ಬುಧವಾರ, ಡಿಸೆಂಬರ್ 31, 2014

ಮೌನ ಗರ್ಭದಲಿ........!!!!!!!!!

ಯಾಕೋ..... ಮಳೆ ಎಂದರೆ, ಮನಸ್ಸೇ ಹುಚ್ಚೆದ್ದು ಕುಣಿಯುತ್ತದೆ. ಮೈ-ಮನವೆಲ್ಲ ಪುಲಕಿತವನ್ನಾಗಿಸುತ್ತದೆ. ಸೃಷ್ಠಿ ಕ್ರಿಯೆಯಲ್ಲಿ ಮಳೆಗಿರುವ ಉತ್ಕೃಷ್ಠ ಸ್ಥಾನ ಬಹುಶಃ ಇನ್ಯಾವುದಕ್ಕೂ ಇಲ್ಲವೇನೋ....!
ಮುಂಗಾರು ಪ್ರಾರಂಭವಾಗುವುದೇ ತಡ, ಸದ್ದಿಲ್ಲದೆ ಇಳೆ ಹಸಿರಾಗುತ್ತಾಳೆ. ಬಿರು ಬಿಸಲ ಬೇಸಿಗೆಯಿಂದ ಬಾಯ್ತೆರೆದ ಬರಡು ಜಾಗದಲ್ಲೆಲ್ಲ ಹಸಿರು. ದೃಷ್ಟಿ ಹಾಯಿಸಿದಲ್ಲೆಲ್ಲ ಹಸಿರೋ... ಹಸಿರು...!! ಹಸಿರು ಹೊದ್ದ ಭೂಮ್ತಾಯಿ ಕಾರ್ಮುಗಿಲನ್ನೇ ದಿಟ್ಟಿಸಿ ನೋಡುವ ದೃಶ್ಯ ವರ್ಣನಾತೀತ!
ದಿನಂಪ್ರತಿ ಓಡಾಡುತ್ತಿರುವ ಸುತ್ತಮುತ್ತಲಿನ ಸ್ಥಳದಲ್ಲೆಲ್ಲ, ಈವರೆಗೆ ಇಲ್ಲದ ಹಸಿರುಗಳು ಚಿಕ್ಕದಾಗಿ ತಲೆ ಎತ್ತಿ ನಿಂತಿವೆ. ಅವುಗಳ ಮೇಲೆ ಬಿದ್ದ ಮಳೆ ಹನಿ, ಮೋಡದ ಮರೆಯಲ್ಲಿ ಇಣುಕು ಹಾಕುವ ರವಿಯ ನೋಟಕ್ಕೆ ನಾಚಿ ನೀರಾಗುತ್ತಿದೆ. ತಂಪನೆಯ ಬೀಸುವ ತಂಗಾಳಿಗೆ ಓಲಾಡುತ್ತ, ಫಳಫಳಿಸಿ ಅಲ್ಲೇ ಮರೆಯಾಗುತ್ತಿದೆ. ಪ್ರಕೃತಿಯ ಮಡಿಲಲ್ಲಿ ಸೃಷ್ಟಿಯಾಗುವ ಈ ನಿಸರ್ಗ ಸೌಂದರ್ಯಕ್ಕೆ ಮೈ-ಮನವೆಲ್ಲ ಪುಳಕ.
ಬೆಟ್ಟ-ಗುಡ್ಡಗಳೆಲ್ಲ ಮಂಜಿನಿಂದ ಆವರಿಸಿಕೊಂಡು, ಇಲ್ಲಿ ಕೇವಲ ಹಸಿರಿಗಷ್ಟೇ ಸ್ಥಾನಮಾನ... ಏನಿದ್ದರೂ ಅದರದ್ದೇ ಕಾರು ಬಾರು' ಎಂದು ತಮ್ಮ ಇರುವಿಕೆಯನ್ನೇ ಮರೆ ಮಾಚಿಸುತ್ತಾರೆ. ಭೋರ್ಗರೆದು ಸುರಿವ ವರ್ಷಧಾರೆಗೆ ಹಾದಿ-ಬೀದಿಗಳಲ್ಲೆಲ್ಲ ಹೊಂಡಬಿದ್ದು, ನೀರು ತುಂಬಿಕೊಂಡು... ಕಾರ್ಮುಗಿಲ ಮೋಡವನ್ನು ಅದರಲ್ಲಿ ಪ್ರತಿಫಲಿಸುತ್ತವೆ. ನಿಮಿಷಾರ್ಧದಲ್ಲಿ ಬಿಸಿಲು.... ಕಣ್ಣು ಮಿಟುಕಿಸುವಷ್ಟರಲ್ಲಿ ಮತ್ತೆ ವರ್ಷ...!! ಅವರಿಬ್ಬರ ಕಣ್ಣಾ-ಮುಚ್ಚಾಲೆಯಾಟ ಕಣ್ತುಂಬಿಸಿಕೊಳ್ಳುವುದೇ ಒಂದು ಹಿತಾನುಭವ. ಹಸಿ-ಹಸಿ ಮನಸ್ಸಲ್ಲಿ ಬೆಚ್ಚನೆಯ ನೆನಪುಗಳ ಮೆರವಣಿಗೆ....!! ಬಾನಂಗಳದಿ ಕಾರ್ಮೋಡ ಸರಿಯುವವರೆಗೂ....!!

ಅಘನಾಶಿನಿ ನೀ.... ಸೌಂದರ್ಯವತಿ...!!

ಇಂದಿನ ಧಾವಂತದ ದಿನಗಳಲ್ಲಿ ಪ್ರಕ್ಷುಬ್ಧಗೊಂಡ ಮೈಮನಗಳಿಗೆ ಅಘನಾಶಿನಿ' ತುಸು ನೆಮ್ಮದಿಯನ್ನು ನೀಡುವಲ್ಲಿ ಯಾವುದೇ ಸಂಶಯವಿಲ್ಲ. ವಿರಹ ತಾಳದೆ ನಲ್ಲೆಗಾಗಿ ಪರಿತಪಿಸುವ ನಲ್ಲನಂತೆ ಅರಬ್ಬೀ, ಅಘನಾಶಿನಿಯನ್ನು ಭೋರ್ಗರೆದು ಕರೆಯುತ್ತಾನೆ.
ಅವನ ಮನ ತಣಿಸಲೆಂದು `ಅಘನಾಶಿನಿ' ಅಳುಕುತ್ತ, ಬಳುಕುತ್ತ ವಯ್ಯಾರದಿಂದಲೇ ಅವನಲ್ಲಿ ಮಿಲನವಾಗುತ್ತಾಳೆ. ಆಹಾ.... ನಿಸರ್ಗ ಸೌಂದರ್ಯ ಎಂದರೆ ಇದೇ ಅಲ್ಲವೇ...!?
ಭಾವನಾತ್ಮಕ ಬೆಸುಗೆ.................
ಉದ್ಯೋಗದ ನಿಮಿತ್ತ ದೂರ ದೂರದ ಊರುಗಳಲ್ಲಿರುವವರು ವರ್ಷಕ್ಕೊಮ್ಮೆಯೋ, ಎರಡು ಬಾರಿಯೋ ಊರ 'ಮಣ್ಣ ಘಮ'ಕ್ಕೆ ಮೂಗೊಡ್ಡುತ್ತಾರೆ. ತವರಿಗೆ ತರಾತುರಿಯಿಂದ ಹೊರಟು ರಾತ್ರಿ ಇಡೀ ನಿದ್ದೆ ಮಾಡದೆ ಕಿಟಕಿ ಹೊರಗೆ ದೃಷ್ಟಿ ಹಾಯಿಸುತ್ತ, ಕೈಯ್ಯಲ್ಲಿರೋ ವಾಚಲ್ಲೋ, ಮೊಬೈಲಲ್ಲೋ ಸಮಯ ನೋಡುತ್ತ... ಯಾವಾಗ ಬೆಳಗಾಯಿತೋ ಎಂದು ಕಾತುರತೆಯಿಂದ ಕಾಯುತ್ತಿರುತ್ತಾರೆ. ಅವರ ಆ ಕಾತುರತೆಯನ್ನು ಕೊನೆಗೊಳಿಸುವುದು ಈ ಅಘನಾಶಿನಿ ತಾಯಿಯೆ! ದೊಡ್ಡಮನೆ ಘಟ್ಟದ ಹಾದಿಯಿಂದ ಬಂದರೆ ಶರಾವತಿಯು ಸೆರಗೊಡ್ಡಿ ಸ್ವಾಗತಿಸಿದರೆ, ಶಿರಸಿ-ಕಾರವಾರದ ಮಾರ್ಗದಿಂದ ಬಂದರೆ ಆಡಿದ, ಕುಣಿದ, ಕುಪ್ಪಳಿಸಿದ, ಈಜಿದ, ಗಾಳ ಹಾಕಿದ ಪಾಪನಾಶಿನಿ.... ಬಾ ಕಂದ ಎಂದು ಮಡಿಲು ಹಾಸಿ ಮಮತೆಯಿಂದ ಬರ ಮಾಡಿಕೊಳ್ಳುತ್ತಾಳೆ. ಆಕೆಯನ್ನು ಕಂಡೊಡನೆ ಕರಾವಳಿಯ ಕಂಪು, ನಮ್ಮದು ಅನ್ನೋ ಭಾವ ಸ್ವಜಾಗೃತವಾಗಿ ಬಿಡುತ್ತದೆ. ಆಕೆಯನ್ನೇ ದಿಟ್ಟಿಸಿ ನೋಡುತ್ತ ಸಾಗುವ ಆ ಕ್ಷಣದಲ್ಲಿ ಅಮಿತಾನಂದದ ಕಣ್ಣೀರು ಅರಿವಿಲ್ಲದೇ....!
ತಾಯಿ ಜೊತೆಗಿನ ಭಾವನಾತ್ಮಕ ಬೆಸುಗೆಯೇ ಅಂತಹದ್ದು...!!

ಮಂಗಳವಾರ, ಡಿಸೆಂಬರ್ 30, 2014

ಅವಳನ್ನು.... ಅವಳ ಪಾಡಿಗೆ ಬಿಟ್ಟು ಬಿಡೋಣ..... ಪ್ಲೀಸ್...!! 

ಇವೆಲ್ಲ ಆಗಬಾರದಿತ್ತು. ಆಗಿಹೋಗಿದೆ. ವಿಷಾದವೇ...! ಈ ಘಟನೆಗಳು ನಮಗೆಲ್ಲರಿಗೂ ಪಾಠವಾಗಲಿ.ಇನ್ನಾದರೂ ಪ್ರಕೃತಿ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಲಿ. ಹರಿಯುವ ನದಿಗೆ, ತೊರೆಗೆ ಎಂದೂ ತಡೆಯೊಡ್ಡುವುದು ಬೇಡ. ಸ್ವಚ್ಛಂದವಾಗಿ ಬೆಳೆದು ನಿಂತ ಮರ-ಗಿಡಗಳನ್ನು ಕಡಿಯದೇ ಅಲ್ಲಿ ಇನ್ನಷ್ಟು ಮರಗಳನ್ನು ಬೆಳೆಸೋಣ. ಪ್ರಕೃತಿ ವಿರುದ್ಧ ಈಜಿ ಜಯಸಲು ನಮ್ಮಿಂದ ಸಾಧ್ಯವಾಗದು. ಒಂದು ವೇಳೆ ಗೆದ್ದೆನೆಂದು ಬೀಗಿದರೂ ಅದು ಕ್ಷಣಿಕವೇ ಹೊರತು ನಿರಂತರವಲ್ಲ.

ನಾಗರಾಜ್ ಬಿ.ಎನ್.
ಪ್ರಕೃತಿ ಮಾತೆ ಈ ಹಿಂದೆ ಎಂದೂ ಯಾರ ಮೇಲೂ ದಬ್ಬಾಳಿಕೆ ನಡೆಸಿಲ್ಲ. ಈಗಲೂ ನಡೆಸುತ್ತಿಲ್ಲ. ಹಾಗೆಯೇ ಮುಂದೆಯೂ ನಡೆಸುವುದಿಲ್ಲ. ಹಾಗಂತ ಅವಳ ತಂಟೆಗೆ ಬಂದವರನ್ನು ಮಾತ್ರ ಅವಳು ಎಂದೂ ಬಿಟ್ಟಿಲ್ಲ. ಬಿಡುವುದೂ ಇಲ್ಲ...!!
ಪ್ರಕೃತಿ ಹೇಗಿದ್ದಾಳೋ ಹಾಗೆಯೇ ನಾವು ಅವಳನ್ನು ಸ್ವೀಕರಿಸಬೇಕು... ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು, ನಮ್ಮ ಸ್ವಾರ್ಥಕ್ಕಾಗಿ ಅವಳ ಮೇಲೆ ದೌರ್ಜನ್ಯ ಎಸಗುತ್ತ, ಅವಳ ಅಸ್ತಿತ್ವಕ್ಕೆ ಪೆಟ್ಟು ನೀಡಿದರೆ, ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ತಾಜಾ
ಉದಾಹರಣೆ... ಮಹಾರಾಷ್ಟ್ರ ಪುಣೆಯ 'ಮಾಲಿನ್' ಗ್ರಾಮ.
ಸಹ್ಯಾದ್ರಿ ತಪ್ಪಲಿನಲ್ಲಿ ವಾಸಿಸುತ್ತಿರುವ ವನವಾಸಿ ಸಮಾಜದ ಸುಮಾರು 60 ಕುಟುಂಬಗಳು ಜುಲೈ 30ರಂದು ಗುಡ್ಡ ಜರಿದ ಪರಿಣಾಮ ಸಂಪೂರ್ಣ ನೆಲಸಮವಾಗಿದೆ. 300ರಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿ, ಹೂತುಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈವರೆಗೆ ಅವಶೇಷದಡಿ ಸಿಲುಕಿರುವ ಕೇವಲ 40ರಷ್ಟು ಮೃತ ದೇಹಗಳು ಮಾತ್ರ ದೊರಕಿವೆ. ಕಾರ್ಯಾಚರಣೆ ಸಮರೋಪಾದಿಯಲ್ಲಿ ಮುಂದುವರಿದೆ.
 ಪುಣೆಯಿಂದ ಕೇವಲ 120 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಜನರು ಆಧುನಿಕತೆಗೆ ಈಗಷ್ಟೆ ತೆರೆದುಕೊಳ್ಳುತ್ತಿದ್ದರು. ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಕೃಷಿ ಬೇಸಾಯ ಮಾಡಿ ಜೀವನ ಸಾಗಿಸುತ್ತಿದ್ದರು. ತಾವು ವಾಸಿ
ಸುವ ಮನೆಗಳ ಹಿಂದೆ ಇರುವ ಇರುವ ಬೆಟ್ಟವು ಇವರಿಗೆ ಸದಾ ಕಾಲ ನೆರಳಾಗಿ ಆಸರೆ ನೀಡುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಡದೆ ಸಉರಿಯುತ್ತಿರುವ ಮಳೆಯಿಂದಾಗಿ, ಆಸರೆ ನೀಡಿದ ಬೆಟ್ಟವೇ ಇವರ ಪ್ರಾಣಕ್ಕೆ ನೆರವಾಯಿತು. ನೋಡು ನೋಡುತ್ತಿದ್ದಂತೆ ಆ ಬೆಟ್ಟ ಮುನ್ನೂರಕ್ಕೂ ಹೆಚ್ಚು ಜೀವಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು...!!
ಬೆಟ್ಟ ಕುಸಿಯಲು ಕಾರಣವೇನು.....?
ಇತ್ತೀಚೆಗೆ ಅಲ್ಲಿ ವಾಸಿಸುವ ವನವಾಸಿ ಕುಟುಂಬದವರು ಕೃಷಿ ಚಟುವಟಿಕೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುಡ್ಡದ ತಪ್ಪಲಿನಲ್ಲಿರುವ ಭೂಮಿಯನ್ನು ಕಡಿದು, ಕೊಚ್ಚಿ ಸಮತಟ್ಟು ಮಾಡಿದ್ದರು. ಅಲ್ಲದೆ, ವ್ಯವಸಾಯಕ್ಕೆ ಬೇಕಾಗುವ ರೀತಿಯಲ್ಲಿ ಬೆಟ್ಟವನ್ನು ಕಡಿದಿದ್ದರು. ಬೆಟ್ಟಕ್ಕೆ ಹೊಂದಿಕೊಂಡಿರುವ ನೂರಾರು ಮರಗಳನ್ನು ಕಡಿದು ಬೆಟ್ಟದ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದರು. ಅಲ್ಲದೆ, ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿ, ತಮ್ಮಲ್ಲಿರುವ ಶಕ್ತಿ ಪ್ರದರ್ಶಿಸಿದ್ದರು. ಸಂದರ್ಭದಲ್ಲಿ ಭಾರೀ ಗಾತ್ರದ ಯಂತ್ರಗಳು ಓಡಾಡಿ ಬೆಟ್ಟವನ್ನೇ ಅಲುಗಾಡಿಸಿತ್ತು. ಇವೆಲ್ಲದರ ಪರಿಣಾಮವಾಗಿ ಬೆಟ್ಟದ ಮಣ್ಣು ಸಡಿಲಗೊಂಡಿದ್ದವು. ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಸಡಿಲಗೊಂಡ ಮಣ್ಣುಗಳು ಕುಸಿಯತೊಡಗಿದ್ದವು. ಕ್ಷಣ ಮಾತ್ರದಲ್ಲಿ ಮಣ್ಣು, ಕೆಸರಿನಡಿ ನೂರಾರು ಜೀವಗಳು ಹೂತು ಹೋದವು..!!
ಪ್ರಕೃತಿ ತನಗೆ ಹೇಗೇ ಬೇಕೋ ಹಾಗೆ ತನ್ನ ಸುತ್ತಮುತ್ತಲಿನ ವಾತಾವರಣವನ್ನು ನಿರ್ಮಿಸಿಕೊಂಡಿರುತ್ತಾಳೆ. ಅವಳ ಪಾಡಿಗೆ ಅವಳನ್ನು ಬಿಟ್ಟು ಬಿಡಬೇಕು. ಅವಳು ಎಂದಿಗೂ ಮಾನವನ ಮೇಲೆ ತನ್ನ ಬಲ ಪ್ರದರ್ಶನ ಮಾಡಿಲ್ಲ. ಮಾನವನೇ ತನ್ನ ಸ್ವಾರ್ಥಕ್ಕಾಗಿ ಅವಳ ಮುಂದೆ ತನ್ನ ಬಲ ಪ್ರದರ್ಶನ ಮಾಡುತ್ತಾನೆ. ಕಳೆದ ವರ್ಷ ನಡೆದ ಕೇದಾರನಾಥದ ರುದ್ರ ಪ್ರಳಯಕ್ಕೂ ಕೂಡಾ ಮಾನವನ ಸ್ವಾರ್ಥವೇ ಕಾರಣ..!
ಇವೆಲ್ಲ ಆಗಬಾರದಿತ್ತು. ಆಗಿಹೋಗಿದೆ. ವಿಷಾದವೇ...! ಈ ಘಟನೆಗಳು ನಮಗೆಲ್ಲರಿಗೂ ಪಾಠವಾಗಲಿ.ಇನ್ನಾದರೂ ಪ್ರಕೃತಿ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗಲಿ. ಹರಿಯುವ ನದಿಗೆ, ತೊರೆಗೆ ಎಂದೂ ತಡೆಯೊಡ್ಡುವುದು ಬೇಡ. ಸ್ವಚ್ಛಂದವಾಗಿ ಬೆಳೆದು ನಿಂತ ಮರ-ಗಿಡಗಳನ್ನು ಕಡಿಯದೇ ಅಲ್ಲಿ ಇನ್ನಷ್ಟು ಮರಗಳನ್ನು ಬೆಳೆಸೋಣ. ಪ್ರಕೃತಿ ವಿರುದ್ಧ ಈಜಿ ಜಯಸಲು ನಮ್ಮಿಂದ ಸಾಧ್ಯವಾಗದು. ಒಂದು ವೇಳೆ ಗೆದ್ದೆನೆಂದು ಬೀಗಿದರೂ ಅದು ಕ್ಷಣಿಕವೇ ಹೊರತು ನಿರಂತರವಲ್ಲ.
ಪ್ರಕೃತಿ ಮಾತೆಯನ್ನು ಅವಳ ಪಾಡಿಗೆ ಬಿಟ್ಟು ಬಿಡೋಣ... ಹಾಗೆಯೇ, ಅವಳ ಮಡಿಲಲ್ಲಿ ಅವಳ ಮಕ್ಕಳಾಗಿ ನಾವು ಬದುಕೋಣ.... ಪ್ಲೀಸ್....!

ಹಸಿರೊಡಲ ಭಾವ.....!

ಚಿತೆಯಿಂದ ಎದ್ದು ಬಂದರೂ
ಚಿತ್ತದಲ್ಲಿಲ್ಲ ಯಾವೊಂದು ಭಾವ
ಸತ್ತು ಕಿತ್ತ ಭಾವನೆಯ ಕಳೇಬರದಿ
ಕತ್ತೆತ್ತಿ ನೋಡುತಿಹೆ ದಿಗಂತದೆಡೆ...!!
ಪಟಪಟನೇ ಹಾರಾಡಿದ ಬಣ್ಣದ ಪಟ
ಕುಳಿರ್ಗಾಳಿಗೆ ಸಿಲುಕಿ ಮಾಯವಾಗಿದೆ
ಸದ್ದಿಲ್ಲದೆ ಸುಡುತಿರುವ ಭಾವ ದೀಪ್ತಿ
ಇತಿಹಾಸ ಬರೆಯಲು ಸಜ್ಜಾಗಿದೆ...!!
ಬಳೆಯ ರಿಂಗಣಗಳಿಲ್ಲ, ಗೆಜ್ಜೆಯ ನಾದಗಳಿಲ್ಲ
ಕಾಡುವ ಸವಿ ಮಧುರ ನೆನಪುಗಳಿಲ್ಲ
ಬಿದಪ್ಪಿ ಸಂತೈಸಿ ನೇವರಿಸಿದ ಕೈಗಳಿಲ್ಲ
ರುದ್ರತಾಂಡವದ ನರ್ತನವೇ ಎಲ್ಲ...!!
ನಟ್ಟ ನಡು ದಾರಿಯಲಿ ಕತ್ತಲೆಯ ಅಧಿಪತ್ಯ
ಭಾರವಾದ ಹೆಜ್ಜೆಯಲಿ ಬದುಕು ನೇಪಥ್ಯ
ಇರಲಿರಲಿ ಇದೊಂದು ಒಬ್ಬಂಟಿ ಜೀವ
ಸ್ಮಶಾನದಲೂ ಇದ್ದಾನೆ ಆ ರುದ್ರ ದೇವ...!
ಬಟ್ಟ ಬಯಲಲ್ಲಿ ನಿಂತ ಒಂಟಿ ಗಿಡ
ಜೀವ ಜಲದ ಹಂಗಿಲ್ಲದೆ ಮರವಾಗಿದೆ ನೋಡ
ಒಡಲಾಳದ ಬೇಗುದಿಯ ಬಚ್ಚಿಟ್ಟುಕೊಂಡು
ಬೆಳೆಯುತ್ತಿದೆ ಎತ್ತರಕೆ ತಲೆಯೆತ್ತಿ ನೋಡ...!
-ನಾಗರಾಜ್ ಬಿ.ಎನ್. 

ಸಂಬಂಧಗಳು ಕೂಡಿ ಕಳೆಯುವ ಲೆಕ್ಕಾಚಾರವೇ...?
ಕಾಲಾಯ ತಸ್ಮೈ ನಮಃ.................!
 

'ಮಾನವ ಜನ್ಮ ಹಾಳು ಮಾಡಿಕೊಳ್ಳಬೇಡಿರಾ ಹುಚ್ಚಪ್ಪಗಳಿರಾ....' ಎಂಬಂತೆ ಭಗವಂತ ನೀಡಿದ ಸುಂದರ ಮಾನವ ಜನ್ಮವನ್ನು ಪ್ರೀತಿ, ಸ್ನೇಹ, ವಿಶ್ವಾಸದಿಂದ ಕಾಪಾಡಿಕೊಂಡು ಹೋಗಬೇಕು. ನಂಬಿ ಬಂದ ಬಾಳ ಸಂಗಾತಿಯ ಜೊತೆ ನಂಬಿಕಸ್ಥರಾಗಿ ಬದುಕಿನ ಬಂಡಿಯನ್ನು ಮುನ್ನಡೆಸಬೇಕು. ಮನಸ್ಸು ಮತ್ತು ದೇಹ ಒಬ್ಬರಿಗೇ ಮೀಸಲಾಗಿ ಸಮರ್ಪಣಾ ಭಾವದಿಂದ ದಾಂಪತ್ಯ ಗೀತೆಯನ್ನು ಬರೆಯಬೇಕು.....

