿ ಸಂಗ್ರಹಿಸಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲ ತಡಕಾಡಿದೆ. ಅವರ ಬದುಕಿನ ಎಲ್ಲ ಮಗ್ಗಲುಗಳನ್ನು ಅಭ್ಯಸಿಸಿದೆ. ಇವರಿಗಾಗಿ ಏನಾದರೂ ಮಾಡಬೇಕಲ್ಲ ಎಂದು ಅಂತಃಕರಣ ಮಿಡಿಯುತ್ತಿತ್ತು. ಅದೇ ಸಂದರ್ಭಕ್ಕೆ `ಮೀನಾ' ಎಂಬ ಹೆಸರಿನ 7 ವರ್ಷದ ಚಿಂದಿ ಆಯುವ ಹುಡುಗಿಯೊಬ್ಬಳು ಎದುರಾದಳು. ಪ್ರೀತಿಯಿಂದ ಅವಳ ತಲೆ ನೇವರಿಸಿ, ಹತ್ತಿರ ಎಳೆದುಕೊಂಡು, ಯೋಗಕ್ಷೇಮ ವಿಚಾರಿಸಿದೆ. ಪ್ರೀತಿಯೆಂದರೇನು ಎಂದು ಜನ್ಮತಃ ನೋಡಿರದ ಅರಿತಿರದ ಆಕೆ, `ಪ್ರೀತಿಯ ಮಾತಿಗೆ, ಮಮತೆಯ ಸ್ಪರ್ಶಕ್ಕೆ' ಭಾವುಕಳಾಗಿ ಕಣ್ಣಂಚನ್ನು ಒದ್ದೆ ಮಾಡಿಕೊಂಡಳು. ತನ್ನ ನೆನಪಿನ ಬುತ್ತಿಯಲ್ಲಿರುವ ಘಟನೆಗಳ ಸರಮಾಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಳು. ಆ ಪುಟ್ಟ ಮಗುವಿನ ಮಾತಲ್ಲಿ ತಾನು ಏನಾದರೂ ಸಾಧಿಸಬೇಕೆಂಬ ಛಲ ಇದ್ದಂತೆ ಕಂಡಿತು. ಹೀಗೆ ಸುಮ್ಮನೆ, ಅವಳ ಗಲ್ಲವನ್ನು ಹಿಡಿದೆಳೆಯುತ್ತ, `ಪುಟ್ಟಾ... ಶಾಲೆಗೆ ಹೋಗುವ ಆಸೆ ಇದೆಯಾ?' ಎಂದು ಕೇಳಿದೆ.
ಅರೆಕ್ಷಣ ಮೌನವಾಗಿ, `ಹಾ... ನಾನು ಕೂಡಾ ಬಣ್ಣಬಣ್ಣದ ಅಂಗಿ ತೊಟ್ಟು ಶಾಲೆಗೆ ಹೋಗಬೇಕು ಅನ್ಸತ್ತೆ. ಆದರೆ.... ಅದೆಲ್ಲ ನಮಗೆಲ್ಲಿ?' ಎಂದು ತಲೆ ತಗ್ಗಿಸಿದಳು. ಮನಸ್ಸಲ್ಲಿ ಗಟ್ಟಿಯಾದ ನಿರ್ಧಾರವೊಂದನ್ನು ಮಾಡಿಕೊಂಡು ಅವಳ ವಾಸಸ್ಥಾನದ ವಿಳಾಸ ಪಡೆದು, ನಾಳೆ ಸಿಗುತ್ತೇನೆ ಎಂದು ಅಲ್ಲಿಂದ ಕಾಲ್ಕಿತ್ತೆ.
ಅಲ್ಲಿಂದ ಸಮಾಜ ಕಲ್ಯಾಣ ಇಲಾಖೆಗೆ ಭೆಟ್ಟಿ ನೀಡಿ, ಚಿಂದಿ ಆಯುವ ಮಕ್ಕಳ ಕಾನೂನಿನ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಿದೆ. ಆಕೆಯ ಶಿಕ್ಷಣಕ್ಕೆ ಯಾವೆಲ್ಲ ಕ್ರಮ ಕೈಗೊಳ್ಳಬಹುದೆಂದು ಅಲ್ಲಿಯ ಅಧಿಕಾರಿ ಶಿವರುದ್ರಪ್ಪ ಎಂ.ಎಸ್.ರ ಜೊತೆ ಚರ್ಚಿಸಿದೆ. ಅಧಿಕಾರಿ ಹಾಗೂ ಪೊಲೀಸ್ ಸಹಾಯದೊಂದಿಗೆ ಮೀನಾ ವಾಸಿಸುವ ಸ್ಥಳಕ್ಕೆ ಧಾವಿಸಿ, ಆಕೆಯನ್ನು ಪತ್ತೆ ಹಚ್ಚಿದೆ. ಆಕೆ ಅಲ್ಲಿಯೇ ತನ್ನ ಬಳಗದವರೊಂದಿಗೆ ಕೂಡಿಕೊಂಡು ಕಸವನ್ನು ಬೇರ್ಪಡಿಸುತ್ತಿಳು. ಅವಳ ತಂದೆಯನ್ನು ಪರಿಚಯಿಸಿಕೊಂಡು, ವಿಷಯವನ್ನು ಅರ್ಥವಾಗುವ ಹಾಗೆ ತಿಳಿ ಹೇಳಿದೆವು. ಒಲ್ಲದ ಮನಸ್ಸಿನಿಂದ ಆತ ಆಕೆಯನ್ನು ನಮ್ಮ ಜೊತೆ ಕಳುಹಿಸಿಕೊಡಲು ಒಪ್ಪಿಕೊಂಡ. ಒಂದೆರಡು ದಿನ ಬಿಟ್ಟು ಆಕೆಯನ್ನು ಕರೆದುಕೊಂಡು ಬಂದೆವು. ಅವಳು ಅಳುತ್ತಲೇ ನಮ್ಮ ಜೊತೆ ಭಾರದ ಹೆಜ್ಜೆಯಿಡುತ್ತ ಹಿಂಬಾಲಿದಳು.
ಕಣ್ಣಾಲಿಗಳು ತೋಯ್ದವು...!
ಹೊಸ ಜವಾಬ್ದಾರಿಯನ್ನು ಮೈಲೇಲೆ ಎಳೆದುಕೊಂಡ ನಾನು, ಅವಳನ್ನು ಅಲ್ಲಿಯ ಖಾಸಗಿ ಶಾಲೆಯೊಂದರಲ್ಲಿ ಒಂದನೇ ತರಗತಿಗೆ ಸೇರಿಸಿದೆ. ತಂದೆಯ ಸಮ್ಮುಖದಲ್ಲಿಯೇ ಆಕೆಯ ಪ್ರವೇಶಾತಿಯನ್ನು ಮಾಡಿಸಲಾಯಿತು. ಅವಳ ಒಂದು ವರ್ಷದ ಶಿಕ್ಷಣಕ್ಕೆ ಒಟ್ಟಾರೆ 15ಸಾವಿರ ರೂ.ಗಳನ್ನು ಮುಂಗಡವಾಗಿ ಕಟ್ಟಲಾಯಿತು. ಅವಳು ಎಲ್ಲಿಯವರೆಗೆ ಅಭ್ಯಸಿಸಲು ಆಸಕ್ತಿ ಹೊಂದಿರುತ್ತಾಳೋ ಅಲ್ಲಿಯವರೆಗೆ ಅವಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ನಾನೇ ನಿಭಾಯಿಸುವುದಾಗಿ ಅಲಿಖಿತ ಒಪ್ಪಂದ ಮಾಡಿಕೊಂಡೆ. ಆ ಕೂಡಲೇ ಅವಳ ಮತ್ತು ಶಾಲೆಯ ಹೆಸರಿನಲ್ಲಿ ಸೇರಿ ಒಂದು ಬ್ಯಾಂಕ್ ಖಾತೆ ತೆರದು, 30ಸಾವಿರ ರೂಪಾಯಿ ಅದರಲ್ಲಿ ಡಿಪೋಸಿಟ್ ಮಾಡಿದೆ! ಹಾಗೂ ಆಕೆಗೆ ಇಷ್ಟವಾದ ಕೆಲವು ಬಟ್ಟೆಗಳನ್ನು ಅವಳ ಜೊತೆಯೇ ಹೋಗಿ ಕೊಡಿಸಿದೆ.
ಇದೆಲ್ಲವನ್ನು ಮೌನವಾಗಿ ನೊಡುತ್ತಿದ್ದ ಅವಳ ತಂದೆಯ ಕಣ್ಣಲ್ಲಿ ನೀರು ಒಂದೆ ಸಮನೆ ಧಾರಕಾರವಾಗಿ ಇಳಿಯುತ್ತಿತ್ತು. `ಅವಳು ನನ್ನ ಒಡಹುಟ್ಟಿದವಳು. ಇದರಲ್ಲಿ ವಿಶೇಷವೇನೂ ಇಲ್ಲ' ಎಂದು, ಆತನ ಕಣ್ಣೀರನ್ನು ಒರೆಸಿದೆ. ನನ್ನ ನಿರೀಕ್ಷೆ ಮೀರಿ ಒಮ್ಮೆಲೆ ಆತ ನನ್ನ ಪಾದಕ್ಕೆರಗಲು ಮುಂದಾದ! ಆತನ ಕೈ ಹಿಡಿದೆತ್ತಿ, ನಾನೇ ಆತನಿಗೆ ನಮಸ್ಕರಿಸಿ... `ಇಂಥಹ ಪುಣ್ಯ ಕಾರ್ಯ ಮಾಡಲು ಅವಕಾಶ ಮಾಡಿಕೊಟ್ಟ ನಿಮಗೆ ನಾನು ನಮಸ್ಕರಿಸಬೇಕು' ಎಂದೆ...! ಈ ಘಟನಾವಳಿಗಳನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವರುದ್ರಪ್ಪ, ನನ್ನ ಸ್ನೇಹಿತರು ಹಾಗೂ ಪೊಲೀಸ್ ಮೂಕರಾಗಿ ನೋಡುತ್ತ ತಮ್ಮ ಕಣ್ಣಾಲಿಗಳನ್ನು ತೇವ ಮಾಡಿಕೊಂಡಿದ್ದರು.
ನನ್ನ ದೈವ ಸ್ವರೂಪಿ ಹೆತ್ತವರು ನನ್ನ ಶಿಕ್ಷಣಕ್ಕೆ ನೀಡಿದ ಹಣವನ್ನು ಈಕೆಯ ಶಿಕ್ಷಣಕ್ಕೆ ನೀಡುವುದರ ಮೂಲಕ ಸಾರ್ಥಕ ಪಡಿಸಿದೆ.
ದೂರವಾಣಿ ಮೂಲಕ ಅಮ್ಮನಿಗೆ ತಿಳಿಸಿದೆ. `ಮಗ ಯಾವ ನಿಧರ್ಾರ ಕೈಗೊಂಡರೂ ಅದು ಸರಿಯಾಗಿಯೇ ಇರುತ್ತವೆ' ಎಂಬ ಬಲವಾದ ನಂಬಿಕೆ ನನ್ನ ದೇವರುಗಳದು. ವಿಷಯ ಕಿವಿಗೆ ಬಿದ್ದಿದ್ದೆ ತಡ, `ಆ ಪುಟ್ಟಿಯನ್ನು ಒಂದು ಬಾರಿ ಕರೆದುಕೊಂಡು ಬಾ ಎಂದರು. ಅವಳಿಗೆ ಬಟ್ಟೆ, ಪುಸ್ತಕ, ಪಠ್ಯಗಳನ್ನು ಕೊಡಿಸಿದ್ದೀಯಾ? ಹಣ ಬೇಕಾದರೆ ಹೇಳು, ಬ್ಯಾಂಕಿಗೆ ಹಾಕುತ್ತೇವೆ' ಎಂದರು. ನಿಸ್ವಾರ್ಥ ಬದುಕಿಗೆ ಇಷ್ಟು ಸಾಕಲ್ಲವ ಹೆತ್ತವರ ಪ್ರೋತ್ಸಾಹ....! ಇಂತವರ ಮಗನಾಗಿ ಜನ್ಮ ತಳೆದ ನಾನು ನಿಜಕ್ಕೂ ಪುಣ್ಯವಂತ.
ಗೆಲುವಿನ ಜೊತೆ `ಪ್ರಾರ್ಥನಾ...!'
ಆ ಪುಟ್ಟ ಮೀನಾ ಈಗ ಮೂರನೇ ತರಗತಿಯಲ್ಲಿ ಅಭ್ಯಸಿಸುತ್ತಿದ್ದು, ಬೆಂಗಳೂರಿಗೆ ಹೋದಾಗಲೆಲ್ಲ ಆಕೆಯ ಜೊತೆ ಒಂದರ್ಧ ದಿನ ಅಡ್ಡಾಡಿಕೊಂಡು, ಅವಳಿಗಿಷ್ಟವಾದ ಬಟ್ಟೆ, ತಿಂಡಿ ಕೊಡಿಸಿ, ಮುದ್ದಿಸಿ ಬರುತ್ತೇನೆ. ಹಾಗೆ ಆಕೆಯ ಶಿಕ್ಷಣಕ್ಕೆ ಬೇಕಾದ ಎಲ್ಲ ಖರ್ಚನ್ನು ಸದ್ಯಕ್ಕೆ ನಿಭಾಯಿಸುತ್ತಿದ್ದೇನೆ. ಅಗತ್ಯಕ್ಕೆ ತಕ್ಕ ಸಲಹೆ ಸೂಚನೆ ನೀಡುತ್ತ ನನಗೆ ಬೆನ್ನೆಲುಬಾಗಿ ನಿಂತಿದ್ದು, ಬೆಂಗಳೂರಿನಲ್ಲಿಯೇ ಉದ್ಯೋಗ ಮಾಡುತ್ತಿರುವ ನನ್ನ ಪ್ರಾಣ ಸ್ನೇಹಿತೆ, ಸಹೋದರಿ ಪ್ರಾರ್ಥನಾ! ನನ್ನೆಲ್ಲ ಗೆಲುವಿನ ಹಿಂದೆ ಅವಳಿದ್ದಾಳೆ. ಅವಳ ಶ್ರಮವಿದೆ. ಹಾರೈಕೆಯಿದೆ. ನಿಷ್ಕಲ್ಮಶ ಪ್ರಾರ್ಥನೆಯಿದೆ.
ಹೀಗೆ ಕಾಲ ಚಕ್ರ ಉರುಳುತ್ತಿತ್ತು......................................................................
ಮುಂದೆ...?

ಮಂಗಳವಾರ, ಜೂನ್ 18, 2013

ಮೌನ ಪ್ರೀತಿ... ಶೂನ್ಯದೆಡೆಗೆ!

ಇಡೀ ಮೌನ ಸಾಮ್ರಾಜ್ಯಕ್ಕೆ ತಾನೇ ಯುವರಾಣಿ ಎಂದು ಬೀಗುತ್ತಿದ್ದ ನನ್ನವಳು, ಇಂದು ಬೆಕ್ಕಿನ ಹೆಜ್ಜೆಯಂತೆ ಮೌನವಾಗೆ ನನ್ನಿಂದ ದೂರ ಸರಿದಳು!
ಅವಳದು ನಿಷ್ಕಲ್ಮಶ ಗುಣ, ಪ್ರಬುದ್ಧ ಯೋಚನೆ, ಮಗುವಿನ ಮನಸ್ಸು. ಈ ಗುಣಗಳೇ ಅವಳೆಡೆಗೆ ನನ್ನನ್ನು ಸೆಳೆದದ್ದು. ಪರಿಚಯದ ಪ್ರಾರಂಭದಲ್ಲಿ ಕೆಲವಷ್ಟು ಅಂತರವಿದ್ದರೂ, ನಂತರದಲ್ಲಿ ನಾವೆಲ್ಲ ಒಂದೇ ಎಂದು ತೀರಾ ಹತ್ತಿರವಾದೆವು. ಪ್ರತಿ ದಿನ ಅವಳನ್ನು ನೋಡುವ ಹೆಬ್ಬಯಕೆ. 'ಎಲ್ಲಿ ಬರುತ್ತಾಳೆ, ಎಲ್ಲಿ ಸಿಗುತ್ತಾಳೆ' ಎಂದು ಮನದಲ್ಲಿಯೇ ಯೋಚಿಸುತ್ತಿದ್ದೆ. ಎಷ್ಟೋ ಬಾರಿ ಈ ಯೋಚನೆಗಳೆಲ್ಲಾ ತಲೆ ಕೆಳಗಾಗಿ, ಅನಿರೀಕ್ಷಿತವಾಗಿ ಅವಳು ಎದುರಾಗಿ ಬಿಡುತ್ತಿದ್ದಳು. ಒಮ್ಮೆಲೆ ಎದೆ ಝಲ್ಲೆನ್ನುತ್ತಿತ್ತು! ಸಂದರ್ಭದಲ್ಲಿ ಅವಳು ಮನಸಾರೆ ನಗುತ್ತ ಕಣ್ಣು ಮುಚ್ಚುತ್ತಿದ್ದರೆ, ನಾನು ಸುಧಾರಿಸಿಕೊಳ್ಳಲು ಹವಣಿಸುತ್ತಿದ್ದೆ! ಈಗ ಅವೆಲ್ಲ ಬರೀ ನೆನಪಷ್ಟೇ...!


