ಮಂಗಳವಾರ, ಡಿಸೆಂಬರ್ 8, 2015

'ಅನಾರ್ಕಲಿ' ಬಟ್ಟೆಯಲ್ಲಿ ನೀ ಅಂದು ಕಂಡಾಗ!
ನನ್ನೊಲವಿನ ಪುಟ್ಟ ಪಾರಿಜಾತವೇ,
ನೀ ಒಂದು ಮುಗಿಯದ ಕವನ ಎಂದು ಭಾವಿಸಿದ್ದೆ ಗೆಳತಿ. ನಿನ್ನ ಬಗ್ಗೆ ಎಷ್ಟು ಬರೆದರೂ ಸಾಲದು ಎನ್ನುವಂತಿತ್ತು ನನ್ನ ಭಾವ. ಆದರೆ, ನಿನ್ನೀ ದೀರ್ಘ ಮೌನ, ಸರಾಗವಾಗಿ ಹರಿಯುತ್ತಿದ್ದ ಕವನಕ್ಕೆ ತಡೆಯೊಡ್ಡುತ್ತಿದೆ. ನೀ ನನಗೆ ಪರಿಚಯವಾಗಿದ್ದ ಘಳಿಗೆ ಬಹುಶಃ ಯಮಗಂಡ ಕಾಲವಿತ್ತೇನೋ ಎಂದೆನಿಸುತ್ತಿದೆ....!
'ಯಾರೋ ಯಾರೋ ಗೀಚಿ ಹೋದ
ಹಾಳು ಹಣೆಯ ಬರಹ...
ದಿಕ್ಕು ದಾರಿ ತೋಚದೇನೆ
ಕಾಲ ಕಳೆಯೋ ವಿರಹ...' ಎನ್ನುವ ಸಿನೇಮಾದ ಪ್ಯಾಥೋ ಸಾಂಗಿನಂತೆ, ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಬ್ರಹ್ಮ ನನ್ನ ಹಣೆ ಬರಹ ಬರೆದಿರಬೇಕು. ಪ್ರೀತಿ-ಪ್ರೇಮದ ಜಂಜಾಟವೇ ಬೇಡ ಎಂದು ಸುಮ್ಮನಿದ್ದ ನಾ, ಅರಿವಿಲ್ಲದೆ ನಿನ್ನ ಪ್ರೀತಿಸಿ ವಿಲವಿಲನೇ ಒದ್ದಾಡುತ್ತಿದ್ದೇನೆ. ಏನು ಮಾಡಬೇಕೆಂದು ತೋಚದೆ `ಮುಂಗಾರು ಮಳೆ' ಪ್ರೀತಮನ ಹಾಗೆ ತಲೆ ಕೆರೆದುಕೊಳ್ಳುತ್ತಿದ್ದೇನೆ.
ಅಲ್ಲಾ ಕಣೇ, ಪ್ರೀತಿ ಇಷ್ಟೊಂದು ಘೋರ ಎಂದು ತಿಳಿದಿದ್ದರೆ ಖಂಡಿತ ನಿನ್ನನ್ನು ಪ್ರೀತಿಸುವ ಸಾಹಸಕ್ಕೆ ಇಳಿಯುತ್ತಿರಲಿಲ್ವೆ. ರಾತ್ರೆ ನಿದ್ದೆನೂ ಸರಿಯಾಗಿ ಬರ್ತಾಯಿಲ್ಲ. ಊಟ-ತಿಂಡಿಯಂತೂ ರುಚಿನೇ ಇಲ್ಲದ ಹಾಗಾಗಿದೆ. ಏನು ಮಾಡಿದರೂ, ಎಲ್ಲೇ ಹೋದರೂ ನೆರಳಿನಂತೆ ನೀ ನನ್ನನ್ನೇ ಹಿಂಬಾಲಿಸಿದಂತೆ ಭಾಸವಾಗುತ್ತಿದೆ. ಹೌದು ಕಣೇ, ನೀ ನನ್ನ ಬದುಕೇ ಆಗಿ ಪರಿವರ್ತನೆ ಆಗ್ಬಿಟ್ಟಿದ್ದೀಯಾ. ನಿನ್ನ ಬಿಟ್ಟು ಬದುಕೋ ಸಾಮಥ್ರ್ಯವಂತೂ ನನ್ನಲ್ಲಿಲ್ಲ ಎನ್ನುವುದು ಅರಿವಾಗ್ಬಿಟ್ಟಿದೆ.
ಅಲ್ವೆ, ಅದೆಷ್ಟು ಬಾರಿ ನಾ ನಿನಗೆ ಹೇಳಿಲ್ಲ ಹೇಳು, 'ನಾ ನಿನ್ನನ್ನು ಎಷ್ಟೊಂದು ಗಾಢವಾಗಿ ಪ್ರೀತಿಸ್ತಾ ಇದ್ದೀನಿ ಅಂತ. ಎಷ್ಟು ವಿಧದಲ್ಲಿ ತೋರಿಸಿಕೊಟ್ಟಿಲ್ಲ ಹೇಳು. ಆರು ತಿಂಗಳಿನಿಂದ ನಿರಂತರವಾಗಿ ನಿನ್ನ ಪ್ರೀತಿಯ ಹಿಂದೆ ಬಿದ್ದು, ಒಂದು ಹಿಡಿ ಪ್ರೀತಿಗಾಗಿ ಮಂಡಿಯೂರಿ ಅಂಗಲಾಚುತ್ತಿದ್ದೇನೆ. ಆ ನನ್ನ ವೇದನೆಗೆ, ತಾಕಲಾಟಕ್ಕೆ ನೀ ಒಂದಿನಿತು ಸ್ಪಂದನೆ ತೋರದೆ, ಮಾತೇ ಬರದ ಮೂಕಿಯಂತೆ ವತರ್ಿಸುತ್ತಿದ್ದೀಯಲ್ಲೇ. ಬೇಡ ಕಣೇ, 'ಪ್ರೀತಿಸ್ತೀನಿ' ಅಂತಾದ್ರೂ ಹೇಳು, ಇಲ್ಲಾ, 'ನೀ ನನಗೆ ಇಷ್ಟವಿಲ್ಲ' ಅಂತಾದ್ರೂ ಹೇಳು ಮಾರಾಯ್ತಿ. ಎಷ್ಟು ದಿನ ಅಂತ ಹೀಗೆ ಪರಿತಪಿಸ್ತಾ ಇರಬೇಕು? ಕಾದು ಕಾದು ನನ್ನನ್ನೇ ನಾ ಕಳೆದುಕೊಳ್ಳುತ್ತಿದ್ದೇನೆ. ಏನಾದ್ರೂ ಹೇಳೇ ಹುಡುಗಿ, ನಿನ್ನ ಉತ್ತರ ಕೇಳಿ ಎಲ್ಲಿಯಾದ್ರೂ, ಹೇಗಾದ್ರೂ ಬದುಕಿಕೊಳ್ತೇನೆ!
ಅವತ್ತು ಕೇಳಿದ್ಯಲ್ಲಾ, ನಾ ನಿನಗೆ ಹೇಗೆ ಪರಿಚಯ? ನನ್ನ ಮೊಬೈಲ್ ನಂಬರ್ ಯಾರು ನಿನಗೆ ಕೊಟ್ಟಿದ್ದು? ಎಂತ. ಹೇಳ್ತೀನಿ ಕೇಳು. ಅಂದು ಯಾಕೋ ಮನಸ್ಸು ಅವ್ಯಕ್ತ ಭಾವದಲ್ಲಿ ತಿಣುಕಾಡುತ್ತಿತ್ತು. ತುಸು ಟೈಂ ಪಾಸಾದೀತೆಂದು ಕಣ್ಮುಂದೆ ಇದ್ದ ಲ್ಯಾಪಿಗೆ ಬಿಎಸ್ಎನ್ಎಲ್ ಡಾಟಾ ಕಾಡರ್್ ಕನೆಕ್ಟ್ ಮಾಡಿ ನೇರವಾಗಿ ಫೇಸ್ಬುಕ್ಗೆ ಲಾಗಿನ್ ಆದೆ. ವಾಲ್ ಪಕ್ಕದಲ್ಲಿ ನೀಲಿ ಬಣ್ಣದ ಅನಾರ್ಕಲಿ ಬಟ್ಟೆ ಧರಿಸಿದ ನೀ ಕಂಡು ಬಂದೆ. ಹಿಂದೆ-ಮುಂದೆ ಯೋಚಿಸದೆ ನಿನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಬಿಟ್ಟಿದ್ದೆ. ಒಂದು ದಿನ ಬಿಟ್ಟು ನೀ ನನ್ನ ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿಕೊಂಡಿದ್ದೆ.
ಆ ಒಂದು ದಿನದಲ್ಲಿಯೇ ನಾ ನಿನ್ನೆಲ್ಲ ಜಾತಕವನ್ನು ತಡಕಾಡಿ ಬಿಟ್ಟಿದ್ದೆ. ನೀ ಹುಟ್ಟಿದ ಊರು, ಅಆಇಈ ಕಲಿತ ಬಾಲವಾಡಿ, ಅಳು ಮುಂಜಿ ಮುಖ ಮಾಡಿಕೊಂಡು ಹೋದ ಕನ್ನಡ ಶಾಲೆ, ಠಾಕು-ಠೀಕಾಗಿ ಹತ್ತಿದ ಕಾಲೇಜ್ ಮೆಟ್ಟಿಲು, ಸ್ನಾತಕೋತ್ತರ ಪದವಿ ಪಡೆದು ಬಿಗುಮಾನದಿಂದ ಹೊರಬಿದ್ದ ವಿಶ್ವವಿದ್ಯಾಲಯ ಹೀಗೆ.... ನೀ ಹೆಜ್ಜೆ ಇಟ್ಟಲ್ಲೆಲ್ಲ ನಾ ಮಾನಸಿಕವಾಗಿ ಓಡಾಡಿಬಿಟ್ಟಿದ್ದೆ. ಅದೂ ಅಲ್ಲದೆ, ನಿನ್ನೆಲ್ಲ ಹತ್ತಿರದ ಸ್ನೇಹಿತರ, ಸಂಬಂಧಿಗಳ ಮಾಹಿತಿ ಸಂಗ್ರಹಿಸಿದ್ದೆ. ಅವರಲ್ಲಿ ಕೆಲವರು ನನಗೆ ಪರಿಚಯದವರಾಗಿದ್ದರೆ, ಇನ್ನು ಕೆಲವರು ನನ್ನಾತ್ಮೀಯರಾಗಿದ್ದರು. ಅವರೇ ಕಣೇ ನನಗೆ ನಿನ್ನ ಮಗುವಿನಂತ ಮುಗ್ದ ಗುಣದ ಬಗ್ಗೆ ಹೇಳಿದ್ದು, ಯಾರಿಗೂ ನೋವು ನೀಡದೆ ಬದುಕುವ ನಿನ್ನ ಸೌಮ್ಯತೆ ಬಗ್ಗೆ ಹೇಳಿದ್ದು, ಪ್ರಾಣಿ, ಪಕ್ಷಿ, ಪ್ರಕೃತಿ ಎಂದರೆ ನಿನಗಿಷ್ಟ ಎಂದು ಹೇಳಿದ್ದು....!
ಹುಡುಗಿ, ಅಷ್ಟರಲ್ಲಾಗಲೇ ನನ್ನೆದೆಯ ಕೊಳದಲ್ಲಿ ಪ್ರೇಮದಾವರೆಯ ದಳಗಳು ಮೆಲ್ಲನೆ ಚಿಗುರೊಡೆಯಲಾರಂಭಿಸಿದ್ದವು ಗೊತ್ತಾ? ನನಗಾಗಿ ಒಂದು ಹೃದಯ ಮಿಡಿಯಬೇಕು, ನನ್ನೊಲವ ಜೇನಿಗಾಗಿ ತುಡಿಯಬೇಕು ಎನ್ನುವ ಆಸೆ ಹೊತ್ತ ವಯಸ್ಸಿನಲ್ಲಿಯೇ ನಿನ್ನ ಮೇಲೆಪ್ರೇಮಾಂಕುರವಾಗಿತ್ತು. ನಿನಗೆ ನನ್ನದು ಮೊದಲ ಪ್ರೀತಿಯಾಗದಿರಬಹುದು, ಆದರೆ, ನನ್ನೆದೆಯ ಪ್ರೇಮದ ಬಾಗಿಲನ್ನು ತಟ್ಟಿದವಳು ನೀನೇ ಮೊದಲಿಗಳು ನೆನಪಿರಲಿ!
ಸರಿ, ನಿನ್ನ ದೀರ್ಘ ಮೌನಕ್ಕೆ ಉತ್ತರ ಬಯಸಿ, ಈ ಪತ್ರ ಬರೆದಿದ್ದೇನೆ. ಇಲ್ಲಿ ಬರೆದಿರುವ ಒಂದೊಂದು ಸಾಲುಗಳು ನಿನ್ನ ಪಾದದ ಮೇಲಿಟ್ಟ ಪುಟ್ಟ ಪಾರಿಜಾತ. ಅದನ್ನು ನೀ ಮುಡಿಗೇರಿಸಿಕೊಂಡು ಕಿರು ಬೆರಳು ಹಿಡಿಯುತ್ತೀಯೋ... ಅಥವಾ, ಕಾಲಲ್ಲಿಯೇ ಹೊಸಕಿಹಾಕಿ ಇತಿಶ್ರೀ ಹಾಡುತ್ತೀಯೋ.... ನಿನಗೆ ಬಿಟ್ಟಿದ್ದು!
-ಮಾಧವ
'ಪ್ರೇಮ'ದ ಆರಂಭ ತಿರಸ್ಕಾರದಿಂದಲೇ....
ಹೀಗೊಂದು ಮಾತು ನನ್ನ ವೃತ್ತಿ ಬಂಧುವೊಬ್ಬರು ಹೇಳಿದರು. ಅದು ಎಷ್ಟರ ಮಟ್ಟಿಗೆ ಸರಿ... ತಪ್ಪು ಎಂದು ನನಗಂತೂ ಖಂಡಿತ ಗೊತ್ತಿಲ್ಲ. ಆದರೆ, ಅವರಾಡಿ ಆ ಮಾತು ಚಿಂತನೆಗೆ ನೂಕಿದ್ದಂತೂ ಸತ್ಯ.
ಬಹುತೇಕ ಯುವ ಹೃದಯಿಗಳ ಮನಸ್ಸಲ್ಲಿ ಒಂದಿಲ್ಲೊಂದು ಸಂದರ್ಭದಲ್ಲಿ `ಪ್ರೇಮ' ಅಂಕುರಿಸಿಯೇ ಇರುತ್ತದೆ. ಆ ಪ್ರೇಮ ಮುಂದುವರಿದು ಮದುವೆಯಲ್ಲಿ ತಾಕರ್ಿಕ ಅಂತ್ಯ ಕಾಣಬಹುದು; ಇಲ್ಲವೇ, ನಟ್ಟ ನಡು ರಸ್ತೆಯೇ ಟಿಸಿಲೊಡೆದು ಪಥ ಬದಲಿಸಬಹುದು. ಹೆಜ್ಜೆ ಮೂಡದ ಹಾದಿಯೆಂದು, ಆವರೆಗೆ ಸಾಗಿ ಬಂದ ಮಾರ್ಗವೇ ಮರೆತು ಹೊಸ ಬದುಕಿಗೆ ಮುನ್ನುಡಿಯನ್ನೂ ಬರೆಯಬಹುದು. ಎಷ್ಟೋ ಯುವ ಮನಸ್ಸುಗಳು ಅರಿತೋ ಅರಿಯದೆಯೋ ಇನ್ನೊಂದು ಹೃದಯವನ್ನು ತನ್ನಲ್ಲಿ ಪ್ರತಿಷ್ಟಾಪಿಸಿಕೊಂಡು ಆರಾಧಿಸಬಹುದು. ಕಾಲ ಚಕ್ರದ ಉರುಳಾಟದಲ್ಲಿ ಎಲ್ಲವೂ ಸುಖಾಂತ್ಯವೇ ಆಗುತ್ತದೆ ಎಂದೇನಿಲ್ಲ. ದುಃಖಾಂತ್ಯವೂ ಆಗಬಹುದು.
ಕ್ಷಮಿಸಿ, ಬಹತೇಕ ಪ್ರೇಮ ಪ್ರಕರಣಗಳು ದುರಂತದಲ್ಲಿಯೇ ಕೊನೆಗೊಂಡಿವೆ. ಕೊನೆಗೊಳ್ಳುತ್ತಲೂ ಇವೆ. ಹಾಗಾದರೆ ಇದಕ್ಕೆ ಕಾರಣವೇನು? ಎನ್ನುವುದು ಮೇಲ್ನೋಟಕ್ಕೆ ಸರಳ ಹಾಗೂ ಸಾಮಾನ್ಯ ಪ್ರಶ್ನೆಯಾದರೂ.... ಅದರ ಅರ್ಥ ಹಾಗೂ ಹರಿವಿನ ವ್ಯಾಪ್ತಿ ತುಂಬಾ ವಿಶಾಲವಾದದ್ದೇ..! ಜೊತೆಗೆ ಕಲ್ಪನೆಗೂ ನಿಲುಕದ್ದು. ಯಾಕೆಂದರೆ ಬಹುತೇಕ 'ಪ್ರೇಮ' ಕಾರಣ ಇಲ್ಲದೆಯೇ ಹುಟ್ಟಿಕೊಳ್ಳುತ್ತವೆ, ಕಾರಣವಿಲ್ಲದೆಯೇ ಅಂತ್ಯಗೊಂಡಿರುತ್ತವೆ.
ಇವುಗಳ ನಡುವೆಯೇ `ಪ್ರೀತಿಯ ಆರಂಭ ತಿರಸ್ಕಾರದಿಂದ' ಎನ್ನುವ ವ್ಯಾಖ್ಯಾನ ರೇಜಿಗೆ ಹುಟ್ಟಿಸಿ, ಚಿಂತನೆಗೆ ನೂಕುತ್ತದೆ. ಅರ್ಥವ್ಯಾಪ್ತಿಯ ಆಳಕ್ಕಿಳಿದಾಗ, `ಪ್ರೇಮ' ಹುಟ್ಟಲು ಉಳಿದೆಲ್ಲ ಕಾರಣಕ್ಕಿಂತ ಮೊದಲ ಸ್ಥಾನ 'ತಿರಸ್ಕಾರ'ಕ್ಕೇ ಸೀಮಿತ...!
ಪ್ರೇಮ ನಿವೇದನೆ ಮಾಡಿಕೊಳ್ಳುವ ಸಂದರ್ಭದಲ್ಲಿ.... ಪ್ರೇಮ ಭಿಕ್ಷೆ ಯಾಚಿಸಿದ ವ್ಯಕ್ತಿಗೆ ಯಾರೂ ಕೂಡಾ ಹೃದಯವನ್ನು ಒಮ್ಮೆಲೆ ದಾನ ಮಾಡಿ ಬಿಡುವುದಿಲ್ಲ. ಬಹುತೇಕವಾಗಿ ತಿರಸ್ಕಾರಕ್ಕೆ ಒಳಗಾಗಿ ಬಿಡುತ್ತಾರೆ. ತೀರಾ ಕೆಲವು ಸಂದರ್ಭದಲ್ಲಿ ಮಾತ್ರ 'ನಿರ್ಲಿಪ್ತತೆ'ಗೆ ಜಾರಿ, ಭಾವನೆಯ ಮೇಲೆ ಪಯಣಿಸಿ ಬಿಡುತ್ತಾರೆ.
ಪ್ರೇಮ ಜಗತ್ತಿನ ಗಮ್ಮತ್ತೇ ವರ್ಣನಾತೀತ, ಭಾವನಾತೀತ ಎನ್ನುವಂತೆ... ನಿವೇದಿಸಿದ ವ್ಯಕ್ತಿಯ ಕುರಿತು, ಮನಸ್ಸಲ್ಲಿ ಅರಿವಿಲ್ಲದೆ ಕುತೂಹಲವೊಂದು ಮೊಳಕೆಯೊಡೆದಿರುತ್ತದೆ. ಅದು ಬೆಳೆದು ಹೆಮ್ಮೆರವಾಗಿ ತನು ಮನವೆಲ್ಲ ಆವರಿಸಿರುತ್ತದೆ. ಸದ್ದಿಲ್ಲದೆ ಆ ವ್ಯಕ್ತಿಯ ಮೇಲೆ ಆಸಕ್ತಿ ಅನುರಣಿಸುತ್ತಿರುತ್ತದೆ. ಭಾವನೆಗಳ ಏರಿಳಿತ ಹೊಸ ಅನುಭೂತಿ ನೀಡಲು ಪ್ರಾರಂಭಿಸುತ್ತದೆ. ತಿರಸ್ಕಾರದ ಮೊಟ್ಟೆಗೆ ಆಸಕ್ತಿಯ ಕಾವು ಸಿಕ್ಕು, ಸದ್ದಿಲ್ಲದೆ 'ಪ್ರೇಮ ಪಕ್ಷಿ' ಕಣ್ತೆರೆದಿರುತ್ತದೆ. ನಿಧಾನವಾಗಿ ರೆಕ್ಕೆ ಬಡಿದು ಮನದಾಗಸದ ತುಂಬ ಹಾರಾಡಲು ಶುರುವಿಟ್ಟುಕೊಳ್ಳುತ್ತದೆ.
ಅಂದರೆ, ನಿವೇದನೆಗೊಂಡು ತಿರಸ್ಕಾರಕ್ಕೆ ಒಳಗಾದ ಪ್ರೇಮ ಕೂಡಾ ತಾಳ್ಮೆ, ಸಹನೆ, ನಂಬಿಕೆ, ಆತ್ಮ ವಿಶ್ವಾಸ ಇವುಗಳ ನಡುವೆ ನಿಷ್ಕಲ್ಮಶ ಮನಸ್ಸಿದ್ದರೆ.... 'ಪ್ರೇಮ' ಕೈ ಹಿಡಿದು ನಡೆಸುತ್ತದೆ. ಬದುಕಿನ ಪಥ ಬದಲಿಸಿ, ಜೀವನದುದ್ದಕ್ಕೂ ದಾರಿ ದೀಪವಾಗಿ ಬೆಳಗುತ್ತಿರುತ್ತದೆ. ಅಂತಹ 'ತಿರಸ್ಕಾರದ ಪ್ರೇಮ' ನಿಮ್ಮದಾಗಲಿ. ಆ ಮೂಲಕ ಬದುಕು ಬೆಳಗಲಿ... 
ಚೆನ್ನೈ ಜಲ ಪ್ರಳಯದಲ್ಲಿನ ಆ ಮೂರು ದಿನಗಳು... 
ತಮಿಳುನಾಡು ರಾಜ್ಯದ ರಾಜಧಾನಿ ಚೆನ್ನೈನಲ್ಲಿ ವಾಯುಭಾರ ಕುಸಿತದಿಂದ ಭೀಕರ ಮಳೆ ಸುರಿದು ಜಲ ಪ್ರಳಯವೇ ಸೃಷ್ಟಿಯಾಗಿತ್ತು. ನಗರವನ್ನೆಲ್ಲ ನೀರು ತನ್ನೊಳಗೆ ಇಟ್ಟುಕೊಂಡಿತ್ತು. ಸಂದರ್ಭದಲ್ಲಿ ಸಹೋದರಿ ಜೊತೆ ಅನುಭವಿಸಿದ 'ಜಲಾತಂಕ'ದ ಕ್ಷಣಗಳ ಅಕ್ಷರ ರೂಪ ಇಲ್ಲಿದೆ.
----------------
ಅಂದು ಸೋಮವಾರ. ಇಪ್ಪತ್ತು ದಿನಗಳಲ್ಲಿ ನಾಲ್ಕನೇ ಬಾರಿಗೆ ಚೆನೈನಲ್ಲಿ ವಾಯುಭಾರ ಕುಸಿತವಾಗಿತ್ತು. ನಸುಕಿನ ವೇಳೆ ಪ್ರಾರಂಭವಾದ ಮಳೆ ಎಂಟು ಗಂಟೆ ಸುಮಾರಿಗೆ ನಿಂತಿತ್ತು. ಆದರೆ, ಮಧ್ಯ ಮಧ್ಯ ತುಂತುರು ಮಳೆಯಾಗುತ್ತಿತ್ತು. ರಾತ್ರಿ ಒಮ್ಮಿಂದೊಮ್ಮೆಲೆ ಜೋರಾಗಿ ಮಳೆ ಬೀಳಲು ಪ್ರಾರಂಭಿಸಿತು.
ಯಾವುದೇ ಆತಂಕವಿಲ್ಲದೆ, ಅಪಾಯದ ಕಲ್ಪನೆಯಿಲ್ಲದೆ ನಾವು ನಿದ್ದೆಗೆ ಜಾರಿಬಿಟ್ಟಿದ್ದೇವು. ಮಾರನೇ ದಿನ ಮಂಗಳವಾರವೂ ಮಳೆ ಮುಂದುವರಿದಿತ್ತು. ಮಳೆಯ ಆರ್ಭಟಕ್ಕೆ ಮುಂಜಾಗೃತವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಸಂಜೆಯಾದರೂ ವಿದ್ಯುತ್ ಬರಲಿಲ್ಲ. ಉರಿಸಲು ಮೋಂಬತ್ತಿಯೂ ಇರಲಿಲ್ಲ. ದೇವರ ಮುಂದೆ ಹಚ್ಚಿಟ್ಟಿದ್ದ ಪುಟ್ಟ ದೀಪದ ಬೇಳಕಲ್ಲಿಯೇ ಊಟ ಮಾಡಿ, ಮಲಗಿದ್ದಾಯಿತು. ಬೆಳಕು ಹರಿಯುವವರೆಗೂ ಆರ್ಭಟಿಸುತ್ತಿದ್ದ ವರುಣ, ನಂತರ ತಣ್ಣಗಾಗಿದ್ದ. ಆಕಾಶ ಶುಭ್ರವಾಗಿತ್ತು, ಆದರೆ ಅರುಣನ ಪತ್ತೆಯಿರಲಿಲ್ಲ.
ಮೊದಲ ಮಹಡಿಯಿಂದ ಇಣುಕಿ ನೋಡಿದಾಗಿ ರಸ್ತೆಯಲ್ಲಿ ಪಾದ ಮುಳುಗುವಷ್ಟು ನೀರು ನಿಂತಿತ್ತು. ರಾತ್ರಿ ಸುರಿದ ಮಳೆಗೆ ನೀರು ನಿಂತಿದೆ ಎಂದು, ಭಾವಿಸಿ ಇನ್ನೇನು ನೀರು ಇಳಿದು ಹೋಗುತ್ತದೆ ಎಂದು ಎದುರು ನೋಡುತ್ತಿದ್ದೇವು. ಆದರೆ, ಅದೆಲ್ಲ ಸುಳ್ಳು ಎಂದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಕ್ಷಣ ಕ್ಷಣಕ್ಕೂ ನೀರು ಮೆಲ್ಲನೇ ಮೇಲೇರುತ್ತಲೇ ಇತ್ತು. ಸಾಯಂಕಾಲದ ಏಳರ ಹೊತ್ತಿಗೆ ಬಡಾವಣೆಯಲ್ಲಿರುವ ನೆಲ ಮಹಡಿಯೆಲ್ಲ ನೀರಿನಲ್ಲಿ ಮುಳುಗಿ ಹೋಗಿತ್ತು. ಅದೂ ಸಾಲದೆಂಬಂತೆ ನೀರು ಮತ್ತೆ ಮತ್ತೆ ಮೇಲೇರುತ್ತಲೇ ಇತ್ತು. ರಾತ್ರಿ ಒಂಬತ್ತರ ಹೊತ್ತಿಗೆ ಮೊದಲನೇ ಮಹಡಿವರೆಗೆ ನೀರು ಏರಲು ಎರಡು-ಮೂರು ಫೂಟ್ ಮಾತ್ರ ಬಾಕಿಯಿದ್ದವು...!
ನಿದ್ದೆ ಒತ್ತರಿಸಿ ಬಂದರೂ ಮಲಗಲಾಗದ ಪರಿಸ್ಥಿತಿ. ನೀರು ಹೇಗೆ ಕ್ಷಣ ಕ್ಷಣಕ್ಕೂ ಮೇಲೇರುತ್ತಿತ್ತೋ, ಹಾಗೆಯೇ... ಎದೆಯಲ್ಲಿ ಆತಂಕವೂ ಹೆಚ್ಚುತ್ತಲೇ ಹೋಗುತ್ತಿತ್ತು. ಏನು ಮಾಡಬೇಕೆಂದು ತಿಳಿಯದ ಪರಿಸ್ಥಿತಿಯದು. ಮುಂಜಾನೆಯೇ ಮೇಲ್ಮಹಡಿಯಲ್ಲಿ ವಾಸವಿದ್ದ ಮನೆಯವರಿಂದ ಮೂರು ಹೊತ್ತಿಗೂ ಸಾಕಾಗುವಷ್ಟು ಪುಲಾವ್ ಮಾಡಿಸಿಕೊಂಡಿದ್ದೇವು. ಅದನ್ನೇ ತಿಂದು ನಿದ್ದೆಗೆ ಅಣಿಯಾದೆವು. ಆದರೆ, ಮೂರೇ ಮೂರು ಫೂಟ್ ಕೆಳಗಿರುವ ನೀರು ಯಾವ ಘಳಿಗೆಯಲ್ಲಿ ಮೇಲೇರಿ ಬಿಡುತ್ತದೋ ಎನ್ನುವ ಆತಂಕ ಮನದಲ್ಲಿಯೇ ಮಡುಗಟ್ಟಿ, ರಾತ್ರಿ ನಿದ್ದೆಯನ್ನೆಲ್ಲ ಹತ್ತಿಕ್ಕಿಬಿಟ್ಟಿತ್ತು. ಈ ಆತಂಕ ನಮಗಷ್ಟೇ ಅಲ್ಲ, ಬಹುಶಃ ಸಮಸ್ತ ಚೆನೈ ಜನತೆಗೂ ಕಾಡಿದ್ದು ಸುಳ್ಳಲ್ಲ.
ಆದರೆ, ಗುರವಾರ ಮುಂಜಾನೆಯಷ್ಟೊತ್ತಿಗೆ ನೀರಿನ ಏರಿಕೆ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಇಳಿಕೆ ಪ್ರಮಾಣ ಮಾತ್ರ ತೀರಾ... ತೀರಾ... ಕಡಿಮೆ ಎಂದೆನಿಸುವಷ್ಟು ಇತ್ತು. ಅವತ್ತು ಕೂಡಾ ಊಟಕ್ಕಾಗಿ ಹಿಂದಿನ ದಿನದಂತೆಯೇ, ಮೇಲ್ಮಹಡಿಯಲ್ಲಿ ವಾಸವಿದ್ದವರಿಂದ ಪುಲಾವ್ ಮಾಡಿಸಿಕೊಂಡು ಮೂರು ಹೊತ್ತು ತಿಂದಿದ್ದೇವು. ಹಿಂದಿನ ದಿನದಂತೆ ರಾತ್ರಿ ನಿದ್ದೆ ಹತ್ತಲಿಲ್ಲ. ಅರ್ಧ ಗಂಟೆಗೊಮ್ಮೆ ಬಾಗಿಲು ತೆರೆದು, ಕಡುಗತ್ತಲಲ್ಲಿಯೇ ನೀರು ಎಷ್ಟು ಪ್ರಮಾಣದಲ್ಲಿ ಇಳಿದಿದೆ ಎಂದು ನೋಡುತ್ತಲೇ ಇದ್ದೆ. ಬೆಳಕು ಹರಿಯುವವರೆಗೂ ಅದೊಂದು ಕಾಯದಂತಾಗಿ ಬಿಟ್ಟಿತ್ತು. ಅವುಗಳ ನಡುವೆಯೇ, ಗಂಟೆಗೊಮ್ಮೆ ಮಳೆ ಧೋ.. ಎಂದು ಸುರಿಯುತ್ತಿತ್ತು. ಆ ಸಂದರ್ಭದಲ್ಲೆಲ್ಲ ಮತ್ತೆ ನೀರಿನ ಮಟ್ಟ ಎಲ್ಲಿ ಏರಿ ಬಿಡುತ್ತದೆ ಎನ್ನುವ ಭಯ ಕಾಡುತಲೇ ಇತ್ತು...!
ಅಂತೂ ಶುಭ ಶುಕ್ರವಾರದ ಬೆಳಕು ಹರಿದಿತ್ತು. ಹದಿನಾಲ್ಕು ಫೂಟ್ ಎತ್ತರಕ್ಕೆ ಏರಿದ ನೀರು ಸೊಂಟದ ಮಟ್ಟಕ್ಕೆ ಇಳಿಕೆ ಕಂಡಿತ್ತು. ಏನೋ ಧೈರ್ಯಮಾಡಿಕೊಂಡು, ಚೆನೈ ಕೇಂದ್ರ ಬಸ್ ನಿಲ್ದಾಣಕ್ಕೆ ಹೋಗಿ, ಮನೆಗೆ ಹೋಗೋಣ ಎಂದೆ. ಅವಳು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿ, ನನ್ನ ಜೊತೆ ಹೆಜ್ಜೆ ಹಾಕಿದಳು. ಸೊಂಟದವರೆಗೆ ನೀರಿನಲ್ಲಿ ಅತ್ತ ಈಜು ಅಲ್ಲದ, ಇತ್ತ ನಡೆದುಕೊಂಡು ಅಲ್ಲದ ಶೈಲಿಯಲ್ಲಿ ಎರಡು ಕಿ.ಮೀ. ದೂರದಲ್ಲಿರುವ ಅಶೋಕ ಪಿಲ್ಲರ್ ಪ್ರದೇಶಕ್ಕೆ ಬಂದು, ಅಲ್ಲಿಂದ ಉಪನಗರ ಬಸ್ ಹತ್ತಿ ಕೋಯಂಬಟ್ಟು ಬಸ್ ನಿಲ್ದಾಣಕ್ಕೆ ಬಂದೇವು.
ಮುಂಜಾನೆ ಉಪಹಾರ ಮಾಡೋಣ ಎಂದರೆ ಕೈಯಲ್ಲಿ 500 ರೂ. ಹೊರತಾಗಿ ಇನ್ನೇನು ಉಳಿದಿರಲಿಲ್ಲ. ಆದರೆ ಎಟಿಎಂನಲ್ಲಿ ಹಣವಿತ್ತು. ಬಸ್ ನಿಲ್ದಾನದಲ್ಲಿದ್ದ ಎಟಿಎಂ ಔಟ್ ಆಫ್ ಸರ್ವಿಸ್ ಎಂದು ತೋರಿಸುತ್ತಿತ್ತು. ನೋಡೋಣವೆಂದು ನಿಲ್ದಾಣದ ಸುತ್ತ ಒಂದು ಕಿ.ಮೀ. ಅಡ್ಡಾಡಿದೆ. ಎಟಿಎಂ ಕೇಂದ್ರವಿತ್ತು, ಆದರೆ ಅವೆಲ್ಲ ಪ್ರವಾಹಕ್ಕೆ ಸಿಲುಕಿ ಹಾಳಾಗಿ ಹೋಗಿದ್ದವು. ನಮ್ಮಲ್ಲಿದ್ದ ಹಣದಿಂದ ಬೆಂಗಳೂರು ತಲುಪಲು ಇಬ್ಬರಿಗೂ ಸಾಧ್ಯವಿಲ್ಲ ಎಂದು ಭಾವಿಸಿ, ಅಳುಕುತ್ತಲೇ ಚೆನೈ-ಹೊಸುರು(ತಮಿಳುನಾಡು ಸಾರಿಗೆ) ಬಸ್ ಹತ್ತಿದೇವು. ಒಬ್ಬರಿಗೆ 183 ರೂ. ಹೊಸುರವರೆಗೆ ಆಗಿದ್ದರಿಂದ ಇಬ್ಬರಿಗೆ 366 ರೂ. ನೀಡಿ ಟಿಕೇಟ್ ಪಡೆದೆವು. ಹೊಸುರಲ್ಲಿ 20 ರೂ. ಬಿಸ್ಕಟ್ ಪ್ಯಾಕೆಟ್ ಖರೀದಿಸಿ, ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಅದರಲ್ಲಿಯೇ ಮುಗಿಸಿದೆವು. ಆಗಲೇ, ಸಾಯಂಕಾಲ 4:15 ಆಗಿತ್ತು. ಅಲ್ಲಿಂದ ಮತ್ತೆ ತಮಿಳುನಾಡು ಸಾರಿಗೆ ಬಸ್ ಹತ್ತಿ ಬೆಂಗಳೂರು ತಲುಪಿದೆವು. ನಂತರ ಅಲ್ಲಿಯೇ ರಾತ್ರಿ ಊಟ ಮಾಡಿ, 10:30ಕ್ಕೆ ಹುಬ್ಬಳ್ಳಿ ಬಸ್ ಹತ್ತಿ ಶನಿವಾರ ಮುಂಜಾನೆ 7ರ ಸುಮಾರಿಗೆ ಹುಬ್ಬಳ್ಳಿಗೆ ತಲುಪಿದೆವು.
ಇವು ಆತಂಕದ ದಿನಗಳು, ಕ್ಷಣಗಳು ಎನ್ನುವುದಕ್ಕಿಂತ ಬದುಕಿಗೆ ಹೊಸ ಅನುಭವ ನೀಡಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಸಮಯದಲ್ಲಿ ಕುಡಿಯಲು ನೀರಿಲ್ಲದೆ ಜನತೆ ಒದ್ದಾಡುತ್ತಿದ್ದಾಗ, ಯಾರೋ ಮೂರ್ನಾಲ್ಕು ಪಡ್ಡ ಹುಡುಗರ ತಂಡವೊಂದು ಒಂದು ಲೀ. ನೀರಿನ ಬಾಟಲ್, ಬಿಸ್ಕಟನ್ನು ತಂದು ಹತ್ತು ಪಟ್ಟು ಹೆಚ್ಚಳಕ್ಕೆ ಮಾರಾಟ ಮಾಡುತ್ತಿದ್ದರು. ಸಂದರ್ಭಲ್ಲಿ ಅವರ ಕಣ್ಣಲ್ಲಿ ಮಾನವೀಯತೆ ಕಾಣಬೇಕೋ... ವ್ಯಾಪಾರೀ ಮನೋಭಾವನೆ ನೋಡಬೇಕೋ... ಜೀವ ಹೋಗುವ ಪರಿಸ್ಥಿತಿಯನ್ನು ಸಹ ತಮ್ಮ ಲಾಭಕ್ಕಾಗಿ ಹೇಗೆ ಸದುಪಯೋಗ ಮಾಡಿಕೊಳ್ಳುತ್ತಿದ್ದಾರಲ್ಲ ಎಂದು ಅಸಹ್ಯ ಪಟ್ಟುಕೊಳ್ಳಬೇಕೋ... ಅಥವಾ ಇದು ಅನಿವಾರ್ಯತೆಯ ಒಂದು ಮುಖವೇ ಎಂದುಕೊಳ್ಳಬೇಕೋ ತಿಳಿಯಲಿಲ್ಲ. ಒಂದು ಲೀ. ನೀರಿನ ಬಾಟಲಿಗೆ 100 ರೂ. ಪಡೆಯುತ್ತಿದ್ದರೆ, 5 ರೂ. ಬಿಸ್ಕಿಟ್ ಪ್ಯಾಕೆಟ್ಗೆ 50 ರೂ. ಪಡೆಯುತ್ತಿದ್ದರು. ಅನ್ನ-ನೀರು ಇಲ್ಲದ ಜನತೆ ಹಣವನ್ನು ಲೆಕ್ಕಿಸದೆ, ಹೇಳಿದಷ್ಟು ಹಣ ನೀಡಿ ಅದನ್ನು ಖರೀದಿಸಿ ಮಂದಹಾಸ ಬೀರುತ್ತಿದ್ದರು. ಪರಿಸ್ಥಿತಿ ಎಷ್ಟೊಂದು ಕಠೋರವಾಗಿರುತ್ತದೆ ಎನ್ನುವುದು ಅರಿವಾಗಿತ್ತು. ನಾವು ಅನುಭವಿಸಿದ್ದು ಶೇ. 5 ರಷ್ಟು ಮಾತ್ರ, ಉಳಿದವರಿಗೆ ಹೋಲಿಸಿದರೆ....!
------
ಸೈದಾಪೇಟ್ದಿಂದ ಸೊಂಟದಷ್ಟು ನೀರಿನಿಂದ ಹಾದು ಬರುವಾಗ ಎಲ್ಲಿ ತೆರೆದ ಮ್ಯಾನ್ಹೋಲ್ನಲ್ಲಿ ಬಿದ್ದು ಅಲ್ಲಿಯೇ ಜಲಸಮಾಧಿಯಾಗುತ್ತೇವೆಯೋ ಎಂದು ಭಯ ಆವರಿಸಿತ್ತು. ಹಾಗೆ ಎರಡು ಕಿ.ಮೀ. ನಡೆದು ಬರುವಾಗ ಆ ಮೂರು ದಿನ ಏನೇನು ನಡೆದಿತ್ತು ಎನ್ನುವುದು ಒಂದೊಂದಾಗಿ ನಿಧಾನವಾಗಿ ಅರ್ಥವಾಗುತ್ತ ಹೋಗಿತ್ತು. ನಾವು ಮನೆಯಲ್ಲಿ ಸಿಲುಕಿದ್ದಾಗ ನೀರಿನ ಪ್ರವಾಹ ಏರುತ್ತಿದೆ ಎನ್ನುವ ಆತಂಕವಷ್ಟೇ ಕಾಡುತ್ತಿತ್ತು. ಆದರೆ, ಏನೇನು ನಡೆದಿದೆ ಎನ್ನುವ ಸಾಕ್ಷಾತ್ ದರ್ಶನ ಎರಡು ಕಿ.ಮೀ. ನಡಿಗೆಯಲ್ಲಿ ತಿಳಿದು ಹೋಗಿತ್ತು. ಕಿರಾಣಿ ಅಂಗಡಿಗಳಲ್ಲಿದ್ದ ದಿನಸಿ ವಸ್ತುಗಳಾದ ಅಕ್ಕಿ, ಬೇಳೆ-ಕಾಳು, ಸಕ್ಕರೆ ಎಲ್ಲ ಪದಾರ್ಥಗಳು ರಸ್ತೆಯ ಅಕ್ಕ-ಪಕ್ಕ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ವೀಟ್ ಅಂಗಡಿಗಳೆಲ್ಲ ನೀರಿಗೆ ಆಹುತಿಯಾಗಿದ್ದವು. ಕೆಲವು ಮನೆಗಳಂತೂ ಸಂಪೂರ್ಣವಾಗಿ ಕುಸಿದು ಹೋಗಿತ್ತು. ಇನ್ನು ಕೆಲವು ಮನೆಯ ನಿವಾಸಿಗಳು ನೀರನ್ನು ಹೊರ ಹಾಕುವ ಸಾಹಸ ಮಾಡುತ್ತಿದ್ದರು. ಆಸ್ಪತ್ರೆಯ ಒಳಗೂ ನೀರು ನುಗ್ಗಿ, ರೋಗಿಗಳಿಗೆ ಚಿಕಿತ್ಸೆ ನೀಡದಂತ ಪರಿಸ್ಥಿತಿ ನಿಮರ್ಾಣವಾಗಿತ್ತು. ಹಾಲಿಗಾಗಿ ಅಂಗಡಿ ಮುಂದೆ ಸಾಲುಗಟ್ಟಿ ನಿಂತು, ಅರ್ಧ ಲೀ. ಹಾಲಿಗೆ 100 ರೂ. ನೀಡುತ್ತಿದ್ದರು. ಪೆಟ್ರೋಲ್ ಬಂಕ್ಗಳ ಮುಂದಂತೂ ವಾಹನದ ಸಂತೆಯೇ ನಡೆದಿತ್ತು. ಬಸ್ ನಿಲ್ದಾಣವಂತೂ ಕಿಕ್ಕಿರಿದು ತುಂಬಿತ್ತು. ಚೆನೈನಿಂದ ಬೆಂಗಳೂರಿಗೆ ಹಾಗೂ ಇತರೆಡೆ ಸಂಚರಿಸುವ ಎಲ್ಲ ಬಸ್ಗಳು ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ಇವೆಲ್ಲ ಚಿತ್ರಣ ಚೆನೈ ನಗರವನ್ನು ಅನಾಥವನ್ನಾಗಿಸಿತ್ತು. ಸತ್ತು ಕಿತ್ತ ಕಳೆಬರದಂತೆ ಕಂಡು ಬಂದಿತ್ತು.
-------- 