ನಾಗರಾಜ್ ಬಿ.ಎನ್.
ಕಾಲಚಕ್ರದ ಉರುಳಾಟದಲ್ಲಿ ಬದುಕಿನ ಶೈಲಿಯೂ ಹಂತ ಹಂತವಾಗಿ ಬದಲಾಗಿಬಿಟ್ಟಿದೆ. ಪ್ರತಿಕ್ಷಣವೂ ಕೂಡಾ ಆಧುನಿಕತೆಯ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗಿ ಒದ್ದಾಡುತ್ತಿದ್ದೇವೆ. ಮಾನವ ಸಂಬಂಧಗಳೆಲ್ಲ ಕೂಡಿ-ಕಳೆಯುವ ಲೆಕ್ಕಾಚಾರವಾಗಿ, ವ್ಯವಹಾರದ ದ್ಯೋತಕವಾಗಿಬಿಟ್ಟಿದೆ. ಸಂಸ್ಕಾರ, ಸಂಸ್ಕೃತಿ ಎನ್ನುವುದು ಮಖಾಡೆ ಮಲಗಿ ಇನ್ನಿಲ್ಲವಾಗಿದೆ. 'ಪರಿವರ್ತನೆ ಜಗದ ನಿಯಮ' ಎಂದರೆ ಇದೇನಾ....!!? ಹಿರಿಯರು ನಡೆದ ಸನ್ಮಾರ್ಗಗಳು ಈಗ ಮುಸುಕು ಮುಸುಕಾಗಿ, ಕಂಡೂ ಕಾಣದಂತಾಗಿವೆ. ಅವರ ಭವ್ಯ ಪರಂಪರೆ ಅವರ ಜೊತೆ ಜೊತೆಯಲ್ಲಿಯೇ ಮಣ್ಣಾಗಿ ಇತಿಹಾಸದ ಕಾಲ ಗರ್ಭದಲ್ಲಿ ಹೂತು ಹೋಗುತ್ತಿವೆ. ಅಪ್ಪಟ ಸಾಂಪ್ರದಾಯಿಕ ಶೈಲಿಯ ಆ ಬದುಕು ಬೇಕೆನಿಸಿದರೂ ಈಗ ನಮಗೆ ಸಿಗಲಾರದು. ಈಗೇನಿದ್ದರೂ ವ್ಯಾವಹಾರಿಕ ಜಗತ್ತಿನ ಬೇಕು-ಬೇಡಗಳ ಜೀವನ ಮಾತ್ರ. ಲೌಕಿಕ ಪ್ರಪಂಚದಲ್ಲಿ ಸ್ವಾರ್ಥಕ್ಕೆ ಪ್ರಾಮುಖ್ಯತೆ ನೀಡಿ ನಮ್ಮದಾದಂತ ಸಂಸ್ಕಾರವನ್ನೇ ಅಧೋಗತಿಗೆ ಕೊಂಡೊಯ್ಯುತ್ತಿದ್ದೇವೆ.
 ಸ್ವೇಚ್ಛಾಚಾರದ ಬದುಕು ಬೇಕೇ...?
ಈ ಹಿಂದೆ ನಮ್ಮ ಶರಣರು ದೇಹವನ್ನು ದೇವಾಲಯಕ್ಕೆ ಹೋಲಿಸಿ 'ದೇಹವೆ ದೇವಾಲಯ' ಎಂದು ಹಾಡಿ ಹೊಗಳಿದ್ದರು. ದೇಹದಲ್ಲಿರುವ ಜೀವಾತ್ಮನಿಗೆ ಪರಮಾತ್ಮನ ಸ್ಥಾನ ನೀಡಿ, ಪೂಜಿಸಿ, ಆರಾಧಿಸಿ ಎಂದು ಸೂಕ್ಷ್ಮವಾಗಿ ತಿಳಿ ಹೇಳಿದ್ದರು. ಅಷ್ಟೊಂದು ಉತ್ಕೃಷ್ಠ ಸ್ಥಾನಕ್ಕೆ ಏರಿಸಿದ ದೇಹ, ಪ್ರಸ್ತುತ ದಿನಗಳಲ್ಲಿ ವ್ಯಾವಹಾರಿಕ ಸರಕಾಗುತ್ತಿರುವುದು ವಿಪಯರ್ಾಸದ ಸಂಗತಿ....! ಈ ಜಗತ್ತಿನಲ್ಲಿ ಹಣಕ್ಕಾಗಿ ಏನೆಲ್ಲ ನಡೆಯುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು ಕಾಯಾ, ವಾಚಾ, ಮನಸಾ ಜೀವನ ಪರ್ಯಂತ ಜೊತೆಯಾಗಿಯೇ ಬಾಳಿ ಬದುಕುತ್ತೇನೆ ಎಂದು ಹೇಳಿದವರು, ಎಲ್ಲ ರೀತಿ-ನೀತಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವತರ್ಿಸುತ್ತಾರೆ. ನಾಲ್ಕು ಗೋಡೆಗಳ ನಡುವೆ ಮಾತ್ರ ಸೀಮಿತವಾಗಿರಬೇಕಾದ ಕೆಲವು ವೈಯಕ್ತಿಕ ಬದುಕು, ಹಾದಿ-ಬೀದಿಯಲ್ಲಿ ಹರಾಜಾಗುತ್ತಿವೆ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ಆಡುವವರ ನಾಲಿಗೆಯ ಮೇಲೆ ಅಂಕೆಯಿಲ್ಲದೆ ಅದು ಹರಿದಾಡುತ್ತಿದೆ. ಆದರೂ ಕೂಡಾ ಇದ್ಯಾವುದರ ಪರಿವೇ ಇಲ್ಲದಂತೆ ಸ್ವೇಚ್ಛೆಯಿಂದ ಬದುಕು ಮುನ್ನಡೆಸುತ್ತಾರೆ.ದೈವ ಸಂಕಲ್ಪಿತ ಜೋಡಿಗಳು....!!ದಾಂಪತ್ಯದ ಗೀತೆ ಹಾಡಿದವರೇ ಇರಲಿ... ಪ್ರೇಮ ರಾಗದಲ್ಲಿ ಓಲಾಡುತ್ತಿರುವ ಜೋಡಿಗಳೇ ಇರಲಿ... ಇಬ್ಬರು ಸಹ ಪರಸ್ಪರ ಒಬ್ಬರನ್ನೊಬ್ಬರು ಅರಿತು ಬಾಳಬೇಕು.
'ಒಂದು ಗಂಡಿಗೊಂದು ಹೆಣ್ಣು' ಎಂಬ ಕೆ.ಎಸ್. ನರಸಿಂಹಸ್ವಾಮಿಯವರ ಮಾತಿನಂತೆ, ನಂಬಿ ಬಂದ ಹುಡಗಿ/ಹುಡುಗನಿಗೆ ಜೀವನ ಪರ್ಯಂತ ನಂಬಿಕಸ್ಥರಾಗಿಯೇ ಬದುಕಬೇಕು. ಹೆಣ್ಣು ಹೇಗೆ ತನ್ನ ಗಂಡ ಶ್ರೀರಾಮನಂತೆ ಇರಬೇಕೆಂದು ಬಯಸುತ್ತಾಳೆಯೋ ಹಾಗೆಯೇ, ಗಂಡು ಕೂಡಾ ತನ್ನ ಹೆಂಡತಿ ಸೀತೆಯಂತೆಯೇ ಇರಬೇಕೆಂದು ಬಯಸುವುದರಲ್ಲಿ ಯಾವ ತಪ್ಪಿಲ್ಲ ಅಲ್ಲವೇ?
ಅಮ್ಮನ ಮಡಿಲಲ್ಲಿ ಬೆಳೆದ ಹುಡುಗ ಮದುವೆಯಾದ ನಂತರ ಜೊತೆಯಾಗಿ ಬಂದ ಹುಡುಗಿಯ ಜೊತೆ ಬಾಳಿ ಬದುಕ ಬೇಕಾಗುತ್ತದೆ. ಅವನಿಗೆ ಅವಳೇ ಸರ್ವಸ್ವವಾಗಿ, ತನ್ನೆಲ್ಲ ಬೇಕು ಬೇಡಗಳನ್ನು ಪೂರೈಸುವ ದೇವತೆಯಾಗುತ್ತಾಳೆ. ಹಾಗೆಯೇ, ಹೆಣ್ಣು ಕೂಡಾ ತನ್ನೆಲ್ಲ ರಕ್ತ ಸಂಬಂಧಿಗಳನ್ನು ಬಿಟ್ಟು ಸುಂದರ ಬದುಕಿನ ಕನಸು ಕಟ್ಟಿಕೊಂಡು ಹುಡುಗನನ್ನು ಹಿಂಬಾಲಿಸುತ್ತಾಳೆ. ಅವಳ ಪಾಲಿಗೆ ಆಕೆಯ ಗಂಡ ಸಾಕ್ಷಾತ್ ಭಗವಂತನೇ...!! ಹೀಗೆ ಇಬ್ಬರೂ ಕೂಡಾ ಪರಸ್ಪರ ಒಬ್ಬರಿಗೊಬ್ಬರು ದೈವ ಸಮಾನರಾಗಿ ಕಂಡು ಬರುತ್ತಾರೆ. ಇಂತಹ ಅದ್ಭುತ ದೈವ ಸಂಕಲ್ಪಿತ ಕೆಲವು ಜೋಡಿಗಳು ಬರ ಬರುತ್ತ ಹಾದಿ ತಪ್ಪಿ ಎಲ್ಲೆ ಮೀರುತ್ತಿರುವುದು ವಿಷಾದನೀಯ.
ಪಿಸುಮಾತಿನ ಪ್ರೀತಿ.....!!
ಪ್ರೀತಿ ಯಾವಾಗಲೂ ಒತ್ತಾಯ ಪೂರ್ವಕವಾಗಿ ಹುಟ್ಟಿಕೊಳ್ಳುವುದಿಲ್ಲ. ಅದೊಂದು ಆಕಸ್ಮಿಕ ಅವಘಡ. ಆ ಸನ್ನಿವೇಶದಲ್ಲಿ ಮೇಳೈಸಿದ ಹೃದಯಾಂತರಾಳದ ಪ್ರೀತಿ ಪರಸ್ಪರ ವಿನಿಮಯ ಮಾಡಿಕೊಂಡಾಗ ಅದು ಅರ್ಥ ಪಡೆದುಕೊಳ್ಳುತ್ತದೆ. ಆಗ ಸುಂದರ ಪ್ರೀತಿಯ ಮಹಾಕಾವ್ಯ ರಚನೆಯಾಗಿ, ಪರಸ್ಪರ ಬದುಕಿಗೆ ಸ್ಪೂರ್ತಿಯಾಗುತ್ತದೆ. ಅಲ್ಲಿ ಮನಸ್ಸುಗಳು ಪಿಸುಮಾತಿನೊಂದಿಗೆ ಬೆರೆತಿರುತ್ತವೆ. ಕನಸಿನ ಗೂಡನ್ನು ಹೆಣೆದುಕೊಂಡು ನೀಲಾಕಾಸದಲ್ಲಿ ತೇಲಾಡುತ್ತಿರುತ್ತವೆ. ಅಂದರೆ ಮಾನಸಿಕವಾಗಿ ಅವರ ಮನಸ್ಸುಗಳು ಒಂದಾಗಿರುತ್ತವೆ
 ಹೀಗೆ ಒಂದಾದ ಮನಸ್ಸುಗಳು ಉದ್ದೇಶ ಪೂರ್ವಕವಾಗಿಯೋ, ಅನಿವಾರ್ಯವಾಗಿಯೋ ದೂರಾಗುತ್ತವೆ. ಆಗ ಆ ಮನಸ್ಸುಗಳು ಇನ್ನೊಂದು ಮನಸ್ಸಿನೊಂದಿಗೆ ಸಮ್ಮಿಲನಗೊಳ್ಳುತ್ತವೆ. ಈಗಾಗಲೇ ಒಬ್ಬರಿಗೆ ಮನಸ್ಸು ನೀಡಿ ಬದುಕಿನ ಎಲ್ಲ ಪುಟಗಳಲ್ಲಿ ಸುಂದರ ಕಾವ್ಯ ಬರೆದಿರುತ್ತಾರೆ. ಆದರೆ, ಬದಲಾದ ಸನ್ನಿವೇಶದಿಂದ ದೇಹ ಇನ್ನೊಬ್ಬರಿಗೆ ನೀಡಲು ಅಣಿಯಾಗಬೇಕಾಗುತ್ತದೆ. ಮನಸ್ಸು ಒಬ್ಬರಿಗೆ ನೀಡಿ ದೇಹ ಇನ್ನೊಬ್ಬರಿಗೆ ನೀಡಿದರೆ ಅದಕ್ಕೇನರ್ಥ...!? ಆ ವೈವಾಹಿಕ ಜೀವನ ನಿಜವಾಗಿಯೂ ಸಾರ್ಥಕತೆ ಪಡೆದುಕೊಳ್ಳುತ್ತವೆಯೇ...?

ಕುಕ್ಕಿ ತಿನ್ನದ ಹತ್ತಿಕ್ಕಿದ ಭಾವನೆ...!!

-ನಾಗರಾಜ ಬಿ.ಎನ್
ಕರೆದಾಗ ಬಂದು ಸಂತೈಸುತ್ತದೆ
ತಲೆಯ ನೇವರಿಸುತ್ತ ಬಗಿದಪ್ಪಿ ಮುದ್ದಾಡುತ್ತದೆ
ಜೋಗುಳವ ಹಾಡಿ ಮಲಗಿಸುತ್ತದೆ
ಸದ್ದಿಲ್ಲದೆ ಸರಸರನೆ ಹೊರಟು ಹೋಗುತ್ತದೆ
ಪಾಪ... ಹತ್ತಿಕ್ಕಿದ ಭಾವನೆ ಕುಕ್ಕಿ ತಿನ್ನುವುದಿಲ್ಲ...!!
ಆಡಿ ನಲಿದ, ಕೂಡಿ ಬೆಳೆದ ವರುಷಗಳೆಷ್ಟೋ
ಕೋಪ-ತಾಪಕ್ಕೆ ಬಲಿಯಾದ ದಿನಗಳೆಷ್ಟೋ
ಜೊತೆ ಜೊತೆಯಾಗಿ ಹಣೆದ ಕನಸುಗಳೆಷ್ಟೋ
ಅವೆಲ್ಲ ರಾತ್ರಿ ಬಿದ್ದ ಕನಸುಗಳಂತಾಗಿ
ಕುಳಿರ್ಗಾಳಿಯ ಹೊಡೆತಕ್ಕೆ ಎಲ್ಲೊ ಹಾರಿ ಹೋಗಿವೆ
ಪಾಪ... ಹತ್ತಿಕ್ಕಿದ ಭಾವನೆ ಕುಕ್ಕಿ ತಿನ್ನುವುದಿಲ್ಲ...!!

ಉಸಿರಲ್ಲಿ ಉಸಿರಾಗಿ, ಸರ್ವಸ್ವವೇ ಆಗಿ
ಎರಡು ದೇಹದಲಿ ಬೆರೆತ ಒಂದೇ ಆತ್ಮವಾಗಿ
ಭಾವನೆ ಜೊತೆಯಲ್ಲಿ ಕಾಲವ ದೂಡಿ
ಮುಸ್ಸಂಜೆ ಬದುಕಿನ ಹೆಜ್ಜೆಯ ನೋಡಿ
ಅರಿವಿಲ್ಲದೆ ಸುರಿದ ಜಡಿ ಮಳೆಗೆ ಮೈಯೊಡ್ಡಿ
ಇದ್ದ-ಬಿದ್ದ ಭಾವನೆ ದೂರವಾದವಲ್ಲ
ಪಾಪ... ಹತ್ತಿಕ್ಕಿದ ಭಾವನೆ ಕುಕ್ಕಿ ತಿನ್ನುವುದಿಲ್ಲ...!!

ಭಾವ ಪರಿಧಿಯಲಿ ತನ್ನದೆಲ್ಲವ ಎಂದೆ
ಇತಿಹಾಸ ತಿಳಿದು ಯೋಗಿಯಂತಾದೆ
ಇರುವುದ ಬಿಟ್ಟು ಇರದುದರೆಡೆ ಜಾರಿದೆ
ಭಾವ ಸಾಗರದಿ ಮುಳುಗುತ್ತಲೇ ಹೋದೆ
ಚಿತ್ತ ಸಮಾಧಿಯಾಗಿ, ನೆನಪಾಗಷ್ಟೇ ಉಳಿದೆ
ಪಾಪ... ಹತ್ತಿಕ್ಕಿದ ಭಾವನೆ
ಕೊನೆಗೂ ಕುಕ್ಕಿ ತಿನ್ನಲೇ ಇಲ್ಲ...!!

ಬರ ಸಿಡಿಲು ಎರಗಿದಾಗ......!!

ತೇನ ವಿನಾ ತೃಣಮಪಿ ನ ಚಲತೆ...

ಇತ್ತ ಮನೆಯಲ್ಲಿ ಆತಂಕ ಮಡುಗಟ್ಟಿತ್ತು. ಯಜಮಾನನ ಹೆಂಡತಿ ಒಂದೇ ಸಮನೆ ಅಳುತ್ತ, ಕಣ್ಣೆಲ್ಲ ಕೆಂಪಾಗಿಸಿಕೊಂಡಿದ್ದಳು. ಹೊಸ ಮನೆಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಆನಂದ ಭಾಷ್ಪ ಹರಿಸಬೇಕಾದ ಕಣ್ಣಾಲಿಗಳು, ದುಃಖದಿಂದ ಕಣ್ಣೀರ ಹೊಳೆಯನ್ನು ಹರಿಸುತ್ತಿತ್ತು. ಇಪ್ಪತ್ತು ವರ್ಷಗಳಿಂದ ಕಂಡ ಕನಸು ನನಸಾಗೋ ಅಂತಿಮ ಕ್ಷಣದಲ್ಲಿ, ಅನಿರೀಕ್ಷಿತವಾಗಿ ಬಂದೆರಗಿದ ಬರಸಿಡಿಲು ಬದುಕನ್ನೇ ಹಿಂಡಿ-ಹಿಪ್ಪೆ ಮಾಡಿದಂತಿತ್ತು
ವಿಪರ್ಯಾಸ... ನೋವು... ನಿರಾಶೆ... ದುಃಖ... ಕಣ್ಣಿರು... ಸಾಂತ್ವನ... ಹತಾಶೆ... ಇವುಗಳ ನಡುವೆಯೇ ಭಗವಂತನಲ್ಲಿ ಆರ್ತ ಮೊರೆ...!!
ಅದೊಂದು ಅಪೂರ್ವ ಸಂಗಮ. ಅಲ್ಲಿದ್ದ ಪ್ರತಿಯೊಬ್ಬರಲ್ಲೂ ಸಂಭ್ರಮ-ಉತ್ಸಾಹ ಎಲ್ಲೆ ಮೀರಿತ್ತು. ತಳಿರು-ತೋರಣಗಳಿಂದ ಮನೆ ಸಿಂಗಾರಗೊಂಡು ಮಧುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ವಿದ್ಯುದ್ದೀಪಗಳ ಬೆಳಕು ಕಣ್ಮನಗಳನ್ನು ಸೂರೆಗೊಳಿಸುತ್ತಿತ್ತು. ಮನೆ-ಮಂದಿಯೆಲ್ಲ ಹಿರಿಹಿರಿ ಹಿಗ್ಗುತ್ತ ಅತ್ತಿಂದಿತ್ತ ಓಡಾಡುತ್ತಿದ್ದರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅದು ಸ್ವರ್ಗಕ್ಕೆ ಕಿಚ್ಚು ಹಚ್ಚುವ ವಾತಾವರಣ...!!
ಇನ್ನೇನು ಬೆಳಕು ಹರಿದರೆ ಸಾಕು, ಕನಸಿನ ಮನೆಗೆ ಪ್ರವೇಶ ಮಾಡುವ ನಾಂದಿ ಕಾರ್ಯಕ್ರಮಕ್ಕೆ ಚಾಲನೆ. ಪೂರ್ವ ನಿಯೋಜಿತವಾಗಿ ಎಲ್ಲ ಕಾರ್ಯಗಳು ಮುಗಿದಿದ್ದವು. ನೆಂಟರಿಷ್ಟರು ಒಂದೆಡೆ ಸೇರಿ ರಾತ್ರಿ 12ರ ವರೆಗೂ ಹರಟೆ ಹೊಡೆಯುತ್ತಿದ್ದರು. ಅಷ್ಟರಲ್ಲಾಗಲೇ ಅಲ್ಲೆ, ಪಕ್ಕದಲ್ಲಿ ಕುಳಿತ ಮನೆ ಯಜಮಾನ ಚಿಕ್ಕದಾಗಿ ಕೆಮ್ಮಲು ಪ್ರಾರಂಭಿಸಿದ. ಆ ಕೆಮ್ಮು ನಿಧಾನವಾಗಿ ಹೆಚ್ಚುತ್ತ ಹೋಯಿತು. ನೋಡು ನೋಡುತ್ತಿದ್ದಂತೆ ವಾಂತಿ ಮಾಡಲಾರಂಭಿಸಿದ. ಹರಟೆಯಲ್ಲಿ ತೊಡಗಿದ್ದ ನೆಂಟರೆಲ್ಲ ಗಾಬರಿಯಾದರು. ಕಾರ್ಗತ್ತಲ ರಾತ್ರಿಯಲ್ಲಿ ಗರ ಬಡಿದವರಂತಾದ ಮನೆಯವರು ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿದರು. ಅವರನ್ನು ಕೂಲಕಂಷವಾಗಿ ಪರೀಕ್ಷಿಸಿದ ವೈದ್ಯರು ಹೃದಯದಲ್ಲಿ ಹೋಲ್ ಆಗಿದೆ. ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಸಲಹೆ ನೀಡಿದರು.
ಇತ್ತ ಮನೆಯಲ್ಲಿ ಆತಂಕ ಮಡುಗಟ್ಟಿತ್ತು. ಯಜಮಾನನ ಹೆಂಡತಿ ಒಂದೇ ಸಮನೆ ಅಳುತ್ತ, ಕಣ್ಣೆಲ್ಲ ಕೆಂಪಾಗಿಸಿಕೊಂಡಿದ್ದಳು. ಹೊಸ ಮನೆಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಆನಂದ ಭಾಷ್ಪ ಹರಿಸಬೇಕಾದ ಕಣ್ಣಾಲಿಗಳು, ದುಃಖದಿಂದ ಕಣ್ಣೀರ ಹೊಳೆಯನ್ನು ಹರಿಸುತ್ತಿತ್ತು. ಇಪ್ಪತ್ತು ವರ್ಷಗಳಿಂದ ಕಂಡ ಕನಸು ನನಸಾಗೋ ಅಂತಿಮ ಕ್ಷಣದಲ್ಲಿ, ಅನಿರೀಕ್ಷಿತವಾಗಿ ಬಂದೆರಗಿದ ಬರಸಿಡಿಲು ಬದುಕನ್ನೇ ಹಿಂಡಿ-ಹಿಪ್ಪೆ ಮಾಡಿದಂತಿತ್ತು. ಹೊಸ ಮನೆಯ ಪ್ರವೇಶದ ಉತ್ಸಾಹದಲ್ಲಿ ಪಾಲ್ಗೊಳ್ಳಲು ಬಂದ ಸಂಬಂಧಿಗಳ ಹೃದಯಗಳೆಲ್ಲ ಆದ್ರಗೊಂಡಿತ್ತು.ಕಂಡ-ಕಂಡ ದೇವರಿಗೆ ಸಾಲು ಸಾಲಾಗಿ ಮೆರವಣಿಗೆ ರೂಪದಲ್ಲಿ ಪ್ರಾರ್ಥನೆಗಳು ಹೋಗುತ್ತಿದ್ದವು. ಹರಕೆಗಳನ್ನು ಹೊತ್ತು ಕರಗಳನ್ನು ಜೋಡಿಸಿ, ಎದುರಾದ ಸಂಕಷ್ಟ ದೂರಮಾಡಪ್ಪ ಎಂದು ಮೊರೆಯಿಡುತ್ತಿದ್ದರು. ಅಳುವ ಮನಸ್ಸುಗಳಿಗೆ ಸಾಂತ್ವನ ಹೇಳುವ ಪ್ರಬುದ್ಧ ಜೀವಗಳು ಅಲ್ಲಿದ್ದು, ಧೈರ್ಯ ತುಂಬುತ್ತಿದ್ದವು.
ದೈವಿಚ್ಛೆಯೋ.... ಪ್ರಾರ್ಥನೆಯ ಫಲವೋ.... ಬಂಧುಗಳ ಆರ್ತ ಮೊರೆಯೋ.... ಏನೋ, ಆಸ್ಪತ್ರೆಯಲ್ಲಿ ದಾಖಲಾದ ಯಜಮಾನ ನಿಧಾನವಾಗಿ ಚೇತರಿಕೊಳ್ಳಲಾರಂಭಿಸಿದ. ಅನ್ನಾಹಾರ ತಿನ್ನುತ್ತ, ಗೆದ್ದು ಬಂದೆ ಎನ್ನುವ ಸಂತಸವನ್ನು ಮೊಗದಲ್ಲಿ ಕಾಣಿಸುತ್ತಿದ್ದ. ಆ ಸುದ್ದಿ ಇತ್ತ ಕಿವಿಗೆ ಅಪ್ಪಳಿಸುತ್ತಿದ್ದಂತೆ, ತುಪ್ಪದ ದೀಪಗಳು ದೇವರ ಮುಂದೆ ಪ್ರತ್ಯಕ್ಷವಾದವು. ದುಃಖದ ಕಣ್ಣೀರಿನಿಂದ ತೇವವಾದ ಕಣ್ಣಾಲಿಗಳು, ಆನಂದ ಭಾಷ್ಪ ಹರಿಸುತ್ತಿದ್ದವು.
ಅನಿವಾರ್ಯವೆಂಬಂತೆ ಮನೆಯ ಪ್ರವೇಶವನ್ನು ಮುಂದೂಡಲಾಗಿದೆ. ಒಂದೆಡೆ ಸೇರಿದ ನೆಂಟರಿಷ್ಟರೆಲ್ಲ ತಮ್ಮ ತಮ್ಮ ಮನೆಗೆಳಿಗೆ ವಾಪಸ್ಸಾಗಿದ್ದಾರೆ. ಯಜಮಾನ ಗುಣಮುಖನಾಗಿ ಮನೆಗೆ ಬಂದ ಮೇಲೆ `ಮನೆ ಪ್ರವೇಶ'ದ ದಿನವನ್ನು ನಿಗದಿ ಮಾಡಲು ನಿರ್ಧರಿಸಲಾಗಿದೆ. ಈ ಬಂಧು-ಬಾಂಧವರ ಜೊತೆ ಆಪ್ತೇಷ್ಟರೂ ಕೂಡಾ ಮುಂದೂಡಿದ `ಮನೆ ಪ್ರವೇಶ'ಕ್ಕೆ ಜೊತೆಯಾಗಲಿದ್ದಾರೆ. ಸಂಭ್ರವ, ಸಂತೋಷ, ಉತ್ಸಾಹ ಇನ್ನೊಮ್ಮೆ ತುಂಬಿ ತುಳಕಲಿದೆ. ಆ ಕುಟುಂಬ ನೂರ್ಕಾಲ ಸುಖ-ಸಂತೋಷದಿಂದ ನೂತನ ಮನೆಯಲ್ಲಿ ಬದುಕಿ ಬಾಳಿ ಎಂದು ಹರಸಿ ಹಾರೈಸೋಣ....!!