ಅವಳ ಮಾತಿನ ಓಘ ಎಷ್ಟಿತ್ತೆಂದರೆ, ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದಂತೆ ಅವಳು ಮಾತಿಗೆ ಶುರುವಿಟ್ಟುಕೊಂಡಳೆಂದರೆ, ಅದಕ್ಕೆ ಪೂರ್ಣವಿರಾಮವೇ ಇರುತ್ತಿರಲಿಲ್ಲ. ಎಲ್ಲ ರಾಜ್ಯದ ರಾಜಧಾನಿಯ ಸಂಪರ್ಕ ಕಲ್ಪಿಸಿಕೊಡುವ `ರಾಜಧಾನಿ ಎಕ್ಸ್ಪ್ರೆಸ್' ರೇಲ್ವೆ ತರಹ ಒಂದೇ ಸಮನೆ ಮಾತನಾಡುತ್ತಿದ್ದಳು. ಸಂದರ್ಭದಲ್ಲೆಲ್ಲ ನಾನು ಅವಳ ಮಾತನ್ನೆ ಕೇಳುತ್ತ ಸುಮ್ಮನಾಗಿರುತ್ತಿದ್ದೆ! ಅವಳ ಮಾತುಗಳನ್ನು ಕೇಳುವುದೆಂದರೇನೆ ಒಂಥರ ಸಂತೋಷ. ಕರ್ಣಾನಂದಕರವಾದ ಅವಳ ಧ್ವನಿ ಕೇಳಿದಷ್ಟು ಮತ್ತೆಮತ್ತೆ ಕೇಳಬೇಕೆನಿಸುತ್ತಿತ್ತು. ಹಾಗಂತ ಎಲ್ಲಿಯೂ ಅಸಂಬದ್ಧವಾದ ಮಾತುಗಳು ಅವಳಿಂದ ಬರುತ್ತಿರಲಿಲ್ಲ. ಅಳೆದು ತೂಗಿ ಮಾತನಾಡುತ್ತಿದ್ದಾಳೇನೋ ಎಂದು ಭಾಸವಾಗುತ್ತಿತ್ತು. ಇಂಥಹ ಕ್ಷಣಗಳು ಈಗ ಇತಿಹಾಸವಷ್ಟೇ..!?
ಅವಳ ಜೊತೆ ಕಳೆಯುತ್ತಿದ್ದ ಪ್ರತಿ ಕ್ಷಣವೂ ಕೂಡಾ ನಾನೇ ಅವಳಾಗಿರುತ್ತಿದ್ದೆ. ಅವಳ ಮಾತಿಗೆ ಕಡಿವಾಣವಿಲ್ಲದಿದ್ದರೂ, ಕೆಲವು ವಿಷಯಕ್ಕೆ ಮಾತ್ರ ಅಪ್ಪಿ-ತಪ್ಪಿಯೂ ಮಾತನಾಡುತ್ತಿರಲಿಲ್ಲ. ನಮ್ಮಿಬ್ಬರ ವಿಷಯಕ್ಕೆ ಸಂಬಂಧಿಸಿದಂತೆ ಅವಳು ಮೌನಕ್ಕೆ ಶರಣಾಗಿದ್ದೇ ಹೆಚ್ಚು. ಯಾವೊಂದು ವಿಷಯವನ್ನು ಹೊರಹಾಕುತ್ತಿರಲಿಲ್ಲ. ಮನಸ್ಸಲ್ಲೆ ಎಲ್ಲವನ್ನು ಸಹಿಸಿಕೊಂಡು, ನೋವನ್ನು ಅನುಭವಿಸುತ್ತ, ವ್ಯಥೆ ಪಡುತ್ತಿದ್ದಳು. ನಿಂದಕರ ಬಾಯಿಗೆ ನಾವ್ಯಾಕೆ ಬೀಳಬೇಕೆಂದು ದೂರಾಲೋಚನೆಯಿಂದ ಕೆಲವಷ್ಟು ಅಂತರ ಕಾಯ್ದು ಕೊಂಡಿದ್ದಳು. ಹೊರ ಪ್ರಪಂಚಕ್ಕೆ ನಾವಿಬ್ಬರು ಈಗಷ್ಟೆ ಪರಿಚಯವಾದ ಸ್ನೇಹಿತರಾಗಿದ್ದೇವು. ಆದರೆ, ಅಂತರಂಗದಲ್ಲಿ ಮಾತ್ರ ಪರಸ್ಪರ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದೇವು. ಈ ಹಚ್ಚಿಕೊಳ್ಳುವ ವಿಷಯದಲ್ಲಿ ಇಬ್ಬರಿಗೂ ಪೈಪೋಟಿಯಿದ್ದರೂ, ಒಂದು ಹೆಜ್ಜೆ ನಾನೇ ಮುಂದಿದ್ದೆ ಎನ್ನಬಹುದು! ಅದು ಅವಳಿಗೂ ಗೊತ್ತಿತ್ತು...
ಒಮ್ಮೊಮ್ಮೆ ಅವಳನ್ನು ನಾ ಎಷ್ಟು ಪ್ರೀತಿಸುತ್ತಿದ್ದೆ ಎಂದರೆ, ಸಂಪೂರ್ಣ ಅವಳಲ್ಲೇ ತಲ್ಲೀನನಾಗಿಬಿಡುತ್ತಿದ್ದೆ. ಮಾಡುತ್ತಿರುವ ಕಾಯಕ ಮರೆತು, ಅವಳ ಧ್ಯಾನದಲ್ಲಿಯೇ ಮುಳುಗಿ ಬಿಡುತ್ತಿದ್ದೆ. ಅವಳನ್ನೇ ದಿಟ್ಟಿಸಿ ನೋಡುತ್ತ ನನ್ನ ಹುಡುಗಿಯ ವರ್ಣಿಸಲು ಬೇರೆ ಪದಗಳಿವೆಯೇ ಎಂದು ಯೋಚಿಸುತ್ತಿದ್ದೆ...!
ಹುಚ್ಚು ಪ್ರೀತಿಯ ವಿವಿಧ ಮಜಲುಗಳು ಎಂಬಂತೆ, ಸಂಪೂರ್ಣ ನನ್ನ ಬದುಕೇ ಅವಳಾಗಿದ್ದಳು. ಅವಳು ಕೂಡಾ, ಎಣೆಯಿಲ್ಲದಷ್ಟು ನನ್ನ ಪ್ರೀತಿಸುತ್ತಿದ್ದಳು.... ಆರಾಧಿಸುತ್ತಿದ್ದಳು.... ಪೂಜಿಸುತ್ತಿದ್ದಳು.... ಆದರೆ, ಎಲ್ಲಿಯೂ ಅದನ್ನು ನನ್ನಲ್ಲಿ ಹೇಳಿಕೊಂಡಿರಲಿಲ್ಲ. ಅದಕ್ಕೆ ಕಾರಣವೂ ಇದ್ದಿರಬಹುದು. ಆ ಕಾರಣ ಏನೆಂದು ತಿಳಿಯುವಷ್ಟರಲ್ಲಿಯೇ ಅವಳು,
`ಕ್ಷಮಿಸು ಕಣೋ...' ಎಂದು ಕಣ್ಣಂಚಿನಿಂದ ದೂರ ಸರಿದಳು! ಮೌನವಾಗಿಯೇ ಪ್ರೀತಿಸಿ, ಮನದಲ್ಲಿ ಪ್ರೇಮ ಸಿಂಚನಗೈದು ಬದುಕು ಹಸನಾಗುವ ಸಮಯದಲ್ಲಿ ಮರೆಯಾಗಿ ಹೋದಳು.....! ಹೃದಯದಲ್ಲಿ ಹಚ್ಚಿದ ಪ್ರೇಮ ಜ್ಯೋತಿ ಆರುತ್ತಿವೆ. ಬೆಳಕು ಮಾಯವಾಗಿ ಮತ್ತೆ ಕತ್ತಲಾವರಿಸುತ್ತಿವೆ. ಎಲ್ಲ ಶೂನ್ಯ..... ಶೂನ್ಯ!!! ಕರುಣಾಳು ಬಾ ಬೆಳಕೆ......

ಬುಧವಾರ, ಜೂನ್ 12, 2013

ಕೈ ತಪ್ಪಿದ ಪ್ರೀತಿ....!?

ಕಾಡಿದ... ಕನವರಿಸಿದ... ತಡವರಿಸಿದ ಹುಡುಗಿ ಕೊನೆಗೂ ನೆನಪಾಗೇ ಹೋದಳಾ...!? ಒಲ್ಲದ ಮನಸ್ಸಿನಿಂದ `ನೀನು ನನಗೆ ಇಷ್ಟವಾಗಿದ್ದೀಯಾ, ಆದರೆ....?' ಎಂಬ ಉತ್ತರವಿಲ್ಲದ ಪ್ರಶ್ನೆಯನ್ನು ಮನಸಲ್ಲಿ ಬಿತ್ತಿ ಹೋದಳು. ಈಗವಳು ನನಗೆ ನೆನಪು ಮಾತ್ರ.
ಅವಳ ಜೊತೆ ಆಡಿದ, ಹರಟಿದ, ಕಚಕುಳಿ ಇಟ್ಟ ಮಾತುಗಳೆಷ್ಟೋ... ಹೆಜ್ಜೆ ಮೇಲೆ ಹೆಜ್ಜೆ ಹಾಕಿ ನಡೆದ ದೂರಗಳೆಷ್ಟೋ... ಪರಸ್ಪರ ಸಹಕರಿಸಿದ ಸಂದರ್ಭಗಳೆಷ್ಟೋ... ನಿದ್ರೆಯಿಲ್ಲದೆ ಪರಿತಪಿಸಿದ ರಾತ್ರಿಗಳೆಷ್ಟೋ... ಅರಿವಿಲ್ಲದೆ ಅವಳು ನನಗೆ ನೀಡಿದ ಉಡುಗೊರೆಗಳೆಷ್ಟೋ... ಎಂದು ಒಂದೊಂದಾಗಿ ನೆನಪಿಸಿಕೊಳ್ಳುತ್ತಿದ್ದೇನೆ. ಉತ್ಕನದ ಮಧ್ಯೆ ದೊರೆಯುವ ಪಳೆಯುಳಿಕೆಯಂತೆ, ಮನದ ಮೂಲೆಯಲ್ಲಿ ಅಲ್ಲೋ ಇಲ್ಲೋ ಬಿದ್ದ ಎಲ್ಲ ಸುಂದರ ಕ್ಷಣಗಳು ಒಂದೊಂದಾಗಿ ಗೋಚರಿಸುತ್ತಿವೆ. ಕಡಲಿನ ತೆರೆಗಳು ದಡಕ್ಕೆ ಬಂದು ಅಪ್ಪಳಿಸುವಂತೆ ಅವಳ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ಸ್ಮೃತಿ ಪಟಲಕ್ಕೆ ಬಂದು ಅಪ್ಪಳಿಸುತ್ತಿವೆ. ಸುಳಿರ್ಗಾಳಿಗೆ ಸಿಕ್ಕ ತರಗೆಲೆಗಳು ಎಲ್ಲೆಲ್ಲಿಯೋ ಹೊಯ್ದಾಡುವಂತೆ ನನ್ನ ಮನಸ್ಸು ಕೂಡಾ ಹೊಯ್ದಾಡುತ್ತ ನಿಂತ ಸ್ಥಳವನ್ನೆ ಮರೆಯುತ್ತಿದ್ದೇನೆ.

ಪ್ರೇಮ ಜೀವನದಲ್ಲಿ ಇದು ಸಹಜ. ಆದರೆ ಆ ಸಂದರ್ಭದಲ್ಲಿ ಎಂದೂ ಇಂಥಹ `ನೆನಪಿನ ಆರ್ಭಟ'ವಾಗಿರಲಿಲ್ಲ. ನಮ್ಮದು ಗುರಿಯಿಲ್ಲದ ಪ್ರೇಮ ಯಾನವಾಗಿದ್ದರೂ, ಹಾಯಿ ದೋಣಿಯ ಪಯಣದಂತೆ ನಿರಾತಂಕವಾಗಿ ಸಾಗುತ್ತಿತ್ತು. ಪ್ರಸ್ತುತ ನನ್ನದು `ಕೈ ತಪ್ಪಿದ ಪ್ರೀತಿ'. ನನ್ನದಲ್ಲದ ಅವಳದಲ್ಲದ ತಪ್ಪಿಗೆ ಇಬ್ಬರಿಗೂ ಹಿಪ್ಪಿ-ಹಿಂಡಿ ಮಾಡುವ ನೆನಪಿನ ಶಿಕ್ಷೆ.
ಯಾರೂ ಪ್ರೇಮಿಸದಷ್ಟು ನಾನು ಅವಳನ್ನು ಪ್ರೇಮಿಸಿದೆ. ನನ್ನದು ಆಕರ್ಷಣೆಯ ಪ್ರೀತಿಯಾಗಿರಲಿಲ್ಲ. ಪ್ರಬುದ್ಧ ಬದುಕಿನ ಅಡಿಪಾಯದ ಮೇಲೆ ಅರಳಿನಿಂತ ಸ್ವಚ್ಛಂತ ಪ್ರೀತಿಯಾಗಿತ್ತು. ಅವಳನ್ನು ಚಿಕ್ಕ ಮಗುವಿನ ಹಾಗೆ ನೋಡಿಕೊಳ್ಳುತ್ತಿದ್ದೆ. ಅವಳು ಎಲ್ಲಿಯಾದರೂ ಹೊರಟು ನಿಂತಳೆಂದರೆ ನನಗೆ ಭಯವಾಗುತ್ತಿತ್ತು; ಆರೋಗ್ಯದಲ್ಲಿ ಏನಾದರೂ ಏರುಪೇರಾದೀತು ಎಂದು. ಅವಳಿಗಿಷ್ಟವಿಲ್ಲದಿದ್ದರೂ ಒಂದಿಷ್ಟು ಸಲಹೆಗಳನ್ನು ನೀಡುತ್ತಿದ್ದೆ. `ಹುಸಿ ಕೋಪ'ದಿಂದ `ಆಯ್ತಪ್ಪ... ಇನ್ನೇನಾದರೂ ಇದೆಯಾ?' ಎಂದು ಕೇಳುತ್ತಿದ್ದಳು. ಸುಮ್ಮನೆ ಅವಳನ್ನು ಇಲ್ಲಸಲ್ಲದ ಮಾತುಗಳಿಂದ ಕಾಡಿಸುತ್ತಿದ್ದೆ. ಪೀಡಿಸುತ್ತಿದ್ದೆ. ಲೆಕ್ಕವಿಲ್ಲದಷ್ಟು ಬಾರಿ ನಾವಿಬ್ಬರು ಕೋಪಿಸಿಕೊಂಡಿದ್ದೇವೆ. ಆದರೆ ಮರುಕ್ಷಣದಲ್ಲೇ ಒಂದಾಗಿ ಬಿಡುತ್ತಿದ್ದೇವು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅಪ್ಯಾಯಮಾನ. ಆದರೆ ಒಮ್ಮೆಯೂ ನಾವು ಪರಸ್ಪರ ನಮ್ಮ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ. ಅದರ ಅಗತ್ಯವೂ ಬಂದಿರಲಿಲ್ಲ. ಆದರೆ, ಅದೇ ನಾವು ಮಾಡಿದ ದೊಡ್ಡ ತಪ್ಪು! ಆ ತಪ್ಪಿಗೆ ಎಷ್ಟೇ ದಂಡ ತೆತ್ತರೂ ಶಿಕ್ಷೆ ಮಾತ್ರ ಅನವರತ... ಆ ಶಿಕ್ಷೆಯೇ `ಅಗಲಿಕೆ... 

ಗುರುವಾರ, ಮೇ 23, 2013



ಪಲ್ಲವಗಳ ಪಲ್ಲವಿಯಲಿ
ಗರಿಗೆದರಿದ ಪ್ರೇಮ...

ಪ್ರೇಮ, ಅದು ದೈವ ಸ್ವರೂಪ. ಆತ್ಮ ಸಂಬಂಧದ ಪ್ರತೀಕ. ನವಿರಾದ ಭಾವಕ್ಕೆ, ಬೆಚ್ಚನೆಯ ಸ್ಪಂದನ... ಮೌನ ಸಂಭಾಷಣೆಯ ಮ್ಲಾನ ಭಾವ.. ಹೇಳಲಾಗದ, ಅನುಭವಿಸಲಾರದ ಮಧುರ ಯಾತನೆ... ಕನಸಲ್ಲೂ ಕನವರಿಸುವ ಭಾವ ಪ್ರವಾಹ... !