ಗುರುವಾರ, ನವೆಂಬರ್ 26, 2015

ಕಲ್ಪನೆಯ ಮೂಸೆಯಲ್ಲೊಂದು 'ಚರಮ ಗೀತೆ...!!'
'ಅದೊಂದು ಭೀಕರ ಕ್ಷಣ... ಎದೆ ಝಲ್ ಎನ್ನುವ ಸನ್ನಿವೇಶ...!!
ಮಧ್ಯಾಹ್ನ ಸ್ನೇಹಿತರ ಜೊತೆ ಊಟ ಮಾಡಿ ಹರಟೆ ಹೊಡೆಯುತ್ತಿದ್ದೆ. ಇದ್ದಕ್ಕಿದ್ದಂತೆ ತಲೆ ಸುತ್ತಿದ ಹಾಗಾಯಿತು. ತಲೆ ಹಿಡಿದುಕೊಂಡು ಅಲ್ಲಿಯೇ ಒರಗಿದೆ. ಏನಾಗುತ್ತಿದೆ ಎಂದು ತೋಚುತ್ತಿರಲಿಲ್ಲ. ನಿಧಾನವಾಗಿ ಕೈ-ಕಾಲುಗಳು ತಣ್ಣಗಾಗುತ್ತ ಹೋದವು....!
ಪಕ್ಕದಲ್ಲಿದ್ದ ಸ್ನೇಹಿತರು ಗರ ಬಡಿದಂತಾಗಿದ್ದರು. ಏನು ಮಾಡಬೇಕೆಂದು ತೋಚದೆ, ಕಂಗಾಲಾಗಿ ಗಾಳಿ ಹಾಕಿ ಉಪಚರಿಸಲು ಶುರುವಿಟ್ಟುಕೊಂಡಿದ್ದರು. ನನ್ನ ಕಣ್ಣಾಲಿಗಳು ಆಚೀಚೆ ಹೊರಾಳಾಡುತ್ತಿತ್ತು. ಎದೆಯಲ್ಲಿ ಉಸಿರು ಬಿಗಿಯಾಗಿ ಹಿಡಿದಂತ ಅನುಭವ. ಅಷ್ಟರಲ್ಲಾಗಲೇ, ಸ್ನೇಹಿತ ಆಸ್ಪತ್ರೆಗೆ ಕರೆದಕೊಂಡು ಹೋಗುವ ವ್ಯವಸ್ಥೆ ಮಾಡಿದ್ದ.
ಆಸ್ಪತ್ರೆಯಲ್ಲಿ....
ತುರ್ತು ಚಿಕಿತ್ಸಾ ಘಟಕದಲ್ಲಿ ನನ್ನನ್ನು ದಾಖಲಿಸಿದ್ದಾರೆ. ಅತ್ಯಾಧುನಿಕ ಉಪಕರಣಗಳ ನಡುವೆ    ನಾನು ನಿಸ್ತೇಜನಾಗಿ ಬಿದ್ದುಕೊಂಡಿದ್ದೇನೆ. ಪ್ರಾಥಮಿಕ ಚಿಕಿತ್ಸೆ ನೀಡಲು ಬಂದ ವೈದ್ಯರು ನಾಡಿ ಪರೀಕ್ಷೆ ಮಾಡಿದರು. ಕ್ಷಣ ಕ್ಷಣಕ್ಕೂ ನಾಡಿ ಬಡಿತ ಕಡಿಮೆಯಾಗುತ್ತಿರುವುದರಿಂದ ವೈದ್ಯರು ಸ್ಪಷ್ಟ ನಿಧರ್ಾರಕ್ಕೆ ಬಂದಿದ್ದರು. ಕಿವಿಗೆ ಹಾಕಿಕೊಂಡ ಸ್ಟೆತಸ್ಕೋಪನ್ನು ಕೆಳಗಿಳಿಸಿ, ದಾದಿಗೆ ಸನ್ನೆ ಮಾಡಿ ಹೊರ ನಡೆದರು.
ಅಲ್ಲಿದ್ದ ದಾದಿ ಆದೃ ಮುಖದಿಂದ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಳು. ಕೆಲವೇ ಕ್ಷಣದಲ್ಲಿ ಈತನ ಪ್ರಾಣ ಪಕ್ಷಿ ಹಾರಿ ಹೋಗಲಿದೆ ಎನ್ನುವ ಅನುಕಂಪದಿಂದಲೋ ಏನೋ...? ಆ ಕ್ಷಣವೂ ಕೂಡಾ ಹತ್ತಿರವಾಗುತ್ತ ಬಂದಿತ್ತು. ಸಂಪೂರ್ಣ ದೇಹವೇ ತಣ್ಣಗಾಯಿತು. ಅರೆಗಳಿಯಲ್ಲಿ ದೊಡ್ಡದಾದ ಉಸಿರನ್ನೆಳೆದು ಬಿಟ್ಟುಬಿಟ್ಟೆ....!! ಅಷ್ಟೊತ್ತು ಸಾವು-ಬದುಕಿನ ನಡುವೆ ಹೋರಾಡಿದ ಜೀವ ಸ್ಥಬ್ದವಾಗಿ ಅಲ್ಲಿ ಮಲಗಿತ್ತು. ಇಹಲೋಕದ ಯಾತ್ರೆ ಮುಗಿಸಿ ಪರ ಲೋಕಕ್ಕೆ ಪಯಣಿಸಿತ್ತು.
ಕಣ್ಣೀರ ಕೋಡಿ.....
ನಾನು ಅಸ್ತಂಗತನಾದ ಸುದ್ದಿ ತಿಳಿಯುತ್ತಿದ್ದಂತೆ, ಅಮ್ಮ-ಪಪ್ಪ ಅಲ್ಲಿಯೇ ಕುಸಿದು ಬಿದ್ದಿದ್ದರು. ಸಂದರ್ಭದ ಸ್ಥಿತಿಯನ್ನು ಅರಿತ ನೆರಹೊರೆಯವರು ವೈದ್ಯರನ್ನು ಕರೆಸಿ, ಅವರಿಬ್ಬರನ್ನೂ ಪ್ರಜ್ಞಾಹೀನರನ್ನಾಗಿಸಿದರು. ಮೂರ್ನಾಲ್ಕು ಗಂಟೆ ಬಿಟ್ಟು, ನನ್ನ ಮೃತದೇಹ ಆಸ್ಪತ್ರೆಯಿಂದ ಹೊರಬಿದ್ದಿತ್ತು. ಅದಾಗಲೇ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳ ಪೂರ್ವ ತಯಾರಿ ಮನೆಯಲ್ಲಿ ಭರದಿಂದ ಸಾಗಿತ್ತು.
ಅಂತೂ ನಾನು ಆಡಿ-ನಲಿದು-ದೊಡ್ಡವನಾದ ಮನೆಗೆ ನನ್ನ ನಿಸ್ತೇಜ ದೇಹವನ್ನು ತಂದರು. ನಾನು ಮನೆ ಬಿಟ್ಟು ಐದಾರು ತಿಂಗಳಾಗಿತ್ತು. ಅಂದು ಜೀವಂತಿಕೆಯಿಂದ ಹೋದ ನಾನು, ಇಂದು ಜೀವಂತಿಕೆ ಕಳೆದುಕೊಂಡು ಬಂದಿದ್ದೇನೆ. ಮೃತದೇಹವನ್ನು ಮನೆಯ ಪಡಸಾಲೆಯಲ್ಲಿಯೇ ಮಲಗಿಸಿದರು. ಮನೆಯಲ್ಲಿ ದಿನದ ಹೆಚ್ಚಿಗೆ ಸಮಯ ಕಳೆಯುತ್ತಿದ್ದ ನನ್ನ ಪ್ರೀತಿಯ ಕೊಠಡಿಯೊಳಗೆ ನನ್ನ ದೇಹವನ್ನು ಕೊಂಡೊಯ್ಯುತ್ತಾರೆ ಎಂದುಕೊಂಡಿದ್ದೆ. ಇಲ್ಲ, ಪಡಸಾಲೆಯಲ್ಲಿಯೇ ಇಟ್ಟು ತಲೆಯ ಪಕ್ಕ ಊದಬತ್ತಿ ಹಚ್ಚಿದ್ದರು. ಮೃತ ದೇಹ ಸೆಟೆದುಕೊಳ್ಳಬಾರದು ಎಂದು, ನೋಡಲು ಬಂದವರು ತಂದ ಎಣ್ಣೆಯನ್ನು ಕೈ-ಕಾಲುಗಳಿಗೆ ಗಟ್ಟಿಯಾಗಿ ತಿಕ್ಕುತ್ತಿದ್ದರು.
ಸಂಬಂಧಿಕರ, ಸ್ನೇಹಿತರ, ಆಪ್ತೇಷ್ಟರ ದುಃಖ ಮುಗಿಲು ಮುಟ್ಟುತ್ತಿತ್ತು. ಅತ್ತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಪ್ಪ-ಅಮ್ಮ ನಿಧಾನವಾಗಿ ಲೌಕಿಕ ಜಗತ್ತಿಗೆ ಬರುತ್ತಿದ್ದರು. ಹೆತ್ತವರ ನೋವು, ಕರುಳ ಕುಡಿ ಕಳೆದುಕೊಂಡ ಯಾತನೆ ಅವರಿಬ್ಬರ ಎದೆಯ ಕಟ್ಟೆಯನ್ನು ಒಡೆಸಿತ್ತು. ಅವರ ಅರಚಾಟ, ಕಿರುಚಾಟ, ಭೋರ್ಗರೆವ ಕಣ್ಣೀರು ಅಲ್ಲಿದ್ದವರನ್ನು ಇನ್ನಷ್ಟು ನೋವಿನ ಅಳುವಿನ ಕಡಲಿಗೆ ನೂಕುತ್ತಿತ್ತು. ಒಡ ಹುಟ್ಟಿದ ಜೀವಗಳು ಬದುಕು ನಾಶವಾದಂತೆ ನನ್ನ ಮೃತ ದೇಹವನ್ನು ಹಿಡಿದುಕೊಂಡು ಕಣ್ಣೀರಾಗುತ್ತಿತ್ತು. ನಮಗಿನ್ಯಾರು ದಿಕ್ಕು, ನಮ್ಮ ಸರ್ವಸ್ವವೇ ಹೋಯಿತಲ್ಲ ಎಂದು ಮನೆ ಮಂದಿಯೆಲ್ಲ ಬಿದ್ದುಬಿದ್ದು ಅಳುತ್ತಿದ್ದರು.
ಕೊನೆಗೂ ಆ ಅಂತಿಮ ಕ್ಷನ ಬಂದೇ ಬಿಟ್ಟಿತು. ನನ್ನ ದೇಹಕ್ಕೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಿದರು. ಚಟ್ಟದ ಮೇಲೆ ಮಲಗಿಸಿ, ಹೂಮಾಲೆ ಹಾಕಿ ಅಂತಿಮ ನಮನ ಸಲ್ಲಿಸಿದರು. ಕೆಲವೇ ನಿಮಿಷದಲ್ಲಿ ಚಟ್ಟಕ್ಕೆ ಹೆಗಲು ಕೊಟ್ಟು ಅಂತ್ಯಸಂಸ್ಕಾರ ಸ್ಥಳಕ್ಕೆ ನನ್ನ ದೇಹನ್ನು ತಂದರು.
ರಾತ್ರಿ 11ರ ಸಮಯ. ಭೊರ್ಗರೆವ ಕಡಲಿನ ಶಬ್ದ ಅಲ್ಲಿದ್ದವರಿಗೆ ಆರ್ತನಾದದಂತೆ ಕೇಳುತ್ತಿತ್ತು. ನಿಶ್ಯಬ್ದಲ್ಲಿ ಸುಯ್ಯಂಗುಟ್ಟುವ ಕುಳಿರ್ಗಾಳಿಯು ಎದೆ ಬಡಿತವನ್ನು ಹೆಚ್ಚಿಸುತ್ತಿತ್ತು. ಮೊದಲೇ ಸಿದ್ಧಪಡಿಸಿದ ಕಟ್ಟಿಗೆ ರಾಶಿಯ ಮೇಲೆ ಮೃತ ದೇಹವನ್ನು ಮಲಗಿಸಿದು. ಅಂತಿಮ ನಮನ ಸಲ್ಲಿಸಲು ಹಾಕಿದ್ದ ಹೂ-ಮಾಲೆಗಳೆಲ್ಲವನ್ನು ಒಂದೊಂದಾಗಿ ತೆಗೆದರು. ತೊಡಿಸಿದ ಬಟ್ಟೆಯನ್ನೂ ಸಹ ತೆಗೆದು ದೇಹವನ್ನು ವಿವಸ್ತ್ರಗೊಳಿಸಿದರು.
ಹತ್ತಿರರದ ಬಂಧುವೊಬ್ಬರು(?) ಗಡಿಗೆ ಹಿಡಿದು ಮೂರು ಸುತ್ತು ಹಾಕಿ, ಹಿಮ್ಮುಖದಲ್ಲಿ ಅದನ್ನು ಅಲ್ಲಿಯೇ ಒಡೆದು ಹಾಕಿದರು. ಅಲ್ಲಿದ್ದ ಬಂಧು-ಮಿತ್ರರಿಗೆ ಇನ್ನು ಮುಂದೆ ನಾನು ಕೇವಲ ನೆನಪಷ್ಟೆ ಅನ್ನುವ ಸತ್ಯ ಸಾಕ್ಷಾತ್ಕಾರದ ಕಹಿ ಅನುಭವವಾದಂತಾಗಿ, ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಕೊನೆಗೂ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದರು. ನನ್ನ ದೇಹ ನಿಧಾನವಾಗಿ ಬೆಂಕಿಯ ಕೆನ್ನಾಲಿಗೆ ಬೆಂದು ಬೂದಿಯಾಗುತ್ತಿತ್ತು. ಮೂರ್ನಾಲ್ಕು ಗಂಟೆಯ ತರವಾಯ ಅಡಿ ಎತ್ತರಕ್ಕೆ ಹಾಕಿದ್ದ ಕಟ್ಟಿಗೆ ರಾಶಿ, ಆಳೆತ್ತರಕ್ಕೆ ವ್ಯಾಪಿಸುತ್ತಿದ್ದ ಬೆಂಕಿಯ ಅಬ್ಬರಕ್ಕೆ ಸುಟ್ಟು ಬೂದಿಯಾಗಿ ಹೋಗಿತ್ತು. ನನ್ನ ದೇಹವೂ ಕೂಡಾ ಆ ಕಟ್ಟಿಗೆಯ ಬೂದಿಯೊಳಗೆ ಬೆರೆತು ಬಿಟ್ಟಿತ್ತು. ಪಂಚ ಭೂತಗಳಲ್ಲಿ ನನ್ನ ದೇಹ ಒಂದಾಗಿ ಹೋಯಿತು.
'ಥೂ..... ಪಾಪಿ.. ಮುಂಡೇದು, ಹೊತ್ತು ನೆತ್ತಿಗೇರಿದರೂ ಇನ್ನೂ ಹಾಸಿಗೆಯ ಮೇಲೆಯೇ ಹೊರಳಾಡ್ತೀಯಾ' ಎಂದು ಅಮ್ಮ ತಣ್ಣನೆಯ ನೀರನ್ನು ತಂದು ಮುಖಕ್ಕೆ ಸಿಂಪಡಿಸಿದಳು. ಹುಸಿಕೋಪದ ಅಮ್ಮನ ಮುಖ ನೋಡಿ, 'ಅಬ್ಬಾ...!! ಬದುಕಿದ್ದೇನೆ. ಇನ್ನೂ ಸತ್ತಿಲ್ಲ' ಎಂದು ಕೊಂಡು ಮನದಲ್ಲಿಯೇ ನಸುನಕ್ಕೆ.......!!
-ನಾಗರಾಜ್ ಬಿ.ಎನ್. 
ಗೆದ್ದೇ ಗೆಲ್ಲುವೆ ಒಂದು ದಿನ........ 
ಎಲ್ಲಿಯವರೆಗೆ ಅಚಲ ಆತ್ಮವಿಶ್ವಾಸ ಇರುತ್ತದೋ ಅಲ್ಲಿಯವರೆಗೆ ಸೋಲು ಎನ್ನುವುದೇ ಇಲ್ಲ. ಸೋಲು ಎನ್ನುವುದು ನಮ್ಮ ಶತ್ರು ಆಗಬೇಕು.... ಅದರ ಜೊತೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳಬಾರದು. ಅದಕ್ಕೆ ಒಂದು ಬಾರಿ ತಲೆಬಾಗಿದೆವೆಂದರೆ, ಅನಿವಾರ್ಯತೆಯ ಸಂದರ್ಭಗಳು ಮೇಲಿಂದ ಮೇಲೆ ಆಗಮಿಸುತ್ತಲೇ ಇರುತ್ತವೆ. ಗೆದ್ದೆ ಗೆಲ್ಲುವೆ ಎನ್ನುವ ಅಚಲ ಆತ್ಮ ವಿಶ್ವಾಸ ಮೈಗೂಡಿಸಿಕೊಳ್ಳಬೇಕು. ಗೆಲುವಿನ ಮಾರ್ಗದ ಕುರಿತು ಸಕಾರಾತ್ಮಕವಾಗಿ ಚಿಂತಿಸುತ್ತಿರಬೇಕು. ಆ ನಿಟ್ಟಿನಲ್ಲಿ ಸದಾ ಕಾಯರ್ೋನ್ಮುಖವಾಗಬೇಕು. ಪರಿಶ್ರಮ, ಪ್ರಾಮಾಣಿಕ ಹಾಗೂ ನಿಸ್ವಾರ್ಥ ಹೃದಯಕ್ಕೆ ಎಂದೂ ಸೋಲೆಂಬುದೇ ಇಲ್ಲ......!! ಆಗ ಗೆಲುವು ನಮ್ಮನ್ನು ಬಿಗಿದಪ್ಪಿಕೊಳ್ಳುತ್ತದೆ.
ಪುಳಕಿತನಾದೆ ನಿಮ್ಮೀ ಪ್ರೀತಿಗೆ.....
ಎಂದೂ ನಿರೀಕ್ಷಿಸದ ಕಲ್ಪನೆಗೂ ಮೀರಿದ ಕ್ಷಣ. ಶಬ್ದಗಳ ಪದಪುಂಜಗಳಲಿ ಕಟ್ಟಿ ಹಾಕಲಾಗದ ಸನ್ನವೇಶ. ಮನಸ್ಸು ಆದೃಗೊಳಿಸಿದ ಗಳಿಗೆ. ಹಾಗೆಯೇ... ನನ್ನನ್ನು ನಾನೇ ಪ್ರಶ್ನಿಸಿಕೊಂಡ ಸಮಯವೂ ಅದಾಗಿತ್ತು.
ಸಂದರ್ಭ: ಈ ಹುಚ್ಚು ಹುಡುಗನ ಜನ್ಮದಿನ....!
ಜನ್ಮದಿನ ಎಂದರೆ ಅಷ್ಟಕ್ಕಷ್ಟೇ...! ಯಾವತ್ತೂ ಅದಕ್ಕೆ ಬೆಲೆ ನೀಡಿದವನೇ ಅಲ್ಲ. ಬದಲಾಗಿ, ಈ ಜನ್ಮದಿನದ ನೆನಪಿಗೋಸ್ಕರ ಕಳೆದ ಐದು ವರ್ಷಗಳಿಂದ ಒಂದು ಅನಾಥ ಮಗುವಿನ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದೆ. ಇದಕ್ಕೆ ಸ್ಫೂರ್ತಿಯ ಸೆಲೆಯಾಗಿ, ಬೆನ್ನೆಲುಬಾಗಿ ನಿಂತವಳು ನನ್ನಾತ್ಮ ಸಹೋದರಿ...! ಪ್ರತಿ ಬಾರಿ ಜನ್ಮ ದಿನದಂದು ಆ ಪುಟ್ಟ ಮಗುವಿದ್ದಲ್ಲಿಗೆ ಹೋಗಿ, ಕುಶಲ ಕ್ಷೇಮ ವಿಚಾರಿಸಿ, ಕಣ್ತುಂಬಿಸಿಕೊಂಡು, ಅರಿವಿಲ್ಲದೆ ಕಣ್ಣಂಚನ್ನು ಒದ್ದೆ ಮಾಡಿಕೊಂಡು ಬರುತ್ತಿದ್ದೆ. ಆದರೆ, ಈ ವರ್ಷ ಆ ಭಾಗ್ಯದಿಂದ ವಂಚಿತ. ಕಾಲಚಕ್ರದ ಉರುಳಾಟದಲ್ಲಿ ಕೆಲವು ನೈಜ್ಯತೆ ನೆನಪಾಗಷ್ಟೇ ಇರುತ್ತವೆ.
ಹೊಸ ಮನೆಯ ಮೂಲೆಯೊಂದರಲ್ಲಿ ಮೊಬೈಲ್ನ್ನು ಸೈಲೆಂಟ್ ಇಟ್ಟು, ಆ ಪುಟ್ಟ ಮಗುವಿನ ನೆನಪಲ್ಲಿಯೇ ನಿದ್ದೆ ಹೋಗಿದ್ದೆ. ನಾ ಮಲಗಿದ್ದರೂ ನನ್ನ ಮೊಬೈಲ್ ಮಲಗಿಲ್ಲ. ರಾತ್ರಿಯಿಡೀ ಸ್ನೇಹಿತರ, ಹಿತೈಷಿಗಳ ಸಂದೇಶ ಸ್ವೀಕರಿಸುವುದರಲ್ಲಿಯೇ ಅದು ನಿರತವಾಗಿತ್ತು. ಮುಂಜಾನೆದ್ದು ನೋಡಿದಾಗ ಇನ್-ಬಾಕ್ಸ್ನಲ್ಲಿ 47 ಸಂದೇಶಗಳು...! 21 ಮಿಸ್ ಕಾಲ್ಗಳು...! 
ಸುಮ್ಮನೆ ನಸುನಕ್ಕಿ ನನ್ನಷ್ಟಕ್ಕೆ ನಾನಿದ್ದೆ. ಪ್ರಾಣ ಸ್ನೇಹಿತ ಡಿವಿ ನನಗೆ ಒಂದಿನಿತೂ ಸಂದೇಹ ಬರದ ರೀತಿಯಲ್ಲಿ, ಹತ್ತಿರವಿದ್ದುಕೊಂಡೇ ಜನ್ಮದಿನಾಚರಣೆಯ ಎಲ್ಲ ತಯಾರಿಯನ್ನು ನಡೆಸಿದ್ದರು. ಲಗು ಬಗೆಯಲ್ಲಿ ಸ್ನಾನ ಮಾಡಲು ಹೇಳಿ, ಸಹದ್ಯೋಗಿ ಬಸವರಾಜ ಬಂಕಾಪುರ ಅವರೊಂದಿಗೆ ಎಲ್ಲಿಗೋ ಹೋದವರು, ಬರುವಾಗ ಕೇಕ್(ಪ್ಯೂವರ್ ವೆಜ್) ಮತ್ತು ಸ್ನ್ಯಾಕ್ಸ್ ಖರೀದಿಸಿ ತಂದಿದ್ದರು. ಅಷ್ಟರಲ್ಲಾಗಲೇ, ನನ್ನೆಲ್ಲ ವೃತ್ತಿ ಬಂಧುಗಳು ಒಬ್ಬರ ಹಿಂದೊಬ್ಬರಂತೆ ಸಾಲು ಸಾಲಾಗಿ ನಮ್ಮ ಹೊಸ ಮನೆಗೆ ಆಗಮಿಸುತ್ತಿದ್ದರು. ನೋಡು ನೋಡುತ್ತಿದ್ದಂತೆ ಇಬ್ಬರಿದ್ದದ್ದು ನಾಲ್ಕಾಗಿ, ನಾಲ್ಕಿದ್ದದ್ದು ಎಂಟಾಗಿ ಕೊನೆಗೆ ಹದಿನಾರರ ಸಂಖ್ಯೆಗೆ ಬಂದು ತಲುಪಿತ್ತು.
ಎದುರಗಡೆ ಕೇಕ್... ಅದರ ಮೇಲೊಂದು ಮಿಂಚಿನ ಸುರಬತ್ತಿ...! ಕೈಯ್ಯಲ್ಲಿ ಬೆಂಕಿ ಪೊಟ್ಟಣ ಕೊಟ್ಟ ಡಿವಿ, ಸುರಬತ್ತಿ ಹಚ್ಚಲು ಹೇಳಿದರು. ಇವೆಲ್ಲವೂ ನನಗೆ ಹೊಸ ಅನುಭವ. ಒಂದು ಬಾರಿ ಗೀರಿದ ಬೆಂಕಿ ಕಡ್ಡಿ, ಹೇಗೆ ಬೆಂಕಿಯಾಯಿತೋ ಹಾಗೆಯೇ ನಂದಿ ಹೋಯಿತು.. ಇನ್ನೊಂದು ಗೀರಿ... ತುಸು ನಿಧಾನವಾಗಿ ಸುರಬತ್ತಿಗೆ ಬೆಂಕಿ ಹೊತ್ತಿಸಿದೆ. ಸುರ್... ಎಂದು ತನ್ನ ಚಿತ್ತಾರ ಬಿಡಿಸಿ, ಅಲ್ಲೆ ಮಾಯವಾಯಿತು. ಅಷ್ಟರಲ್ಲಾಗಲೇ ನನ್ನ ಬಳಗದವರೆಲ್ಲ ಜೋರಾಗಿ ಹ್ಯಾಪಿ ಬರ್ಥಡೇ ಎಂದು ಶುಭ ಕೋರುತ್ತ, ಕೇಕ್ ಕಟ್ ಮಾಡಲು ಹೇಳಿದರು. ಕೇಕ್ ಸಂಸ್ಕೃತಿಯ ವಿರೋಧಿಯಾದ ನಾನು, ಪ್ರೀತಿಗೆ ಮಂಡಿಯೂರಿ ಶಿರಬಾಗಿ ಬಿಟ್ಟಿದ್ದೆ. ಅಂತೂ ಕೇಕ್ ಕಟ್ ಮಾಡಿ, ಸ್ನೇಹಿತ ಬಸವರಾಜ ಹೂಗಾರ(ಉದಯವಾಣಿ) ಅವರ ಅಕ್ಕನ ಪುಟ್ಟ ಮಗಳಿಗೆ ಕೇಕ್ ತಿನ್ನಿಸಿ, ಜನ್ಮದಿನ ಆಚರಿಸಿಕೊಂಡೆ. ನಂತರ ಗುರು ಸರ್, ನವೀ, ಜೋಶಿ ಸರ್, ಸಿದ್ದೇಶ, ಗುರು ಸರ್(ಫೋಟೋಗ್ರಾಫರ್), ಮಂಜಣ್ಣ, ವಿವೇಕ, ಬಾಬು, ಕಿಶನ್ ಸರ್, ವಿಕ್ರಮ, ಶಿವು, ಬಸು ಹೀಗೆ ಎಲ್ಲರೂ ಕೇಕ್ ಬಾಯಿಗೆ ತುಂಬಿ ಉಸಿರಾಡಲಾಗದಂತೆ ಮಾಡಿ ಬಿಟ್ಟರು...!
ಸಂದರ್ಭದಲ್ಲಿ ನನ್ನ ಒಳ ಮನಸ್ಸು ಸ್ಥಬ್ಧವಾಗಿ, ಅವರ ಪ್ರೀತಿಯ ಕಡಲಲ್ಲಿ ತೇಲಾಡುತ್ತಿತ್ತು. ಭಾವುಕನಾಗಿ ನನ್ನಷ್ಟಕ್ಕೇ ನಾನೇ ಮಾತನಾಡಿಕೊಳ್ಳುತ್ತಿದ್ದೆ. ಇಷ್ಟೊಂದು ಆಪ್ತವಾಗಿ ಒಂದು ಮಗುವಿನಂತೆ ಎಲ್ಲರೂ ಒಂದೆಡೆ ಸೇರಿಜನ್ಮದಿನ ಆಚರಿಸಿದರಲ್ಲಾ... ಇದಕ್ಕೆ ನಾನು ಅರ್ಹನೇ ಎಂದು..? ಖಂಡಿತ ಗೊತ್ತಿಲ್ಲ.... ಆದರೆ, ನನ್ನವರಾದ ಅವರೆಲ್ಲರ ಪ್ರೀತಿಗೆ ನಾ ಸದಾ ಋಣಿ ಎಂದಷ್ಟೇ ಹೇಳಬಲ್ಲೆ...!
ನೂರಾರು ಸ್ನೇಹಿತರು ಫೇಸ್-ಬುಕ್ ಮತ್ತು ವಾಟ್ಸ್-ಅಪ್ ನಲ್ಲಿ ಶುಭಾಶಯದ ಸುರಿಮಳೆಯನ್ನೇ ಸುರಿಸಿದ್ದಾರೆ. ಪರಿಚಿತರು, ಪರಿಚಿತರಲ್ಲದವರೂ, ಹೈಸ್ಕೂಲ್ ಸ್ನೇಹಿತರು, ಕಾಲೇಜ್ ಸ್ನೇಹಿತರು, ಬಂಧುಗಳು, ಸಹದ್ಯೋಗಿಗಳು, ಗುರುಗಳು, ಹಿತೈಷಿಗಳು, ಮಾರ್ಗದರ್ಶಕರು ಹೀಗೆ ಬಹುತೇಕರು ಜನ್ಮದಿನಕ್ಕೆ ಶುಭಕೋರಿದ್ದಾರೆ. ಅವರೆಲ್ಲರಿಗೂ ನನ್ನ ತುಂಬು ಹೃದಯದ ವಂದನೆಗಳು
-ನಾಗರಾಜ್ ಬಿ.ಎನ್. 
'ಅಬ್ಬಲ್ಲಿ ದಂಡೆ' ಮುಡಿಗೇರಿಸುವಾಸೆ, ಪ್ಲೀಸ್............ 