ನಾನು ನಿರ್ಗತಿಕನಾದರೆ.....!?

ನಾಗರಾಜ್ ಬಿ.ಎನ್.
ಈ ಬದುಕೇ ಒಂದು ವಿಚಿತ್ರ... ಹುಟ್ಟು ಸಾವಿನ ನಡುವಲ್ಲಿ ಅನಿರೀಕ್ಷಿತ ಘಟನೆಗಳೇ ಹೆಚ್ಚು. ಬಾಯಗಲಿಸಿ ನಗಬೇಕೆನ್ನುವಷ್ಟರಲ್ಲಿ ಕಣ್ಣಂಚಿನಿಂದ ನೀರು ಜಿನುಗುತ್ತದೆ. ದುಃಖದ ಬೇಗುದಿಯಲ್ಲಿ ನರಳಾಡುತ್ತಿರುವಾಗ ಎಲ್ಲಿಂದಲೋ ಬೀಸಿ ಬಂದ ತಂಗಾಳಿ ಮೈ-ಮನವನ್ನು ತಂಪಾಗಿಸುತ್ತವೆ...
ಬಹುತೇಕರ ಬದುಕು ಕೂಡಾ ಹೀಗೇನೆ. ಸಾಕಷ್ಟು ಅನಿರೀಕ್ಷಿತ ಘಟನೆಗಳಿಗ ಒಳಗಾಗುತ್ತಲೇ ಇರುತ್ತದೆ. ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕುವ ಪರಿಸ್ಥಿತಿ.ಹುಟ್ಟು ಶ್ರೀಮಂತನಾದರೂ ಹೊಟ್ಟೆಗೆ ಹಿಟ್ಟಿಲ್ಲದೆ ಬೀದಿ ಬೀದಿ ಅಲೆಯಾಬೇಕಾಗುತ್ತದೆ. ಹೊಲಸು ವಾಸನೆ ಸೂಸುವ ಹರಕು ಬಟ್ಟೆ ಧರಿಸಿ, ಅರೆಬರೆಯಾಗಿ ಮಾನ ಮುಚ್ಚಿಕೊಂಡು ಬದುಕಬೇಕಾಗುತ್ತದೆ.
ತಿಂಗಾಳುನುಗಟ್ಟಲೇ ನೀರು ನೋಡದ ದೇಹ.... ಕೆದರಿದ ತಲೆಗೂದಲು.... ಕೈಯ್ಯಲ್ಲೊಂದು ನಗ್ಗಿದ ಪಾತ್ರೆ..... ಬಿಟ್ಟು ಬಿಡದೆ ಒಂದೇ ಸಮನೆ ಬರುವ ಕೆಮ್ಮು.... ಬದುಕನ್ನು ಜರ್ಜರಿತಗೊಳಿಸಿದ ದೈಹಿಕ ಅನಾರೋಗ್ಯ.... ಸ್ಥೀಮಿತ ಕಳೆದುಕೊಂಡ ಮಸ್ಸಿನ ಸ್ಥತಿ... ಹೀಗೆ ಹತ್ತು ಹಲವು ಬಗೆಯ ಅನುಭವಗಳು ಬದುಕಲ್ಲಿ ಧುತ್ತೆಂದು ಎದುರಾಗುತ್ತದೆ.
ಒಪ್ಪತ್ತಿನ ತುತ್ತಿಗಾಗಿ ಮನೆಯ ಮುಂದೆ ಕಣ್ಣಗಲಿಸಿ ಪಾತ್ರೆ ಹಿಡಿದು, ನಿರೀಕ್ಷೆಯ ನೊಗ ಹೊರುತ್ತ ಮನೆಯ ಬಾಗಿಲನ್ನೇ ನೋಡುತ್ತಿರಬೇಕು. ತಿಂದುಂಡು ಹೆಚ್ಚಾದ ಆಹಾರ ಪದಾರ್ಥಗಳನ್ನು ಎಲ್ಲಿ ಎಸಿಯುತ್ತಾರೆ ಎಂದು ಗಂಟೆ ಗಟ್ಟಲೇ ಕಾಯುತ್ತಿರಬೇಕು. ಬೀಸಾಕಿದ ಪದಾರ್ಥ ಹೆಕ್ಕಲು ಹೋದಾಗ ನಾಯಿ, ಹಂದಿಗಳ ಜತೆ ಸೆಣಸಾಡಿ ಜಯಿಸಬೇಕು. ಒಮ್ಮೊಮ್ಮೆ ಹಳಸಿದ ಪದಾರ್ಥಗಳೇ ಪರಮಾನ್ನ...!! ಕೆಲವು ವೇಳೆ ಉಪವಾಸವೇ ಹಣೆ ಬರಹ...!! ಎಲ್ಲಿಯಾದರೂ ಗುಟುಕು ನೀರು ಕುಡಿದು, ಆಕಾಶದ ನಕ್ಷತ್ರ ಎಣಿಸುತ್ತ ಎಲ್ಲಿಯೋ ಒಂದು ಕಡೆ ಮೈ ಚಾಚಬೇಕು. ಇಂತಹ ದಿನ ನಮಗೂ ಎದರಾದರೆ.....!! ಆಶ್ಚರ್ಯವಿಲ್ಲ. ಯಾಕೆಂದರೆ ಯಾರ ಬದುಕು ಹೇಗೆ... ಏನು... ಎಂದು... ಯಾರು ಬಲ್ಲರು? ಅಲ್ಲವೇ....?

ನಕ್ಷತ್ರ ವನಕ್ಕೆ ಬನ್ನಿ.... ಬದಲಾವಣೆ ಕಾಣಿರಿ....!!

ನಿಮ್ಮ ಮನದಿಷ್ಟಾರ್ಥಗಳನ್ನು ಪೂರೈಸಿಕೊಳ್ಳಬೇಕೇ...? ನಿಮ್ಮ ಅದೃಷ್ಟ ಬದಲಾಯಿಸಿಕೊಳ್ಳಬೇಕೆ...? ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಬೇಕೆ...? ಆರೋಗ್ಯ ಸಂಪತ್ತನ್ನು ಗಳಿಸಬೇಕೆ...? ಹಾಗಾದರೆ ತಡವೇಕೆ..... ಹುಬ್ಬಳ್ಳಿಯ ಕೇಶ್ವಾಪುರದ ಪಾರಸ್ವಾಡಿ-ವಿನಯಕಾಲೋನಿ ಬಳಿಯಿರುವ ನಕ್ಷತ್ರ ವನಕ್ಕೆ ಭೆಟ್ಟಿ ನೀಡಿ. ಅಲ್ಲಿರುವ ಪವಿತ್ರ ವೃಕ್ಷಗಳಿಗೆ ನೀರುಣಿಸಿ. ನಿಮ್ಮಲ್ಲಾದ ಬದಲಾವಣೆ ತಿಂಗಳೊಳಗೆ ಕಾಣಿರಿ...!!
ನಾಗರಾಜ್ ಬಿ.ಎನ್.
ಇದು ಉತ್ಪ್ರೇಕ್ಷೆಯಲ್ಲ. ಜನಸಾಮಾನ್ಯರ ಹಾದಿ ತಪ್ಪಿಸುವ ಕಾರ್ಯವೂ ಅಲ್ಲ. ನಂಬಿಕೆ ಮತ್ತು ವೈಜ್ಞಾನಿಕತೆಯ ನೆಲಗಟ್ಟಿನಡಿ ಹಲವರು ಕಂಡುಕೊಂಡ ಸತ್ಯ. 
ಪ್ರತಿನಿತ್ಯ ಶ್ರದ್ಧಾ-ಭಕ್ತಿಯಿಂದ  ಕೆಲವರು ಅಲ್ಲಿರುವ ವೃಕ್ಷಗಳಿಗೆ ಪ್ರದಕ್ಷಿಣೆ ಹಾಕಿ, ಹನಿ-ಹನಿ ನೀರುಣಿಸಿ ಕಮರಿಹೋದ ಬದುಕನ್ನು ಮತ್ತೆ ಚಿಗುರೊಡಿಸಿಕೊಂಡಿದ್ದಾರೆ. ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಮೊಗದಲ್ಲಿ ನಗು ಅರಳಿಸಿಕೊಂಡಿದ್ದಾರೆ. ನೆನಗುದಿಗೆ ಬಿದ್ದ ಎಷ್ಟೋ ಜನರ ಕೆಲಸ-ಕಾರ್ಯಗಳು, ವಾರದೊಳಗೆ ಮತ್ತೆ ಕೈಹಿಡಿದಿದೆ. ಇಳಿ ವಯಸ್ಸಿನ ಜೀವಗಳು ಸಹ ಉತ್ತಮ ಆರೋಗ್ಯವನ್ನು ಪಡೆದು, ಪಾದರಸದಂತೆ ಪುಟಿದೇಳುತ್ತಿದ್ದಾರೆ. ಗುಟ್ಕಾ, ಪಾನ್, ಸಾರಾಯಿಗಳಂತ ದುಶ್ಚಟಗಳಿಂದ ದೂರಾದ ಯುವ ಸಮುದಾಯವೇ ಇದೆ. ಚಿಕ್ಕ ಮಕ್ಕಳಲ್ಲಂತೂ ಪರಿಸರ ಜಾಗೃತಿ ಹುಟ್ಟಿಸುತ್ತ, ಅವರಲ್ಲಿ ಗಿಡ-ಮರ ಬೆಳೆಸಿ ಪೋಷಿಸುವ ಶಿಕ್ಷಣ ನೀಡುತ್ತಿದೆ. ಒಟ್ಟಾರೆ ನಗರದಲ್ಲಿರುವ ಈ ಅಪರೂಪದ 'ನಕ್ಷತ್ರ ವನ' ಪವಿತ್ರ ಸ್ಥಳವಾಗಿ ರೂಪುಗೊಳ್ಳುತ್ತ, ಜಾಗೃತ ಸ್ಥಳವಾಗಿ ಮಾರ್ಪಡುತ್ತಿದೆ. ವಿಶೇಷವೆಂದರೆ, ಈ ವನಕ್ಕೆ ಆಗಮಿಸುವವರಿಗೆ ಯಾವ ಪ್ರವೇಶ ಧನವೂ ಇಲ್ಲ. ಆದರೆ, ಸ್ವ ಇಚ್ಛೆಯಿಂದ ಅಲ್ಲಿಯ ಕಸ, ಕಲ್ಲುಗಳನ್ನು ಎತ್ತಿ, ಹುಲ್ಲುಗಳನ್ನು ಕಿತ್ತೆಸೆದು ಕರ ಸೇವೆ ಮಾಡಬಹುದಾಗಿದೆ.

ಜನ್ಮರಾಶಿಗೆ ತಕ್ಕಂತೆ ವೃಕ್ಷ.....!
ಈ ನಕ್ಷತ್ರ ವನದಲ್ಲಿ ಒಟ್ಟು ಇಪ್ಪತ್ತೇಳು ಪವಿತ್ರ ವೃಕ್ಷಗಳಿವೆ. ಜ್ಯೋತಿಶಾಸ್ತ್ರದಲ್ಲಿರುವ ಇಪ್ಪತ್ತೇಳು ನಕ್ಷತ್ರಗಳಿಗೆ ಹೊಂದಿಕೆಯಾಗುವ, ಇಪ್ಪತ್ತೇಳು ಬಗೆಯ ವೃಕ್ಷಗಳನ್ನು ಇಲ್ಲಿ ನೆಡಲಾಗಿದೆ. ಮೃಗಶಿರ ನಕ್ಷತ್ರಕ್ಕೆ ಕಗ್ಗಲಿ ವೃಕ್ಷ, ಶತತಾರ ನಕ್ಷತ್ರಕ್ಕೆ ಕದಂಬ ವೃಕ್ಷ, ಮಘ ನಕ್ಷತ್ರಕ್ಕೆ ಆಲ ವೃಕ್ಷ, ಪುಷ್ಯ ನಕ್ಷತ್ರಕ್ಕೆ ಅರಳಿ ವೃಕ್ಷ, ಧನಿಷ್ಟಾ ನಕ್ಷತ್ರಕ್ಕೆ ಬನ್ನಿ ವೃಕ್ಷ, ಶ್ರವಣ ನಕ್ಷತ್ರಕ್ಕೆ ಎಕ್ಕಿ ವೃಕ್ಷ, ಪುನರ್ವಸು ನಕ್ಷತ್ರಕ್ಕೆ ಬಿದಿರು ವೃಕ್ಷ(ಬೊಂಬು), ಭರಣಿ ನಕ್ಷತ್ರಕ್ಕೆ ನೆಲ್ಲಿ ವೃಕ್ಷ, ಆರಿದ್ರ ನಕ್ಷತ್ರಕ್ಕೆ ಶಿರಣಿ ವೃಕ್ಷ ಹೀಗೆ ಇಪ್ಪತ್ತೇಳು ನಕ್ಷತ್ರಕ್ಕೆ ಹೊಂದಿಕೆಯಾಗುವ, ಇಪ್ಪತ್ತೇಳು ವೃಕ್ಷಗಳಿವೆ. ಈ ಒಂದೊಂದು ವೃಕ್ಷಗಳು ಒಂದೊಂದು ನಕ್ಷತ್ರಗಳ ಜನ್ಮರಾಶಿಯ ಮೇಲೆ ಜನಿಸಿದ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತವೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.
ಅವಳಿನಗರದ ಕೆಲವು ಭಾಗದ ಸಾರ್ವಜನಿಕರು ಹಾಗೂ ಆ ವನದ ಸುತ್ತಲಿನ ನಿವಾಸಿಗಳು ಪ್ರತಿನಿತ್ಯ ಕುಟುಂಬ ಸಮೇತರಾಗಿ 'ಪವಿತ್ರ ವನ'ಕ್ಕೆ ಆಗಮಿಸಿ, ವೃಕ್ಷಗಳಿಗೆ ನೀರೆರೆಯುತ್ತಾರೆ. ಶ್ರದ್ಧಾ-ಭಕ್ತಿಯಿಂದ ಇಪ್ಪತ್ತೇಳು ವೃಕ್ಷಗಳಿಗೂ ಪ್ರದಕ್ಷಿಣೆ ಹಾಕಿ, ಮನದಿಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸುತ್ತಾರೆ. ಗಿಡಕ್ಕೆ ನೀರೆರೆಯುತ್ತಲೇ ಕೆಲವರು ವಾಯುವಿಹಾರ ಮಾಡಿ, ಪ್ರಸನ್ನತೆ ಪಡೆಯುತ್ತ ನಿರಾಳರಾಗುತ್ತಾರೆ. ಶಾಲಾ ವಿದ್ಯಾರ್ಥಿಗಳು ಹಾಗೂ ಚಿಕ್ಕ ಮಕ್ಕಳಂತೂ ನಿಷ್ಕಳಂಕ ಮನಸ್ಸಿನಿಂದ, ಗಿಡಗಳಿಗೆ ನೀರುಣಿಸಿ ಸಂತೋಷಿಸುತ್ತಾರೆ. ಇದು ಅವರಲ್ಲಿ ಪರಿಸರ ಪ್ರಜ್ಞೆ ಬೆಳೆಯಲು ಸಹಾಯಕವಾಗುವುದರ ಜೊತೆಗೆ, ಗಿಡ-ಮರಗಳ ರಕ್ಷಣೆಗೆ ಬಾಲ್ಯದಲ್ಲಿಯೇ ಪಾಠ ನೀಡಿದಂತಾಗುತ್ತದೆ. ಅಲ್ಲದೆ, ಇಲ್ಲಿರುವ ವಿವಿಧ ವೃಕ್ಷಗಳು ಸುತ್ತ-ಮುತ್ತಲಿನ ಇಂಗಾಲದ ಡೈಆಕ್ಸೈಡ್ ನ್ನು ಸೇವಿಸಿ, ಮಾನವನಿಗೆ ಅವಶ್ಯಕವಿರುವ ಆಮ್ಲಜನಕನವನ್ನು ಹೇರಳ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತವೆ. ಇದು ಸಹಜವಾಗಿಯೇ ವ್ಯಕ್ತಿಯ ಆರೋಗ್ಯದ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರಲು ಸಹಕಾರಿಯಾಗಿದೆ. ಈ ನೀರೆರೆಯುವ ಪ್ರಕ್ರಿಯೆಯಿಂದ ಪ್ರತಿನಿತ್ಯ ಒಂದೊಂದು ವೃಕ್ಷಕ್ಕೆ ಕನಿಷ್ಠ ಏಳೆಂಟು ಕೊಡ ನೀರು ಹಾಕಿದಂತಾಗುತ್ತದೆ.
`ಜನರಲ್ಲಿಯ ನಂಬಿಕೆ ಮತ್ತು ವೈಜ್ಞಾನಿಕ ಸತ್ಯ ಒಂದಕ್ಕೊಂದು ಮೇಳೈಸಿಕೊಂಡು ಎಷ್ಟೋ ಜನರ ಬದುಕನ್ನು ಈ ಪವಿತ್ರ ನಕ್ಷತ್ರ ವನ ಹಸನಾಗಿಸಿದೆ. ಸ್ನೇಹಿತರ ಸಲಹೆ ಮೇರೆಗೆ ಕಳೆದ ಒಂದು ವಾರದಿಂದ ಪ್ರತಿನಿತ್ಯ ಸಾಯಂಕಾಲ ನಕ್ಷತ್ರ ವನಕ್ಕೆ ಬಂದು, ಅಲ್ಲಿರುವ ಗಿಡಗಳಿಗೆ ಭಕ್ತಿಯಿಂದ ನೀರುಣಿಸುತ್ತಿದ್ದೇನೆ. ಎರಡು ವರ್ಷದಿಂದ ಆಗದ ಕೆಲಸವೊಂದು ಇಲ್ಲಿಗೆ ಬಂದ ಮೇಲೆ ಯಾವೊಂದು ಸಮಸ್ಯೆಯಿಲ್ಲದೆ ಬಗೆಹರಿದಿದೆ. ಇಲ್ಲಿರುವ ವೃಕ್ಷಗಳು ಪುರಾಣೇತಿಹಾಸ ಹೊಂದಿದ್ದು, ಭಕ್ತಿಯಿಂದ ನೀರೆರೆದು ಪ್ರಾಥರ್ಿಸಿಕೊಂಡರೆ ಎಲ್ಲ ಕಷ್ಟಗಳು ಬಗೆಹರಿಯುತ್ತವೆ' ಎಂದು ಗಿಡಗಳಿಗೆ ನೀರುಣಿಸಿ ಸಮಸ್ಯೆಯಿಂದ ಎದ್ದು ಬಂದ ಶಾಂತಿಕಾಲೋನಿ ನಿವಾಸಿ ನಾಗರಾಜ ಗಾಂವಕಾರ ಅವರ ಅನುಭವದ ನುಡಿಗಳಿವು.

ಪವಿತ್ರ ವನದ ರೂವಾರಿ...
ಕೇಶ್ವಾಪುರದ ಪಾರಸ್ವಾಡಿ-ವಿನಯಕಾಲೋನಿಯ ಆರ್.ಆರ್. ಬಿಜಾಪುರ ಅವರ ದೃಢ ಸಂಕಲ್ಪಿತ ಕೂಸೆ ಈ ಪವಿತ್ರ ನಕ್ಷತ್ರ ವನ. ಸರಿ ಸುಮಾರು ಮೂವತ್ತೈದು ವರ್ಷಗಳ ಹಿಂದೆ ಇವರು ನಕ್ಷತ್ರಗಳಿಗೆ ಒಂದೊಂದು ವೃಕ್ಷವಿರುತ್ತದೆ ಎಂಬ ವಿಷಯದ ಪುಸ್ತಕವೊಂದನ್ನು ಓದಿದ್ದರಂತೆ. ಅಂದಿನಿಂದ ಅವರು, ಆ ಇಪ್ಪತ್ತೇಳು ವೃಕ್ಷಗಳನ್ನು ಒಂದೆಡೆ ನೆಟ್ಟು, 'ನಕ್ಷತ್ರ ವನ' ನಿಮರ್ಿಸಬೇಕು ಎಂದು ಮನಸ್ಸಿನಲ್ಲಿಯೇ ಯೋಜನೆಯೊಂದನ್ನು ಸಿದ್ಧಪಡಿಸಿದ್ದರು. ಮನೆಯ ಮುಂದೆಯೇ ಇದ್ದ ಪಾಲಿಕೆಯ ಜಾಗವನ್ನು `ನಕ್ಷತ್ರ ವನ' ನಿಮರ್ಾಣಕ್ಕೆ ಯಾಕಾಗಿ ಬಳಸಿಕೊಳ್ಳಬಾರದೆಂದು ಚಿಂತಿಸಿ, ಸುತ್ತ-ಮುತ್ತಲಿನ ಕಾಲೋನಿ ನಿವಾಸಿಗಳಲ್ಲಿ ಚಚರ್ಿಸಿದರು. ಪುರಂದರ ಹೆಗಡೆ, ಬಿ.ಎಸ್. ವಿರಕ್ತಿಮಠ, ವಿ.ಕೆ. ಕಲಬುಗರ್ಿ, ಪ್ರಕಾಶ ಕುಲಕಣರ್ಿ, ಆರ್.ಎ. ಪೈ, ಮೈಕಲ್ ಸೇರಿದಂತೆ ಅನೇಕರು ಅವರ ಬೆಂಬಲಕ್ಕೆ ನಿಂತರು. ಪಾಲಿಕೆಗೆ ಮನವಿ ಪತ್ರ ಸಲ್ಲಿಸಿ, ನಕ್ಷತ್ರ ವನ ನಿಮರ್ಾಣಕ್ಕೆ ಒಪ್ಪಿಗೆ ಪಡೆದರು. ಆ ಸಂದರ್ಭದಲ್ಲಿ ಆ ಖುಲ್ಲಾ ಜಾಗ ಗಿಡಗಂಟಿಗಳಿಂದ ತುಂಬಿದ್ದು, ಏನೂ ಬೆಳೆಯದ ಬರಡು ನೆಲದಂತಿತ್ತು. ಕಾಲೋನಿ ನಿವಾಸಿಗಳ ಸಹಾಯದಿಂದ ಆ ಜಾಗವನ್ನು ತಕ್ಕಮಟ್ಟಿಗೆ ಶುಚಿಗೊಳಿಸಿದರು. ಬೆಂಗಳೂರು, ಹಾಸನ, ಕಾರವಾರ, ತುಮಕೂರು, ಶೃಂಗೇರಿ ಹಾಗೂ ಇನ್ನಿತರ ನರ್ಸರಿಗಳಿಂದ ಇಪ್ಪತ್ತೇಳು ಬಗೆಯ ವೃಕ್ಷಗಳನ್ನು ತಂದು ನೆಟ್ಟು, ಜೋಪಾನವಾಗಿ ಬೆಳೆಸಿದರು. ಪರಿಣಾಮವಾಗಿ ಇಂದು ಅದು ಪವಿತ್ರ ಸ್ಥಳವಾಗಿ ಮಾರ್ಪಟ್ಟಿದೆ.
ಧರ್ಮಗಳ ಎಲ್ಲೆ ಮೀರಿದ್ದು....!
ಸುಮಾರು 16 ಗುಂಟೆಯಷ್ಟಿರುವ ಪಾಲಿಕೆಯ ಈ ಜಾಗಕ್ಕೆ ವರ್ಷದ ಹಿಂದಷ್ಟೇ ತಡೆಗೋಡೆಯನ್ನು ನಿಮರ್ಿಸಲಾಗಿದೆ. ಈ ವನದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು ಎಂದು ಕಾಲೋನಿ ನಿವಾಸಿಗಳು ಪಾಲಿಕೆಗೆ ಸಾಕಷ್ಟು ಬಾರಿ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅದು ನಿರ್ಮಾಣವಾಗುವ ನಿರೀಕ್ಷೆಯಿದ್ದು, ಅವಳಿನಗರದ ಏಕೈಕ ಅಪರೂಪದ ನಕ್ಷತ್ರ ವನ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಜಾತಿ, ಮತ, ಧರ್ಮದ ಬೇಧ ಮರೆತು ಎಲ್ಲರೂ ಈ ವನಕ್ಕೆ ಬಂದು ಗಿಡಗಳಿಗೆ ನೀರುಣಿಸುತ್ತಾರೆ. ಗಿಡಗಳಿಗೆ ಗಂಧ ಹಚ್ಚುವುದು, ಹೂವು ಮುಡಿಸುವುದು ಹಾಗೂ ಪೂಜೆ ಕಾರ್ಯಗಳಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿಗೆ ಬರುವವರು ಮನೆಯಿಂದ ಒಂದು ಬಾಟಲಿ ನೀರನ್ನಷ್ಟೇ ತಂದರೆ ಸಾಕು. ಈ ವನ ಪ್ರವೇಶಿಸುತ್ತಿದ್ದಂತೆ ಅರಿವಿಲ್ಲದೆ ಮನಸ್ಸಿನಲ್ಲಿ ಪ್ರಶಾಂತ ಭಾವ ಮೂಡುತ್ತದೆ. ಶುದ್ಧ ಗಾಳಿಯನ್ನು ಸೇವಿಸುತ್ತ ಗಿಡಗಳಿಗೆ ನೀರುಣಿಸುವ ಪರಿ ಮನಸ್ಸಿಗೆ ಅಮಿತಾನಂದ ಉಂಟುಮಾಡುತ್ತದೆ.
-ಆರ್.ಆರ್. ಬಿಜಾಪುರ(ನಕ್ಷತ್ರ ವನದ ರೂವಾರಿ)

ಸೋಮವಾರ, ಡಿಸೆಂಬರ್ 29, 2014

'ಛೇ.., ಗಂಟೆ ಐದಾಗ್ತಾ ಬಂತು, ಮನೆಗ್ಹೋಗ್ಬೇಕು'

ಇದು ಧಾರಾವಾಹಿ ಮಾಡಿದ ಮೋಡಿ...!!