ಪ್ರೀತಿ,
ಹೌದು, ಪ್ರೀತಿ ಪ್ರೇಮ ಎಂಬ ಪದಗಳು ಬದುಕಿಗೆ ಚಿರಪರಿಚಿತವಾಗಿದ್ದರೂ, ಸ್ವತಃ ಬದುಕಲ್ಲಿ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಹಾಗಂತ ಅದರ ದ್ವೇಷಿಯಂತೂ ಆಗಿರಲಿಲ್ಲ. ಸುಮ್ಮನೆ ಪ್ರೀತಿ-ಪ್ರೇಮ ಎಂಬ ಜಂಜಾಟ ಯಾಕೆ ಬೇಕು ಎಂದು ನಿರ್ಲಿಪ್ತನಾಗಿದ್ದೆ. ಆದರೆ ಆ ನಿರ್ಲಿಪ್ತತೆಯೆ ನನ್ನನ್ನು ಪ್ರೀತಿಯ ಬಲೆಗೆ ಬೀಳುವಂತೆ ಮಾಡಿ ಬಿಟ್ಟಿತು....!?
ಬಿಡುವಿಲ್ಲದ ಕಾಯಕಕ್ಕೆ ದೇಹ ಮತ್ತು ಮನಸ್ಸು ಎರಡನ್ನು ಮೀಸಲಾಗಿಟ್ಟು, ವಿಶ್ರಾಂತಿಗಾಗಿ ರೂಮಿಗೆ ಹೋದಾಗ, ಒಂದೇ ಸಮನೇ ನನಗೆ ಕಾಡುತ್ತಿದ್ದದ್ದು ಏಕಾಂಗಿತನ. ಮನೆಯಲ್ಲಿದ್ದಾಗ ಸದಾ ಕುಟುಂಬದವರ, ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದ ನನಗೆ, ಅವರನ್ನೆಲ್ಲ ಬಿಟ್ಟು ಬಂದಿದ್ದು ಬದುಕಿನಲ್ಲಿ ಏನೋ ಕಳೆದುಕೊಂಡಂತಾಗಿತ್ತು. ಕೆಲಸದ ಸಮಯದಲ್ಲಿ ಇದ್ಯಾವುದು ನೆನಪಿಗೆ ಬರುತ್ತಿರಲಿಲ್ಲ. ರೂಮಿಗೆ ಬಂದಾಗ ಅವೆಲ್ಲ ಒಂದೇ ಸಮನೆ ಮುತ್ತಿಕೊಳ್ಳುತ್ತಿದ್ದವು. ಈ ಕಾಡುವ, ತದುಕುವ ಭಾವನೆಗಳು ನನ್ನನ್ನು ಏಕಾಂಗಿಯನ್ನಾಗಿಸಿತ್ತು. ಒಮ್ಮೊಮ್ಮೆ ಈ ಏಕಾಂಗಿತನ ನನ್ನನ್ನು ಕಿತ್ತು ತಿನ್ನುತ್ತಿವೆಯೇನೋ ಎಂದೆನಿಸುತ್ತಿತ್ತು. ಇದರಿಂದ ಹೊರಬರಲು ಏನೆಲ್ಲ ಹರಸಾಹಸ ಮಾಡಿ, ಶಕ್ತಿಮೀರಿ ಪ್ರಯತ್ನಿಸಿದ್ದೆ. ಉಹೂಂ... ಸಾಧ್ಯವಾಗಿಲ್ಲ. ಆಗಲೇ ನೀನು ನನ್ನ ಕಣ್ಣಿಗೆ ಬಿದ್ದಿದ್ದು...!
ಹೌದು ಕಣೇ, ಏಕಾಂಗಿತನಕ್ಕೆ ಮದ್ದಾಗಿ ಬಂದ ನೀ, ಮನಸ್ಸಲ್ಲಿಯೇ ಶಾಶ್ವತವಾಗಿ ಬೇರೂರಿ ಬಿಟ್ಟೆ. ಹಾಗಂತ ಅಂದಿನ ದಿನಗಳಲ್ಲಿ ನಾನು ನಿನ್ನನ್ನು ಪ್ರೀತಿಸಿರಲಿಲ್ಲ. ಬದಲಾಗಿ, ಏಕಾಂಗಿಯಾಗಿ ನರಳಾಡುತ್ತಿದ್ದ ನನಗೆ ಅದನ್ನು ಹೊಡೆದೋಡಿಸಲು ಒಬ್ಬಳು ಸ್ನೇಹಿತೆ ದೊರಕಿದಳಲ್ಲ ಎಂದು ಸಂಭ್ರಮಿಸಿದ್ದೆ.... ಕುಣಿದು ಕುಪ್ಪಳಿಸಿದ್ದೆ.... ಬಿಡುವು ದೊರೆತಾಗಲೆಲ್ಲ ನಿನ್ನನ್ನೆ ನೆನಪಿಸಿಕೊಳ್ಳುತ್ತಾ ಮನಸಾರೆ ಹಿಗ್ಗುತ್ತಿದ್ದೆ. ಕೆಲವು ಭಾವನೆಗಳನ್ನು, ನೋವುಗಳನ್ನು ನಿನ್ನಲ್ಲಿ ಹಂಚಿಕೊಂಡಿದ್ದೂ ಇದೆ. ಲೆಕ್ಕವಿಲ್ಲದಷ್ಟು ಸಂದೇಶಗಳು ಪರಸ್ಪರ ಸುಮ್ಮನೆ ಹರಿದಾಡುತ್ತಿದ್ದವು. ನಿಷ್ಕಲ್ಮಶ ಸ್ನೇಹ ಇಬ್ಬರನ್ನು ಸೆಳೆದು ಹತ್ತಿರವಾಗುವಂತೆ ಮಾಡಿತು. ಇವೆಲ್ಲವು ಹಂತಹಂತವಾಗಿ ನನ್ನಲ್ಲಿ ಬೀಡುಬಿಟ್ಟಿದ ಏಕಾಂಗಿತನಕ್ಕೆ ಅಂತ್ಯ ಹಾಡಲು ಸಹಕಾರಿಯಾಯಿತು.
ನಾನು ಮತ್ತೆ ಮೊದಲಿನಂತಾದೆ.ಸ್ಪೂರ್ತಿಯ ಚೈತನ್ಯ ಮೈಮನವೆಲ್ಲ ಆವರಿಸಿ ಮೈಕೊಡವಿ ಎದ್ದು ನಿಂತೆ. ಬಹುಶಃ ಇಲ್ಲೆ ಇರಬೇಕು, ನಾ ನಿನ್ನ ಪ್ರೀತಿಸಿದ್ದು! ಅರಿವಿಲ್ಲದೆ ಮನಸ್ಸಿನ ಖಾಲಿ ಪುಟದ ಹಾಳೆಯಲ್ಲಿ ನಿನ್ನ ಹೆಸರನ್ನು ಗೀಚಿ, ಅದಕ್ಕೊಂದು ಸುಂದರ ಮುನ್ನುಡಿಯನ್ನೂ ಸಹ ಬರೆದು ಬಿಟ್ಟೆ!
ಯಾರನ್ನಾದರು ಪ್ರೀತಿಸಬೇಕಾಗಿರುವುದು ಅವರು ಹೇಗಿದ್ದಾರೆ ಎಂಬುದಕ್ಕಾಗಿ ಅಲ್ಲ. ಅವರ ಜೊತೆಯಿರುವಾಗ ನಾವು ಹೇಗಿರುತ್ತೇವೆ ಎಂಬ ಕಾರರಣಕ್ಕಾಗಿ. ಅದೇ ರೀತಿ ನಿನ್ನ ಅಂದ, ಚಂದಕ್ಕೆ ನಾ ಎಂದೂ ಮಾರು ಹೋಗಿಲ್ಲ. ನಿನ್ನಲ್ಲಿರುವ ನಿರ್ಲಿಪ್ತತೆ .... ಸ್ಪಟಿಕದಂತ ಸ್ವಚ್ಛಂದ ಗುಣ.... ಮಾತಿನ ಓಘ.... ಹೃದಯ ವೈಶಾಲ್ಯತೆ.... ಮಗುವುನಂಥ ಮುಗ್ದ ನಗು... ಪ್ರಾಣಿ-ಪಕ್ಷಿಗಳ ಮೇಲಿರುವ ಅದಮ್ಯ
ಪ್ರೀತಿ.... ಇವುಗಳೇ ನನ್ನನ್ನು ನಿನ್ನೆಡೆಗೆ ಸೆಳೆಯುವಂತೆ ಮಾಡಿದ್ದು... ಹಗಲಿರುಳು ನಿನಗಾಗಿ ಪರಿತಪಿಸುವಂತೆ ಮಾಡಿದ್ದು...!
ಏಕಾಂಗಿಯಾಗಿ ಪರಿತಪಿಸುತ್ತಿದ್ದ ಸಂದರ್ಭದಲ್ಲಿ ಮಾನಸಿಕವಾಗಿ ಕೈ ಹಿಡಿದೆತ್ತಿ, ಬದುಕಿಗೊಂದು ಅರ್ಥ ನೀಡಿದ ನೀನು, ಇಂದು ಏಕಾಂತಕ್ಕೆ ಜಾರುವಂತೆ ಮಾಡುತ್ತಿದ್ದೀಯಾ. ಹೊತ್ತಲ್ಲದ ಹೊತ್ತಲ್ಲಿ ಬಂದು ಸುಮ್ಮನೆ ಕಾಡುತ್ತೀಯಾ. ಬೇಡ ಎಂದು ದೂರ ತಳ್ಳಿದರೂ ಹಿಂದಿನಿಂದ ಬಂದು ಬಿಗಿದಪ್ಪಿಕೊಳ್ಳುತ್ತೀಯಾ. ಒಮ್ಮೊಮ್ಮೆ ನಿನ್ನ ನೆನಪು ಧುತ್ತೆಂದು ಆವರಿಸಿಕೊಂಡು ಬಿಡುತ್ತವೆ .... ಆಗ ಅರೆ ಹುಚ್ಚನಂತಾಗಿ ಮಾನಸಿಕ ಸ್ಥೀಮಿತವನ್ನೆ ಕಳೆದುಕೊಂಡು ಬಿಡುತ್ತೇನೆ. ಆ ನರಳಾಟ, ತಾಕಲಾಟ, ವೇದನೆ.... ಅಬ್ಬಾ! ಸಹಿಸಲಸಾಧ್ಯವಾಗಿ ಅದರಲ್ಲೆ ಬೆಂದು ಹೋಗಬಾರದಾ ಎಂದೆನಿಸಿ ಬಿಡುತ್ತವೆ. ಆದರೂ ಕೂಡಾ ಆ ವೇದನೆ ಒಂಥರ ಹಿತನಾಭವವೇ! ಅದರಲ್ಲೆ ಮೈಮರೆತು ನಿನ್ನಲ್ಲೆ ಒಂದಾಗಿ ಬಿಡುತ್ತೇನೆ.
ನನ್ನಲ್ಲಿ ಮೂಡಿದ ನಿನ್ನ ಕಲ್ಪನಾತೀತ ಚಿತ್ತಾರಕ್ಕೆ ಏನೆಂದು ಹೆಸರಿಡಲಿ .....? ಎಲ್ಲೆ ಮೀರಿ ವರ್ತಿಸುವ ಈ ಮನಸ್ಸಿಗೆ ಒಂದು ಲಗಾಮು ಹಾಕಬೇಕಿದೆ. ಅಸ್ಪಷ್ಟತೆಯ ಹಾದಿಯಲ್ಲಿ ಸ್ಪಷ್ಟತೆಯ ಬದುಕು ಕಾಣಬೇಕಿದೆ. ವರ್ಣನಾತೀತ ಭಾವಕ್ಕೆ ತೋರಣ ಕಟ್ಟಿ, ತಾರ್ಕಿಕ ಅಂತ್ಯ ಹಾಡಬೇಕಿದೆ. ಈ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಬೇಕಿದೆ. ಇದಕ್ಕೆ ನಿನ್ನ ವಿವೇಚನಾಯುಕ್ತ ವ್ಯಾಖ್ಯಾನ ಅತಿ ಅವಶ್ಯ. ಹಾಗೂ ಅಷ್ಟೇ, ಅನಿವಾರ್ಯ.
(ಹೇಳಬೇಕೆಂದು ತವಕಿಸುತ್ತಿದ್ದರೂ.... ಆ ಹೇಳಲಾಗದ ಮಾತೊಂದು ತುಟಿ ಅಂಚಿನಲ್ಲಿ ಹಾಗೆಯೇ ಉಳಿದು ಬಿಟ್ಟಿದೆ)
ಹೀಗೆ ಸುಮ್ಮನೆ................................. 

ಭಾನುವಾರ, ಮೇ 19, 2013


ತ್ಯಾಗ...

ಪಲ್ಲಟದ ತಲ್ಲಣ!