ಮೊಗ್ಗು ಮಲ್ಲಿಗೆ, 
ಒಪ್ಪಿಕೊಳ್ಳುತ್ತೇನೆ ನೀ ನನ್ನ ಬೆಸ್ಟ್ ಫ್ರೆಂಡ್ ಎಂದು. ಆದರೆ, ಅವತ್ತು 'ನಿನಗಾಗಿ' ಸಿನೆಮಾ ನೋಡಿದಾಗಿನಿಂದ ಮನಸ್ಸಲ್ಲಿ ಏನೋ ಗುಜುಗುಜು ಸದ್ದು ಕೇಳಿಸಲಾರಂಭಿಸಿತು. ನೋಡು ಸಿನೇಮಾದುದ್ದಕ್ಕೂ ನಾ ವಿಜಯ ರಾಘವೇಂದ್ರ, ನೀ ರಾಧಿಕಾ ಅನ್ನಿಸಿದ್ದಂತೂ ನೂರಕ್ಕೆ ನೂರು ಸತ್ಯ. ಅವತ್ತೇ ನನಗೆ ನಾ ಅರ್ಥವಾಗಿದ್ದು. ಅಲ್ಲಾ ಕಣೇ, ನೀ ನನ್ನ ಮನಸಿನ ರತಿಯಾಗಬಾರದು ಎಂದು ಕಾನೂನು ಏನಾದರೂ ಇದೆಯಾ? ನಮ್ಮಜ್ಜಿ ಆಣೆಯಾಗಲೂ ಇಲ್ಲ ನನ್ನರಗಿಣಿ.
ಆದರೆ, ಆ 'ಚಿನ್ನಾರಿ ಮುತ್ತ'ನ ತರಹ ನನಗೂ ಕಾಡಿದ್ದೂ ಅದೇ...! 'ನಿನ್ನ ಬಳಿ ನನ್ನ ಪ್ರೀತಿ ನಿವೇದಿಸಿಕೊಂಡು, ಸ್ನೇಹಕ್ಕೂ ಬ್ರೇಕ್ ಬಿದ್ದು ಬಿಟ್ಟರೆ.....?' ಅಯ್ಯಯ್ಯೋ ದಮ್ಮಯ್ಯ ಅಂತೀನಿ ಕಣೇ... ಒಂದು ಕ್ಷಣಾನೂ ನಿನ್ನ ಬಿಟ್ಟಿರೋಕೆ ಆಗದೆ ಒದ್ದಾಡ್ತಾ ಇರ್ತೀನಿ, ಅನುಕ್ಷಾ-ಕೋಯ್ಲಿ ತರಹ. ಅಂದ ಮೇಲೆ? ಇಲ್ಲ ಕಣೇ.. ಕಾಯ್ತೀನಿ. ನಿನ್ನ ಒಂದು ಕಣ್ಣಸನ್ನೆಗಾಗಿ!
ನಾನು ಸಲ್ಲುಮಿಯಾ ಅಂತೂ ಅಲ್ಲಾ. ನಾನು ನಾನೇ. ನಿನ್ನ ಅದೇ ಹಳೆಯ ಮಾಧವ. ನನ್ನ ಹೃದಯ ನುಡಿಸುವ ಮುರಳೀ ಗಾನದಲ್ಲಿ ಇರುವುದು ಒಂದೇ ಒಂದು ರಾಗ. ಅದು ಕೇವಲ ನೀನು. ನನ್ನ ಅಂತರಂಗದ ಆಗಸದಲ್ಲಿ ಸಾವಿರಾರು ನಕ್ಷತ್ರಗಳಿಲ್ಲ. ಅಲ್ಲಿರುವುದು ಚಂದ್ರನ ಪ್ರತಿಬಿಂಬದಂತಿರುವ ನೀನು ಮಾತ್ರ. ಬೆಳದಿಂಗಳ ತಂಪಲ್ಲಿ ನಾನು ತೋಯುತ್ತಿರಬೇಕು ಎಂಬ ಆಸೆ. ಪ್ಲೀಸ್... ನನ್ನ ಕಿರು ಬೆರಳು ಹಿಡಿಯುತ್ತೀಯಾ?
ಮುಂಜಾವಿನಲ್ಲಿ ಅಮ್ಮ, 'ಸಾಕು ಮಲಗಿದ್ದು. ಏಳೋ ಸೋಂಬೇರಿ' ಎಂದಾಗ ಎದ್ದು `ಕರಾಗ್ರೆ ವಸತೇ ಲಕ್ಷ್ಮೀ' ಎನ್ನುವಾಗ ಕೈ ನೋಡಿದಾಗ ಅಲ್ಲಿ 'ಹಾಯ್..' ಅನ್ನುತ್ತಾ ನಸು ನಗೆ ಬೀರುವ ತುಂಟಿ ನೀನೇ... ಎದ್ದು ಕನ್ನಡಿ ನೋಡುತ್ತಾ ಹಲ್ಲುಜ್ಜುವಾಗ ಆ ಕನ್ನಡಿಯೊಳಗಿಂದ ಕದ್ದು ಇಣುಕುವವಳೂ ನೀನೇ... ತಿಂಡಿ ಕೊಡಲೆಂದು ಅಮ್ಮ ತಟ್ಟೆ ತಂದಿಟ್ಟಾಗ, ಹೊಳೆವ ಆ ಸ್ಟೀಲ್ ತಟ್ಟೆಯಲ್ಲೂ ನೀನೇ... ಹುಡುಗಿ, ಇಡೀ ದಿನ ನಿನ್ನದೇ ಗುಂಗಿನಲ್ಲಿ ಇರೋ ನನಗೆ ಮತ್ತೇನು ಕಾಣಲು ಸಾಧ್ಯ ಹೇಳು?
ನನ್ನ ಸೈಕಲ್ ಹಿಂದೆ ನೀ ಹಾರಿ ಕುಳಿತು 'ನೋಡೋ ನಂಗೂ ಬರತ್ತೇ ಹಾರಿ ಕೂರೋಕೆ' ಎಂದು ನೀನಂದಾಗ, ನಾ ಅಂದುಕೊಳ್ಳುತ್ತೇನೆ. 'ಜೀವನದ ಸೈಕಲ್ ತುಳಿಯುವಾಗ ಹಿಂದುಗಡೆ ನೀನಿದ್ದರೆ ಎಷ್ಟು ಚೆನ್ನ' ಅಂತಾ... ಅದೇ ಸ್ನೇಹದ ಸಲಿಗೆ, ತರಲೆ ಜೊತೆಗೆ ಮೊಗೆದಷ್ಟು ಉಕ್ಕುವ ಪ್ರೀತಿ. ಸಾಕಲ್ವಾ ನಮ್ಮ ಪಾಲಿಗೆ, ಮತ್ತೀನ್ನೇನು ಬೇಕು ಹೇಳು?
ಮುಸ್ಸಂಜೆ ಹೊತ್ತಲ್ಲಿ ಮನೆ ಅಂಗಳದಲ್ಲಿ ಅರಳುವ ಮಧ್ಯಾಹ್ನ ಮಲ್ಲಿಗೆ ನೋಡುತ್ತಿದ್ದಾಗ, ಒಮ್ಮೊಮ್ಮೆ ನಿನ್ನ ಮುದ್ದು ಮುಖ ನೆನಪಾಗಿ ಬಿಡುತ್ತೇ ಕಣೇ. ಆಗ ನೀನಿದ್ದ ಹಾಸ್ಟೇಲ್ ಕಡೆ ಸುಮ್ಮನೇ ಸೈಕಲ್ ತುಳಿದು ಬಿಡುತ್ತೇನೆ. ಅರ್ಧ ದಾರಿ ಕ್ರಮಿಸುತ್ತಿದ್ದಂತೆ 'ಹೇ.. ಲೋಸು, ಬೇಡ ಕಣೋ. ಹಾಸ್ಟೇಲ್ ಮುಂದೆ ಬರಬೇಡ' ಎಂದು ಅಳುಮುಖ ಮಾಡಿಕೊಂಡು ನೀ ಹೇಳಿದ್ದು ನೆನಪಾಗಿ ಬಿಡುತ್ತದೆ. ಅದಕ್ಕೆ ಸೈಕಲ್ ದೂಡಿಕೊಂಡು ವಾಪಸ್ ಮರುಳುತ್ತೇನೆ. ಕ್ಷಣ ಕ್ಷಣವೂ ಹಿಂತಿರುಗಿ ನೋಡುತ್ತ, ಎಲ್ಲಿಯಾದರೂ ನೀ ಹೊಳಕುತ್ತೀಯಾ ಎಂದು!
ನೀ ಎಲ್ಲ ಹುಡುಗಿಯರ ತರಹ ಅಲ್ಲ ಕಣೇ. ನೀನೊಂದು ವಿಶೇಷ. ಮುಗಿಯದ ಕವನ. ನನ್ನ ಪ್ರೀತಿ ಪದಕ್ಕೆ ನೀನೇ ಪಲ್ಲವಿ, ನೀನೇ ಶೀರ್ಷಿಕೆ. ಯಾಕೇ ಹುಡುಗಿ, ಸಮಯ ಸಿಕ್ಕಾಗಲೆಲ್ಲ ನೀ ನನ್ನ ಗೋಳು ಹೊಯ್ದುಕೊಳ್ಳುತ್ತ ಇರುತ್ತೀಯಾ? ಸ್ವಲ್ಪ ಕಡಿಮೆ ಮಾಡು. ಪ್ಲೀಸ್...
ನೀನು ಹೇಳುತ್ತೀಯಲ್ಲ, 'ನಿನ್ನ ಸಂತೋಷವೊಂದು ಸಾಕು. ಮತ್ತೇನೂ ಬಯಸಲಾರೆ ಬದುಕಲ್ಲಿ' ಎಂದು. ಆದರೆ, ನನ್ನ ಸಂತೋಷ ನೀನು! ನನ್ನ ಯಶಕ್ಕಾಗಿ ಹಂಬಲಿಸುತ್ತೀಯಾ ಅಲ್ವಾ? ಅದು ನೀ ನನ್ನ ಜೊತೆಗಿದ್ದರೆ ಮಾತ್ರ....
ನಮ್ಮಮ್ಮ ಕಟ್ಟಿಟ್ಟ ಅಬ್ಬಲಿ ಹೂವಿನ ದಂಡೆಯನ್ನು ಕದ್ದುಕೊಂಡು ನಾಳೆ ನೀನಿದ್ದಲ್ಲಿಗೆ ಬರುತ್ತೇನೆ. ರೇಶಿಮೆಯಂತ ನಿನ್ನ ಕೂದಲಿಗೆ ನನ್ನ ಕೈಯ್ಯಾರೆ ಅದನ್ನು ಮುಡಿಗೇರಿಸಬೇಕೆಂಬ ಪುಟ್ಟ ಆಸೆ ಕಣೇ! ಅನುಮತಿ ನೀಡುತ್ತೀಯಾ...?
-ನಿನ್ನ ಮಾಧವ
 nrajbn@gmail.com
ಕ್ಷಮಿಸಿ....
'ಇನ್ಲ್ಯಾಂಡ್ ಲೆಟರ್ ಸಮಾಧಿಯಾಗಿದೆ.....!!'
ಮೊಬೈಲ್ ಸಂಭಾಷಣೆಯಲ್ಲಿ ಹೇಳಲಾಗದ ಎಷ್ಟೋ ಭಾವನೆಗಳು ನಮ್ಮಲ್ಲಿ ಹುದುಗಿರುತ್ತವೆ. ಹೀಗೆ ಮಾತು ಮೌನವಾದಾಗ ನೆರವಿಗೆ ಬರುವುದು ಸುಂದರ ಅಕ್ಷರ ಸರಸ್ವತಿಯೇ...! ಮುಖಕ್ಕೆ ಮುಖ ಕೊಟ್ಟು ಹೇಳಲಾಗದ ವಿಷಯಗಳನ್ನು ತಿಳಿಸುವ ತಾಕತ್ತು ಇರುವುದು ಈ ಅಕ್ಷರಕ್ಕೆ ಮಾತ್ರ. ಅಣ್ಣ ತಂಗಿಗೆ ಕಿವಿಹಿಂಡಿ ಬರೆಯುವ ಪತ್ರ, ಅಪ್ಪ-ಅಮ್ಮರಿಗೆ ಬರೆಯುವ ಭಯಮಿಶ್ರಿತ ಪತ್ರ, ಸ್ನೇಹಿತರಿಗೆ ಬರೆಯುವ ತುಂಟ ಪತ್ರ, ಹಿರಿಯರಿಗೆ ಬರೆಯುವ ಗೌರವ ಪತ್ರ, ಅಜ್ಜ-ಅಜ್ಜಿಯರಿಗೆ ಬರೆಯುವ ಮುಗ್ದ ಪತ್ರ, ಪ್ರೇಮಿಸುವ ಹುಡುಗ/ಹುಡುಗಿ ಬರೆಯುವ ಪ್ರೇಮ ಪತ್ರ... ಹೀಗೆ ಎಲ್ಲ ಪತ್ರಗಳು ಒಂದಕ್ಕೊಂದು ಭಿನ್ನ-ವಿಭಿನ್ನವಾಗಿರುತ್ತವೆ. ಇಂತಹ ಅದ್ಭುತ ಪತ್ರ ಬರೆಯುವ ಕಲೆ, ಹವ್ಯಾಸ ಕಾಲಚಕ್ರದ ಉರುಳಾದಲ್ಲಿ ನಮ್ಮಿಂದ ಕಣ್ಮರೆಯಾಗುತ್ತಿರುವುದು ವಿಪರ್ಯಾಸ.....!!
ಪ್ರತಿಯೊಂದು ಬದಲಾವಣೆಗೆ 'ಕಾಲ'ನ ಕಡೆಗೆ ಬೆರಳು ತೋರಿಸುವ ನಾವು ಎಷ್ಟೋ ಮಾನವ ಸಂಬಂಧಗಳನ್ನು ಅದರಿಂದ ದೂರ ಮಾಡಿಕೊಳ್ಳುತ್ತಿದ್ದೇವೆ. ಆಧುನಿಕತೆಯ ತೆಕ್ಕೆಗೆ ಸಿಲುಕಿ `ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತಾ' ಇದ್ದೇವೆ. ಸುಂದರ, ಸವಿ ಮಧುರ ಆತ್ಮಗಳ ನಡುವಿನ ಸಂಪರ್ಕ ಸೇತುವೆಯನ್ನೆ ತುಂಡರಿಸಿಕೊಂಡು ಬಿಟ್ಟಿದ್ದೇವೆ....!!
ಹೌದು, 'ಅಭಿವೃದ್ಧಿಯೆಂಬ ಅವನತಿ'ಯೆಡೆಗೆ ಮುಖ ಮಾಡಿ, ಸಂಪೂರ್ಣ ಬದುಕನ್ನೇ ಯಾಂತ್ರಿಕರಣ ಮಾಡಿಕೊಂಡಿದ್ದೇವೆ. ಪ್ರತಿ ದಿನದ ಬೆಳಗನ್ನು ನಮ್ಮ ಎರಡೂ ಅಂಗೈನ್ನು ನೋಡಿಕೊಂಡು 'ಕರಾಗ್ರೆ ವಸತೆ ಲಕ್ಷ್ಮೀ ಕರಮಧ್ಯೆ ಸರಸ್ವತಿ.......' ಎಂಬ ಶ್ಲೋಕ ಹೇಳಿ ದೈನಂದಿನ ಕಾರ್ಯ ಪ್ರಾರಂಭಿಸುತ್ತಿದ್ದೇವು. ಆದರೆ ಈಗ, ರಾತ್ರಿ ಮಲಗುವಾಗ ತಲೆ ಪಕ್ಕದಲ್ಲಿಟ್ಟ ಮೊಬೈಲ್ನಲ್ಲಿ `ಯಾವ ಹೊಸ ಸಂದೇಶ ಬಂದಿದೆ...?', 'ಯಾರು ಶುಭೋದಯದ ಸಂದೇಶ ಕಳುಹಿಸಿದ್ದಾರೆ....?', 'ಯಾರಿಗೆ ಫೋನ್ ಮಾಡಬೇಕು?' ಎಂದು ಯೋಚಿಸುತ್ತ ಮೊಬೈಲ್ ನೋಡುತ್ತಲೇ ಕಣ್ಣರಳಿಸುತ್ತೇವೆ. ಎಲ್ಲಿ ಹೋದವು ನಮ್ಮ ಸಂಸ್ಕಾರ... ಸಂಸ್ಕೃತಿ....?
ಇಂದು ಅಂಗೈಯಲ್ಲಿಯೇ ಪ್ರಪಂಚವಿದೆ. ಪ್ರಪಂಚದ ಯಾವುದೇ ಭಾಗದ ಮಾಹಿತಿ ಅಥವಾ ಸುದ್ದಿಗಳು ಕ್ಷಣ ಮಾತ್ರದಲ್ಲಿ ನಮ್ಮ ಕಣ್ಣೆದುರು ಗೋಚರಿಸುತ್ತವೆ. ದಿನದಿಂದ ದಿನಕ್ಕೆ ಪ್ರಪಂಚ ಕಿರುದಾಗುತ್ತ ಸಾಗುತ್ತಿವೆ. ಸಾವಿರಾರು ಕಿ.ಮೀ. ದೂರದಲ್ಲಿರುವ, ಸಪ್ತಸಾಗರದ ಆಚೆ ಎಲ್ಲೋ ಇರುವ ಸ್ನೇಹಿತರನ್ನು, ಬಂಧುಗಳನ್ನು ಇಂದು ಕ್ಷಣ ಮಾತ್ರದಲ್ಲಿ ಸಂಪರ್ಕಿಸಬಹುದಾಗಿದೆ. ಆದರೆ ಈ ಸಂಪರ್ಕ ಸೀಮಿತ ಅವಧಿಯಲ್ಲಿ ಕೆಲವು ಯೋಗ ಕ್ಷೇಮಕ್ಕಷ್ಟೇ ಮೀಸಲಾಗಿರುತ್ತವೆಯೇ ಹೊರತು, ಭಾವನಾತ್ಮಕ ಸಣ್ಣಪುಟ್ಟ ಸೂಕ್ಷ್ಮ ಸಂವೇದನೆಗೆ ಅವಕಾಶ ನೀಡದು. ಅಲ್ಲೇನಿದ್ದರೂ, ಕರೆನ್ಸಿ ಅವಲಂಬಿತ ವ್ಯಾವಹಾರಿಕ ಮಾತುಕತೆ, ಇಲ್ಲವೇ ಕೆಲವು ವೇಳೆ ಯೋಗ ಕ್ಷೇಮ ವಿನಮಯವಷ್ಟೇ...!!
ಈ ಹಿಂದೆ ಸಂಬಂಧಗಳನ್ನು ಬೆಸೆಯಲು ಮುಖ್ಯ ವೇದಿಕೆಯಾಗಿ ಪತ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ದೂರದಲ್ಲೆಲ್ಲೋ ವಿದ್ಯಾಭ್ಯಾಸ, ಉದ್ಯೋಗ ಮಾಡುತ್ತಿದ್ದವರು ಈ ಪತ್ರದ ಮೂಲಕವೇ ಕುಟುಂಬದವರೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು. ಮಗನ ಪತ್ರದ ದಾರಿ ಕಾಯುವ ಅಪ್ಪ-ಅಮ್ಮ... ಅಪ್ಪ-ಅಮ್ಮರ ಪತ್ರದ ದಾರಿ ಕಾಯುವ ಮಗ... ಪ್ರೇಯಸಿಯ ಪತ್ರದ ಸಾಲುಗಳನ್ನು ಓದುವ ಕಾತುದರಲ್ಲಿರುವ ಪ್ರಿಯಕರ.... ಹೀಗೆ ತವಕ, ತಲ್ಲಣಗಳು ಆ ಪತ್ರದ ಕಾಯುವಿಕೆಯಲ್ಲಿ ಸಿಗುತ್ತಿತ್ತು. ಪತ್ರದ ಒಂದೊಂದು ಸಾಲುಗಳು ಕೂಡಾ ನೆನಪು, ಕನಸು, ಕನವರಿಕೆ, ಆಶಯ, ಅಭಿಪ್ರಾಯ, ಕೀಟಲೆ, ತುಂಟತನ, ಪ್ರೀತಿ, ಮಮತೆ, ವಿಶ್ವಾಸ, ಕಕ್ಕುಲಾತಿ, ಕಾಳಜಿಗಳನ್ನು ಸಾಕ್ಷಾತ್ಕರಿಸುತ್ತಿತ್ತು. ಈ ಮೂಲಕ ಪರಸ್ಪರ ಸಂಬಂಧ ಹಾಗೂ ಭಾವನೆಗಳು ಇನ್ನಷ್ಟು ಆಳವಾಗುತ್ತ ಹೋಗುತ್ತಿತ್ತು. ಆದರೆ, ಮೊಬೈಲ್ ಮಾಯೆಯಿಂದಾಗಿ ಪತ್ರ ಬರೆಯುವ ಹವ್ಯಾಸ ಮಾಯವಾಗಿ, ಸಂಬಂಧ-ಭಾವನೆಗಳೆಲ್ಲ ಕೇವಲ ವ್ಯಾಪಾರ ವಹಿವಾಟು ಆಗಿಬಿಟ್ಟಿವೆ.
ಮೊಬೈಲ್ನಲ್ಲಿ ಸಂಭಾಷಣೆ ಮಾಡುವಾಗ ನಮ್ಮ ಗಮನವೆಲ್ಲ ಕೇವಲ ಕರೆನ್ಸಿ ಕಡೆಗೇ ಕೇಂದ್ರಿಕೃತವಾಗಿರುತ್ತವೆ. ವ್ಯವಹಾರದ ದ್ಯೋತಕ ಮನಃಸ್ಥಿತಿಯಾದ ಇದು ಸಂಬಂಧ ಹಾಗೂ ಭಾವನೆಗಳಿಗೆ ಅವಕಾಶವಿಲ್ಲದಂತೆ ಮಾಡುತ್ತದೆ. ಮೊಬೈಲ್ ಮಾತುಕತೆಗಳು ಪತ್ರದಷ್ಟು ಆಪ್ತ ಹಾಗೂ ಮಧುರ ಎಂದೆನಿಸದು. ಪತ್ರದಲ್ಲಿ ಬರೆದಿರುವ ಅಷ್ಟೂ ಸಾಲುಗಳ ಒಂದೊಂದು ಶಬ್ದಗಳು ಭಾವನೆಯ ಕೊಳದಲ್ಲಿ ಮಿಂದೆದ್ದು ಬಂದಿರುತ್ತವೆ. ಆ ಒಂದೊಂದು ಪದಗಳು ಹೃದಯದ ಗೂಡಲ್ಲಿ ನುಗ್ಗಿ, ಬೆಚ್ಚಗೆ ಅವಿತು ಬಿಡುತ್ತವೆ.
ಮನೆಯಲ್ಲಿರುವ ನಾಯಿ-ಬೆಕ್ಕಿನ ಸ್ನೇಹ ಹೇಗಿದೆ...? ಕೊಟ್ಟಿಗೆಯಲ್ಲಿ ಹೊಸ ಅತಿಥಿಯಾರಾದರೂ ಬಂದಿದ್ದಾರೋ ಇಲ್ಲವೋ...? ಪಕ್ಕದ್ಮನೆ ಸೋಮಣ್ಣ ಮದುವೆ ಆದನಾ...? ಹಾಲು ಮಾರುವ ಹುಡುಗ ಗೋಪಿ ಈಗಲೂ ಬರುತ್ತಿದ್ದಾನಾ...? ಅಜ್ಜಿಯ ಆರೋಗ್ಯ ಈಗ ಹೇಗಿದೆ...? ನಾನು ಪ್ರೀತಿಸುವ ಮರ, ಗಿಡಗಳೆಲ್ಲ ಹೇಗಿವೆ...? ಇಂತಹ ಸಣ್ಣ ಪುಟ್ಟ ಭಾವ ಸಂವೇದನಾತ್ಮಕ ವಿಷಯಗಳನ್ನು ಪತ್ರದಲ್ಲಿ ಮಾತ್ರ ಬರೆಯಲು ಸಾಧ್ಯವೇ ಹೊರತು ಮೊಬೈಲ್ನಲ್ಲಿ ಸಾಧ್ಯವಿಲ್ಲ.
ಒಮ್ಮೆ ಬರೆದ ಅಥವಾ ಬಂದ ಪತ್ರಗಳನ್ನು ಹಾಗೆಯೇ ಜೋಪಾನ ಮಾಡಿಟ್ಟುಕೊಂಡು, ವರ್ಷಗಳ ನಂತರವೂ ಓದಬಹುದು. ಅಂದಿನ ಭಾವನೆ ಹಾಗೂ ಬದುಕನ್ನು ನೆನಪಿಸಿಕೊಂಡು ನಮ್ಮನ್ನು ನಾವು ಅರ್ಥೈಸಿಕೊಳ್ಳಬಹುದು. ಅದು ಬದುಕಿಗೆ ಹೊಸ ತಿರುವು ನೀಡಿ, ನಾವೆಲ್ಲ ಮರೆಯುತ್ತಿರುವ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯನ್ನು ಜಾಗೃತಗೊಳಿಸಲು ಸಹಕಾರಿಯಾಗಬಹುದು. ಅದು ಒಂದು ನುಡಿಚಿತ್ರವಿದ್ದಂತೆ. ಸದಾ ಹಸಿರಿನಿಂದ ಕಂಗೊಳಿಸುತ್ತ, ನಳನಳಿಸುತ್ತಲೇ ಇರುತ್ತದೆ. ಓದಿದಷ್ಟು ಸಾಲದು. ಒಂದೊಂದು ಬಾರಿ ಓದಿದಾಗಲೂ ಒಂದೊಂದು ಭಾವ. ಮೈ-ಮನ ಪುಳಕಗೊಳ್ಳುವ ಸಂತೋಷವನ್ನು ಮೊಗೆ ಮೊಗೆದು ನೀಡುತ್ತವೆ.
ಎಂದೋ... ಯಾರೋ... ಮಾಡಿದ ನಾಲ್ಕೈದು ಶಬ್ದಗಳ ಸಂದೇಶವನ್ನು ಮೊಬೈಲ್ ಇನ್ ಬಾಕ್ಸ್ನಲ್ಲಿ ಬಚ್ಚಿಟ್ಟುಕೊಂಡು, ದಿನಕ್ಕೆ ಎರಡು-ಮೂರು ಬಾರಿ ನೋಡಿ ಸಂತೋಷ ಪಡುವ ನಾವು, ಸ್ನೇಹಿತರದ್ದೋ... ಅಪ್ಪ-ಅಮ್ಮರದ್ದೋ ಪತ್ರ ಬಂದರೆ ಇನ್ನೆಷ್ಟು ಆನಂದ ಪಡಬಹುದು ಅಲ್ಲವೇ?
ಹಾಗೆಯೇ, ನಮ್ಮ ಆಪ್ತೇಷ್ಟರಲ್ಲಿ ಯಾರಿಗಾದರೂ ಒಂದು ಪತ್ರ ಬರೆಯೋಣ. ಪರಸ್ಪರ ಭಾವನೆಗಳನ್ನು ಅಕ್ಷರ ಸರಸ್ವತಿಯ ಮೂಲಕ ವಿನಿಮಯ ಮಾಡಿಕೊಳ್ಳೋಣ. ಆಗ ನೋಡಿ, ಮನಸ್ಸು ಹಕ್ಕಿಯಂತೆ ಹೇಗೆ ಗರಿ ಬಿಚ್ಚಿ ಬಾನಂಗಳದಲ್ಲಿ ತೇಲಾಡುತ್ತದೆಯೆಂದು. ಈ ಪತ್ರ ಆತ್ಮಾನುಬಂಧದ ಅನೂಹ್ಯ ಸೆಳೆತಕ್ಕೆ ಒಳಗಾಗಿಸಿ ಪ್ರೀತಿ, ಸ್ನೇಹ, ವಿಶ್ವಾಸದ ನೆಲಗಟ್ಟನ್ನು ಇನ್ನಷ್ಟು ಭದ್ರವಾಗುತ್ತದೆ.
ಸೂಕ್ಷ್ಮ ಸಂವೇದನಾಶೀಲ ಗುಣಗಳನ್ನು ನಮ್ಮಲ್ಲಿ ಜಾಗೃತವಾಗಿಸಿ, ಇಡೀ ಜಗತ್ತನ್ನೇ ಪ್ರೀತಿಸು ಮಹೋನ್ನತ ಗುಣವನ್ನು ನೀಡಿ, ಬದುಕನ್ನು ಸಂತೃಪ್ತಿಗೊಳಿಸುವ ಒಂದು ಪುಟ್ಟ ಪತ್ರ, ಪ್ರಪಂಚವನ್ನೇ ಕಿರಿದು ಮಾಡಿದ ಆಧುನಿಕ ಜಗತ್ತಿನ ಮೊಬೈಲ್ ನೀಡಲು ಸಾಧ್ಯವೇ.......!
-ನಾಗರಾಜ್ ಬಿ.ಎನ್.
ಇದು ಕಥೆಯಲ್ಲ.....!
ಇಬ್ಬರು ಆತ್ಮೀಯ ಸ್ನೇಹಿತರು. ಬಾಲ್ಯದಿಂದ ಪದವಿಯವರೆಗೂ ಒಂದೇ ಶಾಲೆ, ಕಾಲೇಜ್ ನಲ್ಲಿ ಜೊತೆಯಾಗಿಯೇ ಅಭ್ಯಸಿದವರು. ನಂತರ ಇಬ್ಬರೂ ಬೇರೆ ಬೇರೆ ವಿವಿಯಲ್ಲಿ ಸ್ನಾತಕ ಅಭ್ಯಾಸ, ಅವರಿಗೆ ಇಷ್ಟದ ವಿಷಯದ ಮೇಲೆ. ಇಬ್ಬರೂ ಉನ್ನತ ಉದ್ಯೋಗದಲ್ಲಿದ್ದಾರೆ. ವಾರಕ್ಕೆರಡು ಬಾರಿಯಾದರೂ ಮೂರ್ನಾಲ್ಕು ಬಾರಿ ದೂರವಾಣಿಯಲ್ಲಿ ಸಂಕರ್ಪವಾದರೆ, ತಿಂಗಳಿಗೊಮ್ಮೆಯಾದರೂ ಭೆಟ್ಟಿಯಾಗಲೇ ಬೇಕು... ಹೀಗಿದೆ ಅವರಿಬ್ಬರ ಸ್ನೇಹ.
ಆದರೆ,
ದೀಪಾವಳಿ ಕಳೆದ ಎರಡು ದಿನಕ್ಕೆ ರಾಕೇಶನ ಜನ್ಮದಿನ. ಹಬ್ಬಕ್ಕೆಂದು ಊರಿಗೆ ಬಂದಿದ್ದ ರಾಕೇಶನಿಗೆ, ಸ್ನೇಹಿತ ಮಿಥುನ ಬಂದಿಲ್ಲ ಎನ್ನುವ ಕೊರಗು. ಒಂದು ವಿಷಯ ಅವನಲ್ಲಿ ಎದುರಾಗೇ ಹೇಳಬೆಕು ಎಂದು ಆತ ಹಾತೊರೆಯುತ್ತಿದ್ದ. ಹುಟ್ಟಿದ ದಿನಕ್ಕಾದರೂ ಬಂದೇ ಬರುತ್ತಾನೆ ಎನ್ನುವ ನಂಬಿಕೆ ಇತ್ತು. ಅದು ಕೂಡಾ ಹುಸಿಯಾಗಿತ್ತು.
ಮುಂಜಾನೆಯಿಂದ ರಾತ್ರಿವರೆಗೂ ರಾಕೇಶನಿಗೆ ಜನ್ಮದಿನದ ಸಂದೇಶ, ಕರೆಗಳ ಸುರಿಮಳೆ. ಊಹೂಂ... ಅದರಲ್ಲಿ ಮಿಥುನನ ಕರೆ ಇರಲೇ ಇಲ್ಲ. ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಮೊಬೈಲ್ ರಿಂಗಣಿಸುತ್ತದೆ. ಮಿಥುನ ಆಗ ಕರೆ ಮಾಡಿದ್ದ.... ವಿಶ್ ಮಾಡಿ, ಯೋಗಕ್ಷೇಮ ವಿಚಾರಿಸುತ್ತಾನೆ. ನೂರಾರು ಹಾರೈಕೆಯ ಮಾತುಗಳನ್ನು ಒಂದೇ ಉಸಿರಿನಲ್ಲಿ ಹೇಳುತ್ತಾನೆ. ಆ ಸಂತಸದಲ್ಲಿಯೇ ಇತ್ತ ರಾಕೇಶ, ಮಿಥುನನಿಗೆ ತನ್ನಿಂದ ಒಂದು ಸಂತಸದ ವಿಷಯ ಹೇಳಲು ಮುಂದಾಗುತ್ತಾನೆ....
'ಸ್ವಲ್ಪ ತಡಿಯೋ ಮಾರಾಯ... ಏನೋ ಹೇಳ್ಬೇಕು ಅಂತ ಎರಡು ದಿನದಿಂದ ನಿನ್ನ ಕಾಲ್ ಮಾಡ್ತಾ ಇದ್ದೀನಿ...'
'ಸಾರಿ ಕಣೋ.. ಕೆಲಸದ ಒತ್ತಡ. ತುಂಬಾ ಬ್ಯುಸಿಯಾಗಿದ್ದೆ. ಕಿವಿ ಹಿಡ್ಕೊಂಡೆ. ಸರಿನಾ, ಈಗ ಹೇಳು'
'ಇದ್ಕೇನು ಕಡಿಮೆಯಿಲ್ಲ, ನಮ್ಮ ಮನೆಯಲ್ಲಿ ನನ್ನ ಮದುವೆಗೆ ಹುಡುಗಿ ನೋಡಿದ್ದಾರೆ ಕಣೋ'
'ರಿಯಲಿ... ಅಬ್ಬಾ...! ನಿನ್ನ ಜನ್ಮದಿನಕ್ಕೆ ಇದಕ್ಕಿಂತ ದೊಡ್ಡ ಸಂತೋಷ  ಬೇರೇನೂ ಇಲ್ವೋ... ಅಂತೂ, ನನ್ನ ಚಡ್ಡಿ ದೋಸ್ತ ದೊಡ್ಡವನಾದ ಅಂತಾಯ್ತು'
'ಹಾಗೇನಿಲ್ಲ ಕಣೋ.. ಜನವರಿ ಸಂಕ್ರಮಣದ ದಿನ ನಿಶ್ಚಿತಾರ್ಥ ಮಾಡಿ, ಬೇಸಿಗೆಯಲ್ಲಿ ಮದುವೆ ಮಾಡಲು ನಿರ್ಧರಿಸಿದ್ದಾರೆ. ನಿನಗೇ ಪ್ರಾಥಮವಾಗಿ ಈ ವಿಷಯ ಹೇಳ್ತಾ ಇದ್ದೀನಿ'
'ಥ್ಯಾಂಕ್ಸ್ ಕಣೋ... ಅಂದ ಹಾಗೆ, ನಮ್ಮ ಅತ್ಗ್ಯಮ್ಮ ಏನ್ಮಾಡ್ತಾ ಇದ್ದಾಳೆ?  ಎಲ್ಲಿರೋದು?  ಯಾವ ಊರು?'  ಎಂದು ಮಿಥುನ ಮರು ಪ್ರಶ್ನಿಸುತ್ತಾನೆ.
ಎಲ್ಲವನ್ನು ಎಳೆ ಎಳೆಯಾಗಿ ರಾಕೇಶ ಮೊಬೈಲ್ ನಲ್ಲಿಯೇ ಮಿಥುನನಿಗೆ ಹೇಳುತ್ತಾನೆ. ಅವೆಲ್ಲವನ್ನು ಮಿಥುನ ಸುಮ್ನೆ ಕೇಳ್ತಾ ಕೇಳ್ತಾ, ಮೌನಕ್ಕೆ ಜಾರಿ ಬಿಡುತ್ತಾನೆ.
ಅತ್ತ ರಾಕೇಶ, ಹಲೋ... ಹಲೋ... ಎಂದು ಏಳೆಂಟು ಬಾರಿ ಕೂಗಿ, ನೆಟ್-ವರ್ಕ್ ಪ್ರಾಬ್ಲಮ್ ಎಂದು ಕರೆ ಕಟ್ ಮಾಡುತ್ತಾನೆ.
ಪ್ರಾಣ ಸ್ನೇಹಿತ ರಾಕೇಶನ ಕೈ ಹಿಡಿಯಲಿರುವ ಹುಡುಗಿ, ಮಿಥುನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹುಡುಗಿಯಾಗಿದ್ದಳು. ಅವಳಿಗಾಗಿ ನೂರಾರು ಕನಸನ್ನು ಹೆಣೆದು, ಪ್ರೀತಿಯ ಮಹಲನ್ನು ಕಟ್ಟಿ, ಅಲ್ಲಿ ಎಲ್ಲವೂ ಪ್ರೀತಿನೇ ಆಗಿರಬೇಕು ಎಂದುಕೊಂಡಿದ್ದ. ತಾನು ಪ್ರೀತಿಸುತ್ತಿರುವ ವಿಷಯ ಅವಳಲ್ಲಿ ಹೇಳಿಕೊಂಡಿದ್ದ. ಅವಳು ಕೂಡಾ ಅವನನ್ನು ಮನಸಾರೆ ಇಷ್ಟಪಟ್ಟಿದ್ದಳು. ಆದರೆ, ಆಕೆ ಎಂದಿಗೂ ತಾನು ಪ್ರೀತಿಸುತ್ತಿರುವ ವಿಷಯ ಮಿಥುನನಲ್ಲಿ ಹೇಳಿರಲಿಲ್ಲ. ಒಂದಿಲ್ಲೊಂದು ಸಮಸ್ಯೆಗೆ ಒಳಪಡಿಸಿ, ಪರೀಕ್ಷೆಗೆ ಒಳಪಡಿಸುತ್ತಲೇ ಇದ್ದಳು. ಜೀವಕ್ಕಿಂತ ಹೆಚ್ಚಾಗಿ ಮಿಥುನ ತನ್ನನ್ನು ಪ್ರೀತಿಸ್ತಾ ಇದ್ದಾನೆ ಎನ್ನುವುದು ಅವಳಿಗೆ ಗೊತ್ತಿತ್ತು. ಆತ ಇಷ್ಟವಾಗಿದ್ದರೂ, ಆತನ ಪ್ರೀತಿಯ ಯಾವ ಕೋರಿಕೆಯನ್ನು ಅವಳು ಸ್ವೀಕರಿಸಿರಲಿಲ್ಲ. ಆ ಸಂದರ್ಭದಲ್ಲೆಲ್ಲ ಅವನ ಮೇಲೆ ಸುಮ್ಮನೆ ರೇಗಾಡುತ್ತಿದ್ದಳು. 'ನಾನು ಈಗಾಗಲೆ ಒಬ್ಬನನ್ನು ಪ್ರೀತಿಸ್ತಾ ಇದ್ದೇನೆ. ನನಗೆ ಈಗಾಗಲೇ ಮದುವೆ ನಿಶ್ಚಯವಾಗಿದೆ' ಎಂದು ಸುಳ್ಳು ಹೇಳುತ್ತಿದ್ದಳು. ಇನ್ನು ಮುಂದೆ ಕರೆ, ಸಂದೇಶ ಏನು ಮಾಡಬೇಡ ಎಂದು ಮಿಥುನನ ದೂರವಿಡಲು ಪ್ರಯತ್ನಿಸುತ್ತಿದ್ದಳು. ಮಿಥುನನ ಪ್ರೇಮ ಒಂದೆರಡು ದಿನದಲ್ಲ... ಎರಡ್ಮೂರು ತಿಂಗಳಿನದ್ದೂ ಅಲ್ಲ... ಬರೋಬ್ಬರಿ ನಾಲ್ಕು ವರ್ಷದ ಪ್ರೇಮ....! ಆತ ತನ್ನೆಲ್ಲ ಭಾವವನ್ನು ಆಕೆಯಲ್ಲಿ ಹೇಳಿಕೊಂಡು, ಪ್ರೇಮ ಭಿಕ್ಷೆಗಾಗಿ ಎದುರು ನೋಡುತ್ತಿದ್ದ, ನಾಲ್ಕು ವರ್ಷಗಳ ಪರ್ಯಂತ.... ಪ್ರತಿ ದಿನ... ಪ್ರತೀ ಕ್ಷಣ......!
ಹೀಗಿದ್ದಾಗ ಆತನ ಪ್ರಾಣ ಸ್ನೇಹಿತ ರಾಕೇಶನೇ ಆಕೆಯನ್ನು ವರಿಸಲು ಸಿದ್ಧನಾಗದ್ದಾನೆ ಎನ್ನುವ ಸಂಗತಿ, ಮಿಥುನನಿಗೆ ಎಷ್ಟು ಘಾಸಿ ಮಾಡಿರಬೇಡ....!?
ನಾಲ್ಕು ವರ್ಷ ಪ್ರತಿ ಕ್ಷಣವೂ ಅವಳಿಗಾಗಿ ಮಿಡಿದ ಆತನ ಹೃದಯ ಸ್ತಬ್ಧವಾಗುತ್ತಿದೆ. ಏರಳಿತದ ಪ್ರತಿಯೊಂದು ಉಸಿರಿನಲ್ಲೂ ಪ್ರೇಯಸಿ ಎನ್ನುತ್ತಿದ್ದವ, ಅರಿವಲ್ಲದೆ 'ಅತ್ಗ್ಯಮ್ಮ' ಎಂದು 'ಅಮ್ಮ'ನ ಸ್ಥಾನ ನೀಡಿ ಬಿಟ್ಟಿದ್ದ. 'ಕಾಲಚಕ್ರದ ಉರುಳಾಟ.... ಇಲ್ಲಿ ನಾವೆಲ್ಲ ನಿಮಿತ್ತ ಮಾತ್ರ' ಎನ್ನುತ್ತ ಏನೇನೋ ಯೋಚನೆ ಮಾಡುತ್ತ ಮಿಥುನ ಆಕಾಶದೆಡೆ ದೃಷ್ಟಿ ಹಾಯಿಸಿದ್ದಾನೆ. ದಟ್ಟ ಕಾರ್ಗತ್ತಲ ನೀರವ ಮೌನದಲ್ಲಿ ಕೆನ್ನೆಯಿಂದ ಕಣ್ಣೀರ ಹನಿಗಳು ಒಂದೊಂದಾಗಿ ಜಾರುತ್ತಿವೆ. ಎರಡು ಕಣ್ಣಾಲಿಗಳು ತೋಯ್ದು ತೊಪ್ಪೆಯಾಗಿವೆ. ಆತನಿಗೆ ಸಮಾಧಾನಿಸಲು ಅಲ್ಲಿ ಇದ್ದದ್ದು ಮೌನದ ಜೊತೆ ಕವಿದ ಕತ್ತಲು ಮಾತ್ರ....!
-ನಾಗರಾಜ್ ಬಿ.ಎನ್.
ನಾನು ಮತ್ತು ಅವಳು
                                               (ಹೀಗೊಂದು ಪ್ರೀತಿ)
ಕಳೆದ ಮೂರು ವರ್ಷಗಳಿಂದ ಅವಳು ನನಗೆ ಪರಿಚಯ. ಪ್ರತಿದಿನ ಆಫೀಸ್ನಿಂದ ರೂಂಗೆ ಬರುವಾಗ ಅವಳು ಎದುರಾಗುತ್ತಾಳೆ. ನನ್ನನ್ನು ನೋಡಿದ ಕೂಡಲೇ ಓಡೋಡಿ ಬರುತ್ತಾಳೆ. ಅವಳ ತಲೆಯನ್ನು ನೇವರಿಸಿ, ಮುದ್ದು ಮಾಡುತ್ತೇನೆ. ಸಂದರ್ಭದಲ್ಲಿ ಆಕೆಯ ಕಣ್ಣಲ್ಲಿ ಸ್ಫುರಿಸುವ ಮುಗ್ಧ ಪ್ರೀತಿ, ನನ್ನನ್ನು ಸಂತೃಪ್ತನನ್ನಾಗಿಸುತ್ತದೆ. ಅಷ್ಟೊಂದು ಗಾಢ ಸ್ನೇಹ ನಮ್ಮಿಬ್ಬರದ್ದು.
ಆಕೆ ಅನಾಮಧೇಯೆ, ನಾಯಿ ಸಂಕುಲಕ್ಕೆ ಸೇರಿದವಳು. ಸದ್ಯ ನಾಲ್ಕು ಮಕ್ಕಳ ಮಹಾತಾಯಿ. ನಿರ್ದಿಷ್ಟ ಸ್ಥಳವಿಲ್ಲದ ಆಕೆಗೆ, ಹಾದಿ-ಬೀದಿಯೇ ವಾಸಸ್ಥಾನ. ವಾರದಲ್ಲಿ ಮೂರ್ನಾಲ್ಕು ಬಾರಿಯಾದರೂ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ಅವಳು ವೀರಾಪುರ ರಸ್ತೆಯ(ರಾಧಾಕೃಷ್ಣ ಗಲ್ಲಿಯಿಂದ-ಅಗಸರ ಓಣಿ)ಲ್ಲಿ ಎದುರಾಗೇ ಆಗುತ್ತಾಳೆ. ಪ್ರಾರಂಭದಲ್ಲಿ ನನ್ನ ಹತ್ತಿರ ಬರಲು ತುಸು ನಾಚುತ್ತಿದ್ದ ಆಕೆ, ಈಗಂತ ನನ್ನ ಕಂಡೊಡನೇ ಓಡೋಡಿ ಬರುತ್ತಾಳೆ. ಅವಳ ತಲೆ ನೇವರಿಸಿ ಮುದ್ದು ಮಾಡಿ, ಏನಾದರೂ ತಿಂಡಿ ತಿನ್ನಿಸಿ ಕಳುಹಿಸುತ್ತೇನೆ. ಸಂದರ್ಭದಲ್ಲಿ ಅವಳ ಕಣ್ಣಲ್ಲಿ ಸ್ಫುರಿಸುವ ಪ್ರೀತಿ, ಮುಗ್ಧ ಭಾವ ನನ್ನನ್ನು ಸಂತೃಪ್ತನಾಗಿಸುತ್ತದೆ.
ಧಾವಂತದ ಬದುಕು. ಇದಕ್ಕೆ ಪೂರಕವಾದ ಬ್ಯಾಚುರಲ್ ಜೀವನ. ಏನು ತಿಂದೆ? ಯಾವಾಗ ಊಟ ಮಾಡಿದೆ? ಎಂದು ಹೇಳೊರು, ಕೇಳೋರು ಇಲ್ಲಿ ಯಾರು ಇಲ್ಲ. ವಾರದಲ್ಲಿ ನಾಲ್ಕೈದು ದಿನ ರೂಮಲ್ಲಿಯೇ ಊಟ-ತಿಂಡಿ ಮಾಡಿ, ಉಳಿದ ದಿನಗಳಿಗೆ ಹೊಟೆಲ್ ಆಶ್ರಯಿಸುತ್ತೇನೆ. ರಾತ್ರಿ ರೂಮಿಗೆ ಬರುವಾಗ ಯಾವುದಾದರೂ ಹೊಟೆಲ್ನಿಂದ ಅನ್ನ-ಸಾಂಬಾರು, ಇಡ್ಲಿ-ವಡಾ, ಪಲಾವ್, ಚಿತ್ರಾನ್ನ ಹೀಗೆ ಏನಾದರೂ ಪಾರ್ಸಲ್ ತೆಗೆದುಕೊಂಡು ಬರುವ ಪರಿಪಾಠ.