ಹೆಣ್ಣುಮಕ್ಕಳ  ಮೃದು ಮನಸ್ಸನ್ನೆ ಲಾಭಕ್ಕಾಗಿ ಉಪಯೋಗಿಸಿ,ಕಟ್ಟು ಕತೆಗಳ ಮೂಲಕ ಅವರ ಕಣ್ಣಲ್ಲಿ ನೀರು ತರಿಸಿ ಧಾರಾವಾಹಿ ನಿಮಾತೃರು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುವುದು ಎಷ್ಟು ಸರಿ....? ಒಟ್ಟಾರೆ ಎಲ್ಲ ಟಿವಿ ಧಾರಾವಾಹಿಗಳನ್ನು ಸಾರಾಸಗಟಾಗಿ ತೆಗಳಲು ಆಗುವುದಿಲ್ಲ. ಆದರೆ, ಬಹುಪಾಲು ಸಿರಿಯಲ್ಗಳು ಆರೋಗ್ಯಪೂರ್ಣ ಕೌಟುಂಬಿಕ ವ್ಯವಸ್ಥೆಗೆ ಕೊಂಚ ಧಕ್ಕೆ ತರುತ್ತವೆ ಎಂಬ ಮಾತನ್ನು ಸಹ ಅಲ್ಲಗಳೆಯಲಾಗುವುದಿಲ್ಲ. ಇಲ್ಲೊಂದಿಷ್ಟು ಚಿಂತನೆ...
ನಾಗರಾಜ್ ಬಿ.ಎನ್
ಮಾರುಕಟ್ಟೆಗೋ.. ನೆಂಟರ ಮನೆಗೋ... ಅಥವಾ ಇನ್ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋದ ಕೆಲವು ಮಹಿಳೆಯರಿಗೆ ಸಂಜೆ ಐದಾದರೆ ಸಾಕು, ಏನೋ ಗಡಿಬಿಡಿ, ಧಾವಂತ, ತವಕ, ಕುತೂಹಲ....!! 'ಛೇ.. ಮೊದಲೇ ಬರಬಾರದಿತ್ತಾ ಮಾರುಕಟ್ಟೆಗೆ.. ಲೇಟಾಗಿ ಹೋಯ್ತು' ಎನ್ನುತ್ತ ಸರಸರನೇ ಎದ್ದನೋ ಬಿದ್ದನೋ ಎಂದು ಮನೆಯ ಹಾದಿ ಹಿಡಿಯುತ್ತಾರೆ.
ಏದುಸಿರುವ ಬಿಡುತ್ತ, ಕಾಲಿಗೆ ಹಾಕಿದ ಚಪ್ಪಲಿಯನ್ನು ತೆಗೆಯದೆ, ಟಿವಿ ಸ್ವಿಚ್ ಆನ್ ಮಾಡುತ್ತಾರೆ.
ಅದು ಧಾರಾವಾಹಿಯ ವ್ಯಾಮೋಹ, ಮೋಡಿ... ಅದರ ಕಬಂಧ ಬಾಹುವಿನ ತೆಕ್ಕೆಯಲ್ಲಿ ಸಿಲುಕಿ ನಲಗುವ ಸನ್ನಿವೇಶ...
ಸಂಜೆ 5ರಿಂದ ರಾತ್ರಿ 11ರ ವರೆಗೂ ನಿರಂತರವಾಗಿ ಒಂದಿಲ್ಲೊಂದು ಧಾರಾವಾಹಿ ಒಂದೊಂದು ವಾಹಿನಿಯಲ್ಲಿ ಪ್ರಸಾರವಾಗುತ್ತಲೇ ಇರುತ್ತವೆ. ಈ ಅವಧಿಯಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಪ್ರಸಾರವಾಗುವ ಕನಿಷ್ಠ 10 ಧಾರಾವಾಹಿಗಳಲ್ಲಿ, ಎಲ್ಲವೂ ಸಮಾಜವನ್ನು ಹಾಳು ಹಾಳುಗೆಡುವಂತ ಧಾರಾವಾಹಿಗಳೇ..! ಕೌಟುಂಬಿಕ ಸಂಬಂಧಗಳ ನಡುವೆ ಬಿರುಕು ಹುಟ್ಟುವುದೇ ಆ ಧಾರಾವಾಹಿಗಳ ಕಥಾ ವಸ್ತುಗಳು. ಮೊದ ಮೊದಲು ಜೊತೆ ಜೊತೆಗೆ ಕೂಡಿ ಬಾಳುತ್ತಿದ್ದ ಸಂಸಾರ, ಕೊನೆ ಕೊನೆಗೆ ಒಡೆದು ಚೂರಾಗಿ ಮನೆಯೊಂದು ಮೂರು ಬಾಗಿಲಾಗುತ್ತದೆ.

ಇಳಿ ವಯಸ್ಸಲ್ಲಿ ನೆಮ್ಮದಿಯ ಬದುಕು ಕಾಣುವ ಹಂಬಲದಲ್ಲಿರುವ ಅಪ್ಪ-ಅಮ್ಮರು ತನ್ನದೇ ಮಕ್ಕಳ ಒಡೆದ ಸಂಸಾರ ನೋಡಿ ಕಣ್ಣೀರಾಗುತ್ತಾರೆ. ಅಣ್ಣ-ತಮ್ಮರ ಹೆಂಡತಿ ಆಸ್ತಿಗಾಗಿ ಕಚ್ಚಾಡುತ್ತಾರೆ. ಮನೆಗೆಲಸದಲ್ಲಿ ಒಬ್ಬರನ್ನೊಬ್ಬರು ಕಿತ್ತಾಡುತ್ತಾರೆ. ಪರಸ್ಪರ ಕಿವಿ ಊದುತ್ತ(ಚಾಡಿ ಮಾತು) ಸಂಸಾರದಲ್ಲಿ ಹುಳಿ ಹಿಂಡುತ್ತಾರೆ. ಎರಡು-ಮೂರು ಮದುವೆಯಾಗುತ್ತಾರೆ. ಗಂಡ-ಹೆಂಡತಿ ಕಚ್ಚಾಡುತ್ತಾರೆ. ಮಕ್ಕಳು ಅಪ್ಪ-ಅಮ್ಮರಿಗೆ ಹೊಡೆಯುತ್ತಾರೆ. ಅಲ್ಲದೆ, ಸ್ವಾರ್ಥಕ್ಕಾಗಿ ಅಪ್ಪ-ಅಮ್ಮರನ್ನು ವೃದ್ಧಾಶ್ರಮದಲ್ಲಿಡುತ್ತಾರೆ. ಹೀಗೆ ಈ ಧಾರಾವಾಹಿಯ ಪ್ರತಿಯೊಂದು ಸನ್ನಿವೇಶವು ಕೂಡಾ ಕೌಟುಂಬಿಕ ಸಂಬಂಧ ಹಾಳು ಮಾಡುವಂತಹುದ್ದೇ ಆಗಿದೆ.
ಪ್ರೀತಿ-ವಿಶ್ವಾಸದ ನೆಲಗಟ್ಟಿನಡಿ ಯಾವುದೋ ಕಾರಣದಿಂದ ಒಡೆದು ಹೋದ ಕುಟುಂಬವನ್ನು ಒಂದು ಮಾಡುವ ಸಂದೇಶ ಸಾರುವಂತ ಧಾರಾವಾಹಿಗಳು ಬೇಕೆನಿಸಿದರೂ ಭಿತ್ತರವಾಗುವುದಿಲ್ಲ. ಹಾಳು ಹರಟೆ, ಕಲಹ, ಸಂಬಂಧ ಹದಗೆಡೆಸುವ ಸಂಭಾಷಣೆಗಳ ತುಣುಕುಗಳ ಧಾರಾವಾಹಿಗಳೇ ಭರ್ಜರಿಯಾಗಿ ಭಿತ್ತರವಾಗುತ್ತವೆ. ಹೃದಯಕ್ಕೆ ನಾಟುವ ಮೃದು ಸಂಭಾಷಣೆಗೆ, ಹಿನ್ನೆಲೆ ಸಂಗೀತ ನೀಡಿ ಹೆಂಗಳೆಯರ ಮನಸ್ಸನ್ನು ನಾಟುವಂತೆ ಮಾಡುತ್ತಾರೆ. ಅದರಿಂದಾಗಿ ಅವರಲ್ಲಿರುವ ಮೃದು ಮನಸ್ಸು ಒಮ್ಮಿಂದೊಮ್ಮೆಲೆ ಜಾಗೃತವಾಗಿ, ಭಾವನೆಯ ಕೂಪದಲ್ಲಿ ಬಿದ್ದು ಬಿಡುತ್ತವೆ.
ಧಾರಾವಾಹಿಯಲ್ಲಿ ಪ್ರಸಾರವಾಗುವ ಒಂದೊಂದು ದೃಶ್ಯದ ಸನ್ನಿವೇಶಗಳು ಸಹ ಮಹಿಳೆಯರನ್ನು ಗಟ್ಟಿಯಾಗಿ ಬಿಗಿ ಹಿಡಿದಿಡುತ್ತದೆ. ಸಂದರ್ಭದಲ್ಲಿ ಆ ಧಾರಾವಾಹಿಯ ಕೆಲವು ಪಾತ್ರಗಳು ಅವರೇ ಆಗಿ ಪ್ರತಿಬಿಂಬವಾಗುತ್ತಾರೆ. ಪರಿಣಾಮ, ಅರಿವಿಲ್ಲದೆ ಅವರ ಮನಸ್ಸು ಆದೃಗೊಂಡಿರುತ್ತದೆ... ಕಣ್ಣಾಲಿಗಳಿಂದ ನೀರು ಜಿನುಗುತ್ತಿರುತ್ತದೆ... ಮುಂದೇನಾಗುತ್ತದೆ ಎನ್ನುವಷ್ಟರಲ್ಲಿ, ನಾಳೆಯ ಕುತೂಹಲ ಸನ್ನಿವೇಶದ ದೃಶ್ಯದೊಂದಿಗೆ `ಮುಂದುವರಿಯುವುದು.....' ಎಂಬ ಸ್ಲೋಗನ್ ಅಲ್ಲಿ ಪ್ರತ್ಯಕ್ಷವಾಗುತ್ತದೆ....!! ಮತ್ತೆ ನಾಳೆ ದಿನಕ್ಕೆ ಕಾತುರ..!
ಆ ಭಾವುಕ ಲೋಕದಲ್ಲಿಯೇ ತೇಲಾಡುತ್ತಿರುವ ಅವರಿಗೆ, ನಾಳೆ ಎಷ್ಟೊತ್ತಿಗೆ ಆಗುವುದು ಎನ್ನುವ ತವಕ. ನಾಳೆಯಾದರೆ, ಸಾಯಂಕಾಲಕ್ಕಾಗಿ ತಡಬಡಿಕೆ. ಮತ್ತೆ ಆ ಧಾರಾವಾಹಿ ಎಷ್ಟೊತ್ತಿಗೆ ಆರಂಭವಾಗುತ್ತದೆ ಎನ್ನುವ ನಿರೀಕ್ಷೆ. ಒಂದೊಂದು ಕ್ಷಣ, ನಿಮಿಷಗಳು ಆ ಸಂದರ್ಭದಲ್ಲಿ ಅವರಿಗೆ ಒಂದೊಂದು ಯುಗ ಕಳೆದಂತೆ. ಮನೆಗೆಲಸ, ಮಕ್ಕಳ ಪಾಠ, ತುರ್ತು ಕೆಲಸಗಳೆಲ್ಲವೂ ನೇಪಥ್ಯಕ್ಕೆ ಸರಿದಿರುತ್ತವೆ. ಅಷ್ಟು ಹೊತ್ತಿನಿಂದ ಕಾಯುತ್ತಿದ್ದ ಸಮಯ ಎದುರಾಗುತ್ತದೆ. ಧಾರಾವಾಹಿ `ಟೈಟಲ್ ಸಾಂಗ್'ನೊಂದಿಗೆ ಆರಂಭವಾಗುತ್ತಿದ್ದಂತೆ, ಸುತ್ತೆಲ್ಲ ನಿಶ್ಯಬ್ದ ಆವರಿಸುತ್ತದೆ. ಧಾರವಾಹಿ ನೋಡುವ ಕಣ್ಣುಗಳ ಜೊತೆಗೆ ಮನಸ್ಸುಗಳು ಸಹ ಕೇಂದ್ರಿಕೃತವಾಗಿ, ಟಿವಿಯಲ್ಲಿಯೇ ತಲ್ಲೀನವಾಗುತ್ತವೆ. ಆ ಸಂದರ್ಭದಲ್ಲೇನಾದರೂ ಅಪರೂಪದ ಸ್ನೇಹಿತರು, ನೆಂಟರು, ಬಂಧುಗಳು, ಆಪ್ತೇಷ್ಟರೇನಾದರೂ ಮನೆಗೆ ಬಂದರೆ... ಅವರು ಧಾರಾವಾಹಿ ಮುಗಿಯುವವರೆಗೂ ಮೂಕರಾಗಿಯೇ ಕುಳಿತುಕೊಳ್ಳಬೇಕು. ಯಾಕೆಂದರೆ ಧಾರಾವಾಹಿ ಮುಗಿಯಿತು ಎಂದರೆ... ಅದು ಮತ್ತೆ ಸಿಗದು, ನೆಂಟರು ಹೇಗಿದ್ದರೂ ಇಲ್ಲೆ ಇರುತ್ತಾರಲ್ಲ...!!
ಹೀಗೆ, ಸ್ನೇಹ-ಸಂಬಂಧದ ಸಾಮರಸ್ಯಕ್ಕೆ ದೈನಂದಿನ ಧಾರಾವಾಹಿ ಮಾರಕವಾಗಿ ಪರಿಣಮಿಸಿದೆ. ಅಂದು ಕುಟುಂಬ ಸದಸ್ಯರೆಲ್ಲ ಜೊತೆ ಜೊತೆಯಾಗಿ ಕೂತು ಊಟ, ತಿಂಡಿ ಮಾಡುತ್ತ ಸಂಭ್ರಮಿಸುತ್ತಿದ್ದರು. ಈಗ ಧಾರಾವಾಹಿ ನೋಡುತ್ತ ಊಟ ಮಾಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಶಾಲೆ ಬಿಟ್ಟು ಮನೆಗೆ ಬಂದ ಮಕ್ಕಳಿಗೆ, 'ಶಾಲೆಯಲ್ಲಿ ಏನು ಕಲಿಸಿದ್ದಾರೆ' ಎಂದು ಕೇಳುವ ತಂದೆ-ತಾಯಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಯಾಕೆಂದರೆ ಮಕ್ಕಳು ಶಾಲೆ ಬಿಟ್ಟು ಮನೆಗೆ ಪ್ರವೇಶಿಸುತ್ತಿದ್ದಂತೆ, ಪಾಲಕರು ಧಾರಾವಾಹಿಯಲ್ಲಿ ಮುಳುಗಿರುತ್ತಾರೆ. ಮನೆಯ ಈ ವಾತಾವರಣ ಮಕ್ಕಳ ಕಲಿಕೆಯ ಮೇಲೆ ಗಣನೀಯ ಪರಿಣಾಮ ಬೀರುತ್ತ, ಅವರನ್ನು ಸಹ ಧಾರಾವಾಹಿಗಳು ಆಕರ್ಷಿಸಲು ಪ್ರಾರಂಭಿಸುತ್ತಿವೆ. ಕೂಡಿ ಬಾಳುವ ಕುಟುಂಬವು ಧಾರಾವಾಹಿಯ ಪ್ರಭಾವಕ್ಕೆ ಒಳಗಾಗಿ ದ್ವೇಷ-ಅಸೂಯೆಯನ್ನು ಸೃಷ್ಟಿಸುತ್ತಿದೆ. ಪರಸ್ಪರ ಕಂದಕವನ್ನು ನಿರ್ಮಿಸಿಕೊಂಡು ಒಂದೇ ಮನೆಯಲ್ಲಿ ದಾಯಾದಿಗಳಂತೆ ಬದುಕುವಂತೆ ಮಾಡುತ್ತದೆ. ನೆಮ್ಮದಿಯನ್ನು ಹಾಳುಗೈದು ಮನೆ-ಮನಗಳಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸುತ್ತವೆ.
ಸುಂದರ, ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡಬೇಕಾದ ದೃಶ್ಯ ಮಾಧ್ಯಮಗಳು... ಸಮಾಜದ ಸ್ವಾಸ್ಥ್ಯ ಹಾಳುಗೆಡುವದೆ ಪ್ರೀತಿ, ವಿಶ್ವಾಸದ ನೆಲಗಟ್ಟಿನಡಿ ಉತ್ತಮ ಸಂದೇಶ ರವಾನಿಸಬೇಕಾದ ಧಾರಾವಾಹಿಗಳು... ಹೆಂಗಳೆಯರ ಮೃದು ಮನಸ್ಸನ್ನೆ ತಮ್ಮ ಲಾಭಕ್ಕಾಗಿ ಉಪಯೋಗಿಸಿ, ಕಟ್ಟು ಕತೆಗಳ ಮೂಲಕ ಅವರ ಕಣ್ಣಲ್ಲಿ ನೀರು ತರಸಿ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವುದು ಎಷ್ಟು ಸರಿ....? ಇದು ಹೀಗೆ ಮುಂದುವರಿದರೆ ನಮ್ಮ ಮುಂದಿನ ಸಮಾಜ ಏನು...? ಎಂತು....?

ನಾನು ಮಾಡಿದ್ದೇ ಸರಿ, ನನಗ್ಹೇಳಲು ನೀನ್ಯಾರು..?


ನಾಗರಾಜ್ ಬಿ.ಎನ್.
ಹೆತ್ತವರಿಗೆ ಮುದ್ದು ಮಕ್ಕಳಾಗಿ... ಸ್ನೇಹಿತರಿಗೆ ಆತ್ಮೀಯನಾಗಿ... ಸಮಾಜಕ್ಕೆ ಮಾದರಿಯಾಗಿ... ಮಾನವೀಯ ಮೌಲ್ಯಗಳ ಖಣಿಯಾಗಿ... ಬೇಕು-ಬೇಡಗಳನ್ನು ಅರ್ಥೈಸಿಕೊಳ್ಳುವ ಸತಿ-ಪತಿಗಳಾಗಿ... ನೈತಿಕತೆ ಮೀರದ ಪ್ರೇಮಿಗಳಾಗಿ... ಭವ್ಯ-ಭಾರತ ರೂಪಿಸುವ ಹೆಮ್ಮೆಯ ಶಿಕ್ಷಕರಾಗಿ... 

ನಾನು ಮಾಡಿದ್ದೆ ಸರಿ... ನಾನು ಹೇಳಿದ್ದೆ ಆಗಬೇಕು... ಎನ್ನುವ ಮನಸ್ಥಿತಿ ಸರ್ವಥಾ ತರವಲ್ಲ. ಅದರಿಂದ ನಾವು ನಮ್ಮ ಸ್ನೇಹಿತರನ್ನು ಹಾಗೂ ಪ್ರೀತಿ-ಪಾತ್ರರನ್ನು ದೂರ ಮಾಡಿಕೊಳ್ಳುತ್ತೇವೆಯೇ ಹೊರತು, ಬದುಕಿನ ಬೆಳವಣಿಗೆಗೆ ಒಂದಿನಿತೂ ಪ್ರಯೋಜನವಿಲ್ಲ.
ಋಷಿ-ಮುನಿಗಳ, ಸಾಧು-ಸಂತರ ಸಂಸ್ಕಾರಗಳು ನಮಗಿಲ್ಲ. ಗಡ್ಡೆ-ಗೆಣೆಸುಗಳಷ್ಟೇ ತಿನ್ನುವ ಸಾತ್ವಿಕ ಆಹಾರಿಗಳೂ ನಾವಲ್ಲ. ನಾವು ಆಧುನಿಕ ಜಗತ್ತಿಗೆ ತೆರದುಕೊಂಡು, ವೈಜ್ಞಾನಿಕ ಉಪಕರಣಗಳ ನಡುವೆ ಬದುಕು ಸಾಗಿಸುವವರು. ಮಾಂಸಾಹಾರವೇ ಪರಮ ಭಕ್ಷ್ಯ ಎಂದು ಸೇವಿಸುವವರು. ಹೀಗಿದ್ದಾಗ ಸಹಜವಾಗಿಯೇ ನಮ್ಮ ಆಲೋಚನೆಗಳು, ಆಚಾರ-ವಿಚಾರಗಳು ಸಂಸ್ಕಾರವನ್ನು ಮರೆಮಾಚುವಂತೆ ಮಾಡುತ್ತವೆ. ಹಾಗಂತ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಅಲ್ಲವೇ...? ನಮ್ಮ ಜೊತೆ ಬದುಕಿ-ಬಾಳುವವರಿಗೂ ಕೂಡಾ, ನಮ್ಮ ಹಾಗೆಯೇ ಒಂದು ಬದುಕು ಇದೆ ಎನ್ನುವುದು ಸತ್ಯ ಅಲ್ಲವೇ...?
ಈ ಆಧುನಿಕ ಬದುಕಿನ ನಾಗಾಲೋಟದಲ್ಲಿ ಯಾವುದು ಸರಿ...? ಯಾವುದು ತಪ್ಪು...? ಎಂದು ನಮಗೆ ಅರಿವಿಗೆ ಬಾರದು. ವಿವೇಚನಾ ರಹಿತ ವ್ಯಾಖ್ಯಾನವೇ ನಮ್ಮ ಜೀವಾಳವಾಗಿ ಬಿಟ್ಟಿದೆ. ಪರಿಣಾಮ, ನಾನು ಮಾಡಿದ್ದೆ ಸರಿ... ನಾನು ಹೇಳಿದ್ದೇ ಸರಿ... ನನಗೆಲ್ಲವೂ ಗೊತ್ತು... ನನ್ನದು ಇದೇ ಇದೇ ಸ್ವಭಾವ... ಬೇಕಾದರೆ ಒಪ್ಪಿಕೋ, ಬೇಡವಾದರೆ ಬಿಡು... ನನ್ನಿಷ್ಟದ ಹಾಗೆ ನಾನು ಬದುಕುತ್ತೇನೆ... ನನ್ನ ಬದುಕು ನನ್ನದು... ನನಗೆ ಹೇಳಲು ನೀನ್ಯಾರು...? ನೀನು ನನ್ನ ಸಂಬಂಧಿನಾ...? ಹೀಗೆ ಮನಸ್ಸಿಗೆ ಬಂದ ಹಾಗೆ, ಏನೇನೋ ಬಡಬಡಿಸಿ ನಮ್ಮ ಮನಸ್ಸು ಎಂತಹದ್ದು ಎಂದು ಪ್ರದರ್ಶಿಸಿ ಬಿಡುತ್ತೇವೆ. ಇದು ನಮ್ಮ ಸಂಸ್ಕಾರದ ಫಲನೇ ಅಲ್ಲವೇ...? ಗಡ್ಡೆ-ಗೆಣಸು ತಿನ್ನುತ್ತಿದ್ದ ಸಾಧು-ಸಂತರು ಹೀಗೆ ವರ್ತಿಸುತ್ತಿದ್ದರೆ..? ಹಾಗಂತ ಮಾಂಸಾಹಾರ ತಿನ್ನುವವರೆಲ್ಲರೂ ಹೀಗೆ ವರ್ತಿಸುತ್ತಾರೆ ಅಂತಲ್ಲ. ಈಗಿನ ಬಹುತೇಕರ ಮನಸ್ಥಿತಿ ಹೀಗೆಯೇ ಇದೆ. ಆದರೆ, ಅದು ತಪ್ಪು ಎಂದು ನಮಗೆ ಅರ್ಥವಾಗುವುದಿಲ್ಲ. ಯಾರಾದರೂ, `ಹಾಗೆ ಮಾತನಾಡುವುದು ತಪ್ಪು, ಹಾಗೆಲ್ಲ ಹೇಳ ಬೇಡ' ಎಂದರೆ... ಅದನ್ನು ಕೇಳುವ ವ್ಯವಧಾನವೂ ನಮಗಿರುವುದಿಲ್ಲ. ಸಂದರ್ಭದಲ್ಲಿ `ನಾನು ಮಾಡಿದ್ದೆ ಸರಿ ಎನ್ನುವ ಅಹಂ' ನಮ್ಮಲ್ಲಿ ಪುಟಿದೇಳುತ್ತಿದೆ. ಅದರ ಮೇಲಾಟದಲ್ಲಿ `ಸರಿ-ತಪ್ಪು'ಗಳ ವಿವೇಚನೆಯೇ ಮಖಾಡೆ ಮಲಗಿರುತ್ತವೆ. ಆದರೆ ಇವೆಲ್ಲ ನಮ್ಮ ಸಂಸ್ಕಾರದ ಫಲನೇ ಅಲ್ಲವೇ...?