ಅಲ್ಲಿ ನೀರವ ಮೌನ ತಾಂಡವವಾಡುತ್ತಿತ್ತು. ಎದುರಿನ ಗೋಡೆಗೆ ನೇತು ಹಾಕಿದ್ದ ಗಡಿಯಾರವನ್ನೊಮ್ಮೆ ತಲೆ ಎತ್ತಿ ನೋಡಿದೆ. ಗಂಟೆ ಆಗಲೇ ರಾತ್ರಿ 12.35! ಎದುರಿಗೆ ಕುಳಿತಿದ್ದ ಸ್ನೇಹಿತನ ಕಣ್ಣಿಂದ ನೀರು ಒಂದೇ ಸಮನೆ ಧಾರಾಕಾರವಾಗಿ ಸುರಿಯುತ್ತಿತ್ತು. ನನ್ನನ್ನು ದೃಷ್ಟಿಯಿಟ್ಟು ನೋಡಲಾರದೆ ಆತ ತಲೆ ತಗ್ಗಿಸಿ ಅಳುತ್ತಿದ್ದ. ಅವನಲ್ಲಿ ಏನೋ ಚಡಪಡಿಕೆ... ಏನೋ ಹೇಳಬೇಕೆಂದು ಬಯಸಿ, ಹೇಳಲಾಗದೆ ನಿಟ್ಟುಸಿರಿಡುತ್ತಿದ್ದ. ಅಸಹಾಯಕನಾಗಿ ತನ್ನಲ್ಲಿರುವ ನೋವನ್ನು ಹೊರ ಹಾಕಲಾಗದೆ ತಾನೇ ಬೇಯುತ್ತಿದ್ದನು. ಅವನ ನರಳಾಟದ ವೇದನೆ ಸಹಿಸದೆ ಮೌನವನ್ನು ಸೀಳುತ್ತ, `ಯಾಕೀತರ...? ಏನಾಯ್ತು ಹೇಳು... ಸ್ನೇಹಿತ!' ಎಂದು ತಣ್ಣನೆ ಕೇಳಿದೆ. ಒತ್ತರಿಸಿ ಬರುವ ದುಃಖವನ್ನು ತಡೆಯುತ್ತ... ಬಾಚಿ ತಬ್ಬಿಕೊಂಡನು!
ಕೋಣೆಯಲ್ಲಿ ಸಣ್ಣಗೆ ಉರಿಯುತ್ತಿರುವ ದೀಪವನ್ನು ನೋಡಿ ಆತ, `ಕಣ್ಣು ಚುಚ್ಚಿದಂತಾಗುತ್ತಿದೆ, ಪ್ಲೀಸ್, ದಯವಿಟ್ಟು ದೀಪ ಆರಿಸುತ್ತೀಯಾ' ಎಂದು ವಿನಂತಿಸಿದ. ಮರುಮಾತನಾಡದೆ ಅವನ ಮನಸ್ಥಿತಿಯನ್ನು ಅರಿತು ದೀಪ ಆರಿಸಿ, ಅವನ ಪಕ್ಕದಲ್ಲಿಯೇ ಬಂದು ಕುಳಿತೆ. ಕೋಣೆಯ ತುಂಬ ಕತ್ತಲಾವರಿಸಿದ್ದು, ಅದರದೆ ಕಾರುಬಾರಾಗಿತ್ತು. ಅದಕ್ಕೆ ಜೊತೆಯೆಂಬಂತೆ ನಿಶ್ಶಬ್ದ.... ನೀರವ ಮೌನ!! ಆದರೆ, ಕಾರ್ಗತ್ತಲಲ್ಲಿ ನನ್ನ ಸ್ನೇಹಿತನ ಉಚ್ಛ್ವಾಸ ಮತ್ತು ನಿಶ್ವಾಸದ ಸದ್ದು ಮಾತ್ರ ಕೇಳಿ ಬರುತ್ತಿತ್ತು. ಆತನ ಈ ಏರಿಳಿತದ ಉಸಿರಿನ ಹೊರತು, ಮತ್ತಿನ್ಯಾವ ಸದ್ದು ಅಲ್ಲಿರಲಿಲ್ಲ. ಕ್ಷಣ ಕಾಲ ಆತನ ಬಿಸಿಯುಸಿರು ತಣ್ಣಗಿನ ಕೋಣೆಯನ್ನೆಲ್ಲ ವ್ಯಾಪಿಸಿಬಿಟ್ಟಿತು.
ಇದೇ ಕತ್ತಲೆಗಾಗಿ ತವಕಿಸುತ್ತಿದ್ದವನಂತೆ.... ಮಡುಗಟ್ಟಿದ ಹೃದಯದಿಂದ `ರಾಜ' ಎಂದು ಮೆಲ್ಲನೆ ಉಸುರಿದ. ಮಾತು ಕೇಳಿತು ಎಂಬಂತೆ, `ಹೇಳೋ' ಎಂದೆ. ಹುಣ್ಣಿಮೆಗೆ ಸಾಗರ ಭೋರ್ಗರೆವಂತೆ, ಒಮ್ಮೆಲೆ ದುಃಖ ಉಮ್ಮಳಿಸಿ, ಅದನ್ನು ಬಿಗಿಹಿಡಿಯುವ ಪ್ರಯತ್ನ ಮಾಡುತ್ತಲೇ, `ಅವಳು ನನ್ನನ್ನು ಬಿಟ್ಟು ಹೋದಳೋ, ಅವಳಿಗೆ ನಾನು ಬೇಡವಂತೆ. ಮನೆಯಲ್ಲಿ ಒಪ್ಪುತ್ತಿಲ್ಲವಂತೆ. ಅವಳನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ವೋ..' ಎಂದನು. ಹಲವು ವರ್ಷಗಳಿಂದ ಆರಾಧಿಸುತ್ತ ಬಂದಿದ್ದ ಪ್ರೀತಿ ಅಂದು ಅವನಿಂದ ದೂರವಾಗಿತ್ತು. ಪ್ರೀತಿಯ ಗೋಪುರ ಏಕಾಏಕಿ ಕುಸಿದು ಬಿದ್ದಿದ್ದು, ಅವನನ್ನು ಹುಚ್ಚನನ್ನಾಗಿಸಿತ್ತು. ಆಗಲೇ ಅವನೆದೆಯಲ್ಲಿ ಮಡುಗಟ್ಟಿದ ದುಃಖ ಕಟ್ಟೆ ಒಡೆದು ಪ್ರವಾಹೋಪಾದಿಯಲ್ಲಿ ಹರಿದುಬಿಟ್ಟಿತು. ಬಿಕ್ಕಿಬಿಕ್ಕಿ ಒಂದೇ ಸಮನೇ ಅಳುತ್ತಿದ್ದನು. ಅವನನ್ನು ಸಮಾಧಾನಿಸುವ ಪ್ರಯತ್ನ ಮಾಡದೆ, ಅವನನ್ನೆ ನೋಡುತ್ತ ಕುಳಿತೆ. ಸಮಾಧಾನದ ಮಾತು ಕೂಡಾ ತೀರಾ ಕಠೋರ ಎಂದೆನಿಸಿ ಬಿಡಬಹುದಾದ ಸೂಕ್ಷ್ಮ ಕ್ಷಣವದು. ಆರಾಧನಾ ಪ್ರೀತಿ ಕಳೆದುಕೊಂಡ ಸ್ನೇಹಿತನ ದುಃಖದ ರಭಸ ಮಲೆನಾಡಿನ ಮಳೆಯನ್ನು ಮೀರಿಸುವಂತಿತ್ತು.
ಪ್ರೀತಿಯ ಆರಂಭಕ್ಕೆ ಒಂದು ನಿರ್ಧಿಷ್ಟ ದಿನವಿದ್ದಂತೆ, ಅದರ ಸಾವಿಗೆ ಇಂತಹದ್ದೆ ದಿನ ಎಂದು ಹೇಳಲಾಗದು. ಏಕೆಂದರೆ, ಅದೊಂದು ದೀರ್ಘ ಪ್ರಕ್ರಿಯೆ ಹಾಗೂ ವ್ಯವಸ್ಥಿತ ಹೊಂಚು. ಪ್ರೀತಿ ಹುಟ್ಟಿದ ದಿನವನ್ನು ಮನದ ಮೂಲೆಯೊಂದರಲ್ಲಿ ಎಲ್ಲೋ ಬರಿದಿಟ್ಟು, ವರ್ಷಗಳ ನಂತರವೂ ಅದನ್ನು ಹುಡುಕಿ ಕೆದಕಿದರೆ, ಒಮ್ಮೆಲೆ ದೊರೆತು ಬಿಡುತ್ತದೆ. ಆದರೆ ಪ್ರೀತಿ ಕಳೆದು ಹೋದ ಬಗ್ಗೆ `ಇದೇ ದಿನ ಹೀಗಾಯಿತು' ಎಂದು ಯಾರಿಂದಲೂ ಹೇಳಲು ಬಹುಶಃ ಅಸಾಧ್ಯ. `ಅಪ್ಪ, ಅಮ್ಮ, ಜಾತಿ' ಎಂಬುದು ಪ್ರೀತಿಯನ್ನು ಧಿಕ್ಕರಿಸಿ ಹೊರಡುವ ಹೃದಯಗಳಾಡುವ ಮಾತು. ಆ ಹೃದಯಕ್ಕೆ ನಿಜ ಪ್ರೀತಿಯ ಅರ್ಥ ಗೊತ್ತಿಲ್ಲ ಎಂದರೂ ತಪ್ಪಾಗಲಾರದು. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಇದ್ಯಾವುದು ಕೂಡಾ ಅವರು ತಮ್ಮ ತಪ್ಪಿಗೆ ಕೊಡುತ್ತಿರುವ ಕಾರಣಗಳಲ್ಲ. ತಾವು ಮಾಡಿದ್ದೇ ಸರಿ ಎಂದು ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕೆ ನೀಡುವ ಸಮಜಾಯಿಷಿಗಳು. ಇತ್ತ ಹುಡುಗ/ಹುಡುಗಿ ಪ್ರೀತಿಸುತ್ತೇನೆ ಎಂದು ಹೇಳುವ ಸಂದರ್ಭದಲ್ಲಿ ಅತ್ತ ಅಪ್ಪ, ಅಮ್ಮ ತನ್ನ ಮಗ/ಮಗಳ ಬರುವಿಕೆಗಾಗಿ ಕಾದು ಕುಳಿತಿರುತ್ತಾರೆ. `ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂಬ ವಿಷಯ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಹೆತ್ತವರ ನೆನಪು ಅವರಿಗೆ ಬಂದರೆ ನಿಜಕ್ಕೂ ಅದು ಗೌರವಯುತ. ಅಂತಹ ಯುವ ಹೃದಯಗಳನ್ನು ಗೌರವಿಸಿ, ಬೆಂಬಲಿಸೋಣ. ಆದರೆ, ಒಮ್ಮಿಂದೊಮ್ಮೆಲೆ ಇದ್ದಕ್ಕಿದ್ದಂತೆ `ಈ ಸಂಬಂಧ ಇನ್ನು ಮುಂದುವರಿಸಲು ಅಸಾಧ್ಯ, ದಯವಿಟ್ಟು ನನ್ನನ್ನು ಮರೆತು ಬಿಡು' ಎಂದು ಹೇಳುವುದು ನಿಜಕ್ಕೂ ಒಂದು ಹೀನ ಕೃತ್ಯ. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದವರು ಬೇಡವಾಗುತ್ತಾರೆ... ಎಲ್ಲ ನೋವಿಗೆ ದನಿಯಾಗಿ ಸ್ಪಂದಿಸಿದವರು ಕ್ಷುಲ್ಲಕ ಕಾರಣಕ್ಕೆ ಹೊರೆಯಾಗಿ ಬಿಡುತ್ತಾರೆ... ಆ ವಿಕೃತ ಹೃದಯದವರಿಗೆ ಅಪ್ಪ-ಅಮ್ಮನನ್ನು ಒಪ್ಪಿಸುವುದು ಕಷ್ಟವೆನಿಸುವುದಕ್ಕಿಂತ, ಅದರ ಅಗತ್ಯವಿಲ್ಲ ಎಂದೆನಿಸಿ ಬಿಡುತ್ತವೆ.
ಪ್ರೀತಿಯ ಸಂಬಂಧ ಶ್ರದ್ಧೆ ಬೇಡುತ್ತ, ಪರಸ್ಪರರ ಬಗ್ಗೆ ನಂಬಿಕೆ ವಿಶ್ವಾಸವನ್ನು ಬಯಸುತ್ತವೆ. ಈ ಶ್ರದ್ಧೆ, ನಂಬಿಕೆ ಮತ್ತು ವಿಶ್ವಾಸ ದಿಢೀರ ಎಂದು ಒಮ್ಮೆಲೆ ಬೆಳೆದು ನಿಲ್ಲುವಂತಹದ್ದಲ್ಲ. ಸಾಕಷ್ಟು ಸಮಯ ಕೇಳುತ್ತ, ದಿನ ಕಳೆದಂತೆ ಪಕ್ವಗೊಳ್ಳುತ್ತ ಸಾಗುತ್ತವೆ. ಇಂದಿನ ಧಾವಂತದ ಯುಗದಲ್ಲಿ ಪ್ರೀತಿ ತನ್ನ ಸೊಬಗನ್ನು ಕಳೆದುಕೊಂಡು ಅರ್ಥಹೀನವಾಗುತ್ತ ಯಾಂತ್ರಿಕವಾಗಿ ಸಾಗುತ್ತಿವೆ. ಶ್ರದ್ಧೆಯಿಲ್ಲದ ಪ್ರೀತಿಯ ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಬಿರುಕು ಮೂಡಿ ಬಿಡುತ್ತವೆ. ಅವನೇ ನನ್ನ ಪ್ರಪಂಚ ಎಂದು ನವ-ನವೀನ ಕನಸು ಕಾಣುತ್ತ ಬದುಕು ನಡೆಸುತ್ತಿದ್ದ ಹುಡುಗಿಗೆ, ಇನ್ನೊಂದು ಜಗತ್ತು ರಂಗು ರಂಗಾಗಿ ಕಾಣುತ್ತವೆ. ಇಷ್ಟು ದಿನ ಜೊತೆಯಿದ್ದು, ಉಸಿರಲ್ಲಿ ಉಸಿರಾದ ಹುಡುಗ ಬಣ್ಣ ಕಳೆದುಕೊಂಡು ಬಿಳಿಚಿ ಕೊಂಡಂತೆ ಭಾಸವಾಗುತ್ತಾನೆ. ಧುತ್ತೆಂದು ಅಪ್ಪ, ಅಮ್ಮ, ಜಾತಿಯ ಸಬೂಬು ಹೊಂಚು ಹಾಕಿ ಕುಳಿತವರಂತೆ ಅಲ್ಲಿ ಬೇರು ಬಿಟ್ಟಿರುತ್ತದೆ. ಹೀಗೆ ಸುಳ್ಳೇ ಸುಳ್ಳು ಹುಟ್ಟಿಕೊಳ್ಳುವ ತಳುಕು ಪ್ರೀತಿ ಬಿಡಿಸಿಕೊಂಡು ಓಡುವ ಹುನ್ನಾರ ನಡೆಸುತ್ತಿರುತ್ತವೆ. ಆದರೆ, ನಿಜವಾದ ಪ್ರೀತಿ ಹೇಗಾದರೂ ಸೈ, ಎಲ್ಲರನ್ನು ಎದುರಿಸಿ ಒಪ್ಪಿಸೋಣ ಎನ್ನುತ್ತಿರುತ್ತದೆ. ಪ್ರೀತಿಯಿಂದ ವಿಮುಖವಾದ ಜೀವ ನರಳುತ್ತ, ತನ್ನ ಬದುಕನ್ನು ಹಾಳುಗೆಡುವಿಕೊಂಡು, ತಾನು ಉಳಿದು ಹೋದದಕ್ಕೆ ಕಾರಣ ಹುಡುಕಿ, ಕೆದಕಿ ಸೋಲುತ್ತ, ಏಳುತ್ತ ತನ್ನ ಬಗ್ಗೆ ಒಂದು ವಿಧವಾದ ಕೀಳರಿಮೆ ಬೆಳೆಸಿಕೊಂಡು, ಕಾಣದ ಕತ್ತಲೆಗಾಗಿ ಹಂಬಲಿಸುತ್ತಿರುತ್ತವೆ. ವರ್ಷಗಟ್ಟಲೇ ಶ್ರದ್ಧಾ-ಭಕ್ತಿಯಿಂದ ಪ್ರೀತಿಯಿಂದ ನಿರ್ಮಿಸಿದ ಪ್ರೀತಿಯ ಕನಸಿನ ಗೋಪುರ ಕೆಲವೇ ದಿನಗಳಲ್ಲಿ ನೆಲಸಮವಾಗಿರುತ್ತವೆ.
ನನ್ನಷ್ಟಕ್ಕೆ ನಾನು ಏನೇನೋ ಯೋಚನೆ ಮಾಡುತ್ತ ಕುಳಿತಿದ್ದೆ, ಅತ್ತ ಸ್ನೇಹಿತನ ಬಿಕ್ಕಳಿಕೆ ಒಂದೇ ಸಮನೆ ಕೇಳುತಲಿತ್ತು. ಆತ, ಅತ್ತು ಅತ್ತು ಕಣ್ಣೀರಾಗಿದ್ದ. ನಾನಿನ್ನು ಮೇಲೇಳಲಾರೆ ಎಂದು ಬದುಕು ಕಳೆದುಕೊಂಡವರಂತೆ ರೋಧಿಸುತ್ತಿದ್ದ. ಅವನ ಮುಂಗೈಯನ್ನು ನನ್ನ ಅಂಗೈಯಲ್ಲಿಟ್ಟು ಹೇಳಿದೆ, `ಗೆಳೆಯಾ, ಆದದ್ದೆಲ್ಲ ಒಳ್ಳೆಯದಕ್ಕೆ ಅಂದುಕೋ. ಒಂದು ಸುಂದರವಾದ ಬಾಳ್ವೆ ನಡೆಸು. ಅವಳ ನೆನಪು ಬಾರದಂತೆ ಬದುಕಿ ಬಿಡು. ಇಷ್ಟು ವರ್ಷಗಳ ಕಾಲ ನಿಮ್ಮಿಬ್ಬರಲ್ಲಿದ್ದದ್ದು ಪ್ರೀತಿಯಲ್ಲ. ಅದೊಂದು ಕೇವಲ ಆಕರ್ಷಣೆಯ ಸೆಳೆತವಷ್ಟೆ. ಪ್ರೀತಿ ಹೀಗೆ ಇರೋದಿಲ್ಲ. ಅದು ಯಾವತ್ತೂ ಪರಸ್ಪರ ಒಬ್ಬರಿಗೊಬ್ಬರಿಗೆ ಸ್ಫೂರ್ತಿ ಯಾಗಿರುತ್ತದೆ. ಅಲ್ಲಿ ಸೋಲು ಎಂಬುದೇ ಇರುವುದಿಲ್ಲ. ಅದು ಸೋಲಲು ಬಿಡದ ಅದಮ್ಯ ಶಕ್ತಿ. ನಿನ್ನ ಬದುಕಿನ ಬಗ್ಗೆ ನಿನಗೆ ಅತೀವ ಶ್ರದ್ಧೆಯಿರಲಿ, ನಿನ್ನ ಸ್ನೇಹಿತನಾಗಿ ಸದಾ ನಿನ್ನ ಜೊತೆಯಿರುತ್ತೇನೆ, ನಿನ್ನ ನೋವಿಗೆ ದನಿಯಾಗಿ. ಕಿವಿಯಾಗಿ'.
ಮಾತು ಬರದವನಾಗಿ ತನ್ನೆಲ್ಲ ಚೈತನ್ಯ ಕಳೆದುಕೊಂಡಿದ್ದ ಆತ ನನ್ನ ಮಡಿಲಿಗೆ ಕುಸಿದಿದ್ದ. ನೂರ್ಮಡಿಸಿದ್ದ ದುಃಖವನ್ನು ನುಂಗಿಕೊಳ್ಳುತ್ತ, ನನ್ನನ್ನು ನೋಡದೆ ಕೇಳಿದ, `ಅವಳು ನನ್ನನ್ನು ಯಾರಿಗೋಸ್ಕರ, ಯಾಕಾಗಿ ತ್ಯಾಗ ಮಾಡಿದಳು..?'. ಮನಸಲ್ಲೆ ನಕ್ಕು ಉತ್ತರಿಸಿದೆ, `ಅಸಲಿಗೆ ತ್ಯಾಗ ಅನ್ನುವ ವಿಚಾರ ಪ್ರೀತಿಯಲ್ಲಿಲ್ಲ. ಪ್ರೀತಿಯನ್ನು ಧಿಕ್ಕರಿಸಿ ಹೊರ ನಡೆಯುವವರು, ತಮಗೆ ಇನ್ನೂ ಉತ್ತಮ ಎನ್ನುವ ಆಯ್ಕೆಯ ಕಡೆ ಪಯಣ ಬೆಳೆಸಿರುತ್ತಾರೆ. ದೂರಾಗುವ ಮುನ್ನ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು, ಅವರು ಉಪಯೋಗಿಸುವ ಸಮರ್ಥ ಅಸ್ತ್ರವೇ ತ್ಯಾಗ. ಕಾಣದ ಬದುಕಿಗೆ ಯಾರೂ ಕೂಡಾ, ಕೈಯಲ್ಲಿರುವ ಸುಂದರ ಬದುಕನ್ನು ತ್ಯಾಗ ಮಾಡುವುದಿಲ್ಲ. ಅದು ಯಾರೊಬ್ಬರ ಬದುಕಿನ ವಿಚಾರದಲ್ಲಿ ಸಾಧ್ಯವೂ ಇಲ್ಲ'.
ಅತ್ತು ಅತ್ತು ಸೋತಿದ್ದ ಗೆಳೆಯ ಅರೆ ಕ್ಷಣದಲ್ಲಿ ನಿದ್ರೆಗೆ ಜಾರಿದ್ದ. ಯಾಕೋ ಅರಿವಿಲ್ಲದೆ ನಾನು ಕೂಡಾ ತುಸು ದುಃಖಿತನಾದೆ. ಮನಸ್ಸು ಪ್ರಕ್ಷುಬ್ಧವಾಗಿತ್ತು. ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಸ್ನೇಹಿತನಿಗೆ ಸಮಾಧಾನ ಪಡಿಸಲು ಪ್ರಯತ್ನಿಸಿದ ಮನಸ್ಸೇ ಮೂಕವಾಗುತ್ತಿತ್ತು. ಕಿಟಕಿಯಾಚೆ ಒಮ್ಮೆ ದಿಟ್ಟಿಸಿದೆ.. ಯಾವುದೋ ಹಿಂದಿನ ನೆನಪು ಮರುಕಳಿಸಿದಂತಾಗಿ ಒಂದೇ ಸಮನೆ ಕಾಡುತ್ತಿದ್ದವು.
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ.....

ಶುಕ್ರವಾರ, ಮೇ 17, 2013


ಅನುಭವದ ಮರ್ಮ..

`ಅಯ್ಯೋ... ನಡೆದುಕೊಂಡು ಹೋದರೆ ಸುಸ್ತಾಗುತ್ತೇರಿ. ಆಟೋಗೆ ಹೋಗೋಣ' ಎಂದಾಕೆಯ ಮೊಗದಲ್ಲಿ ಬಸವಳಿದ ಕುರುಹು. ಜೊತೆಯಲ್ಲಿಯೇ ಹೆಜ್ಜೆ ಹಾಕಿ ನಡೆಯಬೇಕು ಎಂದುಕೊಂಡ ನನ್ನ ಮನಸ್ಸಿಗೆ ತುಸು ಘಾಸಿಯಾಯಿತಾದರೂ... ಆಕೆಯ ಆರೋಗ್ಯ ಮುಖ್ಯ ಎಂದರಿತು, ಅದೇ ದಿಕ್ಕಿನತ್ತ ಬರುವ ಆಟೋಗೆ ಕೈಮಾಡಿದೆ. ಆಟೋ ಹತ್ತಿದಾಗ ಬಸವಳಿದ ಆಕೆಯ ಮೊಗದಲ್ಲಿ ಕಂಡು ಕಾಣದ ನಿರಾಳತೆ!! ಒಮ್ಮೆ  `ಉಸ್ಸಪ್ಪಾ...' ಎಂದಳು. ಆಟೋ ಚಾರ್ಜ್ ನೀಡಲೆಂಬಂತೆ ಪ್ಯಾಂಟ್ ಜೇಬಿಗೆ ಕೈ ಹಾಕಿದೆ. ಆಗಲೇ ಗೊತ್ತಾಗಿದ್ದು `ಪರ್ಸ್ ' ಎಲ್ಲೋ ಕಳೆದು ಹೋಗಿದೆ' ಎಂದು!
ಆಟೋಗೆ ಹಣ ನೀಡುವುದು ಎಲ್ಲಿಂದ? ಆಕೆಯಲ್ಲಿ ಕೇಳಲು ಮನಸ್ಸು ಬರುತ್ತಿಲ್ಲ. ಏನು ಮಾಡುವುದು...!? ಅನಿವಾರ್ಯ ಕೇಳಲೇ ಬೇಕು. `ಆಟೋಗೆ ನೀಡಲು ಹಣ ಇದೆಯಾ? ನನ್ನ `ಪರ್ಸ್ ' ಎಲ್ಲಿಯೋ ಕಳೆದುಕೊಂಡು ಬಿಟ್ಟೆ' ಎಂದೆ. 30ರೂ. ತೆಗೆದು ಕೊಟ್ಟಳು. ಮಾರ್ಗ ಮಧ್ಯದಲ್ಲಿಳಿದು ಅವಳು ಮನೆ ಕಡೆ ಹೆಜ್ಜೆ ಹಾಕಿದಳು. ನಾನು ನನ್ನ  ಮನೆ ಸನಿಹ ಇಳಿದೆ. ಭಗವಂತ! ಜೀವನದಲ್ಲಿ ಹೊಸ ಅನುಭವವೊಂದನ್ನು ನೀಡಿದಕ್ಕೆ ಮನಸ್ಸಲ್ಲೆ ಥ್ಯಾಂಕ್ಸ್ ಎಂದೆ. ಕಳೆದುಕೊಂಡ `ಪರ್ಸ್ 'ಲ್ಲಿ 4,500 ರೂಪಾಯಿ, 2 ಎಟಿಎಂ ಕಾ ಹಾಗೂ ಕಾರ್ಡ್ ಅವಶ್ಯಕ ಸಣ್ಣಪುಟ್ಟ ಕಾಗಪತ್ರಗಳು ಇದ್ದವು. 2 ಎಟಿಎಂ ಕಾರ್ಡನ್ನು ಸಹಾಯ ವಾಣಿಗೆ ಕರೆ ಮಾಡಿ ಬ್ಲಾಕ್ ಮಾಡಿಸಿದೆ.(ಸಮಯ ರಾತ್ರಿ 8.30).
ಸ್ನೇಹಿತೆಗೆ ಏನೋ ನಂಬಿಕೆಯಿತ್ತು. `ಪರ್ಸ್ ' ಕಚೇರಿಯಲ್ಲಿ ಬಿಟ್ಟಿರಬಹುದೇನೋ ಎಂದು. ಆದರೆ, ಕಳೆದುಕೊಂಡ ಬಗ್ಗೆ ಖಚಿತ ಪಡಿಸಿದಾಗ ಬೇಸರ ವ್ಯಕ್ತಪಡಿಸಿದಳು. ಆದರೆ ನನಗೆ ಮಾತ್ರ ಒಂದಿನಿತು ನೋವಾಗಲಿಲ್ಲ. ಆದರೆ, ಸ್ವಲ್ಪ ಬೇಜಾರಾಗಿತ್ತು! ನಗುನಗುತ್ತಲೇ `ಪರ್ಸ್ ' ಕಳೆದು ಕೊಂಡ ಪುರಾಣದ ಬಗ್ಗೆ ಆಕೆಗೆ ಹೇಳಿದೆ. `ಅಲ್ಲಾ.. ನೋವಿನ ವಿಷಯಕ್ಕೆ ನಗು ಯಾಕೆ?' ಎಂದು ಅವಳು ನನ್ನ ಮೇಲೆ ತುಸು ಕುಪಿತಳಾದಳು. ನೋವಿಲ್ಲದಿದ್ದರೂ ಬೇಸರವಿತ್ತಲ್ಲ... ಅದು ಕೂಡಾ ಕೆಲ ಸಮಯದ ನಂತರ ಮಾಯವಾಯಿತು!
ಆಕೆಯ ಜನ್ಮದಿನಕ್ಕೆಂದು `ನಮ್ಮಮ್ಮ ಅಂದ್ರೆ ನಂಗಿಷ್ಟ' ಎಂಬ ಪುಸ್ತಕವನ್ನು ಅಂದೆ ಉಡುಗೊರೆಯಾಗಿ ನೀಡಿದ್ದೆ. ಮನೆಗೆ ಹೋಗಿ ನೋಡಿದ ಆಕೆಗೆ ಅದರಿಂದಾದ ಸಂತೋಷ ಅಷ್ಟಿಷ್ಟಲ್ಲ! `ನನ್ನ ಇಷ್ಟದ ಪುಸ್ತಕ ನೀಡಿದ್ದಕ್ಕೆ ಧನ್ಯವಾದ' ಎಂದಳು. ಆಕೆಯ ಮೊಗ ಹಾಗೂ ಮನಸ್ಸು ಆ ಒಂದು ಪುಸ್ತಕ ಅರಳಿಸಿತ್ತಲ್ಲ ಅಷ್ಟು ಸಾಕು.(ನಾವು ನೋವಲ್ಲಿದ್ದರೂ ಇನ್ನೊಬ್ಬರ ಮೊಗದಲ್ಲಿ ನಗು ತರಬೇಕು) `ಕಳೆದು ಕೊಂಡ`ಪರ್ಸ್ ' ಹಾಗೂ ಹಣ ಅವಳ ಸತೋಷದ ಮುಂದೆ ಏನೂ ಅಲ್ಲ...!'