ನನ್ನ ಅವಳ ಸ್ನೇಹದ ಪ್ರಾರಂಭದ ದಿನಗಳಲ್ಲಿ, ನಾನು ಊಟ ಪಾರ್ಸಲ್ ತೆಗೆದುಕೊಂಡು ಬರುವ ಸಂದರ್ಭದಲ್ಲೆಲ್ಲ ಧುತ್ತೆಂದು ಅವಳು ಎದುರಾಗುತ್ತಿದ್ದಳು. ಇನ್ನೇನು ಬಾಲ ಕಿತ್ತೇ ಹೋಗುತ್ತದೆ ಎನ್ನಬೇಕು...! ಅಷ್ಟೊಂದು ಜೋರಾಗಿ ಬಾಲ ಅಲ್ಲಾಡಿಸುತ್ತ ಮುಂದೆ ನಿಲ್ಲುತ್ತಿದ್ದಳು. ಹಸಿದ ಹೊಟ್ಟೆಯ ತೊಳಲಾಟ ಅವಳ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪಾರ್ಸಲ್ ತಂದ ಊಟವನ್ನೇ ಅವಳಿಗೆ ನೀಡಿ, ತಲೆ ನೇವರಿಸಿ ರೂಂ ಕಡೆ ಹೆಜ್ಜೆ ಹಾಕುತ್ತಿದ್ದೆ. ಹೊಟ್ಟೆ ತುಂಬಿದ ತೃಪ್ತ ಭಾವ ಅವಳದ್ದಾದರೆ, ಹೊಟ್ಟೆ ತುಂಬಿಸಿದ ಸಂತೃಪ್ತಿ ನನ್ನದಾಗುತ್ತಿತ್ತು.
ಒಮ್ಮೊಮ್ಮೆ ರೂಮಿನಲ್ಲಿ ಏನೂ ತಿಂಡಿಗಳಿರುತ್ತಿರಲಿಲ್ಲ. ಅಡುಗೆ ಮಾಡಿಕೊಳ್ಳೋಣ ಎಂದರೆ ರಾತ್ರಿ 10 ಆಗಿರುತ್ತಿತ್ತು. ಮೊದಲೇ ದಣಿದು ಬಂದಿದ್ದಕ್ಕೆ, ಹಾಸಿಗೆ ಸಿಕ್ಕರೆ ಸಾಕು ಎನ್ನುವ ಫೀಲ್. ಆಗೆಲ್ಲ, ತಣ್ಣನೆಯ ನೀರನ್ನು ಹಸಿದ ಹೊಟ್ಟೆಗೆ ಇಳಿಸಿ ತಂಪಾಗಿಸಿಕೊಳ್ಳುತ್ತಿದ್ದೆ. ನಂತರದ ದಿನಗಳಲ್ಲಿ ಅವಳು ಎಲ್ಲಿಯಾದರೂ ಸಿಗಬಹುದು ಎಂದು, ಎರಡೆರಡು ಪಾರ್ಸಲ್ ತೆಗೆದುಕೊಂಡು ಬರುತ್ತಿದ್ದೆ. ಬಹುತೇಕ ಬಾರಿ ಸಿಗುತ್ತಿದ್ದಳು. ಸಿಗದಿದ್ದಾಗ ಅಲ್ಲಿಯೇ ಇರುವ ದನ-ಕರುಗಳಿಗೆ ಒಂದು ಪಾರ್ಸಲ್ ನೀಡಿ ಬರುತ್ತಿದ್ದೆ.
ಆದರೆ, ಆ ಪ್ರೀತಿ, ಮುಗ್ಧತೆ, ಸಂತೃಪ್ತ ಭಾವ... ಇನ್ನು ಕೇಲವೇ ಕೆಲವು ದಿನಗಳು ಮಾತ್ರ. ಬದುಕಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿ ಅವಳ ಸ್ನೇಹದಿಂದ ದೂರಾಗುವ ಸಮಯ ಎದುರಾಗುತ್ತಿದೆ. ಇನ್ನು ಮುಂದೆ, ಆಕೆಯ ಪ್ರೀತಿ....? ಆಕೆಯ ಹಸಿವು...? ಆ ಸಂತೃಪ್ತ ಭಾವ...? ಹಸಿವು ನೀಗಿಸಿದ ತಣ್ಣನೆಯ ತಣ್ಣೀರು...? ಎಲ್ಲಿ, ಹೇಗೆ, ಎಂತು....?
-ನಾಗಾರಾಜ್. ಬಿ.ಎನ್ 
ಹೀಗೂ ಇರ್ತಾರೆ... ಎಚ್ಚರ... ಎಚ್ಚರ..!!!
ಆಕೆ ನನ್ನ ಸ್ನೇಹಿತನ ಸ್ನೇಹಿತೆ. ಈಗಷ್ಟೇ ಪಿಯುಸಿ ಮುಗಿಸಿ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾಳೆ. ಸಾಮಾನ್ಯ ಕುಟುಂಬದಿಂದ ಬಂದ ಆಕೆ, ಓದಿನಲ್ಲಿ ಬುದ್ಧಿವಂತಳು. ಶಾಂತ ಸ್ವಭಾವದ ಹುಡುಗಿಯಾದ ಅವಳು, ಸ್ನೇಹಿತರ ಅಚ್ಚುಮೆಚ್ಚಿನ ಗೆಳತಿಯಾಗಿದ್ದಳು. ಚಿಕ್ಕ ಕುಟುಂಬದಲ್ಲಿ ಅಪ್ಪ ಅಮ್ಮರೇ ದೈವ ಸ್ವರೂಪಿ, ಬೆನ್ನಿಗೆ ಅಂಟಿಕೊಂಡು ಬಂದ ತಮ್ಮನೇ ಬಾಲ್ಯದ ಜೊತೆಗಾರ.
ಆಕೆಯ ಹೆಸರು ಶ್ವೇತಾ(ಹೆಸರು ಬದಲಾಯಿಸಲಾಗಿದೆ). ಬದುಕಲ್ಲಿ ತಾನು ಏನಾದರೂ ಸಾಧಿಸಬೇಕೆನ್ನುವ ಅಚಲ ಮನೋಭಾವದ ಹುಡುಗಿ. ಪದವಿ ಶಿಕ್ಷಣಕ್ಕಾಗಿ ಊರು ಬಿಟ್ಟು ನಗರಕ್ಕೆ ಬರುತ್ತಾಳೆ. ಹಾಸ್ಟೆಲ್ ಜೀವನದಲ್ಲಿ ಅವಳಿಗೆ ಎಲ್ಲವೂ ಹೊಸತಾಗಿ ಕಾಣುತ್ತದೆ.
ಹಳ್ಳಿಯಲ್ಲಿ ಬೆಳೆದ ಶ್ವೇತಾ ಆಧುನಿಕ ಜಗತ್ತಿಗೆ ನಿಧಾನವಾಗಿ ತೆರದುಕೊಳ್ಳುತ್ತಿದ್ದಾಳೆ. ಕೈಯ್ಯಲ್ಲೊಂದು ಸ್ಮಾರ್ಟ್ ಫೋನ್ ಬಂದಿದೆ. ಮೊದಮೊದಲು ಮನೆಯ ಕರೆಗಷ್ಟೇ ಸೀಮಿತವಾಗುತ್ತಿದ್ದ ಫೋನ್, ನಂತರ ನೆಟ್ ಸರ್ಫಿಂಗೆ ಬಳಕೆಯಾಗುತ್ತಿತ್ತು. ನಿಧಾನವಾಗಿ ಜಿ-ಮೇಲ್ ಅಕೌಂಟ್, ಗೂಗಲ್ ಅಕೌಂಟ್, ಪೇಸ್ಬುಕ್ ಅಕೌಂಟ್ಗಳೆಲ್ಲ ಪ್ರಾರಂಭವಾದವು. ವಿದ್ಯಾಭ್ಯಾಸದ ಜೊತೆಗೆ ಇಂಟರ್-ನೆಟ್ ಸರ್ಫಿಂಗ್ ಕೂಡಾ ಅವಳಿಗೆ ಅಭ್ಯಾಸವಾಗುತ್ತ ಹೋಯಿತು.
ಸಮಯ ದೊರೆತಾಗಲೆಲ್ಲ ಶ್ವೇತಾ ಫೇಸ್-ಬುಕ್ ಜಾಲತಾಣದಲ್ಲಿ ಮುಳುಗೇಳುತ್ತಿದ್ದಳು. ಪ್ರಾಣಿ, ಪಕ್ಷಿ, ಪ್ರಕೃತಿಯ ಚಿತ್ರ ಹಾಗೂ ಸ್ನೇಹಿತೆಯರ ಮತ್ತು ತನ್ನ ಫೊಟೋಗಳನ್ನು ಪೋಸ್ಟ್ ಮಾಡುತ್ತ, ಸ್ನೇಹಿತರಿಂದ ಸಾಕಷ್ಟು ಲೈಕ್, ಕಮೆಂಟ್ಸ್ ಪಡೆಯುತ್ತಿದ್ದಳು. ಇದೊಂದು ಅವಳಿಗೆ ಪರಿಪಾಠವೇ ಆಗಿ ಹೋಯಿತು. ಒಮ್ಮೊಮ್ಮೆ ತನ್ನ ಕ್ಲೋಸ್-ಅಪ್ ಫೊಟೋ ಹಾಕಿ ತನ್ನಷ್ಟಕ್ಕೆ ತಾನೇ ಸಂತೋಷ ಪಡೆಯುತ್ತಿದ್ದಳು. ಆ ಸಂತೋಷಕ್ಕೆ ಅನೇಕ ಸ್ನೇಹಿತರು ಮುಕ್ತವಾಗಿ ಕಮೆಂಟ್ಸ್ ಮಾಡುತ್ತಿದ್ದರು. ಆ ಕಮೆಂಟ್ಸ್ಗಳು ಅವಳಿಗೆ ಅವ್ಯಕ್ತ ಆನಂದ ಉಂಟು ಮಾಡುತ್ತಿತ್ತು.
ಹೀಗಿರಲು ಒಂದು ದಿನ ಶ್ವೇತಾಳಿಗೆ ಫೇಸ್-ಬುಕ್ನಲ್ಲಿ ಆಘಾತಕಾರಿ ಚಿತ್ರವೊಂದು ಕಣ್ಣಿಗೆ ಬೀಳುತ್ತದೆ. ಆಕೆಗೆ ಅದು ನಂಬಲೇ ಆಗುತ್ತಿಲ್ಲ. ತನ್ನ ಬದುಕೇ ನಾಶವಾಯಿತು ಎಂದೆಲ್ಲ ಯೋಚಿಸುತ್ತಾಳೆ. ಅವಳ ಕಣ್ಣೆದುರು... ಪ್ರೀತಿಯ ಅಪ್ಪ, ಮಮತೆಯ ಅಮ್ಮ, ಆತ್ಮೀಯ ತಮ್ಮ ಎಲ್ಲರೂ ಒಮ್ಮೆ ಹಾದು ಹೋಗುತ್ತಾರೆ. ಚಿಕ್ಕ ಅಚಾತುರ್ಯ ಜೀವವನ್ನೇ ಬಲಿ ತೆಗೆದುಕೊಳ್ಳುವ ಸನ್ನಿವೇಶಕ್ಕೆ ನೂಕುತ್ತದೆ ಎಂದು ಅವಳು ಕನಸು-ಮನಸಿನಲ್ಲೂ ಊಹಿಸಿರಲಿಲ್ಲ. ಅರೆಕ್ಷಣದಲ್ಲಿ ಕತ್ತಲಾವರಿಸಿದಂತಾಗಿ, ಅಲ್ಲಿಯೇ ಕುಸಿದು ಬೀಳುತ್ತಾಳೆ...!!
ಹಾಗಾದರೆ ಆಗಿದ್ದೇನು...?
ಸ್ಮಾರ್ಟ್ ಫೋನ್ ಖರೀದಿಸದ ಪ್ರಾರಂಭದಲ್ಲಿ ಕೇವಲ ಸಂಭಾಷಣೆಗಷ್ಟೇ ಬಳಕೆಯಾಗುತ್ತಿತ್ತು. ನಂತರ ಸಾಮಾಜಿಕ ಜಾಲತಾಣ ಎನ್ನುವ ಮಾಯಾಲೋಕ ಶ್ವೇತಾಳನ್ನು ಬಿಗಿದಪ್ಪಿಕೊಳ್ಳುತ್ತದೆ. ತೀರಾ ವೈಯಕ್ತಿಕ ಎಂದೆನಿಸುವ ಸಾಕಷ್ಟು ಕ್ಲೋಸ್-ಅಪ್ ಫೊಟೋಗಳನ್ನು ಅವಳು ಫೇಸ್-ಬುಕ್ ಖಾತೆಗೆ ಪೋಸ್ಟ್ ಮಾಡಿರುತ್ತಾಳೆ. ನೋಡಲು ಸುಂದರವಾಗಿರುವ ಆಕೆಯ ಫೊಟೋಗಳನ್ನು ವಿಕೃತ ಮನಸ್ಸಿನವನೊಬ್ಬ ಡೌನ್-ಲೋಡ್ ಮಾಡಿಕೊಂಡು, ಅಸಹ್ಯ ರೀತಿಯಲ್ಲಿ ಚಿತ್ರಿಸಿ ಪೋಸ್ಟ್ ಮಾಡಿದ್ದಾನೆ. ಆ ಫೊಟೋ ನೋಡಿದ ಕೂಡಲೇ ಶ್ವೇತಾಳಿಗೆ ನಿಜವಾಗಿಯೂ ಅದು ತಾನೇ ಎಂದು ಭಾಸವಾಗಿದೆ. ಸಾರ್ವಜನಿಕವಾಗಿ ಹಾಗೂ ಸ್ನೇಹಿತರೆದುರು ತನ್ನ ಮಾನ-ಮಯರ್ಾದೆ ಹರಾಜಾಯಿತಲ್ಲ ಎಂದು ಅವಳು ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾಳೆ.
ಸ್ನೇಹಿತರೇ..................
ದಯವಿಟ್ಟು ಈ ಪ್ರಕರಣದ ತೀವ್ರತೆ ಹಾಗೂ ಆಳವನ್ನು ಸೂಕ್ಷ್ಮವಾಗಿ ಅರಿಯಿರಿ. ನಿಮ್ಮ ಫೇಸ್-ಬುಕ್ ಅಕೌಂಟ್ ಜೊತೆ ನಿಮ್ಮ ಅಕ್ಕ, ತಂಗಿ, ಸ್ನೇಹಿತೆಯರದ್ದು ಇರಬಹುದು. ಎಲ್ಲರಿಗೂ ಅವರವರದ್ದೇ ಆದ ಫೇಸ್-ಬುಕ್ ಸ್ನೇಹಿತರಿರುತ್ತಾರೆ. ಅವರಲ್ಲಿ ಕೆಲವಷ್ಟು ಜನ ಪರಿಚಿತರಿದ್ದರೆ, ಬಹಳಷ್ಟು ಜನ ಅಪರಿಚಿತರೇ ಇರುತ್ತಾರೆ. ಅಲ್ಲದೆ, ಸ್ನೇಹಿತರಲ್ಲದವರೂ ಕೂಡಾ ನಮ್ಮ ಅಕೌಂಟ್ಗೆ ಪ್ರವೇಶ ಪಡೆಯಬಹುದು, ಫೋಟೋಗಳನ್ನು ಜಾಲಾಡಬಹುದು ಅಲ್ಲವೇ? ಸುಳ್ಳು ಹೆಸರಿನಲ್ಲಿಯೂ ಖಾತೆ ಹೊಂದಿ, ಸ್ನೇಹಿತರಾಗಿರಬಹುದು. ಅವರ್ಯಾರು, ಎಲ್ಲಿಯವರು ಎನ್ನುವ ಚಿಕ್ಕ ಮಾಹಿತಿಯೂ ನಮಗಿರುವುದಿಲ್ಲ.
ಕೆಲವರು ಮಹಿಳೆಯರ ಫೊಟೋಗಳನ್ನು ಸಾಮಾಜಿಕ ಜಾಲತಾಣದಿಂದ ಡೌನ್-ಲೋಡ್ ಮಾಡಿಕೊಂಡು ಅಶ್ಲೀಲ ಜಾಲತಾಣಕ್ಕೆ ಅದನ್ನು ಅಪ್-ಲೋಡ್ ಮಾಡುತ್ತಿದ್ದಾರೆ. ಅದರಲ್ಲೂ-ಕಾಲೇಜ್ ಹುಡುಗಿಯರ ಫೋಟೋಗಳನ್ನೇ ಅವರು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಫೋಟೊಗಳನ್ನು ಎಲ್ಲಿಯೂ ಅನುಮಾನ ಬರದ ರೀತಿಯಲ್ಲಿ ಕ್ರಾಪ್ ಮಾಡಿ ಅಶ್ಲೀಲ ಚಿತ್ರಕ್ಕೆ ಜೋಡಿಸುತ್ತಾರೆ. ಈ ಕಾರ್ಯ ನಿರ್ವಹಿಸಲು ಪರಿಣಿತ ಸಿಬ್ಬಂದಿ ನೇಮಿಸಿಕೊಂಡು, ಒಂದೊಂದು ಫೊಟೋ ಕ್ರಾಪ್ ಮಾಡಲು 500, 1,000 ರೂ.ಗಳನ್ನು ನೀಡುತ್ತಾರೆ. ವಿದೇಶಗಳಲ್ಲಿ ಈ ವಿಕೃತ ಮನಸ್ಸಿನ ಜಾಲವೇ ಇದ್ದು, ಅದು ಈಗ ಭಾರತಕ್ಕೂ ವ್ಯಾಪಿಸಿದೆ. ಇದೊಂದು ದೊಡ್ಡ ವ್ಯವಹಾರವಾಗಿ ಮಾರ್ಪಟ್ಟಿದೆ.
ವಿಕೃತ ಕಾಮಿಗಳು ಸಾಮಾಜಿಕ ಜಾಲಾತಾಣದಲ್ಲಿ ಕ್ರಾಪ್ ಮಾಡಿರುವ ಫೊಟೋಗಳನ್ನು ಅಪ್ಲೋಡ್ ಮಾಡಿದರೆಂದರೆ, ಜಾಲತಾಣದಲ್ಲಿರುವ ನಮ್ಮೆಲ್ಲ ಸ್ನೇಹಿತರಿಗೆ ಆ ಚಿತ್ರ ರವಾನೆಯಾಗುತ್ತದೆ. ಇದರಿಂದಾಗಿ ಎಷ್ಟೋ ಸುಂದರ ಸಂಸಾರ ಹಾದಿಗೆ ಬಂದಿವೆ. ಎಷ್ಟೋ ಮುಗ್ದ ಹೆಣ್ಣು ಮಕ್ಕಳು ಜೀವ ತೆತ್ತುತ್ತಿದ್ದಾರೆ. ವಿವಾಹ ವಿಚ್ಛೆದನದಂತ ಪ್ರಕರಣಗಳು ಸರತಿ ಸಾಲಿನಲ್ಲಿ ನಡೆಯುತ್ತಿವೆ. ಅಲ್ಲದೆ, ನಿಶ್ಚಯವಾದ ವಿವಾಹವು ಮುರಿದು ದಿಕ್ಕಾಪಾಲಾಗಿ ಹೋಗಿವೆ...!!
ನಂತರ ನಾವು ಪೊಲೀಸ್ ದೂರು ನೀಡಿ ನ್ಯಾಯಕ್ಕಾಗಿ ಮೊರೆ ಹೋಗಬಹುದು. ಆದರೆ, ಕಳೆದುಕೊಂಡ ಮಾನ... ಬದುಕು... ಮರಳಿ ಬರಲು ಸಾಧ್ಯವೇ..? ಶ್ವೇತಾಳಿಗೆ ಆದ ಅವಮಾನ ನಮ್ಮ ಯಾವ ಸ್ನೇಹಿತೆಯರಿಗೂ, ಸಹೋದರಿಯರಿಗೂ ಆಗದಿರಲಿ ಎನ್ನುವ ಪುಟ್ಟ ಕಳಕಳಿ. ಈ ಕುರಿತು ಚಿಂತಿಸಿ, ಚರ್ಚಿಸಿ.... ಸರಿ ಎಂದೆನಿಸದರೆ ಈಗಾಗಲೇ ಸಾಮಾಜಿಕ ಜಾಲಾತಾಣಕ್ಕೆ ಹಾಕಿರುವ ಕ್ಲೋಸ್-ಅಪ್ ಫೊಟೋಗಳನ್ನು ರೀಮೂವ್ ಮಾಡಿ. ಇಲ್ಲ... ಸಾಮಾಜಿಕ ಜಾಲತಾಣವೆಂದರೆ ಇವೆಲ್ಲ ಸಾಮಾನ್ಯ ಎಂದೆನಿಸಿದರೆ ನಿಮ್ಮಿಷ್ಟ. ಯಾವುದಕ್ಕೂ ವಿವೇಚನಾ ಯುಕ್ತ ತೀರ್ಮಾನ ನಿಮ್ಮದಾಗಿರಲಿ...
--ನಾಗರಾಜ್ ಬಿಎನ್.
ಇದು ನನ್ನ 'ಪ್ರೀತಿ' ಜಗತ್ತು...!
ಬದುಕು ಒಂದು ಸುಂದರ ಕಾವ್ಯ. ಅಕ್ಷರ ಲೋಕದಲ್ಲಿ ಪದಗಳು ಮೆರೆದಾಡಿದರೆ ಬದುಕಿನ ಲೋಕದಲ್ಲಿ ಗುಣಗಳು ಮೆರೆದಾಡುತ್ತವೆ. ಸುಂದರ ಕಾವ್ಯದಲ್ಲಿರುವ ಒಂದೊಂದು ಪದಗಳು ಒಂದೊಂದು ಅರ್ಥ ಹೇಳುತ್ತ ಭಾವ ಭಿತ್ತಿಯಲ್ಲಿ ಅಚ್ಚೊತ್ತಿ ಬಿಡುತ್ತವೆ. ಕಣ್ಮುಚ್ಚಿದರೂ ನಿದ್ರೆಯಲ್ಲಿ ಬಂದು ಪರಿ ಪರಿಯಾಗಿ ಕಾಡುತ್ತವೆ. ಹಾಗೆಯೇ ಬದುಕೆಂಬ ಮಹಾಕಾವ್ಯದಲ್ಲೂ ಒಂದೊಂದು ಸಾತ್ವಿಕ ಗುಣ ಪ್ರಬುದ್ಧತೆಗೆ ಕೊಂಡೊಯ್ಯತ್ತದೆ. ಅರ್ಥಪೂರ್ಣ ಜೀವನಕ್ಕೆ ಸಾಕ್ಷೀಕರಿಸಿ, ಅಳಿದ ಮೇಲೂ ಉಳಿದವರ ನಾಲಿಗೆಯ ಮೇಲೆ ಹರಿದಾಡುವಂತೆ ಮಾಡುತ್ತದೆ.
ಹುಟ್ಟು-ಸಾವಿನ ನಡುವಿರುವ ಬದುಕು ಸಾಮಾನ್ಯವಾಗಿರದೆ, ಹೊಸತನದ ಹಾದಿಯಲ್ಲಿ ಸಾಗುತ್ತಿರಬೇಕು. ಇಲ್ಲಿ ಎಲ್ಲರೂ ಜೀವಿಸುತ್ತಾರೆ; ಬಾಳಿ ಬದುಕುತ್ತಾರೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾರೆ. ಆದರೆ ಜೀವಿತದ ಒಂದೇ ಒಂದು ಕುರುಹು ಸಹ ಅವರಿಂದ ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಹಾಗಂತ ನಾಲ್ಕೈದು ಅಂತಸ್ತಿನ ಮನೆಯನ್ನು ಕಟ್ಟಿಸಿರುತ್ತಾರೆ. ಮೂರ್ನಾಲ್ಕು ತಲೆಮಾರುಗಳು ಕೂತು ಉಂಡರೂ ಕರಗದ ಆಸ್ತಿ ಮಾಡಿರುತ್ತಾರೆ. ಶ್ರೀಮಂತಿಕೆ ವೈಭವವೇ ಅವರಲ್ಲಿ ಠೇಂಕರಿಸಿ ವಿಜೃಂಭಿಸಿರುತ್ತದೆ. ಆದರೆ, ಅದು ಅವರ ಸ್ವಂತಿಕೆಗಷ್ಟೇ ಸೀಮಿತವಾಗಿರುತ್ತವೆಯೇ ಹೊರತು, ಮಾನವೀಯತೆಗೆ ಬಳಕೆಯಾಗುವುದು ತೀರಾ ಕಡಿಮೆಯೇ. ಪರಿಣಾಮ ಅಳಿದ ಮೇಲೆ, ಅಂತಸ್ತಿನ ಮನೆಯ ಪಡಶಾಲೆಯಲ್ಲಿ ಭಾವಚಿತ್ರಕ್ಕೊಂದು ಜಾಗವಷ್ಟೇ....!
ಬದುಕಿನ ಸುಂದರ ಮಹಾಕಾವ್ಯದಲ್ಲಿ ಭಾವಚಿತ್ರವಾಗಷ್ಟೇ ಇರಬಾರದು. ಸರ್ವರ ಹೃದಯಲ್ಲೂ ಜೀವಂತಿಕೆಯ ಮೂರ್ತಿಯಾಗಿ ಸದಾ ನೆನಪಿನಲ್ಲಿರುವಂತಾಗಬೇಕು. ತಾಮಸ ಗುಣಗಳನ್ನು ಸಂಹರಿಸಿ, ಸಾತ್ವಿಕ ಗುಣಗಳ ಅನುಯಾಯಿಗಳಾಗಬೇಕು. ಎಲ್ಲರೂ ನನ್ನವರು ಎನ್ನುವ ಭಾವ ಅಂಕುರಿಸಿ, ಪ್ರೀತಿಯ ಸಾಮ್ರಾಜ್ಯ ಸ್ಥಾಪಿಸಬೇಕು. ಆ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದಾಡಬೇಕು. ಸುತ್ತಮುತ್ತಲಿನವರನ್ನು ವಿಶ್ವಾಸದ ತೆಕ್ಕೆಯಲ್ಲಿ ಬಂಧಿಸಬೇಕು. ಸಾಮರಸ್ಯದ ಹಾದಿ ತುಳಿದು, ಸಹಬಾಳ್ವೆಯ ಮಂತ್ರ ಜಪಿಸಬೇಕು. ಆಗ ಅಲ್ಲಿನ ವಾತಾವರಣ ನಿಜಕ್ಕೂ ನಂದನವನ. ಸ್ವರ್ಗ ಸಮಾನ...!
ಶ್ರೀಮಂತಿಕೆಯ ದರ್ಪವಿಲ್ಲದ ಆ ಪ್ರೀತಿ ಸಾಮ್ರಾಜ್ಯದಲ್ಲಿ ಎಲ್ಲರೂ ಸುಖಿಗಳೇ; ಎಲ್ಲರೂ ಒಬ್ಬರಿಗೊಬ್ಬರು ಪ್ರೀತಿ ಪಾತ್ರರೆ. ರಾಗ-ದ್ವೇಷಗಳು ಅಲ್ಲಿ ಮಖಾಡೆ ಮಲಗಿ, ಪ್ರೀತಿ-ವಿಶ್ವಾಸಗಳು ಸದಾ ಎಚ್ಚರದಿಂದಿರುತ್ತವೆ. ತಪ್ಪು ಮಾಡಲು ಅಲ್ಲಿ ಅವಕಾಶವೇ ಇಲ್ಲ. ಇದ್ದರೂ ತಿದ್ದಿ-ತೀಡುವ ಮನಸ್ಸುಗಳು ಸುತ್ತಲೇ ಇದ್ದು, ನಮ್ಮ ಕಿವಿ ಹಿಂಡುತ್ತಲೇ ಇರುತ್ತವೆ. ಸೋಲು-ಗೆಲುವಿಲ್ಲದ ಈ ಪ್ರೀತಿ ಜಗತ್ತಲ್ಲಿ ಪ್ರೀತಿಯೇ ಉಸಿರಾಗಿ, ಪ್ರೀತಿಯೇ ಬದುಕಾಗಿ, ಪ್ರೀತಿಯೇ ಧ್ಯೇಯವಾಗಿ ಬದಲಾಗಿ ಬಿಡುತ್ತದೆ
-ನಾಗರಾಜ್ ಬಿ.ಎನ್.
ಹೆಣ್ಣು ಜಗದ ಕಣ್ಣು...
ಹೆಣ್ಣು ಅಬಲೆಯೇ...? ಮಂದಗಾಮಿಯೇ...? ಖಂಡಿತ ಅಲ್ಲ. ಅವಳು ಸಹನಾ ಮೂರ್ತಿ ... ಕ್ಷಮಯಾ ಧರಿತ್ರಿ... ಕಾದಾಟಕ್ಕೆ ನಿಂತರೆ ಎದುರಾಳಿಯನ್ನೇ ಸದೆ ಬಡೆಯುವಷ್ಟು ಪ್ರಚಂಡ ಶಕ್ತಿಯನ್ನು ಹುದುಗಿಟ್ಟುಕೊಂಡ ಅಪ್ರತಿಮ ಶೂರಳು... ಹಾಗೆ ಧೀರಳು ಹೌದು.
'ಹಾಗಾದರೆ ಸಮಾಜ ಯಾಕಾಗಿ ಅವಳನ್ನು ಹೀನಾಯವಾಗಿ ಕಾಣುತ್ತದೆ?' ಎನ್ನುವ ಸಾಮಾನ್ಯ ಪ್ರಶ್ನೆಗೆ ಉತ್ತರ, ಎಲ್ಲರಿಗೂ ತಿಳಿದಿರುವ ಹಾಗೆ 'ಪುರುಷ ಸಮಾಜ' ಮನಸ್ಥಿತಿ. ಹೆಣ್ಣಿಗೆ ಗೌರವ ಕೊಡದಿದ್ದಷ್ಟು `ಹೀನ ಮನಸ್ಥಿತಿ' ಪುರುಷ ಸಮಾಜದ್ದೇ...? ಈ ಪ್ರಶ್ನೆಗೆ ಹೆಣ್ಣಿಗೆ ಗೌರವ ನೀಡದ ಸಮಾಜ ಹಾಗೂ ಪುರುಷನೇ ಉತ್ತರ ನೀಡಬೇಕು.
ಸರಿ, ಇದು ಒತ್ತಟ್ಟಿಗಿರಲಿ.. ಮನುಷ್ಯ ಜೀವನದಲ್ಲಿ ಮಹಿಳೆಯ ಪಾತ್ರವೇನು? ಅವಳ ಸಮಸ್ಯೆಗಳೇನು? ಅವಳ ಆಕಾಂಕ್ಷೆಗಳೇನು? ಎನ್ನುವ ಕುರಿತಾದರೂ 'ಪುರುಷ ಸಮಾಜ' ಚಿಂತಿಸಿದೆಯೇ...? ಚಿಂತಿಸಿದ್ದೇ ಆಗಿದ್ದರೆ, ನಮ್ಮ ಸಮಾಜದಲ್ಲಿರುವ ಸಹೋದರಿಯರು, ಸ್ನೇಹಿತೆಯರು, ತಾಯಂದಿರು ಅತ್ಯಾಚಾರ, ದೌರ್ಜನ್ಯ, ಮಾನಸಿಕ ಕಿರುಕುಳದಂತ ಪ್ರಕರಣಕ್ಕೆ ಒಳಗಾಗುತ್ತಿರಲಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕಾಗಿ ಪುರುಷನಿಂದ ಚಿತ್ರಹಿಂಸೆ ಪಡೆಯಬೇಕಾಗಿರಲಿಲ್ಲ.(ಕೆಲವು ಮಹಿಳೆಯರು ಹಾಗೂ ಪುರುಷರು ಇದಕ್ಕೆ ಅಪವಾದದಂತಿದ್ದಾರೆ...!)
ಹೆಣ್ಣು ದೈವೀ ಸ್ವರೂಪಳು. ಅಖಿಲಾಂಡಕೋಟಿ ಬ್ರಹ್ಮಾಂಡ ಶಕ್ತಿಯನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡ ಪ್ರಚಂಡ ಶಕ್ತಿದಾತೆ. ಅವಳಿಂದಲೇ ಇಹವು.. ಅವಳಿಂದಲೇ ಪರವು. ಮಾತೃ ಹೃದಯ ಹೊಂದಿರುವ ಅವಳು ಪೂಜನೀಯ ವ್ಯಕ್ತಿ. ಪ್ರೇಮಿಯ ಆರಾಧನೆಗೆ ಒಳಪಡುವ ಆರಾಧನೀಯ ಮೂರ್ತಿ. ಬದುಕನ್ನು ತಿದ್ದಿ-ತೀಡಿ ಅದಕ್ಕೊಂದು ರೂಪ ನೀಡುವ ಅಪ್ರತಿಮ ಕಲಾವಿದೆ. ಸರ್ವರ ಪ್ರೀತಿಗೂ ಪಾತ್ರಳಾಗುವ ಸರ್ವೋತ್ತಮೆ. ಮಿಗಿಲಾಗಿ ತಾಳ್ಮೆ, ಸಹನೆಯನ್ನು ಮೈಗೂಡಿಸಿಕೊಂಡ ಸಹನಾಶೀಲೆ..!
ಸುಮ್ಮನೆ ಕಲ್ಪಿಸಿಕೊಳ್ಳಿ. ಪ್ರಪಂಚದಲ್ಲಿ ಹೆಣ್ಣೇ ಇಲ್ಲದಿದ್ದರೆ ಏನಾಗುತ್ತಿತ್ತು..? ಎಂದು. ಇಲ್ಲ.... ಕಲ್ಪನೆಗೂ ನಿಲುಕದ ಕಲ್ಪನೆಯದು...! ಹೆಣ್ಣಿಲ್ಲದೆ ಈ ಪ್ರಪಂಚವೇ ಇಲ್ಲ. ಪ್ರತಿಯೊಂದು ಜೀವ ಜಂತುಗಳ ಹುಟ್ಟಿಗೂ ಹೆಣ್ಣೆ ಕಾರಣಳು. ಹಾಗಂತ 'ಇದರಲ್ಲಿ ಗಂಡಿನ ಪಾತ್ರವೇನೂ ಇಲ್ಲವೇ?' ಎಂದು ಕೇಳಬಹುದು. ಆದರೆ, ಸೃಷ್ಟಿ ಕ್ರಿಯೆಯಲ್ಲಿ ಗಂಡಿನದು ಕೇವಲ `ನಿಮಿತ್ತ' ಮಾತ್ರ. ಹಾಗಂತ ಬದುಕಿನ ವಿವಿಧ ಮಜಲಿನಲ್ಲಿ ಗಂಡಿನ ಪಾತ್ರವೂ ಹೆಣ್ಣಿನಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ ಎನ್ನುವುದು ಬೇರೆ ಮಾತು.
ಬದುಕಿನ ಸರ್ವತೋಮುಖ ಏಳ್ಗೆಗೆ ಹೆಣ್ಣಿನ ಪಾತ್ರ ಅತೀ ಅವಶ್ಯ. ಅವಳು ಸಹನಾಶೀಲಳಾಗಿದ್ದು, ಬದುಕಲ್ಲಿ ಎದುರಾಗುವ ಎಲ್ಲ ಕಷ್ಟಗಳನ್ನು, ನೋವುಗಳನ್ನು ಹೊರ ಪ್ರಪಂಚಕ್ಕೆ ತೋರ್ಪಡಿಸದೆ ತಾನೊಬ್ಬಳೇ ಅನುಭವಿಸುತ್ತಿರುತ್ತಾಳೆ. ನೋವನ್ನು ನಲಿವಾಗಿ ಪರಿವತರ್ತಿಸಿಕೊಳ್ಳಲು ಹೆಣಗಾಡುತ್ತಾಳೆ. ತನ್ನ ಕುಟುಂಬ ವರ್ಗದವರ ಹಿತ ಕಾಯಲು ಬದುಕನ್ನೇ ಪಣಕ್ಕಿಟ್ಟು ಹಗಲು ರಾತ್ರಿ ಹೋರಾಡುತ್ತಿರುತ್ತಾಳೆ. ನಂಬಿದವರ ನಂಬಿಕೆಯನ್ನು ಕಾಯ್ದು, ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ಅರ್ಥಪೂರ್ಣವಾಗಿ ಬಾಳ್ವೆ ನಡೆಸುತ್ತಾಳೆ. ಆ ಕಾರಣಕ್ಕೆ ಹಿರಿಯರು ಹೇಳಿದ್ದು, ಒಂದು ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇದ್ದೇ ಇರುತ್ತಾಳೆ ಎಂದು.
ಹೀಗೊಂದು ವಾಸ್ತವ....!
ನವಮಾಸ ಕಾಲ ಮಗುವನ್ನು ತನ್ನ ಉದರದಲ್ಲಿಟ್ಟುಕೊಂಡು ಕಾಣದ ನೋವನ್ನು ಅನುಭವಿಸುವ ಆ ತಾಯಿಯ ಯಾತನೆ ನಿಜಕ್ಕೂ ಕಲ್ಪನಾತೀತ. ಮಗುವಿನ ಅಳುವಿನ ಕೂಗು ಕಿವಿಗೆ ಬೀಳುತ್ತಿದ್ದಂತೆ ತನ್ನೆಲ್ಲ ನೋವನ್ನು ಆಕೆ ಮರೆತು ಬಿಡುತ್ತಾಳೆ. ನೋವಿನ ಕಣ್ಣೀರು ಕ್ಷಣಮಾತ್ರದಲ್ಲಿ ಆನಂದ ಭಾಷ್ಪವಾಗಿ ಬದಲಾಗಿಬಿಡುತ್ತದೆ. ಯಮ ಯಾತನೆಯಲ್ಲೂ ಬದುಕಿ ಸಾರ್ಥಕ್ಯತೆ ಅನುಭವಿಸುವ ಅಪರೂಪದ ಘಳಿಗೆಯದು.
ನೋವಲ್ಲೂ ನಗು ಕಂಡವಳು...
ಈ ಕುರಿತು ತಾಯಿಯೊಬ್ಬಳು ಹೇಳಿದ ಮಾತು ನೆನಪಿಗೆ ಬರುತ್ತದೆ.... 'ಗರ್ಭಧರಿಸಿದ ಪ್ರಾರಂಭದಿಂದ ಒಂದಿಲ್ಲೊಂದು ಸಮಸ್ಯೆಯನ್ನು ಅನುಭವಿಸುತ್ತಲೇ ಒಂಭತ್ತು ತಿಂಗಳು ಕಳೆಯುತ್ತೇವೆ. ತಿನ್ನುವ ಬಯಕೆ ದಿನದಿಂದ ದಿನಕ್ಕೆ ಮಿತಿ ಮೀರುತ್ತವೆ. ಹಾಗಂತ ಸಿಕ್ಕಿದ್ದನ್ನೆಲ್ಲ ತಿನ್ನಲು ಆಗದು. ಹೊಟ್ಟೆಯಲ್ಲಿರುವ ಪುಟ್ಟ ಪಾಪುವಿಗೆ ಏನಾಗುತ್ತದೋ ಎನ್ನುವ ಭಯ. ಕಾಲ ಕಾಲಕ್ಕೆ ವೈದ್ಯರಲ್ಲಿಗೆ ಭೇಟಿ ನೀಡಬೇಕು. ಅವರು ಹೇಳಿದ ಹಾಗೆ ಅನುಸರಿಸಬೇಕು. ಕಡೆಗೊಂದು ದಿನ ಪಾಪು ಬರುವ ಮುನ್ಸೂಚನೆ ತೀರಾ ನೋವಿನ ಮೂಲಕ ತಿಳಿದು ಬರುತ್ತದೆ. ಪ್ರಾಣವನ್ನೇ ಕಿತ್ತು ತಿನ್ನುವ ನೋವದು. ಏಕಕಾಲದಲ್ಲಿ ನೂರಾರು ಎಲುಬುಗಳು ಮುರಿದಾಗ ಉಂಟಾಗುವಂತ ನೋವು, ಪಾಪು ಜನಿಸುವ ಸಂದರ್ಭದಲ್ಲಿ ಉದ್ಭವಿಸುತ್ತದೆ. ಆ ನೋವಿನಲ್ಲೂ ಸಂತೃಪ್ತ ಭಾವ ಮೇಳೈಸುತ್ತದೆ. ಬದುಕು ಸಾರ್ಥಕತೆ ಪಡೆಯುತ್ತದೆ'
ಪ್ರಕೃತಿ ಸಮಾನಳಾದ ಹೆಣ್ಣನ್ನು ಪೂಜಿಸೋಣ.... ಆರಾಧಿಸೋಣ.... ಗೌರಸವಿಸೋಣ... ಹಾಗೆ ಅವಳಿಂದ ಬದುಕನ್ನು ಉನ್ನತೀಕರಿಸಿಕೊಳ್ಳೊಣ.
-ನಾಗರಾಜ್ ಬಿ.ಎನ್ 
'ಇಷ್ಟ'ದ ಹುಡುಕಾಟದಲ್ಲಿ...!!
'ಇಷ್ಟ ಪಟ್ಟ ವಸ್ತು' ಬೇಕು ಎಂದಾಗ ಸಿಗದು. ಆದರೆ, ಬೇಡ ಎಂದೆನಿಸಿದಾಗ ಓಡೋಡಿ ಬಂದು ಅಪ್ಪಿಕೊಳ್ಳಲು ಹವಣಿಸುತ್ತದೆ. ಅದಾಗಲೇ ಬದುಕಿನ ಪಯಣ ಬಹು ದೂರ ಸಾಗಿ, ಹೊಸತನಕ್ಕೆ ಹೊಂದಿಕೊಂಡಿರುತ್ತದೆ.
ಇದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಸಾಮಾನ್ಯವಾಗಿ ಸರಿದು ಹೋಗುವ ಘಟನೆಗಳು. ಸುಮ್ಮನೆ ಒಂದು ಬಾರಿ, ನಿಂತ ಜಾಗದಲ್ಲಿಯೇ ಕಣ್ಮುಚ್ಚಿಕೊಂಡು `ಈವರೆಗೆ ಸಾಗಿ ಬಂದ ದಾರಿ'ಯನ್ನು ನೆನಪಿಸಿಕೊಳ್ಳಿ. ಅಲ್ಲಿ ಏನುಂಟು... ಏನಿಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಗ್ರಹಿಸಿ. ಸುಖ, ದುಃಖ, ನೋವು, ನಲಿವು, ನಿರಾಶೆ, ತುಂಟಾಟ, ಹುಡುಗಾಟಿಕೆ ಹೀಗೆ... ಒಂದೊಂದು ಸನ್ನಿವೇಶಗಳು ಸಾಲು ಸಾಲಾಗಿ ಕಣ್ಮುಂದೆ ಮೆರವಣಿಗೆ ಹೊರಡುತ್ತವೆ.
ಸಂತೋಷದ ಆ ದಿನಗಳು ಮತ್ತೆ ಬಾರದೆ ಎಂದೆನಿಸುತ್ತಿರುವಾಗಲೇ, ಧುತ್ತೆಂದು... ಬದುಕನ್ನೇ ಕಿತ್ತು ತಿನ್ನಲು ಹೊರಟ ಘೋರ ಘಟನೆಗಳು ನೆನಪಿನಂಗಳದಲ್ಲಿ ಪುಟಿದೇಳುತ್ತವೆ. ನಲಿವಿನ ಜೊತೆ ನೋವು ಸಹ ಆ 'ನೆನಪಿನ ಲೋಕ'ದಲ್ಲಿ ಸರಿಸಮಾನವಾಗಿ ಪಾಲುದಾರಿಕೆ ಪಡೆಯುತ್ತದೆ.
ಇಷ್ಟಪಟ್ಟಿದ್ದು ಬೇಕು ಎನ್ನುವ ಕಾರಣಕ್ಕೆ ಹಾಕಿದ ಮುಖವಾಡಗಳು ನೆನಪಿನ ಬುತ್ತಿಯಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದು ಬಿಟ್ಟಿರುತ್ತವೆ. ಆ 'ಇಷ್ಟ' ಬದುಕಿಗೊಂದು ಅರ್ಥ ಕಲ್ಪಿಸಿಕೊಡುವಲ್ಲಿಯೂ ಸಹಕಾರಿಯಾಗುತ್ತದೆ ಹಾಗೆಯೇ, ಬದುಕನ್ನು ದುರಂತಕ್ಕೆ ನೂಕುವಲ್ಲಿಯೂ ಕಾಣಿಕೆ ನೀಡುತ್ತದೆ.
ಏನೇ ಇರಲಿ, ಗತಿಸಿದ ದಿನಗಳಲ್ಲಿ ಹಾತೊರೆದ ವಸ್ತು, ಪ್ರಸ್ತುತ ದಿನಗಳಲ್ಲಿ ಕೆಲವು ಬಾರಿ ಬೇಡವೆಂದರೂ ಹತ್ತಿರಕ್ಕೆ ಬಂದು ಬಿಗಿದಪ್ಪಿಕೊಳ್ಳುತ್ತವೆ. ಅಷ್ಟರಲ್ಲಾಗಲೇ ಆ 'ಇಷ್ಟ' ಇನ್ನೊಂದು ರೂಪದಲ್ಲಿ ಬಂದು ಬದುಕನ್ನು ಹಸನಾಗಿಸಿರುತ್ತದೆ. ಕಾಲಚಕ್ರದ ಉರುಳಾದಲ್ಲಿ ಕೆಲವು 'ಬೇಕು'ಗಳ ಪ್ರಾಮುಖ್ಯತೆ ಗೌಣವಾಗುತ್ತ ಸಾಗುತ್ತದೆ. ಹಾಗಾದರೆ, 'ಇಷ್ಟ' ಎನ್ನುವುದು ಗೌಣವೇ....?
(ಇಷ್ಟ-ಅವರವರ ಭಾವಕ್ಕೆ ಬಿಟ್ಟಿದ್ದು )
-ನಾಗರಾಜ್ ಬಿ.ಎನ್. 