ಇರಲಿ, ಕ್ಯಾಲೆಂಡರ್ನಲ್ಲಿ ವರ್ಷ ಬದಲಾಗುವ ದಿನಕ್ಕೆ ಎದುರು ನೋಡುತ್ತಿದ್ದೇವೆ. `ಹಿಂದು ವರ್ಷಾಚರಣೆಯಲ್ಲ, ಅದನ್ನು ಆಚರಿಸುವುದು ಬೇಡ' ಎನ್ನುವ ಕೂಗು ಸಹ ಅಲ್ಲಲ್ಲಿ ಕೇಳಿ ಬರುತ್ತಿವೆ. ನೂತನ ವರ್ಷವನ್ನು ಆಚರಣೆ ಮಾಡುವುದು ಬೇಡ. ಆದರೆ, ವರ್ಷ ಬದಲಾವಣೆಯಾಗುವ ಸಂದರ್ಭದಲ್ಲಿ ದೃಢ ಸಂಕಲ್ಪ ಮಾಡೋಣ. ವಿಚಾರ, ಆಚಾರ, ನಡೆ, ನುಡಿಗಳನ್ನು ಬದಲಿಸಿಕೊಳ್ಳೋಣ. ನಾನು ಮಾಡಿದ್ದೇ ಸರಿ, ನಾನು ಹೇಳಿದ್ದೇ ಆಗಬೇಕು ಎನ್ನುವ ತುಚ್ಛ ಮನಸ್ಥಿತಿಯನ್ನು ಈ ವರ್ಷದಲ್ಲಿಯೇ ಬಿಟ್ಟು ಹೋಗೋಣ. ಇನ್ನೊಬ್ಬರು ಆಡುವ ಮಾತನ್ನು ತಾಳ್ಮೆಯಿಂದ ಕೇಳೋಣ... `ಅವರು ಯಾಕಾಗಿ ನನಗೆ ಹೇಳುತ್ತಿದ್ದಾರೆ?' ಎಂದು ನಮ್ಮಲ್ಲಿಯೇ ಮಂಥನ ಮಾಡಿಕೊಳ್ಳೊಣ. ಸಂಬಂಧವನ್ನು ಹಾಳು ಮಾಡಿಕೊಳ್ಳುವ, `ನೀನು ನನಗೆ ಸಂಬಂಧಿನಾ, ನನ್ನ ಸ್ವಭಾವವೇ ಹಾಗೆ, ನನ್ನ ಬದುಕು ನನ್ನಿಷ್ಟ, ನನಗೆ ಹೇಳಲು ನಿನ್ಯಾರು... ಎನ್ನುವ ಮಾತುಗಳನ್ನು ಬಿಟ್ಟು ಬಿಡೋಣ. ಕುಟುಂಬದವರ, ಸ್ನೇಹಿತರ, ಜೊತೆಯಿರುವ, ಪ್ರೀತಿಸುವವರ ಜೊತೆ ಕೂಡಿ-ಬಾಳೋಣ. ಅಹಂನ ಕಪಿಮುಷ್ಟಿಯಲ್ಲಿ ಸಿಲುಕಿ, ಅದರ ಪ್ರತಿಷ್ಠಗಾಗಿ ಜೊತೆಗಾರರನ್ನು ಕಳೆದುಕೊಳ್ಳದಿರೋಣ. ಅವರ ಮಾತುಗಳನ್ನು ಕೇಳಿ ಅವರ ಬದುಕಿಗೂ ಗೌರವ ನೀಡೋಣ. ಹೆತ್ತವರಿಗೆ ಮುದ್ದು ಮಕ್ಕಳಾಗಿ... ಸ್ನೇಹಿತರಿಗೆ ಆತ್ಮೀಯನಾಗಿ... ಸಮಾಜಕ್ಕೆ ಮಾದರಿಯಾಗಿ... ಮಾನವೀಯ ಮೌಲ್ಯಗಳ ಖಣಿಯಾಗಿ... ಬೇಕು-ಬೇಡಗಳನ್ನು ಅರ್ಥೈಸಿಕೊಳ್ಳುವ ಸತಿ-ಪತಿಗಳಾಗಿ... ನೈತಿಕತೆ ಮೀರದ ಪ್ರೇಮಿಗಳಾಗಿ... ಭವ್ಯ-ಭಾರತ ರೂಪಿಸುವ ಹೆಮ್ಮೆಯ ಶಿಕ್ಷಕರಾಗಿ... ಒಟ್ಟಾರೆ ಸಮಾಜದ ಆದರ್ಶ ವ್ಯಕ್ತಿಯಾಗಲು ಪಣ ತೊಡೋಣ.ನಮ್ಮ ಬದುಕಿನಾಚೆಗೂ ಒಂದು ಸುಂದರ ಬದುಕಿದೆ ಎನ್ನುವುದು ಮರೆಯದಿರೋಣ..

ಮಂಗಳವಾರ, ಜುಲೈ 22, 2014

ಕಾಡಬೇಡ ಓ ನೆನಪೇ ....!

ಉಮ್ಮಳಿಸುತಿದೆ ಎದೆಯಾಳದಿಂದ
ಬದುಕು ಕೊಟ್ಟ ನೆನಪೊಂದು
ತಡೆಯೊಡ್ಡುತ್ತಿದ್ದೇನೆ ಬಲವಂತವಾಗಿ
ಹೊರ ಬಂದು ನೀ ಸೃಷ್ಟಿಸಬೇಡ
ಅಲ್ಲೋಲ ಕಲ್ಲೋಲವೆಂದು...!!
ಕಣ್ಣಾಲಿಗಳು ಕೆಂಪಾಗಿಹುದು
ಬಿರು ಬಿಸಿಲ ಬೇಗೆಗೆ
ಕೆನ್ನೆಗಳು ತೋಯ್ದಿಹುದು
ಬಿಟ್ಟು ಬಿಡದೆ ಹರಿದ ಕಂಬನಿಗೆ...!!


ಅಂತರಂಗದ ಹೊಯ್ದಾಟ
ಬಹಿರಂಗದ ತಾಕಲಾಟ
ಉಚ್ವಾಶ-ನಿಚ್ವಾಶದ ಮೇಲಾಟ
ಎದ್ದೇಳಿಸದಾಗಿದೆ ಗರಿ ಬಿಚ್ಚಿದ ಮನವ...!!
ವಿಶ್ವಾಸದ ಎಳೆ ತುಂಡರಿಸಿ
ಸುಳಿ ಸುಳಿಯಾಗಿ ಬೀಸೋ
ಸುಳಿಗರ್ಾಳಿ ತೆಕ್ಕೆಗೆ ಸಿಲುಕಿ
ಸಾಗುತಿದೆ ದೂರ ದೂರಕೆ
ಕಣ್ಣಂಚಿನ ಒಲವ ಬಿಟ್ಟು
ಕಾಣದಾ ಊರಿಗೆ..........!!
ಉಮ್ಮಳಿಸಬೇಡ ಓ ನೆನಪೇ
ತಿದ್ದಿ.. ತೀಡಿ, ಕೈ ಹಿಡಿದು ಮುನ್ನಡೆಸು
ನಗುವಿರ ಮೊಗದಲ್ಲಿ, ಹೂ ನಗೆಯ ಅರಳಿಸು
ಬದುಕಿಕೊಳ್ಳಲಿ ಜೀವ
ನಿನ್ನದೇ ನೆನಪಿನಲಿ...!! 
                                                          -ನಾಗರಾಜ್ ಬಿ. ಎನ್(೯೮೧೦೫೨೩೭೮)

ಭಾನುವಾರ, ಮೇ 25, 2014

ಎಲ್ಲಿ ಹೋದವು ಅಮ್ಮಾ ನನ್ನ ಗುಬ್ಬಚ್ಚಿಗಳು.....?

ನಾಗರಾಜ್ ಬಿ.ಎನ್. ಬಾಡ-ಕುಮಟ
ಮುಂಜಾನೆಯ ಹಾಯಾದ ಸುಖ ನಿದ್ದೆ. ಆಗಲೇ ಮೂರುಸಾವಿರ ಮಠದ ಗಂಟೆ ಆರು ಬಾರಿ ಹೊಡೆದುಕೊಂಡಿತ್ತು. ಕಣ್ಣನ್ನು ಉಜ್ಜುತ್ತ ಯಾಕಾದರೂ ಬೆಳಕು ಹರಿಯುತ್ತೋ ಎಂದು ಗೊಣಗುತ್ತಲೇ ಹಾಸಿಗೆಯಿಂದ ಮೇಲೆದ್ದೆ. ಬಾಗಿಲು ತೆರೆದು ಹೊರಗಡೆ ಒಮ್ಮೆ ಕಣ್ಣಾಡಿಸಿದೆ.
ದೂರದ ಬನ್ನಿ ಮರದ ಮೇಲೆ ಎರಡು ಗುಬ್ಬಚ್ಚಿಗಳು ಸ್ವಚ್ಛಂದವಾಗಿ ಹಾರಾಡುತ್ತಿದ್ದವು.
ಪುಟ್ಟ ಗುಬ್ಬಚ್ಚಿಗಳ ಹಾರಾಟ ನೋಡುತ್ತ, ಚಿಂವ ಚಿಂವ ಸದ್ದು ಕೇಳುತ್ತ ಅಲ್ಲಿಯೇ ನಿಂತು ಬಿಟ್ಟೆ. ಅರಿವಿಲ್ಲದೆ ಕಣ್ಣಾಲಿಗಳು ತೇವಗೊಂಡವು.
ಅರೆ ಕ್ಷಣದಲ್ಲಿಯೇ ಮನೆಗೆ ಫೋನಾಯಿಸಿದೆ. ಅಮ್ಮ ಫೋನ್ ರಿಸೀವ್ ಮಾಡಿದ್ದಳು.
`ಅಮ್ಮಾ, ಗುಬ್ಬಚ್ಚಿಗಳು ಮನೆಗೆ ಬರ್ತಾ ಇವೆಯಾ? ಬರ್ಡ್ ಫೀಡರ್(ಸ್ನೇಹಿತ ದಿನು, ತನ್ನ ಜನ್ಮದಿನಕ್ಕೆ ನನಗೆ ನೀಡಿದ ಗಿಫ್ಟ್)ನಲ್ಲಿ ಹಾಕಿಟ್ಟ ಆಹಾರ ತಿನ್ನೋಕೆ ಎಷ್ಟು ಗುಬ್ಬಚ್ಚಿಗಳು ಬರ್ತಾ ಇವೆ?'
ಬೆಳ್ಳಂಬೆಳಿಗ್ಗೆ ಮಗನ ಫೋನ್ ಗೆ ಮತ್ತು ಪ್ರಶ್ನೆಗಳಿಗೆ ಅಮ್ಮ ತುಸು ಆಶ್ಚರ್ಯಕ್ಕೀಡಾದಳು ಅನ್ಸತ್ತೆ.
`ಏನಾಯ್ತೋ ಮಗ.. ಹಾಸಿಗೆಯಿಂದ ಏಳ್ತಾನೆ ಗುಬ್ಬಿ, ಗುಬ್ಬಿ ಅಂತ ಇದ್ದೀಯಾ?'
`ಯಾಕಿಲ್ಲಮ್ಮಾ, ಇಲ್ಲಿ ಎರಡು ಗುಬ್ಬಚ್ಚಿಗಳು ಚಿಂವ ಚಿಂವ ಎನ್ನುತ್ತ ಓಡಾಡ್ತಾ ಇವೆ. ಅಲ್ಲಿಯೂ ಹೀಗೆ ಆಟ ಆಡ್ತಾ ಇವೆಯಾ ಅಂತ ಫೋನ್ ಮಾಡಿದೆ'
'ಈಗ ಎಲ್ಲೋ ಆ ಪುಟ್ಟ ಗುಬ್ಬಚ್ಚಿಗಳು? ಏಳೆಂಟು ವರ್ಷಗಳೇ ಕಳೆದು ಹೋದವು. ಹುಡುಕುತ್ತಾ ಹೋದರೂ ಒಂದು ಗುಬ್ಬಿ ಸಹ ಕಾಣಲ್ಲ'
`ಅಮ್ಮಾ, ನಾನು ಕನ್ನಡ ಶಾಲೆಗೆ ಹೋಗುವಾಗ ಎಷ್ಟೊಂದು ಗುಬ್ಬಚ್ಚಿಗಳು ಮನೆಗೆ ಬರ್ತಾ ಇದ್ದವು ಅಲ್ವಾ? ಮನೆ ಒಳಗಡೆಯ ಫೋಟೋದ ಹಿಂದೆ, ಹಂಚಿನ ಕೆಳಗೆ ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡಿ ಸಂಸಾರ ನಡೆಸ್ತಾ ಇದ್ದವು. ಈಗ ಅವೆಲ್ಲ ಎಲ್ಲಿ ಅಮ್ಮಾ...?'
ಅಮ್ಮ ಮೌನಕ್ಕೆ ಶರಣಗಾಗಿದ್ದಳು.... ನನ್ನ ಮಾತು ಮುಂದುವರಿದಿತ್ತು.
`ಕೈ-ಕಾಲಿಗೆ ಎಡತಾಕುತ್ತ, ಚಿಂವ ಚಿಂವ ಎಂದು ಹಾರಾಡುತ್ತ ಮನೆಯ ವಾರಸುದಾರರ ಹಾಗೆ ಕಾರುಬಾರು ನಡೆಸ್ತಾ ಇರ್ತಿದ್ದರು ಅಲ್ವಾ ಅಮ್ಮ? ನೀನು ಅಕ್ಕಿ ಆರಿಸುವಾಗ ನಿನ್ನ ಪಕ್ಕದಲ್ಲಿಯೇ ಅವರು ಕುಣಿದು ಕುಪ್ಪಳಿಸಿ, ಒಂದೊಂದೆ ಕಾಳನ್ನು ಹೆಕ್ಕಿ ತಿನ್ತಾ ಇದ್ದರು. ಅಪರಿಚಿತರೇನಾದರೂ ಬಂದಾಗ ಪುರ್ರ ಎಂದು ಹಾರಿ ಹೋಗ್ತಾ ಇದ್ದರು. ನಾನು ಶಾಲೆಗೆ ಹೋದ ಸಮಯ ಆ ಗುಬ್ಬಚ್ಚಿಗಳೇ ಅಲ್ವಾ ಅಮ್ಮಾ, ನಿನ್ನ ಜೊತೆಯಾಗಿರ್ತಿದ್ದವರು? ಎಲ್ಲಿ ಹೋದವು ಅಮ್ಮಾ ಆ ನನ್ನ ಮುದ್ದು ಗುಬ್ಬಚ್ಚಿಗಳು.....?'
ಅಮ್ಮನಿಗೆ ಮಾತೇ ಹೊರಡುತ್ತಿರಲಿಲ್ಲ. ಏನು ಹೇಳಬೇಕೆಂದು ತೋಚದೆ ಹಾಂ... ಹಾಂ... ಎನ್ನುತ್ತಿದ್ದಳು. ಕೊನೆಗೂ ಅಮ್ಮ ತುಟಿ ಬಿಚ್ಚಿದಳು...
'ಮಗ, ಅದೇ ಮೊಬೈಲ್ ಟವರ್ ಗಳಿಂದ ಗುಬ್ಬಿ ಸಂತತಿ ನಾಶವಾಗಿದೆಯಂತೆ. ಕೆಲವು ಗುಬ್ಬಚ್ಚಿಗಳು ಬೇರಡೆ ವಲಸೆ ಹೋಗಿವೆಯಂತೆ. ರಾಸಾಯನಿಕ ಮಿಶ್ರಿತ ಆಹಾರದಿಂದಾಗಿ ಅದಕ್ಕೆ ಬೇಕಾದ ಸಾವಯವ ಆಹಾರ ಕೂಡಾ ಸರಿಯಾಗಿ ಸಿಗ್ತಾ ಇಲ್ವಂತೆ. ಏನ್ಮಾಡೋದು.. ಆಧುನಿಕ ತಂತ್ರಜ್ಞಾನ ಬೆಳೆದಂತೆ ಪ್ರಕೃತಿಯ ಸಮತೋಲನ ಕೂಡಾ ಏರುಪೇರಾಗುತ್ತಿದೆ. ಅದು ನೇರವಾಗಿ ನಮ್ಮ ಗುಬ್ಬಚ್ಚಿಯ ಸಂತತಿಗೆ ಮಾರಕವಾಗ್ತಿರೋದು ವಿಪರ್ಯಾಸ. ಪಾಪ, ವಲಸೆ ಹೋಗಿರುವ ಗುಬ್ಬಚ್ಚಿಗಳಾದರೂ ಬೆಚ್ಚಗಿರಲಿ'
ಈಗ ಮಾತನಾಡುವ ಸರದಿ ಅಮ್ಮನದಾಗಿತ್ತು. ನಾನು ಅವಳ ಮಾತಿಗೆ ಕಿವಿಯಷ್ಟೇ ಆಗಿದ್ದೆ.
'ಅಂದ ಹಾಗೆ, ಬರ್ಡ್ ಫೀಡರ್ ಅಂದ್ಯಲ್ಲ. ನೀ ತೂಗು ಹಾಕಿದ ಜಾಗದಲ್ಲಿ ಇಷ್ಟು ದಿನ ಆದ್ರೂ ಒಂದು ಗುಬ್ಬಚ್ಚಿನೂ ಬಂದಿಲ್ಲ. ಹಕ್ಕಿಯೂ ಬಂದಿಲ್ಲ. ಅದಕ್ಕಾಗಿ ಆ ಜಾಗವನ್ನು ಬದಲಿಸಿ ಬೇರೆಡೆ ಇಟ್ಟಿದ್ದೇನೆ. ನೋಡೋಣ, ಅಲ್ಲಿಯಾದರೂ ಬರ್ತವೋ ಇಲ್ವೋ ಎಂದು. ನೀ ಬೇಜಾರು ಮಾಡ್ಕೋ ಬೇಡ. ಹೂಂ ನಾ?'
ಅಮ್ಮ ಮಾತನಾಡುತ್ತ ಮಾತನಾಡುತ್ತ ಗದ್ಗದಿತಳಾದಳು. ಉಮ್ಮಳಿಸಿ ಬರುವ ದುಃಖವನ್ನು ತಡೆದು ನನ್ನನ್ನು ಸಂತೈಸುವ ಸಾಹಸಕ್ಕಿಳಿದಿದ್ದಳು. ಇತ್ತ ನನ್ನ ಕೆನ್ನೆಯ ಮೇಲಿಂದ ಕಂಬನಿಗಳು ನಿಧಾನವಾಗಿ ಉರುಳುತ್ತಿದ್ದವು. ಎಷ್ಟಾದರೂ ಕರಳು-ಬಳ್ಳಿಯ ಸಂಬಂಧ ಅಲ್ವಾ...?
ನಂತರ ದೂರದಲ್ಲಿರುವ ನನ್ನ ಆತ್ಮ ಬಂಧುವಿಗೆ ಫೋನಾಯಿಸಿ, ನಡೆದ ಎಲ್ಲ ವಿಷಯವನ್ನು ಹೇಳಿದೆ. ನನಗೆ ಗುಬ್ಬಚ್ಚಿ ಬೇಕು ಎಂದು ಗೋಗರೆದೆ. ಮಾತಿನ ಮಧ್ಯೆ ಅವಳು 'ಗುಬ್ಬಚ್ಚಿ ಪಾರ್ಕ್' ಮಾಡುವ ಯೋಜನೆ ಹರಿಯ ಬಿಟ್ಟಳು.
ಗುಬ್ಬಚ್ಚಿ ಪಾರ್ಕ್ ಯೋಜನೆ ನನಸಾಗಿದ್ದು, ಗುಬ್ಬಚ್ಚಿಗಳ ಜೊತೆ ಒಡನಾಡುತ್ತಿದ್ದದ್ದು, ಅವುಗಳ ಚಿಂವ ಚಿಂವ ಕಲರವ..... ಎಲ್ಲವನ್ನು ಕಲ್ಪಿಸಿಕೊಳ್ಳುತ್ತ ಕ್ಷಣಕಾಲ ಕಣ್ಮುಚ್ಚಿದೆ.
ಕಲ್ಪನಾ ಲೋಕದಲ್ಲಿ ಗುಬ್ಬಚ್ಚಿಗಾಗಿ ಬದುಕಿದ ಸಾರ್ಥಕತೆಯ ಭಾವ ನನ್ನಲ್ಲಿ ಮೇಳೈಸಿತು. ಆದರೇ.... ಅದು ನಿಜ ಬದುಕಲ್ಲಿ ಎಂದೋ...? 

ಶುಕ್ರವಾರ, ಮೇ 23, 2014

'ಸ್ನೇಹ'ದಲ್ಲೊಂದು ಪ್ರೇಮ ರಾಗ....