ಸ್ನೇಹಿತನೊಬ್ಬನಿಗೆ ತಿಳಿಸಿದೆ, ಆತ ಕೇಳುತ್ತಿದ್ದಂತೆ ಬೇಸರದಿಂದ... ಏನೇನೋ ಹಲುಬಿದ. ಆತನೂ ಕೂಡಾ ಒಂದೆರಡು ಬಾರಿ `ಪರ್ಸ್ ' ಕಳೆದುಕೊಂಡಿದ್ದ. ಅದರ ಅನುಭವ ಏನೂ ಎನ್ನುವುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಪೊಲೀಸ್ ದೂರು ನೀಡು! ಎಲ್ಲಿ ಬಿಟ್ಟಿದ್ದೀಯಾ ನೆನಪಿಸಿಕೊ! ಸಾಧ್ಯವಾದರೆ ಆ ಸ್ಥಳಕ್ಕೆ ಒಮ್ಮೆ ಹೋಗಿ ಹುಡುಕು! ಎಂದೆಲ್ಲ ಸಲಹೆ ನೀಡಿದ. 50ಪೈಸೆ ರಸ್ತೆಯಲ್ಲಿ ಬಿದ್ದರೆ ಬಿಡದ ನಮ್ಮವರು,`ಪರ್ಸ್ ' ಬಿದ್ದರೆ ಬಿಡುತ್ತಾರೆಯೇ? ಅದರಲ್ಲೂ ಸಾವಿರಾರು ರೂಪಾಯಿಗಳಿರುವ `ಪರ್ಸ್ ' ನಮಗೆ ಪುನಃ ದೊರೆಯುತ್ತವೆಯೇ? ಹಣವಿದ್ದ ಪರ್ಸ್ ಸಿಕ್ಕಾತ ವಿಳಾಸ ಪತ್ತೆ ಮಾಡಿ ನನಗೆ ತಂದು ಕೊಡುವಷ್ಟು ಪ್ರಾಮಾಣಿಕನೇ? ಇಂತಹ ಯಾವ ಪ್ರಶ್ನೆಗೂ ನನಗೆ `ಅಸಾಧ್ಯ ಎಂಬ ಉತ್ತರ'ವೇ ದೊರಕಿತ್ತು. ಇತಿಹಾಸದಿಂದ ಪಾಠ ಕಲೆಯಬೇಕೆ ಹೊರತು, ಅದನ್ನು ಚಿಂತಿಸುತ್ತ ಕಾಲಹರಣ ಮಾಡಿ, ಮನಸ್ಸನ್ನು ಹಾಳುಗೆಡುವುದು ತರವಲ್ಲ. ಇದು ನನ್ನ ಧ್ಯೇಯ.
`ಪರ್ಸ್ ' ಕಳೆದುಕೊಂಡ ಮಾರನೆ ದಿನ ಸಂಕ್ರಾತಿ. ಮನೆಕಡೆ ಮುಖ ಹಾಕದೆ ಐದಾರು ತಿಂಗಳಾಗಿತ್ತು. ಹಬ್ಬದ ಸಡಗರದ ವಾತಾವರಣ ಮನೆಯೆಲ್ಲ ಪಸರಿಸಿತ್ತು. ಹಬ್ಬದ ಖರ್ಚಗೆ ನನ್ನಲ್ಲಿ ಹಣವಿರಲಿಲ್ಲ. ಎಟಿಎಂ ಕಾರ್ಡನಲ್ಲಿದೆ? ಆದರೆ, ಅದನ್ನು ಕಳೆದುಕೊಂಡಿದ್ದೇನೆ. ಬ್ಯಾಂಕಿಗೆ ಹೋಗಿ ತರೋಣ ಎಂದರೆ ಸಂಕ್ರಾತಿಯ ಸೂಟಿ! `ಸಂಕ್ರಾಂತಿ ಕಾಳು' ನೀಡಲು ಬಂದವರಿಗೆ ಹಣ ನೀಡುವ ಪರಿಪಾಠ ಬೆಳಿಸಿಕೊಂಡು ಬಂದ ನಾನು ತೆಪ್ಪಗೆ ಕುಳಿತುಬಿಟ್ಟೆ! `ಕಾಳು ನೀಡಿದವರಿಗೆ... ಬಾಳು ಚೆನ್ನಾಗಿರಲಿ' ಎಂದಷ್ಟೆ ಹಾರೈಸಿ ಕಳುಹಿಸಿದೆ!
ಎಟಿಎಂ ಕಾರ್ಡ್ ಕಳೆದರೇನಂತೆ, ನೆಟ್ ಬ್ಯಾಂಕಿಂಗ್ ಇದೆಯಲ್ಲ. ಬ್ಯಾಂಕ್ ಖಾತೆಯ ಸ್ಥಿತಿಗತಿ ಏನಾಗಿದೆಯೆಂದು ತಿಳಿಯಲು ಮನೆಯ ಕಂಪ್ಯೂಟರ್ ಸ್ಟಾರ್ಟ್ ಮಾಡಿ, ಅಂತರ್ಜಾಲಕ್ಕೆ ಲಗ್ಗೆ ಇಟ್ಟೆ!! ನೆಟ್ ಬ್ಯಾಂಕಿಂಗ್ ಗೆ ಪ್ರವೇಶ ಪಡೆದು, ಸ್ಥಿತಿಗತಿ ಪರಿಶೀಲಿಸಿದೆ. ಆಗ ಮತ್ತೊಂದು ಷಾಕ್!! ದಿ. 13, ರಾತ್ರಿ 7.25.30 ಸೆ.ಗೆ ಯಾರೋ ಅಪರಿಚಿತರು, ಎಟಿಎಂ ಕಾರ್ಡಿನಿಂದ ಶಾಪಿಂಗ್ ಮಾಡಿದ್ದಾರೆ! ಅದು ಬರೋಬ್ಬರಿ 7,300 ರೂಗಳಷ್ಟು!! ಯಾರಂತ ಪತ್ತೆ ಹಚ್ಚುವುದು? ಏನು ಮಾಡುವುದು? ಎನ್ನುತ್ತ ಯೋಚಿಸುತ್ತಿದ್ದೆ. ಅಮ್ಮನಿಗೆ ಎಲ್ಲ ವಿಷಯವನ್ನು ತಿಳಿಸಿದೆ. ನನ್ನ ಮನದ ಭಾವನೆಯನ್ನು ಅರಿತ ಮಾತೃ ಹೃದಯ... `ಅದಕ್ಕೆಲ್ಲ ಯಾಕೋ ಬೇಜಾರು ಪುಟ್ಟು...? ನೀ ಜೋಪಾನ ಇದ್ದೀಯಲ್ವಾ.. ನೀ ಕಳೆದು ಹೋಗಿಲ್ಲ ಅಲ್ವಾ... ಅಷ್ಟು ಸಾಕು' ಎಂದಳು. ಅಮ್ಮನಿಗೆ ಗೊತ್ತು, ಮಗ ಎಂದೂ ಈ ರೀತಿ ನಿರ್ಲಕ್ಷ್ಯ ಮಾಡಿದವನಲ್ಲ. ಯಾವುದೋ `ಮನಸ್ಥಿತಿ'ಯಲ್ಲಿ ಎಡವಿ ಬಿದ್ದಿದ್ದಾನೆ. ಅದಕ್ಕೆ ಹೀಗಾಗಿದೆ ಎಂದು. ಒಟ್ಟಾರೆ, 11,700 ರೂಪಾಯಿಗಳನ್ನು ಕಳೆದುಕೊಂಡ `ಅಪ್ಪ-ಅಮ್ಮ'ರ ಹೆಮ್ಮೆಯ ಪುತ್ರ ಎಂದು ಆ ಕ್ಷಣದಲ್ಲಿ ಹೆಸರು ಪಡೆದೆ!
ನನ್ನ ಇನ್ನೊಂದು ಬ್ಯಾಂಕ್ ಖಾತೆಯಲ್ಲಿ ಅಲ್ಪಸ್ವಲ್ಪ ಹಣವಿತ್ತು. ದಿ. 15ರಂದು ಬ್ಯಾಂಕ್ಗೆ ಹೋಗಿ ಅದನ್ನೆ ತೆಗೆದುಕೊಂಡು ಬಂದೆ. ಮಗನ ದಾರುಣ ಸ್ಥಿತಿಯನ್ನು ಕಂಡು ಅಪ್ಪ ಖರ್ಚಿಗೆಂದು 8ಸಾವಿರ ರೂ. ನೀಡಲು ಬಂದರು. ಆಗ `ಅಪ್ಪಾ, ಹಣದ ಅವಶ್ಯವಿದ್ದಾಗ ಇದಕ್ಕಿಂತಲೂ ಹೆಚ್ಚಿಗೆ ಕೇಳುತ್ತೇನೆ. ಆಗ ಖಂಡಿತ ಕೊಡಬೇಕು' ಎಂದೆ. ಅಪ್ಪನಿಗೆ ಬೇಸರವಾಯಿತು. 11ಸಾವಿರ ರೂ. ಕಳೆದುಕೊಂಡಾಗಲೂ ಕಣ್ಣಲ್ಲಿ ನೀರು ಹಾಕದ ನಾನು, ಅಪ್ಪನ ಆ ಕ್ಷಣದ ಮುಖ ನೋಡಿ, ಅತ್ತುಬಿಟ್ಟೆ!! 2ಸಾವಿರ ರೂ. ತೆಗೆದುಕೊಂಡು, `ಅಪ್ಪ, ಸದ್ಯ ಇಷ್ಟು ಸಾಕು' ಎಂದೆ.
ಪ್ರಬುದ್ಧತೆಯಿಂದ ಜವಾಬ್ದಾರಿ ನಿಭಾಯಿಸುವ ಮಗ`ಪರ್ಸ್ ' ಕಳೆದುಕೊಂಡಿದ್ದು ಹೇಗೆ...? ಸ್ಪಷ್ಟ-ದಿಟ್ಟ ಹೆಜ್ಜೆ ಮೂಲಕ ಗುರಿ ತಲುಪುತ್ತಿರುವ ಸುಪುತ್ರ ಎಡವಿದ್ದು ಹೇಗೆ...? ಎಂದು ನನ್ನಮ್ಮ ದಾರಿಗುಂಟ ಕೇಳುತ್ತ ಬಂದಳು. ನನ್ನ ಆತ್ಮ ಸ್ವರೂಪಿಯಾದ ಆ ಮಾತೆಗೆ ತಿಳಿಯದ್ದು ಏನಿದೆ? `ಏನು ಮಗಾ.... ಯಾವ್ದಾದ್ರೂ ಹುಡುಗಿಯನ್ನ ಪ್ರೀತಿಸ್ತಿದ್ದೀಯಾ? ನಿನ್ನ ಹೃದಯಕ್ಕೆ ಲಗ್ಗೆ ಇಟ್ಟ ಆ ಮುದ್ದು ಮಗು ಯಾರಂತ ಹೇಳೋ ಕಂದಾ...!? ಎಂದು ಒತ್ತಾಯಿಸಿದಳು. ಅವಳ ಮಾತಿಗೆ ಕಟ್ಟುಬಿದ್ದು ಉತ್ತರಿಸುವಷ್ಟರಲ್ಲಿ ಬಸ್ ಹಾರ್ನ್ ಮಾಡುತ್ತ ಹತ್ತಿರದಲ್ಲಿಯೇ ಬಂದು ನಿಂತು ಬಿಟ್ಟಿತು. ಮುಗುಳ್ನಗುತ್ತ `ಅಮ್ಮಾ.... ಬರ್ತೀನಿ' ಎಂದು ಟಾಟಾ ಮಾಡಿ... ಉಸಿರನ್ನೊಮ್ಮೆ ಮೇಲಕ್ಕೆಳೆದುಕೊಂಡೆ!!
(ಇದು ಕೇವಲ ಕಾಲ್ಪನಿಕ)

ಸೋಮವಾರ, ಮೇ 13, 2013


ಪ್ರೀತಿ ಹುಟ್ಟೋದು......?

ಜಿದ್ದಿಗೆ ಬಿದ್ದು ಪ್ರೀತಿಸಲೇ ಬೇಕು ಅಂತ, ಅದರ ಹಿಂದೆಯೇ ಹೊರಟರೆ, ಖಂಡಿತ ಅದು ದೊರಕದು. ಹಾಗೆ ಇಷ್ಟ ಪಟ್ಟಾಗ ಪ್ರೀತಿ ಬೇಕು ಅಂದಾಗ ಅದು ಹುಟ್ಟುವುದೂ ಇಲ್ಲ. ಅದು ಅನಿರೀಕ್ಷಿತ ಕ್ಷಣದಲ್ಲಿ ಅರಿವಿಲ್ಲದೆ ಪರಸ್ಪರ ಎರಡು ಹೃದಯಗಳಲ್ಲಿ ಹುಟ್ಟಿಕೊಳ್ಳುವಂತಹದ್ದು.
ಯಾವುದೋ ಚೆಂದದ ಹುಡುಗ/ಹುಡುಗಿ ಕಂಡಾಗ ಇವನೇ/ಇವಳೇ ಇಷ್ಟ ಎಂದು ಅವರ ಮುಂದೆ ಪ್ರೇಮ ನಿವೇದನೆ ಮಾಡಿ, `ನಾನು ನಿನ್ನನ್ನು ಪ್ರೀತಿಸ್ತಾ ಇದ್ದೀನಿ, ನಿನ್ನನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲ' ಎಂದು ಕೇಳಿಕೊಳ್ಳುವುದು ಆಕರ್ಷಣೆ ಪ್ರೀತಿಯಷ್ಟೇ! ಅದು ನಿಜವಾದ ಪ್ರೀತಿಯಾಗಲಾರದು. ಪ್ರೀತಿ ಹುಟ್ಟೋದೆ ಒಂದು ಆಕಸ್ಮಿಕ... ಅದು ಒಂದು ವಿಸ್ಮಯ. ಅದು ನಿಜವಾಗಿಯೂ ಮೊಳಕೆ ಒಡೆಯೋದು ಕಣ್ಣಿನಿಂದ. ಪರಸ್ಪರ ಎರಡು ಕಣ್ಣುಗಳು ಒಂದನ್ನೊಂದು ಕ್ಷಣಕಾಲ ಬೆರೆತಾಗ, ಹೃದಯಕ್ಕೆ ತಾಗಿ, ಅದರ ಅಂತರಾಳದಲ್ಲಿ ನಡುಕವಾಗಿ, ಮನಸ್ಸು ಮರ್ಕಟನಂತಾಗಿ ಯಾವುದೋ ಒಂದು ಅರಿವಿಲ್ಲದ ಲೋಕದಲ್ಲಿ ಪಯಣಿಸಿದಂತಾಗುತ್ತದೆ. ನೋಟದ ಸಮ್ಮಿಲನದ ಸಂದರ್ಭದಲ್ಲಿ ಇಬ್ಬರ ಮೊಗದಲ್ಲಿಯೂ ಸೂಕ್ಷ್ಮ ಬದಲಾವಣೆ, ಕಣ್ಣಂಚಿನಲ್ಲಿ ಚಂಚಲತೆ, ನೋಟಕ್ಕೆ ಸಿಕ್ಕಿಹಾಕಿಕೊಂಡನೆಂಬ ಭಾವನೆಯಿಂದ ತಪ್ಪಿಸಿಕೊಳ್ಳುವ ಆತುರ ಮನದಲ್ಲಿ ಮೇಳೈಸುತ್ತವೆ. ಈ ವರ್ಣನಾತೀತ ಮಧುರ ಅನುಭವ ಮತ್ತು ಆತುರದ ಕ್ಷಣಗಳೇ ಪ್ರೀತಿಯ ವಸಂತ ಕಾಲ....!