ಬುಧವಾರ, ನವೆಂಬರ್ 25, 2015

ಪಾಪ ಪ್ರಜ್ಞೆ ಕಾಡಿದಾಗ....!
ಬದುಕು ಒಂದು ಸುಂದರ ಕಾವ್ಯ. ಅಕ್ಷರ ಲೋಕದಲ್ಲಿ ಪದಗಳು ಮೆರೆದಾಡಿದರೆ ಬದುಕಿನ ಲೋಕದಲ್ಲಿ ಗುಣಗಳು ಮೆರೆದಾಡುತ್ತವೆ. ಸುಂದರ ಕಾವ್ಯದಲ್ಲಿರುವ ಒಂದೊಂದು ಪದಗಳು ಒಂದೊಂದು ಅರ್ಥ ಹೇಳುತ್ತ ಭಾವ ಭಿತ್ತಿಯಲ್ಲಿ ಅಚ್ಚೊತ್ತಿ ಬಿಡುತ್ತವೆ. ಕಣ್ಮುಚ್ಚಿದರೂ ನಿದ್ರೆಯಲ್ಲಿ ಬಂದು ಪರಿ ಪರಿಯಾಗಿ ಕಾಡುತ್ತವೆ. ಹಾಗೆಯೇ ಬದುಕೆಂಬ ಮಹಾಕಾವ್ಯದಲ್ಲೂ ಒಂದೊಂದು ಸಾತ್ವಿಕ ಗುಣ ಪ್ರಬುದ್ಧತೆಗೆ ಕೊಂಡೊಯ್ಯತ್ತದೆ. ಅರ್ಥಪೂರ್ಣ ಜೀವನಕ್ಕೆ ಸಾಕ್ಷೀಕರಿಸಿ, ಅಳಿದ ಮೇಲೂ ಉಳಿದವರ ನಾಲಿಗೆಯ ಮೇಲೆ ಹರಿದಾಡುವಂತೆ ಮಾಡುತ್ತದೆ.
ಹುಟ್ಟು-ಸಾವಿನ ನಡುವಿರುವ ಬದುಕು ಸಾಮಾನ್ಯವಾಗಿರದೆ, ಹೊಸತನದ ಹಾದಿಯಲ್ಲಿ ಸಾಗುತ್ತಿರಬೇಕು. ಇಲ್ಲಿ ಎಲ್ಲರೂ ಜೀವಿಸುತ್ತಾರೆ; ಬಾಳಿ ಬದುಕುತ್ತಾರೆ. ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾರೆ. ಆದರೆ ಜೀವಿತದ ಒಂದೇ ಒಂದು ಕುರುಹು ಸಹ ಅವರಿಂದ ಬಿಟ್ಟು ಹೋಗಲು ಸಾಧ್ಯವಾಗುವುದಿಲ್ಲ. ಹಾಗಂತ ನಾಲ್ಕೈದು ಅಂತಸ್ತಿನ ಮನೆಯನ್ನು ಕಟ್ಟಿಸಿರುತ್ತಾರೆ. ಮೂರ್ನಾಲ್ಕು ತಲೆಮಾರುಗಳು ಕೂತು ಉಂಡರೂ ಕರಗದ ಆಸ್ತಿ ಮಾಡಿರುತ್ತಾರೆ. ಶ್ರೀಮಂತಿಕೆ ವೈಭವವೇ ಅವರಲ್ಲಿ ಠೇಂಕರಿಸಿ ವಿಜೃಂಭಿಸಿರುತ್ತದೆ. ಆದರೆ, ಅದು ಅವರ ಸ್ವಂತಿಕೆಗಷ್ಟೇ ಸೀಮಿತವಾಗಿರುತ್ತವೆಯೇ ಹೊರತು, ಮಾನವೀಯತೆಗೆ ಬಳಕೆಯಾಗುವುದು ತೀರಾ ಕಡಿಮೆಯೇ. ಪರಿಣಾಮ ಅಳಿದ ಮೇಲೆ, ಅಂತಸ್ತಿನ ಮನೆಯ ಪಡಶಾಲೆಯಲ್ಲಿ ಭಾವಚಿತ್ರಕ್ಕೊಂದು ಜಾಗವಷ್ಟೇ....!
ಬದುಕಿನ ಸುಂದರ ಮಹಾಕಾವ್ಯದಲ್ಲಿ ಭಾವಚಿತ್ರವಾಗಷ್ಟೇ ಇರಬಾರದು. ಸರ್ವರ ಹೃದಯಲ್ಲೂ ಜೀವಂತಿಕೆಯ ಮೂತರ್ಿಯಾಗಿ ಸದಾ ನೆನಪಿನಲ್ಲಿರುವಂತಾಗಬೇಕು. ತಾಮಸ ಗುಣಗಳನ್ನು ಸಂಹರಿಸಿ, ಸಾತ್ವಿಕ ಗುಣಗಳ ಅನುಯಾಯಿಗಳಾಗಬೇಕು. ಎಲ್ಲರೂ ನನ್ನವರು ಎನ್ನುವ ಭಾವ ಅಂಕುರಿಸಿ, ಪ್ರೀತಿಯ ಸಾಮ್ರಾಜ್ಯ ಸ್ಥಾಪಿಸಬೇಕು. ಆ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆದಾಡಬೇಕು. ಸುತ್ತಮುತ್ತಲಿನವರನ್ನು ವಿಶ್ವಾಸದ ತೆಕ್ಕೆಯಲ್ಲಿ ಬಂಧಿಸಬೇಕು. ಸಾಮರಸ್ಯದ ಹಾದಿ ತುಳಿದು, ಸಹಬಾಳ್ವೆಯ ಮಂತ್ರ ಜಪಿಸಬೇಕು. ಆಗ ಅಲ್ಲಿನ ವಾತಾವರಣ ನಿಜಕ್ಕೂ ನಂದನವನ. ಸ್ವರ್ಗ ಸಮಾನ...!
ಶ್ರೀಮಂತಿಕೆಯ ದರ್ಪವಿಲ್ಲದ ಆ ಪ್ರೀತಿ ಸಾಮ್ರಾಜ್ಯದಲ್ಲಿ ಎಲ್ಲರೂ ಸುಖಿಗಳೇ; ಎಲ್ಲರೂ ಒಬ್ಬರಿಗೊಬ್ಬರು ಪ್ರೀತಿ ಪಾತ್ರರೆ. ರಾಗ-ದ್ವೇಷಗಳು ಅಲ್ಲಿ ಮಖಾಡೆ ಮಲಗಿ, ಪ್ರೀತಿ-ವಿಶ್ವಾಸಗಳು ಸದಾ ಎಚ್ಚರದಿಂದಿರುತ್ತವೆ. ತಪ್ಪು ಮಾಡಲು ಅಲ್ಲಿ ಅವಕಾಶವೇ ಇಲ್ಲ. ಇದ್ದರೂ ತಿದ್ದಿ-ತೀಡುವ ಮನಸ್ಸುಗಳು ಸುತ್ತಲೇ ಇದ್ದು, ನಮ್ಮ ಕಿವಿ ಹಿಂಡುತ್ತಲೇ ಇರುತ್ತವೆ. ಸೋಲು-ಗೆಲುವಿಲ್ಲದ ಈ ಪ್ರೀತಿ ಜಗತ್ತಲ್ಲಿ ಪ್ರೀತಿಯೇ ಉಸಿರಾಗಿ, ಪ್ರೀತಿಯೇ ಬದುಕಾಗಿ, ಪ್ರೀತಿಯೇ ಧ್ಯೇಯವಾಗಿ ಬದಲಾಗಿ ಬಿಡುತ್ತದೆ.
-ನಾಗರಾಜ್ ಬಿ.ಎನ್. 
ತೋಳ ತೆಕ್ಕೆಯಲಿ ಬಂಧಿಯಾಗಲಿ....!
                                                                                                 (ಮಳೆ ಹುಡುಗಿ ನೆನಪಿಂದ)
ರೋಬ್ಬರಿ ಅರವತ್ಮೂರು ದಿನಗಳ ನಂತರ ನನ್ನೂರಿಗೆ(ಕುಮಟಾ) ತೆರಳುತ್ತಿದ್ದೇನೆ. ಏನೋ ಅವ್ಯಕ್ತ ಆನಂದ ಮೈ-ಮನವೆಲ್ಲ ಆವರಿಸಿ ಬಿಟ್ಟಿದೆ. ಕುಟುಂಬದವರನ್ನು ಸೇರಿಕೊಳ್ಳುತ್ತೇನೆಂಬ ಸಂತೋಷ ಒಂದೆಡೆ ಇದ್ದರೆ, ನನ್ನವಳು ಮುನಿಸಿಕೊಂಡು ಕಣ್ಣ ಮುಚ್ಚಾಲೆಯಾಟ ಆಡುತ್ತಿದ್ದಾಳೆ ಅನ್ನುವ ಬೇಸರ ಕೂಡಾ ಇನ್ನೊಂದೆಡೆ. ಹಾಗೆಯೇ, ನನ್ನಾತ್ಮ ಬಂಧು ಜೊತೆಯಿಲ್ಲ ಅನ್ನೋ ಕೊರಗು ಮತ್ತೊಂದೆಡೆ.
ನೋವು-ನಲಿವಿನ ದ್ವಂದ್ವದ ನಡುವೆಯೇ ಮನೆ ಕಡೆಗೆ ಹೆಜ್ಜೆ ಇಡುತ್ತಿದ್ದೇನೆ. ಅತ್ತ ಮಲೆನಾಡೂ ಅಲ್ಲದ, ಇತ್ತ ಬಯಲು ಸೀಮೆಯೂ ಅಲ್ಲದ ನನ್ನೂರಿನ ಹಾದಿಯಲ್ಲಿ ಪಯಣಿಸುವುದೇ ಒಂದು ವಿಶಿಷ್ಟ ಅನುಭೂತಿ. ಹುಬ್ಬಳ್ಳಿ-ಕುಮಟಾ ಮಾರ್ಗದ ಹೆದ್ದಾರಿಯ ಅಕ್ಕಪಕ್ಕದ ಸಾಲು ಸಾಲು ಮರಗಳು ಕಣ್ಮನಗಳನ್ನು ತಣಿಸುತ್ತವೆ. ಒಂದೊಂದು ಮರಗಳು ಮುಗಿಲನ್ನೆ ಮುತ್ತಿಕ್ಕಿದಂತೆ ಭಾಸವಾಗುತ್ತವೆ. ಹಚ್ಚ-ಹಸಿರಿನ ಕಾನನದ ನಡುವೆ, ಏರು-ತಗ್ಗುಗಳನ್ನು ದಾಟುತ್ತ ಏದುಸಿರು ಬಿಟ್ಟು ಸಾಗುವ ಬಸ್ನ ಮೇಲಿನ ಪಯಣ ವರ್ಣನಾತೀತ. ಅದು ಕೇವಲ ಅನುಭವಕ್ಕೆ ಮಾತ್ರ ಸೀಮಿತಿವೇನೋ...!
ನನ್ನೂರು ಕುಮಟಾ ಸಮೀಪಿಸುತ್ತಿದ್ದಂತೆ ಆ ನೆಲದ ಮಣ್ಣಿನ ಘಮ ತಂಗಾಳಿಯಲ್ಲಿ ಬೆರೆತು ಮೈ-ಮನವೆಲ್ಲ ಆವರಿಸಿಬಿಡುತ್ತದೆ. ಅರೆ ಕ್ಷಣದಲ್ಲಿ ನನ್ನ ಜೀವನದಿ ಅಘನಾಶಿನಿ ತನ್ನೆರಡು ತೋಳುಗಳನ್ನು ಚಾಚಿ ತಬ್ಬಿಕೊಳ್ಳುವಂತೆ ದೂರದಿಂದಲೇ ಸ್ವಾಗತಿಸುತ್ತಾಳೆ. ಇವೆಲ್ಲವನ್ನು ಸುಮ್ಮನೇ ನೋಡುತ್ತ, ಅನುಭವಿಸುತ್ತ ಕಣ್ಮುಚ್ಚಿಕೊಂಡು ಬಿಡುತ್ತೇನೆ. ಅಮ್ಮನ ಮಡಿಲಲ್ಲಿ ಹಾಲುಗಲ್ಲದ ಹಸುಗೂಸು ಪವಡಿಸಿದಂತೆ...! ತಾದಾತ್ಮತೆಯಿಂದ ಗಟ್ಟಿಯಾಗಿ ಉಸಿರೆಳೆದುಕೊಂಡು ಭಾವ ಪರಾಕಾಷ್ಠೆಗೆ ಜಾರಿ ಬಿಡುತ್ತೇನೆ.
ಇದು ಪ್ರತಿ ಬಾರಿ ಊರಿಗೆ ಹೋಗುವಾಗ ಆಗುವ ಸಾಮಾನ್ಯ ಭಾವಾನುಭವ. ಆದರೆ, ಈ ಬಾರಿ ಆ ಭಾವಕ್ಕೆ ನನ್ನವಳು ಜೊತೆಯಾಗಿ ಇನ್ನಷ್ಟು ಕಿಚ್ಚು ಹಚ್ಚಿಸುತ್ತಾಳೆ ಎಂದು ಕೊಂಡಿದ್ದೆ. ಆದರೆ, ಅವಳು ಕಳೆದ ಹದಿನೈದು ದಿನಗಳಿಂದ ಯಾಕೋ ಮುನಿಸಿಕೊಂಡಿದ್ದು, ಬರಲೊಲ್ಲೆ ಎನ್ನುತ್ತಿದ್ದಾಳಂತೆ. ಆದರೂ.... ಆಗೊಮ್ಮೆ, ಈಗೊಮ್ಮೆ ಎಂದು ಬಂದು ಹೋಗುತ್ತಿದ್ದಾಳೆನ್ನುವ ಅಮ್ಮನ ನುಡಿ ತುಸು ಸಾಂತ್ವನ ತಂದಿದೆ.
ಪ್ರತಿ ಬಾರಿ ಜೂನ್ ಅಂತ್ಯದ ಸಮಯಕ್ಕೆ ನಾ ನನ್ನೂರಿಗೆ ಕಾಲಿಡುತ್ತಿದ್ದೆ. ಈ ಬಾರಿ ಹೋಗಲಿಲ್ಲ ಎನ್ನುವ ಕಾರಣಕ್ಕೆ `ನನ್ನವಳು' ಮುನಿಸಿಕೊಂಡಿರಬಹುದು ಎಂದು ಭಾವಿಸಿದ್ದೇನೆ. ಇನಿಯನ ವಿರಹದ ತಾಪದಲ್ಲಿ ನೊಂದು ಬೆಂದ ಅವಳು, ಇನ್ನಿಲ್ಲದಂತೆ ಬಗೆ ಬಗೆಯಾಗಿ ಪರಿತಪಿಸುತ್ತಿರಬಹುದು. ವಿರಹದ ತಾಪದಿಂದಾಗಿಯೇ ಅವಳಲ್ಲಿರುವ 'ಜೀವ ಜಲ'ವೆಲ್ಲ ಬತ್ತಿ ಹೋಗಿದೆ ಎಂದೆನಿಸುತ್ತಿದೆ. ಹುಚ್ಚು ಹುಡುಗನ ತೋಳ ತೆಕ್ಕೆಯಲ್ಲಿ ಬಂಧಿಯಾದಾಗಲಾದರೂ ಅವಳು ತನ್ನ 'ನಿಜ ಸ್ವರೂಪ' ಪ್ರದಶರ್ಿಸಲಿ. ಭೋರ್ಗರೆದು ಅತ್ತು ಕರೆಯಲಿ. ಅವಳ ಕ(ಪ)ಣ್ಣೀರ ಧಾರೆಯಲಿ ನಾನು ತೋಯ್ದು ತೊಪ್ಪೆಯಾಗಲಿ.
ಹಾಗೆಯೇ, ಸಣ್ಣಗೆ ನೆಗಡಿಯಾಗಲಿ... ಅರೆ ಬರೆಯಾಗಿ ಮೈ ಬೆಚ್ಚಗಾಗಲಿ.... ಹಂಡೆಯಲ್ಲಿ ಅಮ್ಮ ಕಾಯಿಸಿಟ್ಟ ಬಿಸಿ ನೀರು ನನ್ನ ಮೈ ಮೇಲೆ ಬೀಳಲಿ... ಅರವತ್ಮೂರು ದಿನಗಳ ನಂತರ ನನ್ನೂರಿಗೆ ಇಟ್ಟ ಪುಟ್ಟ ಹೆಜ್ಜೆ ಬದುಕಿನ ಸಾರ್ಥಕ್ಯತೆಗೆ ಒಂದು ಮುನ್ನುಡಿ ಬರೆಯಲಿ....
ಆತ್ಮ ಬಂಧುವಿನ ವಿರಹದಲಿ, ಮಳೆ ಹುಡುಗಿಯಲಿ ನೆನಪಲ್ಲಿ... ನನ್ನೂರ ಕಡೆ ಪಯಣ....!
-ನಾಗರಾಜ್ .ಬಿ.ಎನ್ 

ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ.....

ಅಲ್ಲಿ ನೀರವ ಮೌನ ತಾಂಡವವಾಡುತ್ತಿತ್ತು. ಎದುರಿನ ಗೋಡೆಗೆ ನೇತು ಹಾಕಿದ್ದ ಗಡಿಯಾರವನ್ನೊಮ್ಮೆ ತಲೆ ಎತ್ತಿ ನೋಡಿದೆ. ಗಂಟೆ ಆಗಲೇ ರಾತ್ರಿ 12.35! ಎದುರಿಗೆ ಕುಳಿತಿದ್ದ ಸ್ನೇಹಿತನ ಕಣ್ಣಿಂದ ನೀರು ಒಂದೇ ಸಮನೆ ಧರಾಕಾರವಾಗಿ ಸುರಿಯುತ್ತಿತ್ತು. ನನ್ನನ್ನು ದೃಷ್ಟಿಯಿಟ್ಟು ನೋಡಲಾರದೆ ಆತ ತಲೆ ತಗ್ಗಿಸಿ ಅಳುತ್ತಿದ್ದ. ಅವನಲ್ಲಿ ಏನೋ ಚಡಪಡಿಕೆ... ಏನೋ ಹೇಳಬೇಕೆಂದು ಬಯಸಿ, ಹೇಳಲಾಗದೆ ನಿಟ್ಟುಸಿರುಡುತ್ತಿದ್ದ. ಅಸಹಾಯಕನಾಗಿ ತನ್ನಲ್ಲಿರುವ ನೋವನ್ನು ಹೊರಹಾಕಲಾಗದೆ ತಾನೇ ಬೇಯುತ್ತಿದ್ದನು. ಅವನ ನರಳಾಟದ ವೇದನೆ ಸಹಿಸದೆ ಮೌನವನ್ನು ಸೀಳುತ್ತ, ಯಾಕೀತರ...? ಏನಾಯ್ತು ಹೇಳು... ಸ್ನೇಹಿತ!' ತಣ್ಣನೆ ಕೇಳಿದೆ. ಒತ್ತರಿಸಿ ಬರುವ ದುಃಖವನ್ನು ತಡೆಯುತ್ತ... ಬಾಚಿ ತಬ್ಬಿಕೊಂಡನು!