ನಾಗರಾಜ ಬಿ.ಎನ್.
ಆತನ ಹೆಸರು ಕುಮಾರ. ಸದಾ ಕ್ರಿಯಾಶೀಲ ವ್ಯಕ್ತಿತ್ವದ ಹುಡುಗ. ಗುಣವಂತ... ಪ್ರಾಮಾಣಿಕ... ಸ್ನೇಹ ಜೀವಿ.
ದೈವಿಚ್ಛೆಯೋ.. ಆಕಸ್ಮಿಕವೋ... ವೃತ್ತಿ ಬದುಕೋ... ಅಥವಾ ಅನಿವಾರ್ಯವೋ.... ಗೊತ್ತಿಲ್ಲ. ರಾಜ ಎಂಬ ಹುಡುಗನಿಗೆ ಆತನ ಪರಿಚಯವಾಗುತ್ತದೆ. ಒಂದು ಕಿರು ನಗೆಯ ಪರಿಚಯ ಸ್ನೇಹವಾಗಿ ಆತ್ಮ ಸಂಬಂಧಕ್ಕೆ ತಿರುಗುತ್ತದೆ. ತೀರಾ ವೈಯಕ್ತಿಕ ಎನ್ನುವಂತ ಎಷ್ಟೋ ವಿಷಯಗಳನ್ನು ಒಬ್ಬರನ್ನೊಬ್ಬರು ಹಂಚಿಕೊಂಡು, ಕಷ್ಟ-ಸುಖದಲ್ಲಿ ಪಾಲುದಾರರಾಗಿ ಬದುಕನ್ನು ಮುನ್ನಡೆಸುತ್ತಾರೆ. ಅಗಲಿರಲಾರದ ಅವರಿಬ್ಬರ ಸ್ನೇಹ ಕಂಡು ಎಷ್ಟೋ ಜನರು ಮೂಗು ಮುರಿದದ್ದು ಇದೆ. ಅವರ ಸ್ನೇಹಕ್ಕೆ ತಡೆಯೊಡ್ಡಲು ಕಾಣದ ಕೈಗಳು ಕುತಂತ್ರ ನಡೆಸಿದ್ದೂ ಇದೆ. ಅವುಗಳ ನಡುವೆಯೇ ಅವರ ಪವಿತ್ರ ಹಾಗೂ ಗಟ್ಟಿ ಸ್ನೇಹ ಇನ್ನಷ್ಟು ಎತ್ತರೆತ್ತರಕ್ಕೆ ಬೆಳೆಯುತ್ತ ಸಾಗಿದೆ.
ಹೀಗಿರಲು ಒಂದು ದಿನ ಕುಮಾರ ಖಿನ್ನನಾಗಿ ಏನೋ ಚಿಂತಿಸುತ್ತ ಮನೆಯ ಮೂಲೆಯೊಂದರಲ್ಲಿ ಕುಳಿತಿರುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಸ್ನೇಹಿತ ರಾಜ ಭೆಟ್ಟಿ ನೀಡುತ್ತಾನೆ. ಸ್ನೇಹಿತನ ದುಃಖತಪ್ತ ಮನಸ್ಥಿತಿಯನ್ನು ಕಂಡು ರಾಜ ಅರೆಕ್ಷಣ ಗಾಬರಿಯಾಗುತ್ತಾನೆ. ನಿಧಾನವಾಗಿ ಸಾವರಿಸಿಕೊಂಡು ಮಾತಿಗಿಳಿಯುತ್ತಾನೆ.
`ಏನೋ ಗೆಳೆಯಾ.... ಏನಾಯ್ತೋ? ಯಾಕಿಷ್ಟು ಕೊರಗುತ್ತಿದ್ದೀಯಾ? ಪ್ಲೀಸ್....'
'......................'
ನೀರವ ಮೌನ. ಮನೆಯ ಹೊರಗಡೆ ಕಾಗೆ `ಕ್ರಾ.... ಕ್ರಾ....' ಎಂದು ಒಂದೇ ಸಮನೆ ಕೂಗುತ್ತಿದೆ. ಏನೋ ಅಪಶಕುನ ಕಾದಿದೆ ಎಂದು ರಾಜನಿಗೆ ಭಾಸವಾಗುತ್ತಿದೆ.
'ಕುಮಾರ, ನಾನು ನಿನ್ನ ಪ್ರಾಣ ಸ್ನೇಹಿತ ಕಣೋ.... ಯಾಕಿಷ್ಟು ಅಳುತ್ತಿದ್ದೀಯಾ? ಹೇಳೋ.....' ಎಂದು ಮತ್ತೆ ಮಾತಿಗಿಳಿಯುತ್ತಾನೆ.
'ಹಾಂ.... ಏನಂತ ಹೇಳ್ಲೋ..? ದಯವಿಟ್ಟು ನನ್ನ ಬಿಟ್ಬಿಡೋ..'
'ಹುಚ್ಚರ ಹಾಗೆ ಮಾತಾಡ್ಬೇಡ. ಏನಾಯ್ತಂತ ಹೇಳು'
'ನೀನು ನನ್ಮೇಲೆ ತಪ್ಪು ತಿಳ್ಕೋಳ್ಳಲ್ಲ ಅಂತ ಪ್ರಾಮಿಸ್ ಮಾಡು'
'ಹೂಂ... ಮಾಡ್ದೆ, ಹೇಳು ಮಾರಾಯ'
ಮತ್ತೆ ಹೊರಗಡೆ ಕಾಗೆಯ ಕರ್ಕಶ ಕೂಗು.
ರಾಜನ ಮನಸ್ಸು ಅವ್ಯಕ್ತ ದುಗುಡದಲ್ಲಿ ಮುಳುಗಿದೆ. ಮನದೊಳಗಿನ ಕಾತುರ, ತವಕ ಒಂದೇ ಸಮನೆ ಹೆಚ್ಚುತ್ತಿದೆ. ಆದರೂ ಅದ್ಯಾವುದರ ಕುರುಹನ್ನು ಆತ ಮುಖದ ಮೇಲೆ ತೋರ್ಪಡಿಸಿಕೊಳ್ಳುತ್ತಿಲ್ಲ. ನಿರಾಳ ವದನದವನಾಗಿ ಸ್ನೇಹಿತ ಕುಮಾರನ ಉತ್ತರದ ನಿರೀಕ್ಷೆಯಲ್ಲಿದ್ದಾನೆ.
ಕುಮಾರ ಹೇಳಲೋ ಬೇಡವೋ ಎಂದು ಮನಸ್ಸಲ್ಲಿಯೇ ಲೆಕ್ಕ ಹಾಕುತ್ತ, 'ಸ್ನೇಹಿತನಿಗೆ ಹೇಳದೆ ಇಷ್ಟು ದಿನ ನಾನು ವಿಷಯ ಮುಚ್ಚಿಟ್ಟದ್ದು ಸರಿನಾ? ಇದು ನನ್ನ ಸ್ನೇಹಕ್ಕೆ ಮಾಡಿದ ಅಪಚಾರನಾ? ವಿಷಯ ಗೊತ್ತಾದರೆ ರಾಜ ಏನಂದುಕೊಳ್ಳುತ್ತಾನೆ?' ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದಾನೆ.
ಆದರೂ ಪ್ರಾಣ ಸ್ನೇಹಿತನ ಒತ್ತಾಯಕ್ಕೆ ಮಣಿದು ಮನದಾಳದ ಬೇಗುದಿಯನ್ನು ಹೊರ ಹಾಕುತ್ತಾನೆ.
'ಕಳೆದ ಒಂದು ವರ್ಷದಿಂದ ನಾನೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಪ್ರೀತಿ-ಪ್ರೇಮದ ಜಂಜಾಟವೇ ಬೇಡ ಎಂದು ಇಷ್ಟು ವರ್ಷಗಳ ಕಾಲ ದೂರವಿದ್ದ ನನಗೆ ಅವಳು ಅದ್ಹೆಗೆ ಮೋಡಿ ಮಾಡಿದಳೋ ಗೊತ್ತಿಲ್ಲ. ಬಹುಶಃ ಅವಳ ನಗು, ಮಾತು, ನೋಟವೇ ನನಗೆ ಹುಚ್ಚು ಹಿಡಿಸಿದ್ದು ಅನ್ಸತ್ತೆ. ಒಂದು ದಿನ ಅವಳನ್ನು ನೋಡದೆ ಇದ್ದರೆ ಏನೋ ಕಳೆದುಕೊಂಡಂತೆ. ಅವಳ ಜೊತೆ ಮಾತನಾಡದಿದ್ದರೆ, ಅಂದಿನ ಉತ್ಸಾಹವೇ ಕಳೆದುಕೊಂಡು ಬಿಡುತ್ತೇನೆ. ಮನ ಮನವೆಲ್ಲ ಅವಳು ಆವರಿಸಿ ಬಿಟ್ಟಿದ್ದಾಳೆ. ಮದುವೇ ಆಗುವುದಿದ್ದರೆ ಅವಳನ್ನೇ ಆಗಬೇಕು ಎಂದು ನಿರ್ಧರಿಸಿದ್ದೆ. ಆದರೆ ನಾನು ಪ್ರೀತಿಸುತ್ತಿದ್ದ ವಿಷಯ ಯಾರಿಗೂ ಹೇಳಿಲ್ಲ. ಪ್ರೀತಿಸುತ್ತಿರುವ ಹುಡುಗಿಗೂ ಹೇಳಿರಲಿಲ್ಲ.........'
ಕುಮಾರ ಒಂದೇ ಸಮನೆ ಬಚ್ಚಿಟ್ಟ ತನ್ನೆಲ್ಲ ಭಾವನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾನೆ. ರಾಜ ನೀಲಾಕಾಶ ನೋಡುತ್ತ ಆತನ ಮಾತನ್ನು ಕೇಳುತ್ತಿದ್ದಾನೆ.
'ಆದರೆ, ಇಂದು ಮುಂಜಾನೆ ಅವಳು ಆಕಸ್ಮಿಕವಾಗಿ ಭೆಟ್ಟಿಯಾದಳು. ಮಾತಿಗೆ ಮಾತು ಸಾಗುತ್ತ ವೈಯಕ್ತಿಕ ಬದುಕಿನತ್ತ ಹೊರಳಿತು. ನಾನು ಕೂಡಾ ಸೂಕ್ತ ಸಮಯಾವಕಾಶಕ್ಕೆ ಕಾಯುತ್ತಿದ್ದೆ. ನನ್ನ ಬದುಕನ್ನು ನಿರ್ಧರಿಸುವ ಬಹು ನಿರೀಕ್ಷಿತ ಕ್ಷಣ ಆಗಮಿಸಿದೆ ಎಂದು, ಅವಳನ್ನು ಪ್ರೀತಿಸುತ್ತಿರುವ ವಿಷಯ ಪ್ರಸ್ತಾಪಿಸಿದೆ. ಈಗಾಗಲೇ ಅವಳು ಇನ್ನೊಬ್ಬನ ಪ್ರೀತಿಯ ತೆಕ್ಕೆಗೆ ಬಿದ್ದಿದ್ದಾಳಂತೆ. ಒಂದೂವರೆ ವರ್ಷದಿಂದ ಅವರಿಬ್ಬರೂ ಪ್ರೀತಿಸುತ್ತಿದ್ದಾರಂತೆ.  ಇಬ್ಬರ ಮನೆಗೂ ವಿಷಯ ತಿಳಿದಿದ್ದು, ಎರಡು ವರ್ಷದ ನಂತರ ಮದುವೆಗೆ ಒಪ್ಪಿಗೆ ನೀಡಿದ್ದಾರಂತೆ ಎಂದಳು. ಅವಳ ಆ ಮಾತುಗಳನ್ನು ಕೇಳಿ ಹೃದಯವೇ ಕಿತ್ತು ಬಂದ ಹಾಗೆ ಆಯ್ತು. ನನ್ನದು ಏಕಮುಖ ಪ್ರೇಮವಾದರೂ, ಅವಳನ್ನು ಜೀವ ಹೋಗುವಷ್ಟು ಪ್ರೀತಿಸುತ್ತಿದ್ದೆ. ಆರಾಧಿಸುತ್ತಿದ್ದೆ. ಪೂಜಿಸುತ್ತಿದ್ದೆ.... ಅವಳ ಬದುಕಲ್ಲಿ ಕಣ್ಣಾಗಿರಬೇಕೆಂದು ಬಯಸಿದ್ದೆ....'
ಕುಮಾರ ಬಿಕ್ಕಳಿಸುತ್ತ ಹೇಳುತ್ತಿದ್ದ.
ಅವನ ಪ್ರೇಮ ವೈಫಲ್ಯದ ಕಥೆಯನ್ನು ಕೇಳಿ ಗೆಳೆಯ ರಾಜ ಮರುಗುತ್ತಾನೆ. ತಲೆ ನೇವರಿಸುತ್ತ, ಸಾಂತ್ವನ ಹೇಳುತ್ತ, `ಹುಡುಗಿ ಎಲ್ಲಿಯವಳು, ಏನು ಮಾಡುತ್ತಿದ್ದಾಳೆ, ಅವಳ ಹೇಸರೇನು?' ಎಂದು ಸಹಜವಾಗಿ ಕೇಳುತ್ತಾನೆ.
'ಅವಳೇ ಕಣೋ, `...........'
ಕುಮಾರ ಹೆಸರು ಹೇಳುತ್ತಾನೆ.
ಸ್ನೇಹಿತ ರಾಜಗೆ ಗರ ಬಡಿದಂತಾಗುತ್ತದೆ. ಒಮ್ಮೆಲೆ ಬರಸಿಡಿಲು ಬಡಿದಪ್ಪಳಿಸಿದಂತಾಗುತ್ತದೆ. ತ್ಸುನಾಮಿಯ ಅಲೆಯಲ್ಲಿ ಸಿಲುಕಿ ಉಸಿರುಕಟ್ಟಿ ಒದ್ದಾಡಿದ ಅನುಭವವಾಗುತ್ತಿದೆ. ಕಾಗೆಯ ಕರ್ಕಶ ಸದ್ದು ಮತ್ತೆ ಜೋರಾಗುತ್ತಿದೆ. ಏನು ಹೇಳಬೇಕೆಂದು ತೋಚದೆ... ಕೈ ಕೈ ಹಿಚುಕಿಕೊಳ್ಳುತ್ತಾನೆ. ಅಳಬೇಕೋ...... ನಗಬೇಕೋ... ಏನೊಂದು ತಿಳಿಯದೆ ಅತ್ತಿಂದಿತ್ತ ಶತಪಥ ಹಾಕುತ್ತಿದ್ದಾನೆ.
'ಕುಮಾರ, ನನ್ನ ಕ್ಷಮಿಸೋ.... ನಾನು ದ್ರೋಹಿ. ಸ್ನೇಹಕ್ಕೆ ಮೋಸ ಮಾಡಿದ ಪಾಪಿ ಕಣೋ. ಪ್ಲೀಸ್..... ನನ್ನ ಕ್ಷಮಿಸೋ.... ಕ್ಷಮಿಸೋ....'
ಏನು ಎತ್ತ ಏನೂ ತೋಚದ ಕುಮಾರ ಕಕ್ಕಾಬಿಕ್ಕಿಯಾಗಿ ರಾಜನನ್ನೆ ನೋಡುತ್ತಿದ್ದಾನೆ..!
'ನೀನು ಪ್ರೀತಿಸುತ್ತಿರುವ ಹುಡುಗಿ ಹೇಳಿರುವ ಹುಡುಗ ಬೇರೆ ಯಾರೂ ಅಲ್ಲ ಕುಮಾರ, ಅವನು ನಾನೇ ಕಣೋ! ಒಂದೂವರೆ ವರ್ಷದ ನಮ್ಮ ಪ್ರೇಮ ಎಲ್ಲ ಮಜಲುಗಳನ್ನು ದಾಟಿ ಈಗ ಮದುವೆ ಎನ್ನುವ ಹಂತಕ್ಕೆ ಬಂದು ಮುಟ್ಟಿದೆ. ಆದರೆ ನಮ್ಮಗಳ ವೈಯಕ್ತಿಕ ಸಾಧನೆಗೋಸ್ಕರ ನಾವೇ ಎರಡು ವರ್ಷ ಮದುವೆಯನ್ನು ಮುಂದೂಡೆದ್ದೇವೆ. ಪ್ಲೀಸ್ ಗೆಳೆಯಾ, ಈ ವಿಷಯವನ್ನು ನಾನು ನಿನಗೆ ಹೇಳಿಲ್ಲ. ಹೇಳಿಕೊಳ್ಳುವ ಸಂದರ್ಭವೂ ಒದಗಿ ಬಂದಿಲ್ಲ. ನಿಜವಾಗಿ ನಾನು ಪಾಪಿ ಕಣೋ....'
ರಾಜ ಮಾತನಾಡುತ್ತಿದ್ದಾನೆ. ಕುಮಾರ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ..!
ಪ್ರೇಮದ ಮೊಗ್ಗು ಅರಳಿ ಸುಗಂಧ ಸೂಸಬಹುದು. ಆದರೆ, ಅರಳಿದ ಸ್ನೇಹ.....? ಇದಕ್ಕೆ ಕಾಲವೇ ಉತ್ತರ ನೀಡಬೇಕು.

ಬುಧವಾರ, ಏಪ್ರಿಲ್ 23, 2014

ಎಚ್ಚರಿಕೆ.....!!

'ಫೇಸ್ಬುಕ್'ನಲ್ಲಿ  ನಕಲಿ ಖಾತೆಗಳಿವೆ...

ನಾಗರಾಜ್ ಬಿ.ಎನ್.
ಭಾರತದಲ್ಲಿ 2010 ಸಂದರ್ಭದಲ್ಲಿ ಕೇವಲ 8 ಲಕ್ಷ ಫೇಸ್ಬುಕ್ ಬಳಕೆದಾರರಿದ್ದರು. ಆದರೆ ಪ್ರಸ್ತುತ (2014 ಏಪ್ರಿಲ್ ತಿಂಗಳಲ್ಲಿ) ಆ ಸಂಖ್ಯೆ ಬರೋಬ್ಬರಿ 10 ಕೋಟಿಗೆ ಏರಿದೆ....!! ಅಂದರೆ, ಮೂರು ವರ್ಷದ ಅವಧಿಯಲ್ಲಿ ಬಳಕೆದಾರರ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿದೆ ಅಂದರೆ ಅದರ ಜನಪ್ರಿಯತೆ ಎಷ್ಟು ಎಂಬುದು ಸ್ವಲ್ಪ ಲೆಕ್ಕ ಹಾಕಿ. ಆಶ್ಚರ್ಯ ಎನಿಸಬಹುದು!
ಆದರೆ... ಈ ಆಶ್ಚರ್ಯ ಜೊತೆಗೆ ಇನ್ನೊಂದು ಆಘಾತಕಾರಿ ವಿಷಯವೇನೆಂದರೆ ಈ 10ಕೋಟಿ ಫೇಸ್ಬುಕ್ ಬಳಕೆದಾರರ ಖಾತೆಗಳಲ್ಲಿ ಶೇ. 20ರಷ್ಟು ಖಾತೆಗಳು ನಕಲಿ...!!
ಯಾರದ್ದೋ ಹೆಸರಲ್ಲಿ, ಇನ್ಯಾರದ್ದೋ ಭಾವಚಿತ್ರ ಹಾಕಿ ನಕಲಿ ಖಾತೆಯನ್ನು ಸೃಷ್ಟಿಸಿಕೊಂಡಿರುತ್ತಾರೆ. ಅನಾಮಧೇಯ ಹೆಸರಲ್ಲಿ ಖಾತೆಯನ್ನು ಮಾಡಿಕೊಂಡು, ವ್ಯವಸ್ಥಿತವಾಗಿ ಮೋಸದ ಬಲೆ ಹೆಣೆಯುತ್ತಾರೆ.
ಎಲ್ಲೋ ಒಂದು ಮೂಲೆಯಲ್ಲಿದ್ದು ಮೋಸ ಮಾಡುವ ಬದಲು, ಹತ್ತಿರವೇ ಇದ್ದು ತಮ್ಮ ಅಪ್ತೆಷ್ಟರ ಕುತ್ತಿಗೆ ಕೊಯ್ಯುವ ಕಾಯಕದಲ್ಲಿ ಈ ನಕಲಿ ಖಾತೆದಾರರು ನಿರತರಾಗುತ್ತಾರೆ....! ಕೆಲವು ಪಡ್ಡೆ ಹುಡುಗರು ಹಾಗೂ ವಿಕೃತ ಮನಸ್ಸಿನವರು ತಮ್ಮದಲ್ಲದ ಹೆಸರಲ್ಲಿ ಖಾತೆಯನ್ನು ಸೃಷ್ಟಿಸಿಕೊಂಡು ಮಜಾ ಅನುಭವಿಸುತ್ತಾರೆ.
ನಕಲಿ ಖಾತೆಗೆ ಯಾವುದೋ ಒಂದು ಚಿಕ್ಕ ಮಗುವಿನ ಅಥವಾ ನಟಿಯ ಭಾವಚಿತ್ರವನ್ನು ಅಪ್ಪೋಡ್ ಮಾಡಿರುತ್ತಾರೆ. ನಂತರ ಇವರು ಫೇಸ್ಬುಕ್ ಖಾತೆಯಲ್ಲಿರುವ ಹುಡುಗಿಯರ ಸ್ನೇಹ ಬಯಸಿ ಮನವಿ ರವಾನಿಸುತ್ತಾರೆ. ಯಾವುದೋ ಹುಡುಗಿ ಸ್ನೇಹಕ್ಕಾಗಿ ಮನವಿ ಮಾಡಿದ್ದಾಳೆ ಎಂದು, ಹುಡಗಿ ಅವರ ಮನವಿಯನ್ನು ಸ್ವೀಕರಿಸಿ, ತನ್ನ ಸ್ನೇಹದ ಬಳಗಕ್ಕೆ ಸೇರಿಸಿಕೊಳ್ಳುತ್ತಾಳೆ. ಅರಿವಿಲ್ಲದೆ ಆ ಹುಡುಗಿ ಅವರ ಮೋಸದ ಜಾಲದಲ್ಲಿ ಸಿಲುಕಿಕೊಳ್ಳುತ್ತಾಳೆ.
ಒಂದೆರಡು ವಾರ, ತಿಂಗಳ ನಂತರ ನಕಲಿ ಖಾತೆ ಹೊಂದಿದ ವಿಕೃತ ಮನಸ್ಸಿನ ಹುಡುಗ ಆಕೆಯ ಜೊತೆ ನಿಧಾನಕ್ಕೆ ಚಾಟ್ ಮಾಡಲು ಪ್ರಾರಂಭಿಸುತ್ತಾನೆ. 'ಹಾಯ್'ನಲ್ಲಿ ಪ್ರಾರಂಭವಾಗುವ ಈ ಚಾಟ್ ಕೊನೆ ಕೊನೆಗೆ ಖಾಸಗಿ ವಿಷಯಗಳ ವಿನಿಮಯದತ್ತ ಸಾಗುತ್ತದೆ. ತನ್ನ ಸ್ನೇಹ ಬಯಸಿ ಮನವಿ ಕಳುಹಿಸಿದ್ದು ಹುಡುಗಿ ಎಂದುಕೊಂಡೇ ಆಕೆಯು ತನ್ನೆಲ್ಲ ಖಾಸಗಿ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾಳೆ. ಆಕೆಗೆ ಇದು ಮೋಸ ಎಂದು ಎಲ್ಲಿಯೂ ಅರಿವಾಗುವುದಿಲ್ಲ. ಅಷ್ಟೊಂದು ಚಾಕಚಕ್ಯತೆಯಿಂದ ಆ ವಿಕೃತ ಮನಸ್ಸಿನ ಯುವಕ ಅದನ್ನು ನಿಭಾಯಿಸಿಕೊಂಡು ಹೋಗುತ್ತಾನೆ...!!
ನಕಲಿ ಖಾತೆ ಬಳಕೆ ಮಾಡಿಕೊಂಡು ಹುಡುಗರನ್ನು ಯಾಮಾರಿಸುವುದರಲ್ಲಿ ಹುಡುಗಿಯರೂ ಕೂಡಾ ಹಿಂದೆ ಬಿದ್ದಿಲ್ಲ. ಅವರೂ ಸಹ ತಾವು ಯಾವುದರಲ್ಲಿಯೂ ಕಡಿಮೆಯಿಲ್ಲ ಎಂದು ಹುಡುಗರ ಇಲ್ಲವೇ ಯಾವುದೋ ಒಂದು ಹುಡುಗಿಯರ ಹೆಸರಲ್ಲಿ ನಕಲಿ ಖಾತೆಯನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ. ಮೊದ ಮೊದಲು ಹುಡುಗ ಹಾಕಿರುವ ಫೋಟೋಗಳನ್ನು ಲೈಕ್ ಮಾಡುತ್ತಾ.... ಕ್ರಮೇಣ ಫೋಟೊಗಳಿಗೆ ಕಮೆಂಟ್ಸ್ ಮಾಡಿ ಅವರ ಸ್ನೇಹವನ್ನು ಸಂಪಾದಿಸಿಕೊಳ್ಳುತ್ತಾರೆ. ಸ್ನೇಹ ಗಟ್ಟಿಯಾಗುತ್ತ ಹೋದ ಹಾಗೆ, ಹಾಯ್..... ಊಟ ಆಯ್ತಾ....? ಏನ್ಮಾಡ್ತಾ ಇದ್ದೀರಾ...? ಏನ್ ಜಾಬ್ ಮಾಡ್ತಾ ಇದ್ದೀರಾ...? ಹೀಗೆ ಚಟ್ಗಳ ಸರಣಿ ಸಾಗುತ್ತಾ ಹೋಗುತ್ತವೆ... ಆ ಹುಡುಗ ಯಾವಾಗ ಅವಳ ಮಾಹಿತಿಯನ್ನು ಕೇಳಲು ಪ್ರಾರಂಭಿಸುತ್ತಾನೋ ಆಗ ಆ ನಕಲಿ ಖಾತೆ ಮಾಡಿಕೊಂಡ ಹುಡುಗಿ, ದಿಕ್ಕು ತಪ್ಪಿಸಲು ಪ್ರಾರಂಭಿಸುತ್ತಾಳೆ. ಖಾತೆಯಲ್ಲಿ ನಮೂದಿಸಿರುವುದು ನನ್ನ ನಿಜವಾದ ಹೆಸರಲ್ಲ. ನನಗೆ ಬೇರೆಯದೇ ಹೆಸರಿದೆ. ನಾನು ಅಲ್ಲಿಯವಳು... ಇಲ್ಲಿಯವಳು ಎಂದು ಏನೇನೋ ಹೇಳುತ್ತ ಹುಡುಗರನ್ನು ಯಾಮಾರಿಸುತ್ತಾಳೆ. ಇಂತಹ ವಿಕೃತ ಮನಸ್ಸಿನ ಹುಡುಗಿಯರ ಗುಂಪೇ ಪೇಸ್ಬುಕ್ ಖಾತೆಯಲ್ಲಿ ಇದೆ ಎಂದರೂ ತಪ್ಪಾಗಲಾರದು.
ಯಾವುದಕ್ಕೂ ಫೇಸ್ಬುಕ್ ಬಳಕೆ ಮಾಡುವ ಮುನ್ನ... ಸ್ನೇಹಿತರ ಬಳಗಕ್ಕೆ ಅನಾಮಧೇಯರನ್ನು ಸೇರಿಸಿಕೊಳ್ಳುವುದಕ್ಕೂ ಮುನ್ನ... ಹಾಗೆಯೇ ಸ್ನೇಹಿತರಾಗಲು ಮನವಿ ಕಳುಹಿಸುವುದಕ್ಕೂ ಮುನ್ನ.... ಮುಂದಾಲೋಚನೆ ವಹಿಸುವುದು ಒಳಿತು. ಆ ಮುಂದಾಲೋಚನೆ ಎಷ್ಟೋ ಅವಘಡಗಳನ್ನು, ಮಾನಸಿಕ ಹಿಂಸೆಯನ್ನು ಹಾಗೂ ಸಮಯವನ್ನು ಉಳಿತಾಯ ಮಾಡಬಹುದು.

ಗುರುವಾರ, ಏಪ್ರಿಲ್ 10, 2014

ಫೇಸ್ಬುಕ್  ಬಳಕೆ ಹೀಗಿದ್ದರೆ ಚೆನ್ನ.....

ಆಗದಿರಲಿ ಅವಾಂತರ...!