ಕಣ್ಣಂಚಿನಿಂದ ಹುಟ್ಟಿದ ಪ್ರೀತಿ ಅನಿರೀಕ್ಷಿತವಾಗಿ ಎದುರಾಗುತ್ತಲೇ ಹೋಗುತ್ತವೆ. ಅರಿವಿಲ್ಲದೆ ಆ ಪ್ರೀತಿಯ ಸುತ್ತ ಮನಸ್ಸು ಓಡಾಡುತ್ತ, ಅದರ ಸನಿಹದಲ್ಲಿರಲು ಚಡಪಡಿಸುತ್ತವೆ. ಎದುರಿಗೆ ಬರಲು ಭಯ... ಬಿಟ್ಟಿರಲು ಬೇಸರ... ಮಾತನಾಡ ಬೇಕೆಂದರೆ ಸಂಕೋಚ... ತೊದಲುವ ನಾಲಗೆ... ಇವುಗಳ ನಡುವೆಯೇ, `ಪ್ರೀತಿಯನ್ನು ನೋಡಬೇಕು, ಅದರ ಜೊತೆ ಮಾತನಾಡಬೇಕು' ಎಂದು ಮನಸ್ಸು ಒಂದೇ ಸಮನೆ ಹಪಹಪಿಸುತ್ತಿರುತ್ತವೆ. ಪರಸ್ಪರ ಮನಸ್ಸುಗಳು ಒಂದನ್ನೊಂದು ಕಲೆತು, ಕಲ್ಪನೆಯಲ್ಲೇ ಒಂದಾಗಿ ಬಿಟ್ಟಿರುತ್ತವೆ. `ನಾನು ನಿನ್ನನ್ನು ಪ್ರೀತಿಸ್ತಾ ಇದ್ದೀನಿ' ಎಂಬ ಒಲವಿನ ನುಡಿ ಝರಿಯಾಗಿ ಹರಿದು, ಇನ್ನೊಂದು ಹೃದಯದಿಂದ ಹೊರಬರುವ ಬಿಸಿಯುಸಿರಿಗೆ ತಾಗಿ ಪ್ರೀತಿಯ ಅಧಿಕೃತ ಮುದ್ರೆ ಒತ್ತಿ ಬಿಡುತ್ತವೆ. ಚಂಚಲ ನಯನಗಳಿಂದ ಹುಟ್ಟಿದ ಪ್ರೀತಿ ಎರಡು ಹೃದಯಗಳನ್ನು ಬೆಸೆದು ತನ್ನ ಅಧಿಪತ್ಯ ಸಾಧಿಸುತ್ತವೆ. ನಂತರ ಏನಿದ್ದರೂ ಪ್ರೇಮದ್ದೆ ಸಾಮ್ರಾಜ್ಯ.....!
ಸಾಮಾನ್ಯವಾಗಿ ಎಲ್ಲರೂ ಪ್ರೀತಿಯ ಹಿಂದೆ ಬೀಳಲು ತವಕಿಸುತ್ತಾರೆ. ಅದು ತಪ್ಪಲ್ಲ. ಬದುಕಿನ ಅನಿರೀಕ್ಷಿತ ಸಂದರ್ಭದಲ್ಲಿ ಎದುರಾಗೋ ಆ ಪ್ರೀತಿ, ವರ್ಣನಾತೀತ. ಸುಂದರ ಭಾವನೆಗಳ ಪಲ್ಲಕ್ಕಿಯ  ಮೆರವಣಿಗೆ. ಹೇಳಲಾಗದ ಅನುಭವಿಸಲಾರದ ಮಧುರ ಯಾತನೆ. ಪ್ರೀತಿ ಕಣ್ಣಿನಿಂದ ಚಿಗುರೊಡೆಯುತ್ತವೆ ಎಂದು ಕಂಡಕಂಡವರ, ಇಷ್ಟಪಟ್ಟವರ ಕಣ್ಣನ್ನೆ ನೋಡುತ್ತ ಅದನ್ನು ಹುಡುಕುವುದು ತರವಲ್ಲ. ಆ ಪ್ರೀತಿಯ ನೋಟಕ್ಕೆ ಇನ್ನೊಂದು ನೋಟ ಸೇರುವುದು ಕೇವಲ ಆಕಸ್ಮಿಕ. ಹಾಗೆ ಅರಿವಿಲ್ಲದೆ ಸಂಭವಿಸುವ ಒಂದು ವಿಸ್ಮಯ.
ಪ್ರೀತಿಸಬೇಕೆಂಬ ಗುಂಗಿನಲ್ಲಿ ಸೌಂದರ್ಯದ ಹಿಂದೆ ಬಿದ್ದು, ಇನ್ನಿಲ್ಲದ ಮೋಹ, ಆಸೆಗೆ ಬಲಿಯಾಗಿ ಪ್ರೀತಿಯಿಲ್ಲದೆ ಇದ್ದರೂ ಯಾರ್ಯಾರನ್ನೋ ಇಷ್ಟಪಟ್ಟು, ಬದುಕನ್ನು ಕುರುಡು ಪ್ರೀತಿಗೆ ಬಲಿ ಕೊಡಬಾರದು. ಪ್ರೀತಿಸುವ ಪ್ರೀತಿ ಜೀವನಕ್ಕೆ ಚೈತನ್ಯದ ಚಿಲುಮೆಯಾಗಬೇಕು. ಮುಗ್ಗರಿಸಿ ಬೀಳುವ ಬದುಕನ್ನು ಕೈ ಹಿಡಿದು ಆಲಂಗಿಸಬೇಕು. ಉಸಿರು ಇರುವವರೆಗೂ ಉಸಿರಲ್ಲಿ ಉಸಿರಾಗಿ ಅದು ಬೆರೆತಿರಬೇಕು. ಸುಳ್ಳೆ, ಆ ಪ್ರೀತಿಯ ಹೆಸರಲ್ಲಿ ಬದುಕನ್ನು ದುರ್ಗತಿಗೆ ಕೊಂಡೊಯ್ಯುವುದು ಸರಿಯಲ್ಲ.... ಏನಂತಿರಾ ಸ್ನೇಹಿತರೇ.....?

(ಪ್ರೀತಿ ಕೇವಲ ಕಣ್ಣಿನಿಂದ ಮಾತ್ರ ಹುಟ್ಟುವುದಿಲ್ಲ... ಅದು ಕೂಡಾ ಒಂದು ಕಾರಣವಷ್ಟೇ! ಪ್ರೀತಿ ಹುಟ್ಟಲು ನಾನಾ ಕಾರಣಗಳಿವೆ....... 

ಭಾನುವಾರ, ಮೇ 5, 2013


ಹೀಗೊಂದು ಭಾವ...

ನಿನಗಾಗಿ ಕಾಯುತ್ತಾ... 

ಅದು ನನ್ನದೇ ಆದ ಒಂದು ಭಾವ ಲೋಕ. ಅಲ್ಲಿ ನಾನೊಬ್ಬನೇ ಹೊರತು, ಮತ್ತ್ಯಾರು ಇಲ್ಲ. ಆದರೆ ನನ್ನೊಂದಿಗೆ ಕಾಡಿದ ಆಕೆಯ
ಒಂದಿಷ್ಟು ನೆನಪುಗಳಿವೆ. ಆ ನೆನಪುಗಳೇ ನನ್ನ ಸಂಗಾತಿ..... ಒಂಟಿತನದ ಭಾವ ಸಂಗಾತಿ!
ಸಂಬಂಧಗಳನ್ನು ಭಗವಂತ ಬೆಸೆದಿರುತ್ತಾನಂತೆ. ನಾನೇನು ಆಕೆಯ ಬಂಧುವಲ್ಲ, ಬಳಗವಲ್ಲ, ಪ್ರೇಮಿಯಲ್ಲ. ನನಗೂ ಆಕೆಗೂ ಯಾವುದೇ ಸಂಬಂಧವೂ ಇಲ್ಲ. ಸ್ನೇಹ ಎಂಬ ಪ್ರಶ್ನೆ ಮೂಡಿದರೂ ಆಕೆಯಿಂದ ಸರಿಯಾದ ಉತ್ತರ ದೊರೆತಿಲ್ಲ. ಆದರೂ ಹೊತ್ತಲ್ಲದ ಹೊತ್ತಲ್ಲಿ ನನ್ನನ್ನು ಕಾಡುತ್ತಿರುತ್ತಾಳೆ!
ಆಕೆಯ ಕಿರುನಗೆ, ಸ್ವಾಭಿಮಾನದ ನಡಿಗೆ, ಸೌಮ್ಯಗುಣ, ಮುದ್ದು ಮಾತು, ತುಸು ನೋಟ, ನೀಡಿದ ಭರವಸೆ, ರಾತ್ರಿಯೆಲ್ಲ ಹರಿದಾಡಿದ ಸಂದೇಶಗಳು, ಲೆಕ್ಕವಿಲ್ಲದಷ್ಟು ಮಾತುಗಳು ಹೀಗೆ ಪ್ರತಿಯೊಂದು ಕೂಡಾ ಸ್ಮೃತಿ ಪಟಲದೊಳಗೆ ಸುಳಿಯುತ್ತ ಕಾಡುತ್ತಿರುತ್ತವೆ. ಅದು ನನ್ನನ್ನು ಕಾಡುವ ಸವಿ ನೆನಪಾಗಿ ಬಿಟ್ಟಿವೆ. ಪ್ರತಿ ಉಸಿರು ಅವಳೇನೆ... ದೇಹದಲ್ಲಿನ ಪ್ರತಿ ಹನಿ ಹನಿಯ ರಕ್ತದಲ್ಲೂ ಅವಳೇ.. ಅವಳ ಕಣ್ಣಿನ ಸೌಂದರ್ಯ ನನ್ನ ಕಣ್ಣಲ್ಲಿ ತುಂಬಿಕೊಳ್ಳುವ ತವಕ. ಆಕೆಯ ಗೆಜ್ಜೆಯ ಶಬ್ದದೊಂದಿಗೆ ಹೆಜ್ಜೆಯಿಡುವ ಬಯಕೆ. ಅವಳ ಕೈ ಬೆರಳ ಸಂದಿಯಲ್ಲಿ ನನ್ನ ಕೈಬೆರಳ ಬೆಸೆದು, ಮೌನವಾಗಿ ನಡೆಯುವ ಆಸೆ. ಅವಳ ಪರಿಚಯವಾದಾಗಿನಿಂದ ಏನೇನೋ ಕನಸುಗಳು... ನೂರಾರು ವಿಚಾರಗಳು!
ನಿದ್ರೆಯಿಲ್ಲದ ರಾತ್ರಿಗಳು ತೀರಾ ಮಾಮೂಲು. ಕಾರಣವೇ ಇರಲಿಲ್ಲ ನಾ ಅವಳನ್ನು ಇಷ್ಟಪಡಲು. ಅವಳಿಗೆಂದು ಬರೆದಿಟ್ಟ ಅಪೂರ್ಣ ಪತ್ರದ ಸಾಲುಗಳು ಲೆಕ್ಕವಿಲ್ಲ! ಅರ್ಧಕ್ಕೆ ನಿಂತ ಪತ್ರಗಳನ್ನೆಲ್ಲ ಮುಂದುವರೆಸಲು ಪ್ರಯತ್ನಿಸಿದಾಗ ಮನಸ್ಸು ವಿಪರೀತ ಹೋರಾಟಕ್ಕಿಳಿಯುತ್ತವೆ. ಪತ್ರದ ಅಂತ್ಯ ದೂರವಿದ್ದರೂ, ಬರೆಯಲು ಪದಗಳೇ ಸಿಗದೇ ಪೇಚಾಡುತ್ತೇನೆ.
ಸುಮ್ಮನೆ ಎದುರಾಗುತ್ತಾಳೆ, ತುಸು ನೋಟದಲ್ಲೆ ಎಲ್ಲವನ್ನು ಹೇಳಿ ಕ್ಷಣಾರ್ಧದಲ್ಲಿಯೇ ಮರೆಯಾಗುತ್ತಾಳೆ. ಇಬ್ಬರೂ ಮುನಿಸಿಕೊಳ್ಳದ ದಿನಗಳಿಲ್ಲ... ಆದರೂ ಪ್ರೀತಿಯ ಪದಗಳಿಗೆ ಬರವಿಲ್ಲ. ಪ್ರತಿ ದಿನದ ಮುಂಜಾನೆ ದೇವರ ಪ್ರಾರ್ಥನೆಯ ಬದಲು, ಪರಸ್ಪರ ಸಂಭಾಷಣೆಯ ಮೂಲಕ ಪ್ರಾರಂಭವಾಗುತ್ತವೆ. ಅವಳು ಹೇಳಬಾರದ, ಹೇಳಲಾಗದ ಎಲ್ಲ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ. ಆಗಷ್ಟೆ ಅವಳ ಮನಸ್ಸಿಗೆ ತುಸು ಸಮಾಧಾನ. ಅದಕ್ಕೆ ಪ್ರತಿಯಾಗಿ ನಾಲ್ಕು ಸಾಂತ್ವನದ ಮಾತುಗಳು ನನ್ನಿಂದ.
ಹಮ್ಮು ಬಿಮ್ಮಿಲ್ಲದ ಆಕೆಯ ಮನಸ್ಸು ಒಂದು ಮಗುವಿನಂತೆ. ಆದರೆ, ಕೆಲವು ಬಾರಿ ಜಿದ್ದಿಗೆ ಬಿದ್ದಳೆಂದರೆ ಎದುರಿಗಿದ್ದವರು ಸೋಲಲೇಬೇಕು. ಒಮ್ಮೊಮ್ಮೆ ಅವಳು, `ನಿನ್ನ ನೋಡಬೇಕು, ಒಂದೆರಡು ನಿಮಿಷ ಮಾತನಾಡಬೇಕು' ಸಿಗ್ತಿಯಾ ತಾನೆ?' ಎಂದು ಕೇಳುತ್ತಾಳೆ. ಇಲ್ಲ ಎಂದರೆ ಗೋಗರೆಯುತ್ತಾಳೆ. `ಕ್ಷಮಿಸು ಆಗಲ್ಲ' ಎಂದು ಹೇಳಿದರೆ ದಿನವಿಡೀ ರಾದ್ದಾಂತ, ಕೋಪ ಅವಳನ್ನು ಬಿಗಿದಪ್ಪಿರುತ್ತವೆ. ಪರಿಚಯದವರು ಎದುರಿದ್ದಾಗ ಅವಳು ಎಂದಿಗೂ, ನಾವಿಬ್ಬರು ಪರಸ್ಪರ ಹಚ್ಚಿಕೊಂಡಿದ್ದೇವೆ ಎಂಬ ಸಣ್ಣ ಕುರುಹನ್ನು ನೀಡುವುದಿಲ್ಲ. ನಾನೆ ಎಲ್ಲಿಯಾದರೂ ಆ ವಿಷಯದಲ್ಲಿ ಎಡುವುತ್ತೇನೇನೋ ಎಂಬ ಭಯ. ಆದರೆ ಬೆರಳೆಣಿಕೆಯಷ್ಟು ಸ್ನೇಹಿತರಿಗಷ್ಟೇ ಗೊತ್ತು, ನಾವು ಪರಸ್ಪರ ಇಷ್ಟಪಟ್ಟಿದ್ದೀವಿ ಅಂತ? ಅದರಲ್ಲಿ ಒಬ್ಬ ಸ್ನೇಹಿತನಿಗಂತೂ ಸಂಪೂರ್ಣ ಗೊತ್ತು `ನಾವಿಬ್ಬರೂ ತುಂಬಾ ಹಚ್ಚಿಕೊಂಡಿದ್ದೇವೆ' ಎಂದು! ಆತ ಆಗೊಮ್ಮೆ ಈಗೊಮ್ಮೆ ನನ್ನನ್ನು ಕಾಡಿಸುತ್ತ ಪೀಡಿಸುತ್ತಲೇ ಇರುತ್ತಾನೆ. ಸ್ವಾಭಿಮಾನದ ಗೋಡೆ ನಾನು ಕೆಡವುತ್ತೇನೆ ಎಂದು....!
ಅವಳು ನನ್ನ ಬದುಕಿನ ಸ್ಪೂರ್ತಿ. ಕಾಡುತ್ತ ನೆನಪಾಗುತ್ತ ಹೊಸ ಉತ್ಸಾಹವನ್ನು ತುಂಬುವ ಚಿಲುಮೆ. ಪದೇ ಪದೇ ಮೌನವಾದರೂ, ಮರಳಿ ಮುನಿಸಿಕೊಂಡರೂ, ಕೊನೆಗೆ ಅವಳು ನನ್ನ ದ್ವೇಷಿಸಿದರೂ ನನಗೆ ಇಷ್ಟಾನೆ!
ಆದರೆ, ಹೇಳಲಾಗದ ಮಾತೊಂದು ಇಬ್ಬರನ್ನು ಕಟ್ಟಿಹಾಕಿದೆ. ಅವಳು ನಾ ಹೇಳಲಿ ಎಂದು.... ನಾ ಅವಳು ಹೇಳಲಿ ಎಂದು....  ಇಬ್ಬರೂ ಮೌನವಾಗೆ ದಿನ ದೂಡುತ್ತಿದ್ದೇವೆ!!! ಕಾದು ನೋಡೋಣ... ಏನು ಎತ್ತ ನಮ್ಮಗಳ ಚಿತ್ತ ಎಂದು?

ಶುಕ್ರವಾರ, ಮೇ 3, 2013


ಹೀಗೊಂದು ವಿಷಾದದ ಓಲೆ.....