ಕೋಣೆಯಲ್ಲಿ ಸಣ್ಣಗೆ ಉರಿಯುತ್ತಿರುವ ದೀಪವನ್ನು ನೋಡಿ ಆತ, 'ಕಣ್ಣು ಚುಚ್ಚಿದಂತಾಗುತ್ತಿದೆ, ಪ್ಲೀಸ್, ದಯವಿಟ್ಟು ದೀಪ ಆರಿಸುತ್ತೀಯಾ' ಎಂದು ವಿನಂತಿಸಿದ. ಮರುಮಾತನಾಡದೆ ಅವನ ಮನಸ್ಥಿತಿಯನ್ನು ಅರಿತು ದೀಪ ಆರಿಸಿ, ಅವನ ಪಕ್ಕದಲ್ಲಿಯೇ ಬಂದು ಕುಳಿತೆ. ಕೋಣೆಯ ತುಂಬ ಕತ್ತಲು, ಅದರದೆ ಸಾಮ್ರಾಜ್ಯ. ಅದಕ್ಕೆ ಜೊತೆಯೆಂಬಂತೆ ನಿಶ್ಯಬ್ದ.... ನೀರವ ಮೌನ!!
ಆದರೆ, ಕಾರ್ಗತ್ತಲಲ್ಲಿ ನನ್ನ ಸ್ನೇಹಿತನ ಉಚ್ಛ್ವಾಸ ಮತ್ತು ನಿಶ್ವಾಸದ ಸದ್ದು ಮಾತ್ರ ಕೇಳಿ ಬರುತ್ತಿತ್ತು. ಆತನ ಈ ಏರಿಳಿತದ ಉಸಿರಿನ ಹೊರತು, ಮತ್ತಿನ್ಯಾವ ಸದ್ದು ಇರಲಿಲ್ಲ. ಕ್ಷಣ ಕಾಲ ಆತನ ಬಿಸಿಯುಸಿರು ತಣ್ಣಗಿನ ಕೋಣೆಯನ್ನೆಲ್ಲ ವ್ಯಾಪಿಸಿಬಿಟ್ಟಿತು.
ಇದೇ ಕತ್ತಲೆಗಾಗಿ ತವಕಿಸುತ್ತಿದ್ದವನಂತೆ.... ಮಡುಗಟ್ಟಿದ ಹೃದಯದಿಂದ `ರಾಜ' ಎಂದು ಮೆಲ್ಲನೆ ಉಸುರಿದ. ಮಾತು ಕೇಳಿತು ಎಂಬಂತೆ, 'ಹೇಳೋ' ಎಂದೆ. ಹುಣ್ಣಿಮೆಗೆ ಸಾಗರ ಭೋರ್ಗರೆವಂತೆ, ಒಮ್ಮೆಲೆ ದುಃಖ ಉಮ್ಮಳಿಸಿ, ಅದನ್ನು ಬಿಗಿಹಿಡಿಯುವ ಪ್ರಯತ್ನ ಮಾಡುತ್ತಲೇ, `ಅವಳು ನನ್ನನ್ನು ಬಿಟ್ಟು ಹೋದಳೋ, ಅವಳಿಗೆ ನಾನು ಬೇಡವಂತೆ. ಮನೆಯಲ್ಲಿ ಒಪ್ಪುತ್ತಿಲ್ಲವಂತೆ. ಅವಳನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲವೋ.. ಎಂದನು. ಹಲವು ವರ್ಷಗಳಿಂದ ಆರಾಧಿಸುತ್ತ ಬಂದಿದ್ದ ಶ್ರದ್ಧೆಯ ಪ್ರೀತಿ ಅಂದು ಅವನಿಂದ ದೂರವಾಗಿತ್ತು. ಪ್ರೀತಿಯ ಗೋಪುರ ಏಕಾಏಕಿ ಕುಸಿದು ಬಿದಿದ್ದು, ಅವನನ್ನು ಹುಚ್ಚನನ್ನಾಗಿಸಿತ್ತು. ಆಗಲೇ ಎದೆಯಲ್ಲಿ ಮಡುಗಟ್ಟಿದ ದುಃಖ ಕಟ್ಟೆ ಒಡೆದಿತ್ತು. ಬಿಕ್ಕಿಬಿಕ್ಕಿ ಒಂದೇ ಸಮನೇ ಅಳುತ್ತಿದ್ದನು. ಅವನನ್ನು ಸಮಾಧಿನಿಸುವ ಪ್ರಯತ್ನ ಮಾಡದೆ, ಅವನನ್ನೆ ನೋಡುತ್ತ ಕುಳಿತೆ. ಸಮಾಧಾನದ ಮಾತು ಕೂಡಾ ತೀರಾ ಕಠೋರ ಎಂದೆನಿಸಿ ಬಿಡಬಹುದಾದ ಸೂಕ್ಷ್ಮ ಕ್ಷಣವದು. ಪೂಜನೀಯ ಪ್ರೀತಿ ಕಳೆದುಕೊಂಡ ಸ್ನೇಹಿತನ ದುಃಖದ ತೀವೃತೆ ಮಲೆನಾಡಿನ ರಭಸವನ್ನು ಮೀರಿಸುವಂತಿತ್ತು.
ಪ್ರೀತಿಯ ಆರಂಭಕ್ಕೆ ಒಂದು ನಿಧರ್ಿಷ್ಟ ದಿನವದ್ದಂತೆ, ಅದರ ಸಾವಿಗೆ ಇಂತಹದ್ದೆ ದಿನ ಎಂದು ಹೇಳಲಾಗದು. ಏಕೆಂದರೆ, ಅದೊಂದು ದೀರ್ಘ ಪ್ರಕ್ರಿಯೆ. ಹಾಗೂ ವ್ಯವಸ್ಥಿತ ಹೊಂಚು. ಪ್ರೀತಿ ಹುಟ್ಟಿದ ದಿನವನ್ನು ಮನದ ಮೂಲೆಯೊಂದರಲ್ಲಿ ಎಲ್ಲೋ ಬರಿದಿಟ್ಟು, ವರ್ಷದ ನಂತರ ಅದನ್ನು ಕೆದಕಿದರೂ ಅದು ಒಮ್ಮೆಲೆ ದೊರೆತು ಬಿಡುತ್ತದೆ. ಆದರೆ ಪ್ರೀತಿ ಕಳೆದು ಹೋದ ಬಗ್ಗೆ ಇದೇ ದಿನ ಹೀಗಾಯಿತು ಎಂದು ಯಾರಿಂದಲೂ ಹೇಳಲು ಬಹುಶಃ ಅಸಾಧ್ಯ. ಅಪ್ಪ, ಅಮ್ಮ, ಜಾತಿ ಎಂಬುದು ಪ್ರೀತಿಯನ್ನು ಧಿಕ್ಕರಿಸಿ ಹೊರಡುವ ಹೃದಯಗಳಾಡುವ ಮಾತು. ಆ ಹೃದಯಕ್ಕೆ ನಿಜ ಪ್ರೀತಿಯ ಅರ್ಥ ಗೊತ್ತಿಲ್ಲ ಎಂದರೂ ತಪ್ಪಾಗಲಾರದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಇದ್ಯಾವುದು ಕೂಡಾ ಅವರು ತಮ್ಮ ತಪ್ಪಿಗೆ ಕೊಡುತ್ತಿರುವ ಕಾರಣಗಳಲ್ಲ. ತಾವು ಮಾಡಿದ್ದೇ ಸರಿ ಎಂದು ತಮ್ಮನ್ನು ಸಮಥರ್ಿಸಿಕೊಳ್ಳುವುದಕ್ಕೆ ನೀಡುವ ಸಮಜಾಯಿಷಿಗಳು. ಇತ್ತ ಹುಡುಗ/ಹುಡುಗಿ ಪ್ರೀತಿಸುತ್ತೇನೆ ಎಂದು ಹೇಳುವ ಸಂದರ್ಭದಲ್ಲಿ ಅತ್ತ, ಅಪ್ಪ, ಅಮ್ಮ ತನ್ನ ಮಗ/ಮಗಳ ಬರುವಿಕೆಗಾಗಿ ಕಾದು ಕುಳಿತಿರುತ್ತಾರೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ವಿಷಯ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಹೆತ್ತವರ ನೆನಪು ಬಂದರೆ ನಿಜಕ್ಕೂ ಅದು ಗೌರವಯುತ. ಅಂತಹ ಯುವ ಹೃದಯಗಳನ್ನು ಗೌರವಿಸಿ, ಬೆಂಬಲಿಸೋಣ. ಆದರೆ, ಒಮ್ಮಿಂದೊಮ್ಮೆಲೆ ಇದ್ದಕ್ಕಿದ್ದಂತೆ `ಈ ಸಂಬಂಧ ಇನ್ನು ಮುಂದುವರಿಸಲು ಅಸಾಧ್ಯ, ದಯವಿಟ್ಟು ನನ್ನನ್ನು ಮರೆತು ಬಿಡು' ಎಂದು ಹೇಳುವುದು ನಿಜಕ್ಕೂ ಒಂದು ಹೀನ ಕೃತ್ಯ. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದವರು ಬೇಡವಾಗುತ್ತಾರೆ... ಎಲ್ಲ ನೋವಿಗೆ ದನಿಯಾಗಿ ಸ್ಪಂದಿಸಿದವರು ಕ್ಷುಲ್ಲಕ ಕಾರಣಕ್ಕೆ ಹೊರೆಯಾಗಿ ಬಿಡುತ್ತಾರೆ... ಆ ವಿಕೃತ ಹೃದಯದವರಿಗೆ ಅಪ್ಪ-ಅಮ್ಮನನ್ನು ಒಪ್ಪಿಸುವುದು ಕಷ್ಟವೆನಿಸುವುದಕ್ಕಿಂತ, ಅದರ ಅಗತ್ಯವಿಲ್ಲ ಎಂದೆನಿಸಿ ಬಿಡುತ್ತವೆ.
ನಿಜ ಪ್ರೀತಿಯ ಸಂಬಂಧ ಶ್ರದ್ಧೆ ಬೇಡುತ್ತ, ಪರಸ್ಪರರ ಬಗ್ಗೆ ನಂಬಿಕೆ ವಿಶ್ವಾಸವನ್ನು ಬಯಸುತ್ತವೆ. ಈ ಶ್ರದ್ಧೆ, ನಂಬಿಕೆ ಮತ್ತು ವಿಶ್ವಾಸ ದಿಢೀರ ಎಂದು ಒಮ್ಮೆಲೆ ಬೆಳೆದು ನಿಲ್ಲುವಂತಹದ್ದಲ್ಲ. ಸಾಕಷ್ಟು ಸಮಯ ಕೇಳುತ್ತ, ದಿನ ಕಳೆದಂತೆ ಪಕ್ವಗೊಳ್ಳುತ್ತ ಸಾಗುತ್ತವೆ. ಆದರೆ ಇಂದಿನ ಧಾವಂತದ ಯುವಗದಲ್ಲಿ ಪ್ರೀತಿ ತನ್ನ ಸೊಬಗನ್ನು ಕಳೆದುಕೊಂಡು ಅರ್ಥಹೀನವಾಗುತ್ತ ಯಾಂತ್ರಿಕವಾಗಿ ಸಾಗುತ್ತಿವೆ. ಶ್ರದ್ಧೆಯಿಲ್ಲದ ಪ್ರೀತಿ, ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಬಿರುಕು ಮೂಡಿ ಬಿಡುತ್ತವೆ. ಅವನೇ ನನ್ನ ಪ್ರಪಂಚ ಎಂದು ನವ-ನವೀನ ಕನಸು ಕಾಣುತ್ತ ಬದುಕು ನಡೆಸುತ್ತಿದ್ದ ಹುಡುಗಿಗೆ, ಇನ್ನೊಂದು ಪ್ರಪಂಚ ರಂಗು ರಂಗಾಗಿ ಕಾಣುತ್ತವೆ. ಇಷ್ಟು ದಿನ ಜೊತೆಯಿದ್ದು, ಉಸಿರಲ್ಲಿ ಉಸಿರಾದ ಹುಡುಗ ಬಣ್ಣ ಕಳೆದುಕೊಂಡು ಬಿಳಿಚಿ ಕೊಂಡಂತೆ ಭಾಸವಾಗುತ್ತಾನೆ. ಧುತ್ತೆಂದು ಅಪ್ಪ, ಅಮ್ಮ, ಜಾತಿಯ ಸಬೂಬು ಅಲ್ಲಿ ಬೇರು ಬಿಟ್ಟಿರುತ್ತದೆ. ಹೀಗೆ ಸುಳ್ಳೇ ಹುಟ್ಟಿಕೊಳ್ಳುವ ತಳುಕು ಪ್ರೀತಿ ಸುಮ್ಮನೆ ಬಿಡಿಸಿಕೊಂಡು ಓಡುವ ಹುನ್ನಾರ ನಡೆಸುತ್ತಿರುತ್ತವೆ. ಆದರೆ, ನಿಜವಾದ ಪ್ರೀತಿ ಹೇಗಾದರೂ ಸೈ, ಎಲ್ಲರನ್ನು ಎದುರಿಸಿ ಒಪ್ಪಿಸೋಣ ಎನ್ನುತ್ತಿರುತ್ತದೆ. ಪ್ರೀತಿಯಿಂದ ವಿಮುಖವಾದ ಜೀವ ನರಳುತ್ತ, ತನ್ನ ಬದುಕನ್ನು ಹಾಳುಗೆಡುವಿ ತಾನು ಉಳಿದು ಹೋದದಕ್ಕೆ ಕಾರಣ ಹುಡುಕಿ, ಕೆದಕಿ ಸೋಲುತ್ತ, ತನ್ನ ಬಗ್ಗೆ ಒಂದು ವಿಧವಾದ ಕೀಳರಮೆ ಬೆಳಸಿಕೊಂಡು, ಕಾಣದ ಕತ್ತಲೆಗಾಗಿ ಹಂಬಲಿಸುತ್ತಿರುತ್ತವೆ. ವರ್ಷಗಟ್ಟಲೇ ಶ್ರದ್ಧಾ ಭಕ್ತಿಯಿಂದ ಪ್ರೀತಿಯಿಂದ ನಿಮರ್ಿಸಿದ ಪ್ರೀತಿಯ ಕನಸಿನ ಗೋಪುರ ಕೆಲವೇ ದಿನಗಳಲ್ಲಿ ನೆಲಸಮವಾಗಿರುತ್ತವೆ.
ನನ್ನಷ್ಟಕ್ಕೆ ನಾನು ಹೀಗೆಲ್ಲ ಏನೇನೋ ಯೋಚನೆ ಮಾಡುತ್ತ ಕುಳಿತಿದ್ದೆ, ಅತ್ತ ಸ್ನೇಹಿತನ ಬಿಕ್ಕಳಿಕೆ ಒಂದೇ ಸಮನೆ ಕೇಳುತಲಿತ್ತು. ಆತ ಅತ್ತು ಅತ್ತು ಕಣ್ಣಿರಾಗಿದ್ದ. ನಾನಿನ್ನು ಮೇಲೇಳಲಾರೆ ಎಂದು ಬದುಕು ಕಳೆದುಕೊಂಡವರಂತೆ ರೋಧಿಸುತ್ತಿದ್ದ. ಅವನ ಮುಂಗೈಯನ್ನು ಅಂಗೈಯಲ್ಲಿಟ್ಟು ಹೇಳಿದೆ, `ಗೆಳೆಯಾ, ಆದದ್ದೆಲ್ಲ ಒಳ್ಳೆಯದಕ್ಕೆ ಅಂದುಕೋ. ಒಂದು ಸುಂದರವಾದ ಬಾಳ್ವೆ ನಡೆಸು. ಅವಳ ನೆನಪು ಬಾರದಂತೆ ಬದುಕಿ ಬಿಡು. ಇಷ್ಟು ವರ್ಷಗಳ ಕಾಲ ನಿಮ್ಮಿಬ್ಬರಲ್ಲಿದ್ದದ್ದು ಪ್ರೀತಿಯಲ್ಲ. ಅದೊಂದು ಆಕರ್ಷಣೆಯಷ್ಟೆ. ಕೇವಲ ಸೆಳೆತ. ಪ್ರೀತಿ ಹೀಗೆ ಇರೋದಿಲ್ಲ. ಅದು ಯಾವತ್ತೂ ಪರಸ್ಪರ ಒಬ್ಬರಿಗೊಬ್ಬರಿಗೆ ಸ್ಪೂತರ್ಿಯಾಗಿರುತ್ತವೆ. ಅಲ್ಲಿ ಸೋಲು ಎಂಬುದೇ ಇರುವುದಿಲ್ಲ. ಅದು ಸೋಲಲು ಬಿಡದ ಅದಮ್ಯ ಶಕ್ತಿ. ನಿನ್ನ ಬದುಕಿನ ಬಗ್ಗೆ ನಿನಗೆ ಅತೀವ ಶ್ರದ್ಧೆಯಿರಲಿ, ನಿನ್ನ ಸ್ನೇಹಿತನಾಗಿ ಸದಾ ನಿನ್ನ ಜೊತೆಯಿರುತ್ತೇನೆ, ನಿನ್ನ ನೋವಿಗೆ ದನಿಯಾಗಿ. ಕಿವಿಯಾಗಿ'.
ಮಾತು ಬರದವನಾಗಿ ತನ್ನೆಲ್ಲ ಚೈತನ್ಯ ಕಳೆದುಕೊಂಡಿದ್ದ ಆತ. ನನ್ನ ಮಡಿಲಿಗೆ ಕುಸಿದಿದ್ದ. ನೂರ್ಮಡಿಸಿದ್ದ ದುಃಖವನ್ನು ನುಂಗಿಕೊಳ್ಳುತ್ತ, ನನ್ನನ್ನು ನೋಡದೆ ಕೇಳಿದ, `ಅವಳು ನನ್ನನ್ನು ಯಾರಿಗೋಸ್ಕರ, ಯಾಕಾಗಿ ತ್ಯಾಗ ಮಾಡಿದಳು..?'. ಮನಸಲ್ಲೆ ನಕ್ಕು ಉತ್ತರಿಸಿದೆ, `ಅಸಲಿಗೆ ತ್ಯಾಗ ಅನ್ನುವ ವಿಚಾರ ಪ್ರೀತಿಯಲ್ಲಿಲ್ಲ. ಪ್ರೀತಿಯನ್ನು ಧಿಕ್ಕರಿಸಿ ಹೊರ ನಡೆಯುವವರು, ತಮಗೆ ಇನ್ನೂ ಉತ್ತಮ ಎನ್ನುವ ಆಯ್ಕೆಯ ಕಡೆ ಪಯಣ ಬೆಳೆಸಿರುತ್ತಾರೆ. ದೂರಾಗುವ ಮುನ್ನ ತಮ್ಮನ್ನು ತಾವು ಸಮಥರ್ಿಸಿಕೊಳ್ಳಲು, ಅವರು ಉಪಯೋಗಿಸುವ ಸಮರ್ಥ ಅಸ್ತ್ರವೇ ತ್ಯಾಗ. ಕಾಣದ ಬದುಕಿಗೆ ಯಾರು ಕೂಡಾ ಕೈಯಲ್ಲಿರುವ ಸುಂದರ ಬದುಕನ್ನು ತ್ಯಾಗ ಮಾಡುವುದಿಲ್ಲ. ಅದು ಯಾರೊಬ್ಬರ ಬದುಕಿನ ವಿಚಾರದಲ್ಲಿ ಸಾಧ್ಯವೂ ಇಲ್ಲ'.
ಅತ್ತು ಅತ್ತು ಸೋತಿದ್ದ ಗೆಳೆಯ ಅರೆ ಕ್ಷಣದಲ್ಲಿ ನಿದ್ರೆಗೆ ಜಾರಿದ್ದ. ಯಾಕೋ ಅರಿವಿಲ್ಲದೆ ನಾನು ಕೂಡಾ ತುಸು ದುಃಖಿತನಾದೆ. ಮನಸ್ಸು ಪ್ರಕ್ಷುಬ್ಧವಾಗಿತ್ತು. ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತಿತ್ತು. ಕಿಟಕಿಯಾಚೆ ಒಮ್ಮೆ ದಿಟ್ಟಿಸಿದೆ.. ಯಾವುದೋ ಹಿಂದಿನ ನೆನಪು ಮರುಕಳಿಸಿದಂತಾಗಿ ಕಾಡಿದವು...
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆಪವ.....
-ನಾಗರಾಜ್ ಬಿ.ಎನ್.

ಯಾಕೆ ಹೀಗೆ.....?

ಬದುಕೇ ಒಂದು ಭ್ರಮೆ. ವಿಚಿತ್ರ. ನಾನಾ ತಿರುವುಗಳು. ಇಲ್ಲಿ ನಿರೀಕ್ಷಿತ ಫಲಕ್ಕಿಂತ ಅನಿರೀಕ್ಷಿತ ಅವಘಡಗಳದ್ದೇ ಹೆಚ್ಚು ಪಾರುಪತ್ಯ. ಸಮಚಿತ್ತದ ತಾದಾತ್ಮತೆಯಿಂದ ಬದುಕು ಮುನ್ನಡೆಸಿದರೆ ಎಲ್ಲವೂ ಸರಾಗ... ಹಾಗೆ ನಿರಾಳ...!!
ಎಲ್ಲ ಮನಸ್ಸುಗಳು ಒಂದೇ ತೆರನಾದ ಭಾವನೆಯನ್ನು ಸ್ಫುರಿಸುವುದಿಲ್ಲ. ಒಬ್ಬನದು ಭಾವುಕ ಮನಸ್ಸಿದ್ದರೆ, ಇನ್ನೊಬ್ಬನದು ಕಟುಕ ಮನಸ್ಸಾಗಿರುತ್ತದೆ. ಅದು ಅವರವರ ಸಂಸ್ಕಾರ ಹಾಗೂ ಬೆಳೆದು ಬಂದ ವಾತಾವರಣದ ಮೇಲೆ ನಿರ್ಧರಿತವಾಗುತ್ತದೆ. ಆದರೆ, ಕೆಲವು ಬಾರಿ ಉದ್ದೇಶಪೂರ್ವಕವಾಗಿ ಮನಸ್ಸಿನ ದಾರಿಯನ್ನೂ ತಪ್ಪಿಸುವವರೂ ಇರುತ್ತಾರೆ... ಅದು ಬೇರೆ ಮಾತು..!!
ಪಾಪ... ಆ ಮನಸ್ಸಿನದ್ದು ಏನೂ ತಪ್ಪಿರುವುದಿಲ್ಲ. ಅದು ಎಲ್ಲರ ಜೊತೆಯೂ ನಗು ನಗುತ್ತಲೇ ಇರುತ್ತದೆ. ಅದಕ್ಕೆ ಗಂಡು-ಹೆಣ್ಣು, ಬಡವ-ಶ್ರೀಮಂತ, ಜಾತಿ-ಧರ್ಮ ಎನ್ನುವ ಯಾವೊಂದು ಭೇದವೂ ಇರುವುದಿಲ್ಲ. ಆದರೂ ಕೆಲವರು ಅದನ್ನು ತಪ್ಪಿತಸ್ಥ ಎನ್ನುವ ಸ್ಥಾನಕ್ಕೆ ನೂಕಿ ಬಿಡುತ್ತಾರೆ. ವಿವೇಚನಾ ರಹಿತ ವ್ಯಾಖ್ಯಾನ ನೀಡುತ್ತ, ಅಂತೆ-ಕಂತೆಗಳ ಗಂಟು-ಮೂಟೆಯನ್ನೇ ನಿಜ ಮಾಡಲು ಹೋಗುತ್ತಾರೆ. ಕಪೋಲಕಲ್ಪಿತ ನುಡಿಗಳು ಆ ಸಂದರ್ಭದಲ್ಲಿ ವಿಜ್ರಂಭಿಸಿ... ಝೇಂಕರಿಸುತ್ತದೆ...!
ಹಾಗಾದರೆ, ಆ ಮನಸ್ಸಿಗೆ 'ತಪ್ಪಿತಸ್ಥ' ಎಂದು ಹೆಸರು ಬರಲು ಕಾರಣವೇನು. ಬಹುಶಃ ಎಲ್ಲರೂ ಒಂದೇ ಎಂದು ಪ್ರೀತಿಯಿಂದ ಮಾತನಾಡುತ್ತಿದ್ದುದ್ದು ಕಾರಣವಾಗಿರಬಹುದು...! ಅಥವಾ, ಪ್ರೀತಿಯ ಸಹಬಾಳ್ವೆ ಸಹಿಸದ ಅಸೂಯೆಯೇ ಕಾರಣವಾಗಿರಬಹುದು...! ಅಥವಾ, ಎಲ್ಲರೊಳಗೊಂದಾದ ಮನಸ್ಸಿನ ಭಾವ ಅರ್ಥ ಮಾಡಿಕೊಳ್ಳದ ಸಂಕುಚಿತ ಮನಸ್ಸಿನ ಮೇಲಾಟ ಕಾರಣವಾಗಬಹುದು...! ಅಥವಾ, ತಪ್ಪಾಗಿ ಅರ್ಥೈಸಿಕೊಂಡು ಗಾಳಿ ಮಾತು ಎಬ್ಬಿಸಿದ ಇನ್ನೊಂದು ಮನಸ್ಸಿನ ತೊಳಲಾಟವೂ ಕಾರಣವಾಗಿರಬಹುದು....!
ಮನುಜ ಜಾತಿ ತಾನೊಂದೆ ವಲಂ... ಎಂದು ಅರ್ಥವಾಗುವುದು ಯಾವಾಗ...? ಮನಸ್ಸು-ಮನಸ್ಸುಗಳ ನಡುವೆ ನಿರ್ಮಲ ಪ್ರೀತಿ ಅರಳುವುದು ಯಾವಾಗ...
-ನಾಗರಾಜ್  ಬಿ.ಎನ್. 

ಭಾನುವಾರ, ನವೆಂಬರ್ 15, 2015

ಮೂಕ ಹಕ್ಕಿಯು ಹಾಡುತ್ತಿದೆ...!

ಅದೊಂದು ಕಲ್ಪನಾತೀತ ಭಾವ. ನೋವಿದೆ, ನಲಿವಿದೆ... ನಿರೀಕ್ಷೆಗೂ ಮೀರಿದ ಯಾತನೆಯಿದೆ. ಅತ್ತರೆ ಎಂದೂ ಬತ್ತದ ಕಣ್ಣೀರಿನ ಪ್ರವಾಹವೇ ಇದೆ...!
ಪುಟ್ಟ ಹಕ್ಕಿಯ ಕಣ್ಣು ಕಟ್ಟಿ, ದಟ್ಟ ಕಾನನದಲ್ಲಿ ಬಿಟ್ಟು ಹಾರು ಎಂದರೆ....! ಹಾರಲು ವಿಶಾಲವಾದ ನೀಲಾಕಾಶವಿದ್ದರೂ, ಅದರ ಹರವು ಎಲ್ಲ ಮುರುಟಿ ಹೋದ ಕನಸುಗಳಾಗಿವೆ. ಆ ಕನಸಿನ ಲೋಕದೊಳಗೊಂದು ಕನವರಿಕೆಯ ಪುಟ್ಟ ಜಗತ್ತಿದೆ. ಆ ಜಗತ್ತು ಕೂಡಾ ಗಾವುದ ದೂರ. ನನ್ನ ಧ್ವನಿ ಕೇಳದಷ್ಟು ದೂರದಲ್ಲಿ ನನ್ನ ಮನಸ್ಸಿದೆ; ಮನಸ್ಸಿನ ಒಂದು ಪಿಸುಮಾತಿದೆ. ರೋಧಿಸುವ ಮನಸ್ಸಿಗೆ ಸಾಂತ್ವನ ಹೇಳುವ ಮೇಘಗಳು ಕೂಡಾ ಮುನಿಸಿಕೊಂಡಂತಿವೆ. ಜೀವಚ್ಛವವಾಗಬಾರದೆಂದು ತಿನ್ನುವ ಕಾಳು-ಕಡಿಯೂ ಕೂಡಾ, ವಿಷಯವಾಗುತ್ತಿದೆ. ಒಡಲಲ್ಲಿ ಧಗಧಗನೆ ಉರಿವ ಬೆಂಕಿ ಕಿಚ್ಚು, ಮೈ-ಮನವೆಲ್ಲ ಸುಡುತ್ತಿದೆ.
ಅನಿವಾರ್ಯತೆಗೆ ತಲೆಬಾಗಿ ಮಂಡಿಯೂರಿ ಕುಳಿತಂತಾಗಿದೆ. ದೈನ್ಯವು ಗಂಟಲಲ್ಲಿ ನೋವಾಗಿ ಕುಳಿತು, ಅಳುವೇ ತುಟಿಗೆ ಬಂದಂತಾಗಿದೆ. ಭಾವ ಪ್ರವಾಹದಲ್ಲಿ ತೋಯ್ದು, ತೊಪ್ಪೆಯಾದ ಅನುಭವ. ಕಣ್ಣೀರ ಝರಿಯು ಬಿರುಸಾಗಿ ಹರಿಯುತ್ತಿದ್ದು, ರುದ್ರ ಭಯಂಕರವೆಂದೆನಿಸುತ್ತಿದೆ.
ದಟ್ಟ ಕಾನನದಲ್ಲಿ ಒಂಟಿ ನಡಿಗೆ. ನೀರವ ಮೌನದಲ್ಲಿ, ಮೂಕ ಹಕ್ಕಿಯ ಹಾಡು. ಕಾಪಿಟ್ಟ ಮೋಡ ಕೂಡಾ ಮಾತಾಡುತ್ತಿಲ್ಲ. ಗಿಡ ಗಂಟೆಗಳ ಕೊರಳ ಗಾನವೂ ಸ್ಥಬ್ದವಾಗಿದೆ. ಭಾರವಾದ ಹೆಜ್ಜೆ ಗುರುತುಗಳು, ತರಗೆಲೆಯ ಮೇಲೂ ಅಚ್ಚೊತ್ತುತಿವೆ. ಮರದ ಮೇಲೆಲ್ಲೂ ಕೂತ ಮರಿ ಹಕ್ಕಿ, ಮುಂಜಾನೆದ್ದು ಹೋದ ತಾಯಿ ಹಕ್ಕಿಗಾಗಿ ಪರಿತಪಿಸುತ್ತಿದೆ. ಒಂಟಿತನದ ಬೇಗುದಿ ಇನ್ನೆಷ್ಟು ದಿನ...? ಬರುವ ಸುದನವನ್ನು ನೆನೆದುಕೊಂಡೇ ಕಾಲ ಕಳೆಯಬೇಕಿದೆ. ನನಸಿನಲ್ಲಿ ಆಗದ್ದನ್ನು ಕನಸಿನಲ್ಲಿ ಕಾಣಬೇಕಿದೆ. ಸಂತಸ ಪಡೆಯಬೇಕಿದೆ. ಬದುಕು ಇಷ್ಟೇನಾ....?
ನಾ ನಿನಗೆ ಬೇಡವಾಗಿರಬಹುದು, ಆದರೆ ನಿನ್ನ ಹೃದಯಕ್ಕಲ್ಲ....! 

ಶನಿವಾರ, ಜನವರಿ 17, 2015

ಮಾನವ ಜನ್ಮ ದೊಡ್ಡದು... ಹಾಳು ಮಾಡಿಕೊಳ್ಳಬೇಡಿರಾ..?

'ಮಾನವ ಜನ್ಮ ಹಾಳು ಮಾಡಿಕೊಳ್ಳಬೇಡಿರಾ ಹುಚ್ಚಪ್ಪಗಳಿರಾ....' ಎಂಬಂತೆ ಭಗವಂತ ನೀಡಿದ ಸುಂದರ ಮಾನವ ಜನ್ಮವನ್ನು ಪ್ರೀತಿ, ಸ್ನೇಹ, ವಿಶ್ವಾಸದಿಂದ ಕಾಪಾಡಿಕೊಂಡು ಹೋಗಬೇಕು. ನಂಬಿ ಬಂದ ಬಾಳ ಸಂಗಾತಿಯ ಜೊತೆ ನಂಬಿಕಸ್ಥರಾಗಿ ಬದುಕಿನ ಬಂಡಿಯನ್ನು ಮುನ್ನಡೆಸಬೇಕು. ಮನಸ್ಸು ಮತ್ತು ದೇಹ ಒಬ್ಬರಿಗೇ ಮೀಸಲಾಗಿ ಸಮರ್ಪಣಾ ಭಾವದಿಂದ ದಾಂಪತ್ಯ ಗೀತೆಯನ್ನು ಗೀಚಬೇಕು....... 

ನಾಗರಾಜ್ ಬಿ.ಎನ್.
ಕಾಲಾಯ ತಸ್ಮೈ ನಮಃ.................!
ಕಾಲಚಕ್ರದ ಉರುಳಾಟದಲ್ಲಿ ಬದುಕಿನ ಶೈಲಿಯೂ ಹಂತ ಹಂತವಾಗಿ ಬದಲಾಗಿಬಿಟ್ಟಿದೆ. ಪ್ರತಿಕ್ಷಣವೂ ಕೂಡಾ ಆಧುನಿಕತೆಯ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗಿ ಒದ್ದಾಡುತ್ತಿದ್ದೇವೆ. ಮಾನವ ಸಂಬಂಧಗಳೆಲ್ಲ ಕೂಡಿ-ಕಳೆಯುವ ಲೆಕ್ಕಾಚಾರವಾಗಿ, ವ್ಯವಹಾರದ ದ್ಯೋತಕವಾಗಿಬಿಟ್ಟಿದೆ. ಸಂಸ್ಕಾರ, ಸಂಸ್ಕೃತಿ ಎನ್ನುವುದು ಮಖಾಡೆ ಮಲಗಿ ಇನ್ನಿಲ್ಲವಾಗಿದೆ. `ಪರಿವರ್ತನೆ ಜಗದ ನಿಯಮ' ಎಂದರೆ ಇದೇನಾ....!!?
ಹಿರಿಯರು ನಡೆದ ಸನ್ಮಾರ್ಗಗಳು ಈಗ ಮುಸುಕು ಮುಸುಕಾಗಿ, ಕಂಡೂ ಕಾಣದಂತಾಗಿವೆ. ಅವರ ಭವ್ಯ ಪರಂಪರೆ ಅವರ ಜೊತೆ ಜೊತೆಯಲ್ಲಿಯೇ ಮಣ್ಣಾಗಿ ಇತಿಹಾಸದ ಕಾಲ ಗರ್ಭದಲ್ಲಿ ಹೂತು ಹೋಗುತ್ತಿವೆ. ಅಪ್ಪಟ ಸಾಂಪ್ರದಾಯಿಕ ಶೈಲಿಯ ಆ ಬದುಕು ಬೇಕೆನಿಸಿದರೂ ಈಗ ನಮಗೆ ಸಿಗಲಾರದು. ಈಗೇನಿದ್ದರೂ ವ್ಯಾವಹಾರಿಕ ಜಗತ್ತಿನ ಬೇಕು-ಬೇಡಗಳ ಜೀವನ ಮಾತ್ರ. ಲೌಕಿಕ ಪ್ರಪಂಚದಲ್ಲಿ ಸ್ವಾರ್ಥಕ್ಕೆ ಪ್ರಾಮುಖ್ಯತೆ ನೀಡಿ ನಮ್ಮದಾದಂತ ಸಂಸ್ಕಾರವನ್ನೇ ಅಧೋಗತಿಗೆ ಕೊಂಡೊಯ್ಯುತ್ತಿದ್ದೇವೆ.
ಸ್ವೇಚ್ಛಾಚಾರದ ಬದುಕು ಬೇಕೇ...?
ಈ ಹಿಂದೆ ನಮ್ಮ ಶರಣರು ದೇಹವನ್ನು ದೇವಾಲಯಕ್ಕೆ ಹೋಲಿಸಿ `ದೇಹವೆ ದೇವಾಲಯ' ಎಂದು ಹಾಡಿ ಹೊಗಳಿದ್ದರು. ದೇಹದಲ್ಲಿರುವ ಜೀವಾತ್ಮನಿಗೆ ಪರಮಾತ್ಮನ ಸ್ಥಾನ ನೀಡಿ, ಪೂಜಿಸಿ, ಆರಾಧಿಸಿ ಎಂದು ಸೂಕ್ಷ್ಮವಾಗಿ ತಿಳಿ ಹೇಳಿದ್ದರು. ಅಷ್ಟೊಂದು ಉತ್ಕೃಷ್ಠ ಸ್ಥಾನಕ್ಕೆ ಏರಿಸಿದ ದೇಹ, ಪ್ರಸ್ತುತ ದಿನಗಳಲ್ಲಿ ವ್ಯಾವಹಾರಿಕ ಸರಕಾಗುತ್ತಿರುವುದು ವಿಪಯರ್ಾಸದ ಸಂಗತಿ....! ಈ ಜಗತ್ತಿನಲ್ಲಿ ಹಣಕ್ಕಾಗಿ ಏನೆಲ್ಲ ನಡೆಯುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ.
ಅಗ್ನಿ ಸಾಕ್ಷಿಯಾಗಿ ಕೈ ಹಿಡಿದು ಕಾಯಾ, ವಾಚಾ, ಮನಸಾ ಜೀವನ ಪರ್ಯಂತ ಜೊತೆಯಾಗಿಯೇ ಬಾಳಿ ಬದುಕುತ್ತೇನೆ ಎಂದು ಹೇಳಿದವರು, ಎಲ್ಲ ರೀತಿ-ನೀತಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವತರ್ಿಸುತ್ತಾರೆ. ನಾಲ್ಕು ಗೋಡೆಗಳ ನಡುವೆ ಮಾತ್ರ ಸೀಮಿತವಾಗಿರಬೇಕಾದ ಕೆಲವು ವೈಯಕ್ತಿಕ ಬದುಕು, ಹಾದಿ-ಬೀದಿಯಲ್ಲಿ ಹರಾಜಾಗುತ್ತಿವೆ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ಆಡುವವರ ನಾಲಿಗೆಯ ಮೇಲೆ ಅಂಕೆಯಿಲ್ಲದೆ ಅದು ಹರಿದಾಡುತ್ತಿದೆ. ಆದರೂ ಕೂಡಾ ಇದ್ಯಾವುದರ ಪರಿವೇ ಇಲ್ಲದಂತೆ ಸ್ವೇಚ್ಛೆಯಿಂದ ಬದುಕು ಮುನ್ನಡೆಸುತ್ತಾರೆ.
ದೈವ ಸಂಕಲ್ಪಿತ ಜೋಡಿಗಳು....
ದಾಂಪತ್ಯದ ಗೀತೆ ಹಾಡಿದವರೇ ಇರಲಿ... ಪ್ರೇಮ ರಾಗದಲ್ಲಿ ಓಲಾಡುತ್ತಿರುವ ಜೋಡಿಗಳೇ ಇರಲಿ... ಇಬ್ಬರು ಸಹ ಪರಸ್ಪರ ಒಬ್ಬರನ್ನೊಬ್ಬರು ಅರಿತು ಬಾಳಬೇಕು. `ಒಂದು ಗಂಡಿಗೊಂದು ಹೆಣ್ಣು' ಎಂಬ ಕೆ.ಎಸ್. ನರಸಿಂಹಸ್ವಾಮಿಯವರ ಮಾತಿನಂತೆ, ನಂಬಿ ಬಂದ ಹುಡಗಿ/ಹುಡುಗನಿಗೆ ಜೀವನ ಪರ್ಯಂತ ನಂಬಿಕಸ್ಥರಾಗಿಯೇ ಬದುಕಬೇಕು. ಹೆಣ್ಣು ಹೇಗೆ ತನ್ನ ಗಂಡ ಶ್ರೀರಾಮನಂತೆ ಇರಬೇಕೆಂದು ಬಯಸುತ್ತಾಳೆಯೋ ಹಾಗೆಯೇ, ಗಂಡು ಕೂಡಾ ತನ್ನ ಹೆಂಡತಿ ಸೀತೆಯಂತೆಯೇ ಇರಬೇಕೆಂದು ಬಯಸುವುದರಲ್ಲಿ ಯಾವ ತಪ್ಪಿಲ್ಲ ಅಲ್ಲವೇ?
ಅಮ್ಮನ ಮಡಿಲಲ್ಲಿ ಬೆಳೆದ ಹುಡುಗ ಮದುವೆಯಾದ ನಂತರ ಜೊತೆಯಾಗಿ ಬಂದ ಹುಡುಗಿಯ ಜೊತೆ ಬಾಳಿ ಬದುಕ ಬೇಕಾಗುತ್ತದೆ. ಅವನಿಗೆ ಅವಳೇ ಸರ್ವಸ್ವವಾಗಿ, ತನ್ನೆಲ್ಲ ಬೇಕು ಬೇಡಗಳನ್ನು ಪೂರೈಸುವ ದೇವತೆಯಾಗುತ್ತಾಳೆ. ಹಾಗೆಯೇ, ಹೆಣ್ಣು ಕೂಡಾ ತನ್ನೆಲ್ಲ ರಕ್ತ ಸಂಬಂಧಿಗಳನ್ನು ಬಿಟ್ಟು ಸುಂದರ ಬದುಕಿನ ಕನಸು ಕಟ್ಟಿಕೊಂಡು ಹುಡುಗನನ್ನು ಹಿಂಬಾಲಿಸುತ್ತಾಳೆ. ಅವಳ ಪಾಲಿಗೆ ಆಕೆಯ ಗಂಡ ಸಾಕ್ಷಾತ್ ಭಗವಂತನೇ...!! ಹೀಗೆ ಇಬ್ಬರೂ ಕೂಡಾ ಪರಸ್ಪರ ಒಬ್ಬರಿಗೊಬ್ಬರು ದೈವ ಸಮಾನರಾಗಿ ಕಂಡು ಬರುತ್ತಾರೆ. ಇಂತಹ ಅದ್ಭುತ ದೈವ ಸಂಕಲ್ಪಿತ ಕೆಲವು ಜೋಡಿಗಳು ಬರ ಬರುತ್ತ ಹಾದಿ ತಪ್ಪಿ ಎಲ್ಲೆ ಮೀರುತ್ತಿರುವುದು ವಿಷಾದನೀಯ.
ಪಿಸುಮಾತಿನ ಪ್ರೀತಿ.....
ಪ್ರೀತಿ ಯಾವಾಗಲೂ ಒತ್ತಾಯ ಪೂರ್ವಕವಾಗಿ ಹುಟ್ಟಿಕೊಳ್ಳುವುದಿಲ್ಲ. ಅದೊಂದು ಆಕಸ್ಮಿಕ ಅವಘಡ. ಆ ಸನ್ನಿವೇಶದಲ್ಲಿ ಮೇಳೈಸಿದ ಹೃದಯಾಂತರಾಳದ ಪ್ರೀತಿ ಪರಸ್ಪರ ವಿನಿಮಯ ಮಾಡಿಕೊಂಡಾಗ ಅದು ಅರ್ಥ ಪಡೆದುಕೊಳ್ಳುತ್ತದೆ. ಆಗ ಸುಂದರ ಪ್ರೀತಿಯ ಮಹಾಕಾವ್ಯ ರಚನೆಯಾಗಿ, ಪರಸ್ಪರ ಬದುಕಿಗೆ ಸ್ಪೂತರ್ಿಯಾಗುತ್ತದೆ. ಅಲ್ಲಿ ಮನಸ್ಸುಗಳು ಪಿಸುಮಾತಿನೊಂದಿಗೆ ಬೆರೆತಿರುತ್ತವೆ. ಕನಸಿನ ಗೂಡನ್ನು ಹೆಣೆದುಕೊಂಡು ನೀಲಾಕಾಸದಲ್ಲಿ ತೇಲಾಡುತ್ತಿರುತ್ತವೆ. ಅಂದರೆ ಮಾನಸಿಕವಾಗಿ ಅವರ ಮನಸ್ಸುಗಳು ಒಂದಾಗಿರುತ್ತವೆ. ಹೀಗೆ ಒಂದಾದ ಮನಸ್ಸುಗಳು ಉದ್ದೇಶ ಪೂರ್ವಕವಾಗಿಯೋ, ಅನಿವಾರ್ಯವಾಗಿಯೋ ದೂರಾಗುತ್ತವೆ. ಆಗ ಆ ಮನಸ್ಸುಗಳು ಇನ್ನೊಂದು ಮನಸ್ಸಿನೊಂದಿಗೆ ಸಮ್ಮಿಲನಗೊಳ್ಳುತ್ತವೆ. ಈಗಾಗಲೇ ಒಬ್ಬರಿಗೆ ಮನಸ್ಸು ನೀಡಿ ಬದುಕಿನ ಎಲ್ಲ ಪುಟಗಳಲ್ಲಿ ಸುಂದರ ಕಾವ್ಯ ಗೀಚಿರುತ್ತಾರೆ. ಆದರೆ, ಬದಲಾದ ಸನ್ನಿವೇಶದಿಂದ ದೇಹ ಇನ್ನೊಬ್ಬರಿಗೆ ನೀಡಲು ಅಣಿಯಾಗಬೇಕಿದೆ. ಮನಸ್ಸು ಒಬ್ಬರಿಗೆ ನೀಡಿ ದೇಹ ಇನ್ನೊಬ್ಬರಿಗೆ ನೀಡಿದರೆ ಅದಕ್ಕೇನರ್ಥ...!? ಆ ವೈವಾಹಿಕ ಜೀವನ ನಿಜವಾಗಿಯೂ ಸಾರ್ಥಕತೆ ಪಡೆದುಕೊಳ್ಳುತ್ತವೆಯೇ...?

'ನಲಿಯಲಿ ನಲಿಯಲಿ, ಯಾರ ಪ್ರೀತಿಯೂ ಛೇದವಾಗದಿರಲಿ.......!!'