---ನಾಗರಾಜ್ ಬಿ.ಎನ್. ಬಾಡ---
ಆಧುನಿಕ ತಂತ್ರಜ್ಞಾನಗಳು ಪ್ರಪಂಚವನ್ನು ಕಿರಿದು ಮಾಡಿ ಬಿಟ್ಟಿವೆ. ಮೊಬೈಲ್, ಫೇಸ್ಬುಕ್ ನಂತಹ ಸಂಪರ್ಕ ಸಾಧನಗಳಿಂದ ಎಲ್ಲೋ ಇರುವ ಬಂಧು-ಬಾಂಧವರನ್ನು, ಸ್ನೇಹಿತರನ್ನು ಕ್ಷಣ ಮಾತ್ರದಲ್ಲಿ ಸಂಪರ್ಕಿಸಿ ಅವರ ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಅಲ್ಲದೆ, ದೂರದರ್ಶನ ಎಂಬ ಸಾಧನ ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ನಡೆದ ಘಟನೆಯನ್ನು ಕ್ಷಣ ಮಾತ್ರದಲ್ಲಿ ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುತ್ತಿದೆ. ಸಂತಸದ ವಿಷಯವೇ.....
ಈ ಸಂಪರ್ಕ ಜಾಲದಲ್ಲಿ ಫೇಸ್ಬುಕ್ ಎಂಬುದು ಮುಂಚೂಣಿಯಲ್ಲಿದೆ. ಸ್ನೇಹಿತರನ್ನು, ಸ್ನೇಹಿತರ ಸ್ನೇಹಿತರನ್ನು, ಕಳೆದು ಹೋದ ಸ್ನೇಹಿತರನ್ನು ಹೀಗೆ ಅನೇಕರನ್ನು ಅದು ಒಂದುಗೂಡಿಸುತ್ತದೆ. ಸ್ನೇಹದ ಬಳಗ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತ ಹೋಗುತ್ತದೆ. ಆದರೆ ಅಲ್ಲಿ ಪರಿಚಯವಿಲ್ಲದವರು ಕೂಡಾ ಬಂದು ಸೇರಿಕೊಳ್ಳುತ್ತಾರೆ. ಆಗಲೇ ಏನೇನೋ ಅವಾಂತರಗಳು ಸೃಷ್ಟಿಯಾಗುತ್ತವೆ...!
ಮುಖ್ಯವಾಗಿ ಯುವತಿಯರು ಈ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ. ಗೊತ್ತು ಪರಿಚಯದವಿಲ್ಲದವರನ್ನು ಸ್ನೇಹದ ಬಳಗಕ್ಕೆ ಸೇರಿಸಿಕೊಳ್ಳಲೇ ಬೇಡಿ. ಒಂದು ವೇಳೆ ಸೇರಿಸಿಕೊಂಡರೆ ಅವರ ಜೊತೆ ಯಾವುದೇ ಕಾರಣಕ್ಕೂ `ಚಾಟ್'ಗೆ ಇಳಿಯಬೇಡಿ. ಚಾಟ್ ಮಾಡಿ ಅವರ ಸ್ನೇಹವನ್ನು ಸಂಪಾದಿಸಬೇಕೆಂದರೆ ಮೊದಲು ಅವರ ಪ್ರೊಫೈಲ್ಗಳನ್ನು ಗಮನಿಸಿ. ಅವರು ಅಪ್ಲೋಡ್ ಮಾಡಿರುವ ಚಿತ್ರಗಳು ಯಾವುದು...? ಅವರ ಬರವಣಿಗೆಯ ಹಿನ್ನೆಲೆಯ ಧ್ವನಿ ಏನು..? ಅವರು ತಮ್ಮ ಸ್ನೇಹಿತರ ಯಾವ ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ...? ಎಂಬಿತ್ಯಾದಿ ಅಂಶಗಳ ಕುರಿತು ಸೂಕ್ಷ್ಮಾತಿ ಸೂಕ್ಷ್ಮವಾಗಿ ಗಮನಿಸಿ. ಆಗ ನಿಮಗೆ ಆ ಸ್ನೇಹಿತರ ಮನಸ್ಥಿತಿ ಹಾಗೂ ಗುಣಗಳ ಕುರಿತು ಚಿಕ್ಕದಾದ ಮಾಹಿತಿ ದೊರೆಯುತ್ತದೆ. ಆಗ ಅವರು ನಿಮ್ಮ ಸ್ನೇಹಕ್ಕೆ ಯೋಗ್ಯರೇ ಏನು ಎನ್ನುವುದನ್ನು ಯೋಚಿಸಿ. ನಿಮ್ಮ ವಿವೇಚನೆಗೆ ತಕ್ಕಂತೆ ಸೂಕ್ತ ನಿರ್ಧಾರಕ್ಕೆ ಬನ್ನಿ.
ಯಾಕೆಂದರೆ, ಈ ಫೆಸ್ಬುಕ್ ಬಳಕೆ ನಮ್ಮ ಬದುಕಿಗೆ ಮಾರಕವಾಗದ ರೀತಿಯಲ್ಲಿರಬೇಕು. ಹುಚ್ಚಾಟಕ್ಕೆ ಬಿದ್ದು ಸ್ನೇಹಿತರ ಜೊತೆ ದಿನವಿಡೀ ಚಾಟ್ ಮಾಡುತ್ತ, ಕಂಡ ಕಂಡವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ತರವಲ್ಲ. ಕೆಲವರು ತಮ್ಮ ಖಾಸಗಿ ಬದುಕಿನ ಚಿತ್ರಗಳನ್ನು ಅಪ್ಲೋಡ್ ಮಾಡುತ್ತ ತಮ್ಮನ್ನು ತಾವೇ ಸಾರ್ವಜನಿಕವಾಗಿ ಹರಾಜು ಹಾಕಿಕೊಳ್ಳುತ್ತಾರೆ. ಇದಕ್ಕೆ ತುಸು ಕಡಿವಾಣ ಹಾಕಿಕೊಳ್ಳುವುದು ಒಳಿತು.
ಅನೇಕರು ಫೇಕ್ ಫೇಸ್ಬುಕ್ ಅಕೌಂಟ್ ತೆರೆದು ಎಷ್ಟೋ ಜನಕ್ಕೆ ಏಮಾರಿಸಿದ್ದಾರೆ. ಇದರಿಂದ ಎಷ್ಟೋ ಹದಿಹರಿಯದ ಯುವಕರು, ಯುವತಿಯರು ತಮ್ಮ ಬದುಕನ್ನೇ ಹಾಳು ಮಾಡಿಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಯುವತಿಯರ ಭಾವಚಿತ್ರವನ್ನು ಡೌನ್ಲೋಡ್ ಮಾಡಿಕೊಂಡು ಅಶ್ಲೀಲ ಚಿತ್ರವನ್ನಾಗಿ ಮಾಡಿ, ಮತ್ತೆ ಪುನಃ ಫೇಸ್ಬುಕ್ಗೆ ಅಪ್ಲೋಡ್ ಮಾಡಿ ವಿಕೃತ ಆನಂದವನ್ನು ಪಡೆಯುವ ಮನಸ್ಸುಗಳು ಕೂಡಾ ನಮ್ಮ ಫೇಸ್ಬುಕ್ ಸ್ನೇಹಿತರ ಬಳಗದಲ್ಲಿರಬಹುದು...?
ಈ ಹಿನ್ನೆಲೆಯಲ್ಲಿ ಪಾಲಕರಾದವರು ತಮ್ಮ ಮಕ್ಕಳ ಕುರಿತು ತುಸು ಗಮನ ಹರಿಸುವುದು ಒಳಿತು. ಒಂದು ಸೀಮಿತ ಅವಧಿಗೆ ಮಾತ್ರ ಫೆಸ್ಬುಕ್ ಬಳಕೆ ಇರಲಿ. ಅದರಲ್ಲಿರುವ ಉತ್ತಮ ಅಂಶಗಳನ್ನಷ್ಟೇ ತೆಗೆದುಕೊಂಡು ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವಲ್ಲಿ ಅದು ಬಳಕೆಯಾಗಲಿ. ಪರಿಚಯವಿರುವ ಸ್ನೇಹಿತರ ಜೊತೆ ಮಾತ್ರ ಖಾಸಗಿ ಬದುಕಿನ ಸಂಗತಿಗಳು ವಿನಿಮಯವಾಗಲಿ.
ಪರಿಸರ ಪ್ರಜ್ಞೆ ಹೆಚ್ಚಿಸುವ. ಸಾಹಿತ್ಯದ ಕುರಿತು ಚರ್ಚೆ ನಡೆಸುವ, ಸಾಮಾನ್ಯ ಜ್ಞಾನದ ಬಗ್ಗೆ ಮಾಹಿತಿ ನೀಡುವ, ಪ್ರಕೃತಿಯ ರಮಣೀಯ ಚಿತ್ರಗಳ ಮೂಲಕ ಪ್ರಕೃತಿ ಪ್ರೇಮವನ್ನು ಬಡಿದೆಬ್ಬಿಸುವ ಎಷ್ಟೋ ಸದುಪಯೋಗಿ ಅಕೌಂಟ್ಗಳಿವೆ. ಅವರ ಸ್ನೇಹದ ಬಳಗಕ್ಕೆ ಪ್ರವೇಶ ಪಡೆದರೆ ಚೆನ್ನ. ಗೊತ್ತಿಲ್ಲದ ಎಷ್ಟೋ ವಿಷಯಗಳ ಕುರಿತು ಮಾಹಿತಿ ಪಡೆದು, ನಮ್ಮದೆ ಆದಂತ ವಿಭಿನ್ನವಾದ ಫೇಸ್ಬುಕ್ ಅಕೌಂಟ್ ತೆರದು ಜನಸ್ನೇಹಿಯಾದರೆ ಹೇಗೆ...?
ಬದುಕು ನಿ(ನ)ಮ್ಮದು. ಅದನ್ನು ಸುಂದರಗೊಳಿಸಿಕೊಂಡು ಹೋಗುವ ಸಾಮಥ್ರ್ಯ ನಿ(ನ)ಮ್ಮಲ್ಲಿದೆ..... ಆದರೆ, ಆ ಕುರಿತು ವಿವೇಚನಾಯುತವಾಗಿ ಚಿಂತಿಸಬೇಕಷ್ಟೆ...! ಇನ್ನೊಬ್ಬರ ತಪ್ಪುಗಳನ್ನು ಹುಡುಕುತ್ತ, ನಿ(ನ)ಮ್ಮ ಬದುಕನ್ನು ಸಂಕುಚಿತ ಮಾಡಿಕೊಳ್ಳಬಾರದು.... ಏನಂತಿರಾ...?

ಮಂಗಳವಾರ, ಏಪ್ರಿಲ್ 8, 2014

ಕಮರಿ ಹೋದ ಸ್ನೇಹಿತನ `ಚಿತ್ರ ನಗರಿ ಕನಸು...'

ಇದೊಂದು ಹುಚ್ಚು ಸಾಹಸಕ್ಕೆ ಕೈ ಹಾಕಿದವನ ಕತೆ. ಮರಾಠಿಯ `ನಟರಂಗ' ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡುತ್ತೇನೆ. ಅತುಲ ಕುಲಕರ್ಣಿ ಮಾಡಿದ ಪಾತ್ರವನ್ನು ಪ್ರಕಾಶ ರೈ ಕಡೆಯಿಂದ ಮಾಡಿಸುತ್ತೇನೆ. ಪ್ರಕಾಶ ಅವರಲ್ಲಿರುವ ಡಿಫರೆಂಟ್ ಕಲಾಕಾರನನ್ನು ಹೊರಗೆ ತರುತ್ತೇನೆ. ಅದಕ್ಕೆಲ್ಲಾ ಬೇಕಾಗುವ ಹಣ ತರುತ್ತೇನೆ ಎಂದುಕೊಂಡು ಹಳ್ಳಿಗೆ ಹೋಗಿದ್ದ ಸ್ನೇಹಿತ ವಾಪಸ್ಸು ಬಂದ ಬಳಿಕ ಚಿತ್ರರಂಗದ ಹೆಸರು ತೆಗೆದರೆ ಸಾಕು ಮಾರುದ್ದ ಓಡಿ ಹೋಗುತ್ತಿದ್ದಾನೆ.
ಅತ್ತ ಸಾಧನೆಯನ್ನೂ ಮಾಡಲು ಆಗದವನೂ ಈಗ ತನ್ನ ಕನಸ್ಸನ್ನೆ ಬಿಟ್ಟು ಇದ್ದುದ್ದರಲ್ಲಿಯೇ ಜೀವನ ಸಾಗಿಸಿ. ಸಾಧಕನಾಗಿ ಬದುಕುವುದಕ್ಕಿಂದ ಸಾಮಾನ್ಯನಾಗಿಯೇ ಬದುಕೋಣ ಎಂದು ನಿರ್ಣಯ ಮಾಡಿದ ಓರ್ವ ತಿಕ್ಕಲು ವ್ಯಕ್ತಿಯ ವಿಚಿತ್ರ ಕಥೆ ಇದು.
ಆತನಿಗೆ ಕನ್ನಡ ಚಿತ್ರರಂಗದಲ್ಲೊಂದು ಹೊಸ ಬದಲಾವಣೆ ತರುವ ಹುಚ್ಚು ಕನಸು. ಅದೇನೆಂದರೆ ರಂಗನಾಯಕಿ ಬಳಿಕ ಯಾವುದೇ ರಂಗಭೂಮಿ ಪ್ರದಾನ ಚಿತ್ರಗಳು ಕನ್ನಡದಲ್ಲಿ ಬಂದಿಲ್ಲ. ಅದನ್ನು ಸಾಧ್ಯವಾಗಿಸಬೇಕು ಎಂದು ಪಣತೊಟ್ಟ ಆತನನ್ನು ಮರಾಠಿ ಚಿತ್ರರಂಗ ತುಂಬಾ ಅಕರ್ಷಿಸುತ್ತದೆ. ಅದಕ್ಕೆ ಕಾರಣ ಮರಾಠಿಯಲ್ಲಿ ಯಶಸ್ವಿ ಗಳಿಸಿದ `ನಟರಂಗ' ಮತ್ತು `ಬಾಲಗಂಧರ್ವ' ಚಿತ್ರಗಳು.

ನಟರಂಗವನ್ನು ಆತ ಹತ್ತಿರ ಹತ್ತಿರ ನೂರು ಸಲ ನೋಡಿರುತ್ತಾರೆ. ಇನ್ನು ಬಾಲಗಂಧರ್ವ ಅದೇ ದಾರಿಯಲ್ಲಿದೆ.
ಇಂತಿಪ್ಪ ರವಿ ಬೆಳಗೆರೆ ಮಾರ್ಗದರ್ಶನದಲ್ಲಿ ಪ್ರಕಟಗೊಂಡಿರುವ ಬಿ.ಕೆ. ಪಂಕಜರ `ಕಲ್ಪನಾ ವಿಲಾಸ' ಪುಸ್ತಕವನ್ನು ಓದಿದ ಬಳಿಕ, ಕನ್ನಡದಲ್ಲೇಕೆ ಕಲ್ಪನಾ ಕುರಿತು ಚಿತ್ರ ಮಾಡಬಾರದು ಎಂದುಕೊಂಡು ಗುಡಗೇರಿ ಬಸವರಾಜರ ಹಳ್ಳಿ, ಅವರು ವಾಸಿಸುವ ಮನೆ, ಅವರೊಂದಿಗೆ ಕೆಲಸ ಮಾಡಿದ ಕೆಲವು ಕಲಾಕಾರರನ್ನು ಭೇಟಿ ಮಾಡುತ್ತಾನೆ. ಅಲ್ಲದೇ ಗೋಟೂರ ಐಬಿಗೆ ಹೋಗಿ ಅಂದು ಕಲ್ಪನಾ ಕಳೆದ ಕೊನೆ ದಿನಗಳ ಆ ಜಾಗವನ್ನೂ ನೋಡಿ ಬಂದು..
ತಾನೇ ಒಂದು ಕಥೆಯನ್ನು ಬರೆದು ರವಿ ಬೆಳೆಗೆರೆಯವರ ಮುಂದೆ ಹೋಗಿ... ನಿಮ್ಮ ಪುಸ್ತಕವಿಟ್ಟುಕೊಂಡು ಇಂದಿಷ್ಟು ಚಿತ್ರಕಥೆ ಬರೆದಿದ್ದೇನೆ. ತಗೊಳ್ಳಿ ಚಿತ್ರವನ್ನು ಮಾಡೋಣ ಎನ್ನಬೇಕು ಎಂದುಕೊಂಡಿರುತ್ತಾನೆ. ಆದರೆ ಅಷ್ಟೊತ್ತಿಗೆ.. ಅದೇ ರೀತಿಯ ಕಥೆಯುಳ್ಳ ಚಿತ್ರ ಸೆಟ್ಟೇರಿ ಬಿಟ್ಟಿರುತ್ತದೆ. ಅದೇ `ಅಭಿನೇತ್ರಿ'.
ಚಿತ್ರರಂಗದ ಅ,ಆ,ಇ,ಈ ಗೊತ್ತಿಲ್ಲದ ಈತ. ಯಾರಲ್ಲಿಯೂ... ಯಾವ ಚಿತ್ರದಲ್ಲಿಯೂ ಕೆಲಸ ಮಾಡದ ಈತ... ಒಂದು ರೀತಿ ಚಿತ್ರರಂಗದ ವಿಷಯದಲ್ಲಿ ಅಜ್ಞಾನಿ. ಯಾವುದೇ ಕ್ಯಾಮೆರಾ ಮ್ಯಾನ್ ಕೈಯಲ್ಲಿ ದುಡಿದಿಲ್ಲ. ಕ್ಯಾಮೆರಾದ ತಂತ್ರಜ್ಞಾನವೂ ಗೊತ್ತಿಲ್ಲ. ಆದರೆ ಕೈಗೆ ಕ್ಯಾಮೆರಾ ಕೊಟ್ಟರೆ ಅದ್ಭುತವಾಗಿ ಶೂಟಿಂಗ್ ಮಾಡಬಲ್ಲ... ಯಾವ ಕೋನದಲ್ಲಿ ಯಾವ ರೀತಿ ದೃಶ್ಯ ತೆಗೆದೆರೆ ಚೆನ್ನ ಎಂಬುದರ ಕಲ್ಪನೆ ಆತನಿಗಿದೆ.
ಊರಲ್ಲಿ ಒಂದಿಷ್ಟು ನಾಟಕ ನಿರ್ದೇಶನ ಮಾಡಿರುವ ಈತ ಯಾವ ನಿರ್ದೇಶಕನ ಬಳಿಯೂ ಕೆಲಸ ಮಾಡಿಲ್ಲ... ಆದರೆ ಎರಡು ಕಿರುಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿ ಸುಟ್ಟುಕೊಂಡಿದ್ದಾನೆ. ಕಾರಣ ನಿರ್ಮಾಪಕನೂ ಆಗಬಲ್ಲ ಜ್ಞಾನವಿದೆ. ಆದರೆ ಹಣವಿಲ್ಲ. ಏನೇ ಮಾಡಿದರೂ ತಿಂಗಳ ಸಂಬಳವೇ ಆಗಬೇಕು. ಆದರೆ ಅದರಲ್ಲಿ ಕಡು ಬಡತನದ ಮನೆಯೂ ನಡೆಸಬೇಕು. ಹೀಗಾಗಿ ಎಲ್ಲವೂ ಅಪೂರ್ಣ.
ತಾನು ಕನಸಿಸಿದ್ದ ಚಿತ್ರ ಈಗಾಗಲೇ ತಯಾರಾಗುತ್ತಿದೆ ಎಂದು ಅರ್ಥವಾದ ತಕ್ಷಣ ಆತ ತಾನು ಬರೆದಿಟ್ಟಿದ್ದ 37 ಪುಟಗಳ ಅರ್ಧ ಚಿತ್ರಕಥೆಯನ್ನು ಸುಟ್ಟುಹಾಕಿ ಅವತ್ತೊಂದಿನ ಎರಡು ಬಿಯರ್ ಕುಡಿದು ದುಃಖದಿಂದ ಮಲಗಿ ಬಿಟ್ಟಿದ್ದ.
ಇದಾದ ಕೆಲವು ದಿನಗಳ ಬಳಿಕ ಇತ್ತೀಚೆಗೆ ಆತನಿಗೊಂದು ಮತ್ತೊಂದು ಆಸೆ ಹುಟ್ಟಿಕೊಳ್ಳುತ್ತದೆ. ಅದೇನೆಂದರೆ, ಹೇಗಾದರೂ ಮಾಡಿ ಮರಾಠಿಯ `ನಟರಂಗ' ಚಿತ್ರವನ್ನು ಕನ್ನಡದಕ್ಕೆ ರಿಮೇಕ್ ಮಾಡುವುದು. ಅದಕ್ಕಾಗಿ ಆತನಿಗೆ ರಿಮೇಕ್ ಹಕ್ಕು ಕಡಿಮೆ ಮೊತ್ತದಲ್ಲಿ ಲಭಿಸುವದಿತ್ತು. ಕಾರಣ ಮರಾಠಿ ಚಿತ್ರರಂಗದಲ್ಲಿ ಆತನಿಗೆ ಅನೇಕ ಸ್ನೇಹಿತರಿದ್ದಾರೆ. ಆತ ತಡಮಾಡದೆ ಸಾಹಸಕ್ಕೆ ಕೈ ಹಾಕಿಯೇ ಬಿಟ್ಟ. ಆದರೆ ಜೇಬಲ್ಲಿ ತಿಂಗಳ ಸಂಬಳದಲ್ಲಿ ಉಳಿದಿದ್ದ ಒಂದಿಷ್ಟು ನೂರರ ನೋಟುಗಳು ಬಿಟ್ಟರೆ ಯಾವುದೇ ಹಣವಿಲ್ಲ. ಆಗ ಅವನಿಗೆ ಹೊಳೆದಿದ್ದು, ಊರಲ್ಲಿ ಇರುವ ಒಂದೂವರೆ ಎಕರೆ ಹೊಲ ಮಾರಿದರೆ ಹೇಗೆ ಎನ್ನುವ ವಿಚಾರ...!?
ಊರಿಗೆ ಹೋಗುತ್ತಾನೆ. ಹೊಲ ಮಾರುವ ವಿಚಾರ ತಂದೆಗೆ ಹೇಳಿದಾಗ `ಮಗ ಹೊಲ ಮಾರಿ ಊರಲ್ಲಿ ಹೊಸ ಮನೆ ಕಟ್ಟುತ್ತಾನೆ' ಎಂದುಕೊಳ್ಳುತ್ತಾನೆ. ಊರ ಪಂಚರು ಸೇರುತ್ತಾರೆ. ಇವರ ಹೊಲದ ಪಕ್ಕದವರೇ ಅದನ್ನು ಖರೀದಿಸಲು ಮುಂದೆ ಬರುತ್ತಾರೆ. ಈತನ ಮನಸ್ಸಿನಲ್ಲಿ ಹೊಲಕ್ಕೆ ಕನಿಷ್ಠ ಒಂದೂವರೆ ಕೋಟಿಯಾದರೂ ಬರಬೇಕು ಎಂಬುದಾಗಿರುತ್ತದೆ.
ಆದರೆ ಊರಲ್ಲಿನ ನೀಚ ಹಿರಿಯರೆಲ್ಲಾ ಸೇರಿ... ಇಲ್ಲಿ ಜಮೀನಿಗೆ ಬೆಲೆಯಿಲ್ಲ. ಮೊದಲೇ ಗುಡ್ಡದ ಹೊಲ. ಕಾಡು ಪ್ರಾಣಿಗಳ ಹಾವಳಿ ಜಾಸ್ತಿ ಎಂದು ಅದನ್ನು 15 ಲಕ್ಷಕ್ಕೆ ಬೆಲೆ ಕಟ್ಟುತ್ತಾರೆ. ಆದರೆ ಅದು ಕೊನೆಗೊಂಡಿದ್ದು 10 ಲಕ್ಷದ ವ್ಯವಹಾರಕ್ಕೆ...!
ಅತ್ತ ಪಂಚರೂ ಹಾಗೂ ಇವರಪ್ಪ ಹೊಲದ ವ್ಯವಹಾರ ಮಾತನಾಡುತ್ತಿದ್ದರೆ, ಇತ್ತ ಈ ಹುಚ್ಚ ತನ್ನ ಚಿತ್ರದ ಕನಸಿನೊಳಗೆ ಇಳಿದಿರುತ್ತಾನೆ-`ಕೈಗೆ ಬರುವ ಹತ್ತು ಲಕ್ಷದಲ್ಲಿ ಅತುಲ ಕುಲಕರ್ಣಿ ಮಾಡಿದ ಪಾತ್ರಕ್ಕೆ ಪ್ರಕಾಶ ರೈ ಒಪ್ಪಿಸಲು ಸಾಧ್ಯವೆ....? ಹಿಂದೆ `ಭಾಗ ಮಿಲ್ಕಾ ಭಾಗ'ದಲ್ಲಿ ರೈ 1 ರೂ. ಮಾತ್ರ ತೆಗೆದುಕೊಂಡಿದ್ದರು. ನನ್ನ ಚಿತ್ರಕ್ಕೆ ಕನಿಷ್ಠ 1 ಲಕ್ಷ ರೂ.ಗಳನ್ನಾದರೂ ಅವರಿಗೆ ಕೊಡಬೇಕು. ಇನ್ನುಳಿದ ಹಣದಲ್ಲಿ ಉಳಿದ ಪಾತ್ರ ಸೇರಿದಂತೆ ಉಳಿದೆಲ್ಲವೂ ಸಾಧ್ಯವೆ...? ಎಂದು ವಿಚಾರ ಮಾಡುತ್ತಿರುತ್ತಾನೆ. ಆಗ ಅವರಪ್ಪ ಏ ಪುಟ್ಯಾ ಏನ್ ವಿಚಾರ ಮಾಡಾತೀಲೆ? ಎಂದು ಕೇಳುತ್ತಾನೆ. ತನ್ನ ಕನಸಿನಿಂದ ಅರ್ಧಂಬರ್ಧ ಹೊರಬಂದ ಈತ, `ಅದು... ಅದು... ಪ್ರಕಾಶ ರೈ 1ಲಕ್ಷಕ್ಕೆ ಒಪ್ಪುತ್ತಾರ ಅಂತಾ' ಎಂದು ಬಿಡುತ್ತಾನೆ.
ಪ್ರಕಾಶ ರೈ ಎಂದಾಕ್ಷಣ ಇವರಪ್ಪನಿಗೆ ತನ್ನ ಮಗಾ ಏನು ಮಾಡಲು ಹೊರಟಿದ್ದಾನೆ ಎನ್ನುವುದು ಅರ್ಥವಾಗಿ ಬಿಟ್ಟಿರುತ್ತದೆ. `ಮಗನ... ನೀ.. ಹೊಲಾ ಮಾರಕ ಯಾಕ್ ಹೊಂಟಿ ಅನ್ನೊದ ನಂಗ್ ಈಗ ತಿಳಿತ. ಹಿರೇರ್ ಎದ್ದ ನಡೀರಿ. ಈ ಮಗಾ ಜೀವನದಾಗ ಉದ್ಧಾರ ಆಗೊಲ್ಲ. ನಮಗ ಮನಿ ಅಲ್ಲ ಸಮಾಧಿ ಕಟ್ಟತಾನ' ಎಂದು ಬೈದು ಹಿರಿಯರೊಂದಿಗೆ ಅವರಪ್ಪ ಎದ್ದು ಹೋಗುತ್ತಾನೆ.
ಎಲ್ಲರೂ ಎದ್ದು ಹೋದ ಬಳಿಕ ಈತ ನಿಜ ಲೋಕಕ್ಕೆ ಬರುತ್ತಾನೆ.
ಸಂಜೆ ಮನೆಯ ಹೊಸ್ತಿಲು ದಾಟುತ್ತಿದ್ದಂತೆಯೇ... ಅಕ್ಕಂದಿರಿಂದ ಬೈಗುಳಗಳ ಮಂಗಳಾರತಿ. ತಾನು ಕೆಲಸ ಮಾಡುವ ನಗರಕ್ಕೆ ವಾಪಸ್ಸು ಬರಲು ಬಸ್ ಹತ್ತುತ್ತಾನೆ. ಬಸ್ಸಿನಲ್ಲಿ ಕೂತಾಗ ಯೋಚಿಸುತ್ತಾನೆ. `ಅಯ್ಯೊ 10 ಲಕ್ಷದಲ್ಲಿ ಏನೂ ಆಗೋದಿಲ್ಲ. ಈ ಹೊಲಾನೂ ಮಾರೋದ ಬೇಡ. ನಾನೇನೂ ದೊಡ್ಡ ಫಿಲ್ಮ್ ಡೈರೆಕ್ಟರ್-ನಿರ್ಮಾಕನೂ ಆಗೋದು ಬೇಡ. ಒಂದಿಷ್ಟು ದಿನ ಸಿಟಿಯಾಗ ಉಳಿದು ವಾಪಸ್ಸು ಬಂದ ಇದೇ ಹೊಲದಾಗ ರೈತನಾಗಿ ಉಳಿಯೋಣ' ಎಂದುನಿರ್ಧರಿಸುತ್ತಾನೆ.
ಸದ್ಯ ತನ್ನ ಕರ್ತವ್ಯದಲ್ಲಿ ತೊಡಗಿರುವ ಈತನಿಗೆ ಈಗ ಚಿತ್ರರಂಗದ ಹುಚ್ಚು ಹೋಗಿ ಬಿಟ್ಟಿದೆ. ಅಷ್ಟೇ ಏಕೆ ದಿನಕ್ಕೊಂದು ಫಿಲ್ಮ್ ನೋಡಿ ಮಲಗಿಕೊಳ್ಳುತ್ತಿದ್ದವನೂ, ಈಗ ಫಿಲ್ಮ್ಗಳ ಉಸಾಬರಿಗೇ ಹೋಗುತ್ತಿಲ್ಲ. ಊರಿಂದ ಬಂದ ದಿನವೇ ರೂಮಲ್ಲಿದ್ದ ಸುಮಾರು 2,000ಕ್ಕೂ ಹೆಚ್ಚು ಫಿಲ್ಮ್ ಸಿಡಿಗಳನ್ನು ತಿಪ್ಪಿಗೆ ಎಸೆದಿದ್ದಾನೆ.!!!!!
ಮುಂದೇನೂ ಈತನ ಗತಿ... ಕನಸ್ಸೊಂದು ಕಮರಿ ಹೋಗಿದೆ...

ಸೋಮವಾರ, ಮಾರ್ಚ್ 17, 2014

`ಪೂರ್ವಜರು ಮಾಡಿದ್ದು, ನಾವೂ ಮಾಡುತ್ತೇವೆ...'