ನೊಂದ ಹೃದಯದ ಕಥೆ


ಎಲ್ಲ ಮರೆತು ನಾನು ಇರುವಾಗ
ಇಲ್ಲ ಸಲ್ಲದ ನೆಪವ ಹೂಡಿ
ಮತ್ತೆ ಮೂಡಿಬರದಿರು ಹಳೆಯ ನೆನಪೇ...!
ಕವಿ ಕೆ.ಎಸ್. ನಿಸಾರ್ ಅಹ್ಮದರ ಈ ಸಾಲುಗಳು ಅದೆಷ್ಟು ಸತ್ಯ ಅಲ್ವಾ? ನನ್ನನ್ನು ನನಗಿಂತ ನೀನು ಹೆಚ್ಚಾಗಿ ಅರ್ಥ ಮಾಡಿಕೊಂಡಿದ್ದೀಯಾ ವಿಶು! ಹೇಳು, ನಾನು ಮಾನಸಾಳನ್ನು ಹೇಗೆ ಮರೆಯಲಿ ಎಂದು? ಇಂದು ನಾನು ಅವಳಿಂದ ದೂರವಾಗಿ ಹಲವರ್ಷಗಳೇ ಕಳೆದಿರಬಹುದು. ಆದರೆ, ಅವಳು ಈಗಲೂ ನನ್ನಲ್ಲೆ ಇದ್ದಾಳೆ. ನನ್ನ ಪ್ರತಿಯೊಂದು ಮಾತಿನಲ್ಲೂ ಇದ್ದಾಳೆ. ವಿಶು, ನಾನು ಮಾನಸಾಳಿಗೆ ಸ್ನೇಹದ ಸವಿಯನ್ನು ನೀಡಿದೆ. ಅದಕ್ಕೆ ಪ್ರತಿಯಾಗಿ ಅವಳು ಪ್ರೇಮಾಮೃತವನ್ನು ಉಣಿಸಿದಳು. ಅವಳ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ನನ್ನ ಜೀವನದಲ್ಲಿ ಮರೆಯಲಾರದಂಥವು.
ಕೆಲವರಿಗೆ ಪ್ರೀತಿ ಭೋಗದ ವಸ್ತು. ಆದರೆ, ನನಗೆ ಅದು ಆರಾಧನೆಯಾಗಿತ್ತು. ವಿಶು, ನಾ ಅವಳ ಕನಸುಗಳಿಗೆ ಬಣ್ಣ ತುಂಬಿದೆ. ಅವಳ ಭಾವನೆಗೆ ಪ್ರೀತಿಯಿಂದ ಸ್ಪಂದಿಸಿದೆ. ಅದಕ್ಕೆ ಬೆಲೆ ಕೊಟ್ಟೆ. ಅವಳು ಸೋತಾಗ ಕೈ ಹಿಡಿದೆತ್ತಿದೆ. ಗೆದ್ದಾಗ ಹುರಿದುಂಬಿಸಿದೆ. ಅವಳ ನೋವು ನನ್ನದೆಂದು ತಿಳಿದೆ. ಅವಳ ತುಂಟ ತನಕೆ ಗೆಳೆಯನಾದೆ.... ಮುಗ್ದತೆಗೆ ಮಗುವಾದೆ... ಮೌನಕ್ಕೆ ಮಾತಾದೆ... ಮಾತಿಗೆ ಕೃತಿಯಾದೆ.... ಆದರೆ, ವಿಶು, ನಾನು ಎಂದಿಗೂ ಅವಳ ಬಳಿ ಕೆಟ್ಟದಾಗಿ ವತರ್ಿಸಲಿಲ್ಲ. ಅವಳನ್ನು ಒಂದು ಚಿಕ್ಕ ಮಗುವಿನಂತೆ ನೋಡಿಕೊಳ್ಳುತ್ತಿದ್ದೆ.
ಅವಳು ತುಂಬಾ ಚೆಂದಾಗಿ ಕಾಣುತ್ತಿದ್ದಾಗ ಎಷ್ಟೋ ಹುಡುಗರು ಅವಳನ್ನು ಹೊಗಳುತ್ತಿದ್ದರು. ಕಾಡಿಸಿ ರೇಗಿಸುತ್ತಿದ್ದರು. ಆದರೆ, ನಾನು ಮೌನವಾಗಿ ಅವಳನ್ನೇ ನೋಡುತ್ತಿದ್ದೆ. ಆಗ ಅವಳು `ಏನೋ... ಹಾಗೆ? ಎಂದರೆ, `ನನ್ನ ಹುಡುಗಿಯ ಅಂದವನ್ನು ವಣರ್ಿಸಲು ಯಾವುದಾದರೂ ಪದಗಳಿವೆಯೇ? ಎಂದು ಯೋಚಿಸುತ್ತಿದ್ದೆ' ಎನ್ನುತ್ತಿದ್ದೆ. ನಮ್ಮ ಪ್ರೀತಿಯ ಪರಿಯನ್ನು ಕಂಡಾಗ, ಕೆಲವು ಬಾರಿ ನಮಗೆ ತುಂಬಾ ಭಯವಾಗುತ್ತಿತ್ತು ವಿಶು. ನಾವು ಹರಟದ ಮಾತುಗಳಿಲ್ಲ. ನಾವಿಬ್ಬರು ನಮ್ಮ ಕನಸಿನ ಗೂಡನ್ನು ಸಹ ಕಟ್ಟುತ್ತಿದ್ದೆವು. ಅದರಲ್ಲಿ ಪ್ರೀತಿನೇ ಎಲ್ಲ ಆಗಿರಬೇಕು ಎಂದುಕೊಳ್ಳುತ್ತಿದ್ದೆವು. ಜೊತೆಗೆ ವಯಸ್ಸಿಗೆ ಮೀರಿದ ಪ್ರೀತಿ ನಮ್ಮದಾಗಿತ್ತು. ಒಮ್ಮೊಮ್ಮೆ ನಾವಿಬ್ಬರು ತುಂಬಾ ಮಾತನಾಡುತ್ತಿದ್ದೆವು. ಒಮ್ಮೊಮ್ಮೆ ತುಂಬಾ ಮೌನವಾಗಿರುತ್ತಿದ್ದೆವು. ಆಗ ಮೌನವೇ ಹಿತವೆನಿಸುತ್ತಿತ್ತು. ಅದೇ ಮಾತಾಗುತ್ತಿತ್ತು. ಬಹುಶಃ ಪ್ರೀತಿಯ ಆಳ ಮೌನವೆಂದೋ... ಏನೋ? ವಿಶು, ಮಾನಸಾ, ನನ್ನ ಮನಸ್ಸಿನ ಕನ್ನಡಿಯಾಗಿದ್ದಳು. ಪ್ರತಿಬಿಂಬವಾಗಿದ್ದಳು. ಅವಳು ನನ್ನ ಕಣಕಣದಲ್ಲಿಯೂ ಬೆರೆತು ಹೋಗಿದ್ದಳು.
ವಿಶು, ಅಂದು ನನ್ನ ಹುಟ್ಟಿದ ಹಬ್ಬ. ಆಗ, ಮಾನಸ ಕೊಟ್ಟ ಉಡುಗೊರೆ ಏನು ಗೊತ್ತೆ...? `ನವಿಲು ಗರಿ..!' ಅದರ ಕೆಳಗೆ ಬರೆದಿದ್ದಳು `ಮನಸ್ಸಿನ ಪುಟಗಳ ನಡುವೆ ನೆನೆಪಿನಾ ನವಿಲುಗರಿ' ಎಂದು. ವಿಶು, ಇದಕ್ಕಿಂತ ದೊಡ್ಡ ಉಡುಗೊರೆ ಬೇರೆ ಯಾವುದಿದೆ? ಅದೇನೋ.. ಅವಳಿಗೆ `ರಾಧೆ-ಮಾಧವ' ಎಂದರೆ ಬಹಳ ಇಷ್ಟ. ಅವರಿಬ್ಬರ ಪ್ರೀತಿಯ ಸಂಕೇತವನ್ನೇ ಮಾನಸಾ ನನಗೆ ಕೊಟ್ಟಿದ್ದು. `ರಾಧೆ, ಮಾಧವನನ್ನು ಆರಾಧಿಸುತ್ತಿದ್ದಳು. ಪ್ರೀತಿಯ ಉನ್ನತ ಮಟ್ಟ ಆರಾಧನೆಯೇ ಅಲ್ವಾ ವಿಶು? ರಾಧೆಯ ಕಣ್ಣಂಚಿನಿಂದ ಮಾತ್ರ ಮಾಧವ ದೂರವಾದ, ಆದರೆ ಅವಳ ಮನಸ್ಸಿನಲ್ಲಿ ಮಾಧವ ಶಾಶ್ವತ. ಹಾಗೆಯೇ ವಿಶು, ನನ್ನ ರಾಧೆಯು ನನ್ನಿಂದ ದೂರವಾದರೂ, ಅವಳು ಸದಾ ನನ್ನಲ್ಲಿಯೇ ಇರುತ್ತಾಳೆ. ಅವಳ ನೆನಪು ಸದಾ ಹಸಿರು.
ಅವಳು ಕೂಡಾ ತನ್ನೆಲ್ಲಾ ಪ್ರೀತಿಯನ್ನು ನನಗೆ ಧಾರೆ ಎರೆದಿದ್ದಳು. ಒಂದು ದಿನ ವಿಶು, ಅವಳು ಊರಿಗೆ ಹೋಗಿದ್ದಳು.(ನನಗದು ತಿಳಿದಿರಲಿಲ್ಲ). ಆ ದಿನ ನನಗವಳು ಸಿಗಲಿಲ್ಲ. ಅಂದು ನೀ ನನ್ನ ಪರಿಸ್ಥಿತಿ ನೋಡಬೇಕಿತ್ತು. ನನ್ನ ಮನಸ್ಸು ನೀರಿನಿಂದ ಮೇಲೆ ಬಿದ್ದ ಮೀನಿನ ಪರಿಸ್ಥಿತಿಯಂತಿತ್ತು. ಆದರೆ, ಮರುದಿನ ಊರಿಂದ ವಾಪಾಸ್ಸು ಬಂದ ಮಾನಸಾಳ `ಮಾನಸಾ, ನಾ ಜ್ಞಾಪಕ ಇದ್ದೀನಾ? ಅಂತ ಸುಮ್ಮನೆ ರೇಗಿಸಿದೆ. ಅದಕ್ಕೆ ಅವಳ ಉತ್ತರವೇನು ಗೊತ್ತಾ ವಿಶು? `ಅಲ್ವೋ.. ನಾ ನಿನ್ನ ಮರೆತರೆ ತಾನೆ, ಜ್ಞಾಪಿಸಿಕೊಳ್ಳೊದಿಕ್ಕೆ..? ಎಂದಳು. ಎಂಥಹ ಅರ್ಥಗರ್ಭಿತ  ಮಾತು ಅಲ್ವಾ? ಅವಳ ಮಾತಿನ ಶೈಲಿಯೇ ಹಾಗಿತ್ತು. ಪ್ರೀತಿ ಇದ್ದೆಡೆ ನಂಬಿಕೆ, ಅನುಮಾನಗಳು ಇದ್ದೇ ಇರುತ್ತದೆಯೆಂದು, ಪ್ರೀತಿಯನ್ನು ಪ್ರೀತಿಯಿಂದಲೇ ಹೇಳುತ್ತಿದ್ದಳು. ಇಂಥಹ ಮಾತುಗಳಿಂದ ಒಂದೊಂದು ಸಲ ನನಗೆ ಅವಳದು ವಯಸ್ಸಿಗೆ ಮೀರಿದ ಬುದ್ಧಿವಂತಿಕೆಯ ಮಾತುಗಳೇನೋ..? ಎಂದು ಭಾಸವಾಗುತ್ತಿತ್ತು.
ವಿಶು, ಕಣ್ಣಿಗೆ ಕಾಣದಿರೋ.... ಕಿವಿಗೆ ಕೇಳಿಸದಿರೋ..... ಈ ಭಾವನಾತ್ಮ ಪ್ರೀತಿ ನಮ್ಮಿಬ್ಬರನ್ನು ಪರಸ್ಪರ ಪ್ರೀತಿಯಿಂದಲೇ ಬಂಧಿಸಿತು. ಬಂಧಿಸಿ ನಮ್ಮಿಬ್ಬರಲ್ಲಿ ನಂಬಿಕೆಯನ್ನು ಸೃಷ್ಠಿಸಿತು. ಅದು ಮುಂದಿನ ಕನಸಿನ ಗೂಡನ್ನು ಕಟ್ಟಲು ಪ್ರೇರೇಪಿಸಿತು. ಇಷ್ಟೆಲ್ಲ ಮಾಡಿದ ಈ ಪ್ರೀತಿ ಕೊನೆಗೆ.....? ಇದಕ್ಕೆ `ಅತಿ' ಅನ್ನೋ ಅರ್ಥ ಕೊಟ್ಟು `ಅವನತಿ'ಯೆಡೆಗೆ ಮುಖ ಮಾಡಿಸಿತು.
ಹೀಗೆ.... ಹಲವು ವರ್ಷಗಳು ಕಾಲಗರ್ಬದಡಿ ಹೂತು ಹೋದವು ವಿಶು. ಜಗದ ನಿಯಮದಂತೆ ಅನೇಕ ಬದಲಾವಣೆಗಳು, ಪರಿವರ್ತನೆಗಳು ನಮಗರಿವಿಲ್ಲದೆ ನಡೆದವು. ಅಂದು ಅನಿವಾರ್ಯ ಕಾರಣದಿಂದ ಪರಸ್ಪರ ದೂರಾದ ನಾವು, ಕೆಲ ದಿನಗಳ ಹಿಂದೆ ಆಕಸ್ಮಿಕವಾಗಿ ಭೆಟ್ಟಿಯಾದೆವು. ತುಂಬಾ ಚೆನ್ನಾಗಿಯೇ ಮಾತನಾಡಿದಳು. ಅವಳ ದೃಷ್ಠಿಯಲ್ಲಿ ಅಪರಾಧಿ ಸ್ಥಾನದಲ್ಲಿದ್ದ ನಾನು, ಅವಳ ಜೊತೆ ಸರಿಯಾಗಿ ಮಾತನಾಡದೆ ಅಲ್ಲಿಂದ ಕಾಲ್ಕಿತ್ತೆ. ನಂತದ ಅವಳನ್ನು ದೂರವಾಣಿ ಮೂಲಕ ಸಂಪಕರ್ಿಸಿ ಕ್ಷಮೆ ಕೇಳಿದೆ.(ಸಿಕ್ಕಾಗ ಮಾತನಾಡದೇ ಇದ್ದುದ್ದಕ್ಕೆ ತುಂಬಾ ಹೊತ್ತು ಮನಸ್ಸು ಬಿಚ್ಚಿ ಮಾತನಾಡಿದೆ) ಅವಳು ನನ್ನ ಪ್ರೀತಿ ಮರೆತಿಲ್ಲವೇನೋ..... ಅಂದುಕೊಂಡೆ. ಹೀಗೆ ದಿನಗಳು ಉರುಳುತ್ತಿದ್ದವು.
ನನಗೆ ಅವಳ ನೆನಪು ಮತ್ತೆ ಮತ್ತೆ, ದಿನದಿಂದ ದಿನಕ್ಕೆ `ಅತಿ'ಯಾಗುತ್ತ ಹೋಯಿತು. ಆ `ಅತಿ' ಅನ್ನುವುದು ಪರಾಕಾಷ್ಠೆಯ ಹಂತ ತಲುಪಿತು. ಅವಳ ಜೊತೆ ಮಾತನಾಡಲೇ ಬೇಕು ಎಂದು ಮನಸ್ಸು ಚಡಪಡಿಸುತ್ತಿತ್ತು.ಪ್ರಾರಂಭದಲ್ಲಿ ಚೆನ್ನಾಗಿಯೇ ಮಾತನಾಡಿದ ಅವಳು, ಒಮ್ಮೆಲೆ ಸಿಟ್ಟಿಗೆದ್ದಳು. ಏಕೆ.. ಏನಾಯ್ತು? ಅಂತ ಗೊತ್ತಾಗಲಿಲ್ಲ. ಹಾಗಂತ ನಾನವಳಲ್ಲಿ ನನ್ನ ಯಾವ ವಿಷಯವನ್ನು ಹೇಳಲಿಲ್ಲ. ಯಾಕಾಗಿ ಅವಳು ಹಾಗೆ ಮಾಡಿದಳು? ಅಂತ ತುಂಬಾ ಯೋಚಿಸಿದೆ. ಉತ್ತರ ದೊರೆಯಲಿಲ್ಲ... ಮನಸ್ಸಲ್ಲೆ ಅತ್ತು, ನೊಂದುಕೊಂಡೆ.
ವಿಶು, ಆ ದಿನಗಳಲ್ಲಿ ಅವಳು ನನಗೆ, ನಾನು ಅವಳಿಗೆ ಹೀಗೆ ಪರಸ್ಪರ ಒಬ್ಬರಿಗೊಬ್ಬರು ಪ್ರತಿಯೊಂದು ಆಗಿರುತ್ತಿದ್ದೆವು. ಅವಳು ಸದಾ ನನ್ನ ಜೊತೆ ಮಾತನಾಡುತ್ತಿದ್ದಳು. ಸುಳ್ಳೇ ನನ್ನ ರೇಗಿಸುತ್ತಿದ್ದಳು. ಇಡೀ ಜಗತ್ತಿನಲ್ಲಿ ಎಂದೂ.... ಯಾರೂ.... ಪ್ರೀತಿಸದಷ್ಟು ನಾನು ಅವಳನ್ನು, ಅವಳ ನನ್ನನ್ನು ಪ್ರೀತಿಸುತ್ತಿದ್ದಳು. ಪರಸ್ಪರ ಪೂಜಿಸುತ್ತಿದ್ದೆವು... ಆರಾಧಿಸುತ್ತಿದ್ದೆವು... ಆದರೆ, ಅಂತಹ ಪ್ರೀತಿ ಇಂದು...? ಈ ದಿನಗಳಲ್ಲಿ....?
ನನಗೊಂದು ಅರ್ಥವಾಗುತ್ತಿಲ್ಲ ವಿಶು. ಆದರೆ ನನಗವಳು ಬೇಕು. ಅವಳ ಪ್ರೀತಿ ನನಗೆ ಬೇಕು. ಈಗಷ್ಟೇ ಅಲ್ಲ... ಜೀವನ ಪರ್ಯಂತ ಅವಳ ಜೊತೆಯಲ್ಲಿಯೇ ಇರಬೇಕು. ದಿನದಿಂದ ದಿನಕ್ಕೆ ಅವಳ ನೆನಪು ಹೆಚ್ಚಾಗ್ತಾ ಇದೆ. ಅವಳ ಜೊತೆ ಯಾವಾಗ ಪ್ರೀತಿಯಿಂದ ಮಾತನಾಡುವೆನೋ... ಅವಳ ಮುಖ ಯಾವಾಗ ನೋಡುವೆನೋ.... ಎಂದೆನಿಸುತ್ತಿದೆ. ಇಷ್ಟು ವರ್ಷಗಳ ಕಾಲ ತಟಸ್ಥವಾಗಿದ್ದ ನನ್ನ ಮನಸ್ಸು ಈಗ ಯಾಕೆ ಹೀಗಾಡುತ್ತಿದೆ? ಹೇಳು ವಿಶು, ಹೇಳು. ನನ್ನ ಹೃದಯದಲ್ಲಿ ಮೂಡಿದ ಪ್ರಥಮ ಪ್ರೇಮ ಅದು ಅಂತಲಾ...? ಅಥವಾ, ಆ ಪ್ರೀತಿನೆ ಹಾಗೆನಾ...? ಗೊತ್ತಿಲ್ಲ, ಒಟ್ಟಾರೆ, ನನ್ನ ಹೃದಯ, ನನ್ನ ಪ್ರಾಣ, ನನ್ನ ಜೀವ, ನನ್ನ ಉಸಿರು ಆದಂಥ ನನ್ನ ಪ್ರೀತಿ ನನಗೆ ಬೇಕು ಅಷ್ಟೆ!
ಪ್ರೀತಿ ಬದುಕಲೇ ಬೇಕು... ಬದುಕಿ ಪ್ರೀತಿಸಬೇಕು
ನೋವ ನುಂಗಲೇ ಬೇಕು... ಅಲ್ಲೂ ಅವಳಿರಬೇಕು..
ಎದೆಯ ಪುಸ್ತಕದ ಪುಟಗಳಲ್ಲಿ, ಅವಳು ಬರೆದ ನೂರು ಸಾಲು
ಪ್ರತಿ ಸಾಲಿನಲ್ಲೂ ನಾನಭವಿಸೋ ಅವಳ ನೆನಪೆ ನನ್ನ ಸೋಲು
ಆಸೆಗೆ ನೆಲೆಯಿಲ್ಲ.. ಈ ಪ್ರೀತಿಗೆ ಬೆಲೆಯಿಲ್ಲ...!
ವಿಶು, ಅವಳ ನೆನಪು ನನಗೆ `ಅತಿ'ಯಾದಾಗ, ಹಿಂದಿನ ದಿನಗಳೆಲ್ಲ ಮರುಕಳಿಸಿ ಹೀಗೆಲ್ಲ ಭಾವನೆಗಳ ಕಟ್ಟೆಯೇ ಒಡೆದು ಬಿಡುತ್ತವೆ. ಹಾಗೆಯೆ, ವಾಸ್ತವದ ಬಗ್ಗೆ ಯೋಚನೆ ಮಾಡಿದಾಗ- ಆದದ್ದೆಲ್ಲ ಒಳ್ಳೆಯದಕ್ಕಾಗಿಯೇ ಆಗಿದೆಯೇನೋ... ಅಂತ ಅನಿಸುತ್ತದೆ. ಆಗ ಅವಳೆಲ್ಲೆ ಇರಲಿ, ಹೇಗೆ ಇರಲಿ ಸಂತೋಷವಾಗಿ ನಗ್ತಾ ಇದ್ರೆ ಸಾಕು. ಅವಳಿಗಾಗಿ, ಅವಳ ಒಳಿತಿಗಾಗಿ, ದೂರದಿಂದಲೇ ಹಾರೈಸುತ್ತ, ಭಗವಂತನಲ್ಲಿ ಪ್ರಾಥರ್ಿಸಿಕೊಳ್ಳೋಣ ಅನಿಸುತ್ತದೆ.
ಇವುಗಳ ಜಂಜಾಟದಲ್ಲಿ ವಿಶು, ಏನು ಮಾಡಬೇಕೆಂದೆ ತೋಚುತ್ತಿಲ್ಲ. ಆದರೂ ನಗು ನಗುತ್ತಾ ಇರುತ್ತೇನೆ. ಯಾಕೆ ಗೊತ್ತಾ? ನನ್ನ ಮುಖದಲ್ಲಿ ಆ ನೋವಿನ ಗೆರೆ ಕಾಣಬಾರದು, ನನ್ನ ನೋವಿನಲ್ಲಿ ಇನ್ನೊಬ್ಬರು ಬಾಗಿಯಾಗಬಾರದು ಅಂತ! ಮುಖದಲ್ಲಿ ನೋವಿನ ಗೆರೆ ಕಾಣದೆ ಇರಬಹುದು, ನನ್ನ ನೋವಿನಲ್ಲಿ ಇನ್ನೊಬ್ಬರು ಭಾಗಿಯಾಗದೆ ಇರಬಹುದು. ಆದರೆ, ಆ ನೋವು, ಯಾತನೆ, ಅಳು ನನ್ನಲ್ಲೆ ಇದ್ದೇ ಇರುತ್ತದೆ ಅಲ್ವಾ? ಅದಕ್ಕಾಗಿ ಬೇಡುವೆ ಆ ದೇವರ,
ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು..... ಎಂದು!
ನನಗೊತ್ತು ವಿಶು, `ನಿನಗೆ ನನ್ನ ನೋವಿನ ಕಲ್ಪನೆ ಇರಬಹುದು, ಆದರೆ ಅದರ ಆಳ ತಿಳಿಯದು ಎಂದು! ಆದರೂ, ಇಲ್ಲಿ ಬರೆದಂತಹ ಪ್ರತಿಯೊಂದು ಸಾಲುಗಳು ಕೂಡಾ ನಿನ್ನ ಪಾದದ ಮೇಲಿಟ್ಟ ಪುಟ್ಟ ಪಾರಿಜಾತ. ಆ ಕಾರಣ ಹಗುರವಾಗಿ ಮಾತ್ರ ತಿಳಿಯಬೇಡ. ದಯವಿಟ್ಟು.... ದಯವಿಟ್ಟು..... ದಯವಿಟ್ಟು...