ಮಾನವ ಸಂಬಂಧಗಳು ಎಷ್ಟೊಂದು ವಿಚಿತ್ರ ಅಲ್ವಾ...? ನಿನ್ನೆ ಇದ್ದ ಸಂಬಂಧ ಇಂದು ಇರುವುದಿಲ್ಲ. ಇಂದು ಆದ ಪರಿಚಯ ನಾಳೆಯಾಗುವಷ್ಟರಲ್ಲಿ ಮರೆತು ಹೋಗಿರುತ್ತವೆ. ನಾಳೆ ಎನ್ನುವಷ್ಟರಲ್ಲಿ ಇನ್ಯಾರೋ ಎದುರಿಗೆ ಬಂದು ನಿಂತಿರುತ್ತಾರೆ. 'ನಿನ್ನೆ-ಇಂದು-ನಾಳೆ'ಗಳ ನಡುವೆ ಬಂದು ಹೋಗುವ ಅತಿಥಿಗಳೇ ನಮ್ಮ ಸಂಬಂಧಿಗಳಾಗುತ್ತಾರೆ... ಸ್ನೇಹಿತರಾಗುತ್ತಾರೆ... ಹಿತೈಷಿಗಳಾಗುತ್ತಾರೆ... ಗುರುವಾಗುತ್ತಾರೆ... ಅವರಲ್ಲಿ ಕೆಲವರು ಬದುಕಿನುದ್ದಕ್ಕೂ ಜೊತೆ-ಜೊತೆಯಾಗಿ ಹೆಜ್ಜೆ ಹಾಕುತ್ತಾರೆ. ಇನ್ನು ಕೆಲವರು, ನೆನಪಾಗಿ ಸದಾ ಕಾಡುತ್ತ ಇರುತ್ತಾರೆ.
ಈ ಬದುಕೆ ಹೀಗೆ... ಇದೊಂದು ಅನಿರೀಕ್ಷಿತಗಳ ಸಂತೆ. ಯಾವ ಕ್ಷಣದಲ್ಲೂ ಎನೂ ಬೇಕಾದರೂ ಆಗಬಹುದು. ಅದನ್ನು ಯಾರೂ ಅರಿಯರು. ನಾಲ್ಕು ದಿನದ ಈ ಬದುಕಿನಲ್ಲಿ 'ನಿನ್ನೆ-ಇಂದು-ನಾಳೆ'ಗಳ ನಡುವೆ ಬಂದು ಹೋಗುವ ಜನರೊಡನೆ ಪ್ರೀತಿ ವಿಶ್ವಾಸದಿಂದ ಬದುಕಬೇಕು. ಪ್ರಾಮಾಣಿಕತೆಯ ಪ್ರತಿಬಿಂಬವಾಗಿ ದೇದೀಪ್ಯಮಾನವಾಗಿ ಬೆಳಗಬೇಕು.
ಆದರೆ, ಸ್ವಾರ್ಥ ತುಂಬಿದ ಜಗತ್ತಿನಲ್ಲಿ 'ನಂಬಿಕೆ-ವಿಶ್ವಾಸ' ಎನ್ನುವುದು ಮರೆಮಾಚಿ ಹೋಗಿದೆ. ಪ್ರಾಮಾಣಿಕತೆ ಎನ್ನುವುದು ಕಾಲ ಗರ್ಭದಲ್ಲಿ ಹೂತು ಹೋಗಿದೆ. ನಂಬಿಕೆಯ ಮುಖವಾಡ ಧರಿಸಿ, ಪ್ರೀತಿ-ವಿಶ್ವಾಸದ ತಾಯಿ ಬೇರನ್ನೇ ಕತ್ತರಿಸುತ್ತಿದ್ದಾರೆ. ಪ್ರಾಮಾಣಿಕತೆಯ ಸೋಗಿನಲ್ಲಿ, ಬೆನ್ನಿಗೆ ಚೂರಿ ಇರಿಯುತ್ತಾರೆ. ಸ್ವಾರ್ಥ ಲಾಲಸೆಯಲ್ಲಿ ಬಂದದ್ದೆಲ್ಲ ಬರಲಿ ಎನ್ನುತ್ತ.... ನಯವಾಗಿ ವಂಚಿಸುತ್ತಲೇ ಹೋಗುತ್ತಾರೆ.
ಆದರೂ ಇಲ್ಲಿ, ಯಾರನ್ನೇ ನಂಬುವುದಾದರೆ ಸಂಪೂರ್ಣವಾಗಿ ನಂಬಬೇಕು. ನಂಬಿದ ವ್ಯಕ್ತಿ ಕೊನೆವರೆಗೂ ಉತ್ತಮ ಸ್ನೇಹಿತನಾಗಿರುತ್ತಾನೆ. ಇಲ್ಲವೇ, ಬದುಕಲ್ಲಿ ಯಾರೂ ನೀಡದ ಅನುಭವವೊಂದನ್ನು ಅವನು ನಮಗೆ ನೀಡಿ ಹೋಗುತ್ತಾನೆ. ಅದರಿಂದ ನಂಬಿದ ವ್ಯಕ್ತಿಯ ಬದುಕು ಇನ್ನೂ ಉನ್ನತಕ್ಕೇರುತ್ತದೆ. ಮುಂದೊಂದು ದಿನ, ವಂಚಿಸಿದ ವ್ಯಕ್ತಿ 'ನಾನು ತಪ್ಪು ಮಾಡಿದೆ' ಎಂದು ಖಂಡಿತ ಕೊರಗಿ ಪಶ್ಚಾತಾಪ ಪಡುತ್ತಾನೆ. ಆದರೆ, ಈ ಸತ್ಯ ಅರಿವಾಗುವಷ್ಟರಲ್ಲಿ ಅವನ ಬದುಕಿನ ಅತ್ಯಮೂಲ್ಯ ಸಮಯ ಗತಿಸಿ ಹೋಗಿರುತ್ತವೆ.
ಯಾವುದೇ ಸಂಬಂಧವಿರಲಿ... ಆ ಸಂಬಂಧ ಎಂದೂ ಬಾಡದಿರಲಿ. ಅದರಲ್ಲಿ 'ಪ್ರೀತಿ-ವಿಶ್ವಾಸ-ಪ್ರಾಮಾಣಿಕತೆ' ಸದಾ ನಳನಳಿಸುತ್ತಿರಲಿ. 'ನಲಿಯಲಿ ನಲಿಯಲಿ, ಯಾರ ಪ್ರೀತಿಯೂ ಛೇದವಾಗದಿರಲಿ.......!! 

ಒಂದು ಅಳಿಲು ಮರಿಯ ಕಥೆ....

ಕಾಲೇಜ್ ಮುಗಿಸಿ ಲಗು ಬಗೆಯಲ್ಲಿ ಮನೆಗೆ ಬಂದಾಕೆ, ಚಪ್ಪಲಿಯನ್ನು ತೆಗೆಯದೆ ಒಳಗೆ ಪ್ರವೇಶಿಸಿದಳು. ಆಲೂ.... ಆಲೂ ಎಂದು ಒಂದೇ ಸಮನೇ ಕೂಗಿದಳು. ಮನೆಯೆಲ್ಲ ಹುಡುಕಾಡಿದಳು. ಸುತ್ತೆಲ್ಲ ತಡಕಾಡಿದಳು. ಊಹೂಂ..... ಎಲ್ಲಿಯೂ ಆಲೂ ಕಂಡು ಬಂದಿಲ್ಲ. ಅಲ್ಲಿಯೇ ಕುಸಿದು ಬಿದ್ದಳು. ಬಿಕ್ಕಿ ಬಿಕ್ಕಿ ಅತ್ತಳು....!

ನಾಗರಾಜ್ ಬಿ.ಎನ್.
ಅವಳ ಹೆಸರು ಇಂಚರ. ಪ್ರಬುದ್ಧ ಮನಸ್ಸಿನ ಹುಡುಗಿ. ಕೇರಳದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ತನ್ನ ಶಿಕ್ಷಣವನ್ನು ಮುಂದುವರಿಸುತ್ತಿದ್ದಾಳೆ.
ಪ್ರತಿ ದಿನದಂತೆ ಅಂದು ಕೂಡಾ ಅವಳು ಕಾಲೇಜಿಗೆ ಹೋಗುತ್ತಿದ್ದಳು. ಅಲ್ಲೆ ಪಕ್ಕದ ರಸ್ತೆಯಲ್ಲಿ ಚಿಕ್ಕ ಯಾವುದೋ ಚಿಕ್ಕ ಪ್ರಾಣಿಯೊಂದು ತೆವಳುತ್ತಾ ಹೋಗುತ್ತಿತ್ತು. ಕುತೂಹಲದಿಂದ ಅದರ ಬಳಿಗೆ ಹೋದ ಅವಳು, ಒಮ್ಮೆಲೆ ಆತಂಕಗೊಂಡಳು.
ಅದು ಅಳಿಲಿನ ಮರಿ. ಜನ್ಮ ತಳೆದು ಬಹುಶಃ ಹದಿನೈದು ದಿನವಾಗಿರಬಹುದು. ಈಗಷ್ಟೆ ರೋಮಗಳು ಪುಟ್ಟದಾಗಿ ಹುಟ್ಟಿಕೊಳ್ಳುತ್ತಿದ್ದವು. ತಾಯಿ ಅಳಿಲಿನಿಂದ ಅದು ತಪ್ಪಿಸಿಕೊಂಡು ರಸ್ತೆಗೆ ಬಂದಿತ್ತು. ಮುದ್ದು-ಮುದ್ದಾಗಿ ಕಾಣುತ್ತಿರುವ ಆ ಮರಿಯನ್ನು ಅಲ್ಲಿಯೇ ಬಿಟ್ಟು ಹೋದರೆ, ಅಪಾಯ ಎಂದರಿತ ಇಂಚರ, ಅದನ್ನು ಕಾಲೇಜಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದಳು.
 ನಿಧಾನವಾಗಿ ಹು ಎತ್ತುವಂತೆ ಆ ಪುಟ್ಟ ಅಳಿಲಿನ ಮರಿಯನ್ನು ಎತ್ತುಕೊಂಡು, ಪ್ರೀತಿಯಿಂದ ಅದರ ಮೈ ಸವರಿ, ಒಂದು ಮುತ್ತನಿಟ್ಟಳು. ತನ್ನ ಕಾಲೇಜಿನ ಬ್ಯಾಗ್ನಲ್ಲಿಯೇ ಒಂದು ಜಾಗ ಮಾಡಿ, ಜೋಪಾನವಾಗಿ ಇರಿಸಿ ಕಾಲೇಜ್ ಕಡೆ ಮುಖ ಮಾಡಿದಳು.
ಅಅವಳ ಪುಣ್ಯವೋ ಏನೋ ಅಂದು, ಅವಳ ಪಕ್ಕ ಕುಳಿತುಕೊಳ್ಳುವ ಸ್ನೇಹಿತೆಯೊಬ್ಬಳು ಕಾಲೇಜಿಗೆ ಬಂದಿರಲಿಲ್ಲ. ಅಳಿಲಿನ ಮರಿಯಿದ್ದ ಕಾಲೇಜ್ ಬ್ಯಾಗ್'ನ್ನು ಅಲ್ಲಿಯೇ ಇರಿಸಿ, ತನ್ನ ಹಿಂಬದಿ ಕುಳಿತಿರುವ ಸ್ನೇಹಿತೆಗೆ ತಿಳಿಸುತ್ತಾಳೆ. `ಪ್ಲೀಸ್ ಕಣೆ, ಬ್ಯಾಗ್ಲ್ಲಿ ಅಳಿಲಿನ ಮರಿ ಇದೆ. ದಾರಿಯಲ್ಲಿ ತೆವಳುತ್ತಾ ಹೋಗುತ್ತಿತ್ತು. ಚಿಕ್ಕದಾಗಿ ಚಿಂವ್... ಚಿಂವ್ ಎಂದು ಶಬ್ದ ಮಾಡುತ್ತದೆ. ಭಯ ಪಡಬೇಡ' ಎಂದು.
ಉಪನ್ಯಾಸ, ಪ್ರಸೆಟೇಶನ್ ಸಂದರ್ಭ ಎಲ್ಲಿ ಆ ಪುಟ್ಟ ಮರಿ ಬ್ಯಾಗ್ನಿಂದ ಹೊರಗೆ ಬಂದು ರಾದ್ದಾಂತ ಮಾಡುತ್ತದೋ ಎಂದು ಭೀತಳಾಗಿದ್ದಳು. ಉಸಿರುಕಟ್ಟುವ ಆ ಸನ್ನಿವೇಶವನ್ನು ಹಾಗೋ... ಹೀಗೋ ಎಂದು ಕಳೆದು, ನಿಟ್ಟುಸಿರು ಬಿಟ್ಟಳು. ಎಮದು ಕಾಣದ ಸಂತಸ ಅವಳಲ್ಲಿ ಮನೆ ಮಾಡಿತ್ತು. ಮನಸ್ಸು ಬಾನೆತ್ತರಕ್ಕೆ ಜೀಕುತ್ತಿತ್ತು.
ಅದೇ ಸಂತೋಷದಲ್ಲಿ ತೇಲಾಡುತ್ತ, ಪಿಜಿಗೆ ಬಂದಳು. ಬಂದವಳೇ ಆ ಅಳಿಲಿನ ಮರಿಯ ಹೊಟ್ಟೆಗೆ ಸ್ವಲ್ಪ ಹಾಲುಣಿಸಿ, ಅದರ ಹಸಿವನ್ನು ನೀಗಿಸಿದಳು. ಅದರ ವಾಸಕ್ಕಾಗಿ ಒಂದು ರಟ್ಟಿನ ಗೂಡನ್ನು ತಯಾರಿಸಿದಳು. ಒಂದು ಚೆಂದದ ಹೆಸರಿಡಬೇಕಲ್ಲ ಎಂದು ಯೋಚಿಸಿ... ಯೋಚಿಸಿ... 'ಆಲೂ...' ಎಮದು ನಾಮಕರಣ ಮಾಡಿ ಖುಷಿ ಪಟ್ಟಳು.
ಬಿಡುವ ಸಿಕ್ಕಾಗಲೆಲ್ಲ ಅದರ ಜೊತೆ ಆಡುತ್ತ, ಮುದ್ದಾಡುತ್ತ ತನ್ನ ಮನಸ್ಸಿನ ಭಾವನೆಯನ್ನು ಬಿಚ್ಚಿಡುತ್ತಿದ್ದಳು. ಕೇವಲ ನಾಲ್ಕು ಗೋಡೆಗಳ ನಡುವೆಯೇ ಬದುಕುತ್ತಿದ್ದ ಅವಳಿಗೆ `ಆಲೂ' ಏಕಾಂತ ನೀಗಿಸುವ ಸ್ನೇಹಿತನಾಗಿದ್ದ. ಅವಳು ಕರೆದಾಗಲೆಲ್ಲ ಗೂಡಿನಿಂದ ಇಣಕಿ ಹಾಕಿ, ಕಣ್ಣನ್ನು ಪಿಳಿಪಿಳಿ ಮಾಡುತ್ತಿದ್ದ. ಒಮ್ಮೊಮ್ಮೆ ಅವಳಿದ್ದಲ್ಲಿಗೆ ಬಂದು, ಮೈ-ಮೇಲೆಲ್ಲ ಓಡಾಡಿ ಪ್ರೀತಿ ತೋರಿಸುತ್ತಿದ್ದ.
ಇಂಚರ ಕಾಲೇಜಿಗೆ ಹೋಗುವಾಗ ಹಾಲು, ಹಣ್ಣುಗಳನ್ನು ಆಲೂವಿನ ಪಕ್ಕ ಇಟ್ಟು ಹೋಗುತ್ತಿದ್ದಳು. ಅವಳು ಬರುವುದರೊಳಗೆ ತನಗೆಷ್ಟು ಬೇಕೋ ಅಷ್ಟನ್ನು ತಿಂದು, ಕುಡಿದು ಅಲ್ಲಿಯೇ ಆಟವಾಡುತ್ತ ಇರುತ್ತಿದ್ದ. ಕಾಲೇಜು ಎಷ್ಟು ಹೊತ್ತಿಗೆ ಬಿಡುತ್ತಾರೋ ಎಂದು ಪ್ರತಿದಿನ ಇಂಚರ ಎದುರು ನೋಡುತ್ತಿದ್ದಳು. ಅವಳ ಮನಸ್ಸೆಲ್ಲ ಆಲೂನೇ ಆವರಿಸಿದ್ದ. ಎಷ್ಟು ಹೊತ್ತಿಗೆ ಪಿಜಿಗೆ ಹೋಗುತ್ತೇನೆ... ಆಲೂನ ನೋಡುತ್ತೇನೆ ಎಂದೆನಿಸುತ್ತಿತ್ತು. ಇತ್ತ ಆಲೂ ಕೂಡಾ, ಸಂಜೆ ನಾಲ್ಕು ಗಮಟೆ ಆಗುತ್ತಿದ್ದಂತೆ, ಇಂಚರಾಳ ದಾರಿ ಕಾಯುತ್ತ, ಒಂದೇ ಸಮನೆ ಕಿರುಚುತ್ತ ಇರುತ್ತಿದ್ದ. ಎಲ್ಲಿಯಾದರೂ ಅವಳು ಬರಲು ತಡವಾಯಿತೆಂದರೆ ಸಾಕು, ಪಿಯಲ್ಲಿದ್ದ ಅವಳ ಸಣ್ಣ-ಪುಟ್ಟ ಸಾಮಾನುಗಳನ್ನೆಲ್ಲ ಕೆಡವಿ ಹಾಕಿ, ಕೋಪ ತೀರಿಸಿಕೊಳ್ಳುತ್ತಿದ್ದ. ಹೀಗೆ ಅವರಿಬ್ಬರ ಬಂಧ ಗಾಢವಾಗಿತ್ತು ಒಂದರ್ಥದಲ್ಲಿ 'ಆಲೂ' ಇಂಚರಾಳ ಬದುಕಿನ ಭಾಗ್ಯ ದೇವತೆಯಂತಾಗಿದ್ದ.
ಹೀಗಿರಲು ಒಂದು ದಿನ ಆಲೂ, ಎಂದಿನ ಸಂತೋಷದಿಂದಲೇ ಹಣ್ಣುಗಳನ್ನು ಖರೀದಿಸಿ ಪಿಜಿಯತ್ತ ಹೆಜ್ಜೆ ಹಾಲಿದ್ದಳು. ಒಳಗೆ ಪ್ರವೇಶಿಸುತ್ತಿದ್ದಂತೆ ಆಲೂ... ಆಲೂ... ಎಂದು ಕೂಗಿದಳು. ಏನೋ ಸಂಶಯ...! ಒಳಗೆಲ್ಲ ಹುಡುಕಾಡಿದಳು... ಆಲೂನ ಗೂಡನ್ನು ನೋಡಿದಳು... ಪುಸ್ತಕದ ಸಂದಿಯನ್ನು ಅರಸಿದಳು.... ಇಲ್ಲ, ಆಲೂ ಕಾಣುತ್ತಿಲ್ಲ. ಪಿಜಿಯ ಹೊರಗೆ ಬಂದು ಸುತ್ತೆಲ್ಲ ಹುಡುಕಾಡಿದಳು. ಊಹೂಂ...... ಎಲ್ಲಿಯೂ ಆಲೂ ಕಾಣುತ್ತಿಲ್ಲ. ಒಳಗೆ ಬಂದು ನೋಡಿದಳು. ಸೇಬು ಹಣ್ಣಿನ ಸ್ವಲ್ಪ ಭಾಗ ಮಾತ್ರ ಆಲೂ ತಿಂದಿದ್ದ. ಹಾಲು ಮಾತ್ರ ಹಾಗೆ ಇತ್ತು. ಅಂದರೆ, ಅವನು ಮನೆ ಬಿಟ್ಟು ಹೋಗಿ ನಾಲ್ಕೈದು ಗಂಟೆಗಳು ಉರುಳಿವೆ ಎಂದು ಯೋಚಿಸಿದಳು. ಹೃದಯ ಉಮ್ಮಳಿಸಿ ಬಂದು, ಅಲ್ಲಿಯೇ ಕುಸಿದು ಬಿದ್ದಳು.
ಬಿಕ್ಕಿ ಬಿಕ್ಕಿ ಅತ್ತಳು. ಮೈ-ಮನವೆಲ್ಲ ನಿತ್ರಾಣಗೊಂಡಿದ್ದವು. ಕಣ್ಣೆಲ್ಲ ಕೆಂಡದ ಉಂಡೆಯಂತಾಗಿದ್ದವು. ಏನು ಮಾಡಬೇಕೆಂದು ತೋಚದೆ.... ಪಿಜಿಯ ಹೊರಗೆ ಬಂದು ಆಗಸ ನೋಡುತ್ತ ಕುಳಿತಳು. ಬಾನು ತನ್ನ ದೈನಂದಿನ ಕಾರ್ಯ ಮುಗಿಸಿ ನಿಧಾನವಾಗಿ ಪಡುವಣದಲ್ಲಿ ಅಸ್ತಂಗತನಾಗುತ್ತಿದ್ದ. ಪೂರ್ಣ ಚಂದಿರ ಹಾಲ್ನೊರೆಯ ಬೆಳಕನ್ನು ಚೆಲ್ಲುತ್ತ, ಮೋಡದ ಮರೆಯಲ್ಲಿ ಇಣುಕುತ್ತಿದ್ದ. ಇವೆಲ್ಲವನ್ನೂ ತದೇಕ ಚಿತ್ತದಿಂದ ಇಂಚರಾ ನೋಡುತ್ತಿದ್ದಳು. ಪೂರ್ಣ ಚಂದಿರನಲ್ಲಿ ಮನೆ ಬಿಟ್ಟು ಹೋದ ಆಲೂ ಕಂಡ ಹಾಗೆ ಅವಳಿಗೆ ಭಾಸವಾಗುತ್ತದೆ. ಆಲೂ... ಎಂದು ಹೃದಯ ತುಂಬಿ ಕರೆಯುತ್ತಾಳೆ. ಅರಿವಿಲ್ಲದೆ ಮತ್ತೆ ಕಣ್ಣಂಚು ಒದ್ದೆಯಾಗುತ್ತವೆ.
ಬೆಳದಿಂಗಳ ರಾತ್ರಿಯಲ್ಲಿ ಮುಂಗುರುಳು ಸೋಕುವ ತಣ್ಣನೆಯ ತಂಗಾಳಿಯಲಿ ಹಾಡೊಂದು ತೇಲಿ ಬರುತ್ತಿತ್ತು.... `ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ....'
ಪ್ರತೀ ಹುಣ್ಣಿಮೆಗೂ ಇಂಚರಾಳಿಗೆ ಆಲೂ ನೆನಪಾಗುತ್ತಾನೆ. ಅವನಿಗಾಗಿ ಅಳುತ್ತಾಳೆ. ಮರುಗುತ್ತಾಳೆ. ಚಂದಿರನಲ್ಲಿ ಆಲೂನ ಕಾಣುತ್ತಾಳೆ. ದಾರಿಯಲ್ಲಿ ಹೋಗುವಾಗ ಅಳಿಲು ಕಂಡು ಬಂದರೆ ಆಲೂ... ಎಮದು ಕರೆಯುತ್ತಾಳೆ. ಎಲ್ಲೆ ಇದ್ದರೂ ಎನ್ನಾಗಿರು ಎಂದು ಭಾವುಕಳಾಗಿ ಮನಸ್ಸಲ್ಲಿಯೇ ಭಗವಂತನಲ್ಲಿ ಪ್ರಾರ್ಥಿಸುತ್ತಾಳೆ 

ಮರಳಿ ಗೂಡಿಗೆ.......... 

ನಾಗರಾಜ್. ಬಿ.ಎನ್.
-------------
ಸದಾ ಪಾದರಸದಂತೆ ಚಟುವಟಿಕೆಯಿಂದ ಇರುತ್ತಿದ್ದ ಶ್ರೀವತ್ಸ, ಇತ್ತೀಚೆಗೆಕೋ ಮಂಕು ಬಡಿದವರ ಹಾಗೆ ಇರುತ್ತಿದ್ದ. ಮುಂಜಾನೆ ಕಚೇರಿಗೆ ಹೋಗುವುದು, ಸಾಯಂಕಾಲ ಮನೆಗೆ ಬರುವುದು.... ಇಷ್ಟೇ ಅವನ ಉಳಿದ ದಿನಚರಿಯಾಗಿತ್ತು. ಸ್ನೇಹಿತರ ಒಡನಾಟವಿಲ್ಲ... ಹೊಟೆಲ್, ಪಾರ್ಕ್ ಸುತ್ತಾಟವಿಲ್ಲ... ಹಾಗೆ, ಮನೆಯಲ್ಲಿ ಅಪ್ಪ-ಅಮ್ಮರ ಜೊತೆಯೂ ಮಾತುಕತೆ ಇರಲಿಲ್ಲ.
---------------
ಕೆಲ ವರ್ಷಗಳ ಹಿಂದೆ...........
ಶ್ರೀವತ್ಸ ಬಡತನವನ್ನೇ ತಿಂದುಂಡು ಬೆಳೆದವನು. ಆತನ ತಂದೆ ದಿನಗೂಲಿ ಕೆಲಸ ಮಾಡಿದರೆ, ತಾಯಿ ಊರಿನ ಕೆಲವು ಮನೆಯ ಪಾತ್ರೆಗಳ ಮುಸುರಿ ತಿಕ್ಕುತ್ತಿದ್ದಳು. ಒಂದೊಂದು ದಿನ, ಒಪ್ಪತ್ತಿನ ತುತ್ತಿಗೂ ಆ ಕುಟುಂಬ ಪರದಾಡುತ್ತಿತ್ತು. ದಟ್ಟ ದಾರಿದ್ರ್ಯದಲ್ಲಿ ಅವರ ಸಂಸಾರದ ಗಾಲಿ ಕಾಲನ ಜೊತೆ ಉರುಳುತ್ತಿತ್ತು.
ಮಣ್ಣಿನ ಗೋಡೆಯ ಕೆಂಪು ಹೆಂಚಿನ ಮೇಲ್ಛಾವಣಿ ಹೊದಿಕೆಯಿರುವ ಎರಡು ಕೋಣೆಯಿರುವ ಪುಟ್ಟದಾದ ಮನೆ ಶ್ರೀವತ್ಸನದಾಗಿತ್ತು. ಅಲ್ಲಿ ಶ್ರೀವತ್ಸನ ತಂದೆಯೇ ಮಹಾರಾಜ, ತಾಯಿಯೇ ಪಟ್ಟದರಸಿ. ಹತ್ತನೇ ತರಗತಿಗೆ ಹೋಗುತ್ತಿದ್ದ ಆತನೇ ಯುವರಾಜ. ಆ ಪುಟ್ಟ ಮನೆಯೇ ಅವರಿಗೆ ಆಸ್ಥಾನ. ಹಾಗೆ, ಕೊಟ್ಟಿಗೆಯಲ್ಲಿದ್ದ ದನ-ಕರುಗಳು, ಮನೆಯ ಬೊಂಬಿಗೆ ಹಾಗೂ ಫೊಟೋದ ಹಿಂದೆ ಗೂಡು ಕಟ್ಟಿಕೊಳ್ಳುತ್ತಿರುವ ಗುಬ್ಬಿಗಳು, ಹಿತ್ತಲನ್ನೆಲ್ಲ ಕೆದರಿ ಹಾಳು ಮಾಡುವ ಕೋಳಿಗಳೇ ಅವರ ಪುಟ್ಟ ಸಾಮ್ರಾಜ್ಯದ ಸೇವಕರಾಗಿದ್ದರು.
ಮನೆಯ ಅನತಿ ದೂರದಲ್ಲಿರುವ ಹರಿವ ತೊರೆ... ಶಾಲೆಗೆ ಹೋಗುವ ನಡು ದಾರಿಯಲ್ಲಿರುವ ಹುಣಸೆ ಮರ... ಮುಸ್ಸಂಜೆ ಸಮಯದಲ್ಲಿ ಅಜ್ಜಿಕಥೆ ಮೂಲಕ ಕಲ್ಪನಾ ಲೋಕಕ್ಕೆ ಕರೆದೊಯ್ಯುವ ಸಣ್ಣಜ್ಜಿ... ಸೋಮಪ್ಪನ ಮಾವಿನ ತೋಟ... ಮುಂಗಾರಿನ ಮೊದಲ ಮಳೆ... ಮೈಮರಿಸುವ ಆ ಮಣ್ಣಿನ ಘಮ... ಹಚ್ಚ ಹಸಿರಿನಿಂದ ಕಂಗೊಳಿಸುವ ಮನೆ ಮುಂದಿನ ಬೆಟ್ಟ... ಸಂಜೆಯಾಗುತ್ತಿದ್ದಂತೆ ಜುಂಯ್ ಗುಡುವ ಜಿರಲೆಗಳು... ಇವುಗಳ ಜೊತೆಯಲ್ಲಿಯೇ ಶ್ರೀವತ್ಸ ತನ್ನ ಬಾಲ್ಯದ ದಿನಗಳನ್ನು ಕಳೆದಿದ್ದ.
ಮುಸುರೆ ತಿಕ್ಕಿ, ಕೂಲಿ ಮಾಡಿ ಹಾಗೋ ಹೀಗೋ ಎಂದು ಶ್ರೀವತ್ಸನಿಗೆ ಕಾಲೇಜಿನವರೆಗಿನ ಶಿಕ್ಷಣವನ್ನು ಅವನ ಹೆತ್ತವರು ನೀಡುತ್ತಾರೆ. ಬಡತನದ ಅನುಭವ ಅವನ ಬದುಕನ್ನು ಪರಿ-ಪಕ್ವವಾಗಿಸಿತ್ತು. ಓದಿನಲ್ಲಿ ಬುದ್ಧಿವಂತನಾಗಿದ್ದ ಆತ, ಪ್ರತಿಷ್ಠಿತ ಕಾಲೇಜೊಂದರಲ್ಲಿ ಸೀಟ್ನ್ನು ಪಡೆಯುತ್ತಾನೆ. ಬದುಕಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಲ್ಲಿರುವ ಅವನು, ಬ್ಯಾಂಕ್ನಲ್ಲಿ ಶೈಕ್ಷಣಿಕ ಸಾಲ ಪಡೆದು, ಕಾಲೇಜ್ ಪ್ರವೇಶಗೆ ಹೋಗುತ್ತಾನೆ.
ನಾಲ್ಕು ವರ್ಷದ ವಿದ್ಯಾಭ್ಯಾಸ ಮುಗಿಸುತ್ತಿದ್ದಂತೆ ಶ್ರೀವತ್ಸ, ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದಕ್ಕೆ ಕ್ಯಾಂಪಸ್ ಸಂದರ್ಶನದಲ್ಲಿ ನೇಮಕವಾಗುತ್ತಾನೆ. 'ಪ್ರಾರಂಭದಲ್ಲಿಯೇ ಕೈತುಂಬಾ ಸಂಬಳದ ಉದ್ಯೋಗ. ಬಡತನಕ್ಕೆ ವಿದಾಯ ಹೇಳುವ ದಿನಗಳು ಸಮೀಪಿಸುತ್ತಿವೆಯಲ್ಲ' ಎಂದು ಮನಸ್ಸಲ್ಲಿಯೇ ಯೋಚಿಸುತ್ತ, ಭಗವಂತನಿಗೆ ಥ್ಯಾಂಕ್ಸ್ ಹೇಳುತ್ತಾನೆ.
--------------------------------------
ಕೆಲವು ತಿಂಗಳ ಹಿಂದೆ...........
ಶ್ರೀವತ್ಸ ಉದ್ಯೋಗಿಯಾಗಿ ಎರಡು ವರ್ಷಗಳು ಉರುಳಿವೆ. ಬಡತನದ ದಿನಗಳು ಹಂತ ಹಂತವಾಗಿ ದೂರವಾಗುತ್ತಿವೆ. ಇತ್ತ ಇವನು ಕೂಡಾ, ಹೆತ್ತವರನ್ನು ತನ್ನಲ್ಲಿಯೇ ಕರೆಸಿಕೊಳ್ಳಬೇಕೆಂದು ಯೋಚಿಸುತ್ತಿದ್ದಾನೆ. ಮಹಾನಗರದಲ್ಲೊಂದು ಪ್ಲಾಟ್ ಖರೀದಿಸುತ್ತಾನೆ. ಮನೆಗೆ ಬೇಕಾದ ಎಲ್ಲ ಅಗತ್ಯ ಸಾಮಾನುಗಳನ್ನು, ಅಲಂಕಾರಿಕ ವಸ್ತುಗಳನ್ನು ತರುತ್ತಾನೆ. ತುಂಬು ಸಂಸಾರಕ್ಕೆ ಏನೇನು ಬೇಕೋ ಅವೆಲ್ಲವೂ ರಾಶಿ ರಾಶಿಯಾಗಿ ಮೂಟೆಕಟ್ಟುಕೊಂಡು ಬಿದ್ದಿವೆ. ಅಪ್ಪ-ಅಮ್ಮರನ್ನು ಕರೆಸಿಕೊಳ್ಳುತ್ತಾನೆ. ಅವರ ಕಾಲಿಗೆರಗಿ ಕಣ್ಣೀರಿನಿಂದ ಅವರ ಪಾದವನ್ನು ತೊಳೆಯುತ್ತಾನೆ. ಅಮ್ಮ-ಅಪ್ಪಾ, ಇವೆಲ್ಲ ನೀವು ನೀಡಿದ ಭಿಕ್ಷೆ. ನೀವು ಹಸಿದುಕೊಂಡು, ನನ್ನ ಹೊಟ್ಟೆ ತುಂಬಿಸಿ ಇಷ್ಟು ದೊಡ್ಡವನನ್ನಾಗಿ ಮಾಡಿದ್ದೀರ. ಆ ದಿನಗಳೆಲ್ಲಿ...? ಈ ದಿನಗಳೆಲ್ಲಿ..? ಕಷ್ಟಪಟ್ಟರೆ ಸುಖವಿದೆ. ನಾವು ಕೂಡಾ ಈಗ ಸ್ಥಿತಿವಂತರು. ಅಲ್ಲವೇನಮ್ಮ' ಎನ್ನುತ್ತಾನೆ. ನಗರ ಜೀವನದಲ್ಲಿ ಆ ಪುಟ್ಟ ಕುಟುಂಬ ಯಾವೊಂದು ಅಡೆತಡೆಯಿಲ್ಲದೆ ಎರಡು ವರ್ಷ ನಿರಾತಂಕವಾಗಿ ಕಳೆದಿದೆ.
------------------------------------
ಕೆಲ ದಿನಗಳ ಹಿಂದೆ.....
ಬಡತನದ ಬೇಗೆಯಲ್ಲಿ ಬೆಂದು ಬಂದ ಆ ಪುಟ್ಟ ಕುಟುಂಬದ ಆಧಾರ ಸ್ಥಂಭ ನಲಗುತ್ತಿದೆ. ನಗರ ಜೀವನ ಆ ಶ್ರೀವತ್ಸನಿಗೆ ಸಾಕಾಗಿ ಹೋಗಿದೆ. ಯಾಂತ್ರಿಕತೆಯ ಬದುಕಿನಲ್ಲಿ ಅವನಿಗೆ ಮಾನವತೆಯೇ ಮರೆತು ಹೋದಂತಾಗಿದೆ. ದಿನದ ಬಹುತೇಕ ಸಮಯ ಜಂಜಾಟದಲ್ಲಿಯೇ ವ್ಯರ್ಥವಾಗುತ್ತಿದೆ. ರಕ್ತ ಸಂಬಂಧ, ಒಡನಾಟದ ಸಂಬಂಧಗಳೆಲ್ಲ ಮಾಯವಾಗುತ್ತಿವೆ. ದಿನ ಬೆಳಗಾದರೆ ಸಾಕು ಕಚೇರಿ, ಸಾಫ್ಟವೇರ್ ಎನ್ನುತ್ತ ಅದರಲ್ಲಿಯೇ ಸಮಯ ಹೋಗುತ್ತಿದೆ. ವಾರದಲ್ಲಿ ಒಂದು ದಿನ ಬಿಡುವಿದ್ದರೂ, ಅದು ಕೂಡಾ ವಿಶ್ರಾಂತಿಯಲ್ಲಿಯೇ ಕಳೆದು ಹೋಗುತ್ತಿದೆ. ಕೈ ತುಂಬಾ ಸಂಬಳ, ಐಷಾರಾಮಿ ಜೀವನ ಇದ್ದರೇನಂತೆ. ಮನಸ್ಸಿಗೆ ನೆಮ್ಮದಿಯೇ ಇಲ್ಲವಾಗಿದೆ. ಏನು ಮಾಡಬೇಕೆಂದು ತೋಚದೆ ಹುಚ್ಚನಂತಾಗಿದ್ದಾನೆ. ಮನಸ್ಸಿನ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದಾನೆ. ತೀರಾ ಭಾವುಕನಾಗಿ ಹೋಗಿದ್ದಾನೆ. ಒಟ್ಟಾರೆ ಮಂಕು ಕವಿದವರಂತೆ ದಿನ ದೂಡುತ್ತಿದ್ದಾನೆ.
ಮಗನ ಈ ವರ್ತನೆಯಿಂದ ಕಂಗಾಲಾದ ತಂದೆ, ಅವನ ತಲೆ ನೇವರಿಸಿ ಕೇಳುತ್ತಾನೆ.
`ಏನೋ ವತ್ಸು, ಯಾಕೆ ಹೀಗಾಗಿದ್ದೀಯಾ? ಏನಾಯ್ತು? ನಮಗೆ ನಿನ್ನನ್ನು ಬಿಟ್ಟು ಇನ್ಯಾರಿದ್ದಾರೋ? ನಿನ್ನ ಈ ಸ್ಥಿತಿ ನೋಡಲು ನಮ್ಮಿಂದ ಆಗ್ತಾ ಇಲ್ವೋ?' ಎಂದು ಕಣ್ಣಿರಾಗುತ್ತಾನೆ.
ಬಡತನದ, ಉಪವಾಸ, ಕಷ್ಟಗಳ ಸರಮಾಲೆಯಿದ್ದಾಗಲೂ ಒಂದು ಹನಿ ಕಂಬನಿ ಹಾಕದ ಅಪ್ಪ, ಈಗ......?
'ಅಯ್ಯೋ....' ಎಂದು ಉಮ್ಮಳಸಿ, ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ. ನಿಧಾನವಾಗಿ ಸಾವರಿಸಿಕೊಂಡು, ಅಪ್ಪನ ಕೈ ಹಿಡಿದು ಹೇಳುತ್ತಾನೆ ಶ್ರೀವತ್ಸ...
'ಅಪ್ಪ ನಾವು ಬೆಳೆದದ್ದು, ಆ ಪುಟ್ಟ ಊರಲ್ಲಿ. ಅಲ್ಲಿಯ ಪರಿಸರ, ಮರ, ಗಿಡ, ಬಳ್ಳಿ, ಬೆಟ್ಟ, ಪ್ರಾಣಿ, ಪಕ್ಷಿ, ಮಣ್ಣು, ನೆರೆ-ಹೊರೆಯವರು ಎಲ್ಲವೂ ನೆನಪಾಗುತ್ತಿವೆಯಪ್ಪ. ಸ್ವಚ್ಛಂದವಾಗಿ ವಿಹರಿಸಿದ ಆ ನನ್ನ ಊರು ಎಲ್ಲಿ, ಉಸಿರು ಕಟ್ಟುವ ವಾತಾವರಣದಲ್ಲಿ ಬದುಕು ದೂಡುತ್ತಿರುವ ಈ ಮಹಾನಗರವೆಲ್ಲಿ? ನಾವಿದ್ದ ಆ ಪುಟ್ಟ ಮನೆ, ಗೋಡೆಗೆ ಬಳಿದ ಸಗಣಿ, ಕೆಂಪು ಹೆಂಚುಗಳು, ಮನೆಯೊಳಗೆಲ್ಲ ಚಿಂವ್.. ಚಿಂವ್ ಎಂದು ಓಡಾಡಿ ಕುಣಿದ ಗುಬ್ಬಚ್ಚಿಗಳು, ಆ ತೊರೆ, ಹಳ್ಳ, ಬೆಟ್ಟ, ಗುಡ್ಡ, ಸತ್ತು ಹೋದ ಕತೆ ಹೇಳುವ ಸಣ್ಣಜ್ಜಿ ಇವೆಲ್ಲವೂ ನೆನಪಾಗಿ ಕಾಡುತ್ತಿವೆಯಪ್ಪ. ಈ ಯಾಂತ್ರಿಕ ಜೀವ ಸಾಕಾಗಿದೆ. ಏನು ಮಾಡಬೇಕೆಂದು ತೋಚುತ್ತಿಲ್ಲ. ಪ್ಲೀಸ್ ಅಪ್ಪಾ, ನನ್ನನ್ನೇ ನಾನು ಕಳೆದುಕೊಂಡು ಬಿಟ್ಟಿದ್ದೇನೆ. ನಾನು ಮೊದಲಿನ ಶ್ರೀವತ್ಸನಾಗಬೇಕು. ಪ್ರಾಣಿ, ಪಕ್ಷಿಗಳ ಜೊತೆ ಬದುಕಬೇಕು. ಅಲ್ಲೇ ಬದುಕಿನ ಸಾರ್ಥಕತೆ ಪಡೆಯಬೇಕು' ಎಂದು ಈವರೆಗೆ ಹುಗಿದಿಟ್ಟಿದ್ದ ಮನದಾಳದ ಎಲ್ಲ ಭಾವನೆಗಳನ್ನು ತೆರೆದಿಡುತ್ತಾನೆ.
ಮಗನ ಒಂದೊಂದು ಮಾತುಗಳು ಅಪ್ಪನ ಕರುಳನ್ನು ಹಿಚುಕಿದಂತಾಗುತ್ತದೆ.
ಏನು ಮಾಡುವುದು ಎಂದು ಮನಸ್ಸಲ್ಲಿಯೇ ಲೆಕ್ಕಾಚಾರ ಹಾಕುತ್ತಿದ್ದಾನೆ. ಇರುವುದೊಂದೆ ದಾರಿ, ವಾಪಸ್ಸು ಹಳ್ಳಿಗೆ ಹೋಗುವುದು. ಸಂಸಾರಕ್ಕೆಂದು ಒಂದಿಷ್ಟು ಭೂಮಿ ಖರೀದಿಸಿ ವ್ಯವಸಾಯ ಮಾಡುವುದು ಎಂದು ಆಲೋಚಿಸಿ ಮಗನಲ್ಲಿ ತನ್ನ ನಿಧರ್ಾರ ತಿಳಿಸುತ್ತಾನೆ.
ಅಪ್ಪನ ಆ ಮಾತನ್ನು ಕೇಳುತ್ತಿದ್ದಂತೆ ಶ್ರೀವತ್ಸನ ಮೊಗ, ಆಗ ತಾನೆ ಮುಂಜಾನೆಯ ಬೆಳಕಿಗೆ ಅರಳಿದ ಮೊಗ್ಗಿನ ಹಾಗೆ ಅರುಳುತ್ತದೆ. ಅರೆಕ್ಷಣದಲ್ಲಿ ಕಣ್ಣುಗಳನ್ನು ಮುಚ್ಚಿ, ಧ್ಯಾನಸ್ಥ ಸ್ಥಿತಿಗೆ ಹೋಗುತ್ತಾನೆ.
-------------------------------------
ಈಗ........
ಶ್ರೀವತ್ಸ ಹೆತ್ತವರ ಸಮೇತ ಹಳ್ಳಿಗೆ ಬಂದಿದ್ದಾನೆ. ಹೊಲ-ಗದ್ದೆಗಳನ್ನು ಖರೀದಿಸಿ ವ್ಯವಸಾಯದಲ್ಲಿ ತೊಡಗಿಕೊಂಡಿದ್ದಾನೆ. ಕಳೆದು ಹೋದ ತನ್ನ ಬದುಕನ್ನು, ಬಾಲ್ಯದಲ್ಲಿ ಆಡಿ-ಬೆಳೆದ ಮಣ್ಣಿನಲ್ಲಿ ಹುಡುಕಿಕೊಂಡಿದ್ದಾನೆ. ಕಥೆ ಹೇಳುವ ಸಣ್ಣಜ್ಜಿಯ ಜಾಗದಲ್ಲಿ ಈಗ ರಾಜಮ್ಮ ಬಂದಿದ್ದಾಳೆ. ಮನೆಯನ್ನು ಸ್ವಲ್ಪ ಒಪ್ಪ-ಓರಣ ಮಾಡಿಕೊಂಡು, ಗುಬ್ಬಚ್ಚಿ ಗೂಡನ್ನು ಫೊಟೋದ ಹಿಂದೆ ಇಟ್ಟಿದ್ದಾನೆ. ಕೋಳಿಗಳನ್ನು ಸಾಕಿ, ಅವುಗಳ ಪಾಲನೆ ಮಾಡುತ್ತಿದ್ದಾನೆ. ದನದ ಕೊಟ್ಟೆಗೆಯ ಎಲ್ಲ ಕೆಲಸವನ್ನು ತಾನೇ ಮಾಡುತ್ತಾನೆ. ಬಿಡುವಾದಾಗೆಲ್ಲ ಕೆರೆದಂಡೆ ಮೇಲೆ ಹೋಗಿ ಒಂದಿಷ್ಟು ಹೊತ್ತು ಕಳೆದು ಬರುತ್ತಾನೆ. ಸ್ನೇಹಿತರ ಜೊತೆ ಬೆಟ್ಟ, ಗುಡ್ಡಗಳನ್ನೆಲ್ಲ ಅಲೆದು, ಅಲ್ಲಿರುವ ಮರ-ಗಿಡಗಳನ್ನು ಪ್ರೀತಿಸಿ, ಹಕ್ಕಿಗಳ ಇಂಪಾದ ಧ್ವನಿಯನ್ನು ಕೇಳುತ್ತ ತನ್ನನ್ನೇ ಮೈಮರೆಯುತ್ತಾನೆ.
ಮಗನ ಆದರ್ಶ ಬದುಕನ್ನು ಕಣ್ತುಂಬಿಸಿಕೊಂಡ ಶ್ರೀವತ್ಸನ ಹೆತ್ತವರು, ಇಂಥ ಮಗನನ್ನು ಹೆತ್ತ ನಾವೇ ಧನ್ಯರು` ಎಂದು ಆನಂದಭಾಷ್ಪ ಹರಿಸುತ್ತಾರೆ 