ನಾಗರಾಜ ಬಿ.ಎನ್.(೯೪೮೧೦೫೨೩೭೮)
`ರಾತ್ರಿ ಆದ್ಮೆಲೆ ಉಗುರು ತೆಗಿಬಾರ್ದು ಅಂತಾರಲ್ಲ ಪಪ್ಪ, ಯಾಕೆ? ಎಂದು ಮೂರನೇ ತರಗತಿಯಲ್ಲಿ ಓದುತ್ತಿರುವ ಮಾನಸಾ ತನ್ನ ಅಪ್ಪನಲ್ಲಿ ಕೇಳುತ್ತಾಳೆ. ಮಗಳ ಪ್ರಶ್ನೆಗೆ ಅವಳ ಅಪ್ಪ ಒಮ್ಮೆಲೆ ತಬ್ಬಿಬ್ಬಾದ... ಏನು ಹೇಳಬೇಕೆಂದೇ ತೋಚಲಿಲ್ಲ. `ಈಗ ಮಲ್ಕೋ, ನಾಳೆ ಹೇಳ್ತಿನಿ' ಎಂದು ಅವಳನ್ನು ಮಲಗಿಸಿದ.
ಅರ್ಚನಾ ಏಳನೇ ತರಗತಿ ವಿದ್ಯಾರ್ಥಿನಿ. ಶಾಲೆಯ ಯೂನಿಫಾರ್ಮ್ ಸ್ವಲ್ಪ ಹರಿದಿತ್ತು. ಅದಕ್ಕೆ ಹೊಲಿಗೆ ಹಾಕಬೇಕೆಂದು ನಿರ್ಧರಿಸಿ, ಪಕ್ಕದ ಆಂಟಿ ಮನೆಗೆ ಹೋಗಿ ಸೂಜಿ-ದಾರ ಕೇಳುತ್ತಾಳೆ. `ಇಲ್ಲ, ಈಗ ರಾತ್ರಿ ಆಗಿದೆ. ಸೂಜಿ ಕೊಡೋದಿಲ್ಲ' ಎಂದು ಆಂಟಿ ಹೇಳಿದಳು. ಮನೆಗೆ ಬಂದು `ರಾತ್ರಿ ಟೈಂ ಸೂಜಿ-ದಾರ ಕೇಳಬಾರ್ದಾ ಅಮ್ಮ? ಯಾಕೆ?' ಎಂದು ಪ್ರಶ್ನಿಸಿದಳು. `ಯಾಕೋ ಗೊತ್ತಿಲ್ಲ ಮಗ, ಹಿಂದಿನವರು ಹೇಳ್ತಾ ಇದ್ರು. ಅದನ್ನೆ ನಾವೂ ಹೇಳ್ತಾ ಇದ್ದಿವಿ' ಎಂದಳು.
ಇಂತಹ ಸಂಭಾಷಣೆಗಳನ್ನು ಇಂದು ಬಹುತೇಕ ಮನೆಗಳಲ್ಲಿ ನಾವು ಕೇಳುತ್ತೇವೆ. ಪೂರ್ವಜರು ಮಾಡಿದ ಕೆಲವು ಆಚಾರ-ವಿಚಾರಗಳು ವೈಜ್ಞಾನಿಕ ನೆಲಗಟ್ಟಿನಡಿಯಲ್ಲಿ ಆರಂಭವಾಗಿತ್ತು. ಅವರ ಪ್ರತಿಯೊಂದು ಪದ್ಧತಿ-ಸಂಪ್ರದಾಯಗಳು ಕೂಡಾ ಗಹನವಾದ ಅರ್ಥವನ್ನು ಹೊಂದಿತ್ತು. ಆದರೆ, ಶಿಕ್ಷಣ ಎನ್ನುವುದೇ ಇರಲಿಲ್ಲ. ಅವರವರ ಅನುಭವವೇ ಅವರ ಬದುಕಿನ ಶಿಕ್ಷಣವಾಗಿತ್ತು. ಆದರೂ, ಅವರ ಆ ಅನುಭವ ಇಂದಿನ ಶಿಕ್ಷಣ ಪದ್ಧತಿಗಿಂತಲೂ ಬಲಿಷ್ಠವಾಗಿತ್ತು. ಪೂರ್ವಜರ ಚಿಂತನೆಗಳೆಲ್ಲವೂ ವೈಜ್ಞಾನಿಕವಾಗಿಯೇ ಇತ್ತು. ಬದುಕಿಗೆ ಪೂರಕವಾದ ಸಂದೇಶವನ್ನು ನೀಡಿ, ಉತ್ತಮ ಜೀವನಕ್ಕೆ ಪಾಠ ಹೇಳುವಂತಿತ್ತು.
ಕಾಲ ಬದಲಾದಂತೆ ಶಿಕ್ಷಣ ಪದ್ಧತಿಯಲ್ಲಿ ಗಹನವಾದ ಬದಲಾವಣೆಗಳು ಉಂಟಾದವು. ಆಚಾರ-ವಿಚಾರಗಳು ಬದಲಾದವು. ತಿನ್ನುವ ಆಹಾರ ಪದ್ಧತಿ ಬದಲಾಯಿತು. ಹೀಗೆ ಪ್ರತಿಯೊಬ್ಬರ ಬದುಕು ಕೂಡಾ ಮಗ್ಗಲು ಬದಲಿಸಿಬಿಟ್ಟಿತು. ಹಾಗೆಯೇ, ತಾರ್ಕಿಕ ಯೋಚನಾ ಶಕ್ತಿಯು ಕೂಡಾ ಉತ್ತಂಗಕ್ಕೆ ಏರಿತು. ಹಾಗೆಯೇ ಮಕ್ಕಳ ಬೌದ್ಧಿಕ ಮಟ್ಟವೂ ಬೆಳೆಯುತ್ತ ಹೋಯಿತು.
ಈಗಿನ ಮಕ್ಕಳು ಪ್ರತಿಯೊಂದನ್ನು ಕೂಡಾ ತಾರ್ಕಿಕ ಮನೋಭಾವನೆಯಿಂದಲೇ ನೋಡುತ್ತಾರೆ. ತಮಗೆ ಸಂಶಯವಾಗಿ ಕಾಡಿದ್ದಕ್ಕೆ ಉತ್ತರ ಪಡೆಯಲು ಹವಣಿಸುತ್ತಾರೆ. ಆವರ ಯೋಚನೆಗೆ, ಚಿಂತನೆಗೆ, ಕುತೂಹಲಕ್ಕೆ ನಾವು ಸಮರ್ಪಕವಾದ ಉತ್ತರ ನೀಡಲು ಎಡವುತ್ತಿದ್ದೇವೆ. ಅವರ ಅರ್ಥ ಗರ್ಭಿತ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳದೆ, ಹಾರಿಕೆ ಉತ್ತರ ನೀಡಿ, ಅವರಲ್ಲಿ ಕುತೂಹಲಕ್ಕೆ ತಣ್ಣೀರು ಎರಚುತ್ತಿದ್ದೇವೆ.
ನಮ್ಮ ಮಕ್ಕಳು ನಮಗಿಂತಲೂ ಬುದ್ಧಿವಂತರು. ಅವರಲ್ಲಿ ಅಗಾಧ ಬೌದ್ಧಿಕ ಸಾಮಥ್ರ್ಯವಿರುತ್ತದೆ. ಅದನ್ನು ಗುರುತಿಸಿ ಪೋಷಿಸಬೇಕಾದ್ದು ಪಾಲಕರ ಕರ್ತವ್ಯ. ಅವರು ಕೇಳುವ ಪ್ರತಿಯೊಂದು ಪ್ರಶ್ನೆಯ ಹಿಂದೆ ಅರ್ಥಗಭರ್ಿತವಾದ ಉತ್ತರವಿರುತ್ತದೆ. ಅದು ಕೆಲವು ಬಾರಿ ಸಿಲ್ಲಿ ಪ್ರಶ್ನೆಗಳು ಎಂದೆನಿಸುತ್ತವೆ. ಉದಾಹರಣೆಗೆ, `ರಾತ್ರಿ ಸಮಯದಲ್ಲಿ ಉಗುರು ಯಾಕೆ ತೆಗೆಯಬಾರದು?' ಎನ್ನುವುದು. ಎಷ್ಟೋ ಪಾಲಕರಿಗೆ ಇದರ ಉತ್ತರವೇ ತಿಳಿದಿಲ್ಲ. ಕೆಲವು ಶಿಕ್ಷಿತ ವರ್ಗದವರು ಅದೊಂದು ಮೂಢನಂಬಿಕೆ ಎಂದು ವಿರೋಧಿಸುತ್ತಾರೆ. ಕೆಲವರು ಅದು ಪೂರ್ವಜರು ಮಾಡಿ ಹೋದ ಸಂಪ್ರದಾಯ ಎನ್ನುತ್ತಾರೆ. ಆದರೆ, ಉತ್ತರ ಮಾತ್ರ ಗೊತ್ತಿರುವುದಿಲ್ಲ.
ರಾತ್ರಿ ಯಾಕೆ ಉಗುರು ತೆಗೆಯಬಾರದು?
ಪೂರ್ವಜರ ಬುದ್ಧಿವಂತಿಕೆ `ರಾತ್ರಿ ಉಗುರು ತೆಗೆಯಬಾರದು' ಎನ್ನುವ ಚಿಕ್ಕ ವಿಚಾರದಲ್ಲಿಯೇ ಅಡಗಿದೆ. ರಾತ್ರಿ ಸಮಯದಲ್ಲಿ ಉಗುರು ತೆಗೆಯುವಾಗ, ಉಗುರಿನ ಚಿಕ್ಕ ಚಿಕ್ಕ ತುಂಡಗಳು ಒಮ್ಮೊಮ್ಮೆ ಕಣ್ಣಿಗೆ ಕಾಣದೆ ಹಾಗೆಯೇ ಮನೆಯೊಳಗೆ ಬಿದ್ದಿರುತ್ತವೆ. ಉಗುರಿನೊಳಗೆ ಹೊಲಸು ತುಂಬಿಕೊಂಡು, ಅದರಲ್ಲಿ ಸಾವಿರಾರು ಕ್ರಿಮಿಗಳು ಸೇರಿಕೊಂಡಿರುತ್ತವೆ. ಆಕಸ್ಮಿಕವಾಗಿ ಅದು ಆಹಾರದೊಳಗೆ ಸೇರಿಕೊಂಡರೆ ಅನಾರೋಗ್ಯವನ್ನು ಆಹ್ವಾನ ಮಾಡಿಕೊಂಡಂತೆ ಎಂಬ ವೈಜ್ಞಾನಿಕ ಚಿಂತನೆಯೂ ಅದರಲ್ಲಿ ಅಡಗಿದೆ. ಹಾಗೆಯೇ, ನಮ್ಮ ಪೂರ್ವಜನರ ಕಾಲದಲ್ಲಿ ಈಗಿನಂತೆ ಝಗಮಗಿಸುವ ವಿದ್ಯುತ್ ದೀಪಗಳಿರಲಿಲ್ಲ. ಕಟ್ಟಿಗೆಯ ಬೆಂಕಿಯ ಬೆಳಕೆ ಅವರಿಗೆ ಆಸರೆಯಾಗಿತ್ತು. ಆ ಬೆಳಕಿನಲ್ಲಿ ಉಗುರು ತೆಗೆಯುವಾಗ ಕೈ ಬೆರಳಿಗೆ ಎಲ್ಲಿಯಾದರೂ ಪೆಟ್ಟಾಗುತ್ತದೆ ಎಂಬ ಭಯವಿತ್ತು. ಅಲ್ಲದೆ, ಉಗುರು ತೆಗೆಯಲು ಅಂದು ಯಾವುದೇ ಆಧುನಿಕ ಸಾಧನಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪೂರ್ವಜರು ರಾತ್ರಿ ಉಗುರು ತೆಗೆಯಬಾರದು ಎಂದು ಹೇಳಿದ್ದು.
ಹಾಗೆಯೇ, ರಾತ್ರಿ ಸಮಯಲ್ಲಿ ಸೂಜಿ ಕೂಡಾ ಕೇಳಬಾರದು ಎನ್ನುವುದಕ್ಕೂ ಕಾರಣವಿದೆ. ಸೂಜಿ ಅತ್ಯಂತ ಚಿಕ್ಕ ವಸ್ತು. ರಾತ್ರಿ ಸಮಯದಲ್ಲಿ ಎಲ್ಲಿಯಾದರೂ ಕೈ ತಪ್ಪಿ ಬಿದ್ದರೆ, ಅದನ್ನು ಹುಡುಕುವುದು ಕಷ್ಟ. ಕಣ್ತಪ್ಪಿ ಬಿದ್ದ ಸೂಜಿ ಎಲ್ಲಿಯಾದರೂ ಚುಚ್ಚಿದರೆ ಎಂಬ ಮುಂದಾಲೋಚನೆ ಇತ್ತು. ಇದರಿಂದಾಗಿ ಅಂದಿನ ಜನರು, ಹೆಚ್ಚಾಗಿ ರಾತ್ರಿ ಸಮಯದಲ್ಲಿ ಸೂಜಿಯನ್ನು ಬಳಸುತ್ತಿರಲಿಲ್ಲ. ಈಗಲೂ ಕೂಡಾ ಅದೇ ಕಾರಣದಿಂದ ಕೆಲವರು ಬಳಸುತ್ತಿಲ್ಲ. ಇದರ ಅರ್ಥ ಗೊತ್ತಿಲ್ಲದ ಇಂದಿನ ಬಹುತೇಕರು, `ಹಿಂದಿನವರು ಹೇಳುತ್ತಿದ್ದರು. ಅದಕ್ಕೆ ನಾವೂ ಹೇಳುತ್ತಿದ್ದೇವೆ' ಎನ್ನುತ್ತಾರೆ.
ವಿಷಯವಿಷ್ಟೇ, ನಮ್ಮ ಪೂರ್ವಜರು, ಹಿಂದಿನವರು ಮಾಡಿ ಹೋದ ಪ್ರತಿಯೊಂದಕ್ಕೂ ಅರ್ಥವಿದೆ. ಅದನ್ನು ಶೊಧಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ತಾರ್ಕಿಕ ಚಿಂತನೆಯಿಂದ ಆ ಪದ್ಧತಿ, ಆಚಾರಕ್ಕೆ ಉತ್ತರ ಕಂಡುಕೊಳ್ಳಬೇಕು. ಕುತೂಹಲದಿಂದ ಕೇಳುವ ಮಕ್ಕಳ ಪ್ರಶ್ನೆಗೆ ಅಸಂಬದ್ಧ ಉತ್ತರ ನೀಡುತ್ತ ಜಾರಿಕೊಳ್ಳಬಾರದು.
`ಪೂರ್ವಜರು ಮಾಡಿದ್ದು, ನಾವು ಅನುಸರಿಸಿಕೊಂಡು ಹೋಗುತ್ತಿದ್ದೇವೆ. ನೀವು ಮುಂದುವರಿಸಿಕೊಂಡು ಹೋಗಿ. ಅದಕ್ಕೆ ಸ್ಪಷ್ಟ ಉತ್ತರವಿಲ್ಲ' ಎನ್ನುವ ಅಸಂಬದ್ಧ ಉತ್ತರ ಹೇಳಬಾರದು. ಸಂದೇಹಕ್ಕೆ ತಕ್ಕ ಉತ್ತರ ದೊರಕಿಸಿಕೊಡುವಲ್ಲಿ ಪ್ರಯತ್ನಿಸಬೇಕು. ಅವರಲ್ಲಿರುವ ಸಂಶೋಧನಾ ಮನಸ್ಸಿಗೆ ಇಂಬು ನೀಡಿ ಹೊಸ ಭಾಷ್ಯ ಬರೆಯಬೇಕು. 

ಭಾನುವಾರ, ಜನವರಿ 5, 2014

ಸುಮ್ ಸುಮ್ನೆ....

ಜನ್ಮದಿನದ ಶುಭಾಶಯ ನಾ ಹೇಗೆ ತಿಳಿಸಲಿ?
ಹುನ್ನಾರಕ್ಕೆ ಬಲಿಯಾಯಿತೆ ನಿಷ್ಕಲ್ಮಶ ಸ್ನೇಹ...?

ಇಂದು ನನ್ನ ಸ್ನೇಹಿತೆಯ ಜನ್ಮ ದಿನ. ಪ್ರತಿ ನಿತ್ಯ ಹಗಲು ರಾತ್ರಿಗಳಾಗುವಂತೆ ಇಂದು ಕೂಡಾ ಹಗಲು ರಾತ್ರಿಗಳಾಗುತ್ತವೆ. ಸ್ನೇಹಿತೆಯ ಜನ್ಮದಿನ ಎಂದು ಯಾವೊಂದು ಪ್ರಕೃತಿಯಲ್ಲಿ ಬದಲಾವಣೆಯಾಗುವುದಿಲ್ಲ. ಬದಲಾವಣೆಯಾದರೆ ನನ್ನಲ್ಲಿ ಆಗಬಹುದು..!
ಇಪ್ಪತ್ತೆರಡು ವಸಂತಗಳನ್ನು ಹೇಗೆ ಕಳೆದಳೋ ನನಗಂತೂ ಗೊತ್ತಿಲ್ಲ. ಆದರೆ ಇತ್ತೀಚಿನ ಎರಡು ವಸಂತಗಳನ್ನು ನೋವು-ನಲಿವಿನ ಸಮರಸದಲ್ಲಿ ಕಳೆದಳು. ಹೇಳದೆ ಕೇಳದೆ ಬರುವ ಹತಾಷೆ ಕ್ಷಣಗಳು... ಬೇಡವೆಂದರೂ ಬಿಗಿದಪ್ಪಿಕೊಳ್ಳುವ ನೋವು ನಿರಾಶೆಗಳು... ಹಿಪ್ಪಿ ಹಿಂಡಿ ಮಾಡುವ ದೈಹಿಕ-ಮಾನಸಿಕ ಕಾಯಿಲೆಗಳು... ಹಾಗೂ ಇವುಗಳ ಜೊತೆಗೆ, ಪರಮಾನಂದದ ಪರಕಾಷ್ಠೆಗೆ ಕೊಂಡೊಯ್ಯುವ ಉಲ್ಲಾಸದ ಭಾವಗಳು.... ಈ ಎಲ್ಲ ನೋವು-ನಲಿವಿನ ಬದುಕು ಅವಳಾದಗಿತ್ತು. ಅವೆಲ್ಲವನ್ನೂ ಸಹ ಧೃತಿಗೆಡದೆ ಸಮರ್ಥವಾಗಿ ಎದುರಿಸಿ ವಿಜಯಿಯಾಗುತ್ತಲೇ ಹೋದಳು. ಎಷ್ಟೋ ಬಾರಿ ಸಾಕಪ್ಪ ಸಾಕು ಈ ಬದುಕು ಎಂದು, ಎಲ್ಲವನ್ನೂ ಬಿಟ್ಟು ಮರಳಿಗೂಡಿಗೆ ಹೋಗಲು ಅಣಿಯಾಗಿದ್ದಳು. ಆಗ ಅವಳಿಗೆ, ಎಲ್ಲಿಯೋ ಒಂದು ಭರವಸೆಯ ಚಿಕ್ಕ ಕಿರಣ ಗೋಚರಿಸಿತು. ಸವಾಲಾಗಿ ಸ್ವೀಕರಿಸಿ ಮತ್ತೆ ಬದುಕನ್ನು ಮುನ್ನಡೆಸಿದಳು. ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸುತ್ತ, ಚಾಣಾಕ್ಷ ನಡೆ ಹಾಕಿದಳು. ಅಂದು ಹಾಕಿದ ಹೆಜ್ಜೆ ಇಂದಿನವರೆಗೂ ಹಿಂದಿಡಲಿಲ್ಲ. ಬದುಕಿನ ಗುರಿಯೆಡೆಗೆ ಸಾಗುತ್ತಲೇ ಇದ್ದಾಳೆ. ದೂರದಲ್ಲಿ ಜಯಲಕ್ಷ್ಮೀ ಮಾಲೆ ಹಿಡಿದು ಸ್ವಾಗತ ಕೋರಲು ಕಾಯುತ್ತಿದ್ದಾಳೆ. ಗೆದ್ದೆ ಗೆಲ್ಲುವಳು... ವಿಜಯಿಯಾಗೇ ಆಗುವಳು....!
ಅವಳ ಗೆಲುವೆ ನನ್ನ ಬದುಕಿನ ಧ್ಯೇಯ. ಅನಿರೀಕ್ಷಿತವಾಗಿ ಪರಿಚಯವಾದ, ಪರಿಚಯ ಸ್ನೇಹವಾಗಿ, ಸ್ನೇಹ ಆತ್ಮೀಯತೆಗೆ ತಿರುಗಿ ಇಂದು ನಾವು ಪರಸ್ಪರ ಒಬ್ಬರಿಗೊಬ್ಬರು ಅನಿವಾರ್ಯ ಎಂಬಂತಾಗಿದ್ದೇವೆ. ಆ ಅನಿವಾರ್ಯತೆಯಲ್ಲಿ ಇಬ್ಬರ ಬದುಕೂ ನಿಂತಿದೆ. ಹಾಗಂತ ವಯೋ ಸಹಜ ಭಾವನೆಗಳಲ್ಲ. ಪ್ರಬುದ್ಧ ಬದುಕಿನ ಒಂದು ಮಜಲು. ಇಬ್ಬರೂ ಕೂಡಾ ಗಾಢವಾಗಿ ಒಬ್ಬರನ್ನೊಬ್ಬರು ಹಚ್ಚಿಕೊಂಡರೂ, ನಮ್ಮಲ್ಲಿರುವುದು ನಿಷ್ಕಲ್ಮಶ ಸ್ನೇಹ ಮತ್ತು ಪ್ರೀತಿ ಮಾತ್ರ. ಈ ಸ್ನೇಹದ ನಳನಳಿಕೆಯ ಶಾಶ್ವತತೆಗಾಗಿ ಕೆಲವು ಒಪ್ಪಂದಕ್ಕೆ ಒಳಗಾಗಿದ್ದು, ಉಸಿರು ನಿಂತರೂ ಒಪ್ಪಂದವನ್ನು ಮುರಿಯಲಾರೆವು. ಅಷ್ಟೊಂದು ನಂಬಿಕೆ ಹಾಗೂ ವಿಶ್ವಾಸದ ತಳಹದಿಯ ಮೇಲೆ ನಮ್ಮ ಸ್ನೇಹ ನೆಲೆಯೂರಿದೆ. ಪುಸ್ತಕ ಪ್ರಿಯೆಯಾದ ಅವಳಿಗೆ ಕಳೆದ ಬಾರಿಯ ಜನ್ಮ ದಿನದಂದು ವಸುಧೇಂದ್ರ ಅವರ `ನಮ್ಮಮ್ಮ ಅಂದ್ರೆ ನಂಗಿಷ್ಟ' ಎಂಬ ಪುಸ್ತಕವನ್ನು ನೀಡಿದ್ದೆ. ಆ ಪುಸ್ತಕವನ್ನು ಕಂಡು ಕುಪ್ಪಳಿಸಿದ ಅವಳು ಥ್ಯಾಂಕ್ಸ್ನ ಸುರಿಮಳೆಯನ್ನೇ ಹರಿಸಿದ್ದಳು. ನಮ್ಮ ಸ್ನೇಹ ಇನ್ನಷ್ಟು ಗಟ್ಟಿಯಾಗಿತ್ತ ಹೋಯಿತು. ಎಲ್ಲೇ ಹೋದರು ಅಲ್ಲಿ ನಾವಿಬ್ಬರು ಇರುತ್ತಿದ್ದೇವು! ದೈವ ಲೀಲೆಯೋ... ಅಥವಾ ಪ್ರೀತಿಯ ಮನಸ್ಸುಗಳ ಅಭಿಲಾಷೆಯೋ... ಒಂದು ತಿಳಿಯದಾಗಿತ್ತು..

ನಮ್ಮಿಬ್ಬರನ್ನು ಒಂದೆಡೆ ಸೇರಿಸುತ್ತಿದ್ದ ಆ ದೈವಶಕ್ತಿ, ಕಳೆದ ಏಳೆಂಟು ತಿಂಗಳಿಂದ ದೂರ ಮಾಡಿ ಬಿಟ್ಟಿತು. ಈ ದೂರ ಎನ್ನುವುದು ಅಂದಿನ ದಿನಗಳಲ್ಲಿ ನಮ್ಮಿಬ್ಬರಿಗೂ ಅನಿವಾರ್ಯ ಎಂಬಂತಾಗಿತ್ತು. ನಮ್ಮಿಬ್ಬರ ಸ್ನೇಹದ ನಡುವೆ ಕಂದಕ ಸೃಷ್ಠಿಸುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿತ್ತು. ಒಂದು ಹಂತದಲ್ಲಿ ಅದು ಉತ್ತುಂಗದ ಪ್ರಚಾರಕ್ಕೆ ಹೋಗಿ, ಕೆಲವು ಸ್ನೇಹಿತರು ಹುಬ್ಬೇರಿಸುವಂತೆ ಮಾಡಿತು. ಅವರ ಹುನ್ನಾರದ ಫಲವೋ... ಅಥವಾ ನಮಗಾಗಿ ಸೃಷ್ಠಿಯಾದ ಒಂದು ಬದಲಾವಣೆಯ ಮಗ್ಗಲೋ.... ದೈನಂದಿನ ಭೆಟ್ಟಿಗಂತೂ ಬ್ರೇಕ್ ಬಿದ್ದಿದೆ... ಮೊದಲಿನಷ್ಟು ಮಾತು-ಕತೆಯಿಲ್ಲದಿದ್ದರೂ ಯೋಗಕ್ಷೇಮ ವಿಚಾರಿಸಿಕೊಳ್ಳುವಷ್ಟು ಸ್ನೇಹವಿದೆ. ಪ್ರೀತಿಯಿದೆ.
ಎಲ್ಲೋ ಒಂದು ಕಡೆ ಹುನ್ನಾರದ ಕೈ ಮೇಲಾದರೂ.... ನಿಷ್ಕಲ್ಮಶ ಸ್ನೇಹಕ್ಕೆ ಮಾತ್ರ ಚ್ಯುತಿಬಾರದು. ಏನೇ ಇರಲಿ ಜನ್ಮದಿನದ ಈ ಶುಭ ಸಂಭ್ರಮದಲ್ಲಿ `ಭಗವಂತನು ಅವಳನ್ನು ಚೆನ್ನಾಗಿಟ್ಟಿರಲಿ' ಎಂದು ಪ್ರಾರ್ಥಿಸುತ್ತೇನೆ.
ಲೋಕದಾ ಸುಖವೆಲ್ಲ ನಿನಗಾಗಿ ಮುಡಿಪಿರಲಿ
ಇರುವಂತ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೂ ಕಣ್ಣಾಗಿ.....
-ಸ್ನೇಹ...