ಬುಧವಾರ, ಮೇ 1, 2013


ಪ್ರೇಮಾಗ್ನಿ...

ದಾವಾಗ್ನಿಯ ಬೇಗುದಿಗೆ ಸಿಲುಕಿ,
ಕರಕಲಾಯಿತೇ ಬದುಕು...?
ಹೃನ್ಮನಗಳಲ್ಲಿ ಬಿಡಿಸಿದ ಚಿತ್ರ
ಕಂಬನಿಗೆ ಅಳಿಸಿ ಹೋಯ್ತೇ...?

ಆಗಿಲ್ಲ ಯಾವೊಂದು ಆಕಸ್ಮಿಕವು
ವಿನಿಮಯವೇ ಇದ್ದಿಲ್ಲ ಸಿನಿಕವು
ಎದುರಾದ ಸ್ವಾಭಿಮಾನದ ಕಿಚ್ಚು
ಮೇಲೇಳದಾಗಿಸಿದೆ ಮನದ ಹುಚ್ಚು


ಬೆತ್ತಲಾಗಿದೆ ಬದುಕು
ಅರಿಯದ ಮಾಯೆಗೆ ಸಿಲುಕಿ
ಅಂತರಪಟ ಸರಿದಾಗ ನಿಲರ್ಿಪ್ತ
ಯಾಕೆ ಬೇಕು ಅನ್ಯತಾ ತಾಕಲಾಟ?

ಹುಚ್ಚೆದ್ದು ಕುಣಿವ ಅಲೆಗಳ ಆರ್ಭಟ
ಕೆಚ್ಚೆದೆಯಲಿ ಉಳಿಸಿದೆ ದಿಟ್ಟಹಠ
ಸೋಲು-ಗೆಲುವಲ್ಲ ಬದುಕಿನ ಹೋರಾಟ
ಗೆದ್ದರೆ ಮೆಲ್ಲುಸಿರು, ಸೋತರೆ ನಿಟ್ಟುಸಿರು.... 

ಮಂಗಳವಾರ, ಏಪ್ರಿಲ್ 30, 2013

ನಿಶ್ಯಬ್ದದ  ವೇದನೆ 

ದು ಇಷ್ಟಪಟ್ಟು ಆಹ್ವಾನಿಸಿಕೊಂಡ ಯಾತನೆ.... ಸ್ಥಿಮಿತ ಕಳೆದುಕೊಂಡ ಮನಸ್ಸು ಅರೆ ಹುಚ್ಚರಂತೆ ಅಲೆದಾಡುತ್ತದೆ.... ಒಮ್ಮೊಮ್ಮೆ ನೆನಪಿನ ಅಲೆಯಲ್ಲಿ ತೇಲಾಡಿದರೆ.... ಇನ್ನೊಮ್ಮೆ ಧುತ್ತೆಂದು ಆವರಿಸಿ ಬಿಡುತ್ತದೆ ದುಃಖದ ಕಾರ್ಮೋಡ .....!! ಇವುಗಳೇ ನನ್ನ ಬಾಳ ಸಂಗಾತಿಗಳು.... ಒಂಟಿ ತನಕೆ ಜೊತೆಯಾಗೋ ವಿಷಾದದ ಅಲೆಗಳು...

ಇಲ್ಲಿ ನಾನು ಎಂಬುದು ನೆಪ ಮಾತ್ರ. ನನ್ನದೆಂಬುದು ಏನೂ ಇಲ್ಲ. ಆದರೂ ಭಗವಂತ ಕೊಟ್ಟ ಈ ಬದುಕನ್ನು ಪ್ರೀತಿಸುತ್ತೇನೆ. ಬದುಕಿಗೆ ಆಸರೆಯನ್ನು ಹುಡುಕುತ್ತೇನೆ. ಸುಂದರ ಕನಸನ್ನು ಕಾಣುತ್ತೇನೆ. ನಾನು ಎಂಬ ಬದುಕು ನೆಪ ಮಾತ್ರವಾದರೂ.... ಅದಕ್ಕೆ ಸ್ವಾರ್ಥದ ಲೇಪ ಬಳಿದು, ಬಣ್ಣಬಣ್ಣದ ಚಿತ್ತಾರ ಮೂಲಕ ಅದನ್ನು ಅಲಂಕರಿಸಲು ಇಷ್ಟಪಡುತ್ತೇನೆ.

ಅದು ಇಷ್ಟಪಟ್ಟ ಬಣ್ಣ ಎನ್ನುವುದಕ್ಕಿಂತ, ಪ್ರಕೃತಿ ವರವಾಗಿ ನೀಡಿದ ಬಣ್ಣ. ಸಂಭ್ರಮದ ಮೆರವಣಿಗೆಯಿಂದ ಅದನ್ನು ಮನದ ಕೋಣೆಗೆ ಸ್ವಾಗತಿಸಲು ಬಯಸಿದೆ. ಮನಸೂರೆಗೊಂಡ ಅದರ ವೈಯ್ಯಾರ, ಹೃದಯದಲ್ಲಿ ಚಿತ್ತಾರವನ್ನೆ ಬಿಡಿಸಿಬಿಟ್ಟಿತು. ಹಮ್ಮು-ಬಿಮ್ಮಿಲ್ಲ ಅದರ ಓರೆ ನೋಟ ಮೈ-ಮನವೆಲ್ಲ ತುಂಬಿಕೊಂಡಿತು. ಕಣ್ಣಂಚಿನ ನೋಟದ ಬಣ್ಣವೇ ತಾನೆಂದು ಒಲವಿನಾ ಗೀತೆ ಹಾಡಿತು. ಹೃದಯ ಸಮ್ಮಿಲನಕ್ಕೆ ಭಾಷ್ಯ ಬರೆಯಲು ಸ್ವಾಭಿಮಾನದ ಮುನ್ನುಡಿ ಇಟ್ಟಿತು. ಅತ್ತಾಗ, ನಕ್ಕಾಗ ಮೌನವಾಗೇ ಹುರುದುಂಬಿಸಿ, ಸ್ಪಂದಿಸಿದ ಆ ತಿಳಿಮುಗಿಲ ಬಣ್ಣ, ಇಂದು......
ಒಡಲಾಳದ ಕತ್ತಲಲ್ಲಿ ಹೂತು ಹೋಗುತ್ತಿದೆ! ಬದುಕ ಗೂಡಿಗೆ ಕೈ ಹಿಡಿದು ಕರೆತರಲು ಅಣಿಯಾದ ಮನಸ್ಸಿಗೆ ರಾಹುಕಾಲ ಬಂದೆರಗಿದೆ.
ಇಂಥಹ ತರಹೇವಾರಿ ಹುಚ್ಚು (ಭರವಸೆಯ) ಕಲ್ಪನೆಗಳು ಬದುಕಿನ ಗಾಲಿಗಳನ್ನು ಎಳೆಯುತ್ತವೆ. ಎದುರಾಗೋ ಆಕಸ್ಮಿಕಗಳಿಗೆ ಮೌನವಾಗಿ ಸ್ಪಂದಿಸುತ್ತ ಗುರಿಯಿಲ್ಲದ ಕಡೆ ಪಯಣಿಸುತ್ತವೆ. ಬಟ್ಟಬಯಲಲ್ಲಿ ಏಕಾಂಗಿ ನಡೆ..... ನಟ್ಟ ನಡುರಾತ್ರಿಯಲಿ ಭೀಭತ್ಸ ನೋಟ.... ಧೋ ಎಂದು ಸುರಿವ ಸಲಿಲದಲಿ ಜ್ವಾಲಾಮುಖಿ ಸ್ಪೋಟ.... ಭಾರದ ಹೆಜ್ಜೆಯಿಡುತ, ದಿಕ್ಕು ದೆಸೆಯಿಲ್ಲದೆ ಅಲೆವಾಗ ಕೆನ್ನೆಯನು ತೋಯಿಸುವ ಆ ಕಣ್ಣೀರ ಹನಿಗಳು, ಆ ಬಯಲಲ್ಲಿ... ನಡುರಾತ್ರಿಯಲಿ... ಸಲಿಲದಲಿ ಯಾರಿಗೂ ತೋರದು. ಮೂಕ ಮನಸಿನ ಭಾವನೆಗಳನ್ನು ಅಲ್ಲೆ ಮಡುಗಟ್ಟಿಸಿ ಏಕಾಂಗಿಯ ಹೆಜ್ಜೆಯಿಡುವಾಗ, ನೋವಿನ ಕತ್ತಲೆ ಆವರಿಸಿ ಬಿಡುತ್ತವೆ. ಪ್ರಕ್ಷುಬ್ಧಗೊಂಡ ಮನದ ಕೊಳದಲ್ಲಿ ಜಲಧಾರೆಯ ಭೋರ್ಗರೆವ ನರ್ತನ ಪ್ರಾರಂಭವಾಗುತ್ತವೆ. ಸಂದರ್ಭದಲ್ಲೆಲ್ಲ ನಿಂತಲ್ಲೆ, ಕೂತಲ್ಲೆ ಈ ಭೂಮಿ ನನ್ನ ಹಾಗೆ ನುಂಗಬಾರದಾ? ಎಂದು ಪ್ರಾರ್ಥಿಸುತ್ತೇನೆ . ಈ ನಿಶ್ಯಬ್ದದ ವೇದನೆ ಆ ಭಗವಂತನಿಗೆಲ್ಲಿ ಕೇಳಿಸಿತು...?
ಭಾವ ಶರಧಿಯಲ್ಲಿ ಎದ್ದ ಅಲೆಗಳು, ಮುಸ್ಸಂಜೆಯ ಅಸ್ತಕ್ಕೆ ಭೋರ್ಗಯುತ್ತವೆ. ಭರವಸೆಯ ಮುಂಜಾನೆಗೆ ಕಾದು ಕುಳಿತು, ಕಾಗುಣಿತದ ಕೂಡು-ಕಳೆಯುವಿಕೆಯ ಲೆಕ್ಕಾಚಾರದಲ್ಲಿ ಮುಳುಗುತ್ತವೆ. ಉದಯದ ಬೆಳಕು ಹರಿಯುತ್ತಿದ್ದಂತೆ ಮತ್ತೆ ಕನಸುಗಳು ಗರಿಬಿಚ್ಚಿ, ಹುಚ್ಚೆದ್ದು ಕುಣಿಯುತ್ತವೆ. ಕನಸು ನನಸಾಗಿಸೋ ಛಲ, ಆದರೆ, ಸ್ವಾಭಿಮಾನದ ಗೋಡೆ... ಧಿಕ್ಕರಿಸುವ ಛಾಟಿ ಏಟು... ಹೆಪ್ಪುಗಟ್ಟಿದ ದುಗುಡ... ಇವೆಲ್ಲ ತೊಡರಾಗುತ್ತಿವೆ!
ಇವುಗಳ ನಡುವೆಯೇ ಕತ್ತಲಾವರಿಸಿದ ಮನದ ಕೋಣೆಯಲಿ ಮೊಂಬೆಳಕಿನ ಬತ್ತಿ ಹಚ್ಚಲೇ ಬೇಕು. ಕರಕಲಾಗಿ ಬಿದ್ದ ಎಷ್ಟೋ ಕನಸುಗಳು ಜೀವಂತಿಕೆ ಪಡೆಯಬೇಕು. ಅದಕ್ಕೆ ಆ ನನ್ನ ಒಲವಿನ ಬಣ್ಣ ಹೃದಯ ಸೇರಲೇ ಬೇಕು............

ಭಾನುವಾರ, ಏಪ್ರಿಲ್ 28, 2013


ಹೀಗೊಂದು ಮುನ್ನುಡಿ

ಗೀಚಿದ ಭಾವನೆ.....

ನಿದ್ದೆಯನ್ನು ಹಾಯಾಗಿಸುವ ಕನಸುಗಳಿಗೂ... ನಿದ್ದೆಯನ್ನು ಒದ್ದೋಡಿಸುವ ಕನಸುಗಳಿಗೂ.... ವ್ಯತ್ಯಾಸ ಬಹಳ. ತಾಯ ಗರ್ಭದಲ್ಲಿ ಮುದ್ದೆಯಾಗಿ ಮಲಗಿದಾಗ ಕಂಡ ಕನಸುಗಳ್ಯಾವುದು ನೆನಪೇ ಇಲ್ಲ. ಒಡಲಿಂದ ಒಡಮೂಡಿ ಮಡಿಲಲ್ಲಿ ಬೆಚ್ಚನೆ ಮಲಗಿ ಉಚ್ಚೆ ಹೊಯ್ದು ರಚ್ಚೆ ಹಿಡಿಯುವ ವಯಸ್ಸಲ್ಲಿ ಕಾಣುತ್ತಿದ್ದದ್ದು ಬಹುಶಃ ಹಾಲು ಕುಡಿಯುವ ಕನಸ್ಸೊಂದೇ! ಹಾಲುಗಲ್ಲದ ಕಂದಮ್ಮಗಳು ನಿದ್ದೆಯಲ್ಲಿ ಬಾಯಿ ಅಲುಗಾಡಿಸುವುದು ಕಂಡಾಗ ಹಾಗೆಯೇ ಅನಿಸುತ್ತದೆ. ಎಷ್ಟು ಸತ್ಯವೋ ನಾನರಿಯೇ...? ಪಿಟಿಪಿಟಿ ಹೆಜ್ಜೆಗಳನ್ನು ಇಡುತ್ತ, ಅನ್ಯಗ್ರಹದ ಭಾಷೆಗಳನ್ನು ಮಾತನಾಡುತ್ತ, ನಲಿಯುವ ವಯಸ್ಸಲ್ಲಿ ಕಂಡಿದ್ದು ತಿಂಡಿ-ಉಂಡಿ-ಚೆಂಡು ಅಷ್ಟೇ ಅನಿಸುತ್ತದೆ.
ಆ ಕುತೂಹಲದ ಕಣ್ಣುಗಳಿಗೆ ಕೌಮುದಿಯಲ್ಲಿ ತೇಲಾಡುವ ಚಂದ್ರನೇ ಎಲ್ಲ. ಬೆಳೆಯುತ್ತ ಬೆಳೆಯುತ್ತ ನಿದ್ದೆಗೆಡೆಸುವ ಕನಸುಗಳು ಅಂಟುತ್ತ ಹೋದವು. ಕಾಲ ಗರ್ಭದಲ್ಲಿ ಕೊರಗಿ ಕೊರಗಿ ಕರಗಿದ ಕನಸುಗಳೆಷ್ಟೋ...? ಕಾಪಿಟ್ಟ ಕನಸುಗಳ ಜೊತೆ ಕೂಡುತ್ತ ಇಮ್ಮಡಿಯಾಗುತ್ತ ಬೆಳೆಯುತ್ತಿರುವ ನನ್ನ ಕನಸುಗಳು, ಮನಸ್ಸೆಂಬ ಕೋಣೆಯಲ್ಲಿ ತುಂಬಿಟ್ಟಿರುವ ಬಣ್ಣದ ರಾಶಿಯೋ....? ವಿಧವಿಧದ ಪುಷ್ಪಗಳ ಪಲ್ಲಕ್ಕಿಯ ಮೇಲೆ ತೂಗುವ ಚಿತ್ತಾರದ ಚುಕ್ಕಿಗಳೋ...?
`ಸಾಕಿಷ್ಟು ಕನಸುಗಳು' ಎಂದು ಕದ ಮುಚ್ಚೋಣ ಎಂದರೆ, ಧುತ್ತೆಂದು ಎದುರಾಗಿ, ಮುಚ್ಚಲಾಗದೆ ಮತ್ತೆ ಕದ ತೆರೆದು ಬಿಡುತ್ತೇನೆ. ಬಂದಷ್ಟು ಬರಲಿ, ತೊರೆಯಾಗಿ ಹರಿದರೂ ಚಿಂತೆಯಿಲ್ಲವೆಂದು. ತುಂಬಿ ತುಳುಕುತ್ತಿದೆಯೆಂದು ಗೋಡೆಯನ್ನು ಕೆಡವಿ ಬಿಡಲೂ ಆಗದು... ಯಾಕೆಂದರೆ, ನನ್ನೆದೆ ಬಟಾಬಯಲಲ್ಲ. ಆದರೆ, ಸೋತು ಸುಣ್ಣವಾದ ಕನಸುಗಳು ಸಹ ಕರಕಲಾದರೂ ಇದೆ ಕೋಣೆಯಲ್ಲಿ ಬಿದ್ದಿವೆ....!
ಏನೇ ಇರಲಿ, ನಿದ್ದೆಗೆಡೆಸುವ, ತಿದ್ದಿ ತೀಡುವ, ಮುದ್ದುಗರೆಯುವ, ಮನಸ್ಸು ಮುದ್ದೆಮಾಡುವ, ನಗಿಸುವ, ಕಣ್ಣರೆಪ್ಪೆ ತೋಯಿಸುವ ನನ್ನ ಕನಸುಗಳು ಕರೆಯದೇ ಬರುತ್ತವೆ...... ಸ್ವಾಗತಿಸುತ್ತ ನಾನೇ......