ನಾನು....
ಕತ್ತಲ ಕೂಪದಲ್ಲಿ ಕರಗಿದ ಹೋದ ತುಂಟ ತಿಮ್ಮಣ್ಣ

ನಾನು ತಿಮ್ಮಣ್ಣ. ನಮ್ಮ ಮನೆ, ಊರು, ಶಾಲೆ, ಸ್ನೇಹಿತರ ಪಾಲಿನ ತುಂಟ ಪೋರ. ನಮ್ಮ ಅಪ್ಪ-ಅಮ್ಮರ ಪಾಲಿನ ಮುದ್ದು ಕಂದ. ಅರಿವಿಲ್ಲದೆ ಕರಾಳ ಕಪ್ಪು ಬಾವಿಯಲ್ಲಿ ಕರಗಿ ಹೋದ ನತದೃಷ್ಟ ಬಾಲಕ.
ಕೊಳವೆ ಬಾವಿಯಲ್ಲಿ ಬಿದ್ದ ನನಗಾಗಿ ಪ್ರಾರ್ಥಿಸಿದ, ಕಂಬನಿಗೆರದ, ಕಣ್ಮುಚ್ಚಿ ಕಾದು ಕುಳಿತ ತಮ್ಮೆಲ್ಲರ ಮುಂದೆ ನನ್ನ ಕೆಲವು ಭಾವನೆಗಳನ್ನು ತೋಡಿಕೊಳ್ಳಬೇಕು ಎನಿಸುತ್ತಿದೆ. ಕಾಣದ ಲೋಕದಿಂದ ನಾನಾಡುವ ಎರಡು ಮಾತುಗಳಿಗೆ ನೀವು ಕಿವಿಯಾಗುವಿರಾ...?
ಅಂದು ಭಾನುವಾರ. ಮನೆಯಂಗಳದಲಿ ಅಕ್ಕಂದಿರ ಜೊತೆ ಆಟವಾಡುತ್ತ ಕುಳಿತಿದ್ದೆ. ಅಷ್ಟರಲ್ಲಿ ದೊಡ್ಡಪ್ಪನ ಮಗ ಬೈಕ್ ತೆಗೆದುಕೊಂಡು ಬಂದ. ಮೊದಲೇ ಬೈಕ್ ಹುಚ್ಚು ಇದ್ದ ನನಗೆ, ಅವನು ಬೈಕ್ ಮೇಲೆ ಬಂದಿದ್ದು ನೋಡಿ ಖುಷಿಯಾಗಿಬಿಟ್ಟಿತು. ಓಡುತ್ತ ಕುಣಿಯುತ್ತ ಅದನೇರಿ ಕುಳಿತುಕೊಂಡೆ. ಸ್ವಲ್ಪ ಹೊತ್ತಿನಲ್ಲಿ ಅಣ್ಣ ತೋಟದ ಕಡೆಗೆ ಹೋಗಲು ಅಣಿಯಾದ. ನಾನು ಕೂಡಾ ಬರುತ್ತೇನೆ ಎಂದು ಹಠ ಹಿಡಿದೆ. ಅಣ್ಣ, 'ಬೇಡ ಬೇಡ' ಎಂದು ಎಂದರೂ ಸುಮ್ಮನಾಗದೆ, ಹತ್ತಿದ ಬೈಕ್ ಮೇಲಿಂದ ಕೆಳಗಿಳಿಯಲೇ ಇಲ್ಲ. ನನ್ನ ಹಠಕ್ಕೆ ಮಣಿದು ಅಣ್ಣ ನನ್ನನ್ನು ಬೈಕ್ ಮೇಲೆ ಗದ್ದೆಗೆ ಕರೆದುಕೊಂಡು ಹೋದ. ಗದ್ದೆ ಬದಿ ಬೈಕ್ ನಿಲ್ಲಿಸಿ ಅಣ್ಣ ನನ್ನ ಕೈ ಹಿಡಿದು ನಡೆಯುತ್ತಿದ್ದ. ಜೀಕುತ್ತ, ಕುಣಿಯುತ್ತ ಹೊಲದ ಕಡೆ ಹೋಗುತ್ತಿದ್ದ ನನಗೆ, ಅದು ನನ್ನ ಅಲ್ಪಾಯುಷ್ಯದ ಕೊನೆಯ ನಡಿಗೆಗಳು ಎಂದು ಗೊತ್ತಿರಲೇ ಇಲ್ಲ..!!
ಅಷ್ಟಕ್ಕೂ ಸಾವೆಂದರೆ ಏನು ಎಂಬುದು ನನ್ನ ಕಲ್ಪನೆಗೆ ನಿಲುಕದ ಸತ್ಯವಾಗಿತ್ತು. ಹಾಗೆಯೇ ನಾವು ಮುಂದುವರಿಯುತ್ತಿದ್ದಂತೆ, ದೂರದಲ್ಲಿ ನನ್ನ ಅಪ್ಪ ಕೊರೆಸಿದ ಕೊಳವೆ ಬಾವಿ ನನಗೆ ಕಂಡಿತು. ನನಗೇಕೋ ಆ ಕೊಳವೆ ಬಾವಿಯೆಂದರೆ ತೀವ್ರ ಕೂತಹಲ. ಅದರಿಂದ ನೀರು ಚಿಮ್ಮುತ್ತದೆ ಎಂದು ಅಪ್ಪ ಹೇಳುತ್ತಿದ್ದರು. ಕೊಳವೆ ಬಾವಿ ತೋಡುವ ದಿನ ನಾನು ಆ ನೀರಿಗಾಗಿ ಕಾದು ಕುಳಿತಿದ್ದೆ. ನೀರು ಬಂದಿರಲಿಲ್ಲ. ಅದನ್ನು ಅಣ್ಣನಿಗೆ ತೋರಿಸುವ ಉತ್ಸಾಹದಲ್ಲಿ ಕೈ ಬಿಟ್ಟು ಓಡಿದ್ದೆ! 'ಅಣ್ಣ ನೋಡು ನೋಡು' ಎಂದು ಕಿರುಚುತ್ತ, ಅಪ್ಪ ಕೊಳವೆ ಬಾವಿಯ ಮೇಲೆ ಹೇರಿದ್ದ ಚೀಲದ ಮೇಲೆ ಕಾಲು ಇಟ್ಟುಬಿಟ್ಟೆ. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಕೊಳವೆ ಬಾವಿಯಲ್ಲಿ ಜಾರತೊಡಗಿದ್ದೆ. ಓಡಿ ಬಂದ ಅಣ್ಣ, ನನ್ನನ್ನು ಹಿಡಿಯಲು ಪ್ರಯತ್ನಿಸಿದ. ಆತನ ಕೈಗಳಿಗೆ ನನ್ನೆರಡು ಕೈ ಬೆರಳುಗಳು ನಿಲುಕಿದಂತಾವು. ಆಕಸ್ಮಿಕವಾಗಿ ಹುಟ್ಟಿದ ಭರವಸೆಯೊಂದು, ಅಷ್ಟೇ ವೇಗದಲ್ಲಿ ಮಿಂಚಿ ಮರೆಯಾಗಿತ್ತು. ನಾನು ನಿಧಾನವಾಗಿ ಆಳಕ್ಕೆ ಜಾರುತ್ತಲೇ ಹೋದೆ. ಅಣ್ಣ ನನ್ನ ಕೈ ಹಿಡಿಯದಾದ. ನಾನು ಜಾರುತ್ತ ಜಾರುತ್ತ ಕಡುಗಪ್ಪಿನ ಕತ್ತಲ ಕೂಪದಲ್ಲಿ ಸರಕ್ಕನೆ ಜಾರಿ ಹೋದೆ. 'ಹಗ್ಗ ಬಿಡು ಅಣ್ಣ.. ಹಗ್ಗ ಬಿಡು' ಎಂದು ಕೂಗುತ್ತಿದ್ದ ನನ್ನ ಧ್ವನಿ ಅಣ್ಣನಿಗೆ ಕೇಳಿಸದಾಯಿತು. ಆದಾಗಲೇ ನಾನು ಆಳವಾದ ಕಂದಕ ತಲುಪಿ ಬಿಟ್ಟಿದ್ದೆ.
ಆಚೆ ಈಚೆ ಅಲ್ಲಾಡಲಾಗದ ಪರಿಸ್ಥಿತಿ. ಎಷ್ಟೊಂದು ಅಸಹನೀಯ... ಎಷ್ಟೊಂದು ಭೀಭತ್ಸ... ಅದನ್ನು ಹೇಳಲಾಗದು. ಆದರೆ, ಅಣ್ಣ ನನ್ನನ್ನು ಮೇಲೆತ್ತುತ್ತಾನೆ ಎನ್ನುವ ನಂಬಿಕೆ ಬಿಟ್ಟು, ನಾನೇನು ಮಾಡುವ ಸ್ಥಿತಿಯಲ್ಲಿರಲಿಲ್ಲ. ರಾತ್ರಿ ಮಲಗಿದ ನನಗೆ ಎಚ್ಚರವಾದಾಗ, ಕತ್ತಲಲ್ಲಿ ಗುಮ್ಮನ ನೆನಪಾಗಿ ಅಮ್ಮನನ್ನು ಬಾಚಿ ತಬ್ಬಿ ಮಲಗುತ್ತಿದ್ದೆ. ನನಗೆ ಈ ಕತ್ತಲ ರಾಕ್ಷಸ ಹೇಗೆಲ್ಲ ಹೆದರಿಸುತ್ತಿದ್ದಾನೆ ಎಂದು ಹೇಗೆ ಹೇಳಲಿ. ನನಗೆ ಸಾವೆಂದರೇನೆಂದು ಅರಿಯದು. ಆದರೂ ಏನೋ ಜೀವ ಭಯ. ಅಣ್ಣ.. ಅಣ್ಣ ಎಂದು ಕಿರುಚಿದೆ. ಅಣ್ಣ ಮೇಲ್ಗಡೆಯಿಂದ ಏನೋ ಹೇಳುತ್ತಿದ್ದ. ಅದೇನೆಂದು ಕೇಳಿಸುತ್ತಿರಲಿಲ್ಲ. ಅಪ್ಪ-ಅಣ್ಣ ಬಂದು ನನ್ನನ್ನು ಮೇಲೆತ್ತುತ್ತಾರೆ ಎಂಬ ನಂಬಿಕೆಯಿದ್ದರೂ, ಈ ಚಿಕ್ಕ ಬಾವಿಯಲ್ಲಿ ಅವರು ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆಯೂ ನನ್ನನ್ನು ಕಾಡುತ್ತಿತ್ತು.
ಭಯದಿಂದ ತತ್ತರಿಸಿ ಹೋದ ನನಗೆ, ಅಮ್ಮ ಈಗಿಂದಿಗೀಲೇ ಬೇಕೆಂದೆನಿಸುತ್ತಿತ್ತು. ಒಂದೇ ಸಮನೆ ಅಮ್ಮನ ನೆನಸಿ ಅಳತೊಡಗಿದೆ. ಕೈ-ಕಾಲುಗಳನ್ನೆಲ್ಲ ಕಟ್ಟಿಟ್ಟ ಸ್ಥಿತಿ. ಮಿಸುಕಾಡಲೂ ಸಾಧ್ಯವಾಗುತ್ತಿಲ್ಲ. ಉಸಿರಾಡಲೂ ಆಗುತ್ತಿಲ್ಲ. ಸ್ವಲ್ಪ ಹೊತ್ತು ಹಾಗೆಯೇ ಕಳೆಯಿತು. ಅಣ್ಣನ ಧ್ವನಿಯಷ್ಟೇ ಕೇಳಿಸುತಿದ್ದ ನನಗೆ, ಬಹಳ ಜನ ಮಾತನಾಡುತ್ತ ಅರಚುತ್ತಿರುವುದು ಕ್ಷೀಣವಾಗಿ ಕೇಳಿಸುತ್ತಿತ್ತು. ಬಹುಶಃ ನನ್ನಮ್ಮ 'ತಿಮ್ಮಣ್ಣಾ.... ಎಲ್ಲೋದ್ಫ್ಯೋ ...' ಎಂದು ಎದೆ ಬಡೆದುಕೊಂಡು ಅಳುತ್ತಿರಬೇಕು.
ಸಮಯ ಉರುಳುತ್ತಿತ್ತು. ಇಷ್ಟು ಹೊತ್ತಾದರೂ ಇವರು ಮೇಲೇನು ಮಾಡುತ್ತಿದ್ದಾರೆ? ಅಮ್ಮ ಕೊಡಕ್ಕೆ ಹಗ್ಗ ಕಟ್ಟಿ ಬಾವಿಯಿಂದ ನೀರನ್ನು ಮೇಲೆತ್ತುವ ಹಾಗೆ, ನನ್ನನ್ನು ಮೇಲೆತ್ತಬಾರದೆ? ಎಂದು ಕಾಯುತ್ತಿದ್ದೆ. ಅಷ್ಟರಲ್ಲಿ ನನ್ನ ಕೈಗೆ ಏನೋ ತಾಕಿದಂತಾಯಿತು. ಯಾವುದೋ ತೆಳ್ಳಗಿನ ದಾರದಂತ ಪೈಪ್. ಮೇಲತ್ತಬಹುದೆಂದು ಸಂತೋಷದಿಂದ ಅದನ್ನು ಹಿಡಿದೆ. ಆದರೆ, ನನ್ನ ಪುಟ್ಟ ಭಾರವನ್ನು ತಡೆಯದ ಅದು ತುಂಡರಿಸುತ್ತಿದ್ದಂತೆ, ನಾನು ಮೇಲೆ ಹತ್ತುತ್ತೇನೆ ಎಂಬ ನಿರೀಕ್ಷೆಯೂ ಹುಸಿಯಾಗಿ ಹೋಗಿತ್ತು.
ಉಸಿರಾಡಲು ಕಷ್ಟವಾಗುತ್ತಿತ್ತು. ನಿಧಾನವಾಗಿ ನಿದ್ದೆಗೆ ಜಾರುತ್ತ ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ಎಷ್ಟೋ ಗಂಟೆಗಳ ನಂತರ ಎಚ್ಚರವಾಯಿತು. ಪಕ್ಕದಲ್ಲಿ ಅಮ್ಮ ಮಲಗಿದ್ದಾರೆ ಎಂದು ತಡಕಾಡಿದೆ. ನಂತರ ಅರಿವಿಗೆ ಬಂತು; ನನ್ನಮ್ಮ ಇಲ್ಲದ ಭೀಕರ ಬಾವಿಗೆ ಸಿಲುಕಿ ಒದ್ದಾಡುತ್ತಿದ್ದೇನೆಂದು. ಹತ್ತು ಕೊಡ ನೀರು ಕೊಟ್ಟರೂ ಕುಡಿಯಬಲ್ಲೆ ಎನ್ನುವಂತ ಬಾಯಾರಿಕೆ. ಬುಟ್ಟಿಗಟ್ಟಲೇ ರೊಟ್ಟಿ ತಂದರೂ ಹಪಹಪನೆ ತಿನ್ನಬಲ್ಲೆನೆಂಬ ಹಸಿವು. ನಾನೆಂದೂ ಕಾಣದ, ಅನುಭವಿಸದ ಭೀಕರ ಹಸಿವು ಅದಾಗಿತ್ತು. ಅಮ್ಮಾ.... ಎಂದು ಬಾಯ್ತೆರೆದು ಹೇಳಲಾಗದಷ್ಟು ನಿತ್ರಾಣಗೊಂಡಿದ್ದೆ. ನನ್ನಲ್ಲಿನ ಶಕ್ತಿ ಉಡುಗುತ್ತಿತ್ತು. ಏನೋ ಒಂಥರ ಮಂಪರು. ಅದಾಗಲೇ ಎರಡು ದಿನ ಉರುಳಿದ್ದವು. ದೇಹದಲ್ಲಿ ಹರಡಿದ್ದ ಜೀವವೆಲ್ಲ ಏಕತ್ರವಾಗ ತೊಡಗಿತು. ಅದೇನೆಂದು ತಿಳಿಯಲು ಸಾಧ್ಯವಾಗಲಿಲ್ಲ. ನಿಧಾನವಾಗಿ ಅಂತಿಮ ನಿದ್ರೆಯತ್ತ ಸಾಗಿದೆ...!!
'ಪ್ರಾಣ' ಅನ್ನೋ ನಾನು, ಒಳಗಿದ್ದ ದೇಹದಿಂದ ಬೇರ್ಪಟ್ಟಿದ್ದೆ. ಕೊನೆಗೂ ಎಲ್ಲ ಭಯ-ನೋವು-ಅಸಹನೀಯತೆಯಿಂದ ಮುಕ್ತಿ ಹೊಂದಿದ ನಾನು, ಯಾರ ಸಹಾಯವಿಲ್ಲದೆ ಕೊಳವೆ ಬಾವಿಯಿಂದ ಮೇಲೆದ್ದು ಬಂದಿದ್ದೆ. ಆ ಸಂತೋಷದಲ್ಲಿ ಅತ್ತು ಅತ್ತು ಕರುಗಿದ ಅಮ್ಮನ ಕೆನ್ನೆಯ ಮುಟ್ಟಿದೆ. ಕಣ್ಣಿರನ್ನು ಒರೆಸಿದೆ. ಅಮ್ಮನ ಕೈ ಹಿಡಿದು ಎಳೆದೆ. ಹಾರಿದೆ, ಕುಣಿದಾಡಿದೆ, ನಾನು ಮೇಲೆದ್ದು ಬಂದೆ ಎಂದು ದೊಡ್ಡದಾಗಿ ಕಿರುಚಾಡಿದೆ. ಆದರೆ, ಯಾರೂ ಕೂಡಾ ನನ್ನ ಗಮನಿಸಲಿಲ್ಲ. ನನ್ನಮ್ಮ, ಅಪ್ಪ ಸಂಬಂಧಿಗಳು ಅಳುವುದನ್ನ ಮುಂದುವರಿಸಿದ್ದರು. ನನಗೇನೂ ಅರ್ಥವಾಗುತ್ತಿರಲಿಲ್ಲ. ಹಸಿವು, ನಿದ್ರೆ ಯಾವುದರ ಅರಿವೂ ಆಗುತ್ತಿರಲಿಲ್ಲ. ನನ್ನನ್ನು ನಾನೇ ನೋಡಿಕೊಂಡೆ. ದೇಹವೆ ಇಲ್ಲದ ನಿರಾಕಾರನಾದ ನಾನು ಯಾರಿಗೂ ಕಾಣುತ್ತಿರಲಿಲ್ಲ. ದೇಹವಿದ್ದರೆ ಮಾತ್ರ ನನ್ನನ್ನು ಗುರುತಿಸಲು ಸಾಧ್ಯ. ನನಗೆ ನೋವಾಯಿತು. ಅಕ್ಷರಶಃ ಮೌನಿಯಾದೆ. ಅತ್ತು ಕರಗಿ ಕುಸಿದು ಬಿದ್ದಿದ್ದ ಅತ್ತೆಯ ಮಡಿಲಿಗೆ ಒರಗಿದೆ. ಅವಳೂ ಕೂಡಾ ಮೈದವಡಲಿಲ್ಲ. ಅಲ್ಲಿದ್ದವರೆಲ್ಲ ನನ್ನ ದೇಹಕ್ಕಾಗಿ ಗೋಳಾಡುತ್ತಿದ್ದರು. ನನ್ನ ಪ್ರಾಣ ಅವರ ಮುಂದೆ ಬಂದು ನಿಂತರೂ, ಅವರ ನಡುವೆ ಬದುಕುವ ಭಾಗ್ಯ ನನಗಿಲ್ಲ ಎಂದು ತಿಳಿದಾಗಿತ್ತು. ಇನ್ನೇನಿದ್ದರೂ ನೀವು ಕಾಣದ ಲೋಕಕ್ಕೆ ನನ್ನ ಯಾನ...!
ಈ ನಡುವೆ, ನನ್ನದೊಂದು ಪುಟ್ಟ ಪ್ರಾರ್ಥನೆ... ನನ್ನ ಸಾವಿಗೆ ಒಂದು ಅರ್ಥ ಕೊಡಿ. ತೋಡಿದ ಕೊಳವೆ ಬಾವಿಯಲ್ಲಿ ನೀರು ಬಾರದೆ ಇದ್ದರೆ, ಅದನ್ನು ಅಲ್ಲಿಯೇ ಮುಚ್ಚಿ ಬಿಡಿ. ಈಗಾಗಲೇ ನನ್ನಂಥ ಎಷ್ಟೋ ಕಂದಮ್ಮಗಳು ಅಂತಹ ಮೃತ್ಯ ಕೂಪದಲ್ಲಿ ಬಿದ್ದು ಸಾವನ್ನಪ್ಪಿವೆ. ಇನ್ನು ಮುಂದೆ ಯಾರ ಜೀವವೂ ಸಹ ಹೀಗಾಗಬಾರದು. ನನ್ನ ಸಾವು ಸಮಸ್ತ ಮಾನವ ಕುಲಕ್ಕೆ ಒಂದು ಪಾಠವಾಗಲಿ. ಈ ಕುರಿತು ಪ್ರತಿಯೊಬ್ಬರೂ ಜಾಗೃತಿ ಅಭಿಯಾನ ಕೈಗೊಳ್ಳಿ.
ಕೊನೆಯದಾಗಿ, ಯಾರೂ ಕೂಡಾ ನನ್ನ ನೆನಪಿಸಿಕೊಂಡು ಕೊರಗಬೇಡಿ. ನೀವೆಲ್ಲ ಉಸಿರಾಡುವ ಗಾಳಿಯಲ್ಲಿಯೇ ನನ್ನುಸಿರು ಬೆರತಿದೆ. ನಮ್ಮ ತೋಟದ ಗದ್ದೆಯಲ್ಲಿ ಬೆಳೆಯುವ ಹಸಿರಿನಲ್ಲಿ ನಾನಿದ್ದೇನೆ. ಪ್ರೀತಿಯ ಅಪ್ಪ, ಅಣ್ಣ, ಅಕ್ಕ, ಅತ್ತೆ, ಕಾಕ ಹಾಗೂ ನನ್ನ ಬದುಕಿಗಾಗಿ ನಿರಂತರವಾಗಿ ಶ್ರಮಿಸಿದ, ದೂರದಿಂದಲೇ ಪ್ರಾರ್ಥಿಸಿದ ನನ್ನೆಲ್ಲ ಹಿತೈಷಿಗಳಿಗೆ....
-ಇಂತಿ ನಿಮ್ಮ
ನತದೃಷ್ಟ ತಿಮ್ಮಣ್ಣ
ನಿರೂಪಣೆ: ನಾಗರಾಜ್ ಬಿ.ಎನ್ 

'ನಿರ್ಗತಿಕನ ಹಾಗೆ ಆ ರಾತ್ರಿ ಕಳೆದಿದ್ದ....!!'

ನಾಗರಾಜ್ ಬಿ.ಎನ್. 
ಅದು ದಟ್ಟ ಕಾರಿರುಳು. ಮೈಕೊರೆವ ಚಳಿ. ಹೊಟ್ಟೆಯಲ್ಲಿದ್ದ ಕರುಳುಗಳೆಲ್ಲ ಮರಗಟ್ಟುತ್ತಿವೆ. ಒಂದೆಡೆ ಹಸಿವು. ಮಲಗಲು ಸೂರಿಲ್ಲ. ಏನು ಮಾಡುವುದು ಎಂದು ಒಂದು ಕ್ಷಣ ಯೋಚಿಸಿ, ಅಲ್ಲಿಯೇ ಅನತಿ ದೂರದಲ್ಲಿದ್ದ ಮನೆಗೆ ಹೋಗಿ, 'ಅಮ್ಮಾ, ಹಸಿವು.. ಏನಾದರೂ ಇದೆಯಾ?' ಎಂದು ಕೇಳುತ್ತಾನೆ. ತೆರೆದ ಬಾಗಿಲನ್ನು ದಡಕ್ಕನೆ ಮನೆಯಾಕೆ ಮುಚ್ಚಿದಳು. ಮತ್ತೊಂದು ಮನೆಗೆ ಹೋಗಿ, 'ಮಲಗಲು ಒಂದು ಚಿಕ್ಕ ಸೂರು ಸಿಗಬಹುದೇ, ಹೊರಗಡೆ ಭಾರಿ ಚಳಿ' ಎನ್ನುತ್ತಾನೆ. ಆ ಮನೆಯ ಯಜಮಾನ 'ಹೋಗಯ್ಯ ಹೋಗು, ದಾರಿಹೋಕ ನೀನು' ಎಂದು ಅಸಡ್ಡೆ ಮಾಡಿ ಅಲ್ಲಿಂದ ಅವನನ್ನು ಅಟ್ಟುತ್ತಾನೆ.
ಹಸಿವು ತಾಳಲಾಗುತ್ತಿಲ್ಲ, ಚಳಿ ತಡೆಯಲಾಗುತ್ತಿಲ್ಲ. ಗೊತ್ತು-ಗುರಿಯಿಲ್ಲದ ಆ ಜಾಗದಲ್ಲಿ ಆತನಿಗೆ ತನ್ನವರು ಎನ್ನುವವರು ಯಾರೂ ಇರಲಿಲ್ಲ. ಅಕ್ಷರಶಃ ಆತ ಪರದೇಶಿಯಂತೆ ನಿರ್ಗತಿಕನಂತಾಗಿದ್ದ. ಆದರೆ, ಅಚಲ ಆತ್ಮವಿಶ್ವಾಸ, ಮನಸ್ಥೈರ್ಯ, ಹಿಡಿದ ಹಟ ಸಾಧಿಸುವ ಛಲ ಮಾತ್ರ ಸದಾ ಪುಟಿದೇಳುತ್ತಿತ್ತು. ರಸ್ತೆಯ ಒಂದು ಬದಿಯಲ್ಲಿ ಹಾಗೋ ಹೀಗೋ ಎಂದು ಮಲಗಿ, ರಾತ್ರಿ ಕಳೆಯುತ್ತಾನೆ.
ಮುಂಜಾನೆ 11ರ ಸಮಯ. 'ಅಮೆರಿಕೆಯ ಸಹೋದರ ಸಹೋದರಿಯರೇ...' ಎಂಬ ಮಾತು ಆತನ ಬಾಯಿಂದ ಹೊರಬರುತ್ತಿದ್ದಂತೆ ಕರತಾಡನದ ಸುರಿಮಳೆ. ಬರೋಬ್ಬರಿ 8 ನಿಮಿಷಗಳ ಕಾಲ ಚಪ್ಪಾಳೆ... ಚಪ್ಪಾಳೆ...!! ಅಲ್ಲಿದ್ದ ಯಾರೂ ಕೂಡಾ, ಆ ವಿನೂತನ ಸಂಭೋದನೆಯ ಕಲ್ಪನೆಯನ್ನು ಆವರೆಗೆ ಊಹಿಸಿರಲಿಲ್ಲ. 'ಸಹೋದರ-ಸಹೋದರಿ' ಎನ್ನುವ ವಿಶ್ವ ಬಾತೃತ್ವದ ಮಾಯೆಗೆ ಒಳಗಾದ ಅವರ ಕೈಗಳು ಅರಿವಿಲ್ಲದೆ ನಿರಂತರವಾಗಿ ಚಪ್ಪಾಳೆ ತಟ್ಟುತ್ತಿದ್ದವು.
ಹೌದು, ಆತನೇ ನಮ್ಮ ವಿವೇಕಾನಂದ...! ಸ್ವಾಮಿ ವಿವೇಕಾನಂದ. ವೀರ ಸನ್ಯಾಸಿ ವಿವೇಕಾನಂದ. ಯುವ ಜನತೆಯ ಸ್ಫೂರ್ತಿ ವಿವೇಕಾನಂದ....!!
1893ರ ಸೆ. 11ರಂದು ಅಮೆರಿಕೆಯ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಭಾರತದ ರಾಯಭಾರಿಯಾಗಿ ತೆರಳಿದ್ದರು. ಅವರ ದೇಶ ಪ್ರೇಮ, ಧರ್ಮ ಸಂಸ್ಕೃತಿ, ಮಾತುಗಾರಿಕೆ, ಸರಳವಾದ ಉಡುಪು, ಜೀವನ ಶೈಲಿಯನ್ನೆಲ್ಲ ನೋಡಿ ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ರಾತ್ರಿ-ಬೆಳಗಾಗುವುದರೊಳಗೆ ರಾಷ್ಟ್ರದ ಗರಿಮೆಯನ್ನು ಮುಗಿಲೆತ್ತಕ್ಕೆ ಹಾರಿಸಿದ್ದರು. ಅಲ್ಲಿದ್ದ ಎಲ್ಲರ ಆರಾಧ್ಯ ಮೂತರ್ಿಯಾಗಿ ಬಿಟ್ಟಿದ್ದರು.
ಸರಿ... ಅಂದಿನ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಅಮೆರಿಕಾದ ಬುದ್ದಿ ಜೀವಿಗಳು, ಜನಪ್ರತಿನಿಧಿಗಳು, ಧನಿಕರು ಅವರನ್ನು ಅತಿಥಿಯಾಗಿ ಮನೆಗೆ ಬರುವಂತೆ ಆಹ್ವಾನ ನೀಡುತ್ತಾರೆ. ಸತ್ಕಾರ ಸ್ವೀಕರಿಸಬೇಕು ಎಂದು ದುಂಬಾಲು ಬೀಳುತ್ತಾರೆ. ಕೊನೆಗೆ ಚಿಕಾಗೋದ ಒಬ್ಬ ಆಗರ್ಭ ಶ್ರೀಮಂತನ ಮನೆಗೆ ಹೋಗುತ್ತಾರೆ. ಅವರ ಆದರಾತಿಥ್ಯದಲ್ಲಿ ಮೃಷ್ಟಾನ್ನ ಭೋಜನ, ಹಣ್ಣು-ಹಂಪಲ.... ಏನು ಬೇಕು? ಏನೂ ಬೇಡ? ಎನ್ನುವಂತ ವಾತಾವರಣ. ಐಷಾರಾಮಿ ಬಂಗಲೆ, ಬಂಗಾರ ಲೇಪಿತ ಕಂಬಗಳು. 'ನಿನ್ನೆ ರಾತ್ರಿಯ ಕ್ಷಣಗಳು ಹೇಗಿದ್ದವು... ಇಂದಿನ ರಾತ್ರಿ ಹೇಗಿವೆ. ಎಷ್ಟೊಂದು ಬದಲಾವಣೆ ಅಲ್ಲವೇ' ಎಂದುಕೊಳ್ಳುತ್ತ ತುಸು ಆಹಾರ ಸೇವಿಸಿ, ತನಗಾಗಿ ವ್ಯವಸ್ಥೆ ಮಾಡಿದ್ದ ಕೋಣೆಗೆ ಮಲಗಲು ಹೋಗುತ್ತಾರೆ.
ಸುಮ್ಮನೆ ಕಿಟಕಿಯಾಚೆ ದೃಷ್ಟಿ ಬೀರುತ್ತಾರೆ. ಭಾರತದ ಕಡೆ ಮುಖ ಮಾಡಿ ಅರೆಕ್ಷಣ ಕಣ್ಮುಚ್ಚುತ್ತಾರೆ. ಮುಚ್ಚಿದ ಕಣ್ಣರೆಪ್ಪೆಯನ್ನು ಸೀಳಿ ಕಂಬನಿ ಧಾರಾಕಾರವಾಗಿ ಹರಿಯುತ್ತವೆ. ಭಾರತ ವಾಸಿಗಳ ದೀನ-ದಲಿತರ ಜೀವನ ನೆನಪಾಗುತ್ತದೆ. ಒಪ್ಪತ್ತಿನ ತುತ್ತಿಗಾಗಿ ನನ್ನವರು ಪರದಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲಿ ಬೆಂಡಾಗುತ್ತಿದ್ದಾರೆ. ನೆಮ್ಮದಿಯ ನಿದ್ರೆಗೆ ಚಿಕ್ಕ ಸೂರು ಇಲ್ಲದೆ ಹಾದಿ-ಬೀದಿಯಲ್ಲಿ ದಿನ-ಬೆಳಗು ಮಾಡುತ್ತಿದ್ದಾರೆ. `ಓ ನನ್ನ ಭಾರತ ವಾಸಿಗಳೇ.... ರಟ್ಟೆಯಲ್ಲಿ ಶಕ್ತಿಯಿರುವವರೆಗೂ ನಾವು ಶ್ರದ್ಧೆಯಿಂದ ದುಡಿಯಬೇಕು. ನಮ್ಮ ಬದುಕನ್ನು ನಾವೇ ಬದಲಾಯಿಸಿಕೊಳ್ಳಬೇಕು. ಸ್ವಾಭಿಮಾನಿಗಳಾಗಿ ಮುನ್ನುಗ್ಗಬೇಕು. ಏಳೀ ಎದ್ದೇಳಿ' ಎಂದು ಮನಸ್ಸಲ್ಲೆ ಹೇಳುತ್ತ.. ರಾತ್ರಿಯಿಡೀ ಕಣ್ಣೀರಾಗುತ್ತಾರೆ. ಮಮ್ಮಲ ಮರುಗುತ್ತಾರೆ.
ಭಾರತಕ್ಕಾಗಿ ಮರುಗಿದ, ಕಣ್ಣೀರು ಸುರಿಸಿದ, ಹಗಲು ರಾತ್ರಿಯೆನ್ನದೆ ಧರ್ಮ, ದೇಶ ಎನ್ನುತ್ತ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಸುತ್ತಿದ ಏಕೈಕ ವ್ಯಕ್ತಿ ವೀರ-ಧೀರ-ಸನ್ಯಾಸಿ ನಮ್ಮ ಸ್ವಾಮಿ ವಿವೇಕಾನಂದ. ಅವರು ಸಾರಿದ, ಹರಿಯ ಬಿಟ್ಟ ಚಿಂತನೆಗಳು, ಸಿಡಿಲಿನಂತ ಮಾತುಗಳು ನಮಗೆಲ್ಲ ಸದಾ ದಾರಿ ದೀಪವಾಗಲಿ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ. ಭವ್ಯ-ಭಾರತ ನಿಮರ್ಾಣ ಮಾಡುವಲ್ಲಿ ದೃಢ ಸಂಕಲ್ಪಿಗಳಾಗೋಣ. ಈ ಮೂಲಕ ಅವರ 152ನೇ ಜನ್ಮ ದಿನವನ್ನು ಅರ್ಥಪೂರ್ಣವಾಗಿಸೋಣ.
ಸ್ವಾಮಿ ವಿವೇಕಾನಂದರಿಗೆ ಜನ್ಮದಿನದ ಶುಭಾಶಗಳು....!